My Blog List

Friday, November 20, 2020

ಕೃಷಿ ಕಾನೂನು ವಿರುದ್ಧ ನ.೨೬ ರಂದು ದೆಹಲಿಯಲ್ಲಿ ಬೃಹತ್ ಪ್ರದರ್ಶನ

 ಕೃಷಿ ಕಾನೂನು  ವಿರುದ್ಧ .೨೬ ರಂದು ದೆಹಲಿಯಲ್ಲಿ ಬೃಹತ್ ಪ್ರದರ್ಶನ

ನವದೆಹಲಿ: ಕೇಂದ್ರ ಸರ್ಕಾರವು ಇತ್ತೀಚೆಗೆ ಅಂಗೀಕರಿಸಿದ ಕೃಷಿ ಕಾನೂನುಗಳ ವಿರುದ್ಧದ ಅನಿರ್ದಿಷ್ಟ ಪ್ರತಿಭಟನೆಯ ಭಾಗವಾಗಿ ವಿವಿಧ ರಾಜ್ಯಗಳ ಸಹಸ್ರಾರು ರೈತರು ಮತ್ತು ಕಾರ್ಮಿಕ ಸಂಘಗಳ ಸದಸ್ಯರು ರಾಷ್ಟ್ರ ರಾಜಧಾನಿಗೆ ಮೆರವಣಿಗೆ ನಡೆಸಲು ನವೆಂಬರ್ ೨೬ ರಂದು ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜಮಾಯಿಸುವ ನಿರೀಕ್ಷೆ ಇದ್ದು, ದೆಹಲಿಯಲ್ಲಿ ಜನ ಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆಗಳಿವೆ.

ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಆಡಳಿತವು ಅನುಮತಿ ನಿರಾಕರಿಸಿದೆ, ಆದರೆ ರೈತ ಪ್ರದರ್ಶಕರು  ಒಂದು ವಾರ ಕಾಲ ಉಳಿಯಲು ಸಂಪೂರ್ಣವಾಗಿ ಸಜ್ಜಾಗಿರುತ್ತಾರೆ ಅಥವಾ ತಮ್ಮನ್ನು ಎಲ್ಲಿ ತಡೆಯಲಾಗುತ್ತದೋ ಅಲ್ಲೇ ಧರಣಿ ನಡೆಸಲು ಸಜ್ಜಾಗಿರುತ್ತಾರೆ ಎಂದು ವಿವಿಧ ರೈತ ಸಂಘ ಮುಖಂಡರು 2020 ನವೆಂಬರ್ 20ರ ಶುಕ್ರವಾರ ತಿಳಿಸಿದರು.

ರೈತ ಚಳವಳಿಯ ಪರಿಣಾಮವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಹಲವಾರು ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳಬಹುದು ಎಂದು ಅವರು ನುಡಿದರು.

"ರಾಮಲೀಲಾ ಮೈದಾನ ಅಥವಾ ಜಂತರ್ ಮಂತರಿನಲ್ಲಿ ಪ್ರತಿಭಟನೆ ನಡೆಸಲು ನಾವು ಅಧಿಕಾರಿಗಳಿಂದ ಅನುಮತಿ ಕೇಳಿದ್ದೆವು. ಆದರೆ ಅವರು ಕೊರೋನವೈರಸ್ ಸಾಂಕ್ರಾಮಿಕವನ್ನು ಉಲ್ಲೇಖಿಸಿ ತಿರಸ್ಕರಿಸಿದ್ದಾರೆ. ಅವರು ನಮಗೆ ಪರ್ಯಾಯವನ್ನು ನೀಡದ ಕಾರಣ, ನಾವು ಎಲ್ಲಾ ಐದು ಪ್ರಮುಖ ಹೆದ್ದಾರಿಗಳ ಮೂಲಕ ದೆಹಲಿಗೆ ಮೆರವಣಿಗೆ ಮಾಡಲು ನಿರ್ಧರಿಸಿದ್ದೇವೆ. ನಾವು ಪೊಲೀಸರೊಂದಿಗೆ ಮುಖಾಮುಖಿಯಾಗುವುದನ್ನು ತಪ್ಪಿಸುತ್ತೇವೆ. ನಮ್ಮನ್ನು ಎಲ್ಲಿ ನಿಲ್ಲಿಸಿದರೂ, ಸರ್ಕಾರವು ನಮ್ಮ ಧ್ವನಿಯನ್ನು ಆಲಿಸುವವರೆಗೆ ನಾವು ಅಲ್ಲಿ ಧರಣಿ  ಮಾಡುತ್ತೇವೆ ಎಂದು ಹರಿಯಾಣ ಮೂಲದ ರೈತ ಸಂಘಟನೆಯಾದ ಅಖಿಲ ಭಾರತ ಕಿಸಾನ್ ಖೇತ್ ಮಜ್ದೂರ್ ಸಂಘಟನ್ ಅಧ್ಯಕ್ಷ ಸತ್ಯವಾನ್ ಹೇಳಿದರು.

