Thursday, June 25, 2020

ಗಲ್ವಾನ್ ಘರ್ಷಣೆಗೆ ಚೀನಾವೇ ಹೊಣೆ, ಗಡಿಯಲ್ಲಿ ಸೇನೆ ಜಮಾವಣೆ: ಭಾರತ

ಗಲ್ವಾನ್ ಘರ್ಷಣೆಗೆ ಚೀನಾವೇ ಹೊಣೆ,
ಗಡಿಯಲ್ಲಿ ಸೇನೆ ಜಮಾವಣೆ: ಭಾರತ

ನವದೆಹಲಿ: ಲಡಾಖ್ ಗಲ್ವಾನ್ ಕಣಿವೆಯಲ್ಲಿ ಹಿಂಸಾತ್ಮಕ ಘರ್ಷಣೆ ಸಂಭವಿಸಲು ಚೀನಾವೇ ಹೊಣೆ ಎಂದು ಭಾರತ ಗುರುವಾರ ಖಂಡತುಂಡವಾಗಿ ಹೇಳಿತು.

ಒಪ್ಪಿದ ಎಲ್ಲ ಒಪ್ಪಂದಗಳನ್ನೂ ಉಲ್ಲಂಘಿಸಿ ಚೀನಾವು ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಸೇನೆ ಜಮಾವಣೆ ಮಾಡಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್  ಶ್ರೀವಾಸ್ತವ  2020 ಜೂನ್ 25ರ ಗುರುವಾರ ಹೇಳಿದರು.

"ಮೇ ಆರಂಭದಿಂದಲೂ, ಚೀನಾದ ಕಡೆಯವರು ಎಲ್ಎಸಿಯ ಉದ್ದಕ್ಕೂ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದ್ದಾರೆ, ಇದು ಎಲ್ಲಾ ಒಪ್ಪಂದಗಳಿಗೆ ವಿರುದ್ಧವಾಗಿದೆಎಂದು ಶ್ರೀವಾಸ್ತವ ನುಡಿದರು.

ಭಾರತವು ಬಹಳ ದಿನಗಳಿಂದ ಗಲ್ವಾನ್ ಕಣಿವೆಯಲ್ಲಿ ಗಸ್ತು ತಿರುಗುತ್ತಿದೆ. ಆದರೆ ಯಥಾಸ್ಥಿತಿಯನ್ನು ಬದಲಾಯಿಸಲು ಎಂದಿಗೂ ಪ್ರಯತ್ನಿಸಲಿಲ್ಲ. ಆದರೆ ಚೀನಾದ ನಡೆನುಡಿ ಇದಕ್ಕೆ ಅನುಗುಣವಾಗಿ ಇರಲಿಲ್ಲ ಎಂದು ಶ್ರೀವಾಸ್ತವ ಹೇಳಿದರು.

ಬುಧವಾರ, ಚೀನಾ, ಮೊದಲ ಬಾರಿಗೆ, ಭಾರತೀಯ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ ತನ್ನ ಬದಿಯಲ್ಲಿ ಸಾವುನೋವುಗಳು ಸಂಭವಿಸಿರುವುದನ್ನು ಒಪ್ಪಿಕೊಂಡಿತ್ತು.

ಆದರೆ "ಸಂಖ್ಯೆಗಳು ತುಂಬಾ ಹೆಚ್ಚಿಲ್ಲ" ಎಂದು ಹೇಳಿತು.

ಮತ್ತೊಂದೆಡೆ, ಜೂನ್ ೧೫ ರಂದು ಸಂಭವಿಸಿದ ಘರ್ಷಣೆಯಲ್ಲಿ ೨೦ ಭಾರತೀಯ ಯೋಧರು ತಮ್ಮ ದೇಶ ರಕ್ಷಣೆಗಾಗಿ ಹುತಾತ್ಮರಾಗಿದ್ದರು.

No comments:

Advertisement