ಗ್ರಾಹಕರ ಸುಖ-ದುಃಖ

My Blog List

Friday, October 31, 2008

ಕುಲಾಂತರಿ ಅವಾಂತರ: ಆರೋಗ್ಯ ಸಚಿವರ ಬೆನ್ನು ಹತ್ತಿ...!

ಕುಲಾಂತರಿ ಅವಾಂತರ:

 ಆರೋಗ್ಯ ಸಚಿವರ ಬೆನ್ನು ಹತ್ತಿ...!



ಕುಲಾಂತರಿ ಬೆಳೆಗಳ ಅವಾಂತರದಿಂದ ನಮ್ಮ ಆಹಾರದ ಬಟ್ಟಲು ವಿಷಮಯವಾಗುತ್ತಿರುವ ಬಗ್ಗೆ ಜನ ಜಾಗೃತಿಗಾಗಿ ಗ್ರೀನ್ ಪೀಸ್ ಸಂಘಟನೆಯು 'ಸಹಜ ಸಮೃದ್ಧ' ಸಾವಯವ ಕೃಷಿಕರ ಬಳಗ ಹಾಗೂ 'ಸಂವಾದ' ಸಂಸ್ಥೆಯ ಜತೆಗೂಡಿ `ನಾನು ಪ್ರಯೋಗ ಜೀವಿ ಅಲ್ಲ' (ಐ ಆಮ್ ನೋ ಲ್ಯಾಬ್ ರಾಟ್) ಚಳವಳಿ ರೂಪಿಸಿದೆ. ಈ ಬಗ್ಗೆ ಆನಂದ ತೀರ್ಥ ಪ್ಯಾಟಿ ಬರೆದ ಲೇಖನದ ಪ್ರಮುಖ ಅಂಶಗಳನ್ನು ಸಹಜ ಸಮೃದ್ಧದ ಕೃಷ್ಣ ಪ್ರಸಾದ್ 'ಪರ್ಯಾಯ'ಕ್ಕೆ ಕಳುಹಿಸಿದ್ದಾರೆ. ಇದನ್ನು ಓದಿದರಷ್ಟೇ ಸಾಲದು ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ನಮ್ಮ 'ಅನ್ನದ ಬಟ್ಟಲು' ರಕ್ಷಣೆಗೆ ಇಳಿದರೆ ಈ ಲೇಖನ ಓದಿದ್ದಕ್ಕೆ ಸಾರ್ಥಕ.
 
`ಭಾರತದಲ್ಲಿ 2000ರಲ್ಲಿ 44 ದಶಲಕ್ಷ ಟನ್ ಆಹಾರಧಾನ್ಯ ಸರ್ಕಾರದ ಉಗ್ರಾಣಗಳಲ್ಲಿ ಉಳಿದಿತ್ತು. 2002ರ ಹೊತ್ತಿಗೆ ಇದರ ಪ್ರಮಾಣ 65 ದಶಲಕ್ಷ ಟನ್ನುಗಳಿಗೆ ಏರಿತು. ಆದರೆ, ಇದು ಉತ್ಪಾದನೆಯ ಹೆಚ್ಚಳದಿಂದಲ್ಲ; ಬದಲಾಗಿ ಆಹಾರಧಾನ್ಯ ಖರೀದಿಸುವಷ್ಟು ಹಣ ಜನರ ಕೈಯಲ್ಲಿ ಇರಲಿಲ್ಲ. ಅದಕ್ಕಾಗಿ ಅಷ್ಟೊಂದು ಪ್ರಮಾಣದ ಆಹಾರ ಉಗ್ರಾಣದಲ್ಲಿ ಕೊಳೆಯುತ್ತ ಬಿದ್ದಿತ್ತು..'

ಕೃಷಿ ಆರ್ಥಿಕ ತಜ್ಞ ದೇವಿಂದರ್ ಶರ್ಮಾ ಅವರ ಈ ವಿಶ್ಲೇಷಣೆಯು ಒಂದೆಡೆ ನಮ್ಮ ದೇಶದ ಜನರ ಹಸಿವನ್ನು ಅನಾವರಣ ಮಾಡುತ್ತದೆ. ಇನ್ನೊಂದೆಡೆ ಆಹಾರ ಧಾನ್ಯ ಉತ್ಪಾದನೆ ಹೆಚ್ಚಿಸುವ ಕೃಷಿ ವಿವಿ, ಸಂಶೋಧನಾ ಕೇಂದ್ರಗಳ ಪೊಳ್ಳುತನ ಬಿಚ್ಚಿಡುತ್ತದೆ.

ಕೋಟಿಗಟ್ಟಲೆ ಹಣ ಸುರಿದು ಮಾಡುವ ಸಂಶೋಧನೆಗಳ ಲಾಭವೆಲ್ಲ ಬಹುರಾಷ್ಟ್ರೀಯ ಕಂಪೆನಿಗಳ ಬೊಕ್ಕಸ ತುಂಬಿಸುತ್ತವೆಯೇ ಹೊರತು, ಬಡವರಿಗೆ ಕಡಿಮೆ ವೆಚ್ಚದಲ್ಲಿ ಒಂದು ಹಿಡಿ ಆಹಾರ ನೀಡುವುದಕ್ಕಲ್ಲ ಎಂಬುದು ಸಾಬೀತಾಗುತ್ತಲೇ ಇರುತ್ತದೆ. ಈ ಸಾಲಿಗೆ ಈಗ ಸೇರ್ಪಡೆಯಾಗಿದೆ- `ಕುಲಾಂತರಿ ಆಹಾರ' (ಜೆನಿಟಿಕಲಿ ಮಾಡಿಫೈಡ್ ಫುಡ್- ಜಿ.ಎಂ. ಫುಡ್).

ವಿದೇಶಗಳಲ್ಲಿ ಈಗಾಗಲೇ ಹುಯಿಲೆಬ್ಬಿಸಿರುವ `ಕುಲಾಂತರಿ ಆಹಾರ' ಇನ್ನೇನು ಭಾರತದ ಮಾರುಕಟ್ಟೆಗೆ- ತನ್ಮೂಲಕ ನಮ್ಮ ಅಡುಗೆ ಮನೆಗಳಿಗೂ- ದಾಳಿಯಿಡಲು ಸಿದ್ಧವಾಗಿದೆ. 'ಕುಲಾಂತರಿ ಬೆಳೆ ಮಾನವನ ಆರೋಗ್ಯಕ್ಕೆ ಅಷ್ಟೇ ಅಲ್ಲ ಪರಿಸರದ ಆರೋಗ್ಯಕ್ಕೂ ಹಾನಿಕರ' ಎಂಬ ವಾದದೊಂದಿಗೆ ಹಲವು ಸ್ವಯಂಸೇವಾ ಸಂಸ್ಥೆಗಳು ಹೋರಾಟದ ಅಖಾಡಕ್ಕೆ ಇಳಿದಿವೆ. `ಇದರಿಂದ ಅಂಥ ಅಪಾಯವೇನೂ ಇಲ್ಲ ಬಿಡಿ' ಎನ್ನುತ್ತಾರೆ, ಕುಲಾಂತರಿ ಬೆಳೆ ಸೃಷ್ಟಿಸುವ ದೈತ್ಯ ಕಂಪೆನಿಗಳ ವಿಜ್ಞಾನಿಗಳು.

ಒಂದರದ್ದು ಇನ್ನೊಂದಕ್ಕೆ!

ಹಾಗೆ ನೋಡಿದರೆ, ಒಂದು ಜೀವಿಯ ಕೋಶದ ಬೀಜಕೇಂದ್ರ (ನ್ಯೂಕ್ಲಿಯಸ್)ದಲ್ಲಿರುವ ವಂಶವಾಹಿಯನ್ನು (ಜೀನ್) ಇನ್ನೊಂದು ಜೀವಿಗೆ ಸೇರಿಸುವ ಈ ಪ್ರಕ್ರಿಯೆ ತುಂಬ ಕುತೂಹಲವಾದದ್ದೇ. ಇಲ್ಲಿ ವಿಜ್ಞಾನಿಗಳು ಮಾಡುವುದೇನೆಂದರೆ- ಬ್ಯಾಕ್ಟೀರಿಯಾ, ವೈರಸ್, ಜೇಡ, ಚೇಳು ಮತ್ತಿತರ ಜೀವಿಗಳಿಂದ ವಂಶವಾಹಿಗಳನ್ನು ಹೊರತೆಗೆದು ಬದನೆ, ಆಲೂಗಡ್ಡೆ, ಮೆಕ್ಕೆಜೋಳದಂಥ ಬೆಳೆಗಳ ವಂಶವಾಹಿಯೊಳಗೆ ಬಲವಂತದಿಂದ ಸೇರಿಸುತ್ತಾರೆ. ಇದರಿಂದಾಗಿ, ಸೇರ್ಪಡೆ ಮಾಡುವ ವಂಶವಾಹಿಯ ಕೆಲವು ವಿಶೇಷ ಗುಣ- ಸ್ವಭಾವಗಳು ಬೆಳೆಗೆ ವರ್ಗಾವಣೆಯಾಗುತ್ತವೆ. ಆದರೆ ಈ ವಿಧಾನ ಸುಲಭದ್ದೇನಲ್ಲ. ಲಕ್ಷಾಂತರ ಡಾಲರ್ ಖರ್ಚು.

ಕೃಷಿಕರ ಉದ್ಧಾರದ ಹೆಸರಿನಲ್ಲಿ ಶುರುವಾದ 'ಕುಲಾಂತರಿ ತಂತ್ರಜ್ಞಾನ' ವಹಿವಾಟು ಈಗ ಕೋಟಿ- ಕೋಟಿ ಡಾಲರ್ ತಲುಪಿದೆ. ಆದರೆ ಇದರಿಂದ ರೈತರಿಗೆ ಪ್ರಯೋಜನವೇನಾದರೂ ಆಗಿದೆಯೇ?

ಸಾಕಷ್ಟು ಪರೀಕ್ಷೆಗೆ ಒಳಪಡಿಸದೇ 'ಕುಲಾಂತರಿ ಆಹಾರ' ಮಾರುಕಟ್ಟೆಗೆ ಬಿಡುವುದೇ ತಪ್ಪು. ಮಾನವ ಹಾಗೂ ಪರಿಸರದ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುವ ಅನೇಕ ಶಂಕೆಗಳಿಗೆ ವಿಜ್ಞಾನಿಗಳು ಸ್ಪಷ್ಟ ಉತ್ತರ ನೀಡದೇ ಈ ಆಹಾರ ಅಡುಗೆ ಮನೆ ಸೇರಬಾರದು ಎಂದು ಜಗತ್ತಿನ ವಿವಿಧ ಪರಿಸರಪರ ಸಂಘಟನೆಗಳು ಆಪ್ಷೇಪದ ದನಿಯೆತ್ತಿವೆ.

`ಕೃಷಿ ಉತ್ಪನ್ನ ಹೆಚ್ಚಳಕ್ಕೆ ಬಿ.ಟಿ ಅಥವಾ ಜಿ.ಎಂ. ತಂತ್ರಜ್ಞಾನ ಉತ್ತರವಲ್ಲ. ಭಾರತದಂಥ ಸಮಶೀತೋಷ್ಣ ವಲಯದ ದೇಶಗಳಲ್ಲಿ ವ್ಯವಸಾಯ ನಾನಾ ಅಂಶಗಳನ್ನು ಅವಲಂಬಿಸಿದೆ. ಆಯಾ ಭಾಗದ ವಾತಾವರಣ, ನೀರಾವರಿ ಲಭ್ಯತೆ, ಮಳೆ ಪ್ರಮಾಣ, ತೇವಾಂಶ ಪ್ರಮಾಣ, ಮಣ್ಣಿನ ಗುಣಧರ್ಮ, ರೈತರ ಸಾಂಪ್ರದಾಯಿಕ ಜ್ಞಾನ ಹಾಗೂ ಬೆಳೆಗೆ ಬರುವ ಕೀಟ- ರೋಗ ಬಾಧೆ ಇನ್ನಿತರ ಅಂಶಗಳ ಮೇಲೆ ಆಯಾ ಪ್ರದೇಶದ ಕೃಷಿ ವ್ಯವಸ್ಥೆ ರೂಪಗೊಂಡಿದೆ' ಎನ್ನುತ್ತಾರೆ ದೇವಿಂದರ್ ಶರ್ಮಾ. ಸಾಕಷ್ಟು ವಿರೋಧದ ಮಧ್ಯೆಯೂ ಆಂಧ್ರದಲ್ಲಿ ಬಿ.ಟಿ. ಹತ್ತಿ ಬೆಳೆದಾಗ ಆರಂಭದಲ್ಲಿ (2002-03) ಇಳುವರಿ ಹೆಚ್ಚು ಪಡೆದರೂ, ನಂತರದ ಒಂದೆರಡು ವರ್ಷಗಳಲ್ಲಿ ಶೇ 71ರಷ್ಟು ರೈತರು ಇಳುವರಿ ಕುಸಿತದಿಂದ ನಷ್ಟ ಅನುಭವಿಸಿದರು. ತಂತ್ರಜ್ಞಾನವನ್ನು ರೈತರ ಮೇಲೆ ಹೇರುವವರಿಗೆ ಇದು ಪಾಠವಾಗಬೇಕು ಎಂದು ಶರ್ಮಾ ಹೇಳುತ್ತಾರೆ.

ನೂರಾರು ವರ್ಷಗಳಿಂದ ರೈತರು ಜತನದಿಂದ ಕಾಪಾಡಿಕೊಂಡು ಬಂದಿರುವ ಅಗಾಧ ಪ್ರಮಾಣದ ಬೀಜ ವೈವಿಧ್ಯ ಕಣ್ಮರೆಯಾಗುವುದು ಕುಲಾಂತರಿ ತಂತ್ರಜ್ಞಾನ ಒಡ್ಡಿರುವ ದೊಡ್ಡ ಅಪಾಯ. ನಿಸರ್ಗದಲ್ಲಿ ಕೋಟಿಗಟ್ಟಲೇ ವರ್ಷಗಳಿಂದ ವ್ಯವಸ್ಥಿತವಾಗಿ ರೂಪುಗೊಳ್ಳುತ್ತ ಬಂದ ಜೀವಜಾಲವನ್ನು ನಮಗೆ ಬೇಕಾದ ಹಾಗೆ ಮಾರ್ಪಡಿಸಿಕೊಳ್ಳುವ ನೈತಿಕ ಹಕ್ಕು ನಮಗಿದೆಯೇ? ಎಂಬ ಪ್ರಶ್ನೆ ನಮ್ಮ ಮುಂದಿದೆ. ಮಾನವನ ಹಸ್ತಕ್ಷೇಪದಿಂದ ಆಗುವ ಸಣ್ಣ ತಪ್ಪು ಕೂಡ ಪ್ರಕೃತಿಗೆ ದೊಡ್ಡ ಅನಾಹುತವನ್ನೇ ತಂದೊಡ್ಡಬಹುದು.

ಆರೋಗ್ಯಕ್ಕೆ...

ಒಂದು ಜೀವಿಯ ವಂಶವಾಹಿಯನ್ನು ಬೇರೊಂದು ಜೀವಿಗೆ ಸೇರಿಸಿದಾಗ, ಅದು ಇಡೀ ವರ್ಣತಂತುವಿನ ವ್ಯವಸ್ಥೆಯನ್ನೇ ಹಾಳುಗೆಡವುತ್ತದೆ. ಈ 'ತಂತ್ರ' ಅನುಸರಿಸಿ ತಯಾರಿಸುವ ಆಹಾರವು ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಕೆಲವು ವಿಜ್ಞಾನಿಗಳೇ ಅಪಸ್ವರ ಎತ್ತಿದ್ದಾರೆ. ಪ್ರಯೋಗಾಲಯದಲ್ಲಿ ಇಲಿಗಳಿಗೆ ಜಿ.ಎಂ. ಆಹಾರ ತಿನ್ನಿಸಿದ ಬಳಿಕ ಅವುಗಳ ದೇಹದಲ್ಲಿ ವಿಪರೀತ ಎನ್ನುವಂಥ ಬದಲಾವಣೆ ಕಂಡುಬಂದಿದೆ. ಬೆಳವಣಿಗೆಯಲ್ಲಿ ಕುಂಠಿತ, ರೋಗನಿರೋಧಕ ಶಕ್ತಿ ಕುಸಿತ, ಕರುಳಿನಲ್ಲಿ ಕ್ಯಾನ್ಸರ್ ಕೋಶಗಳು ಬೆಳೆದಿದ್ದು, ಶ್ವಾಸಕೋಶ ಹಾಗೂ ಮೂತ್ರಪಿಂಡದ ಕೋಶಗಳಲ್ಲಿ ಊತ, ಕುಂದಿದ ಮಿದುಳಿನ ಕಾರ್ಯಕ್ಷಮತೆ, ಯಕೃತ್ತಿನ ತೊಂದರೆಯಂಥ ಸಮಸ್ಯೆಗಳು ಇಲಿಗಳಲ್ಲಿ ಉದ್ಭವಿಸಿವೆ.

ಕೇವಲ ಇಳುವರಿ ಹೆಚ್ಚಳ ಅಥವಾ ರೋಗ- ಕೀಟ ನಿರೋಧಕ ಶಕ್ತಿ ನೀಡುವ ತಂತ್ರಜ್ಞಾನ ಬಳಸಿ, ತಯಾರಿಸಲಾದ ಆಹಾರ ಮಾನವನ ಆರೋಗ್ಯಕ್ಕೆ ಪೂರಕವಾದೀತೆ? ಪರಿಸರದ ಮೇಲಾಗುವ ಅಡ್ಡಪರಿಣಾಮಗಳಿಗೆ ಪರಿಹಾರ ಏನು?

'ನಾನು ಪ್ರಯೋಗ ಜೀವಿಯಲ್ಲ'

ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡೇ GM Free India `ಜಿ.ಎಂ. ಆಹಾರ'ದ ವಿರುದ್ಧ ದನಿಯೆತ್ತಿದೆ. ಈಗಾಗಲೇ ಕೇರಳ, ಉತ್ತರಾಂಚಲ ಹಾಗೂ ಒರಿಸ್ಸಾದಲ್ಲಿ ಅಲ್ಲಿನ ಸರ್ಕಾರಗಳು 'ಕುಲಾಂತರಿ ಬೆಳೆಗೆ ಅವಕಾಶ ಕೊಡುವುದಿಲ್ಲ' ಎಂದು ಘೋಷಿಸಿವೆ. ಉತ್ತರ ಪ್ರದೇಶ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರದ ಕೆಲವು ಗ್ರಾಮಗಳ ಪಂಚಾಯತಿಗಳು 'ಕುಲಾಂತರಿ ಬೆಳೆ ನಿಷೇಧಿತ ಪ್ರದೇಶ' ಎಂದು ಘೋಷಿಸಿಕೊಂಡಿವೆ. ಪಶ್ಚಿಮ ಬಂಗಾಳದ ಕೃಷಿ ಆಯೋಗವು 'ಕುಲಾಂತರಿ ಬೆಳೆ ಪ್ರಯೋಗಕ್ಕೆ ಅವಕಾಶ ನೀಡಬಾರದು' ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಬಿ.ಟಿ. ಬದನೆ ನಮ್ಮ ದೇಶದ ರೈತರ ಹೊಲಕ್ಕೆ ಬರಲು ಸಿದ್ಧವಾಗಿದೆ. ಅದರ ಬಳಿಕ ಆಲೂ, ನಂತರ ಟೊಮ್ಯಾಟೊ, ಪಪ್ಪಾಯ, ಮೆಕ್ಕೆಜೋಳ, ಸೋಯಾ ಇನ್ನಿತರ ಬಿ.ಟಿ. ಬೆಳೆ ಸಾಲಾಗಿ ನಿಂತಿವೆ. 'ಕುಲಾಂತರಿ ಆಹಾರ'ದ ಸುರಕ್ಷತೆ ಬಗ್ಗೆ ಪ್ರಯೋಗಾಲಯದಲ್ಲಿ ಇಲಿಗಳ ಮೇಲೆ ಪರೀಕ್ಷೆ ನಡೆಸಲಾಗುತ್ತದೆ. ಈಗ ಅದಕ್ಕೆಲ್ಲ ಸಮಯವಿಲ್ಲ. ಅತ್ಯವಸರದಲ್ಲಿ ಪರೀಕ್ಷೆ ನಡೆಸಿ, ಅಡಿಗೆ ಮನೆಗೆ ಕುಲಾಂತರಿ ಆಹಾರ ರವಾನಿಸಲು ಸಿದ್ಧತೆ ನಡೆದಿದೆ. ಇದನ್ನೇ ಸಂಕೇತವಾಗಿಸಿ, 'ನಾನು ಪ್ರಯೋಗ ಜೀವಿ ಅಲ್ಲ' ಎಂಬ ಆಂದೋಲನವನ್ನು ಭಾರತದಲ್ಲಿ ಆರಂಭಿಸಲಾಗಿದೆ..

