Saturday, January 2, 2021

ಜನವರಿ 26ರಂದು ದೆಹಲಿಗೆ ರೈತರ ಟ್ರ್ಯಾಕ್ಟರ್ ಪೆರೇಡ್

 ಜನವರಿ 26ರಂದು ದೆಹಲಿಗೆ ರೈತರ ಟ್ರ್ಯಾಕ್ಟರ್ ಪೆರೇಡ್

ನವದೆಹಲಿ: ಜನವರಿ ೨೬ರ ಗಣರಾಜ್ಯೋತ್ಸವ ದಿನದ ಒಳಗಾಗಿ ಮೂರು ಕೃಷಿ ಕಾನೂನು ರದ್ದು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ಖಾತರಿ ನೀಡುವ ಕಾನೂನು ಜಾರಿಯ ಬೇಡಿಕೆಗಳು ಈಡೇರದೇ ಇದ್ದಲ್ಲಿ ಗಣರಾಜ್ಯದಿನ ಪ್ರತಿಭಟನಾ ನಿರತ ಸಹಸ್ರಾರು ರೈತರು ರಾಷ್ಟ್ರ ರಾಜಧಾನಿಗೆ ಟ್ರ್ಯಾಕ್ಟರುಗಳೊಂದಿಗೆ ಪ್ರವೇಶಿಸಿ ಪೆರೇಡ್ ನಡೆಸಲಿದ್ದಾರೆ ಎಂದು ಕೃಷಿ ಒಕ್ಕೂಟಗಳ ವೇದಿಕೆಯಾದ ಸಂಯುಕ್ತ ಕಿಸಾನ್ ಮೋರ್ಚಾ ನಾಯಕರು 2021 ಜನವರಿ 02ರ ಶನಿವಾರ ಹೇಳಿದರು.

ರಾಜಧಾನಿಯಲ್ಲಿ ಒಂದು ತಿಂಗಳಿನಿಂದ ನಡೆಯುತ್ತಿರುವ ಆಂದೋಳನವನ್ನು ಸಮನ್ವಯಗೊಳಿಸುತ್ತಿರುವ ಮೋರ್ಚಾದ ಏಳು ಸದಸ್ಯರ ತಂಡವು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಜನವರಿ ರಿಂದ ೧೫ ದಿನಗಳವರೆಗೆ ಹೊಸ ಆಂದೋಲನ ಕಾರ್ಯಸೂಚಿಯನ್ನು ವಿವರಿಸಿತು.

ಹೊಸ ಕಾರ್‍ಯಸೂಚಿ ಪ್ರಕಾರ ರಾಜಭವನಗಳ ಮುಂದೆ ಪಿಕೆಟಿಂಗ್, ದೆಹಲಿ ಗಡಿಯಲ್ಲಿನ ದಿಗ್ಬಂಧನ ಸ್ಥಳಗಳಿಂದ ಜನವರಿ ೨೬ರ ಟ್ರ್ಯಾಕ್ಟರ್ ಪೆರೇಡಿಗಾಗಿ ಪೂರ್ವಾಭ್ಯಾಸ ಸೇರಿವೆ.

ಮೂರು ಕೃಷಿ ಕಾನೂನುಗಳಿಗೆ ಸಂಬಂಧಿಸಿzಂತೆ ಸರ್ಕಾರದೊಂದಿಗೆ ಜನವರಿ ೪ರಂದು ಸರ್ಕಾರದ ಜೊತೆಗೆ ನಡೆಯಲಿರುವ ಮಾತುಕತೆ ಮತ್ತು ಸುಪ್ರೀಂಕೋರ್ಟಿಗೆ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಜನವರಿ ೫ರಂದು ನಡೆಯಲಿರುವ ವಿಚಾರಣೆಗಳ ಫಲಿತಾಂಶಕ್ಕಾಗಿ ನಾವು ಕಾಯುತ್ತೇವೆ ಎಂದು ಕೃಷಿ ಮುಖಂಡರು ಹೇಳಿದರು.

ಇದು ನಮ್ಮ ಕೊನೆಯ ಎಚ್ಚರಿಕೆ. ಎಲ್ಲಾ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮತ್ತು ಗಣರಾಜ್ಯೋತ್ಸವದ ವೇಳೆಗೆ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ, ನಾವು ದೆಹಲಿಯನ್ನು ಪ್ರವೇಶಿಸಲು ಪ್ರಾರಂಭಿಸುತ್ತೇವೆ. ಶೇಕಡಾ ೫೦ ಬೇಡಿಕೆಗಳನ್ನು ಈಡೇರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಮ್ಮ ದೊಡ್ಡ ಬೇಡಿಕೆಗಳನ್ನು ಈಡೇರಿಸುವ ಯಾವುದೇ ಲಕ್ಷಣಗಳನ್ನು ಸರ್ಕಾರ ತೋರಿಸಿಲ್ಲ ಎಂದು ಪ್ರತಿಭಟನೆಗಳನ್ನು ಮುನ್ನಡೆಸುತ್ತಿರುವ  ವೇದಿಕೆಯ ಮುಖಂಡ ಯೋಗೇಂದ್ರ ಯಾದವ್ ಹೇಳಿದರು.

ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಸಂಸತ್ತು ಅಂಗೀಕರಿಸಿದ ಮೂರು ವಿವಾದಾತ್ಮಕ ಕಾನೂನುಗಳನ್ನು ಕೇಂದ್ರವು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಲು ಕೃಷಿ ಸಂಘಗಳು ಇತ್ತೀಚಿನ ವರ್ಷಗಳಲ್ಲಿ ಅತಿದೊಡ್ಡ ಆಂದೋಳನವನ್ನು ನಡೆಸುತ್ತಿದೆ.

ಕಾನೂನುಗಳು ದಶಕಗಳಷ್ಟು ಹಳೆಯದಾದ, ಸರ್ಕಾರಿ ಮಾರುಕಟ್ಟೆ ಸ್ಥಳಗಳ ಜಾಲಕ್ಕೆ ವಿರುದ್ಧವಾಗಿ ಮುಕ್ತ ಮಾರುಕಟ್ಟೆಗಳನ್ನು ರಚಿಸುವ ಮೂಲಕ ಮೂಲಭೂತವಾಗಿ ಭಾರತದ ರೈತರು ವ್ಯವಹಾರಗಳನ್ನು ಮಾಡುವ ವಿಧಾನವನ್ನು ಬದಲಾಯಿಸುತ್ತದೆ. ಮತ್ತು ಭವಿಷ್ಯದ ಮಾರಾಟಕ್ಕಾಗಿ ಅಗತ್ಯ ಸರಕುಗಳನ್ನು ದಾಸ್ತಾನು ಮಾಡಲು ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಗುತ್ತಿಗೆ ಕೃಷಿಗೆ ರಾಷ್ಟ್ರೀಯ ಚೌಕಟ್ಟನ್ನು ಹಾಕುತ್ತದೆ.

೨೦೨೦ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ ೨೦೨೦ ರೈತ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ ೨೦೨೦ ಇವು ಸರ್ಕಾರ ಜಾರಿಗೊಳಿಸಿರುವ ಮೂರು ಕಾನೂನುಗಳಾಗಿವೆ.

ಒಟ್ಟಿನಲ್ಲಿ, ಕಾನೂನುಗಳು ದಶಕಗಳಷ್ಟು ಹಳೆಯ ನಿಯಮಗಳನ್ನು ಬೈಪಾಸ್ ಮಾಡಿ, ದೊಡ್ಡ ನಿಗಮಗಳು ಮತ್ತು ಜಾಗತಿಕ ಸೂರ್ ಮಾರುಕಟ್ಟೆ ಸರಪಳಿಗಳಿಗೆ ರೈತರಿಂದ ನೇರವಾಗಿ ಖರೀದಿಸಲು ಅನುವು ಮಾಡಿಕೊಡುತ್ತವೆ. ಸುಧಾರಣೆಗಳು ದೊಡ್ಡ ಸಂಸ್ಥೆಗಳಿಂದ ಶೋಷಣೆಗೆ ಅವಕಾಶ ಕಲ್ಪಿಸುತ್ತವೆ, ತಮ್ಮ ಚೌಕಾಶಿ ಶಕ್ತಿಯನ್ನು ಕುಂದಿಸುತ್ತವೆ ಮತ್ತು ಗೋಧಿ, ಅಕ್ಕಿಯಂತಹ ರೈತರ ಉತ್ಪನ್ನಗಳನ್ನು ಖಾತರಿ ಬೆಂಬಲ ಬೆಲೆಗೆ ಖರೀದಿಸುವ ಸರ್ಕಾರದ ಖರೀದಿ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತವೆ ಎಂದು ರೈತರು ಹೇಳುತ್ತಾರೆ.

"ಎಲ್ಲಾ ನೆರೆಹೊರೆಯ ರಾಜ್ಯಗಳ ಟ್ರ್ಯಾಕ್ಟರುಗಳು ದೆಹಲಿಗೆ ಬರಲು ಪ್ರಾರಂಭಿಸುತ್ತವೆ. ಎಲ್ಲಾ ಪ್ರಸ್ತುತ ದಿಗ್ಬಂಧನ ತಾಣಗಳಿಂದ ದೆಹಲಿಯತ್ತ ಚಲಿಸಲು ಪ್ರಾರಂಭಿಸುತ್ತವೆ. ಅಂಬಾನಿ (ರಿಲಯನ್ಸ್ ಗ್ರೂಪ್) ಮತ್ತು ಅದಾನಿ (ಗುಂಪು) ಅವರ ಉತ್ಪನ್ನಗಳು, ಮಾಲ್‌ಗಳು ಮತ್ತು ಪೆಟ್ರೋಲ್ ಪಂಪ್‌ಗಳನ್ನು ಒಳಗೊಂಡಂತೆ ಸರಕು ಮತ್ತು ಸೇವೆಗಳ ದಿಗ್ಬಂಧನವನ್ನು ನಾವು ಮುಂದುವರಿಸುತ್ತೇವೆ ಎಂದು ಕೃಷಿ ಒಕ್ಕೂಟದ ಹಿರಿಯ ಮುಖಂಡ ದರ್ಶನ್ ಪಾಲ್ ಹೇಳಿದರು.

ನಾಯಕರು ತಮ್ಮ ಆಂದೋಲನ ಪ್ರಾರಂಭವಾದಾಗಿನಿಂದ ರಾಷ್ಟ್ರ ರಾಜಧಾನಿಯಲ್ಲಿ ತಮ್ಮ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

"ಸರ್ಕಾರವು ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಬಯಸುತ್ತಿಲ್ಲ, ಏಕೆಂದರೆ ಅದು ಅವರಿಗೆ ಅಹಂ ಸಮಸ್ಯೆಯಾಗಿದೆ. ಅವರು ನಮ್ಮ ಆಂದೋಲನವನ್ನು ಲೆಕ್ಕವಿಲ್ಲದಷ್ಟು ರೀತಿಯಲ್ಲಿ ಕೆಡಿಸಲು ಬಗೆ ಬಗೆಯ ಪ್ರಚಾರಗಳ ಮೂಲಕ ಪ್ರಯತ್ನಿಸಿದ್ದಾರೆ, ಕೆಲವೊಮ್ಮೆ ನಮ್ಮನ್ನು ಮಾವೋವಾದಿಗಳು ಮತ್ತು ಖಲಿಸ್ತಾನಿ (ಸಿಖ್ ಪ್ರತ್ಯೇಕತಾವಾದಿಗಳ ಉಲ್ಲೇಖ) ಎಂದು ಕರೆಯುತ್ತಾರೆ ಎಂದು ಬಲ್ಬೀರ್ ಸಿಂಗ್ ರಾಜೇವಾಲ್ ಹೇಳಿದರು.

ಸುಪ್ರೀಂ ಕೋರ್ಟ್ ಕಾನೂನುಗಳ ಸಿಂಧುತ್ವವನ್ನು ಎತ್ತಿಹಿಡಿದರೆ ಕೃಷಿ ಒಕ್ಕೂಟಗಳು ಏನು ಮಾಡುತ್ತವೆ ಎಂದು ಕೇಳಿದಾಗ, ‘ನಾವು ಪ್ರಕರಣದಲ್ಲಿ ಕಕ್ಷಿದಾರರಲ್ಲ, ಆದರೆ ಸೂಕ್ತ ಸಮಯ ಬಂದಾಗ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದರು.

No comments:

Advertisement