My Blog List

Sunday, May 18, 2008

ಇಂದಿನ ಇತಿಹಾಸ History Today ಮೇ 18

ಇಂದಿನ ಇತಿಹಾಸ

ಮೇ 18

ಉಪಗ್ರಹವನ್ನು ಹೊತ್ತ ಎಚ್-2ಎ ಹೆಸರಿನ ರಾಕೆಟನ್ನು ಜಪಾನ್ ದಕ್ಷಿಣ ಕಾಗೊಶಿಮಾದ ತಾನೆಗಶಿಮಾ ಬಾಹ್ಯಕಾಶ ಕೇಂದ್ರದಿಂದ ಗಗನಕ್ಕೆ ಹಾರಿಸಿತು. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಜಪಾನ್ ಮಾಡಿದ ಎರಡನೇ ಸಾಹಸ ಇದಾಗಿದ್ದು, ಹಲವು ದುರಂತಗಳ ಬಳಿಕ ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಗತ್ಯ ಉತ್ತೇಜನ ನೀಡಿತು.

2007: ನೈಜೀರಿಯಾದ ಅತಿದೊಡ್ಡ ತೈಲ ಸಂಸ್ಕರಣಾ ಘಟಕ ಪೋರ್ಟ್ ಹಾಕೋರ್ಟ್ ರಿಪೈನರಿಯನ್ನು ಸ್ವಾಧೀನಪಡಿಸಿಕೊಳ್ಳುವ ಯತ್ನದಲ್ಲಿ ಉಕ್ಕು ಉದ್ಯಮದ ಸಾಮ್ರಾಟ ಭಾರತೀಯ ಮೂಲದ ಲಕ್ಷ್ಮೀ ನಿವಾಸ್ ಮಿತ್ತಲ್ ಅವರಿಗೆ ಸೋಲಾಯಿತು.

2007: ಕರ್ನಾಟಕ ನಗರ ಹಾಗೂ ಗ್ರಾಮಾಂತರ ಪ್ರದೇಶ ಯೋಜನೆ (ಅಕ್ರಮ ನಿವೇಶನ ಹಾಗೂ ಕಟ್ಟಡಗಳ ಸಕ್ರಮೀಕರಣ) ನಿಯಮವನ್ನು (2007) ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರವು ಸಕ್ರಮೀಕರಣಕ್ಕೆ ವಿಧ್ಯುಕ್ತ ಚಾಲನೆ ನೀಡಿತು. ಕಂದಾಯ ಭೂಮಿಯಲ್ಲಿನ ಅಕ್ರಮ ಕಟ್ಟಡ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸುವ ಸಂಬಂಧಿ ಸರ್ಕಾರ ಈ ಅಧಿಸೂಚನೆ ಹೊರಡಿಸಿತು.

2007: ನಿಯಮಗಳನ್ನು ಗಾಳಿಗೆ ತೂರಿ ಪ್ರೇಯಸಿ ಶಹಾ ರಿಜಾ ಅವರಿಗೆ ಉದಾರವಾಗಿ ಬಡ್ತಿ ನೀಡಿ ಸಂಬಳ ಹೆಚ್ಚಿಸಿದ ಆರೋಪ ಎದುರಿಸುತ್ತಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಪೌಲ್ ವುಲ್ಫೋವಿಜ್ ಅವರು ಕೊನೆಗೂ ಒತ್ತಡಕ್ಕೆ ಮಣಿದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಐದು ಜನರಿಗೆ ಸ್ಫೋಟಕಗಳು, ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಲ್ಲಿ ನೆರವು ನೀಡಿದ್ದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಲ್ಲಿ ನೆರವು ನೀಡಿದ್ದಕ್ಕಾಗಿ ವಿಶೇಷ ಟಾಡಾ ನ್ಯಾಯಾಲಯವು ದೀರ್ಘಕಾಲದ ವಿಚಾರಣೆಯ ಬಳಿಕ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಈ ಮೂಲಕ, 14 ವರ್ಷಗಳ ಹಿಂದೆ ನಡೆದ ಈ ಕ್ರಿಮಿನಲ್ ಪ್ರಕರಣದ 100 ಮಂದಿ ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಆರಂಭಿಸಿತು. 1993ರ ಮಾರ್ಚ್ 12ರಂದು ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 257 ಜನ ಮೃತರಾಗಿ 700 ಮಂದಿ ಗಾಯಗೊಂಡಿದ್ದರು.

2007: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವೆಯಾಗಿ ಡಿಎಂಕೆ ಸಂಸದೆ ವಿ. ರಾಧಿಕಾ ಸೆಲ್ವಿ ಪ್ರಮಾಣ ವಚನ ಸ್ವೀಕರಿಸಿದರು. ತಮಿಳುನಾಡಿನ ತಿರುಚೆಂದೂರಿನಿಂದ ಇದೇ ಪ್ರಥಮ ಬಾರಿಗೆ ಸಂಸದೆಯಾಗಿ ಆವರು ಆಯ್ಕೆಯಾಗಿದ್ದರು.

2007: ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನ ಚಾರಿತ್ರಿಕ ಮೆಕ್ಕಾ ಮಸೀದಿಯಲ್ಲಿಪ್ರಾರ್ಥನೆ ವೇಳೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 16 ಜನ ಮೃತರಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕಾನಾಹೊಸಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುಮಗಳು ಸೇರಿ ಮದುವೆ ದಿಬ್ಬಣದ 19 ಮಂದಿ ಮೃತರಾಗಿ 26 ಮಂದಿ ಗಾಯಗೊಂಡರು.

2007: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಎಲೆಕ್ಟ್ರಿಕಲ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಚ್.ವಿ. ಖಿಂಚ ನೇಮಕಗೊಂಡರು.

2006: ನೇತಾಜಿ ಅವರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಕೆ. ಮುಖರ್ಜಿ ಆಯೋಗವು ಸಲ್ಲಿಸಿದ ವರದಿಯನ್ನು ತಿರಸ್ಕರಿಸಿದ ಯುಪಿಎ ಸರ್ಕಾರದ ಕ್ರಮವನ್ನು ಲೋಕಸಭಾ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವರದಿ ಬಗ್ಗೆ ಸದನದಲ್ಲಿ ಚರ್ಚೆಗೆ ಆಗ್ರಹಿಸಿದರು.

2006: ನೇಪಾಳದ ದೊರೆಯ ರಾಜಕೀಯ ಹಾಗೂ ಸೇನಾ ಅಧಿಕಾರವನ್ನು ಮೊಟಕುಗೊಳಿಸುವ ಪ್ರಸ್ತಾವವನ್ನು ನೇಪಾಳ ಸಂಸತ್ತು ಅಂಗೀಕರಿಸಿತು. ಜೊತೆಗೇ ನೇಪಾಳವು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿತು.

2006: ಉಪಗ್ರಹವನ್ನು ಹೊತ್ತ ಎಚ್-2ಎ ಹೆಸರಿನ ರಾಕೆಟನ್ನು ಜಪಾನ್ ದಕ್ಷಿಣ ಕಾಗೊಶಿಮಾದ ತಾನೆಗಶಿಮಾ ಬಾಹ್ಯಕಾಶ ಕೇಂದ್ರದಿಂದ ಗಗನಕ್ಕೆ ಹಾರಿಸಿತು. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಜಪಾನ್ ಮಾಡಿದ ಎರಡನೇ ಸಾಹಸ ಇದಾಗಿದ್ದು, ಹಲವು ದುರಂತಗಳ ಬಳಿಕ ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಗತ್ಯ ಉತ್ತೇಜನ ನೀಡಿತು. ರಾಕೆಟ್ 4.7 ಟನ್ ತೂಕದ ಉಪಗ್ರಹವನ್ನು ಗಗನಕ್ಕೆ ಒಯ್ದು ಸಮರ್ಪಕವಾಗಿ ಕಕ್ಷೆಗೆ ಸೇರಿಸಿತು.

1974: ಭಾರತವು ರಾಜಸ್ತಾನದ ಪೋಖ್ರಾನ್ ನಲ್ಲಿ ತನ್ನ ಮೊತ್ತ ಮೊದಲ ಅಣ್ವಸ್ತ್ರ ಪರೀಕ್ಷಾ ಸ್ಫೋಟ ನಡೆಸಿತು.

1969: ಚಂದ್ರನಲ್ಲಿ ಮಾನವನನ್ನು ಇಳಿಸಲು ಸಿದ್ಧತೆಗಳನ್ನು ನಡೆಸುವ ಸಲುವಾಗಿ ಅಮೆರಿಕವು ಬಾಹ್ಯಾಕಾಶ ನೌಕೆ ಅಪೋಲೋ 10ನ್ನು ಗಗನಕ್ಕೆ ಹಾರಿಸಿತು.

1965: ಕಲಾವಿದೆ ಮಾಲಾ ರಾಣಿ ಜನನ.

1952: ಕಲಾವಿದ ಶ್ರೀಧರ್ ಜೆ.ಕೆ. ಜನನ.

1945: ತೈಲವರ್ಣ ಚಿತ್ರಕಲೆಯಲ್ಲಿ ಅಗಾಧ ಸಾಧನೆ ಮಾಡಿರುವ ಎಸ್. ಕೃಷ್ಣಪ್ಪ ಅವರು ನೇಕಾರ ಕುಟುಂಬದ ಸಂಪಂಗಿರಾಮಯ್ಯ- ನಾರಾಯಣಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಸರ್ಜಾಪುರದಲ್ಲಿ ಜನಿಸಿದರು.

1915: ಕಲಾವಿದ ಶೆಲ್ವ ಪಿಳ್ಳೈ ಅಯ್ಯಂಗಾರ್ ಜನನ.

1912: ಮೂಕಿ ಚಿತ್ರಗಳ ದಿನಗಳಲ್ಲಿ ಬ್ರಿಟಿಷ್ ಸಹಯೋಗದೊಂದಿಗೆ ನಿರ್ಮಿಸಲಾದ ಮೊತ್ತ ಮೊದಲ ಭಾರತೀಯ ಚಿತ್ರ `ಪುಂಡಲೀಕ' ಮುಂಬೈಯ ಕೊರೋನೇಷನ್ ಸಿನೆಮಾಟೋಗ್ರಾಫಿನಲ್ಲಿ ಬಿಡುಗಡೆಯಾಯಿತು. ಎನ್. ಜಿ. ಚಿತ್ರೆ ಮತ್ತು ಪಿ.ಆರ್. ಟಿಪ್ನಿಸ್ ಇದನ್ನು ಜಂಟಿಯಾಗಿ ನಿರ್ದೇಶಿಸಿದ್ದರು. (ದಾದಾಸಾಹೇಬ್ ಫಾಲ್ಕೆ ಅವರ `ರಾಜಾ ಹರಿಶ್ಚಂದ್ರ' ಚಿತ್ರ ಒಂದು ವರ್ಷ ತಡವಾಗಿ ಬಿಡುಗಡೆಗೊಂಡರೂ ಅದು ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡದ್ದರಿಂದ ಅದೇ ಮೊತ್ತ ಮೊದಲ ಭಾರತೀಯ ಚಿತ್ರ ಎಂದು ದಾಖಲಾಗಿದೆ.)

1836: ಆಸ್ಟ್ರಿಯಾದ ಚೆಸ್ ಮಾಸ್ಟರ್ ವಿಲ್ಹೆಮ್ ಸ್ಟೀನಿಜ್ (1836-1900) ಹುಟ್ಟಿದ ದಿನ. ಅತ್ಯಂತ ಹೆಚ್ಚು ಕಾಲ (1866ರಿಂದ 1894ರವರೆಗೆ) ಜಾಗತಿಕ ಚೆಸ್ ಚಾಂಪಿಯನ್ ಆಗಿದ್ದ ವಿಲ್ಹೆಮ್ 1894ರಲ್ಲಿ ಎಮ್ಯಾನುವೆಲ್ ಲಸ್ಕರ್ ಅವರ ಎದುರು ಸೋತು ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.

1048: ಪರ್ಷಿಯಾದ ಕವಿ, ಗಣಿತತಜ್ಞ, ಖಗೋಳತಜ್ಞ ಉಮರ್ ಖಯ್ಯಾಂ (1048-1131) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement