Saturday, May 17, 2008

Don't know homeopathy, prescribes allopathic medicine!

Don't know homeopathy, prescribes

allopathic medicine!

A person who didn't had merit even to prescribe homeopathy medicine prescribed allopathic medicine to the patient and as a result patient had to be admitted to the hospital! Karnataka State Consumers court opined that there should be strict action against repeat of such incidents and sent the copy of its judgement to the Secretary of department of Health and Family Welfare for suitable action.

ಹೋಮಿಯೋಪಥಿಯೇ ಗೊತ್ತಿಲ್ಲ,

ಆಲೋಪಥಿ ಔಷಧಕ್ಕೆ ಚೀಟಿ...!


ಹೋಮಿಯೋಪಥಿ ಔಷಧ ನೀಡಲೂ ಅರ್ಹತೆ ಇಲ್ಲ. ನೀಡಿದ್ದು ಆಲೋಪಥಿ ಔಷಧಕ್ಕೆ ಸಲಹೆ. ಪರಿಣಾಮ: ರೋಗಿಗೆ ಆಸ್ಪತ್ರೆವಾಸ..! ಇಂತಹ ಸ್ಥಿತಿ ತಪ್ಪಿಸಲು ಕಟ್ಟು ನಿಟ್ಟಿನ ಕ್ರಮ ಅಗತ್ಯ ಎಂದು ಹೇಳಿ ನ್ಯಾಯಾಲಯ ತನ್ನ ಆದೇಶದ ಪ್ರತಿಯನ್ನು ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿ ಇಲಾಖೆಗೆ ಕಳುಹಿಸಿತು.

ನೆತ್ರಕೆರೆ ಉದಯಶಂಕರ

ವೈದ್ಯರೇ ಅಲ್ಲದ ವ್ಯಕ್ತಿಗಳು ಔಷಧ ಚೀಟಿ ನೀಡುವ ಇಲ್ಲವೇ ಚಿಕಿತ್ಸೆ ನೀಡುವ ಕೆಲಸ ಮಾಡಬಹುದೇ? ಇಂತಹ ವ್ಯಕ್ತಿಗಳಿಂದ ಔಷಧ ಚೀಟಿ ಪಡೆದು ಪಡಬಾರದ ತೊಂದರೆಗೆ ಒಳಗಾದರೆ ಗ್ರಾಹಕ ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆಯೇ?

ಹೌದು. ತನ್ನ ಮುಂದೆ ಬಂದ ಮೇಲ್ಮನವಿ ಒಂದರ ವಿಚಾರಣೆ ನಡೆಸಿದ ಕರ್ನಾಟಕ ರಾಜ್ಯ ಗ್ರಾಹಕ ನ್ಯಾಯಾಲಯವು ಗ್ರಾಹಕರಿಗೆ ನ್ಯಾಯ ಒದಗಿಸಿಕೊಟ್ಟಿದೆ.

ಈ ಪ್ರಕರಣದಲ್ಲಿ ಅರ್ಜಿದಾರರು: ಧಾರವಾಡ ಜಯನಗರದ ನಿವಾಸಿ ವಿಜಯಲಕ್ಷ್ಮಿ ಎಸ್. ಸುಲ್ತಾನಪುರಿ. ಪ್ರತಿವಾದಿ: ಧಾರವಾಡ ಜಯನಗರದ ನಿವಾಸಿ ಡಾ. ಸತೀಶ್ ವಿ. ಕನ್ನಯ್ಯ.

ಅರ್ಜಿದಾರರು ಧಾರವಾಡದಲ್ಲಿ ದಂತವೈದ್ಯಕೀಯ ವಿಜ್ಞಾನ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ. 2000ದ ಸೆಪ್ಟೆಂಬರಿನಲ್ಲಿ ಜ್ವರ ಬಂತು. ಪ್ರತಿವಾದಿ ವೈದ್ಯರನ್ನು ಸಂಪರ್ಕಿಸಿದರು. ಪ್ರತಿವಾದಿಯು ಆಕೆಯ ವೈದ್ಯಕೀಯ ತಪಾಸಣೆ ನಡೆಸಿ ಲೈಕ್ರೋಸಿನ್, ಸಿಪ್ರೋಟೆಕ್ಸ್, ಲಿಕೋಪ್ಲೆಕ್ಸ್ ಮಾತ್ರೆಗಳು ಮತ್ತು ಟೋನ್ ಅಪ್ ಟಾನಿಕ್ ತೆಗೆದುಕೊಳ್ಳುವಂತೆ ಸಲಹೆ ಮಾಡಿದರು.

ಪ್ರತಿವಾದಿಯ ಸಲಹೆಯಂತೆ ಈ ಔಷಧ ತೆಗೆದುಕೊಂಡ ಬಳಿಕ ಅರ್ಜಿದಾರಳ ಚರ್ಮ ಕೆಂಪಾಯಿತು, ತುಟಿಗಳು ಊದಿಕೊಂಡವು. ಅಂಗೈಯಲ್ಲಿ ಗುಳ್ಳೆಗಳು ಎದ್ದವು. ಆಕೆ ಧಾರವಾಡದ ಸುಶ್ರುತ ನರ್ಸಿಂಗ್ ಹೋಮ್ ಗೆ ದಾಖಲಾಗಿ 12 ದಿನಗಳ ಚಿಕಿತ್ಸೆ ಪಡೆದರು. ಆ ನಂತರ ಹೊರರೋಗಿಯಾಗಿ ಎರಡು ತಿಂಗಳ ಕಾಲ ಚಿಕಿತ್ಸೆ ಪಡೆಯಬೇಕಾಯಿತು. ಇಷ್ಟೆಲ್ಲ ಅವಸ್ಥೆಗೆ ಪ್ರತಿವಾದಿ ಸಲಹೆಯಂತೆ ಔಷಧ ತೆಗೆದಕೊಂಡದ್ದೇ ಕಾರಣ ಎಂಬುದು ಅರ್ಜಿದಾರರ ದೂರು. ಹೀಗಾಗಿ ತನಗೆ 50,000 ರೂಪಾಯಿಗಳ ಪರಿಹಾರ ಕೊಡಿಸಿ ಎಂದು ಕೋರಿ ಆಕೆ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೊಕ್ಕರು.

ಪ್ರತಿವಾದಿಯು ಆಕೆಯ ಆಪಾದನೆ ನಿರಾಕರಿಸಿದ್ದಷ್ಟೇ ಅಲ್ಲ, ತಾನು ವೈದ್ಯನೇ ಅಲ್ಲ, ಆಕೆಗೆ ಯಾವುದೇ ಔಷಧ ತೆಗೆದುಕೊಳ್ಳಲು ಸಲಹೆ ಕೂಡಾ ಮಾಡಿಲ್ಲ. ತನ್ನ ಸಹೋದರ ಅರ್ಜಿದಾರರ ತಂದೆಗೆ ಮನೆ ಮಾರಲು ಒಪ್ಪದೇ ಇದ್ದದುರಿಂದ ತನಗೆ ಕಿರುಕುಳ ನೀಡುವ ಸಲುವಾಗಿ ಈ ದೂರು ಸಲ್ಲಿಸಲಾಗಿದೆ ಎಂದು ವಾದಿಸಿದರು.

ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿತು.

ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅರ್ಜಿದಾರರು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ರಮಾ ಅನಂತ್ ಮತ್ತು ಎಂ. ಶಾಮಭಟ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಗಂಗಾಧರ ಎಸ್. ಹೊಸಕೇರಿ, ಪ್ರತಿವಾದಿ ಪರ ವಕೀಲ ಎಸ್.ಸಿ. ಹಿರೇಮಠ ಅವರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಜಿಲ್ಲಾ ಗ್ರಾಹಕ ನ್ಯಾಯಾಲಯವು ಈ ದೂರನ್ನು ವಜಾ ಮಾಡಿದ್ದು ಸಮರ್ಥನೀಯವೇ ಎಂಬುದು ರಾಜ್ಯ ಗ್ರಾಹಕ ನ್ಯಾಯಾಲಯದ ಮುಂದಿದ್ದ ಪ್ರಶ್ನೆ.

ತಾನು ವೈದ್ಯನೇ ಅಲ್ಲ ಎಂಬುದಾಗಿ ಪ್ರತಿವಾದಿ ಮಂಡಿಸಿದ ವಾದ ಸಮರ್ಥನೀಯವೇ ಎಂಬುದನ್ನು ಪರಿಶೀಲಿಸಲು ರಾಜ್ಯ ಗ್ರಾಹಕ ನ್ಯಾಯಾಲಯವು ಅರ್ಜಿದಾರರು ಮಂಡಿಸಿದ್ದ ಸಾಕ್ಷಾಧಾರಗಳನ್ನು ಗಮನಿಸಿತು. ಧಾರವಾಡದ ಎಂ. ಪೋರ್ವಾಲ್ ಮೆಡಿಕಲ್ಸ್ ನಿಂದ ಔಷಧ ಖರೀದಿಸಿದ್ದ ಅರ್ಜಿದಾರರು ವೈದ್ಯರು ನೀಡಿದ ಔಷಧ ಚೀಟಿ ಜೊತೆಗೆ ಔಷಧ ಖರೀದಿಗೆ ಸಂಬಂಧಿಸಿದ ರಶೀದಿಯನ್ನೂ ನ್ಯಾಯಾಲಯಕ್ಕೆ ಒದಗಿಸಿದ್ದರು. ಈ ಔಷಧ ರಶೀದಿಯಲ್ಲಿ ವೈದ್ಯರ ಹೆಸರಿನ ಮುಂದೆ ಡಾ.ಕನ್ನಯ್ಯ ಹೆಸರು ಇದ್ದುದನ್ನು ಮತ್ತು ಅರ್ಜಿದಾರರು ಹಾಜರು ಪಡಿಸಿದ್ದ ಧಾರವಾಡ ಯುತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಬ್ರೋಷರ್ ನಲ್ಲಿ ಡಾ. ಸತೀಶ ಕನ್ನಯ್ಯ, ಅಧ್ಯಕ್ಷರು ಎಂಬುದಾಗಿ ಇದ್ದುದನ್ನು ನ್ಯಾಯಾಲಯ ಗಮನಿಸಿತು.

ಪ್ರತಿವಾದಿ ವೈದ್ಯನಾಗಿ ಕೆಲಸ ಮಾಡದೇ ಇದ್ದರೆ ಈ ದಾಖಲೆಗಳಲ್ಲಿ ಈ ರೀತಿ 'ಡಾ' ಎಂಬುದಾಗಿ ನಮೂದಾಗಲು ಸಾಧ್ಯವಿಲ್ಲ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು. ಅರ್ಜಿದಾರರು ಹಾಜರು ಪಡಿಸಿದ ಇನ್ನೆರಡು ಪ್ರಮಾಣಪತ್ರಗಳಲ್ಲಿ ವಿರೂಪಾಕ್ಷಿ ಮತ್ತು ಬಸವರಾಜ್ ಎಂಬ ಇಬ್ಬರು ಸ್ವತಂತ್ರ ವ್ಯಕ್ತಿಗಳೂ ತಾವು ಪ್ರತಿವಾದಿಯಿಂದ ಔಷಧ ಪಡೆದಿರುವುದಾಗಿ ತಿಳಿಸಿದ್ದರು. ಈ ಎಲ್ಲ ದಾಖಲೆಗಳು ಅರ್ಜಿದಾರರ ದೂರಿನ ಬಗ್ಗೆ ಅಪನಂಬಿಕೆ ಇಡಲು ಸಾಧ್ಯವಾಗದಷ್ಟು ಸುಸ್ಪಷ್ಟವಾಗಿವೆ ಎಂದು ನ್ಯಾಯಾಲಯ ಭಾವಿಸಿತು.

ತಾನು ವೈದ್ಯನಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರೂ, ಕೆಲವು ಯಾತ್ರಿಗಳು ಮತ್ತು ಭಕ್ತರಿಗೆ ತಾನು ಉಚಿತವಾಗಿ ಹೋಮಿಯೋಪಥಿ ಔಷಧ ನೀಡಿರುವುದು ಹೌದು ಎಂದು ಪ್ರತಿವಾದಿ ಒಪ್ಪಿಕೊಂಡದ್ದನ್ನೂ ನ್ಯಾಯಾಲಯ ಗಮನಿಸಿತು.

ಭಾರತ ಸರ್ಕಾರದ 'ಹೋಮಿಯೋಪಥಿ' ಕೇಂದ್ರೀಯ ಮಂಡಳಿ ಕಾಯ್ದೆ, ಕರ್ನಾಟಕ ಸರ್ಕಾರದ ಕರ್ನಾಟಕ ಹೋಮಿಯೋಪಥಿ ಪ್ರಾಕ್ಟೀಷನರ್ಸ್ ಕಾಯ್ದೆಗಳ ಪ್ರಕಾರ ಹೋಮಿಯೋಪಥಿ ಚಿಕಿತ್ಸೆ ನೀಡಲು ನಾಲ್ಕೂವರೆ ವರ್ಷಗಳ 'ಬಿಎಚ್ಎಂಎಸ್' ಪದವಿ ಪಡೆದಿರಬೇಕು. ಈ ಪ್ರಕರಣದಲ್ಲಿ ಪ್ರತಿವಾದಿ ಹೋಮಿಯೋಪಥಿ ಪದವೀಧರನಲ್ಲ, ಹೋಮಿಯೋಪಥಿ ಚಿಕಿತ್ಸೆ ನೀಡಲು ಸರ್ಕಾರದಿಂದ ಪರವಾನಗಿಯನ್ನೂ ಪಡೆದಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಅರ್ಜಿದಾರರು ಚಿಕಿತ್ಸೆ ಪಡೆದುದಕ್ಕೆ ಹಣ ನೀಡಿರುವುದಾಗಿ ಹೇಳಿಲ್ಲ, ಆದ್ದರಿಂದ ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ ಆಕೆಯನ್ನು 'ಗ್ರಾಹಕಿ' ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಪ್ರತಿವಾದಿ ಪರ ವಕೀಲರು ಮುಂದಿಟ್ಟಿದ್ದರು. ತಾನು ಹೋಮಿಯೋಪಥಿ ಚಿಕಿತ್ಸೆ ನೀಡುತ್ತಿದ್ದುದನ್ನು ಪ್ರತಿವಾದಿಯೇ ಸ್ವತಃ ಒಪ್ಪಿಕೊಂಡದ್ದರಿಂದ, ಈ ಪ್ರಕರಣದಲ್ಲಿ ಅರ್ಜಿದಾರರು ಹಣ ನೀಡದೇ ಇರುವ ಕಾರಣ ಅವರು ಗ್ರಾಹಕರಾಗುವುದಿಲ್ಲ ಎಂಬುದನ್ನು ಒಪ್ಪಲಾಗದು ಎಂದು ನ್ಯಾಯಾಲಯ ಹೇಳಿತು.

ಒಂದು ಹಂತದಲ್ಲಿ ತಾನು ಹೋಮಿಯೋಪಥಿ ಔಷಧ ಕೊಡುತ್ತಿದ್ದುದು ಹೌದು ಎಂದು ಪ್ರತಿವಾದಿ ಒಪ್ಪಿಕೊಂಡಿರುವ ಕಾರಣ ಜಿಲ್ಲಾ ಗ್ರಾಹಕ ನ್ಯಾಯಾಲಯ ಅರ್ಜಿಯನ್ನು ವಜಾ ಮಾಡಿದ್ದು ಅಸಮರ್ಥನೀಯ ಎಂದು ಹೇಳಿದ ರಾಜ್ಯ ಗ್ರಾಹಕ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯದ ತೀರ್ಪನ್ನು ತಳ್ಳಿಹಾಕಿ 25,000 ರೂಪಾಯಿಗಳ ಪರಿಹಾರವನ್ನು 2000 ರೂಪಾಯಿಗಳ ಖಟ್ಲೆ ವೆಚ್ಚ ಸಹಿತವಾಗಿ ಎರಡು ತಿಂಗಳುಗಳ ಒಳಗೆ ಅರ್ಜಿದಾರರಿಗೆ ಪಾವತಿ ಮಾಡಬೇಕು. ತಪ್ಪಿದರೆ ದೂರು ದಾಖಲಾದ ದಿನದಿಂದ ಪಾವತಿ ಆಗುವವರೆಗೆ ಶೇಕಡಾ 12 ಬಡ್ಡಿಯನ್ನೂ ಪಾವತಿಸಬೇಕು ಎಂದು ಪ್ರತಿವಾದಿಗೆ ಆದೇಶ ನೀಡಿತು.

ಹೋಮಿಯೋಪಥಿ ಔಷಧ ನೀಡಲು ಕೂಡಾ ಅರ್ಹತೆ ಇಲ್ಲದ ಇಂತಹ ವ್ಯಕ್ತಿಗಳು ಆಲೋಪಥಿ ಔಷಧ ನೀಡದಂತೆ ಕಟ್ಟುನಿಟ್ಟಿನ ಕ್ರಮ ಅಗತ್ಯ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ತೀರ್ಪಿನ ಒಂದು ಪ್ರತಿಯನ್ನು ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯದರ್ಶಿಗೆ ಕಳುಹಿಸಿ ಪ್ರತಿವಾದಿಯು ಹೋಮಿಯೋಪಥಿ ವೈದ್ಯರಾಗಿ ಕಾರ್ಯನಿರ್ವಹಿಸದಂತೆ ತಡೆಯಲು ತತ್ ಕ್ಷಣ ನಿರ್ದೇಶನ ನೀಡಬೇಕು ಎಂದು ಆಜ್ಞಾಪಿಸಿತು.

No comments:

Advertisement