Saturday, May 24, 2025

ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದಾಯ ಹೇಳಿ!

 ಇನ್ನು ನೀರಿನ ಬೆಂಕಿಯಿಂದಲೇ ಅಡುಗೆ ಮಾಡಿ, ಎಲ್‌ಪಿಜಿಗೆ ವಿದಾಯ ಹೇಳಿ!

ನಾಲ್ಕೈದು ದಿನಗಳ ಹಿಂದಿನ ಮಾತು. ಶ್ರೀ ಶ್ರೀ ರವಿಶಂಕರ ಗುರೂಜಿ ಅವರ ಸಮಾವೇಶವೊಂದರಲ್ಲಿ ಮಹಾರಾಷ್ಟ್ರದ ಸಚಿವ, ಕೋರೆಗಾಂವ್‌ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೃಷ್ಣ ಕಣಿವೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಮಹೇಶ ದಾದಾ ಶಿಂಧೆ ತಮ್ಮ ಒಂದು ಹೊಸ ಆವಿಷ್ಕಾರದ ಪ್ರಕಟಣೆಯನ್ನು ಮಾಡಿದರು.

ಈ ಆವಿಷ್ಕಾರ ಭಾರತದ ಆರ್ಥಿಕ ಸ್ಥಿತಿಯನ್ನು ಉತ್ತುಂಗಕ್ಕೆ ಒಯ್ಯುವುದರ ಜೊತೆಗೆ ಜನತೆ ವಿದ್ಯುತ್‌ ಅಥವಾ ಅಡುಗೆ ಅನಿಲ ಬಳಸದೆಯೇ ಶುದ್ಧ ಅಡುಗೆ ಮಾಡಲು ಸಾಧ್ಯವಾಗುವಂತೆ ಮಾಡಲಿದೆ ಎಂದು ಶಿಂಧೆ ಹೇಳಿದರು.

ಏನಿದು ಈ ಅವಿಷ್ಕಾರ?


ಇದೊಂದು ಸಣ್ಣ ಉಪಕರಣ. ಈ ಉಪಕರಣವನ್ನು ಸೌರವಿದ್ಯುತ್ತಿನಿಂದ ಚಲಾಯಿಸಬಹುದು. ಇದಕ್ಕೆ ಜೋಡಿಸಿದ ಒಂದು ಜಾಡಿಯಲ್ಲಿ ಸುಮಾರು ಅರ್ಧ ಲೀಟರಿನಷ್ಟು ನೀರು ತುಂಬಿ ಇಡಲಾಗಿದೆ. ಯಂತ್ರದ ಗುಂಡಿ ಅದುಮಿದರೆ ಈ ನೀರಿನಿಂದ ಪೈಪಿನ ಮೂಲಕ ನೈಸರ್ಗಿಕ ಅನಿಲವಾದ ಜಲಜನಕ ಬರುತ್ತದೆ. ಆ ಪೈಪನ್ನು ಒಂದು ಅಡುಗೆ ತಯಾರಿಸುವ ಗ್ಯಾಸ್‌ ಸ್ಟವ್‌ ಒಂದಕ್ಕೆ ಜೋಡಿಸಲಾಗಿದೆ.

ಈ ಸ್ವವ್‌ಗೆ ನೈಸರ್ಗಿಕ ಅನಿಲ ಬರುತ್ತಿದ್ದಂತೆ ನೀವು ಲೈಟರ್‌ ಮೂಲಕ ಸ್ವವ್‌ ಉರಿಸಬಹುದು. ಗ್ಯಾಸ್‌ ಸ್ಟವ್‌ನಲ್ಲಿ ಬರುವಂತಹ ಖಾರವಾದ ನೀಲ ಬೆಂಕಿ ಸ್ಟೌವಿನಲ್ಲಿ ಬರತೊಡಗುತ್ತದೆ. ಗ್ಯಾಸ್‌ ಸ್ಟವಿನಲ್ಲಿ ಹೇಗೆ ಅಡುಗೆ ಮಾಡುವಿರೋ ಅದೇ ರೀತಿ ನೀವು ಈ ಸ್ಟೌವಿನಲ್ಲೂ ಅಡಿಗೆ ಮಾಡಬಹುದು.

ಅಂದರೆ ಇನ್ನು ಮುಂದೆ ನಿಮ್ಮ ಅಡುಗೆ ಮನೆಯಲ್ಲಿ ಅಡುಗೆ ಮಾಡಲು ವಿದ್ಯುತ್‌ ಬೇಕಾಗಿಲ್ಲ, ಅಡುಗೆ ಅನಿಲದ ಸಿಲಿಂಡರೂ ಬೇಕಾಗಿಲ್ಲ. ಕೇವಲ ಒಂದರ್ಧ ಲೀಟರ್‌ ನೀರಿದ್ದರೆ ಸಾಕು ಸುಮಾರು ಆರು ತಿಂಗಳ ಕಾಲ ನೀವು ನಿರುಮ್ಮಳರಾಗಿ ಇರಬಹುದು.

ಇದನ್ನು ಬಳಸುವುದರಿಂದ ಇನ್ನೂ ಒಂದು ಪ್ರಯೋಜನವಿದೆ. ಈ ಯಂತ್ರವು ನೀರಿನಿಂದ ಜಲಜನಕವನ್ನು ಬಿಡುಗಡೆ ಮಾಡಿ ಸ್ಟವ್‌ಗೆ ಒದಗಿಸುವುದರ ಜೊತೆಗೇ ನೀರಿನಲ್ಲಿನ ಆಮ್ಮಜನಕವನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

ಎಲ್‌ ಪಿಜಿ ಅನಿಲ ಬಳಸುವುದರಿಂದ ಮಿಥೇನ್‌ ಉರಿದು ಅಂಗಾರಾಮ್ಲ ಅಂದರೆ ಇಂಗಾಲದ ಡೈ ಆಕ್ಸೈಡ್‌ ಬಿಡುಗಡೆಯಾಗುವುದರಿಂದ ವಾಯುಮಾಲಿನ್ಯ ಉಂಟಾಗುತ್ತದೆ. ಆದರೆ ಹೊಸ ಆವಿಷ್ಕಾರದಲ್ಲಿ ನೀರಿನಿಂದ ಬಿಡುಗಡೆಯಾಗುವ ಜಲಜನಕ ಸ್ಟೌವಿನಲ್ಲಿ ಉರಿಯುವುದರಿಂದ ವಾಯುಮಾಲಿನ್ಯ ಉಂಟಾಗುವುದಿಲ್ಲ. ಒಂದೇ ಪ್ರಕ್ರಿಯೆಯಲ್ಲಿ ಅಡುಗೆ ಇಂಧನ ವೆಚ್ಚ ಸಂಪೂರ್ಣ ಉಳಿತಾಯ ಮತ್ತು ಜೀವಿಗಳ ಉಸಿರಾಟಕ್ಕೆ ಅತ್ಯಗತ್ಯವಾದ ಆಮ್ಲಜನಕ ವಾತಾವರಣಕ್ಕೆ ಸೇರ್ಪಡೆ.

ತಮ್ಮ ಸಹಚರರಾದ ಆಟೋ ಕ್ಲೀನ್‌ ಸಂಸ್ಥೆಯ ವಿಶಾಲ್‌ ಮತ್ತು ಅವರ ತಂಡ ಮಾಡಿದ ಈ ಅವಿಷ್ಕಾರದ ಬಗ್ಗೆ ವಿವರಿಸಿದ ಮಹೇಶ ದಾದಾ ಶಿಂಧೆ ಅವರು ದಶಕಗಳ ಹಿಂದೆ ತಾವು ಇಥೆನಾಲ್‌ ಬಳಸಿ ವಾಹನಗಳನ್ನು ಓಡಿಸಬಹುದು ಎಂಬುದನ್ನು ಬೆಳಕಿಗೆ ತಂದಿದ್ದುದನ್ನು ನೆನಪಿಸಿದರು. ಈಗ ದೇಶಾದ್ಯಂತ ಪೆಟ್ರೋಲ್‌ ಮತ್ತು ಡೀಸೆಲ್‌ ಜೊತೆಗೆ ಇದೇ ಇಥೆನಾಲ್‌ ಬಳಸಿ ವಾಹನಗಳನ್ನು ಓಡಿಸಲಾಗುತ್ತದೆ.

ಈಗ ರೂಪಿಸಿರುವ ಯಂತ್ರವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಿ ಹಳ್ಳಿ ಹಳ್ಳಿಗಳಲ್ಲೂ ಮನೆ ಮನೆಗಳಿಗೂ ತಲುಪಿಸಲಾಗುವುದು. ಇದರಿಂದ ಪರಿಸರ ಮಾಲಿನ್ಯ ನಿವಾರಣೆಗೂ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ ಎಂದರು ಮಹೇಶ ಶಿಂಧೆ.

ಅಂದ ಹಾಗೆ ಈ ಯಂತ್ರ ದುಬಾರಿಯದ್ದೂ ಅಲ್ಲ. ಶ್ರೀ ರವಿ ಶಂಕರ ಗುರೂಜಿ ಅವರು ಹೇಳುವ ಹಾಗೆ ಎರಡು ಮೂರು ಸಾವಿರ ರೂಪಾಯಿಗಳಷ್ಟೆ. ಎರಡ್ಮೂರು ಸಾವಿರ ರೂಪಾಯಿ ವೆಚ್ಚ ಮಾಡುವುದರಿಂದ ಜೀವನ ಪರ್ಯಂತ ಇಂಧನ ವೆಚ್ಚವೇ ಇರುವುದಿಲ್ಲ.

ಇಂತಹುದೊಂದು ಆವಿಷ್ಕಾರ ಸಾಧ್ಯವೇ ಎಂದು ಮೂಗು ಮುರಿಯುವವರು ಇರುವುದು ಸಹಜ. ಆದರೆ ಸುಮಾರು ಆರು ತಿಂಗಳ ಹಿಂದೆ ತಾನು ನೀರಿನಿಂದ ಗ್ಯಾಸ್‌ ಸ್ಟವ್‌ ಉರಿಸಿದ್ದು ಹೇಗೆ ಎಂಬುದನ್ನು ಪ್ರಯೋಗಾಸಕ್ತರೊಬ್ಬರು ಯೂ ಟ್ಯೂಬ್‌ ವಿಡಿಯೋ ಒಂದರಲ್ಲಿ ವಿವರಿಸಿದ್ದರು.

ವಿಡಿಯೋವನ್ನು ಕೆಳಗಿನ ಚಿತ್ರ ಕ್ಲಿಕ್‌ ಮಾಡಿ ಅಥವಾ ಯೂ ಟ್ಯೂಬ್‌ಲಿಂಕ್‌ ಕ್ಲಿಕ್‌ ಮಾಡಿ ನೋಡಬಹುದು.

ಮಹೇಶ ದಾದಾ ಶಿಂಧೆ ಅವರು ಶ್ರೀ ಶ್ರೀ ರವಿ ಶಂಕರ ಗುರೂಜಿ ಅವರ ಮುಂದೆ ಪ್ರದರ್ಶಿಸಿದ್ದು ಇದರ ಪರಿಷ್ಕೃತ ರೂಪ. ಖಂಡಿತವಾಗಿ ಇದು ದೇಶಕ್ಕೆ, ಜನತೆಗೆ ಮಹೋನ್ನತ ಕೊಡುಗೆಯಾಗಬಲ್ಲುದು. 

-ನೆತ್ರಕೆರೆ ಉದಯಶಂಕರ

No comments:

Advertisement