My Blog List

Thursday, September 25, 2008

ಸಮುದ್ರಮಥನ 3: ಹಿತ ಆಹಾರವೆಂದರೇನು?

ಸಮುದ್ರಮಥನ 3: ಹಿತ ಆಹಾರವೆಂದರೇನು?

'ನಚೈವಾತ್ಯಶನಂ ಕುರ್ಯಾತ್'. ಅಂದರೆ ಅತ್ಯಶನ-ಹೆಚ್ಚಿಗೆ ಆಹಾರ ಸೇವನೆಯನ್ನೂ ಮಾಡಬೇಡಿ. ಅನಶನ- ಆಹಾರವಿಲ್ಲದಂತೆಯೂ ಇರಬೇಡಿ. ಒಟ್ಟಾರೆ ಕಡಿಮೆ, ಹೆಚ್ಚು ಎರಡೂ ಆಗದಂತೆ ಆಹಾರವನ್ನು ಸ್ವೀಕರಿಸಬೇಕು. ಅದೂ ತಪಸ್ಸಿನ ಒಂದು ಭಾಗ. 

ಹಿಂದಿನ ಸಂಚಿಕೆಯಲ್ಲಿ ಹೇಳಿದ ಹಿತ ಆಹಾರದ ಬಗ್ಗೆಯೇ ಈ ಸಂಚಿಕೆಯಲ್ಲೂ ಮುಂದುವರಿಸುತ್ತೇವೆ.

ಈ ಹಿತ ಅನ್ನುವುದಕ್ಕೆ ಸಾಕಷ್ಟು ಅರ್ಥವಿದೆ. ಎಲ್ಲರೂ ಎಲ್ಲವೂ ಹಿತವಾಗಿರಬೇಕು, ಅಮೃತವಾಗಿರಬೇಕು ಎಂದು ಬಯಸುವುದು ಮನುಷ್ಯ ಸಹಜ ಬಯಕೆ. ಆಹಾರವೂ ಇದಕ್ಕೆ ಹೊರತಲ್ಲ. ಅದು ಹಿತ-ಮಿತವಾಗಿರಬೇಕು ಎನ್ನುವುದನ್ನು ಕೇಳಿದ್ದೇವೆ. 

ಮಿತ ಅಂದರೆ ವ್ಯಾವಹಾರಿಕವಾಗಿ ನಾವು ತಿಳಿದುಕೊಂಡದ್ದು ಕಡಿಮೆ ಎಂದು. ನೋಡಿ ಬೇಕಿದ್ದರೆ, ಬಹಳ ಕಡಿಮೆ ಮಾತನಾಡುವವರನ್ನು `ಅವನು ಮಿತ ಭಾಷಿ' ಎನ್ನುತ್ತೇವೆ. ಕಡಿಮೆ ಉಂಡರೆ ಮಿತವಾಗಿ ಊಟಮಾಡಿದ ಎನ್ನುತ್ತೇವೆ. ಆದರೆ ಮಿತ ಅಂದರೆ ಕಡಿಮೆ ಎಂದೇನೂ ಅಲ್ಲ. ಆ ಶಬ್ದಕ್ಕೆ ಸಂಸ್ಕೃತ ವ್ಯಾಕರಣದಲ್ಲಿ ಬೇರೆಯದೇ ಆದ ಅರ್ಥವಿದೆ. `ಮಾ' ಅಂತ ಒಂದು ಧಾತು. ಅದರರ್ಥ ಅಳತೆ ಎಂದು. ಮಿತ ಅಂದ್ರೆ ತೂಗಿದ್ದು, ಅಳತೆ ಮಾಡಿದ್ದು ಎಂದು. 

ನಾವಾಡುವ ಮಾತು ತೂಗಿದ್ದಾಗಿರಬೇಕು, ನಾವುಣ್ಣುವ ಊಟ ತೂಗಿದ್ದಾಗಿರಬೇಕು. ತೂಗಿದ್ದು ಅಂದ್ರೆ ಕಡಿಮೆಯೂ ಇಲ್ಲ, ಹೆಚ್ಚೂ ಇಲ್ಲದಂತೆ ಅಳತೆಯ ಪ್ರಕಾರ ತೆಗೆದಿಟ್ಟದ್ದು. ಅಂದರೆ ಪ್ರತಿ ದಿನವೂ ನಿಗದಿತ ಪ್ರಮಾಣದ ಅಹಾರವನ್ನಷ್ಟೇ ಸೇವಿಸಬೇಕು. ಆಗ ಅದು ಮಿತಾಹಾರವಾಗುತ್ತದೆ. 

ತೂಕಮಾಡುವಾಗ ಸ್ವಲ್ಪ ಕಡಿಮೆ ಇದ್ದರೂ ತೂಕತಪ್ಪಿತು ಎನ್ನುತ್ತೇವೆ, ಹಾಗೆಯೇ ಹೆಚ್ಚಿದ್ದರೂ ಹೇಳುತ್ತೇವೆ. 'ನಚೈವಾತ್ಯಶನಂ ಕುರ್ಯಾತ್'. ಅಂದರೆ ಅತ್ಯಶನ-ಹೆಚ್ಚಿಗೆ ಆಹಾರ ಸೇವನೆಯನ್ನೂ ಮಾಡಬೇಡಿ. ಅನಶನ- ಆಹಾರವಿಲ್ಲದಂತೆಯೂ ಇರಬೇಡಿ. ಒಟ್ಟಾರೆ ಕಡಿಮೆ, ಹೆಚ್ಚು ಎರಡೂ ಆಗದಂತೆ ಆಹಾರವನ್ನು ಸ್ವೀಕರಿಸಬೇಕು. ಅದೂ ತಪಸ್ಸಿನ ಒಂದು ಭಾಗ. 

'ಹಿತಮಿತಮೇಧ್ಯಾಶನಂ' ಅಂದರೆ ಮೊದಲನೆಯದು ದೇಹಕ್ಕೆ ಹಿತವಾಗುವ ಆಹಾರವನ್ನು ಸೇವಿಸಬೇಕು. ಎರಡನೆಯದು ಮಿತವಾದ ಆಹಾರ ಸೇವಿಸಬೇಕು. ಇನ್ನು ಮೇಧ್ಯ ಅಂದರೆ ಏನೆಂಬುದನ್ನು ಮುಂದೆ ನೋಡೋಣ.

-ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ,

ಶ್ರೀ ರಾಮಚಂದ್ರಾಪುರ ಮಠ
 

No comments:

Advertisement