My Blog List

Monday, April 7, 2008

Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'

Wishing healthy and prosperous life to all in the new year on this auspicious day of Ugadi, PARYAYA presents two articles- one on Gou Samrakshane or Cow Protection and another on History of the day (Collections by Nethrakere Udaya Shankara) which Paryaya will try to update everyday. If you feel that some important events could be added please send them Paryaya will try to accommodate it.

ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'

ಎತ್ತರದ ಕಾರ್ಯಕ್ಕೀಗ ಉತ್ತರದ ಲಕ್ಷ್ಯ, ಗೋ ಸಂರಕ್ಷಣೆಯ ಮಹತ್ಕಾರ್ಯಕ್ಕ್ಕೆ ಇರಲಿ ನಿಮ್ಮೆಲ್ಲರ ಸಾಕ್ಷ್ಯ. ಗೋವುಗಳ ಪುರ 'ಗೋ ಪುರ'ವಾಗಲು ಹುಬ್ಬಳ್ಳಿ ಸಜ್ಜಾದರೆ, 'ಪ್ರಪ್ರಥಮ ಗೋ ಅಭಯ ಜಿಲ್ಲೆ' ಎನಿಸಿಕೊಳ್ಳಲು ಸಜ್ಜಾಗುತ್ತಿದೆ ಧಾರವಾಡ. ಈ ಸಂಭ್ರಮವನ್ನು ಕಣ್ತುಂಬ ನೋಡಬೇಕಿದ್ದರೆ ಏಪ್ರಿಲ್ 8, 9ರಂದು ಧಾರವಾಡ ಜಿಲ್ಲೆ, ಹುಬ್ಬಳ್ಳಿಗೆ ದೌಡಾಯಿಸಿ.

ನೆತ್ರಕೆರೆ ಉದಯಶಂಕರ

ಬೆಂಗಳೂರಿನಲ್ಲಿ ಕಳೆದ ನವೆಂಬರ್ ತಿಂಗಳಲ್ಲಿ 'ಕೋಟಿ ನೀರಾಜನ' ಕಾರ್ಯಕ್ರಮ ನಡೆದ ಸಂದರ್ಭದಲ್ಲಿ ಗೋ ಸಂರಕ್ಷಣೆಯನ್ನೇ ತಮ್ಮ ಉಸಿರಾಗಿಸಿಕೊಂಡಿರುವ, ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಗಘವೇಶ್ವರ ಭಾರತೀ ಸ್ವಾಮೀಜಿ ಅವರು ಬೆಂಗಳೂರಿನ ಪತ್ರಕರ್ತರನ್ನು ಭೇಟಿ ಮಾಡಿದ್ದರು.

ಆ ಸಂದರ್ಭದಲ್ಲಿ ಗೋವಿನ ಸಂರಕ್ಷಣೆಗಾಗಿ ಆರಂಭಗೊಂಡಿರುವ ಚಳವಳಿ ಬಗ್ಗೆ ಸ್ವಾಮೀಜಿ ಮತ್ತು ಪತ್ರಕರ್ತರ ಮಧ್ಯೆ ಸಂವಾದ ನಡೆಯಿತು.

ಪತ್ರಕರ್ತೆಯೊಬ್ಬರು ಗುರುಗಳನ್ನು ಪ್ರಶ್ನಿಸಿದರು: 'ಗೋವುಗಳ ಸಾಕಣೆ ಕೂಡಾ ಕಷ್ಟಕರವಾಗಿರುವ ಈ ಸಮಯದಲ್ಲಿ ಗೋವುಗಳ ರಕ್ಷಣೆಗೆ ಕೃಷಿಕರಿಗೆ ಹೆಚ್ಚಿನ ಸಹಾಯ ಮಾಡುವ ಬದಲಿಗೆ ಭಾರೀ ವೆಚ್ಚದಲ್ಲಿ 'ಕೋಟಿ ನೀರಾಜನ'ದಂತಹ ಕಾರ್ಯಕ್ರಮಗಳನ್ನು ಸಂಘಟಿಸುವುದು ಸರಿಯೇ? ಇದರಿಂದ ಏನು ಉಪಯೋಗ?

ಶ್ರೀ ರಾಘವೇಶ್ವರ ಸ್ವಾಮೀಜಿ ಅದಕ್ಕೆ ಸುಂದರವಾದ ಉತ್ತರ ಒಂದನ್ನು ಕೊಟ್ಟರು: 'ಇದು ಮಳೆ ಮತ್ತು ಹೊಳೆ ಇದ್ದ ಹಾಗೆ. ಹೊಳೆ ಎಷ್ಟು ಮುಖ್ಯವೋ ಮಳೆಯೂ ಅಷ್ಟೇ ಮುಖ್ಯ. ಮಳೆ ವ್ಯಾಪಕವಾಗಿ ಸುರಿಯುವಂತಹುದು. ವ್ಯಾಪಕವಾಗಿ ಮಳೆ ಸುರಿಯುತ್ತಿದ್ದಾಗಲೇ ಹೊಳೆ ಮೈದುಂಬಿಕೊಂಡು ಹರಿಯುತ್ತದೆ. ಮಳೆ ಇಲ್ಲದೇ ಇದ್ದರೆ ಹೊಳೆಯೂ ಸೊರಗುತ್ತದೆ'.

ನಮ್ಮ ಕೃಷಿಕರು ಗೋವುಗಳನ್ನು ಸಾಕುವುದು ನಿತ್ಯದ ಕೆಲಸ. ಅದು ಅನುದಿನವೂ ಹರಿಯುವ ಹೊಳೆಯಂತೆ. ಈ ಹೊಳೆ ವರ್ಷಪೂರ್ತಿ ನಳನಳಿಸುತ್ತಾ ತುಂಬಿ ಹರಿಯುತ್ತಿರಬೇಕು. ಆಗಲೇ ಗೋವುಗಳ ಸಂರಕ್ಷಣೆಯ ಕಾರ್ಯಕ್ಕೆ ಒಂದು ಅರ್ಥ.

ಆದರೆ ಇಂದು ಹಲವಾರು ಕಾರಣಗಳಿಂದ ಗೋವುಗಳಿಗೆ ಸಂರಕ್ಷಣೆ ಇಲ್ಲ. ಗೋವುಗಳನ್ನು ಸಾಕುವುದು ಕಷ್ಟವೆಂಬ ಭ್ರಮೆಯೊಳಗೆ ಮುಳುಗಿ ರೈತರು ಅವುಗಳನ್ನು ಕಟುಕರಿಗೆ ಮಾರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೋವಿನ ಮಹತ್ವದ ಬಗ್ಗೆ ವ್ಯಾಪಕ ಜಾಗೃತಿ ಆಗಬೇಕು. ಈ ಕಾರ್ಯ ಎಲ್ಲೆಡೆ ಸುರಿಯುವ ಮಳೆಯಂತೆ.

ಗೋವುಗಳ ಉಪಯುಕ್ತತೆ ಬಗ್ಗೆ ವ್ಯಾಪಕ ಜಾಗೃತಿ ಮೂಡಿದಾಗ ಗೋವಿನ ಸಂರಕ್ಷಣೆ ಸುಲಭವೂ ಕಾರ್ಯಸಾಧ್ಯವೂ ಆಗುತ್ತದೆ.

ಈ ಹಿನ್ನೆಲೆಯಲ್ಲೇ 'ಕೋಟಿ ನೀರಾಜನ' 'ಗೋ ಸಂಧ್ಯಾ' ದಂತಹ ಕಾರ್ಯಕ್ರಮಗಳು ಮಹತ್ವ ಪಡೆದುಕೊಳ್ಳುತ್ತವೆ.

ಹೌದು. ಆಗ 'ಕೋಟಿ ನೀರಾಜನ'ದ ಮೂಲಕ ಬೆಂಗಳೂರು ಇಡೀ ವಿಶ್ವಕ್ಕೆ ಗೋ ಸಂರಕ್ಷಣೆಯ ಸಂದೇಶ ನೀಡಿತ್ತು.

