ಒಂದೆರಡಲ್ಲ, ಬರೋಬ್ಬರಿ 4750 ಚದರ ಅಡಿ ವ್ಯಾಪ್ತಿಯ ವಿಸ್ತಾರವಾದ ಅಡಿಪಾಯ. 67 ಅಡಿ ಎತ್ತರದ ಮೂರು ಅಂತಸ್ತುಗಳ ಇಳಿಜಾರು ಛಾವಣಿ. ಛಾವಣಿಗಳಿಗೆ ತಾಮ್ರದ ಹೊದಿಕೆ. 1.20 ಕೋಟಿ ರೂಪಾಯಿ ವೆಚ್ಚದಲ್ಲಿ ಧರ್ಮಸ್ಥಳದಿಂದ ಕೊಡುಗೆಯಾಗಿ ಬಂದ ಮೂರು ಸ್ವರ್ಣ ಲೇಪಿತ ಕಳಸಗಳು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡದೆಂದು ಬಣ್ಣಿಸಲಾದ ವಿಟ್ಲದ ಈ ಪಂಚಲಿಂಗೇಶ್ವರ ದೇವಾಲಯಲ್ಲಿ ಇದೀಗ ಸಡಗರವೇ ಸಡಗರ. ಗ್ರಾಮದ ಪ್ರಮುಖ ರಸ್ತೆಗಳು, ರಥ ಎಳೆಯುವ ಗದ್ದೆ, ದೇವಾಲಯದ ಆವರಣ ಸೇರಿದಂತೆ ಎಲ್ಲ ಕಡೆ ಚಪ್ಪರ, ತಳಿರು ತೋರಣದ ಶೃಂಗಾರ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ತಂಡೋಪತಂಡವಾಗಿ ಸ್ವಯಂ ಸೇವಕರಾಗಿ ಪಂಚಲಿಂಗೇಶ್ವರನ ಸೇವಾ ಕೈಂಕರ್ಯ ನಡೆಸುತ್ತಿರುವ ಜನರ ದಂಡು. ಸಹಸ್ರಾರು ಮಂದಿಗೆ ಪ್ರತಿನಿತ್ಯ ಅನ್ನದಾನ. ದೇವಾಲಯದ ಆವರಣದಲ್ಲೆಲ್ಲಾ ಭಕ್ತಾದಿಗಳಿಂದ ಬಂದ ಲೋಡುಗಟ್ಟಲೆ ಹೊರೆ ಕಾಣಿಕೆಯ ರಾಶಿ.
ಇಡೀ ಗ್ರಾಮ ಈಗ (ಜನವರಿ 9ರಿಂದ 21ರವರೆಗೆ) 13 ದಿನಗಳ ಕಾಲ ಪುನರ್ ನಿರ್ಮಾಣಗೊಂಡ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕೋತ್ಸವ ಸಮಾರಂಭ, ನಂತರ ಜನವರಿ 21ರಿಂದ 29ರವರೆಗೆ 9 ದಿನ ಮರು ಸಮರ್ಪಿತ ದೇಗಲದಲ್ಲಿ `ವಿಟ್ಲಾಯನ' ಎಂದೇ ಖ್ಯಾತಿ ಪಡೆದ ವರ್ಷಾವಧಿ ಜಾತ್ರೆ - ಹೀಗೆ 22 ದಿನಗಳ ಕಾಲ ಮಹಾ ಉತ್ಸವದ ಸಡಗರದಲ್ಲಿ ತೇಲುತ್ತಿದೆ. ಧರ್ಮಸ್ಥಳದ ನಡಾವಳಿಯ ಸಂಭ್ರಮವನ್ನು ನೆನಪಿಗೆ ತರುತ್ತಿದೆ. ಪ್ರತಿನಿತ್ಯ ಸಹಸ್ರಾರು ಮಂದಿಗೆ ಅನ್ನದಾನ, ಧಾರ್ಮಿಕ ವಿಧಿಗಳು, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು, ಯಕ್ಷಗಾನ, ನೃತ್ಯ, ನಾಟಕ ಸಂಗೀತದಲ್ಲಿ ಪ್ರತಿದಿನವೂ ಮಿಂದೇಳುತ್ತಿದ್ದಾರೆ.
ಅತ್ಯಂತ
ಪುರಾತನವಾದ ಈ ಪಂಚಲಿಂಗೇಶ್ವರ
ದೇವಸ್ಥಾನ ಪಾಂಡವ ನಿರ್ಮಿತ
ದೇವಸ್ಥಾನ ಎಂದೇ ಪ್ರತೀತಿ.
ಪಾಂಡವರು
ಅರಗಿನ ಅರಮನೆಯಿಂದ ಪಾರಾದ ಬಳಿಕ
ಕೆಲಕಾಲ ವಾಸವಿದ್ದ ಏಕಚಕ್ರ ನಗರವೇ
ಈಗಿನ ವಿಟ್ಲ ಎಂಬ ನಂಬಿಕೆ ಇದೆ.
ಭೀಮ
ಬಕಾಸುರನನ್ನು ಕೊಂದದ್ದು ಇಲ್ಲಿಯೇ
ಎಂದು ಹೇಳುವ ಜನ ಅದಕ್ಕೆ ಸಾಕ್ಷಿ
ಎಂಬಂತೆ ದೇವಸ್ಥಾನದ ಆವರಣದಲ್ಲೇ
ಕುಂತಿ ಮನೆ,
ದೇವಾಲಯದಲ್ಲಿ
ಕುಂತೀಶ್ವರ ಗುಡಿ,
ಬಕಾಸುರ
ವಾಸವಾಗಿದ್ದನೆನ್ನಲಾದ ಸಮೀಪದ
ಕಳಂಜಿಮಲೆಯ ಬಕಾಸುರ ಗುಹೆ,
ಭೀಮ-
ಬಕಾಸುರ
ಕದನದಲ್ಲಿ ಬಕಾಸುರನ ಅವಯವಗಳಾದ
ತಲೆ,
ಕಣ್ಣು,
ಕೈ,
ಬಾಯಿ
ಹೋಗಿ ಬಿತ್ತೆನ್ನಲಾದ ಜಾಗಗಳಿಗೆ
ತಲೆಂಗಳ,
ಕಣ್ಣೂರು,
ಕೈಯೂರು,
ಬಾಯಾರು
ಎಂದು ಹೆಸರಾದದ್ದು,
ಭೀಮ ಸ್ನಾನ
ಮಾಡಿದ ಕೆರೆ -ನೆತ್ತರಕೆರೆ
ಎಂದು ಹೆಸರಾದ `ದಂತಕತೆ'ಯನ್ನು
ಉಸುರುತ್ತಾರೆ.ಲಭ್ಯ ಮಾಹಿತಿಗಳ ಪ್ರಕಾರ 1436, 1477 ಮತ್ತು 1894ರಲ್ಲಿ ದೇವಳದ ಜೀರ್ಣೋದ್ಧಾರ ನಡೆದಿತ್ತು ಎಂದು ಹೇಳಲಾಗಿದೆ. 1928, 1990ರಲ್ಲೂ ಅಲ್ಪಸ್ವಲ್ಪ ಜೀರ್ಣೋದ್ಧಾರ ನಡೆದಿತ್ತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಗೌರವಾಧ್ಯಕ್ಷತೆಯಲ್ಲಿ ರೂಪುಗೊಂಡ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಪೇಜಾವರದ ವಿಶ್ವೇಶ ತೀರ್ಥ ಶ್ರೀಪಾದರು, ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ಒಡಿಯೂರಿನ ಗುರುದೇವಾನಂದ ಸ್ವಾಮೀಜಿ, ಶ್ರೀ ಧಾಮ ಮಾಣಿಲದ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತಿತರ ಯತಿಗಳ ಮಾರ್ಗದರ್ಶನದಲ್ಲಿ ಮುನ್ನಡೆಯಿತು.
ಜೀರ್ಣೋದ್ಧಾರದ ಸಮಗ್ರ ಯೋಜನೆ 2002ರಲ್ಲಿ ರೂಪುಗೊಂಡು 2007ರವರೆಗೆ ನಿಧಿ ಸಂಗ್ರಹ ನಡೆಯಿತು. ವಿಟ್ಲ ಸೀಮೆಯ 16-17 ಗ್ರಾಮಗಳ ಮನೆ ಮನೆಯಿಂದಲೂ ದೇಣಿಗೆ ಹರಿದು ಬಂತು. ಜೊತೆಗೆ ವಿಟ್ಲದಿಂದ ಹೊರಹೋಗಿ ನೆಲೆಸಿದ ವ್ಯಕ್ತಿಗಳು ಅವರ ಮಿತ್ರರು, ಬಂಧುಗಳ ಮೂಲಕ ವಿಶ್ವಾದ್ಯಂತದಿಂದ ಕಾಣಿಕೆಯ ಪ್ರವಾಹ ಹರಿಯಿತು.2007ರ ಜನವರಿ 27ರಂದು `ಬಾಲಾಲಯ' ಉದ್ಘಾಟನೆ, ನಂದಿ (ಬಸವ) ಮೂಲಕ ಕಳಸವನ್ನು ಕೆಳಕ್ಕೆ ಎಳೆಯುವುದರೊಂದಿಗೆ ಜೀರ್ಣೋದ್ಧಾರ ಕಾರ್ಯಕ್ಕೆ ನಾಂದಿ. ಒಂದೇ ದಿನದಲ್ಲಿ ಸಹಸ್ರಾರು ಭಕ್ತರು ಮೂರು ಅಂತಸ್ತಿನ ಛಾವಣಿಯನ್ನು ಬಿಚ್ಚಿದರು. ಮುಂದಿನ 9 ದಿನದಲ್ಲಿ ಅಲ್ಲಿ ಉಳಿದಿದ್ದುದು ಅಡಿಪಾಯದ ಸ್ಥಳ ಮಾತ್ರ. ಅಂದಿನಿಂದ ಆರಂಭವಾದ ದೇಗುಲ ಪುನರ್ ನಿರ್ಮಾಣದ ಕಾರ್ಯ ನಿರಂತರವಾಗಿ 5 ವರ್ಷಗಳ ಕಾಲ ಮುಂದುವರೆಯಿತು. ಬೃಹದಾಕಾರದ ದೇವಾಲಯದ ಹೊರಗಿನ ಗೋಡೆಯಲ್ಲಿ 421 ಕೆಂಪು ಕಲ್ಲುಗಳ 42 ಸಾಲು, ಒಳಗಿನ ಗೋಡೆಯಲ್ಲಿ 421 ಕೆಂಪು ಕಲ್ಲುಗಳ 52 ಸಾಲು ಹೊರಭಾಗಕ್ಕೆ ಸಂಪೂರ್ಣವಾಗಿ ಶಿಲಾಮಯ ಗೋಡೆ. ಈ ಶಿಲೆಗಳಲ್ಲಿ ಸುಂದರ ಕೆತ್ತನೆ. `ಕೊಡಿಮರ' ಎಂದು ಕರೆಯಲಾಗುವ ಬೃಹತ್ ಧ್ವಜಸ್ಥಂಭವನ್ನು ದೀರ್ಘಕಾಲದ ಬಾಳಿಕೆಗಾಗಿ ಎಳ್ಳೆಣ್ಣೆಯ ತೊಟ್ಟಿಯಲ್ಲಿ ಮುಳಗಿಸಿ ಇಡಲಾಗಿತ್ತು ಇದಕ್ಕೆ ಭಕ್ತಾದಿಗಳೆಲ್ಲರೂ ದೇಣಿಗೆ ಅರ್ಪಿಸಿ ಎಳ್ಳೆಣ್ಣೆ ಎರೆದದ್ದು, ದೇವಾಲಯಕ್ಕೆ ಬಳಸಿದ ಮರಗಳಿಗೆ ಪರ್ಯಾಯವಾಗಿ ಸಹಸ್ರಾರು ಸಸಿಗಳು ವಿಟ್ಲ ಸೀಮೆ ಪರಿಸರಲ್ಲಿ ವಿತರಿಸಿ ನೆಟ್ಟದ್ದು ಸದಾಕಾಲ ನೆನಪಿನಲ್ಲಿ ಉಳಿಯುವ ಘಟನೆಗಳಾದವು.
3) ಬ್ರಹ್ಮಕಲಶ ಸಂಭ್ರಮ.
4) ಹೊರೆ ಕಾಣಿಕೆ.
5) ನಂದಿಯಿಂದ ಕಳಸ ಎಳೆಯಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ. ಹಿಂಭಾಗದಲ್ಲಿ ಹಿಂದಿದ್ದ ದೇವಸ್ಥಾನದ ಹಿಂಭಾಗದ ದೃಶ್ಯ.
.jpg)























