My Blog List

Friday, August 29, 2008

ಇಂದಿನ ಇತಿಹಾಸ History Today ಆಗಸ್ಟ್ 29

ಇಂದಿನ ಇತಿಹಾಸ

ಆಗಸ್ಟ್ 29

ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

2007: ಭಾರತದ ಫುಟ್ ಬಾಲ್ ಇತಿಹಾಸದಲ್ಲಿ ಈದಿನದ ರಾತ್ರಿ ಒಂದು ಸುಂದರ ರಾತ್ರಿ. ಭಾರತ ತಂಡದವರು ಮೊದಲ ಬಾರಿ ಒಎನ್ ಜಿಸಿ ನೆಹರೂ ಕಪ್ ಫುಟ್ ಬಾಲ್ ಟ್ರೋಫಿ ಗೆದ್ದು ಚಾಂಪಿಯನ್ ಶಿಪ್ ಪಡೆದದು ್ದಇದಕ್ಕೆ ಕಾರಣ.ನವದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಸೊಗಸಾದ ಆಟ ಪ್ರದರ್ಶಿಸಿದ ಭಾರತ ಫೈನಲ್ ಪಂದ್ಯದಲ್ಲಿ 1-0 ಗೋಲಿನಿಂದ ಸಿರಿಯಾ ತಂಡವನ್ನು ಮಣಿಸಿ ಈ ಮಹತ್ವದ ಸಾಧನೆ ಮಾಡಿತು. ಇದಕ್ಕಾಗಿ ಭಾರತ ತಂಡ 40 ಸಾವಿರ ಡಾಲರ್ ಬಹುಮಾನ ಪಡೆಯಿತು.

2007: ಖ್ಯಾತ ಟ್ರ್ಯಾಪ್ ಶೂಟರ್ ಮಾನವ್ ಜಿತ್ ಸಿಂಗ್ ಸಂಧು ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದ ಅಶೋಕಾ ಹಾಲಿನಲ್ಲಿ ನಡೆದ ಸಮಾರಂಭದಲ್ಲಿ 14 ಮಂದಿಗೆ ಅರ್ಜುನ ಪ್ರಶಸ್ತಿ, ಧ್ಯಾನ್ ಚಂದ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ನೀಡಲಾಯಿತು. ಇತರ ಪ್ರಶಸ್ತಿ ವಿಜೇತರು: ಅರ್ಜುನ ಪ್ರಶಸ್ತಿ- ಜಯಂತಾ ತಾಲ್ಲೂಕ್ದಾರ್ (ಆರ್ಚರಿ), ಕೆ.ಎಂ.ಬಿನು (ಅಥ್ಲೆಟಿಕ್ಸ್), ಬಿ. ಚೇತನ್ ಆನಂದ್ (ಬ್ಯಾಡ್ಮಿಂಟನ್), ವಿಜೇಂದರ್ (ಬಾಕ್ಸಿಂಗ್), ಪಿ. ಹರಿಕೃಷ್ಣ (ಚೆಸ್), ಅಂಜುಮ್ ಚೋಪ್ರಾ (ಕ್ರಿಕೆಟ್), ಜ್ಯೋತಿ ಸುನಿತಾ ಕುಲ್ಲು (ಹಾಕಿ), ವಿಜಯ್ ಕುಮಾರ್ (ಶೂಟಿಂಗ್), ಸೌರವ್ ಘೋಷಾಲ್ (ಸ್ಕ್ವಾಷ್), ಸುಭಜಿತ್ ಸಾಹಾ (ಟೇಬಲ್ ಟೆನಿಸ್), ಗೀತಾ ರಾಣಿ (ವೇಯ್ಟ್ ಲಿಫ್ಟಿಂಗ್), ನವನೀತ್ ಗೌತಮ್ (ಕಬಡ್ಡಿ), ರೋಹಿತ್ ಬಾಕರ್ (ಬ್ಯಾಡ್ಮಿಂಟನ್, ಅಂಗವಿಕಲರ ವಿಭಾಗ). ಧ್ಯಾನ್ ಚಂದ್ ಪ್ರಶಸ್ತಿ: ವರಿಂದರ್ ಸಿಂಗ್ (ಹಾಕಿ), ಶಂಷೇರ್ ಸಿಂಗ್ (ಕಬಡ್ಡಿ), ರಾಜೇಂದ್ರ ಸಿಂಗ್ (ಕುಸ್ತಿ); ದ್ರೋಣಾಚಾರ್ಯ ಪ್ರಶಸ್ತಿ: ಆರ್. ಡಿ. ಸಿಂಗ್ (ಅಂಗವಿಕಲರ ಅಥ್ಲೆಟಿಕ್ಸ್), ದಾಮೋದರನ್ ಚಂದ್ರಲಾಲ್ (ಬಾಕ್ಸಿಂಗ್), ಕೊನೇರು ಅಶೋಕ್ (ಚೆಸ್).

2007: ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ವಿಭಾಗ ಪ್ರತಿವರ್ಷ ಉತ್ತಮ ಶಿಕ್ಷಕರಿಗೆ ನೀಡುವ ರಾಷ್ಟ್ರಪ್ರಶಸ್ತಿಗೆ ಗುಲ್ಬರ್ಗದ ಕಪನೂರ ನೆಹರು ಗಂಜ್ ಸರ್ಕಾರಿ ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕ ದೇವೇಂದ್ರಪ್ಪ ಎಸ್. ತೋಟನಹಳ್ಳಿ ಅವರು ಆಯ್ಕೆಯಾದರು.

2007: ಶಾಬೇ ಬರಾತ್ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆ ಮೇಲೆ ಲಾರಿ ಹರಿದು ನಾಲ್ವರು ಯುವಕರು ಮೃತಪಟ್ಟ ಘಟನೆಯಿಂದ ರೊಚ್ಚಿಗೆದ್ದ ಜನ ಬೀದಿಗೆ ಇಳಿದು ಹಿಂಸಾಕೃತ್ಯದಲ್ಲಿ ತೊಡಗಿದ್ದರಿಂದ ಆಗ್ರಾದಲ್ಲಿ ವ್ಯಾಪಕ ಹಿಂಸಾಕೃತ್ಯ ಸಂಭವಿಸಿ ಒಬ್ಬ ಬಾಲಕ ಗೋಲಿಬಾರಿಗೆ ಬಲಿಯಾದ.

2006: ಆಲಮಟ್ಟಿ ಜಲಾಶಯದ ಮುಂಭಾಗದ ಸೇತುವೆಯಿಂದ ಮ್ಯಾಕ್ಸಿಕ್ಯಾಬ್ ಒಂದು ಕೃಷ್ಣಾ ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 29 ಜನ ಜಲ ಸಮಾಧಿಯಾದರು. ವರ್ಷದ ಹಿಂದೆ ನಡೆದಿದ್ದ ಸೋದರರ ಮದುವೆಯ ಬಾಸಿಂಗವನ್ನು ಕೂಡಲ ಸಂಗಮದಲ್ಲಿ ಬಿಟ್ಟು ಆಲಮಟ್ಟಿ ವೀಕ್ಷಣೆಗಾಗಿ ಹೊರಟಿದ್ದ ಕೊಪ್ಪಳ ಜಿಲ್ಲೆಯ ವಿವಿಧ ಗ್ರಾಮಗಳ ಜನರಿದ್ದ ತಂಡವನ್ನು ಒಯ್ಯುತ್ತಿದ್ದ ಈ ಟೆಂಪೋದಲ್ಲಿ 32 ಜನರಿದ್ದರು. ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದಾಗ ಟೆಂಪೋ ನಿಯಂತ್ರಣ ತಪ್ಪಿ ನದಿಗೆ ಉರುಳಿದ್ದು ಈ ದುರಂತಕ್ಕೆ ಕಾರಣ.

2006: ಆಧುನಿಕ ವಚನ ರಚನೆಗೆ ಗಣನೀಯ ಕೊಡುಗೆ ನೀಡಿದ ಬೆಂಗಳೂರಿನ ಅನ್ನದಾನಯ್ಯ ಪುರಾಣಿಕ, ವಚನ ಸಂಗೀತದ ಸುಧೆ ಹರಿಸಿದ ಧಾರವಾಡದ ಪಂಡಿತ ಸೋಮನಾಥ ಮರಡೂರ, ಸಂಶೋಧನಾ ಕ್ಷೇತ್ರದ್ಲಲಿ ಸೇವೆ ಸ್ಲಲಿಸಿದ ಧಾರವಾಡದ ಸಂಶೋಧಕ ವೀರಣ್ಣ ರಾಜೂರ ಅವರಿಗೆ ಪ್ರತಿಷ್ಠಿತ ರಮಣಶ್ರೀ ಪ್ರಶಸ್ತಿ ಪ್ರಕಟಿಸಲಾಯಿತು.

2006: ಅಂಥ್ರಾಕ್ಸ್ ವೈರಾಣು ದೇಹದ ಮೇಲೆ ದಾಳಿ ಮಾಡಲಾಗದಂತೆ ತಡೆಯಬಲ್ಲ ಹಾಗೂ ಸಾರ್ಸ್ ಸೋಂಕು ಹಾಗೂ ಏಡ್ಸ್ನಂತಹ ರೋಗಗಳನ್ನು ತಡೆಗಟ್ಟಬಲ್ಲಂತಹ ರೋಗ ನಿರೋಧಕವನ್ನು ಪತ್ತೆ ಹಚುವಲ್ಲಿ ಯಶಸ್ವಿಯಾಗಿರುವುದಾಗಿ ನ್ಯೂಯಾರ್ಕಿನ ರೆನ್ಸೆಲೀರ್ ಪಾಲಿಟೆಕ್ನಿಕ್ ಸಂಸ್ಥೆ ಪ್ರಕಟಿಸಿತು. ಸಂಸ್ಥೆಯ ರವಿಕಾನೆ ಮತ್ತು ಸಹೋದ್ಯೋಗಿಗಳು ಮೊದಲು ಈ ಮದ್ದನ್ನು ಇಲಿಗಳ ಮೇಲೆ ಪ್ರಯೋಗಿಸಿದ್ದು ಅವು ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಂಥ್ರಾಕ್ಸ್ ನಿಂದ ಪಾರಾದವು ಎಂದು ಬಿಬಿಸಿಯ ಆನ್ ಲೈನ್ ಸಂಚಿಕೆ ವರದಿ ಮಾಡಿತು.

2006: ಖ್ಯಾತ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಆಟಗಾರ ಕರ್ನಾಟಕದ ಪಂಕಜ್ ಅಡ್ವಾಣಿ ಅವರಿಗೆ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರು ನವದೆಹಲಿಯಲ್ಲಿ ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿ ಪ್ರದಾನ ಮಾಡಿದರು.

2006: ಜಪಾನಿನ ರಕ್ಷಣೆ, ಪಶ್ಚಿಮ ಫೆಸಿಫಿಕ್ನ ಸ್ಥಿರತೆ ಹಾಗೂ ಶಾಂತಿಗೆ ಶ್ರಮಿಸುವ ಉದ್ದೇಶದೊಂದಿಗೆ ಅಮೆರಿಕದ ಕ್ಷಿಪಣಿ ನಿರೋಧಕ ಯುದ್ಧ ನೌಕೆ `ಯುಎಸ್ಎಸ್ ಶಿಲೋಹ್' ಜಪಾನಿನ ಯೊಕೊಸುಕಾ ಬಂದರಿಗೆ ಆಗಮಿಸಿತು. 360 ಸಿಬ್ಬಂದಿಯನ್ನು ಹೊಂದಿರುವ ಈ ನೌಕೆಯ ತೂಕ 10,000 ಟನ್ನುಗಳು. ನೌಕೆಯಿಂದ ಆಕಾಶಕ್ಕೆ ಚಿಮ್ಮುವ ಎಸ್ ಎಂ -3 ಕ್ಷಿಪಣಿ ನಿರೋಧಕಗಳ ಮೂಲಕ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಈ ನೌಕೆ ಹೊಂದಿದೆ.

1994: ಖ್ಯಾತ ಪತ್ರಕರ್ತ ತುಷಾರ್ ಕ್ರಾಂತಿ ಘೋಷ್ ನಿಧನ.

1982: ಮಾತಾ ಆನಂದ ಮಯಿ ನಿಧನ.

1974: ಚೌಧರಿ ಚರಣ್ ಸಿಂಗ್ ಅಧ್ಯಕ್ಷತಯಲ್ಲಿ ಲೋಕದಳ ಅಸ್ತಿತ್ವಕ್ಕೆ.

1926: ರಾಜ್ಯ ಹಾಗೂ ರಾಷ್ಟ್ರೀಯ ನಾಯಕರಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ (29-8-1926ರಿಂದ 12-1-2004) ಅವರು 1926ರಲ್ಲಿ ಈದಿನ ಜನಿಸಿದರು. ಕರ್ನಾಟಕದ ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಮುಖ್ಯಮಂತ್ರಿಯಾದ ಹೆಗಡೆ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅದಕ್ಕೆ ಮೊದಲು ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಸರ್ಕಾರಗಳಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ್ದರು. ಐದು ದಶಕಗಳ ಕಾಲ ರಾಷ್ಟ್ರ ಹಾಗೂ ರಾಜ್ಯದ ರಾಜಕೀಯ ರಂಗದಲ್ಲಿ ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಹೆಗಡೆ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಕೇಂದ್ರ ಸರ್ಕಾರದಲ್ಲಿ ವಾಣಿಜ್ಯ ಸಚಿವರಾಗಿದ್ದರು.

1915: ಸಾಹಿತಿ ಗುರುದೇವಿ ಹಿರೇಮಠ ಜನನ.

1913: ಸಾಹಿತ್ಯವಲಯದಲ್ಲಿ ಎನ್ಕೆ ಎಂದೇ ಖ್ಯಾತರಾದ ಎನ್ಕೆ ಕುಲಕರ್ಣಿ (20-8-1913ರಿಂದ 23-4-2005) ಅವರು ಕೃಷ್ಣರಾವ್ ನರಸಿಂಹ ಕುಲಕರ್ಣಿ - ಸೋನಕ್ಕ ದಂಪತಿಯ ಮಗನಾಗಿ ಗದಗದಲ್ಲಿ ಜನಿಸಿದರು. ಧಾರವಾಡದ ಮಂದಿಗೆ `ನಾನೀಕಾಕ' ಎಂದೇ ಆತ್ಮೀಯರಾಗಿದ್ದ ಎನ್ಕೆ ಹಾಸ್ಯ ಪ್ರಹಸನ, ಕಾದಂಬರಿ, ನಗೆ ಲೇಖನ, ಲಲಿತ ಪ್ರಬಂಧ, ಜೀವನ ಚರಿತ್ರೆ ಇತ್ಯಾದಿ ವೈವಿಧ್ಯಮಯ ಬರವಣಿಗೆಯ ಕೃಷಿ ನಡೆಸಿದವರು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ, ಕೇಂದ್ರ ಸರ್ಕಾರದ ಬಹುಮಾನ, ಸಾಹಿತ್ಯ ಪರಿಷತ್ತಿನ ಸುವರ್ಣ ಮಹೋತ್ಸವ ಪ್ರಶಸ್ತಿ, ಪ್ರೊ. ಸ.ಸ. ಮಾಳವಾಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೋರೂರು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರಿಗೆ ಲಭಿಸಿವೆ.
1905: ಭಾರತದ ಖ್ಯಾತ ಹಾಕಿ ಆಟಗಾರ ಧ್ಯಾನ್ ಚಂದ್ (1905-1979) ಜನ್ಮದಿನ. ಇವರ ಜನ್ಮದಿನವನ್ನು ಭಾರತದ್ಲಲಿ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತದೆ. ಇವರ ಹಾಕಿ ಆಟದ ಕೌಶಲ್ಯಗಳು ಮ್ಯಾಜಿಕ್ಕಿನಂತೆ ಭಾಸವಾಗುತ್ತಿದ್ದವು. ವಿದೇಶೀ ತಂಡಗಳು ಅವರ ಹಾಕಿ ಸ್ಟಿಕ್ಕಿನಲ್ಲಿ `ಅಯಸ್ಕಾಂತ' ಮತ್ತು `ಗೋಂದು/ ಮರವಜ್ರ'ಕ್ಕಾಗಿ ತಡಕಾಟ ನಡೆಸಿದ್ದೂ ಉಂಟು. 1936ರ ಬಲರ್ಿನ್ ಒಲಿಂಪಿಕ್ಸ್ ಬಳಿಕ ಜರ್ಮನಿಗೆ ವಲಸೆ ಬಂದದ್ದೇ ಆದರೆ ಕರ್ನಲ್ ಹುದ್ದೆ ನೀಡುವುದಾಗಿ ಹಿಟ್ಲರ್ ಅವರಿಗೆ ಆಹ್ವಾನ ಕೂಡಾ ನೀಡಿದ್ದ.

1896: ಅಮೆರಿಕಕ್ಕೆ ಭೇಟಿ ನೀಡಿದ ಚೀನಾದ ರಾಯಭಾರಿ ಲಿ ಹಂಗ್-ಚಾಂಗ್ ಅವರಿಗಾಗಿ ಚೀನಾ- ಅಮೆರಿಕದ `ಚಾಪ್-ಸ್ವೇ' ಹೆಸರಿನ ಹೊಚ್ಚ ಹೊಸ ಭಕ್ಷ್ಯವನ್ನು ನ್ಯೂಯಾರ್ಕ್ ನಗರದಲ್ಲಿ ತಯಾರಿಸಲಾಯಿತು.

1882: ಲಂಡನ್ನಿನ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾವು ಇಂಗ್ಲೆಂಡನ್ನು ಮೊದಲ ಬಾರಿಗೆ ಸೋಲಿಸಿತು. ಈ ಪಂದ್ಯವನ್ನು `ಆಷಸ್ ಟೆಸ್ಟ್' (ಬೂದಿ ಪಂದ್ಯ!) ಎಂದು ಕರೆಯಲಾಯಿತು. ಪಂದ್ಯ ಮುಗಿದ ಒಂದು ದಿನದ ಬಳಿಕ `ಸ್ಪೋರ್ಟಿಂಗ್ ಟೈಮ್' ಪತ್ರಿಕೆ `ಇನ್ ಮೆಮೋರಿಯಮ್' ವಿಭಾಗದಲ್ಲಿ ಇಂಗ್ಲಿಷ್ ಕ್ರಿಕೆಟ್ಟಿನ ಸಾವು ಕುರಿತ ಪ್ರಕಟಣೆಯನ್ನು ಪ್ರಕಟಿಸಿತು. `ಶವವನ್ನು ದಹಿಸಲಾಯಿತು ಮತ್ತು ಭಸ್ಮವನ್ನು ಆಸ್ಟ್ರೇಲಿಯಾಕ್ಕೆ ಒಯ್ಯಲಾಯಿತು' ಎಂದು ಅದು ಬರೆದಿತ್ತು.

1842: `ನಾನ್ ಕಿಂಗ್ ಒಪ್ಪಂದ'ದ ಮೂಲಕ ಚೀನಾ ಮತ್ತು ಬ್ರಿಟನ್ ಮಧ್ಯೆ ನಡೆಯುತ್ತಿದ್ದ ವ್ಯಾಪಾರಿ ಘರ್ಷಣೆ ಕೊನೆಗೊಂಡಿತು. ಈ ಘರ್ಷಣೆ ಮೊದಲ `ಅಫೀಮು ಯುದ್ಧ' (1839-42) ಎಂದೇ ಖ್ಯಾತಿ ಪಡೆದಿತ್ತು. ಒಪ್ಪಂದದ ಷರತ್ತುಗಳ ಪ್ರಕಾರ ಚೀನಾವು ಹಾಂಕಾಂಗ್ ಭೂಪ್ರದೇಶವನ್ನು ಬಿಟ್ಟು ಕೊಟ್ಟದ್ದಲ್ಲದೆ, ಐದು ಬಂದರುಗಳಲ್ಲಿ ವ್ಯಾಪಾರ ನಡೆಸಲು ಬ್ರಿಟಿಷರಿಗೆ ಅವಕಾಶ ನೀಡಿತು. ಒಪ್ಪಂದಕ್ಕೆ ಎಚ್ ಎಂಎಸ್ ಕಾರ್ನವಾಲಿಸ್ ಹಡಗಿನಲ್ಲಿ ಸಹಿ ಮಾಡಲಾಯಿತು. ಈ ಹಡಗನ್ನು 19ನೇ ಶತಮಾನದಲ್ಲಿ ಭಾರತದಲ್ಲಿ ಖ್ಯಾತಿ ಪಡೆದಿದ್ದ ಮುಂಬೈಯ ವಾಡಿಯಾಸ್ ಹಡಗು ನಿರ್ಮಾಣ ಸಂಸ್ಥೆ ಬಾಂಬೆ ಡಾಕ್ಸ್ ನಿರ್ಮಿಸಿತ್ತು.

1831: ಮೂಲ ವಿದ್ಯುತ್ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಸಮಬಲದ ಎರಡನೇ ಸರ್ಕಿಟ್ ವಿದ್ಯುತ್ ಪ್ರವಾಹ ಕುರಿತ ತನ್ನ ಸಂಶೋಧನೆಗಳನ್ನು ಮೈಕೆಲ್ ಫ್ಯಾರಡೆ ನಡೆಸಿದ. ಈ ವರ್ಷದಲ್ಲೇ ನಂತರ ಅಯಸ್ಕಾಂತ (ಮ್ಯಾಗ್ನೆಟ್) ಬಳಸಿ ನಡೆದ ಪ್ರಯೋಗಗಳು ಮೊತ್ತ ಮೊದಲ `ಡೈನಮೊ' ಅಭಿವೃದ್ಧಿಗೆ ದಾರಿ ಮಾಡಿಕೊಟ್ಟವು.

No comments:

Advertisement