ಗ್ರಾಹಕರ ಸುಖ-ದುಃಖ

My Blog List

Wednesday, April 9, 2008

ಇಂದಿನ ಇತಿಹಾಸ History Today ಏಪ್ರಿಲ್ 9

ಇಂದಿನ ಇತಿಹಾಸ

ಏಪ್ರಿಲ್ 9

ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಯು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಲತಾ ಅವರ ಸಹೋದರ ಹೃದಯನಾಥ ಮಂಗೇಶ್ಕರ್ ಅವರಿಗೆ ದೊರೆಯಿತು. ಮಧ್ಯ ಪ್ರದೇಶ ಸರ್ಕಾರವು 1984ರಲ್ಲಿ ರಾಜ್ಯದವರೇ ಆದ ಗಾಯಕ ಲತಾ ಮಂಗೇಶ್ಕರ್ ಗೌರವಾರ್ಥ ಸ್ಥಾಪಿಸಿದ ಈ ಪ್ರಶಸ್ತಿಯು ಕಳೆದ ಬಾರಿ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಲಭಿಸಿತ್ತು.

2007: ಖ್ಯಾತ ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ ಅವರು 2006ರ ಸಾಲಿನ `ಸ್ವರ-ಲಯ ಪುರಸ್ಕಾರ'ಕ್ಕೆ ಪಾತ್ರರಾದರು. ಭಾರತೀಯ ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿರುವ ಅನುಪಮ ಸಾಧನೆಯನ್ನು ಗೌರವಿಸಿ ಗಂಗೂಬಾಯಿ ಹಾನಗಲ್ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು ಎಂದು `ಸ್ವರ- ಲಯ' ಸಂಸ್ಥೆ ಅಧ್ಯಕ್ಷ ನ್ಯಾಯಮೂರ್ತಿ (ನಿವೃತ್ತ) ಬಾಲಕೃಷ್ಣ ಎರಾಡಿ ನವದೆಹಲಿಯಲ್ಲಿ ಪ್ರಕಟಿಸಿದರು..

2007: ಅರುಣಾಚಲ ಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ದೋರ್ಜಿ ಖಂಡು ಅವರು ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದಿನ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ಸಚಿವ ಸಂಪುಟದಲ್ಲಿ ಖಂಡು ವಿದ್ಯುತ್ ಸಚಿವರಾಗಿದ್ದರು. ಕಾಂಗ್ರೆಸ್ಸಿನ 33 ಶಾಸಕರಲ್ಲಿ 25 ಮಂದಿ ಗೆಗಾಂಗ್ ವಿರುದ್ಧ ಬಂಡೆದ್ದ ಎರಡು ವಾರಗಳ ಬಳಿಕ ಶಾಸಕರು ಖಂಡು ಅವರನ್ನು ನಾಯಕನನ್ನಾಗಿ ಆರಿಸಿದರು. ಗೆಗಾಂಗ್ ಅವರು ದೇಶದಲ್ಲಿಯೇ ದೀರ್ಘ ಅವಧಿಗೆ ಅಂದರೆ 1980ರಿಂದ ಈವರೆಗೆ ಆರು ಬಾರಿ ಒಟ್ಟು 23 ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದರು.. ಅತಿ ಹೆಚ್ಚು ವರ್ಷ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಇದ್ದವರ ಪೈಕಿ ಗೆಗಾಂಗ್ ಅವರದು ಎರಡನೆಯ ಸ್ಥಾನ.

2007: ಶ್ರೇಷ್ಠ ಗಾಯಕಿ ಆಶಾ ಬೋಂಸ್ಲೆ ಮತ್ತು ಸಂಗೀತ ನಿರ್ದೇಶಕ ಇಳಯರಾಜಾ ಸೇರಿದಂತೆ ಐವರು ಸಾಧಕರಿಗೆ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಪ್ರತಿಷ್ಠಿತ ಸಂಗೀತ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು. ಗಾಯಕರಾದ ಬಾಲಮುರಳಿ ಕೃಷ್ಣ, ಗಿರಿಜಾದೇವಿ ಪ್ರಶಸ್ತಿ ಪಡೆದ ಇತರರು. ಸರೋದ್ ಮಾಂತ್ರಿಕ ಅಲಿ ಅಕ್ಬರ್ ಖಾನ್ (84) ಪ್ರಶಸ್ತಿಗೆ ಆಯ್ಕೆ ಆಗಿದ್ದರೂ ಅನಾರೋಗ್ಯ ಕಾರಣ ಸಮಾರಂಭಕ್ಕೆ ಆಗಮಿಸಿರಲಿಲ್ಲ.

