My Blog List

Thursday, November 27, 2008

ಇಂದಿನ ಇತಿಹಾಸ History Today ನವೆಂಬರ್ 25

ಇಂದಿನ ಇತಿಹಾಸ 

ನವೆಂಬರ್ 25

ಭಾರತ ತಂಡದ ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಅವರು ಟೆಸ್ಟ್  ಕ್ರಿಕೆಟಿನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗುವ ಮೂಲಕ ಮತ್ತೊಂದು ವಿಶ್ವದಾಖಲೆ ಸ್ಥಾಪಿಸಿದರು. ಪಾಕಿಸ್ಥಾನ ವಿರುದ್ಧ ನವದೆಹಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ  ಸಚಿನ್ 11183 ರನ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು.

2007: ಭಾರತ ತಂಡದ ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಅವರು ಟೆಸ್ಟ್  ಕ್ರಿಕೆಟಿನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗುವ ಮೂಲಕ ಮತ್ತೊಂದು ವಿಶ್ವದಾಖಲೆ ಸ್ಥಾಪಿಸಿದರು. ಪಾಕಿಸ್ಥಾನ ವಿರುದ್ಧ ನವದೆಹಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ 11183 ರನ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ 24ನೇ ರನ್ ಗಳಿಸುವುದರೊಂದಿಗೆ ಅವರ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ನು ಗಳಿಸಿದ ವಿಶ್ವದಾಖಲೆ (11,183) ಅವರದಾಯಿತು. ಅಂತಾರಾಷ್ಟ್ರೀಯ ಟೆಸ್ಟ್  ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ನರಲ್ಲಿ ಎರನೆಯವರೆಂಬ ಹೆಗ್ಗಳಿಕೆ ಭಾರತದ ತೆಂಡೂಲ್ಕರ್ ಅವರಿಗೆ ಪ್ರಾಪ್ತಿಯಾಯಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು 11174 ರನ್ ಪೇರಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ದಾಖಲೆಯನ್ನು ಅಳಿಸಿಹಾಕಿದರು. ಈ ಪಂದ್ಯದಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದ ತೆಂಡೂಲ್ಕರ್ ಅವರಿಗೆ ಇದು 141ನೇ ಟೆಸ್ಟ್ ಹಾಗೂ 228ನೇ ಇನಿಂಗ್ಸ್. ಅವರು ಈಗ 54.79 ಸರಾಸರಿಯಲ್ಲಿ 11183 ರನ್ ಕಲೆಹಾಕಿದರು. ವೆಸ್ಟ್ ಇಂಡೀಸಿನ ಮಾಜಿ ಆಟಗಾರ ಬ್ರಯನ್ ಲಾರಾ (11953 ರನ್) ಮೊದಲ ಸ್ಥಾನದಲ್ಲಿದ್ದಾರೆ.

2007: ಮೊಘಲ್ ಹಾಗೂ ಬಹಮನಿ ಆಡಳಿತ ಕಾಲಕ್ಕೆ ಸೇರಿರುವ ಐತಿಹಾಸಿಕ ಮೌಲ್ಯದ 640 ಬೆಳ್ಳಿ ನಾಣ್ಯಗಳು ಗುಲ್ಬರ್ಗದಲ್ಲಿ ಪತ್ತೆಯಾದವು. ಸುಮಾರು 7143 ಗ್ರಾಂ ತೂಕದ ಈ ನಾಣ್ಯಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಯಿತು. ಪ್ರಾಚ್ಯವಸ್ತು ತಜ್ಞರ ಪ್ರಕಾರ ಈ ನಾಣ್ಯಗಳು 1269-1299ರ ಕಾಲಕ್ಕೆ ಸೇರಿದವು ಎಂದು ಖಚಿತಪಡಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಎನ್. ನಾಗರಾಜ ಪ್ರಕಟಿಸಿದರು. ಗುಲ್ಬರ್ಗದ ಬ್ರಹ್ಮಪೂರ ಬಡಾವಣೆಯ ಕುಂಬಾರಗಲ್ಲಿಯ ಗುಂಡಪ್ಪ ಹಡಗಿಲ್ ಎಂಬುವರ ಬಿದ್ದುಹೋದ ಮನೆಯಲ್ಲಿ ಈ ನಾಣ್ಯಗಳು ದೊರಕಿದವು. ಇದೇ ಬಡಾವಣೆಯ ಪ್ರಕಾಶ ಪಾಟೀಲ್ ಎಂಬುವರ ಬಳಿ ಕೆಲಸಕ್ಕೆ ಇದ್ದ ಹಣಮಂತಪ್ಪ ಹರಗೆನೂರ ಹೂವಿನ ಕುಂಡಗಳಿಗೆ ಹಾಕಲು ಮಣ್ಣು ತರಲು ಹೋದಾಗ ಅವರಿಗೆ ನವೆಂಬರ್ 22ರಂದು ಈ ನಾಣ್ಯಗಳು ದೊರಕಿದವು. ಈ ನಾಣ್ಯಗಳ ಹಾಲಿ ಬೆಲೆ ಅಂದಾಜು 1.40 ಲಕ್ಷ ರೂಪಾಯಿಗಳು. ಐತಿಹಾಸಿಕ ಮೌಲ್ಯದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ನಾಣ್ಯಗಳ ಮೌಲ್ಯ ಸುಮಾರು 15-20 ಲಕ್ಷ ರೂ.ಗಳು ಎಂದು ಅಂದಾಜು. ಹರಗೇನೂರ ಕುಟುಂಬ ಸದಸ್ಯರು ಈ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸಿದರು.

2007: ಗಡಿಪಾರಾದ ಸುಮಾರು 7 ವರ್ಷಗಳ ಬಳಿಕ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಈದಿನ ಲಾಹೋರಿಗೆ ಆಗಮಿಸಿದರು. ಪಾಕಿಸ್ಥಾನದ ಮುಸ್ಲಿಂ ಲೀಗ್ (ಪಿಎಂಎಲ್ -ಎನ್) ಮುಖಂಡ ಶರೀಫ್ ಅವರು ಕಳೆದ ಸೆಪ್ಟೆಂಬರಿನಲ್ಲಿ ಮೊದಲ ಬಾರಿ ಪಾಕಿಸ್ಥಾನಕ್ಕೆ ಆಗಮಿಸಿದಾಗ ಅವರನ್ನು ಬಂಧಿಸಲಾಗಿತ್ತು. 

2007: ಪಶ್ಚಿಮ ಇಂಡೋನೇಷ್ಯದಲ್ಲಿ ಈದಿನ  ಬೆಳಗ್ಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.2 ರಷ್ಟಿತ್ತು. ಕರಾವಳಿ ಪ್ರದೇಶ ಸುಮಾತ್ರ  ದ್ವೀಪದ ಬೇಕ್ ಕುಲಾ ನಗರದ 28 ಕಿ.ಮೀ ದೂರದಲ್ಲಿ ಈ  ಕಂಪನದ ಕೇಂದ್ರಬಿಂದು ಇತ್ತು.  2004ರಲ್ಲಿ ಸಮುದ್ರದಲ್ಲಿ ಸಂಭವಿಸಿದ  ಭೂಕಂಪದಿಂದ ಉಂಟಾದ ಸುನಾಮಿಗೆ ಸುಮಾರು 1.70 ಲಕ್ಷ ಜನ ಬಲಿಯಾಗಿದ್ದರು.

2007: ತಮ್ಮ ಹೊಸ ಚಿತ್ರಕ್ಕಾಗಿ ಚೀನಾದ ಖ್ಯಾತ ಚಿತ್ರನಟ ಜೆಟ್ ಲೀ 100 ದಶಲಕ್ಷ ಯೂನ್ (13 ದಶಲಕ್ಷ ಡಾಲರುಗಳು)ಸಂಭಾವನೆ ಪಡೆದು ದಾಖಲೆ ನಿರ್ಮಿಸಿದರು. ಚೀನಾ ಭಾಷೆಯ ಚಿತ್ರಗಳಲ್ಲಿ ಇದುವರೆಗೆ ಯಾರೂ ಇಷ್ಟು  ದೊಡ್ಡ ಪ್ರಮಾಣದ ಸಂಭಾವನೆ ಪಡೆದಿರಲಿಲ್ಲ. ಜೆಟ್ ಲೀ ನಟಿಸಿದ `ದಿ ವಾರ್ ಲಾರ್ಡ್ಸ್' ಚಿತ್ರದ ಒಟ್ಟಾರೆ ಬಜೆಟ್ 40 ದಶಲಕ್ಷ ಡಾಲರುಗಳು.

2006: ಹಿರಿಯ ಕವಿ ಡಾ. ಕಯ್ಯಾರ ಕಿಂಞಣ್ಣರೈ, ಡಾ. ಎಂ. ಸರೋಜಿನಿ ಮಹಿಷಿ, ಜಾನಪದ ವಿದ್ವಾಂಸ ಮುದೇನೂರು ಸಂಗಣ್ಣ, ಸಾಹಿತಿ ಸಂಶೋಧಕ ಡಾ. ಹಂಪ ನಾಗರಾಜಯ್ಯ ಹಾಗೂ ಜನಪದ ಗಾಯಕಿ ಬುರ್ರಕಥಾ ಈರಮ್ಮ ಅವರಿಗೆ 2006ನೇ ಸಾಲಿನ `ನಾಡೋಜ' ಗೌರವವನ್ನು ಕನ್ನಡ ವಿಶ್ವವಿದ್ಯಾಲಯವು ಘೋಷಿಸಿತು.

2006: ರಾಷ್ಟ್ರದ ಮೊತ್ತ ಮೊದಲ `ಚಿಟ್ಟೆ ಉದ್ಯಾನ'ವನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆವರಣದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಕಪಿಲ್ ಸಿಬಲ್ ರಾಷ್ಟ್ರಕ್ಕೆ ಅರ್ಪಿಸಿದರು. 10,490 ಚದರಡಿ ವ್ಯಾಪ್ತಿಯಲ್ಲಿ ನಿರ್ಮಿತವಾದ `ಚಿಟ್ಟೆ ಉದ್ಯಾನ' ಜಗತ್ತಿನ ಇಂತಹ ವಿಶಾಲ ಉದ್ಯಾನಗಳ ಸಾಲಿನಲ್ಲಿ ಒಂದಾಗಲಿದೆ. ನಗರ ಮತ್ತು ಸುತ್ತಮುತ್ತಣ ಸುಮಾರು 42 ಜಾತಿಯ ಚಿಟ್ಟೆಗಳಿಗೆ ಆವಾಸ ಸ್ಥಾನವಾಗಲಿರುವ ಈ ಉದ್ಯಾನದಲ್ಲಿ 2ನೇ ಹಂತದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಚಿಟ್ಟೆಗಳನ್ನೂ ಸಾಕಲಾಗುವುದು. ಉದ್ಯಾನದ ನಿಮರ್ಾಣ ವೆಚ್ಚ 4.9 ಕೋಟಿ ರೂಪಾಯಿಗಳು.

2005: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಹಾಗೂ ನಾಥೂರಾಂ ಗೋಡ್ಸೆ ಕಿರಿಯ ಸಹೋದರ ಗೋಪಾಲ್ ವಿನಾಯಕ ಗೋಡ್ಸೆ (86) ಈ ದಿನ ರಾತ್ರಿ ನಿಧನರಾದರು. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಗೋಪಾಲ್ ಗೋಡ್ಸೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸಿದ್ದರು.

2005: ಮಾಜಿ ಲೋಕಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರು ಲೋಕಸಭಾ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಸಭಾಧ್ಯಕ್ಷ ಸೋಮನಾಥ ಚಟರ್ಜಿ ಅಂಗೀಕರಿಸಿದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತೃಣಮೂಲ ಕಾಂಗ್ರೆಸ್ಸಿನಿಂದ ಮೇಘಾಲಯದ ತುರಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ತಿಂಗಳ ಹಿಂದೆ ಈ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

2005: ಬಹು ವಿವಾದಿತ ಅರ್ಕಾವತಿ ಬಡಾವಣೆಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿತು. ಇದರೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಜಮೀನು ಮಾಲೀಕರ ನಡುವಣ ಕಾನೂನು ಸಮರಕ್ಕೆ ತೆರೆಬಿತ್ತು. ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ಮೂಲ ಮಾಲೀಕರಿಗೆ ವರ್ಗಾಯಿಸುವಂತೆ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್. ಕೆ. ಸೋಧಿ ಹಾಗೂ ನ್ಯಾಯಮೂರ್ತಿ ಎನ್. ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ರದ್ದುಪಡಿಸಿತು.

2005: ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರಿಂದ ಹತ್ಯೆಗೀಡಾದ ಮಣಿಯಪ್ಪನ್ ಕುಟ್ಟಿಯ ಶವವನ್ನು ಹುಟ್ಟೂರಾದ ಅಳಪ್ಪುಳ ಗ್ರಾಮಕ್ಕೆ ತಂದು ಸೇನಾಪಡೆ ಗೌರವದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

2002: ನ್ಯೂಕ್ಯಾಸಲ್ನ ಜಾನ್ ಹಂಟರ್ ಆಸ್ಪತ್ರೆಂಯಲ್ಲಿ ಹಾನಿಗೀಡಾದ ತನ್ನ ಹೃದಯವನ್ನು ದುರಸ್ತಿಪಡಿಸಲು ಆಸ್ಟ್ರೇಲಿಯಾದ ಜಿಮ್ ನಿಕೊಲ್ ವಿಶಿಷ್ಟ ಶಸ್ತ್ರಚಿಕಿತ್ಸೆಗೆ ಒಳಗಾದರು. `ಅಡಲ್ಟ್ ಸ್ಟೆಮ್ ಸೆಲ್ಸ್' (ಮೂಲಕೋಶ) ಬಳಸಿ ನಡೆಸಲಾದ ಜಗತ್ತಿನ ಮೊತ್ತ ಮೊದಲ ರಿಪೇರಿ ಕೆಲಸ ಇದು.

2001: ಜಗತ್ತಿನಲ್ಲಿ ಮೊತ್ತ ಮೊದಲಬಾರಿಗೆ ತಾನು ಮಾನವ ಭ್ರೂಣದ ತದ್ರೂಪು (ಕ್ಲೋನಿಂಗ್) ಸೃಷ್ಟಿ ಮಾಡಿರುವುದಾಗಿ ಮೆಸಾಚ್ಯುಸೆಟ್ಸಿನ ಎಸಿಟಿ ಕಂಪೆನಿ ಈ ದಿನ ಪ್ರಕಟಿಸಿತು. ತನಗೆ ಮಾನವ ಸೃಷ್ಟಿಯ ಉದ್ದೇಶವಿಲ್ಲ. ಆದರೆ ರೋಗಗಳಿಗೆ ಚಿಕಿತ್ಸೆ ನೀಡುವ ಮೂಲಕೋಶಗಳಿಗಾಗಿ ಭ್ರೂಣವನ್ನು ಬಳಸುವ ಉದ್ದೇಶವಿದೆ ಎಂದು ಅದು ಹೇಳಿತು. ಮನುಕುಲವನ್ನು ಕಾಡುವ ವ್ಯಾಪಕ ಕಾಯಿಲೆಗಳಿಂದ ಪ್ರಾಣ ಉಳಿಸುವ ಚಿಕಿತ್ಸಾ ವಿಧಾನ ರೂಪಿಸುವ ಉದ್ದೇಶ ತಮ್ಮದು ಎಂದು ಅದು ಹೇಳಿತು. ಭ್ರೂಣದಿಂದ ಪಡೆದ ಭ್ರೂಣ ಮೂಲಕೋಶವನ್ನು ದೇಹದ ಯಾವುದೇ ಅಂಗವಾಗಿ ಬೆಳೆಸಬಹುದು.

1981: ಭಾರತದಲ್ಲಿ ನಡೆದ ಮೊತ್ತ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಅಹಮದಾಬಾದಿನ ಸರ್ದಾರ್ ಪಟೇಲ್ ಸ್ಟೇಡಿಯಂ ಪಾತ್ರವಾಯಿತು. ಪಂದ್ಯದಲ್ಲಿ ಭಾರತವನ್ನು ಇಂಗ್ಲೆಂಡ್ ಐದು ವಿಕೆಟ್ ಅಂತರದಲ್ಲಿ ಸೋಲಿಸಿತು.

1952: ಅಗಾಥಾ ಕ್ರಿಸ್ಟೀ ಅವರ ನಾಟಕ `ದಿ ಮೌಸ್ ಟ್ರ್ಯಾಪ್'ನ ಮೊತ್ತ ಮೊದಲ ಪ್ರದರ್ಶನ ಲಂಡನ್ನಿನ ಅಂಬಾಸಡರ್ ಥಿಯೇಟರಿನಲ್ಲಿ ನಡೆಯಿತು.

1948: ನ್ಯಾಷನಲ್ ಕೆಡೆಟ್ ಕೋರ್ (ಎನ್ ಸಿ ಸಿ) ಎನ್ ಸಿ ಸಿ ಕಾಯ್ದೆಗೆ ಅನುಗುಣವಾಗಿ ಈ ದಿನ ಅಸ್ತಿತ್ವಕ್ಕೆ ಬಂತು. ಭಾರತೀಯ ವಿದ್ಯಾರ್ಥಿಗಳ ಕಲ್ಯಾಣದ ದೃಷ್ಟಿಯಿಂದ ಇದನ್ನು ರೂಪಿಸಲಾಗಿದ್ದು `ಏಕತೆ ಮತ್ತು ಶಿಸ್ತು' ಇದರ ಪ್ರಮುಖ ಗುರಿ. 

1945: ನಾಜಿ ನಾಯಕರ ವಿಚಾರಣೆಯನ್ನು ಅಂತಾರಾಷ್ಟ್ರೀಯ ಮಿಲಿಟರಿ ಟ್ರಿಬ್ಯೂನಲ್ ಈದಿನ ನ್ಯೂರೆಂಬರ್ಗಿನ ನ್ಯಾಯ ಅರಮನೆಯಲ್ಲಿ (ಪ್ಯಾಲೇಸ್ ಆಫ್ ಜಸ್ಟೀಸ್) ಆರಂಭಿಸಿತು. `ನ್ಯೂರೆಂಬರ್ಗ್ ಟ್ರಯಲ್' (ನ್ಯೂರೆಂಬರ್ಗ್ ವಿಚಾರಣೆ) ಎಂದೇ ಖ್ಯಾತಿ ಪಡೆದ ಈ ವಿಚಾರಣೆ 1946ರ ಸೆಪ್ಟೆಂಬರ್ 30ರಂದು ಕೊನೆಗೊಂಡಿತು. ಅಕ್ಟೋಬರ್ 1ರಂದು ತೀರ್ಪು ಪ್ರಕಟಿಸಲಾಯಿತು. ಒಳಸಂಚು, ಶಾಂತಿ ವಿರೋಧಿ ಅಪರಾಧಗಳು, ಯುದ್ಧ ಅಪರಾಧಗಳು ಹಾಗೂ ಮಾನವತೆ ವಿರುದ್ಧ ಎಸಗಿದ ಅಪರಾಧಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಯಿತು.10 ಮಂದಿಗೆ ಮರಣದಂಡನೆ, 7 ಮಂದಿಗೆ ಸೆರೆವಾಸದ ಶಿಕ್ಷೆ ವಿಧಿಸಿದರೆ, ಮೂವರನ್ನು ಖುಲಾಸೆ ಮಾಡಲಾಯಿತು.

1916: ಕನ್ನಡಕ್ಕಿಂತ ಇಂಗ್ಲಿಷಿನಲ್ಲಿಯೇ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ  ಸಾಹಿತಿ ಹೇಮಂತ ಕುಲಕರ್ಣಿ (21-11-1916ರಿಂದ 22-7-1994) ಅವರು ಬಿಜಾಪುರದಲ್ಲಿ ಜನಿಸಿದರು.

1916: ಸಾಹಿತಿ ರಾಮಕೃಷ್ಣ ಉಡುಪ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement