Thursday, August 20, 2020

ಸಂಸತ್ತಿನ ಮುಂಗಾರು ಅಧಿವೇಶನ ಸೆಪ್ಟೆಂಬರ್ 10ರಿಂದ

 ಸಂಸತ್ತಿನ ಮುಂಗಾರು ಅಧಿವೇಶನ ಸೆಪ್ಟೆಂಬರ್ 10ರಿಂದ

ನವದೆಹಲಿ: ಸೆಪ್ಟೆಂಬರ್ ೧೦ರಂದು ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ವಿರೋಧಿ ಕಾಂಗ್ರೆಸ್ ಪಕ್ಷವು ಚೀನಾ ಗಡಿ ಬಿಕ್ಕಟ್ಟು, ಫೇಸ್ ಬುಕ್ ವಿವಾದ ಮತ್ತು ಕೋವಿಡ್-೧೯ ನಿರ್ವಹಣೆ ವಿಚಾರವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದ್ದು, ಅಧಿವೇಶನಲ್ಲಿ ಬಿರುಗಾಳಿ ಎಬ್ಬಿಸುವ ಸಂಭವ ಇದೆ ಎಂದು ಸುದ್ದಿ ಮೂಲಗಳು ತಿಳಿಸಿದವು.

ಲಡಾಖ್ನಲ್ಲಿ ಚೀನಾದೊಂದಿಗಿನ ಗಡಿ ಬಿಕ್ಕಟ್ಟು ಮತ್ತು ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಜೊತೆಗೆ ಫೇಸ್ಬುಕ್ ಸಂಬಂಧದ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸುವ ಸಾಧ್ಯತೆ ಇದ್ದು, ಕೋವಿಡ್ -೧೯ ಸಾಂಕ್ರಾಮಿಕ ರೋಗದ ನಿಭಾವಣೆ, ಸಾಂಕ್ರಾಮಿಕದ ಪರಿಣಾಮವಾಗಿ ಉಲ್ಬಣಗೊಂಡಿರುವ ಆರ್ಥಿಕ ಬಿಕ್ಕಟ್ಟು, ಉದ್ಯೋಗ ನಷ್ಟ, ಮತ್ತು ಕೃಷಿ ಯಾತನೆ ಕುರಿತು ಕಾಂಗ್ರೆಸ್ ಸರ್ಕಾರವನ್ನು ವಾಕ್ ಪ್ರಹಾರಕ್ಕೆ ಗುರಿಯಾಗಿಸುವ ಸಾಧ್ಯತೆಯಿದೆ.

ಗಡಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗಾಗಿ ಪಕ್ಷವು ಒತ್ತಾಯಿಸಲಿದೆ ಎಂದು  ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರೊಬ್ಬರು ಹೇಳಿದ್ದಾರೆ. ವಿಶೇಷವಾಗಿ ಜೂನ್ ೧೯ರ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿಯವರು ಲಡಾಖ್ನಲ್ಲಿ ಭಾರತೀಯ ಭೂಪ್ರದೇಶದಲ್ಲಿ ಯಾವುದೇ ಒಳನುಸುಳುವಿಕೆ ನಡೆದಿಲ್ಲ ಎಂದು ಹೇಳಿದ್ದು ವಿವಾದ ಎಬ್ಬಿಸುವ ನಿರೀಕ್ಷೆ ಇದೆ.

ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಚೀನಾವನ್ನು ಹೆಸರಿಸದೇ ಇದ್ದುದಕ್ಕಾಗಿ ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯವರ ಮೇಲೆ ದಾಳಿ ಮಾಡಿತ್ತು. ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವ ಚೀನೀ ಪಡೆಗಳನ್ನು ಹಿಂದಕ್ಕೆ ಅಟ್ಟಲು ಏನು ಮಾಡಬೇಕೆಂದು ಸರ್ಕಾರ ಪ್ರಸ್ತಾಪಿಸುತ್ತದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತ್ತು.

