My Blog List

Saturday, November 8, 2008

ಇಂದಿನ ಇತಿಹಾಸ History Today ನವೆಂಬರ್ 08

ಇಂದಿನ ಇತಿಹಾಸ

ನವೆಂಬರ್ 8

ಇದು ಎಕ್ಸ್ ರೇ ಪತ್ತೆಯಾದ ದಿನ. 1895ರಲ್ಲಿ ವಿಲ್ಹೆಮ್ ರಾಂಟ್ಜೆನ್ ಗಾಳಿ ತೆಗೆದ ಗಾಜಿನ ಬಲ್ಬ್ ಮುಖಾಂತರ ಹೈ ವೋಲ್ಟೇಜ್ ಬೆಳಕು ಹಾಯಿಸುತ್ತಿದ್ದಾಗ ಅದರಿಂದ `ಅಪರಿಚಿತ ವಿಕಿರಣ' ಹೊರ ಹೊಮ್ಮುತ್ತಿದ್ದುದನ್ನು ಗಮನಿಸಿದ. ಈ ವಿಕಿರಣವು ಬೆಂಚಿನ ಮೇಲೆ ಇದ್ದ ಸಣ್ಣ ಬಾರಿಯಂ ಪ್ಲಾಟಿನೊಸಯನೈಡ್ ಪರದೆಯ ಮೇಲೆ ಹೊಳಪು ಮೂಡಿಸುತ್ತಿತ್ತು. ಅದು ಏನು ಎಂಬುದಾಗಿ ಗೊತ್ತಿಲ್ಲದೇ ಇದ್ದುದರಿಂದ ಆತ ಅದನ್ನು `ಎಕ್ಸ್ ರೇ' ಎಂಬುದಾಗಿ ಕರೆದ. ಆತನ ಗೌರವಾರ್ಥ ನಂತರ ಅದಕ್ಕೆ `ರಾಂಟ್ಜೆನ್ ಕಿರಣ' ಎಂಬುದಾಗಿ ಪುನರ್ ನಾಮಕ
ರಣ ಮಾಡಲಾಯಿತು. (ಆತನ ಪತ್ನಿಯ ತೋಳನ್ನೇ ಮೊತ್ತ ಮೊದಲ `ಎಕ್ಸ್ ರೇ' ಫೊಟೋಗ್ರಾಫಿ'ಗೆ ಬಳಸಲಾಗಿತ್ತು. ಪ್ರಾರಂಭದಲ್ಲಿ ಜನರಿಗೆ ಇದರ ಬಗ್ಗೆ ಬಹಳ ಗುಮಾನಿ ಇತ್ತು. ಬಟ್ಟೆಯ ಮುಖಾಂತರ ದೇಹದ ಒಳಭಾಗ ವೀಕ್ಷಣೆಗೆ ಇದನ್ನು ಬಳಸಬಹುದೆಂದು ಅವರು ಶಂಕಿಸಿದ್ದರು. ಲಂಡನ್ನಿನ ಕಂಪೆನಿಯೊಂದು ಇದೇ ಹಿನ್ನೆಲೆಯಲ್ಲಿ `ಎಕ್ಸ್ ರೇ ಪ್ರೂಫ್ ಅಂಡರ್ ವೇರ್' ತಯಾರಿಸಿರುವುದಾಗಿಯೂ ಜಾಹೀರಾತು ನೀಡಿತ್ತು.)

2007: ತಮ್ಮ ವೃತ್ತಿ ಬದುಕಿನ ಮುಸ್ಸಂಜೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗುವ ಮೂಲಕ ಅನಿಲ್ ಕುಂಬ್ಳೆ ವಿಶ್ವ ದಾಖಲೆ ನಿರ್ಮಿಸಿದರು. ಅತಿ ಹೆಚ್ಚು ಪಂದ್ಯಗಳನ್ನು ಆಡಿದ ನಂತರ ತಂಡದ 
ಚುಕ್ಕಾಣಿ ಹಿಡಿದವರ ಪೈಕಿ ಅನಿಲ್ ಕುಂಬ್ಳೆ ಈಗ ಅಗ್ರ ಗಣ್ಯರು. ತಂಡದ ನಾಯಕತ್ವ ಹಿಡಿಯುವ ಮುನ್ನ ಅವರು 118 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಸ್ಟೀವ್ ವಾ 111 ಪಂದ್ಯಗಳ ನಂತರ ಸಾರಥ್ಯ ವಹಿಸಿದ್ದರು. ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 97 ಪಂದ್ಯಗಳ ಬಳಿಕ, ಭಾರತದ ವೆಂಗ್ ಸರ್ಕಾರ್ 95 ಪಂದ್ಯಗಳ ಬಳಿಕ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.

2006: ಹಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಬೆಸಿಲ್ ಪೊಲಿಜ್ಯುರಸ್ (61) ಲಾಸ್ ಏಂಜೆಲ್ಸಿನಲ್ಲಿ ನಿಧನರಾದರು. 80ರ ದಶಕದಲ್ಲಿ ಸಂಗೀತ ಸಾಮ್ರಾಟರಾಗಿ ಮೆರೆದಿದ್ದ ಬೆಸಿಲ್ 1989ರಲ್ಲಿ ಪ್ರತಿಷ್ಠಿತ `ಎಮ್ಮಿ' ಪ್ರಶಸ್ತಿಗೆ ಪಾತ್ರರಾಗಿದ್ದರು. ಸಾಹಸ ಚಿತ್ರಗಳಾದ ಕ್ಯಾನನ್ ದಿ ಬಾರ್ಬರಿಯನ್ ಮತ್ತು ಕ್ಯಾನನ್ ಡೆಸ್ಟ್ರಾಯರ್ ಚಿತ್ರಕ್ಕೆ ಅವರು ಸಂಗೀತ ನೀಡಿದ್ದರು.

2006: ಗರಿಷ್ಠ 10 ಸಾವಿರ ಟನ್ ತೂಕದ ಹಡಗನ್ನು ಮೇಲೆತ್ತಬಹುದಾದ ಹಾಗೂ ಏಕಕಾಲಕ್ಕೆ 4 ಹಡಗುಗಳನ್ನು ದುರಸ್ತಿ ಮಾಡಬಹುದಾದ ಹಡಗು ಮೇಲೆತ್ತುವ ದೇಶದ ಪ್ರಪ್ರಥಮ `ಶಿಪ್ ಲಿಫ್ಟ್' ವ್ಯವಸ್ಥೆಯನ್ನು ಪಶ್ಚಿಮ ಕಮಾಂಡಿನ ನೌಕಾ ಮುಖ್ಯಸ್ಥ ವೈಸ ಅಡ್ಮಿರಲ್ ಸಂಗ್ರಾಮ್ ಸಿಂಗ್ ಬೈಸ್ ಉದ್ಘಾಟಿಸಿದರು. ಇದರ ಉದ್ದ 175 ಮೀಟರ್, ಅಗಲ 28 ಮೀಟರ್. ತಲಾ 430 ಟನ್ ಭಾರ ಹೊರುವ 42 ಫ್ಲಾಟ್ ಫಾರಂಗಳನ್ನು ಸೇರಿಸಿ ಸಿದ್ಧಪಡಿಸಿದ ಈ ಲಿಫ್ಟನ್ನು ಅಮೆರಿಕದ ರೋಲ್ಸ್ ರಾಯ್ ಅಂಗಸಂಸ್ಥೆ ಸಿಂಕ್ರೋಸಾಫ್ಟ್ ಸಿಂಕ್ ಯುಎಸ್ ಎ ನಿರ್ಮಿಸಿದೆ. ನಾರ್ವೆಯ ಟಿಟಿಎಸ್ ಕಂಪೆನಿ ಹಡಗು ವರ್ಗಾವಣೆ ವ್ಯವಸ್ಥೆಯನ್ನು ರೂಪಿಸಿದೆ.

2006: ಲಾಭದ ಹುದ್ದೆ ಮಸೂದೆಗೆ ರಾಜ್ಯಪಾಲರ ಅಂಕಿತ ಲಭಿಸಿತು. ಇದರಿಂದ ನಿಗಮ, ಮಂಡಳಿಗಳ ಸಹಿತ ಸರ್ಕಾರದ ವಿವಿಧ ಸಂಸ್ಥೆಗಳಿಗೆ ನೇಮಕಾತಿ ಮಾಡಲು ಎದುರಾಗಿದ್ದ ಅಡ್ಡಿ ನಿವಾರಣೆಗೊಂಡಿತು.

2006: ಒಂದು ದಶಕದಿಂದ ನಡೆಯುತ್ತಿದ್ದ ಹೋರಾಟವನ್ನು ಸ್ಥಗಿತಗೊಳಿಸಿ ರಾಷ್ಟ್ರದಲ್ಲಿ ಶಾಂತಿ ಸ್ಥಾಪಿಸಲು ನೇಪಾಳ ಸರ್ಕಾರ ಹಾಗೂ ಮಾವೋವಾದಿ ಬಣಗಳ ಮಧ್ಯೆ ಐತಿಹಾಸಿಕ ಒಪ್ಪಂದ ಏರ್ಪಟ್ಟಿತು. ಪ್ರಧಾನಿ ಕೊಯಿರಾಲ ನಿವಾಸದಲ್ಲಿ ನಡೆದ ಸಭೆಯಲ್ಲಿ 15 ಅಂಶಗಳ ಒಪ್ಪಂದ ಸಿದ್ಧಪಡಿಸಲಾಯಿತು.

2000: ಉತ್ತರಾಂಚಲವು ಭಾರತದ 27ನೇ ರಾಜ್ಯವಾಯಿತು. ಡೆಹ್ರಾಡೂನ್ ಅದರ ರಾಜಧಾನಿಯಾಯಿತು.

1999: ಹೈದರಾಬಾದಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಒಂದು ದಿನದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ 331 ರನ್ ಗಳಿಸುವ ಮೂಲಕ ಅತ್ಯಂತ ಹೆಚ್ಚು ರನ್ ಗಳಿಸಿದ `ಬ್ಯಾಟ್ಸ್ ಮನ್ ಜೋಡಿ' ಎನಿಸಿದರು.

1966: ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸೇವಕಿ ರಾಮೇಶ್ವರಿ ನೆಹರು ನಿಧನರಾದರು. 

1956: ಫೋರ್ಡ್ ಮೋಟಾರ್ ಕಂಪೆನಿಯು 18,000 ಹೆಸರುಗಳನ್ನು ತಿರಸ್ಕರಿಸಿ ಹೆನ್ರಿ ಫೋರ್ಡ್ ಅವರ ಏಕೈಕ ಪುತ್ರ `ಎಡ್ಸೆಲ್' (Edsel)  ಹೆಸರನ್ನೇ ಹೊಸ ಕಾರಿಗೆ ಇರಿಸಿತು. ಈ ಕಾರು ಸಾರ್ವಜನಿಕರ ಮನಸೆಳೆಯುವಲ್ಲಿ ಸಂಪೂರ್ಣ ವಿಫಲವಾಯಿತು.

1953: ಸಾಹಿತಿ ತಾರಾನಾಥ ಜನನ.

1933: ಸಾಹಿತಿ ಎಂ.ಆರ್. ನರಸಿಂಹನ್ ಜನನ.

1929: ಭಾರತದ ಮಾಜಿ ಉಪ ಪ್ರಧಾನಿ, ಬಿಜೆಪಿ ಧುರೀಣ ಲಾಲ್ ಕೃಷ್ಣ ಆಡ್ವಾಣಿ ಹುಟ್ಟಿದ ದಿನ.

1923: ದಂಗೆ ಮೂಲಕ ಜರ್ಮನಿಯ ಅಧಿಕಾರ ವಶಪಡಿಸಿಕೊಳ್ಳುವ ಅಡಾಲ್ಫ್ ಹಿಟ್ಲರನ ಮೊದಲ ಪ್ರಯತ್ನ ವಿಫಲವಾಯಿತು. ಆತ ಬಂಧಿತನಾಗಿ ಸೆರೆಮನೆ ಸೇರಿದ. ಸೆರೆಮನೆಯಲ್ಲಿ ಇದ್ದಾಗಲೇ ತನ್ನ `ಮೆಯ್ನ್ ಕಾಮ್ಫ್' ಪುಸ್ತಕವನ್ನು ರುಡಾಲ್ಫ್ ಹೆಸ್ ಗೆ ಹೇಳಿ ಬರೆಯಿಸಿದ.

1908: ಹಾಸನದಲ್ಲಿ ಹುಟ್ಟಿ ಇಂಗ್ಲಿಷ್ ಸಾಹಿತ್ಯ ರಚನೆಯಲ್ಲಿ ವಿಶ್ವಮಾನ್ಯತೆ ಗಳಿಸಿದ ಹಾಸನ ರಾಜಾರಾವ್ (8-11-1908ರಿಂದ 8-7-2006) ಅವರು ಎಚ್. ವಿ. ಕೃಷ್ಣಸ್ವಾಮಿ - ಗೌರಮ್ಮ ದಂಪತಿಯ ಮಗನಾಗಿ ಈದಿನ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement