My Blog List

Friday, August 14, 2020

ನ್ಯಾಯಾಂಗ ನಿಂದನೆ, ಪ್ರಶಾಂತ ಭೂಷಣ್ ತಪ್ಪಿತಸ್ಥ: ಸುಪ್ರೀಂ

 ನ್ಯಾಯಾಂಗ ನಿಂದನೆ, ಪ್ರಶಾಂತ ಭೂಷಣ್ ತಪ್ಪಿತಸ್ಥ: ಸುಪ್ರೀಂ

ನವದೆಹಲಿ: ನ್ಯಾಯಾಂಗದ ವಿರುದ್ಧ ನಿರ್ದಿಷ್ಟವಾಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಶರತ್ ಅರವಿಂದ ಬೋಬ್ಡೆ ವಿರುದ್ಧ ಪ್ರಕಟಿಸಿದ ಎರಡು ಅವಹೇಳನಕಾರಿ ಟ್ವೀಟ್ಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ- ವಕೀಲ ಪ್ರಶಾಂತ್ ಭೂಷಣ್ ಅವರು ಅಪರಾಧಿ ಎಂಬುದಾಗಿ ಸುಪ್ರೀಂ ಕೋರ್ಟ್ 2020 ಆಗಸ್ಟ್ 14ರ ಶುಕ್ರವಾರ ತೀರ್ಪು ನೀಡಿತು.

ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠವು ಅಪರಾಧಕ್ಕಾಗಿ ಭೂಷಣ್ ಅವರಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣವನ್ನು ಆಗಸ್ಟ್ ೨೦ ರಂದು ನಿರ್ಧರಿಸುವುದಾಗಿ ಹೇಳಿತು.

ನ್ಯಾಯಾಂಗದ ಅವಹೇಳನ ಅಪರಾಧಕ್ಕೆ ಸಮಕಾಲೀನ ವ್ಯಕ್ತಿಗೆ ಆರು ತಿಂಗಳವರೆಗೆ ವಿಸ್ತರಿಸಬಹುದಾದ ಸರಳ ಸೆರೆವಾಸದ ಶಿಕ್ಷೆ ಅಥವಾ ,೦೦೦ ರೂ.ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದು.

ತಮ್ಮ ಟ್ವೀಟ್ಗಳು ನ್ಯಾಯಮೂರ್ತಿಗಳ ವೈಯಕ್ತಿಕ ವರ್ತನೆಗೆ ವಿರುದ್ಧವಾಗಿವೆ ಮತ್ತು ಅವು ನ್ಯಾಯದಾನಕ್ಕೆ ಅಡ್ಡಿ ಉಂಟು ಮಾಡುವುದಿಲ್ಲ ಎಂಬುದಾಗಿ ಪ್ರಶಾಂತ ಭೂಷಣ್ ಅವರು ಸಮರ್ಥಿಸಿಕೊಂಡ ಬಳಿಕ ಆಗಸ್ಟ್ ೫ರಂದು ಪೀಠವು ವಿಷಯಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ಭೂಷಣ್ ಅವರ ಟ್ವೀಟ್ ಗಳ ಬಗ್ಗೆ ಉಲ್ಲೇಖಿಸಿದ್ದ ಸುಪ್ರೀಂಕೋರ್ಟ್ ಇದಕ್ಕೆ ಮುನ್ನ ಹೇಳಿಕೆಗಳು ಸಾಮಾನ್ಯವಾಗಿ ಸುಪ್ರೀಂಕೋರ್ಟಿನ ಮತ್ತು ನಿರ್ದಿಷ್ಟವಾಗಿ ಮುಖ್ಯ ನ್ಯಾಯಮೂರ್ತಿಯ ಘನತೆ ಮತ್ತು ಅಧಿಕಾರವನ್ನು ಜನರ ಕಣ್ಣಿನಲ್ಲಿ ಕುಗ್ಗಿಸುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ ಎಂದು ಹೇಳಿತ್ತು.

ವಿಷಯದಲ್ಲಿ ಭೂಷಣ್ ಪರ ಹಾಜರಾಗಿದ್ದ ಹಿರಿಯ ವಕೀಲ ದುಷ್ಯಂತ್ ದವೆ ಅವರು ಎರಡು ಟ್ವೀಟ್ ಗಳು ಸಂಸ್ಥೆಯ ವಿರುದ್ಧವಲ್ಲ ಎಂದು ವಾದಿಸಿದ್ದರು.

ಭೂಷಣ್ ಅವರು ನ್ಯಾಯಶಾಸ್ತ್ರದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಮತ್ತು ಅವರ ವಿಶ್ವಾರ್ಹತೆಯನ್ನು ತೋರಿಸುವ ಕನಿಷ್ಠ ೫೦ ತೀರ್ಪುಗಳಿವೆ ಎಂದು ದವೆ ಹೇಳಿದ್ದರು. ಜಿ ಹಗರಣ, ಕಲ್ಲಿದ್ದಲು ಮತ್ತು ಗಣಿಗಾರಿಕೆ ನಿಕ್ಷೇಪ ಹಂಚಿಕೆ ವಿಷಯಗಳಲ್ಲಿ ಅವರು ನೀಡಿದ ಕೊಡುಗೆಗಳನ್ನು ನ್ಯಾಯಾಲಯವು ಶ್ಲಾಘಿಸಿದೆ ಎಂದು ಅವರು ತಿಳಿಸಿದ್ದರು.

ತುರ್ತು ಪರಿಸ್ಥಿತಿಯಲ್ಲಿ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಿದ ಎಡಿಎಂ ಜಬಲ್ಪುರ್ ಪ್ರಕರಣವನ್ನು ಉಲ್ಲೇಖಿಸಿದ ಹಿರಿಯ ವಕೀಲರು, ಆಗ ನ್ಯಾಯಮೂರ್ತಿಗಳ ವಿರುದ್ಧ ಅತ್ಯಂತ ನಿರ್ದಾಕ್ಷಿಣ್ಯ ಹೇಳಿಕೆಗಳನ್ನು ನೀಡಿದ್ದರೂ ಯಾವುದೇ ನ್ಯಾಯಾಂಗ ನಿಂದನೆ ಪ್ರಕ್ರಿಯೆಗಳನ್ನು ಕೈಗೊಂಡಿರಲಿಲ್ಲ ಎಂದು ಪ್ರತಿಪಾದಿಸಿದ್ದರು.

೧೪೨ ಪುಟಗಳ ತಮ್ಮ ಉತ್ತರ ರೂಪದ ಪ್ರಮಾಣಪತ್ರದಲ್ಲಿ ಭೂಷಣ್ ಅವರು ತಮ್ಮ ಎರಡು ಟ್ವೀಟ್ಗಳನ್ನು ಸಮರ್ಥಿಸಿದ್ದರು ಮತ್ತು ಅಭಿಪ್ರಾಯದ ಅಭಿವ್ಯಕ್ತಿಯು ಎಷ್ಟೇ ಡಾಳಾಗಿದ್ದರೂ, ಒಪ್ಪಲಸಾಧ್ಯವಾದದ್ದಾದರೂ, ಮತ್ತು ಕೆಲವರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇದ್ದುದಾದರೂ ನ್ಯಾಯಾಲಯ ನಿಂದನೆ ಆಗುವುದಿಲ್ಲ ಎಂದು ಪ್ರತಿಪಾದಿಸಿದ್ದರು.

ನಾಗರಿಕರು ಹೊಣೆಗಾರಿಕೆ ಮತ್ತು ಸುಧಾರಣೆಗಳಿಗಾಗಿ ಒತ್ತಾಯಿಸುವುದನ್ನು ತಡೆಯುವುದು ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಹುಟ್ಟುಹಾಕುವ ಮೂಲಕ ಅದನ್ನು ಸಮರ್ಥಿಸುವುದು ತಪ್ಪಲ್ಲ. sಸದ್ಭಾವನೆಯ ಟೀಕೆಗಳನ್ನು ನಿಗ್ರಹಿಸಲು ಸಂವಿಧಾನದ ೧೨೯ನೇ ವಿಧಿಸಯನ್ನು ಬಳಸಲಾಗದು ಎಂದು ಅವರು ಹೇಳಿದ್ದರು.

ಸುಪ್ರೀಂಕೋರ್ಟಿಗೆ ಸಂಬಂಧಿಸಿದಂತೆ ಜೂನ್ ೨೭ರಂದು ಮತ್ತು ಸಿಜೆಐ ಬೋಬ್ಡೆ ಅವರಿಗೆ ಸಂಬಂಧಿಸಿದಂತೆ ಜೂನ್ ೨೯ರಂದು ಎರಡು ಟ್ವೀಟ್ಗಳನ್ನು ಪ್ರಶಾಂತ ಭೂಷಣ್ ಪ್ರಕಟಿಸಿದ್ದರು. ಜುಲೈ ೨೨ರಂದು ಸುಪ್ರೀಂಕೋರ್ಟ್ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ನ್ಯಾಯಾಲಯದಲ್ಲಿ ಹಾಜರು ಪಡಿಸಲಾದ ಮೊದಲ ಟ್ವೀಟ್ ಹೀಗೆ ಹೇಳಿತ್ತು: ಕಳೆದ ಆರು ವರ್ಷಗಳಲ್ಲಿ ಔಪಚಾರಿಕ ತುರ್ತು ಪರಿಸ್ಥಿತಿ ಇಲ್ಲದೆ ಭಾರತದಲ್ಲಿ ಪ್ರಜಾಪ್ರಭುತ್ವವು ಹೇಗೆ ನಾಶವಾಗಿದೆ ಎಂಬುದನ್ನು ನೋಡಲು ಇತಿಹಾಸಕಾರರು ಹಿಂತಿರುಗಿ ನೋಡಿದಾಗ, ಅವರು ಇದರಲ್ಲಿ ಸುಪ್ರೀಂಕೋರ್ಟಿನ ಪಾತ್ರ, ವಿನಾಶ, ಮತ್ತು ವಿಶೇಷವಾಗಿ ಕೊನೆಯ ನಾಲ್ಕು ಸಿಜೆಐಗಳ ಪಾತ್ರವನ್ನು ವಿಶೇಷವಾಗಿ ಗುರುತಿಸುತ್ತಾರೆ.

ಎರಡನೇ ಟ್ವೀಟ್ ಹೀಗೆ ಹೇಳಿದೆ: ನ್ಯಾಯಪಡೆಯುವ ನಾಗರಿಕರ ಮೂಲಭೂತ ಹಕ್ಕನ್ನು ನಿರಾಕರಿಸಿ, ಎಸ್ ಸಿಯನ್ನು (ಸುಪ್ರೀಂಕೋರ್ಟನ್ನು) ಲಾಕ್ ಡೌನಿನಲ್ಲಿ ಇರಿಸಿದ ವೇಳೆಯಲ್ಲಿ, ನಾಗಪುರ ರಾಜಭವನದಲ್ಲಿ ಬಿಜೆಪಿ [ಭಾರತೀಯ ಜನತಾ ಪಕ್ಷದ] ನಾಯಕನಿಗೆ ಸೇರಿದ ೫೦ ಲಕ್ಷ ರೂ.ಗಳ ಮೋಟಾರ್ ಸೈಕಲ್ ಮೇಲೆ ಮುಖಗವಸು (ಮಾಸ್ಕ್) ಅಥವಾ ಹೆಲ್ಮೆಟ್ ಧರಿಸದೆ ಸಿಜೆಐ ಸವಾರಿ ಮಾಡುತ್ತಾರೆ.

ಬೋಬ್ಡೆ ಅವರು ಹೆಲ್ಮೆಟ್ ಧರಿಸಿರಲಿಲ್ಲ ಎಂಬುದಾಗಿ ಹೇಳಿದ್ದಕ್ಕಾಗಿ ಭೂಷಣ್ ಅವರು ಪ್ರಮಾಣಪತ್ರದಲ್ಲಿ ವಿಷಾದ ವ್ಯಕ್ತ ಪಡಿಸಿದ್ದರು. ಬೈಕ್ ನಿಂತ ಸ್ಥಿತಿಯಲ್ಲಿತ್ತು ಮತ್ತು ಸಿಜೆಐ ಅದರ ಮೇಲೆ ಸವಾರಿ ಮಾಡುತ್ತಿರಲಿಲ್ಲ, ಕೇವಲ ಕುಳಿತಿದ್ದರು ಎಂಬುದನ್ನು ಗಮನಿಸಲು ತಾವು ವಿಫಲರಾಗಿದ್ದುದಾಗಿ ಭೂಷಣ್ ತಿಳಿಸಿದ್ದರು.

ಎರಡು ಟ್ವೀಟ್ಗಳಿಗಾಗಿ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ ಬಳಿಕ ಸುಪ್ರೀಂಕೋರ್ಟ್ ಭೂಷಣ್ ಅವರಿಗೆ ಶೋಕಾಸ್ ನೋಟಿಸ್ ನೀಡಿತ್ತು.

ಹಿಂದಿನ ಸಿಜೆಐಗಳು ಅವರು ಭ್ರಷ್ಟರಾಗಿದ್ದಾರೆ ಎಂಬುದಾಗಿ ತೆಹಲ್ಕ್ಕಾ ನಿಯತಕಾಲಿಕಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಕ್ಕಾಗಿ ಪ್ರಶಾಂತ್ ಭೂಷಣ್ ವಿರುದ್ಧ ದಾಖಲಾಗಿರುವ ವಿರುದ್ಧ ಸ್ವ ಇಚ್ಛೆಯ ನ್ಯಾಯಾಂಗ ನಿಂದನೆ ಪ್ರಕರಣ ಕೂಡಾ ತಿಸದಸ್ಯ ಪೀಠದ ಮುಂದಿದೆ. ಪ್ರಕರಣದಲ್ಲಿ ತಮ್ಮ ವಿವರಣೆ ನೀಡಲು ಪ್ರಶಾಂತ ಭೂಷಣ್ ಮುಂದಾಗಿದ್ದರು, ಆದರೆ ಅದನ್ನು ಅಂಗೀಕರಿಸಲು ನಿರಾಕರಿಸಿ ಆಗಸ್ಟ್ ೧೦ರಂದು ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ವಿಷಯವನ್ನು ವಿವರವಾಗಿ ಆಲಿಸುವುದಾಗಿ ತಿಳಿಸಿತ್ತು.

ಪ್ರಕರಣವು ಆಗಸ್ಟ್ ೧೭ರಂದು ವಿಚಾರಣೆಗೆ ನಿಗದಿಯಾಗಿದೆ.

No comments:

Advertisement