ಲಡಾಖ್ ವಿವಾದಿತ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬಗ್ಗೆ ಸೇನಾ ಮಾತುಕತೆಗಳ ಮಾರ್ಗಕ್ಕೆ ತಡೆ ಬಿದ್ದಿದ್ದು, ಯಥಾಸ್ಥಿತಿಯನ್ನು ಪುನಃಸ್ಥಾಪಿಸುವ ಪ್ರಯತ್ನದಲ್ಲಿ ಭಾರತವು ಕಠಿಣ ಮಾರ್ಗವನ್ನು ಅನುಸರಿಸಿದೆ. ಜೂನ್ ತಿಂಗಳಲ್ಲಿ ಚೀನೀ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ಉದ್ವಿಗ್ನತೆ ಹೆಚ್ಚಾಗಿತ್ತು.

ಕಳೆದ ವಾರ ಪ್ರಕಟಗೊಂಡಿರುವ ವಾಲ್ ಸ್ಟ್ರೀಟ್ ಜರ್ನಲ್ ವರದಿಯ ವಿಷಯವನ್ನು ಜಂಟಿ ಸಂಸದೀಯ ಸಮಿತಿಯ ತನಿಖೆಗೆ ಒಪ್ಪಿಸಲು ಪಕ್ಷವು ಒತ್ತಾಯಿಸಲಿದೆ ಎಂದು ಕಾರ್ಯಕಾರಿಣಿ ಸದಸ್ಯ ಹೇಳಿದರು. ಬಿಜೆಪಿ ರಾಜಕಾರಣಿಗಳ ದ್ವೇಷ ಭಾಷಣವನ್ನು ನಿಭಾಯಿಸುವಲ್ಲಿ ಫೇಸ್ಬುಕ್ ಭಾರತೀಯ ಸಿಬ್ಬಂದಿ ನಿಯಮಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ವರದಿ ಹೇಳಿತ್ತು. ಫೇಸ್ಬುಕ್ ಮತ್ತು ಬಿಜೆಪಿ ನಡುವೆ ಅಪವಿತ್ರ ಸಂಬಂಧಇದೆ ಎಂದು ಕಾಂಗ್ರೆಸ್ ಎಂದು ಆರೋಪಿಸಿದೆ.

ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ಗೆ ಕಾಂಗ್ರೆಸ್ ಪಕ್ಷವು ಮಂಗಳವಾರ ಪತ್ರ ಬರೆದಿದ್ದು, ಭಾರತದ ಸ್ಥಾಪಕ ನಾಯಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಹಕ್ಕುಗಳು ಮತ್ತು ಮೌಲ್ಯಗಳಿಗೆ ಬೆದರಿಕೆ ಒಡ್ಡಲು ಸಾಮಾಜಿಕ ಮಾಧ್ಯಮ ಕಂಪನಿಯು ಇಚ್ಛಿಸಿರಬಹುದುಎಂದು ಆಪಾದಿಸಿದೆ. ವರದಿಯ ಬಗ್ಗೆ ತನಿಖೆ ನಡೆಯಬೇಕು ಎಂದು ಪಕ್ಷವು ಆಗ್ರಹಿಸಿದೆ.

ಕೋವಿಡ್ -೧೯ ಸಾಂಕ್ರಾಮಿಕ ರೋಗವನ್ನು "ತಪ್ಪಾಗಿ ನಿರ್ವಹಿಸಿದ" ಬಗ್ಗೆ ಸರ್ಕಾರವನ್ನು ಕಾಂಗ್ರೆಸ್ ತರಾಟೆಗೆ ತೆಗೆದುಕೊಳ್ಳುತ್ತದೆ ಎಂದು ಪಕದ ಕಾರ್ಯಕಾರಿಣಿ ಸದಸ್ಯ ಹೇಳಿದರು.

"ಫೆಬ್ರ್ರುವರಿಯಷ್ಟು ಹಿಂದೆಯೇ ರಾಹುಲ್ ಗಾಂಧಿಯವರು ವಿಷಯವನ್ನು ಪ್ರಸ್ತಾಪಿಸಿದಾಗ, ಅವರನ್ನು ಬಿಜೆಪಿ ಅಪಹಾಸ್ಯ ಮಾಡಿತು. ನೋಡಿ, ನಾವು ಈಗ ಎಲ್ಲಿ ನಿಂತಿದ್ದೇವೆ? ಎರಡು ದಶಲಕ್ಷಕ್ಕೂ ಹೆಚ್ಚು ಕೋವಿಡ್ -೧೯ ಪ್ರಕರಣಗಳನ್ನು ದಾಟಿದ ವಿಶ್ವದ ಮೂರನೇ ರಾಷ್ಟ್ರ ಎಂಬ ಕುಖ್ಯಾತಿಗೆ ನಾವು ಪಾತ್ರರಾಗಿದ್ದೇವೆ. ಭಾರಿ ಆರ್ಥಿಕ ಬಿಕ್ಕಟ್ಟು ಮತ್ತು ಭಾರಿ ಉದ್ಯೋಗ ನಷ್ಟಕ್ಕೆ ಕಾರಣವಾದ ಕೆಟ್ಟ ಕಲ್ಪನೆಯ ದಿಗ್ಬಂಧನವನ್ನು (ಲಾಕ್ಡೌನ್) ನಾವು ನೋಡಿದ್ದೇವೆಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ ಕಾರ್ಯಕರ್ತ ಹೇಳಿದರು.

"ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ವಿಫಲವಾಗಿರುವುದು ಹೇಗೆ ಮತ್ತು ಏಕೆ ಎಂದು ಸರ್ಕಾರ ನಮಗೆ ವಿವರಿಸಬೇಕಾಗಿದೆಎಂದು ಅವರು ನುಡಿದರು.

ಪಕ್ಷವು ಉದ್ಯೋಗ ನಷ್ಟ, ಕೃಷಿ ತೊಂದರೆ, ಮತ್ತು ಆರ್ಥಿಕ ಬಿಕ್ಕಟ್ಟಿನ ವಿಷಯಗಳನ್ನೂ ಎತ್ತುತ್ತದೆ ಎಂದು ಕಾರ್ಯಕರ್ತರು ಹೇಳಿದರು.

"ಪ್ರಧಾನ ಮಂತ್ರಿಗಳ ಕಚೇರಿಯು [ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ) ಮಾಹಿತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಾವು ಪಿಎಂ ಕೇರ್ಸ್ ನಿಧಿ ಬಗ್ಗೆ ಚರ್ಚೆಯನ್ನು ಸಹ ಮಾಡುತ್ತೇವೆ. ನಿಧಿಗೆ ಸಂಬಂಧಿಸಿದಂತೆ ಪಾರದರ್ಶಕತೆಗಾಗಿ ನಾವು ಒತ್ತಾಯಿಸುತ್ತಿದ್ದೇವೆ. ಅದು ಯಾವುದೇ ವ್ಯಕ್ತಿಗೆ ಸೇರಿದ್ದಲ್ಲ, ದೇಶಕ್ಕೆ ಸೇರಿದ್ದುಎಂದು ಅವರು ನುಡಿದರು.

ಕೋವಿಡ್ -೧೯ ಸಾಂಕ್ರಾಮಿಕ ರೋಗದಂತಹ ಯಾವುದೇ ರೀತಿಯ ತುರ್ತು ಅಥವಾ ತೊಂದರೆಯ ಪರಿಸ್ಥಿತಿಗಳನ್ನು ಎದುರಿಸುವ ಪ್ರಾಥಮಿಕ ಉದ್ದೇಶದೊಂದಿಗೆ ಕೇಂದ್ರವು ಮಾರ್ಚ್ ೨೮ ರಂದು ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಿತು. ಅದು ಎಷ್ಟು ಹಣವನ್ನು ಸಂಗ್ರಹಿಸಿದೆ ಎಂಬುದು ಸ್ಪಷ್ಟವಾಗಿಲ್ಲ.

ನಿಧಿಗೆ ಸಂಗ್ರಹಿಸಿದ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ (ಎನ್ಡಿಆರ್ಎಫ್) ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ಮೂವರು ನ್ಯಾಯಾಧೀಶರ ಪೀಠವು ಕೋವಿಡ್ -೧೯ ಮತ್ತು ಸಾಂಕ್ರಾಮಿಕ ರೋಗವನ್ನು ಎದುರಿಸಲು ಹಣಕಾಸಿನ ಸಂಪನ್ಮೂಲಗಳ ಅವಶ್ಯಕತೆಯಿಂದಾಗಿ ನಿಧಿಯನ್ನು ಸ್ಥಾಪಿಸುವ ಅವಶ್ಯಕತೆಯಿದೆ ಮತ್ತು ನ್ಯಾಯಾಲಯವು ಅದನ್ನು ಆಕ್ಷೇಪಿಸಲು ಸಾಧ್ಯವಿಲ್ಲ ಎಂದು ತನ್ನ ತೀರ್ಪಿನಲ್ಲಿ ಹೇಳಿತ್ತು.

ಕಾಂಗ್ರೆಸ್ ಆದೇಶವನ್ನು ಟೀಕಿಸಿ, ನಿಧಿ ಪಾರದರ್ಶಕವಾಗಿಲ್ಲ ಮತ್ತು ಎನ್ಡಿಆರ್ಎಫ್ ಅಸ್ತಿತ್ವದಲ್ಲಿದ್ದಾಗ ಪಿಎಂ ಕೇರ್ಸ್ ಫಂಡ್ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದೆ.

೩೨ ಸಾರ್ವಜನಿಕ ವಲಯದ ಸಂಸ್ಥೆಗಳ ಮಾರಾಟ ಮತ್ತು ರೈಲ್ವೆ ಹಾಗೂ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಹಸ್ತಾಂತರಿಸುವ ವಿಷಯವನ್ನೂ ಕಾಂಗ್ರೆಸ್ ಎತ್ತಲಿದೆ. ದೇಶವು ಎದುರಿಸುತ್ತಿರುವ ಎಲ್ಲಾ ನಿರ್ಣಾಯಕ ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಸಂಯುಕ್ತ ಹೋರಾಟವನ್ನು ಪ್ರಸ್ತುತಪಡಿಸಲು ಪಕ್ಷವು ಇತರ ಸಮಾನ ಮನಸ್ಕ ವಿರೋಧ ಪಕ್ಷಗಳೊಂದಿಗೆ ಮಾತನಾಡಲಿದೆ ಎಂದು ಕಾರ್ಯಕಾರಿಣಿ ಸದಸ್ಯ ಹೇಳಿದರು. "ನಮ್ಮ ಸಂಸತ್ತಿನ ಕಾರ್ಯತಂತ್ರವನ್ನು ದೃಢಪಡಿಸಲು ನಾವು ಶೀಘ್ರದಲ್ಲೇ ಸಭೆ ಸೇರಲಿದ್ದೇವೆಎಂದು ಅವರು ನುಡಿದರು.

ಸಾಮಾನ್ಯವಾಗಿ ಜುಲೈ ಮಧ್ಯದಲ್ಲಿ ನಡೆಯುವ ಮುಂಗಾರು ಅಧಿವೇಶನವು ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿದೆ, ಸಾಂಕ್ರಾಮಿಕವು ಮಾರ್ಚ್ ೨೫ ರಿಂದ ವ್ಯಾಪಕವಾದ ರಾಷ್ಟ್ರವ್ಯಾಪಿ ದಿಗ್ಬಂಧನಕ್ಕೆ (ಲಾಕ್ಡೌನ್) ಕಾರಣವಾಯಿತು.

ಸಂಕ್ಷಿಪ್ತ ಅವಧಿಯದ್ದಾಗಿರಲಿದೆ ಎಂದು ನಿರೀಕ್ಷಿಸಲಾಗಿರುವ ಸಂಸತ್ ಅಧಿವೇಶನದಲ್ಲಿ ಅಭೂತಪೂರ್ವ ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯ ವ್ಯವಸ್ಥೆ ಜಾರಿಯಲ್ಲಿರುತ್ತದೆ. ವ್ಯವಸ್ಥೆಗಳಲ್ಲಿ ಸೂಕ್ಷ್ಮಜೀವಿಗಳನ್ನು ಕೊಲ್ಲಲು ಅಥವಾ ನಿಷ್ಕ್ರಿಯಗೊಳಿಸಲು ಹವಾನಿಯಂತ್ರಣ ವ್ಯವಸ್ಥೆಗಳಲ್ಲಿ ನೇರಳಾತೀತ ಸೂಕ್ಷ್ಮಾಣು ವಿಕಿರಣ, ಲೈವ್ ಪ್ರಕ್ರಿಯೆಗಳಿಗೆ ೧೦ ಪ್ರದರ್ಶನ ಪರದೆಗಳು, ಉನ್ನತ ನಾಯಕರಿಗೆ ಮೀಸಲಿಟ್ಟ ಆಸನಗಳು ಮತ್ತು ಉಭಯ ಸದನಗಳನ್ನು ಸಂಪರ್ಕಿಸುವ ವಿಶೇಷ ಸಂವಹನ ಕೇಬಲ್ಗಳು ಸೇರಿವೆ.

No comments:

Advertisement