My Blog List

Sunday, July 26, 2020

ವಿಧಾನಸಭಾ ಅಧಿವೇಶನ: ಗೆಹ್ಲೋಟ್ ಪರಿಷ್ಕೃತ ಮನವಿ

ವಿಧಾನಸಭಾ ಅಧಿವೇಶನ: ಗೆಹ್ಲೋಟ್ ಪರಿಷ್ಕೃತ ಮನವಿ

ಜೈಪುರ/ ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಒಂದು ಮಸೂದೆ ಸೇರಿದಂತೆ ವಿವಿಧ ಮಸೂದೆಗಳ ಚರ್ಚೆಯ ಸಲುವಾಗಿ ಜುಲೈ ೩೧ರಿಂದ ವಿಧಾನಸಭೆಯ ಅಧಿವೇಶನ ಕರೆಯುವಂತೆ ಪರಿಷ್ಕೃತ ಮನವಿಯೊಂದನ್ನು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್ ಅವರು 2020 ಜುಲೈ 26ರ ಭಾನುವಾರ ರಾಜ್ಯಪಾಲ ಕಲರಾಜ್ ಮಿಶ್ರ ಅವರಿಗೆ ಕಳುಹಿಸಿದರು.

ಆದರೆ ಪರಿಷ್ಕೃತ ಪ್ರಸ್ತಾವದಲ್ಲಿ ಗೆಹ್ಲೋಟ್ ಅವರು ಸದನದಲ್ಲಿ ಬಲಾಬಲ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪವನ್ನೂ ಮುಂದಿಟ್ಟಿಲ್ಲ ಎಂದು ವರದಿಗಳು ಹೇಳಿದವು.

ಬಂಡಾಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಬೆಂಬಲಿಸುತ್ತಿರುವ ಶಾಸಕರ ಬಣದ ಬಂಡಾಯದ ಪರಿಣಾಮವಾಗಿ ರಾಜಸ್ಥಾನದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿದೆ.

ತನ್ನ ಸಂಖ್ಯಾಬಲದ ಬಗ್ಗೆ ವಿಶ್ವಾಸ ಹೊಂದಿರುವ ಗೆಹ್ಲೋಟ್ ಶಿಬಿರವು ರಾಜಕೀಯ ಬಿಕ್ಕಟ್ಟನ್ನು ಕೊನೆಗೊಳಿಸಲು ಸದನದಲ್ಲಿ ಬಲಾಬಲ ಪರೀಕ್ಷೆ ಅತ್ಯುತ್ತಮ ಎಂದು ಭಾವಿಸಿದೆ. ಆದರೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ರಾಜ್ಯಪಾಲರು ಅಧಿವೇಶನ ನಡೆಸಲು ವಿಳಂಬ ಮಾಡುತ್ತಿದ್ದಾರೆ ಎಂದು ಗೆಹ್ಲೋಟ್ ಬಣ ಆಪಾದಿಸಿದೆ.

ಏನಿದ್ದರೂ, ಗೆಹ್ಲೋಟ್ ಬಣದ ಆರೋಪವನ್ನು ನಿರಾಕರಿಸಿರುವ ರಾಜ್ಯಪಾಲ ಕಲರಾಜ್ ಮಿಶ್ರ ಅವರು ಅಧಿವೇಶನ ಕರೆಯಲು ತಾವು ಸಾಂವಿಧಾನಿಕ ಮಾನದಂಡಗಳನ್ನು ಅನುಸರಿಸುವುದಾಗಿ ಹೇಳಿದ್ದಾರೆ.

ಹಿಂದೆ ಕಾಂಗ್ರೆಸ್ ಸರ್ಕಾರ ಕಳುಹಿಸಿದ ಪ್ರಸ್ತಾವನೆಯನ್ನು ರಾಜ್ಯಪಾಲರು ತಿರಸ್ಕರಿಸಿದ್ದು, ದಿನಾಂಕ ಅಥವಾ ಕಾರಣವನ್ನು ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ.

ವಿಧಾನಸಭೆಯ ವಿಶೇಷ ಅಧಿವೇಶನ ನಡೆಸುವ ತುರ್ತು ಅಗತ್ಯದ ಕುರಿತು ಮಿಶ್ರಾ ಅವರ ಪ್ರಶ್ನೆಗಳಿಗೆ ರಾಜಸ್ಥಾನ ಸರ್ಕಾರ ಉತ್ತರ ನೀಡಿದೆ ಕಾಂಗ್ರೆಸ್ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಗೆಹ್ಲೋಟ್ ಅವರ ಬೆಂಬಲಿಗ ಶಾಸಕರು ವಿಶೇಷ ಅಧಿವೇಶನ ಕರೆಯುವಂತೆ ಆಗ್ರಹಿಸಲು ಶುಕ್ರವಾರ ರಾಜಭವನದಲ್ಲಿ ಐದು ಗಂಟೆಗಳ ಧರಣಿ ನಡೆಸಿದ್ದರು.

ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿಯು ರೂಪಿಸಿರುವ "ಪಿತೂರಿಯನ್ನು ಸೋಲಿಸುವ ಸಲುವಾಗಿ ದೆಹಲಿಯಲ್ಲಿ ರಾಷ್ಟ್ರಪತಿಗಳ ಮನೆಯ ಬಾಗಿಲು ಬಡಿಯಲು ಮತ್ತು ಪ್ರಧಾನ ಮಂತ್ರಿಯವರ ನಿವಾಸದ ಹೊರಗೆ ಪ್ರತಿಭಟನೆ ನಡೆಸಲು ತಾನು ಸಿದ್ಧ ಎಂದು ಶನಿವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಗೆಹ್ಲೋಟ್ ಘೋಷಿಸಿದ್ದರು.

ಕಾಂಗ್ರೆಸ್ ಆರೋಪಗಳನ್ನು ಬಿಜೆಪಿ ನಿರಾಕರಿಸಿದೆ ಮತ್ತು ಆಡಳಿತಾರೂಢ ಪಕ್ಷದ ಆಂತರಿಕ ಕಚ್ಚಾಟವು ಪ್ರಸ್ತುತ ಬಿಕ್ಕಟ್ಟನ್ನು ಹುಟ್ಟುಹಾಕಿದೆ ಎಂದು ಹೇಳಿದೆ. ಬಿಜೆಪಿಗೆ ಸೇರುವ ಯಾವುದೇ ಯೋಜನೆ ಇಲ್ಲ ಎಂದು ಮಧ್ಯೆ ಸಚಿನ್ ಪೈಲಟ್ ಹೇಳಿದ್ದಾರೆ.

ವಿಧಾನಸಭಾಧ್ಯಕ್ಷ ಸಿಪಿ ಜೋಶಿ ಅವರನ್ನು ಹೊರತುಪಡಿಸಿ ಗೆಹ್ಲೋಟ್ ಅವರಿಗೆ ಸದನದಲ್ಲಿ ೧೦೧ ಸದಸ್ಯರ ಬೆಂಬಲವಿದೆ. ಪೈಲಟ್ ಅವರಿಗೆ ೧೮ ಕಾಂಗ್ರೆಸ್ ಶಾಸಕರು ಮತ್ತು ಮೂವರು ಪಕ್ಷೇತರರ ಬೆಂಬಲವಿದೆ.

ಬಿಜೆಪಿ ಮತ್ತು ಅದರ ಮಿತ್ರ ರಾಷ್ಟ್ರ ಲೋಕತಾಂತ್ರಿಕ ಪಕ್ಷ ಒಟ್ಟು ೭೫ ಸದಸ್ಯರನ್ನು ಹೊಂದಿವೆ. ಕಾಂಗ್ರೆಸ್ ಶಾಸಕರಾದ ಭನ್ವರಲಾಲ್ ಮೇಘವಾಲ್ ಅವರು ಪೈಲಟ್‌ಗೆ ನಿಕಟವಾಗಿದ್ದಾರೆಂದು ಹೇಳಲಾಗಿದೆ.

ವಿರೋಧಿ ಮೈತ್ರಿಕೂಟಕ್ಕೆ ಪೈಲಟ್ ಬಣದ ಸಂಖ್ಯೆಯನ್ನು ಸೇರಿಸಿದರೆ, ವಿರೋಧಿಗಳ ಒಟ್ಟು ಸಂಖ್ಯೆ ೯೭ ರವರೆಗೆ ಏರುತ್ತದೆ.

ಗೆಹ್ಲೋಟ್ ಶಿಬಿರದಿಂದ ಪೈಲಟ್ ಶಿಬಿರಕ್ಕೆ ಅಥವಾ ಬಿಜೆಪಿಗೆ ಮೂರು ಸದಸ್ಯರಪಕ್ಷಾಂತರವು ಬಲಾಬಲ ಪರೀಕ್ಷೆಯ ಸಂದರ್ಭದಲ್ಲಿ ಸರ್ಕಾರ ಬೀಳಲು ಕಾರಣವಾಗಬಹುದು

No comments:

Advertisement