My Blog List

Sunday, August 21, 2022

ಗುತ್ತಿಗೆದಾರರನ್ನು ಜೀವನಪರ್ಯಂತ ಕಪ್ಪುಪಟ್ಟಿಗೆ ಸೇರಿಸುವಂತಿಲ್ಲ: ಸುಪ್ರೀಂಕೋರ್ಟ್

 ಗುತ್ತಿಗೆದಾರರನ್ನು ಜೀವನಪರ್ಯಂತ ಕಪ್ಪುಪಟ್ಟಿಗೆ ಸೇರಿಸುವಂತಿಲ್ಲ: ಸುಪ್ರೀಂ 

ನವದೆಹಲಿ: ಗುತ್ತಿಗೆದಾರರನ್ನು ಜೀವನಪರ್ಯಂತ ಕಪ್ಪುಪಟ್ಟಿಗೆ ಸೇರಿಸುವಂತಿಲ್ಲ ಎಂದು ೨೦೨೨ ಆಗಸ್ಟ್‌ ೧೬ರಂದು ನೀಡಿದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

"ಒಬ್ಬ ವ್ಯಕ್ತಿಯನ್ನು ಜೀವನಪರ್ಯಂತ ಕಪ್ಪುಪಟ್ಟಿಗೆ ಸೇರಿಸಲಾಗದು. ಅವಧಿಯನ್ನು ನಿರ್ದಿಷ್ಟಪಡಿಸದೆ ಕಪ್ಪುಪಟ್ಟಿಗೆ ಸೇರಿಸುವ ಆದೇಶವನ್ನು ಉಳಿಸಿಕೊಳ್ಳಲಾಗದು" ಎಂದು ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠವು ಹೇಳಿತು.

ಕೆಲವು ನಿರ್ಮಾಣ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ಗುತ್ತಿಗೆದಾರರು ಸರ್ಕಾರಿ ಅಧಿಕಾರಿಗಳ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾರೆ ಎಂಬ ಆರೋಪದ ಮೇಲೆ ಕಪ್ಪು ಪಟ್ಟಿಗೆ ಆದೇಶವನ್ನು ನೀಡಲಾಗಿತ್ತು. 2013 ಫೆಬ್ರವರಿ 7ರಂದು ಕಪ್ಪು ಪಟ್ಟಿಗೆ ಸೇರಿಸಲು ಆದೇಶವನ್ನು ನೀಡಲಾಗಿತ್ತು. ಆದರೆ, ಆದೇಶದಲ್ಲಿ ಕಪ್ಪು ಪಟ್ಟಿಯ ಅವಧಿಯನ್ನು ಉಲ್ಲೇಖಿಸಲಾಗಿಲ್ಲ ಎಂಬುದನ್ನು ಪೀಠವು ಗಮನಿಸಿತು.

ಗುತ್ತಿಗೆದಾರರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರೂ ಪರಿಹಾರ ಸಿಕ್ಕಿಲ್ಲ. ಹೀಗಾಗಿ ಗುತ್ತಿಗೆದಾರರು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್‌ ಪ್ರಕರಣದ ವಿಚಾರಣೆ ನಡೆಸಿತು.

ಮೇಲ್ಮನವಿಯಲ್ಲಿ ಅವಧಿಯನ್ನು ನಿರ್ದಿಷ್ಟಪಡಿಸದ ಮಟ್ಟಿಗೆ ಕಪ್ಪು ಪಟ್ಟಿಯ ಆದೇಶದಲ್ಲಿ  ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿತು.

"2013 ರಲ್ಲಿ ಆದೇಶವನ್ನು ನೀಡಲಾಗಿದೆ ಮತ್ತು ಅದರ ವಿರುದ್ಧ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು 05.09.2018 ರಂದು ಹೈಕೋರ್ಟ್‌ ವಜಾಗೊಳಿಸಿದೆ. ಆದ್ದರಿಂದ, ಆದೇಶ ನೀಡಿದ ದಿನಾಂಕದಿಂದ  ಐದು ವರ್ಷಗಳ ಅವಧಿಗೆ, ಮೇಲ್ಮನವಿದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಆದೇಶವನ್ನು ಜಾರಿಗೊಳಿಸಲು ಸಂವಿಧಾನದ 142 ನೇ ವಿಧಿಯ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವುದು ಸೂಕ್ತವೆಂದು ನಾವು ಭಾವಿಸುತ್ತೇವೆ" ಎಂದು ನ್ಯಾಯಾಲಯವು ಹೇಳಿತು.

ಈ ಕಪ್ಪುಪಟ್ಟಿಯು ಮೇಲ್ಮನವಿದಾರರನ್ನು ಕಾನೂನಿನ ಪ್ರಕಾರ ಹೊಸದಾಗಿ ಸೇರ್ಪಡೆಗೊಳಿಸುವುದನ್ನು ತಡೆಯುವುದಿಲ್ಲ, ಆದ್ದರಿಂದ ರಾಜ್ಯವು ಜಾಹೀರಾತು ನೀಡುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸಲು ಅಡ್ಡಿ ಇಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಪ್ರಕರಣ:: ಮೆಷರ್ಸ್‌  ಚೌಹಾಣ್ ಬಿಲ್ಡರ್ಸ್ ರಾಯ್‌ ಬರೇಲಿ ವಿರುದ್ಧ ಉತ್ತರ ಪ್ರದೇಶ ರಾಜ್ಯ

No comments:

Advertisement