ಕನಿಷ್ಠ ಒಂದು ವಾರ ಅಥವಾ ೧೦ ದಿನಗಳವರೆಗೆ ರಾಜಧಾನಿಯಲ್ಲಿ ನೆಲೆ ನಿಲ್ಲಲು ರೈತರು ಸಿದ್ಧರಾಗಿರುತ್ತಾರೆ ಎಂದು ಅವರು ಹೇಳಿದರು.

ರಾಜಧಾನಿಯನ್ನು ಜೈಪುರ, ಮೀರತ್, ರೋಹ್ಟಕ್ ಮುಂತಾದವುಗಳೊಂದಿಗೆ ಸಂಪರ್ಕಿಸುವ ಹೆದ್ದಾರಿಗಳಿಂದ ರೈತರು ದೆಹಲಿಗೆ ಮೆರವಣಿಗೆ ನಡೆಸುವ ನಿರೀಕ್ಷೆಯಿದೆ. ಪ್ರತಿಭಟನಾಕಾರರು ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಹರಿಯಾಣ, ಪಂಜಾಬ್ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಿಂದ ಬರುವ ನಿರೀಕ್ಷೆಯಿದೆ.

ಪ್ರಮುಖ ಹೆದ್ದಾರಿಗಳಲ್ಲಿ ರೈತರು ಮತ್ತು ಪೊಲೀಸರ ನಡುವೆ ದೀರ್ಘಕಾಲದ ಮುಖಾಮುಖಿಯಾಗುವುದರಿಂದ ಗಡಿಯ ಎರಡೂ ಬದಿಗಳಲ್ಲಿ ಹಲವಾರು ಮೈಲಿ ಉದ್ದದ ಸಂಚಾರ ದಟ್ಟಣೆ ಸಂಭವಿಸಬಹುದು.

"ದೆಹಲಿಯ ಕೊರೋನವೈರಸ್ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಅನೇಕ ರೈತರು ದೆಹಲಿಗೆ ಕಾಲಿಡುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ಸದ್ಯಕ್ಕೆ ನೀವು ರೈತರಿಗೆ ಸ್ವಲ್ಪ ಭರವಸೆ ನೀಡಬೇಕು. ಕೃಷಿ ಮಸೂದೆಗಳ ಅನುಷ್ಠಾನದ ತುರ್ತು ಏನಿದೆ? ಮುಂದಿನ ಮೂರರಿಂದ ಆರು ತಿಂಗಳವರೆಗೆ - ಕೊರೋನವೈರಸ್ ಲಸಿಕೆ ಬರುವವರೆಗೆ ಸರ್ಕಾರವು ಕೃಷಿ ಮಸೂದೆಗಳ ಅನುಷ್ಠಾನವನ್ನು ಸ್ಥಗಿತಗೊಳಿಸಲು ಸಾಧ್ಯವಿಲ್ಲವೇ? ನಂತರ ನಾವು ಸಮಾಜದ ಸಾಮಾನ್ಯ ಅಭಿಮಾನವನ್ನು ಗಮನದಲ್ಲಿಟ್ಟುಕೊಂಡು ನಮ್ಮ ಪ್ರತಿಭಟನೆಗಳನ್ನು ಪುನಾರಂಭಿಸಬಹುದು ಎಂದು ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯ (ಎಐಕೆಎಸ್ಸಿಸಿ) ರಾಷ್ಟ್ರೀಯ ಸಂಚಾಲಕ ವಿ.ಎಂ.ಸಿಂಗ್ ಹೇಳಿದರು.

ಎಐಕೆಎಸ್ಸಿಸಿಯು ೨೨ ರಾಜ್ಯಗಳಿಂದ ೨೫೦ ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಪ್ರತಿನಿಧಿಸುವ ಸಂಘಟನೆಯಾಗಿದೆ. ನವೆಂಬರ್ ೨೬-೨೭ರ ಪ್ರತಿಭಟನೆಗಾಗಿ, ರಾಷ್ಟ್ರೀಯ ಕಿಸಾನ್ ಮಹಾಸಂಘದಂತಹ ಕೆಲವು ರೈತ ಸಂಘಟನೆಗಳು ಮತ್ತು ಭಾರತೀಯ ಕಿಸಾನ್ ಒಕ್ಕೂಟದ ವಿವಿಧ ಬಣಗಳು ಎಐಕೆಎಸ್ಸಿಸಿಯೊಂದಿಗೆ ಸೇರಿಕೊಂಡಿವೆ. ಐಎನ್ಟಿಯುಸಿ, ಎಐಟಿಯುಸಿ, ಎಚ್ಎಂಎಸ್, ಸಿಐಟಿಯು, ಎಐಯುಟಿಯುಸಿ ಮುಂತಾದ ದೇಶದ ಪ್ರಮುಖ ಕಾರ್ಮಿಕ ಸಂಘಗಳು ಒಕ್ಕೂಟವಾದ ಕೇಂದ್ರ ಕಾರ್ಮಿಕ ಸಂಘಗಳ (ಸಿಟಿಯು) ಜಂಟಿ ವೇದಿಕೆ ಕೂಡಾ ಇವುಗಳ ಜೊತೆಗಿದೆ.

No comments:

Advertisement