Monday, July 20, 2020

ರಾಮಜನ್ಮಭೂಮಿ: ಸುಪ್ರೀಂಕೋರ್ಟಿನಿಂದ ಪಿಐಎಲ್ ವಜಾ

ರಾಮಜನ್ಮಭೂಮಿ: ಸುಪ್ರೀಂಕೋರ್ಟಿನಿಂದ ಪಿಐಎಲ್ ವಜಾ

ಇಬ್ಬರು ಅರ್ಜಿದಾರರಿಗೆ ತಲಾ ಲಕ್ಷ ರೂ. ದಂಡ

ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ಪ್ರದೇಶದಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸಿ ಇಡುವಂತೆ ಕೋರಿ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸುಪ್ರೀಂಕೋರ್ಟ್ 2020 ಜುಲೈ 20ರ ಸೋಮವಾರ ವಜಾಗೊಳಿಸಿತು.

ಕ್ಷುಲ್ಲಕ ಅರ್ಜಿಸಲ್ಲಿಸಿದ್ದಕ್ಕಾಗಿ ಅರ್ಜಿದಾರರಿಗೆ ತಲಾ ಲಕ್ಷ ರೂಪಾಯಿಗಳ ದಂಡ ಕೂಡಾ ವಿಧಿಸಲಾಗಿದ್ದು, ದಂಡವನ್ನು ಒಂದು ತಿಂಗಳೊಳಗೆ ಪಾವತಿಸುವಂತೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣನ್ ಮುರಾರಿ ಅವರ ಪೀಠ ಆಜ್ಞಾಪಿಸಿತು.

ಐವರು ನ್ಯಾಯಮೂರ್ತಿಗಳ sಸಂವಿಧಾನ ಪೀಠವು ಈಗಾಗಲೇ ರಾಮಜನ್ಮಭೂಮಿ ಸಂಬಂಧ ತೀರ್ಪನ್ನು ನೀಡಿದೆ. ಅರ್ಜಿಗಳು ತೀರ್ಪನ್ನು ಪ್ರಶ್ನಿಸುವಂತಿವೆ. ಇವು ಗಂಭೀರವಲ್ಲದ ಕ್ಷುಲ್ಲಕಅರ್ಜಿಗಳು ಎಂದು ಪೀಠ ಹೇಳಿತು. 

ರಾಮಜನ್ಮಭೂಮಿ ಟ್ರಸ್ಟ್ ಕಲಾಕೃತಿ ಮತ್ತು ದೊರೆತ ವಸ್ತುಗಳನ್ನು ರಕ್ಷಿಸುವುದಾಗಿ ಹೇಳಿದೆ. ಆದರೂ, ಅರ್ಜಿದಾರರು ಸಂವಿಧಾನದ ೩೨ನೇ ವಿಧಿಯನ್ವಯ ಕೋರ್ಟ್ ಮುಂದೆ ಬಂದಿರುವುದು ಏಕೆ ಎಂದು ಪೀಠ ಪ್ರಶ್ನಿಸಿತು. ಅರ್ಜಿದಾರರಾದ ಸತೀಶ್ ಚಿಂದೂಜಿ ಶಂಭರ್ಕರ್ ಮತ್ತು ಡಾ.ಅಂಬೇಡ್ಕರ್ ಫೌಂಡೇಶನ್ ಗೆ ದಂಡ ವಿಧಿಸಬೇಕು ಎಂದು ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದನ್ನು ಪೀಠ ಪುರಸ್ಕರಿಸಿತು.

ಅಯೋಧ್ಯೆಯಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು. 

ನೀವು ಇಂತಹ ಕ್ಷುಲ್ಲಕ ಅರ್ಜಿ ಸಲ್ಲಿಸುವುದನ್ನು ನಿಲ್ಲಿಸಬೇಕು. ಅರ್ಜಿ ಮೂಲಕ ನೀವು ಏನು ಹೇಳಲು ಹೊರಟಿದ್ದೀರಿ? ಕಾನೂನಿನ ಆಡಳಿತ ಇಲ್ಲ ಮತ್ತು ನ್ಯಾಯಾಲಯದ ಐವರು ನ್ಯಾಯಮೂರ್ತಿಗಳ ಪೀಠದ ತೀರ್ಪನ್ನು ಯಾರೊಬ್ಬರೂ ಪಾಲಿಸುತ್ತಿಲ್ಲ ಎಂದು ನೀವು ಹೇಳುತ್ತೀರಾ? ಎಂದು ಅರ್ಜಿದಾರರನ್ನು ಪೀಠ ಪ್ರಶ್ನಿಸಿತು.

ಕೇಂದ್ರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ನ್ಯಾಯಾಲಯವು ದಂಡ ವಿಧಿಸುವ ಬಗ್ಗೆ ಕೂಡಾ ಪರಿಗಣಿಸಬೇಕುಎಂದು ಹೇಳಿದರು.

ಅರ್ಜಿದಾರರಿಗೆ ತಲಾ ಒಂದು ಲಕ್ಷ ರೂ.ಗಳನ್ನು ವಿಧಿಸಲಾಗಿದ್ದು, ಅದನ್ನು ಸೋಮವಾರದಿಂದ ಒಂದು ತಿಂಗಳೊಳಗೆ ಪಾವತಿಸಬೇಕು ಎಂದು ನ್ಯಾಯಪೀಠ ಹೇಳಿತು.

ಅಲಹಾಬಾದ್ ಹೈಕೋರ್ಟಿನಲ್ಲಿ ವಿವಾದಾತ್ಮಕ ವಿಷಯ ವಿಚಾರಣೆಯ ಕಾಲದಲ್ಲಿ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆದ ಉತ್ಖನನದ ವೇಳೆ ವಿವಾದಿತ ಸ್ಥಳದಲ್ಲಿ ಪತ್ತೆಯಾದ ಕಲಾಕೃತಿಗಳನ್ನು ಸಂರಕ್ಷಿಸುವಂತೆ ಕೋರಿ ಅರ್ಜಿದಾರರಾದ ಸತೀಶ್ ಚಿಂದೂಜಿ ಶಂಭಾರ್ಕರ್ ಮತ್ತು ಡಾ.ಅಂಬೇಡ್ಕರ್ ಫೌಂಡೇಶನ್ ಉನ್ನತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅಯೋಧ್ಯೆಯಲ್ಲಿನ ನೂತನ ರಾಮಮಂದಿರಕ್ಕಾಗಿ ಅಡಿಪಾಯವನ್ನು ಅಗೆದಾಗ ಪತ್ತೆಯಾದ ಕಲಾಕೃತಿಗಳನ್ನು ಸಂರಕ್ಷಿಸಿ ಇಡಬೇಕು. ಕೆಲಸವನ್ನು ಪುರಾತತ್ವ ಸರ್ವೇ ಆಫ್ ಇಂಡಿಯಾ (ಎಎಸ್) ಮೇಲ್ವಿಚಾರಣೆಯಲ್ಲಿ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದರು.

ನವೆಂಬರ್ ರಂದು, ಒಂದು ಶತಮಾನಕ್ಕೂ ಹಿಂದಿನ ಒಂದು ವಿವಾದಾತ್ಮಕ ಸಮಸ್ಯೆಯನ್ನು ಬಗೆಹರಿಸಿ, ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಟ್ರಸ್ಟ್ ಮೂಲಕ ರಾಮಮಂದಿರ  ನಿರ್ಮಿಸುವುದನ್ನು ಬೆಂಬಲಿಸಿತ್ತು ಮತ್ತು ಐದು ಎಕರೆಗಳ ಪರ್ಯಾಯ ಜಾಗವನ್ನು, ದೇಗುಲ ಪಟ್ಟಣದಲ್ಲಿ ಮಸೀದಿ ನಿರ್ಮಾಣಕ್ಕಾಗಿ ಒದಗಿಸಬೇಕು ಎಂದು ಆಜ್ಞಾಪಿಸಿತ್ತು.

ದೇಶವನ್ನು ದೀರ್ಘಕಾಲ ಧ್ರುವೀಕರಿಸಿದ್ದ ಮತ್ತು ಭಾರತೀಯ ಸಮಾಜದ ಜಾತ್ಯತೀತ ಹೊದಿಕೆಯನ್ನು ಕಸಿದುಕೊಂಡ ಪ್ರಕರಣವೊಂದರ ಬಗ್ಗೆ ಸರ್ವಾನುಮತದ ತೀರ್ಪು ನೀಡುತ್ತಾ, ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸುಪ್ರೀಂ ಕೋರ್ಟ್ ಐವರು ನ್ಯಾಯಮೂರ್ತಿಗಳ ಪೀಠವು ಶ್ರೀರಾಮನು ನಿವೇಶದನದಲ್ಲಿ ಜನಿಸಿದ್ದನೆಂಬ ಹಿಂದೂಗಳ ನಂಬಿಕೆ ನಿರ್ವಿವಾದದ್ದಾಗಿತ್ತು. ಮತ್ತು ಶ್ರೀರಾಮನು ಸಾಂಕೇತಿಕವಾಗಿ ಭೂಮಿಯ ಮಾಲೀಕನಾಗಿದ್ದಾನೆ ಎಂದು ಹೇಳಿತ್ತು.

No comments:

Advertisement