ತಮ್ಮ ಜೀವಮಾನವನ್ನೇ ಗೋ ಸಂರಕ್ಷಣಾ ಕಾರ್ಯಕ್ಕಾಗಿ ಮುಡಿಪಾಟ್ಟಿರುವ ರಾಘವೇಶ್ವರ ಭಾರತೀ ಸ್ವಾಮೀಜಿ ಅಲ್ಲಿಗೆ ಸುಮ್ಮನೇ ಕುಳಿತುಕೊಳ್ಳಲಿಲ್ಲ. ತಮ್ಮ ಅಭಿಯಾನವನ್ನು ಕರ್ನಾಟಕದ ಉತ್ತರಕ್ಕೆ ಹಬ್ಬಿಸಿದರು.

ಅದರ ಪರಿಣಾಮವಾಗಿ ಉತ್ತರ ಕರ್ನಾಟಕದ ಗಂವ್ಹಾರದಲ್ಲಿ ಶಿವಸತ್ರ ಕಾರ್ಯಕ್ರಮ ನಡೆಯಿತು. ಏಳು ದಿನಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಗೋ ಸಂರಕ್ಷಣೆಗಾಗಿ 'ಗೋ ಪರಿವಾರ' ಸ್ಥಾಪನೆಗೊಂಡಿತು.

ಗೋ ಶಾಲೆಗಳ ಸ್ಥಾಪನೆ, ಗೋ ಆಧಾರಿತ ಕೃಷಿಗೆ ಉತ್ತೇಜನ, ಗವ್ಯ ಉತ್ಪನ್ನಗಳ ತಯಾರಿಕಾ ತರಬೇತಿ, ಗೋವುಗಳು ಕಸಾಯಿಖಾನೆಗೆ ಹೋಗುವುದನ್ನು ತಪ್ಪಿಸುವುದು, ದುಡಿದು ಮುದಿಯಾದ ದನಗಳ ನಿವೃತ್ತ ಜೀವನಕ್ಕೆ ಮಾರ್ಗ ಮೊದಲಾದ ಹಲವು ಕಾರ್ಯಕ್ರಮಗಳು ಈ 'ಗೋ ಪರಿವಾರ' ಯೋಜನೆಯಲ್ಲಿ ಅಡಕ.

ಜಿಲ್ಲಾ ಮಟ್ಟದಲ್ಲಿ, ತಾಲ್ಲೂಕು ಮಟ್ಟದಲ್ಲಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗೋ ಪರಿವಾರಗಳು ರೂಪುಗೊಳ್ಳುತ್ತಿದ್ದು, ಪ್ರಥಮ ಹಂತವಾಗಿ ಉತ್ತರ ಕರ್ನಾಟಕದ ಹತ್ತು ಜಿಲ್ಲೆಗಳಲ್ಲಿ ಗೋ ಪರಿವಾರ ಸಂಯೋಜನೆಗೊಂಡಿತು. ಗಂವ್ಹಾರದ ಶಿವಸತ್ರದ ಶಿವನಂದಿ ಕಾರ್ಯಕ್ರಮದಲ್ಲಿ ಗೋ ಪರಿವಾರದ ಸದಸ್ಯರು ಪದಗ್ರಹಣ ಮಾಡಿದರು.

ಭಾರತೀಯ ಗೋಯಾತ್ರೆ, ವಿಶ್ವ ಗೋ ಸಮ್ಮೇಳನ, ಗೋ ಸಂಸದ್, ಕೋಟಿ ನೀರಾಜನದಂತಹ ಕಾರ್ಯಕ್ರಮಗಳ ಸಾಲಿಗೆ ಸೇರ್ಪಡೆಯಾಗುವ ಮೂಲಕ ಶಿವಸತ್ರ- 'ಗೋ ಪರಿವಾರ'ದ ಸ್ಥಾಪನೆ ಗೋತಳಿ ಉಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿತು.

ಮಠದ ಕಾಮದುಘಾ ಯೋಜನೆಯ ಅಂಗಗಳಾದ ಗೋ ಬ್ಯಾಂಕು, ಗೋ ಸಂಜೀವಿನಿಯನ್ನು ರೂಪಿಸಿ, ದನಗಳನ್ನು ಮಾರುವ ಪ್ರವೃತ್ತಿಯನ್ನು ತಪ್ಪಿಸುವುದು, ಗೋಮಯ ಹಾಗೂ ಗೋಮೂತ್ರಗಳ ಡೈರಿಯನ್ನು ಸ್ಥಾಪಿಸಿ, ಗೋವಿನ ಪೂರ್ತಿ ಜೀವಿತಾವಧಿಯ ಪೂರ್ಣಲಾಭ ರೈತನಿಗೆ ತಲುಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಯಿತು.

ಮಳೆ ಒಂದೇ ಸಲಕ್ಕೆ ಬಂದು ನಿಂತು ಹೋಗುವುದಿಲ್ಲ. ಕಾಲ, ಕಾಲಕ್ಕೆ ಸುರಿದು ತನ್ನ ಅಸ್ತಿತ್ವವನ್ನು ಮತ್ತೆ ಮತ್ತೆ ತೋರಿಸುತ್ತದೆ!

ಹಾಗೆಯೇ ಗೋ ಸಂರಕ್ಷಣೆಯ 'ಕಾಮದುಘಾ' ಅಭಿಯಾನ ಕೂಡಾ.

ಹೊಸನಗರ ವಿಶ್ವ ಗೋ ಸಮ್ಮೇಳನ, ಬೆಂಗಳೂರಿನ ಗೋ ಸಂಧ್ಯಾ- ಕೋಟಿ ನೀರಾಜನ, ಗಂವ್ಹಾರದ ಶಿವಸತ್ರದ ಬಳಿಕ ಧಾರವಾಡ ಜಿಲ್ಲೆಯಲ್ಲಿ ಗೋ ಸಂರಕ್ಷಣೆಯ ಚಳವಳಿ 'ದೀಪ ಗೋಪುರ' ರೂಪದೊಂದಿಗೆ ಅವತರಿಸಿತು.

2008ರ ಮಾರ್ಚ್ 12ರಂದು ಈ ಕಾರ್ಯಕ್ರಮದ ಅಂಗವಾಗಿ ಹುಬ್ಬಳ್ಳಿಯಲ್ಲಿ ರಾಘವೇಶ್ವರ ಸ್ವಾಮೀಜಿ 'ಪುಣ್ಯಕೋಟಿ' ರಥಯಾತ್ರೆಗೆ ಚಾಲನೆ ನೀಡಿದರು. ಶ್ವೇತ ವರ್ಣದ ಸವತ್ಸ ಗೋವಿನ ಮೂರ್ತಿ ಶ್ರೀನಿವಾಸ ದೇಶಪಾಂಡೆ ಅವರ ಮನೆಯಿಂದ ಸಾಂಪ್ರದಾಯಿಕ ಪೂಜೆ ಬಳಿಕ ಹೊರಟು ಭವ್ಯ ಮೆರವಣಿಗೆಯೊಂದಿಗೆ ಮೂರು ಸಾವಿರ ಮಠವನ್ನು ಪ್ರವೇಶಿಸಿತು. ನಂತರ ಧಾರವಾಡದ ಜಿಲ್ಲೆಯ ತಾಲೂಕುಗಳಾದ ಧಾರವಾಡ ತಾಲ್ಲೂಕು, ಕಲಘಟಗಿ ತಾಲ್ಲೂಕು, ಕುಂದಗೋಳ ತಾಲ್ಲೂಕು, ನವಲಗುಂದ ತಾಲ್ಲೂಕು, ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕುಗಳಲ್ಲಿ ಸಂಚರಿಸಿ ಇದೀಗ ಹುಬ್ಬಳ್ಳಿ, ಧಾರವಾಡ ನಗರಗಳಲ್ಲಿ ಸಂಚರಿಸುತ್ತಿದೆ.

ಏಪ್ರಿಲ್ 7, 8ರಂದು ಧಾರವಾಡ ಜಿಲ್ಲೆಯ ಮನೆ ಮನೆಗಳಲ್ಲಿ ಗಾಯನ, ನೃತ್ಯ, ದೀಪೋತ್ಸವಗಳೊಂದಿಗೆ ಗೋವಿಗೆ ಆರತಿ ನಡೆಯುತ್ತಿದೆ.

ಇವೆಲ್ಲದರ ಉದ್ದೇಶ: ಅದೇ ಪುಣ್ಯಕೋಟಿಯ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಸಂಬೋಧನೆ ಬಗ್ಗೆ ಇನ್ನಷ್ಟು ವ್ಯಾಪಕ ಜಾಗೃತಿ ಮೂಡಿಸುವುದು.

ಈ ಕಾರ್ಯಕ್ರಮದ ಕೊನೆಯೊಂದಿಗೆ 'ಧಾರವಾಡ ಜಿಲ್ಲೆ' ವಿಶ್ವದ ಭೂಪಟದಲ್ಲಿ 'ವಿಶ್ವದ ಪ್ರಪ್ರಥಮ ಗೋ ಸುರಕ್ಷಾ ಜಿಲ್ಲೆ' ಎಂಬ ಅಭಿದಾನ ಪಡೆಯುವುದರೊಂದಿಗೆ, 'ಹುಬ್ಬಳ್ಳಿಯು 'ಗೋ ಪುರ'ವಾಗಿಯೂ ಪರಿವರ್ತನೆಗೊಳ್ಳುವುದು. ರಾಷ್ಟ್ರದ 600 ಜಿಲ್ಲೆಗಳ ಪೈಕಿ ಮೊತ್ತ ಮೊದಲ 'ಗೋ ಸುರಕ್ಷಾ ಜಿಲ್ಲೆ' ಎಂಬ ಹೆಗ್ಗಳಿಕೆ ಧಾರವಾಡ ಜಿಲ್ಲೆಯ ಕೀರ್ತಿ ಕಿರೀಟಕ್ಕೆ ಹೊಸ ಗರಿಯಾಗುವುದು.

ಕರುನಾಡ ಮೂಗುತಿ, ರಾಜ್ಯದ ಗಂಡುಮೆಟ್ಟಿನ ನೆಲ ಎಂಬ ಹೆಸರಿಗೆ ಪಾತ್ರವಾಗಿರುವ ಹುಬ್ಬಳ್ಳಿ ಈ ಮಹೋನ್ನತ ಕಾರ್ಯಕ್ಕೆ ಇದೀಗ ಸಜ್ಜಾಗುತ್ತಿದೆ. `ದೀಪ ಗೋಪುರ'-ವಿಶ್ವ ಜನನಿ ಗೋ ಮಾತೆಯ ಅನನ್ಯ ಆರಾಧನೆಯ ಅತ್ಯಪೂರ್ವ ಕ್ಷಣಗಳಿಗಾಗಿ ನಿಮಿಷಗಳ ಲೆಕ್ಕ ಹಾಕುತ್ತಿದೆ.

ಹುಬ್ಬಳ್ಳಿಯಲ್ಲಿ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಪರಿಕಲ್ಪನೆ ಜೊತೆಗೆ 'ದೀಪ ಗೋಪುರ' ಕಾರ್ಯಕ್ರಮಕ್ಕೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರ ಮಾರ್ಗದರ್ಶನವೂ ಸೇರ್ಪಡೆಯಾಗಿದೆ.

ಈ ದೀಪಗಳ ಹಬ್ಬ, ಏಪ್ರಿಲ್ 9ರಂದು ರಾಘವೇಶ್ವರ ಭಾರತೀ ಸ್ವಾಮೀಜಿಯವರ ಸಂನ್ಯಾಸ ಸ್ವೀಕಾರದ ಮಂಗಲ ದಿನದಂದೇ ನಡೆಯುತ್ತಿದೆ. ವಾಣಿಜ್ಯ ನಗರಿ ಎಂದೇ ಹೆಸರು ಪಡೆದಿರುವ ಹುಬ್ಬಳ್ಳಿಯಲ್ಲಿ ನಡೆಯುವ ಈ ಹಬ್ಬ ಜನ ಮಾನಸದಲ್ಲಿ ಕವಿದಿರಬಹುದಾದ ಗೋವಿನ ಬಗೆಗಿನ ವಿಸ್ಮೃತಿಯನ್ನು ಅಳಿಸಿಹಾಕಿ ಜಾಗೃತಿಯ ಹೊಂಬೆಳಕನ್ನು ಹೊಮ್ಮಿಸುವುದು.

ರಾಜಧಾನಿ ಬೆಂಗಳೂರಿನಲ್ಲಿ ಸಂಪನ್ನಗೊಂಡ 'ಕೋಟಿ ನೀರಾಜನ'ದಲ್ಲಿ ಲಕ್ಷೊಪಲಕ್ಷ ಮಾತೆಯರು ಗೋ ಮಾತೆಗೆ ಸೇಸೆಯಿಟ್ಟು ಆರತಿ ಬೆಳಗಿ ಧನ್ಯರಾಗಿದ್ದರು. ಇದೀಗ ಹುಬ್ಬಳ್ಳಿಯ ಸರದಿ. ಮಹಾ ಮಾತೆಯೆದುರು ಮಗುವಾಗಿ ಕೃತಜ್ಞತೆಯ ಕುಸುಮಾರ್ಪಣೆಗೆ ಸುಮಾರು 20,000ಕ್ಕೂ ಹೆಚ್ಚು ಮಾತೆಯರು ಸಜ್ಞಾಗಿದ್ದಾರೆ.

ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹಾಗೂ ಶ್ರೀ ಗುರುಸಿದ್ಧರಾಜಯೋಗಿಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ 2008ರ ಏಪ್ರಿಲ್ 7ರ ಗೋಧೂಳಿ ಲಗ್ನದಲ್ಲಿ ಗೋ ಉತ್ಸವ ನಡೆಯಲಿದೆ. ಧಾರವಾಡ ಜಿಲ್ಲೆಯ ಎಲ್ಲ ಕೇರಿ, ಮೊಹಲ್ಲ, ಗ್ರಾಮಗಳಲ್ಲಿ ಗೋವಿಗೆ ಸಾಮೂಹಿಕ ನೀರಾಜನ, ಗೋ ನೃತ್ಯ, ಗೋಗಾಯನ... ಗೋ ಉತ್ಸವದ ಸಂಭ್ರಮ ಮೈದಳೆಯಲಿದೆ. ಧಾರವಾಡ - ಹುಬ್ಬಳ್ಳಿ ನಗರದಲ್ಲಿ ದೀಪಾಲಂಕಾರ ಮನಸೂರೆಗೊಳ್ಳಲಿದೆ.

10ರಿಂದ 15 ಕೇಂದ್ರಗಳಿಗೆ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಭೇಟಿ ನೀಡಲಿದ್ದಾರೆ.

ಏಪ್ರಿಲ್ 9ರಂದು ಅಪರಾಹ್ನದಿಂದ ರಾತ್ರಿ ಪರ್ಯಂತ ಹುಬ್ಬಳ್ಳಿ ನಗರದಲ್ಲಿ ಗೋ ಮೆರವಣಿಗೆ ನಡೆಯಲಿದ್ದು, ನೆಹರೂ ಮೈದಾನದಲ್ಲಿ ಗೋಸಭಾ ಸಮಾವೇಶಗೊಳ್ಳುವುದು. ಸಂತರು, ಗಣ್ಯರು, ಗೋ ಪ್ರೇಮಿಗಳು, ನಾಯಕರು ಪಕ್ಷ- ಜಾತಿ ಭೇದ ಇಲ್ಲದೆ ಗೋ ಸಂದೇಶ ನೀಡುವರು. ಸಹಸ್ರಾರು ಮಾತೆಯರಿಂದ ಗೋ ಮಾತೆಗೆ ಮಂಗಳ ನೀರಾಜನ ನಡೆಯುವುದು.

ಇದೇ ಸಂದರ್ಭದಲ್ಲಿ 'ಧಾರವಾಡ ಜಿಲ್ಲೆಯನ್ನು' ಪ್ರಪ್ರಥಮ ಗೋ ಅಭಯ ಜಿಲ್ಲೆ' ಎಂಬುದಾಗಿ ಘೋಷಿಸುವುದರೊಂದಿಗೆ ಈ ಕಾರ್ಯಕ್ರಮ ಕೊನೆಗೊಂಡು ರಾಷ್ಟ್ರದ ಇತಿಹಾಸದಲ್ಲಿ ಗೋ ಸಂರಕ್ಷಣಾ ಅಭಿಯಾನದ ಇನ್ನೊಂದು ಅಧ್ಯಾಯ ಆರಂಭಗೊಳ್ಳುವುದು.

No comments:

Advertisement