ಮಳೆ ಕೊರತೆ, ಬರ, ಸ್ಥಳೀಯ ವಾತಾವರಣಕ್ಕೆ ತಕ್ಕಂತೆ ನೂರಾರು ವರ್ಷಗಳಿಂದ ರೂಪುಗೊಂಡ ಸಾಂಪ್ರದಾಯಿಕ ಕೃಷಿ ಬೆಳೆ ಉಳಿಸಿಕೊಳ್ಳಬೇಕೇ ಹೊರತು, ರೈತರ ಪ್ರಗತಿ ನೆಪದಲ್ಲಿ ಕೋಟಿಗಟ್ಟಲೇ ಲಾಭ ಗಳಿಸುವ ಉದ್ದೇಶದ ಬಹುರಾಷ್ಟ್ರೀಯ ಕಂಪೆನಿಗಳ ತಂತ್ರಜ್ಞಾನ ನಮಗೇಕೆ ಬೇಕು? 

ನಮ್ಮ ನಾಡಿನಲ್ಲೂ

ವಿವಿಧ ರಾಜ್ಯಗಳಲ್ಲಿ ಆರಂಭವಾದ `ಕುಲಾಂತರಿ ವಿರೋಧಿ' ಆಂದೋಲನಕ್ಕೆ ಕರ್ನಾಟಕದಲ್ಲೂ ಚಾಲನೆ ದೊರೆತಿದೆ. ಗ್ರೀನ್ ಪೀಸ್ ಸಂಘಟನೆಯು 'ಸಹಜ ಸಮೃದ್ಧ' ಸಾವಯವ ಕೃಷಿಕರ ಬಳಗ ಹಾಗೂ 'ಸಂವಾದ' ಸಂಸ್ಥೆಯ ಜತೆಗೂಡಿ `ನಾನು ಪ್ರಯೋಗ ಜೀವಿ ಅಲ್ಲ' (ಐ ಆಮ್ ನೋ ಲ್ಯಾಬ್ ರಾಟ್) ಚಳವಳಿ ರೂಪಿಸಿದೆ.

 ಮೂರು ತಿಂಗಳ ಅವಧಿಯವರೆಗೆ ನಡೆಯುವ ಆಂದೋಲನದಲ್ಲಿ 'ಕುಲಾಂತರಿ ಬೆಳೆ' ತಂದೊಡ್ಡುವ ಅಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಕೇಂದ್ರ ಆರೋಗ್ಯ ಸಚಿವರಿಗೆ ಪ್ರತಿಭಟನೆಯ ಪತ್ರ ಕಳುಹಿಸಲಾಗುವುದು. ಈ ಚಳವಳಿಯಲ್ಲಿ ನೀವೂ ಪಾಲ್ಗೊಂಡು ಆರೋಗ್ಯ ಸಚಿವರಿಗೆ ಪ್ರತಿಭಟನೆಯ ಪತ್ರ ಕಳುಹಿಸಬಹುದು. 

ಹೌದು. ನಿಮ್ಮ ಆಹಾರದ ಬಟ್ಟಲು ರಕ್ಷಿಸಿಕೊಳ್ಳಬೇಕು ಎಂದಿದ್ದರೆ ತತ್ ಕ್ಷಣ ಈ ಕೆಳಗಿನ ವೆಬ್ ಸೈಟ್ ಸಂದರ್ಶಿಸಿ: 
Website: www.iamnolabrat.com (ಫೋನ್: 9880862058)

ನಿಮ್ಮ ಪ್ರತಿಭಟನೆ ದಾಖಲಿಸಿ.
 

No comments:

Advertisement