My Blog List

Tuesday, August 2, 2022

ಗಂಗಾನದಿ ಸಮೀಪ ಮಾಂಸದ ಅಂಗಡಿ ನಿಷೇಧ ಕಾನೂನುಬದ್ಧ: ಹೈಕೋರ್ಟ್

 ಗಂಗಾನದಿ ಸಮೀಪ ಮಾಂಸದ ಅಂಗಡಿ ನಿಷೇಧ ಕಾನೂನುಬದ್ಧ


ಪಂಚಾಯತ್‌ ಬೈ ಲಾ ರಚನೆ ಅಧಿಕಾರ ಎತ್ತಿ ಹಿಡಿದ ಹೈಕೋರ್ಟ್

ನೈನಿತಾಲ್‌ (ಉತ್ತರಾಖಂಡ): ಸಂವಿಧಾನದ ವಿಧಿಗಳಿಗೆ ಅನುಗುಣವಾಗಿಯೇ ಉತ್ತರಕಾಶಿಯಲ್ಲಿ "ಗಂಗಾ" ನದಿಯ 500 ಮೀಟರ್ ವ್ಯಾಪ್ತಿಯಲ್ಲಿ "ಮಾಂಸದ ಅಂಗಡಿಗಳನ್ನು" ನಿಷೇಧಿಸಲಾಗಿದೆ ಎಂದು ಉತ್ತರಾಖಂಡ ಹೈಕೋರ್ಟ್ 2022 ಆಗಸ್ಟ್‌ 2ರಂದು ತೀರ್ಪು ನೀಡಿದೆ.

ಗಂಗಾ ನದಿಯ ದಡದಿಂದ 500 ಮೀಟರುಗಳ ಒಳಗೆ ಪ್ರಾಣಿಗಳನ್ನು ಕಡಿಯಲು ಮತ್ತು ಮಾಂಸವನ್ನು ಮಾರಾಟ ಮಾಡುವ  ಯಾವುದೇ ಅಂಗಡಿಗೆ ಅನುಮತಿ ನೀಡಲಾಗುವುದಿಲ್ಲ ಎಂಬುದಾಗಿ ಉತ್ತರಕಾಶಿಯ ಜಿಲ್ಲಾ ಪಂಚಾಯತ್‌ ರೂಪಿಸಿದ ಉಪನಿಯಮಾವಳಿಯನ್ನು ಉತ್ತರಾಖಂಡ ಹೈಕೋರ್ಟ್‌ ಎತ್ತಿ ಹಿಡಿದಿದೆ.

ನ್ಯಾಯಮೂರ್ತಿ ಸಂಜಯ ಕುಮಾರ್ ಮಿಶ್ರಾ ಅವರ ಪೀಠವು ಉತ್ತರಾಖಂಡದ "ವಿಶೇಷ ಸ್ಥಾನಮಾನ" ಮತ್ತು ಉತ್ತರಕಾಶಿ ಜಿಲ್ಲೆಯಿಂದ ಹುಟ್ಟಿ ಬರುವ ಗಂಗಾ ನದಿ ಮತ್ತು ಉತ್ತರಾಖಂಡದ ಬಹುಪಾಲು ಜನತೆಗೆ ಗಂಗಾ ನದಿಯೊಂದಿಗೆ ಇರುವ ಪಾವಿತ್ರ್ಯದ ಭಾವನೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಪಂಚಾಯತ್ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದೆ. ಜಿಲ್ಲಾ ಪಂಚಾಯತ್‌ ರಚಿಸಿದ ಈ ಉಪನಿಯಮಾವಳಿಯು ಭಾರತೀಯ ಸಂವಿಧಾನದ ಭಾಗ IX ಒದಗಿಸಿರುವ ಉಪ ನಿಯಮಾವಳಿ ರಚಿಸುವ ಅಧಿಕಾರ ಕುರಿತ ಸಂವಿಧಾನದ ವಿಧಿವಿಧಾನಗಳಿಗೆ ಅನುಗುಣವಾಗಿದೆ ಎಂದು ಹೈಕೋರ್ಟ್‌ ಹೇಳಿದೆ.

ಗಂಗಾ ದಡದಿಂದ 105 ಮೀಟರ್ ದೂರದಲ್ಲಿರುವ ಆವರಣದಲ್ಲಿ ಮಾಂಸದ ಅಂಗಡಿ ನಡೆಸಲು ಅರ್ಜಿದಾರರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡದಿರುವ ಮೂಲಕ ಜಿಲ್ಲಾಧಿಕಾರಿಗಳು ಯಾವುದೇ ತಪ್ಪು ಮಾಡಿಲ್ಲ ಎಂದು ಕೋರ್ಟ್‌ ತೀರ್ಪು ನೀಡಿದೆ.

ಅರ್ಜಿದಾರರು ಜಿಲ್ಲಾ ಪಂಚಾಯತ್‌ನಿಂದ ಪರವಾನಗಿ ಪಡೆದ ನಂತರ 2006 ರಿಂದ ತಮ್ಮ ಗ್ರಾಮದಲ್ಲಿ ಬಾಡಿಗೆ ವಸತಿಗೃಹದಲ್ಲಿ ಮಾಂಸದ ಅಂಗಡಿಯನ್ನು ನಡೆಸುತ್ತಿದ್ದರು. ಆದಾಗ್ಯೂ, ಅರ್ಜಿದಾರರ ಪ್ರಕಾರ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ, 2006 ನ್ನು (" FSS ಕಾಯಿದೆ") ರಚಿಸಿದ ಬಳಿಕ ಜಿಲ್ಲಾ ಪಂಚಾಯಿತಿಯಿಂದ ಈ ಪರವಾನಗಿ ಅಗತ್ಯವಿಲ್ಲ. 2012 ರಲ್ಲಿ, ಅವರು ಎಫ್ಎಸ್ಎಸ್ ಕಾಯಿದೆ ಅಡಿಯಲ್ಲಿ ಗೊತ್ತುಪಡಿಸಿದ ಪ್ರಾಧಿಕಾರದಿಂದ ಪರವಾನಗಿಯನ್ನು ಸಹ ಮಾಂಸದ ಅಂಗಡಿ ನಡೆಸಲು ಪಡೆದಿದ್ದರು. ನಂತರ ಅವರು ತಮ್ಮ ವ್ಯಾಪಾರವನ್ನು ಬೇರೆ ಜಾಗಕ್ಕೆ ಬದಲಾಯಿಸಿದರು.

ದಿನಾಂಕ 27.02.2016 ರಂದು ಗಂಗಾ ನದಿಯ ದಡದಿಂದ 105 ಮೀಟರ್ ದೂರದಲ್ಲಿರುವ ಅವರ ಕುರಿ ಮಾಂಸದ ಅಂಗಡಿಯನ್ನು ಬೇರೆಡೆಗೆ 7 ದಿನಗಳೊಳಗೆ ಸ್ಥಳಾಂತರಿಸುವಂತೆ ಅರ್ಜಿದಾರರಿಗೆ ಉತ್ತರಕಾಶಿ ಜಿಲ್ಲಾ ಪಂಚಾಯತ್  ನೋಟಿಸ್ ನೀಡಿತು. ಅಸ್ತಿತ್ವದಲ್ಲಿರುವ ಉಪ-ಕಾನೂನುಗಳು. ನಿಯಮಾವಳಿಗಳ ಪ್ರಕಾರ, ಗಂಗಾ ನದಿಯ ದಡದಿಂದ 500 ಮೀಟರುಗಳ ಒಳಗೆ ಕುರಿಮಾಂಸ ಅಥವಾ ಕೋಳಿಮಾಂಸದ ಅಂಗಡಿಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ.

15.03.2016 ರಂದು, ಅರ್ಜಿದಾರರು, ನೋಟಿಸ್‌ ವಿರುದ್ಧ ನೀಡಿದ ಅರ್ಜಿಯನ್ನು ಇತ್ಯರ್ಥ ಪಡಿಸಿದ ಜಿಲ್ಲಾಧಿಕಾರಿಗಳು ನಿರಾಕ್ಷೇಪಣಾ ಪತ್ರಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದರು.

ತಾವು ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಜಿಲ್ಲಾಧಿಕಾರಿ ತಿರಸ್ಕರಿಸಿದ್ದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ವಾದಿಸಿ ಅರ್ಜಿದಾರರು ಹೈಕೋರ್ಟಿನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು.

ತಮ್ಮ ಮನವಿಯನ್ನು ತಿರಸ್ಕರಿಸಲು ಏಕೈಕ ಕಾರಣವೆಂದರೆ ತನ್ನ ಅಂಗಡಿಯು ಗಂಗಾ ನದಿಯಿಂದ 500 ಮೀಟರ್ ವ್ಯಾಪ್ತಿಯ ಒಳಗಿದೆ ಎಂಬುದಾಗಿದೆ. ಎಫ್‌ಎಸ್‌ಎಸ್ ಕಾಯಿದೆಯನ್ನು ಅಂಗೀಕರಿಸಿದ ನಂತರ, ಜಿಲ್ಲಾ ಪಂಚಾಯತ್‌ನ ಕಾರ್ಯವ್ಯಾಪ್ತಿಯು ಸ್ಥಗಿತಗೊಂಡಿದೆ ಮತ್ತು ಎಫ್‌ಎಸ್‌ಎಸ್ ಕಾಯಿದೆಯಡಿಯಲ್ಲಿ ಗೊತ್ತುಪಡಿಸಿದ ಪ್ರಾಧಿಕಾರಕ್ಕೆ ಮಾತ್ರ ಪರವಾನಗಿ ನೀಡುವ ಅಥವಾ ತಿರಸ್ಕರಿಸುವ ಅಧಿಕಾರವಿದೆ ಎಂದು ಅರ್ಜಿದಾರರು ತಮ್ಮ ರಿಟ್‌ ಅರ್ಜಿಯಲ್ಲಿ ವಾದಿಸಿದ್ದರು. ಆದ್ದರಿಂದ ಜಿಲ್ಲಾ ಪಂಚಾಯತ್‌ ರೂಪಿಸಿದ ಉಪನಿಯಮಾವಳಿಯನ್ನು ರದ್ದು ಪಡಿಸಬೇಕು ಎಂದು ಅವರು ಹೈಕೋರ್ಟನ್ನು ಕೋರಿದ್ದರು.

ಅರ್ಜಿದಾರರು ನಿರ್ದಿಷ್ಟ ಸ್ಥಳದಲ್ಲಿ ಅಂಗಡಿ ನಡೆಸಲು ನಿಯೋಜಿತ ಪ್ರಾಧಿಕಾರದಿಂದ ಪರವಾನಗಿ ಪಡೆದಿದ್ದಾರೆ, ಆದರೆ ಪರವಾನಗಿ ಪಡೆದ ನಂತರ ಅವರು ತಮ್ಮ ಅಂಗಡಿಯನ್ನು ಗಂಗಾ ದಡದಿಂದ 500 ಮೀಟರ್ ವ್ಯಾಪ್ತಿಯೊಳಗಿನ ಸ್ಥಳಕ್ಕೆ ಸ್ಥಳಾಂತರಿಸಿದರು ಎಂದು ರಾಜ್ಯದ ಪರ ವಕೀಲರು ವಾದಿಸಿದರು.

ಅರ್ಜಿದಾರರಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡದಿರಲು ಇದು ಕಾರಣವಾಗಿದೆ. ಆದ್ದರಿಂದ ಜಿಲ್ಲಾ ಮ್ಯಾಜಿಸ್ಟ್ರೇಟ್ ನೀಡಿದ ಆದೇಶವು ಯಾವುದೇ ದೌರ್ಬಲ್ಯ ಅಥವಾ ವಿಕೃತತೆಯನ್ನು ಹೊಂದಿಲ್ಲ ಮತ್ತು ಇದರಲ್ಲಿ ಯಾವುದೇ ಹಸ್ತಕ್ಷೇಪದ ಅಗತ್ಯವಿಲ್ಲ ಎಂದು ಪ್ರತಿವಾದಿಗಳು ವಾದಿಸಿದರು.

ಉತ್ತರಾಖಂಡ ಪಂಚಾಯತ್ ರಾಜ್ ಕಾಯಿದೆ, 2016 ರ ಸೆಕ್ಷನ್ 106 (1) ರ ಪ್ರಕಾರ, ಜಿಲ್ಲಾ ಪಂಚಾಯತ್‌ಗಳು ಉಪ-ಕಾನೂನುಗಳನ್ನು (ಉಪನಿಯಮಾವಳಿ/ ಬೈಲಾ) ರಚಿಸುವ ಅಧಿಕಾರವನ್ನು ಹೊಂದಿವೆ. ಅಲ್ಲದೆ ಭಾರತೀಯ ಸಂವಿಧಾನದ 243 ನೇ ವಿಧಿಯು (ಭಾಗ IX) ಗ್ರಾಮ ಸಭೆ ಮತ್ತು ಗ್ರಾಮ ಪಂಚಾಯತ್ ರಚನೆಗೆ ಅವಕಾಶ ಒದಗಿಸುತ್ತದೆ. ವಿಧಿ 243 ಜಿ ಪಂಚಾಯತ್‌ಗಳಿಗೆ ಅಧಿಕಾರಗಳು, ಅಧಿಕಾರ ಮತ್ತು ಜವಾಬ್ದಾರಿಗಳನ್ನು ಒದಗಿಸುತ್ತದೆ. ವಿಧಿ 243 ಜಿ, ರಾಜ್ಯದ ಶಾಸಕಾಂಗವು ಕಾನೂನಿನ ಮೂಲಕ ಪಂಚಾಯತ್‌ಗಳಿಗೆ ಸ್ವಯಂ-ಸರ್ಕಾರದ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಅಧಿಕಾರ ಮತ್ತು ಅಧಿಕಾರವನ್ನು ನೀಡುತ್ತದೆ. ಭಾರತದ ಸಂವಿಧಾನದ ಹನ್ನೊಂದನೇ ಶೆಡ್ಯೂಲಿನ ೪ನೇ ನಿಬಂಧನೆಯು ಪಶುಸಂಗೋಪನೆ, ಹೈನುಗಾರಿಕೆ ಮತ್ತು ಕೋಳಿ ಸಾಕಣೆ ಸಂಬಂಧಿತ ಅಧಿಕಾರಗಳನ್ನು ಹಾಗೂ 22ನೇ ನಿಬಂಧನೆಯು ಮಾರುಕಟ್ಟೆಗಳು ಮತ್ತು ಮೇಳಗಳನಗನು ನಡೆಸುವ ಅಧಿಕಾರಗಳನ್ನು ಪಂಚಾಯತ್‌ ಗಳಿಗೆ ಒದಗಿಸುತ್ತದೆ ಎಂದೂ ಪ್ರತಿವಾದಿಗಳು ಹೇಳಿದ್ದನ್ನು ಹೈಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿತು.

ಈ ನಿಬಂಧನೆಗಳು ಜಿಲ್ಲಾ ಪಂಚಾಯತ್‌ಗಳನ್ನು ಸಾರ್ವಭೌಮ ಪ್ರಾಧಿಕಾರವೆಂದು ಗುರುತಿಸುತ್ತದೆ, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಯೋಜನೆ ಮಾಡುವ ಅಧಿಕಾರವನ್ನು ಅವು ಹೊಂದಿದ್ದು, ಹನ್ನೊಂದನೇ ಶೆಡ್ಯೂಲ್‌ನಲ್ಲಿ ಪಟ್ಟಿ ಮಾಡಲಾದ ವಿಷಯಗಳಿಗೆ ಸಂಬಂಧಿಸಿದಂತೆ ಅಧಿಕಾರಗಳನ್ನು ಅವುಗಳಿಗೆ ವಹಿಸಿಕೊಡಬಹುದು. ಹೀಗಾಗಿ, ಮಾರುಕಟ್ಟೆಗಳು, ಜಾತ್ರೆಗಳು, ಪಶುಸಂಗೋಪನೆ, ಹೈನುಗಾರಿಕೆ ಮತ್ತು ಕೋಳಿಗಳಿಗೆ ಸಂಬಂಧಿಸಿದಂತೆ, ಜಿಲ್ಲಾ ಪಂಚಾಯತ್, ಸ್ವಯಂ ಆಡಳಿತದ ಸಂಸ್ಥೆಯಾಗಿದೆ ಎಂಬ ಪ್ರತಿವಾದಿಗಳ ವಾದವನ್ನು ಹೈಕೋರ್ಟ್‌ ಪುರಸ್ಕರಿಸಿತು.

FSS ಕಾಯಿದೆಯನ್ನು ಅಂಗೀಕರಿಸಿದ ನಂತರಆಹಾರ ಪದಾರ್ಥಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್‌ನ ಅಧಿಕಾರವು ಸ್ಥಗಿತಗೊಂಡಿದೆ ಎಂಬ ಅರ್ಜಿದಾರರ ವಾದವು ತಪ್ಪು.  ಜಿಲ್ಲಾ ಪಂಚಾಯತ್‌ಗಳಿಗೆ ಸ್ವ-ಸರ್ಕಾರದ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಲು ಅಧಿಕಾರವನ್ನು ನೀಡಲಾಗಿರುವುದರಿಂದಜಿಲ್ಲಾ ಪಂಚಾಯತ್ ಮಾಡಿದ ನಿಬಂಧನೆಗಳೊಂದಿಗೆ ಎಫ್‌ಎಸ್‌ಎಸ್ ಕಾಯಿದೆಯ ನಿಬಂಧನೆಗಳು ಹೊಂದಿಕೆಯಾಗಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಅರ್ಜಿದಾರರ ರಿಟ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಪ್ರಸ್ತುತ ಪ್ರಕರಣದಲ್ಲಿ ಜಿಲ್ಲಾ ಪಂಚಾಯತ್ ಅಥವಾ ಜಿಲ್ಲಾಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯುವುದು ಕಡ್ಡಾಯ ಎಂದು ಅಭಿಪ್ರಾಯಪಟ್ಟಿತು.

ನ್ಯಾಯಾಲಯವು ಉತ್ತರಾಖಂಡ ರಾಜ್ಯದ ವಿಶೇಷ ಸ್ಥಾನಮಾನ ಮತ್ತು ಉತ್ತರಕಾಶಿ ಜಿಲ್ಲೆಯಿಂದ ಹುಟ್ಟಿಬರುವ ಗಂಗಾ ನದಿ ಮತ್ತು ಉತ್ತರಾಖಂಡದ ಬಹುಪಾಲು ಜನಸಂಖ್ಯೆಗೆ ಗಂಗಾ ನದಿಯೊಂದಿಗೆ ಅಂಟಿಕೊಂಡಿರುವ ಪಾವಿತ್ರ್ಯತೆಯ ಭಾವನೆಯನ್ನು ಗಮನದಲ್ಲಿಟ್ಟುಕೊಂಡು, ಗಂಗಾ ನದಿಯಿಂದ 500 ಮೀಟರ್‌ಗಳ ಒಳಗೆ ಪ್ರಾಣಿಗಳನ್ನು ಕಡಿಯಲು ಮತ್ತು ಮಾಂಸವನ್ನು ಮಾರಾಟ ಮಾಡಲು ಅನುಮತಿ ನೀಡದಿರುವ ಜಿಲ್ಲಾ ಪಂಚಾಯತ್ ಉಪ ನಿಯಮಾವಳಿ ರಚಿಸಿದೆ. ಇದು ಭಾಗ IX ರಲ್ಲಿ ಕಲ್ಪಿಸಿದಂತೆ ಭಾರತದ ಸಂವಿಧಾನದ ಯೋಜನೆಗೆ ಅನುಗುಣವಾಗಿದೆ ಎಂದು ಹೈಕೋರ್ಟ್‌ ಹೇಳಿತು.

ಪ್ರಕರಣ: ನಾವೇದ್ ಖುರೇಷಿ ವಿರುದ್ಧ ಉತ್ತರಾಖಂಡ್ ರಾಜ್ಯ ಮತ್ತು ಇತರರು

No comments:

Advertisement