2007: ಪ್ರಸ್ತುತ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಯು ಖ್ಯಾತ ಸಂಗೀತ ನಿರ್ದೇಶಕ ಹಾಗೂ ಲತಾ ಅವರ ಸಹೋದರ ಹೃದಯನಾಥ ಮಂಗೇಶ್ಕರ್ ಅವರಿಗೆ ದೊರೆಯಿತು. ಮಧ್ಯ ಪ್ರದೇಶ ಸರ್ಕಾರವು 1984ರಲ್ಲಿ ರಾಜ್ಯದವರೇ ಆದ ಗಾಯಕ ಲತಾ ಮಂಗೇಶ್ಕರ್ ಗೌರವಾರ್ಥ ಸ್ಥಾಪಿಸಿದ ಈ ಪ್ರಶಸ್ತಿಯು ಕಳೆದ ಬಾರಿ ಗಾಯಕಿ ಕವಿತಾ ಕೃಷ್ಣಮೂರ್ತಿ ಅವರಿಗೆ ಲಭಿಸಿತ್ತು.

2007: ಬೆಂಗಳೂರಿನ ಅನಕೃ- ನಿರ್ಮಾಣ್ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ `ಅನಕೃ- ನಿರ್ಮಾಣ್' ಪ್ರಶಸ್ತಿಗೆ ಹಿರಿಯ ಸಾಹಿತಿ ಡಾ. ಚನ್ನವೀರ ಕಣವಿ ಆಯ್ಕೆಯಾದರು.

2007: ಖ್ಯಾತ ವ್ಯಂಗ್ಯಚಿತ್ರಕಾರ ಜಾಹ್ನಿ ಹರ್ಟ್ ಅವರು ನ್ಯೂಯಾರ್ಕಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರ ಪ್ರಶಸ್ತಿ ವಿಜೇತ ವ್ಯಂಗ್ಯಚಿತ್ರ ಸರಣಿ `ಬಿ.ಸಿ.' ವಿಶ್ವದಾದ್ಯಂತ 1300 ಸುದ್ದಿ ಪತ್ರಿಕೆಗಳಲ್ಲಿಪ್ರಕಟವಾಗುತ್ತಿತ್ತು. ಅವರು `ಬಿ.ಸಿ.' ಕಾರ್ಟೂನ್ ಸ್ಟ್ರಿಪ್ 1958ರಲ್ಲಿ ಆರಂಭಿಸಿದರು. ಅದು ಮುಂದೆ 1300 ಸುದ್ದಿ ಪತ್ರಿಕೆಗಳಲ್ಲಿ ಪ್ರಕಟಗೊಂಡು ಹರ್ಟ್ ಅವರನ್ನು ಜನಪ್ರಿಯತೆಯ ಉತ್ತುಂಗಕ್ಕೆ ಏರಿಸಿತು.

2006: ರೂ. 10,520ವರೆಗೆ ನಿವೃತ್ತಿ ವೇತನ (ಪಿಂಚಣಿ) ನೀಡಲು ಸರ್ಕಾರ ಒಪ್ಪಿಕೊಂಡದ್ದದನ್ನು ಅನುಸರಿಸಿ ಒಂದು ವಾರದಿಂದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿ ಐ) ಅಧಿಕಾರಿಗಳು ಮತ್ತು ನೌಕರರು ನಡೆಸುತ್ತಿದ್ದ ಮುಷ್ಕರ ಕೊನೆಗೊಂಡಿತು.

2006: ಮೆಲ್ಬೋರ್ನ್ ಕಾಮನ್ ವೆಲ್ತ್ ಕೂಟದ ಅವಧಿಯಲ್ಲಿ ಉದ್ದೀಪನ ಮದ್ದು ಸೇವನೆ ವಿವಾದದಲ್ಲಿ ಸಿಲುಕಿದ ಭಾರತದ ವೇಯ್ಟ್ ಲಿಫ್ಟರುಗಳಾದ ತೇಜೀಂದರ್ ಸಿಂಗ್ ಮತ್ತು ಎಡ್ವಿನ್ ರಾಜು ಅವರಿಗೆ ಜೀವಮಾನದ ಅವಧಿಗೆ ನಿಷೇಧ ಹೇರಲಾಗಿದೆ ಎಂದು ಭಾರತೀಯ ವೇಯ್ಟ್ ಲಿಫ್ಟಿಂಗ್ ಒಕ್ಕೂಟ ಪ್ರಕಟಿಸಿತು.

1975: ಕಲಾವಿದೆ ಅನುರಾಧ ಪ್ರಕಾಶ್ ಜನನ.

1959: ಅಮೆರಿಕದ ಮೊದಲ 7 ಮಂದಿ ಗಗನಯಾನಿಗಳ ಹೆಸರನ್ನು ನಾಸಾ ಪ್ರಕಟಿಸಿತು. ಸ್ಕಾಟ್ ಕಾರ್ಪೆಂಟರ್, ಜೋರ್ಡನ್ ಕೂಪರ್, ಜಾನ್ ಗ್ಲೆನ್, ಗಸ್ ಗ್ರಿಸ್ಸೊಮ್, ವಾಲಿ ಸಚಿರ್ರಾ, ಆಲನ್ ಶೆಫರ್ಡ್ ಹಾಗೂ ಡೊನಾಲ್ಡ್ ಸ್ಲೇಟನ್ ಇವರೇ ಆ ಗಗನಯಾನಿಗಳು.

1959: ಭರತನಾಟ್ಯ, ಸಂಗೀತ, ಯೋಗ, ಕ್ರೀಡೆ, ಸಾಹಿತ್ಯ ಮತ್ತಿತರ ಸಾಂಸ್ಕೃತಿಕ ಕಲೆಗಳ ಜೊತೆಗೆ ಅಬಲೆಯರ ಸ್ವಾವಲಂಬನೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ದುಡಿಯುತ್ತಿರುವ ಲಕ್ಷ್ಮಿ ಎನ್. ಮೂರ್ತಿ ಅವರು ಶ್ರೀಕಂಠಯ್ಯ- ಗೌರಮ್ಮ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು. ಈಕೆ ಬಿಎಂಶ್ರೀ ಮೊಮ್ಮಗಳು.

1948: ಖ್ಯಾತ ಬಾಲಿವುಡ್ ತಾರೆ ಹಾಗೂ ನಟ ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಹುಟ್ಟಿದ ದಿನ.

1939: ಕಲಾವಿದ ನಟರಾಜು ವಿ. ಜನನ.

1926: ಹಗ್ ಹೆಫ್ನರ್ ಹುಟ್ಟಿದ ದಿನ. ಈತ ಅಮೆರಿಕಾದ `ಪ್ಲೇಬಾಯ್' ಮ್ಯಾಗಜಿನ್ ನ ಪ್ರಕಾಶಕ. ಮ್ಯಾಗಜಿನ್ ನ ಮೊದಲ ಸಂಚಿಕೆಯಲ್ಲಿ ಈತ ತನ್ನ ಹೆಸರು ಹಾಕಿರಲಿಲ್ಲ. ಇದಕ್ಕೆ ಕಾರಣ ಮ್ಯಾಗಜಿನ್ ವಿಫಲಗೊಳ್ಳಬಹುದೆಂಬ ಹೆದರಿಕೆ. ಹಣಕಾಸು ತೊಂದರೆ ಪರಿಣಾಮವಾಗಿಯೂ ಎರಡನೇ ಸಂಚಿಕೆ ಪ್ರಕಟಗೊಳ್ಳುವ ಬಗ್ಗೆ ಭೀತಿ ಆತನಿಗಿತ್ತು!

1903: ಅಮೆರಿಕದ ವಿಜ್ಞಾನಿ ಗ್ರೆಗೊರಿ ಪಿನ್ ಕಸ್ (1903-67) ಜನ್ಮದಿನ. ಈತನ ಸಂಶೋಧನೆಗಳು ಜಗತ್ತಿನ ಮೊತ್ತ ಮೊದಲ ಜನನ ನಿಯಂತ್ರಣ ಗುಳಿಗೆಗಳ ಅಭಿವೃದ್ಧಿಗೆ ಮೂಲವಾದವು.

1899: ಜೇಮ್ಸ್ ಎಸ್. ಮೆಕ್ ಡೊನ್ನೆಲ್ (1899-1980) ಹುಟ್ಟಿದ ದಿನ. ಅಮೆರಿಕಾದ ವಿಮಾನ ನಿರ್ಮಾಣಗಾರನಾದ ಈತ 1938ರಲ್ಲಿ ಮೆಕ್ ಡೊನ್ನೆಲ್ ವಿಮಾನ ಕಂಪೆನಿ ಹುಟ್ಟು ಹಾಕಿದ ವ್ಯಕ್ತಿ.

1806: ಇಸಾಂಬರ್ಡ್ ಕಿಂಗ್ ಡಮ್ ಬ್ರೂನೆಲ್ (1806-1859) ಹುಟ್ಟಿದ ದಿನ. ಬ್ರಿಟಿಷ್ ಸಿವಿಲ್ ಹಾಗೂ ಮೆಕ್ಯಾನಿಕಲ್ ಎಂಜಿನಿಯರ್ ಆದ ಈತ ಮೊತ್ತ ಮೊದಲ ಟ್ರಾನ್ಸ್- ಅಟ್ಲಾಂಟಿಕ್ ಸ್ಟೀಮರಿನ ವಿನ್ಯಾಸಗಾರ.

1756: ಬಂಗಾಳದ ನವಾಬ ಅಲಿವರ್ದಿ ಖಾನ್ ತನ್ನ 80ನೇ ವಯಸಿನಲ್ಲಿ ಮೃತನಾದ. ಆತನ ಕಿರಿಯ ಪುತ್ರಿಯ ಮಗ ಸಿರಾಜ್ - ಉದ್ - ದೌಲ್ ಆತನ ಉತ್ತರಾಧಿಕಾರಿಯಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement