My Blog List

Wednesday, February 25, 2009

ಇಂದಿನ ಇತಿಹಾಸ History Today ಫೆಬ್ರುವರಿ 19

ಇಂದಿನ ಇತಿಹಾಸ

ಫೆಬ್ರುವರಿ 19

ಕೇಂದ್ರದ ಮಾಜಿ ಸಚಿವೆ, ಬಿಜೆಪಿ ನಾಯಕಿ ಬಸವರಾಜೇಶ್ವರಿ (85) ಅವರು ಬೆಳಿಗ್ಗೆ 11.15ಕ್ಕೆ ಬಳ್ಳಾರಿನಗರದಲ್ಲಿ ನಿಧನರಾದರು. 1957ರಿಂದ ಸಕ್ರಿಯ ರಾಜಕಾರಣ ಪ್ರವೇಶಿಸಿದ ಅವರು 1957, 1962 ಮತ್ತು 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರವನ್ನು ಪ್ರತಿನಿಧಿಸಿ 3 ಬಾರಿ ಶಾಸಕಿಯಾಗಿದ್ದರು. 

2008: ಮೀನು ಪ್ರಿಯರಿಗೊಂದು ಖುಷಿಯ ಸುದ್ದಿ. ಪಶ್ಚಿಮ ಘಟ್ಟದ ಜಲಸಂಪನ್ಮೂಲಗಳಲ್ಲಿ ಮೂರು ಹೊಸ ಜಾತಿಯ ಮೀನುಗಳು ಪತ್ತೆಯಾದವು. ಮಂಗಳೂರು ನಗರದ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕರ ಕಚೇರಿಯ ಅಲಂಕಾರಿಕ ಮೀನು ಅಭಿವೃದ್ಧಿಯ ರಾಜ್ಯ ಸಹನಿಯೋಜಕ ಡಾ. ಪ್ರಮೋದ್ ಪಿ.ಕೆ. ಅವರು ಈ ಮೀನುಗಳನ್ನು ಪತ್ತೆ ಹಚ್ಚಿದರು. ಡೇನಿಯೋ, ಶಿಸ್ತುರಾ ಮತ್ತು ಮೀಸೋನಿಮಕೈಲಸ್ ಪ್ರಬೇಧಗಳಿಗೆ ಸೇರಿದ ಈ ಮೀನುಗಳು ಆಗುಂಬೆ ಪರಿಸರದ ತೊರೆಗಳಲ್ಲಿ ಮತ್ತು ಅದಕ್ಕೆ ಸೇರಿದ ಶಿವಮೊಗ್ಗದ ಸೀತಾನದಿಯ ಕೊನೆಯವರೆಗೂ ಇರುವುದು ಪತ್ತೆಯಾಗಿದೆ ಎಂದು ಡಾ. ಪ್ರಮೋದ್ ಪಿ.ಕೆ. ತಿಳಿಸಿದರು. ಚೆನ್ನೈಯ ಭಾರತೀಯ ಪ್ರಾಣಿ ಸರ್ವೇಕ್ಷಣಾ ಸಂಸ್ಥೆಯ ಡಾ. ಕೆ.ರಮಾದೇವಿ ಹಾಗೂ ಡಾ.ಟಿ.ಜೆ.ಇಂದ್ರ ಅವರು ಈಗ ಪತ್ತೆಯಾಗಿರುವ ಮೀನುಗಳನ್ನು ಹೊಸ ಜಾತಿಯ ಮೀನುಗಳೆಂದು ದೃಢೀಕರಿಸಿದರು. ಈ ಮೀನುಗಳು ವೈವಿಧ್ಯಮಯ ಬಣ್ಣಗಳನ್ನು ಹೊಂದಿದ್ದು ಅಲಂಕಾರಿಕ ಮೀನುಗಳಾಗಿ ಅಭಿವೃದ್ಧಿಪಡಿಸಬಹುದು ಎಂದು ಅವರು ಹೇಳಿದರು.

2008: ಪಾಕಿಸ್ಥಾನದ ಸಂಸದೀಯ ಚುನಾವಣೆಗಳಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ವಿರುದ್ಧ ಜನಾದೇಶ ಹೊರಹೊಮ್ಮಿ ಅವರು ಭಾರಿ ಮುಖಭಂಗ ಅನುಭವಿಸಿದರು. ಯಾವುದೇ ಒಂದು ಪಕ್ಷವೂ ಸ್ಪಷ್ಟ ಬಹುಮತ ಪಡೆಯಲಿಲ್ಲ. ಆದರೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆಯ ಅನುಕಂಪದಿಂದ ಪಾಕಿಸ್ಥಾನ ಪೀಪಲ್ಸ್ ಪಕ್ಷವು 87 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷ ಪಿಎಂಎಲ್-ಎನ್ 66 ಸ್ಥಾನಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಯಿತು. ಮುಷರಫ್ ಅವರ ಪಕ್ಷ ಪಿಎಂಎಲ್ ಕ್ಯೂ-38 ಸ್ಥಾನ ಗಳಿಸಿದರೆ, ಅವರ ಬೆಂಬಲಿಗ ಪಕ್ಷಗಳು ಒಟ್ಟು 19 ಸ್ಥಾನ ಗಳಿಸಿದವು. ಮುಷರಫ್ ಅವರು 1999ರ ಅಕ್ಟೋಬರಿನಲ್ಲಿ ರಕ್ತರಹಿತ ಕ್ರಾಂತಿ ನಡೆಸಿ ಅಧ್ಯಕ್ಷ ಸ್ಥಾನಕ್ಕೇರಿದ್ದರು.

2008: ಕಳೆದ 50 ವರ್ಷಗಳಿಂದ ಅಮೆರಿಕದ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಪುಟ್ಟ ಕಮ್ಯುನಿಸ್ಟ್ ರಾಷ್ಟ್ರ ಕ್ಯೂಬಾದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಹವಾನಾದಲ್ಲಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದರು.

2008: ಅಂತರ್ಜಾತೀಯ ವಿವಾಹವಾಗುವ ಮೂಲಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗಿದ್ದ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತು. ಜಾತಿ ಆಧಾರಿತಮೀಸಲಾತಿ ಸೌಲಭ್ಯ ಆಧರಿಸಿ  ವ್ಯಕ್ತಿಯೊಬ್ಬ ತಾನು ಹುಟ್ಟಿನಿಂದ ಪರಿಶಿಷ್ಟ ಜಾತಿ ಅಥವಾ ಪಂಗಡದವನಾಗಲು ಸಾಧ್ಯವಿಲ್ಲ. ಕೇವಲ ಆ ಜಾತಿ ಅಥವ ಪಂಗಡದವರನ್ನು ಮದುವೆಯಾಗಿ ಮೀಸಲಾತಿಗೆ ಅರ್ಜಿ ಸಲ್ಲಿಸಿದರೆ ಅದರಿಂದ ಮೂಲ ಉದ್ಧೇಶ ನಿಷ್ಪಲವಾದಂತಾಗುತ್ತದೆ ಎಂದು ವಿಭಾಗೀಯ ಪೀಠ ತೀರ್ಪು ನೀಡಿತು. ಕಕ್ಷಿದಾರರಾದ ಹೇಮಲತಾ ಬಕ್ಚಾವ್ ಅವರು ನಾಸಿಕ್ ಜಿಲ್ಲಾ ಪರಿಷತ್ತಿನಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾದ ಹುದ್ದೆಗೆ ಡಿಸೆಂಬರ್ 2003ರಲ್ಲಿ ನೇಮಕಗೊಂಡರು. ಬಕ್ಚಾವ್ ಅವರು ಮೂಲತಃ ಮರಾಠಿಗರು. ಆದರೆ ಆಕೆಯ ಪತಿ ಮಹಾದೇವ್ ಕೋಲಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಈಕೆ ತಾನು ಕೋಲಿಯವರನ್ನು ಮದುವೆಯಾಗುವ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ಅರ್ಜಿಯಲ್ಲಿ ನಮೂದಿಸಿದ್ದರು. ಪರಿಶಿಷ್ಟ ಪಂಗಡದ ನೇಮಕ ಪಟ್ಟಿಯನ್ನು ಪರಿಷ್ಕರಣೆಗೆ ಒಳಪಡಿಸಿದಾಗ ಬಕ್ಚಾವ್ ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ ಎಂದು ತಿಳಿದು, ಅವರ ನೇಮಕವನ್ನು ರದ್ದುಗೊಳಿಸಲಾಗಿತ್ತು. ಆಕೆ ಈ ರದ್ಧತಿಯನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.

2008: ಖ್ಯಾತ  ಸಂಸ್ಕೃತ ಕವಿ ಸ್ವಾಮಿ ರಾಮಭದ್ರಾಚಾರ್ಯ ಅವರಿಗೆ 2007ನೇ ಸಾಲಿನ 16ನೇ ವಾಚಸ್ಪತಿ ಪುರಸ್ಕಾರ ಘೋಷಿಸಲಾಯಿತು. ರಾಮಭದ್ರಾಚಾರ್ಯರ `ಶ್ರೀ ಭಾರ್ಗವಾರಾಘವೀಯಂ' (ಮಹಾಕಾವ್ಯ) ಕೃತಿಗೆ ಈ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ ಎಂದು ಕೆ.ಕೆ. ಬಿರ್ಲಾ ಪ್ರತಿಷ್ಠಾನ ತಿಳಿಸಿತು. 2ನೇ ವರ್ಷದಲ್ಲೇ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯ ಹಿಂದಿ ಮತ್ತು ಸಂಸ್ಕೃತದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ಉತ್ತರ ಪ್ರದೇಶ ಸರ್ಕಾರವು ಅವರನ್ನು ಅಶಕ್ತರ ವಿ.ವಿ.ಯ ಜೀವಮಾನದ ಕುಲಪತಿಯಾಗಿ ನೇಮಿಸಿದೆ.

2008: ಸಿಗರೇಟ್, ಬೀಡಿ ಸೇದುವುದರಿಂದ ಅಥವಾ ಹೆಚ್ಚು ಮದ್ಯಪಾನ ಮಾಡುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಸಂಶೋಧನೆಗಳು ಹಿಂದಿನಿಂದಲೂ ಹೇಳುತ್ತಿವೆ. ಆದರೆ, ಹೊಸ ಸಂಶೋಧನೆಯೊಂದು, ಈ ಚಟಗಳು ವ್ಯಕ್ತಿಯ ವಂಶದ ತಳಿಗುಣವನ್ನೇ ಬದಲಾಯಿಸಬಹುದು ಎಂದು ಹೇಳಿತು. ಧೂಮಪಾನ, ಮದ್ಯಪಾನದಿಂದ ಗಂಡಸರ ವೀರ್ಯಾಣುವಿನಲ್ಲಿ ರಾಸಾಯನಿಕ ಬದಲಾವಣೆ ಆಗುತ್ತದೆ. ಇದು ವ್ಯಕ್ತಿಗೆ ಹುಟ್ಟಲಿರುವ ಮಗು ಹಾಗೂ ಆಮೇಲಿನ ಪೀಳಿಗೆಗಳಿಗೆ ತಂತಾನೇ ವರ್ಗಾವಣೆ ಆಗುತ್ತದೆ ಎನ್ನುವುದು ಲಂಡನ್ನಿನ ಸಂಶೋಧಕರ ತಂಡದ ಪ್ರತಿಪಾದನೆ. ಇಲಿಗಳ ಮೇಲೆ ಮಾಡಿದ ಪ್ರಯೋಗದಿಂದ ಇದು ಖಚಿತವಾಗಿದೆ. ಇಂತಹ ಇಲಿಗಳಿಗೆ ಹುಟ್ಟಿದ ಮರಿಗಳಲ್ಲಿ ಜನನೇಂದ್ರಿಯಕ್ಕೆ ಸಂಬಂಧಪಟ್ಟ ಪ್ರೋಸ್ಟೇಟ್ ಗಂಥಿ ಮತ್ತು ವೀರ್ಯ ಉತ್ಪತ್ತಿ ಸಮಸ್ಯೆಗಳು ಕಂಡುಬಂದಿವೆ ಎಂದು ವಿಜ್ಞಾನಿಗಳು ವಿವರ ನೀಡಿದರು.

2008: ಬೆಂಗಳೂರು ನಗರದ ಮಣಿಪಾಲ ಆಸ್ಪತ್ರೆಯ 50 ಕ್ಕೂ ಹೆಚ್ಚು ವಿಶೇಷ ಸೇವಾ ಕ್ಷೇತ್ರಗಳಿಗೆ ರಾಷ್ಟ್ರೀಯ ಆಸ್ಪತ್ರೆಗಳ ಮಂಡಳಿ (ಎನ್ಎಬಿಎಚ್)ಯ ಮಾನ್ಯತೆ ಲಭಿಸಿತು. ನಾಲ್ಕು ವರ್ಷಗಳ ಹಿಂದೆ ಅಳವಡಿಸಿಕೊಳ್ಳಲಾದ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯಿಂದಾಗಿ ಅಸ್ಪತ್ರೆಗೆ ಈ ಮಾನ್ಯತೆ ದೊರೆತಿದೆ ಎಂದು ಪ್ರಕಟಣೆ ತಿಳಿಸಿತು. ಕ್ಲಿನಿಕಲ್, ನರ್ಸಿಂಗ್, ರೋಗ ಪತ್ತೆ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ಐಎಸ್ಒ ಪ್ರಮಾಣ ಪತ್ರದ ಮಾನ್ಯತೆ ಪಡೆದ ಮೊಟ್ಟ ಮೊದಲ ಭಾರತೀಯ ಆಸ್ಪತ್ರೆಯೂ ಇದಾಗಿದೆ.

2008: ಕೇಂದ್ರದ ಮಾಜಿ ಸಚಿವೆ, ಬಿಜೆಪಿ ನಾಯಕಿ ಬಸವರಾಜೇಶ್ವರಿ (85) ಅವರು ಬೆಳಿಗ್ಗೆ 11.15ಕ್ಕೆ ಬಳ್ಳಾರಿನಗರದಲ್ಲಿ ನಿಧನರಾದರು. 1957ರಿಂದ ಸಕ್ರಿಯ ರಾಜಕಾರಣ ಪ್ರವೇಶಿಸಿದ ಅವರು 1957, 1962 ಮತ್ತು 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರವನ್ನು ಪ್ರತಿನಿಧಿಸಿ 3 ಬಾರಿ ಶಾಸಕಿಯಾಗಿದ್ದರು. ಅದೇ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಮತ್ತು ಸಣ್ಣ ನೀರಾವರಿ ಖಾತೆಯ ಉಪ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು. 1977ರಿಂದ 6 ವರ್ಷಗಳ ಕಾಲ ರಾಜ್ಯ ವಿಧಾನ ಪರಿಷತ್ ಸದಸ್ಯೆಯಾಗಿ, ಸ್ವಲ್ಪ ಕಾಲ ಹಂಗಾಮಿ ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಬಳ್ಳಾರಿ ಕ್ಷೇತ್ರದಿಂದ 8, 9 ಮತ್ತು 10ನೇ ಲೋಕಸಭೆಗೆ ಸದಸ್ಯರಾಗಿ ಅವರು ಸತತ 3 ಬಾರಿ ಆಯ್ಕೆಯಾಗಿದ್ದರು. 1993ರಿಂದ 1995ರ ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಸಚಿವೆಯಾಗಿದ್ದಾಗಲೇ 1995ರಲ್ಲಿ ಚೀನಾದ ಬೀಜಿಂಗಿನಲ್ಲಿ ನಡೆದ ವಿಶ್ವ ಮಹಿಳಾ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 

2007: ದೆಹಲಿ ಮತ್ತು ಅಟ್ಟಾರಿ ನಡುವೆ ಸಂಚರಿಸುವ ಭಾರತ- ಪಾಕಿಸ್ತಾನ ನಡುವಣ ಸ್ನೇಹ ಸೇತುವೆಯಾಗಿರುವ ಸಮ್ ಜೌತಾ (ಗೆಳೆತನ) ಎಕ್ಸ್ಪ್ರೆಸ್ ರೈಲಿನಲ್ಲಿ ನಡುರಾತ್ರಿಯ್ಲಲಿ ಸಂಭವಿಸಿದ ಬಾಂಬ್ ಸ್ಫೋಟ ಮತ್ತು ಅಗ್ನಿ ದುರಂತದ್ಲಲಿ 67 ಪ್ರಯಾಣಿಕರು ಸುಟ್ಟು ಕರಕಲಾಗಿ ಇತರ 60 ಮಂದಿ ಗಾಯಗೊಂಡರು. ಹಳೆ ದೆಹಲಿ ಪ್ಲ್ಯಾಟ್ ಫಾರ್ಮಿನಿಂದ ರಾತ್ರಿ 10.40ಕ್ಕೆ ಹೊರಟ ರೈಲಿನಲ್ಲಿ 11.56ಕ್ಕೆ ಪಾಣಿಪತ್ ಸಮೀಪ ಸೂಟ್ ಕೇಸ್ ಸ್ಫೋಟಗೊಂಡು ಈ ದುರಂತ ಸಂಭವಿಸಿತು. ಪರಿಣಾಮವಾಗಿ ಹಿಂದಿನ ಎರಡು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಸತ್ತವರಲ್ಲಿ ಬಹುತೇಕ ಮಂದಿ ಪಾಕಿಸ್ಥಾನೀಯರು.

2007: ಇಡೀ ದೇಶವನ್ನು ತಲ್ಲಣಗೊಳಿಸಿದ್ದ ನೈನಾ ಸಹಾನಿ ಕೊಲೆ ಪ್ರಕರಣದ ಆರೋಪಿ ಸುಶೀಲ ಶರ್ಮಾಗೆ (ತಂದೂರಿ ಶರ್ಮಾ) ವಿಧಿಸಲಾದ ಮರಣದಂಡನೆಯನ್ನು ದೆಹಲಿ ಹೈಕೋರ್ಟ್ ಕಾಯಂಗೊಳಿಸಿತು. ಇದೊಂದು ಪೈಶಾಚಿಕ ಕೃತ್ಯ ಎಂದು ನ್ಯಾಯಾಲಯ ಹೇಳಿತು.

2007: ಬೆಳಗಾವಿ ಜಿಲ್ಲೆಯ ರಂ.ಶಾ. ಲೋಕಾಪುರ ಅವರು ಮರಾಠಿಯಿಂದ ಕನ್ನಡಕ್ಕೆ ತಂದಿರುವ ತುಕಾರಾಂ ಅವರ `ಜ್ಞಾನೇಶ್ವರಿ' ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಅನುವಾದ ಪ್ರಶಸ್ತಿಗೆ ಆಯ್ಕೆಯಾಯಿತು. ಮರಾಠಿ ಸಂತ ಜ್ಞಾನೇಶ್ವರ ಅವರು 1290ರಲ್ಲಿ ರಚಿಸಿದ್ದ ಸಾಹಿತ್ಯವನ್ನು `ಕನ್ನಡ ಜ್ಞಾನೇಶ್ವರಿ' ಎಂಬ ಕೃತಿ ರಚನೆ ಮೂಲಕ ಲೋಕಾಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಲೋಕಾಪುರ ಅವರು ರಚಿಸಿದ `ತಾಯಿ ಸಾಹೇಬ' ಕಾದಂಬರಿ ಚಲನಚಿತ್ರವಾಗಿದೆ. `ಸಾವಿತ್ರಿ' ಎಂಬ ಇನ್ನೊಂದು ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. 

2007: ಪಶ್ಚಿಮ ಘಟ್ಟದ ಅರಣ್ಯದಲ್ಲಿ ಚಾರಣಕ್ಕೆ ಹೋದ ಸಂದರ್ಭದಲ್ಲಿ ಕಣ್ಮರೆಯಾಗಿದ್ದ ಬೆಂಗಳೂರಿನ ಮೂವರು ಸಾಹಸಿಗರ ಪೈಕಿ ಇಬ್ಬರ ಕಳೇಬರಗಳು 9 ತಿಂಗಳ ನಂತರ ಪತ್ತೆಯಾದವು. ಅಡ್ವೆಂಚರ್ಸ್ ಕ್ಲಬ್ಬಿನ ಭಾಸ್ಕರ ಬಾಬು, ಎಂಜಿನಿಯರ್ ತೇಜಮೂರ್ತಿ ಮತ್ತು ವಸಂತ ಕುಮಾರ ಅವರು ಮೇ 28ರಂದು ಪಶ್ಚಿಮ ಘಟ್ಟದ ಗುಂಡ್ಯ ಸಮೀಪದ ಚೌಡೇಶ್ವರಿ ದೇವಸ್ಥಾನದಲ್ಲಿ ಕಾರು ನಿಲ್ಲಿಸಿ ಚಾರಣಕ್ಕೆ ಹೊರಟವರು ಕಣ್ಮರೆಯಾಗಿದ್ದರು. ಅವರ ಶೋಧಕ್ಕಾಗಿ ನಡೆಸಿದ ಎಲ್ಲ ಯತ್ನಗಳೂ ವಿಫಲಗೊಂಡಿದ್ದವು.

2006: ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಪಾಕಿಸ್ಥಾನದ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 77 ರನ್ ಸಿಡಿಸಿ ಅಜೇಯರಾಗಿ ಉಳಿಯುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಅವರು ಪಾಕಿಸ್ಥಾನ ಪ್ರವಾಸದ ಬಳಿಕ 53.95 ಸರಾಸರಿಗೆ ಬಂದಿದ್ದು, ಆಸ್ಟ್ರೇಲಿಯಾದ ಮೈಕೆಲ್ ಬೆವನ್ ಹೆಸರಿನಲ್ಲಿ ಇದ್ದ 53.58ರ ಸರಾಸರಿಯ ವಿಶ್ವದಾಖಲೆ (ಕನಿಷ್ಠ 1000 ರನ್) ಅಳಿಸಿ ಹಾಕಿದರು.

2006: ಬೇಸಾಯ ಮಾಡುತ್ತಾ ಶಾಲೆಯ ಮುಖವನ್ನೇ ನೋಡಿರದೇ ಇದ್ದ ಜಡೇಗೌಡ ಅವರು ಬಿಳಿಗಿರಿ ರಂಗನ ಬೆಟ್ಟದ ಡಾ. ಸುದರ್ಶನ್ ಅವರ ಪ್ರಯತ್ನದ ಫಲವಾಗಿ ವಿದ್ಯೆ ಕಲಿತು ಎಂ.ಎಸ್.ಸಿವರೆಗೂ ಕಲಿತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಇದರೊಂದಿಗೆ ಈ ರೀತಿ ನೇಮಕಗೊಂಡ ರಾಜ್ಯದ ಪ್ರಥಮ ಸೋಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರವನ್ನು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದ ಡೆನ್ಮಾರ್ಕಿನ ಡ್ಯಾನಿಷ್ ದಿನಪತ್ರಿಕೆ `ಜಿಲ್ಲಾಂಡ್ಸ್- ಪೋಸ್ಟೆನ್' ಈ ವ್ಯಂಗ್ಯಚಿತ್ರಗಳಿಗೆ ಜಗತ್ತಿನಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಕೇಳಿತು. ಅದನ್ನು ಸೌದಿ ಸ್ವಾಮ್ಯದ ಪಾನ್ ಅರಬ್ ವೃತ್ತಪತ್ರಿಕೆ `ಆಶ್ರಖ್ ಅಲ್-ಅವಾಸತ್' ಪ್ರಕಟಿಸಿತು. ಕ್ಷಮೆಯಾಚನೆಗೆ ಪತ್ರಿಕೆಯ ಮುಖ್ಯ ಸಂಪಾದಕ ಕಾರ್ಸ್ಟೆನ್ ಜಸ್ಟೆ ಸಹಿ ಹಾಕಿದರು. ಇದನ್ನು ಅರೇಬಿಕ್ ಭಾಷೆಗೆ ಭಾಷಾಂತರಿಸಿ `ಜಿಲ್ಲಾಂಡ್ಸ್- ಪೋಸ್ಟೆನ್'ನ ವೆಬ್ ಸೈಟಿನಲ್ಲೂ ಪ್ರಕಟಿಸಲಾಯಿತು. ಲಿಬಿಯಾ, ನೈಜೀರಿಯಾ ಮತ್ತು ಪಾಕಿಸ್ಥಾನದಲ್ಲಿ ಭುಗಿಲೆದ್ದ ಹಿಂಸಾಚಾರಗಳಿಗೆ 32 ಮಂದಿ ಬಲಿಯಾದ ಬಳಿಕ ಡ್ಯಾನಿಷ್ ಪತ್ರಿಕೆ ಈ ಕ್ಷಮೆಯಾಚನೆ ಕ್ರಮ ಕೈಗೊಂಡಿತು. `ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಚರ್ಚೆ' ಅಂಗವಾಗಿ 2005ರ ಸೆಪ್ಟೆಂಬರ್ 30ರಂದು ಮೊದಲಿಗೆ 12 ವ್ಯಂಗ್ಯಚಿತ್ರಗಳನ್ನು ಡೆನ್ಮಾರ್ಕಿನ ಪತ್ರಿಕೆ ಪ್ರಕಟಿಸಿತ್ತು. ಈ ವ್ಯಂಗ್ಯಚಿತ್ರಗಳು ಹಲವಾರು ಐರೋಪ್ಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಮರು ಮುದ್ರಣಗೊಂಡದ್ದಲ್ಲದೆ, ಇಟಲಿಯ ಸುಧಾರಣಾ ಸಚಿವ ರಾಬರ್ಟೊ ಕಾಲ್ಡೆರೋಲಿ ಅವರ ಟೀಶರ್ಟಿನಲ್ಲೂ ಮುದ್ರಣಗೊಂಡಿತ್ತು. ವಿವಾದದ ಹಿನ್ನೆಲೆಯಲ್ಲಿ ರಾಬರ್ಟೊ ರಾಜೀನಾಮೆ ನೀಡಿದ್ದರು.

2006: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ವೈರಾಗ್ಯಮೂರ್ತಿ ಭಗವಾನ್ ಬಾಹುಬಲಿಗೆ ನಡೆಯುವ ಹನ್ನೆರಡು ದಿನಗಳ ಮಹಾಮಸ್ತಕಾಭಿಷೇಕ ಕೊನೆಗೊಂಡಿತು.  ಸಹಸ್ರಮಾನದ ಮೊದಲ ಮಹಾಮಸ್ತಕಾಭಿಷೇಕದ ಧಾರ್ಮಿಕ ಆಚರಣೆ ಪರಂಪರೆಯ ಮಹತ್ವದ ಘಟ್ಟಕ್ಕೆ ತೆರೆಬಿತ್ತು.

1997: ಚೀನಾದ ಖ್ಯಾತ ನಾಯಕ ಡೆಂಗ್ ಷ್ಯಾವೊಪಿಂಗ್ ಬೀಜಿಂಗಿನಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.

1971: ತೈಲವರ್ಣ, ಜಲವರ್ಣ, ಬೆಳಕು- ನೆರಳು ಚಿತ್ರಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ಅನು ಪಾವಂಜೆ ಜನನ. ಇವರ ತಂದೆ ಕೃಷ್ಣಮೂರ್ತಿ, ತಾಯಿ ಶಾರದಾ. ಹುಟ್ಟ್ದಿದ್ದು ಮಂಗಳೂರಿನಲ್ಲಿ.

1978: ಸಂಗೀತ ನಿರ್ದೇಶಕ ಪಂಕಜ್ ಮಲ್ಲಿಕ್ ನಿಧನ.

1956: ಭಾರತೀಯ ಸ್ವಾತಂತ್ರ್ಯ ಯೋಧರಲ್ಲಿ ಒಬ್ಬರೂ, ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಧ್ಯಕ್ಷರೂ ಆದ ಆಚಾರ್ಯ ನರೇಂದ್ರ ದೇವ್ ನಿಧನರಾದರು.

1945: ಎರಡನೇ ಜಾಗತಿಕ ಸಮರದ ಸಂದರ್ಭದಲ್ಲಿ ಅಮೆರಿಕದ 30,000 ನೌಕಾಯೋಧರು ಪಶ್ಚಿಮ ಫೆಸಿಫಿಕ್ ದ್ವೀಪ ಇವಾ ಜಿಮಾಕ್ಕೆ ಲಗ್ಗೆ ಹಾಕಲು ಬಂದಿಳಿದರು. ಅಲ್ಲಿ ಅವರು ಜಪಾನ್ ಪಡೆಗಳಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಒಂದು ತಿಂಗಳ ಸುದೀರ್ಘ ಸಮರದ ಬಳಿಕ ಅಮೆರಿಕನ್ನರು ಪ್ರಮುಖ ಆಯಕಟ್ಟಿನ ಈ ದ್ವೀಪದ ಮೇಲೆ ಹಿಡಿತ ಸಾಧಿಸಿದರು.

1915: ಭಾರತದ ಸಮಾಜ ಸುಧಾರಕ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸ್ಥಾಪಕ ಗೋಪಾಲ ಕೃಷ್ಣ ಗೋಖಲೆ (1866-1915) ಅವರು ಪುಣೆಯಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ನಿಧನರಾದರು.

1906: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿ ಎಂದೇ ಜನಪ್ರಿಯರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಲ್ಕರ್ (19/2/1906- 13/5/1973) ಹುಟ್ಟಿದ ದಿನ.  ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಾರತದಲ್ಲಿ ಬಲಶಾಲಿಯಾಗಿ ಕಟ್ಟಿದರು.

1878: ಫೋನೋಗ್ರಾಫ್ ಸಂಶೋಧನೆಗಾಗಿ ಥಾಮಸ್ ಆಲ್ವಾ ಎಡಿಸನ್ ಅವರಿಗೆ ಪೇಟೆಂಟ್ ಲಭಿಸಿತು.

1859: ಸ್ವಾಂಟೆ ಆಗಸ್ಟ್ ಆರ್ಹೆನಿಯಸ್ (1859-1927) ಹುಟ್ಟಿದ ದಿನ. ಸ್ವೀಡಿಷ್ ಭೌತ ರಾಸಾಯನಿಕ ತಜ್ಞನಾದ ಈತ `ಹಸಿರುಮನೆ' ಪರಿಣಾಮವನ್ನು (ಕಾರ್ಬನ್ ಡೈ ಆಕ್ಸೈಡ್ನಿಂದ ವಾತಾವರಣದ ಬಿಸಿ ಹೆಚ್ಚುವುದು) ಮೊತ್ತ ಮೊದಲ ಬಾರಿಗೆ ಗುರುತಿಸಿದ. 

1807: ಆರೋನ್ ಬರ್ ಮೆಕ್ಸಿಕೊ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದಕ್ಕಾಗಿ ರಾಜದ್ರೋಹದ ಆಪಾದನೆಗೆ ಗುರಿಯಾಗಿ ಬಂಧಿತನಾದ ಅಮೆರಿಕಾದ ಮೊತ್ತ ಮೊದಲ ಉಪಾಧ್ಯಕ್ಷ ಎನಿಸಿದ. ಮುಂದೆ ಆರೋಪಮುಕ್ತನಾದರೂ ಈತನ ಮೇಲಿನ ಸಂಶಯಕ ಕಪ್ಪುಚುಕ್ಕೆ ಹಾಗೆಯೇ ಉಳಿದುಬಿಟ್ಟಿತು.

1670: ಛತ್ರಪತಿ ಶಿವಾಜಿ ಮಹಾರಾಜರ ಜನನ.

1473: ಪೋಲಂಡ್ ಖಗೋಳತಜ್ಞ ನಿಕೋಲಸ್ ಕೊಪರ್ನಿಕಸ್ (1473-1543) ಪೋಲಂಡಿನ ಟೊರುನ್ನಿನಲ್ಲಿ ಜನಿಸಿದ. ಭೂಮಿ ಮತ್ತು ಇತರ ಗ್ರಹಗಳು ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತಿವೆ ಎಂಬುದಾಗಿ ಈತ ಪ್ರತಿಪಾದಿಸಿದ ಸಿದ್ಧಾಂತವನ್ನು 1000 ವರ್ಷಗಳಿಗೂ ಹೆಚ್ಚು ಕಾಲದವರೆಗೆ ಇಡೀ ಜಗತ್ತು ಸಾರ್ವತ್ರಿಕವಾಗಿ ಒಪ್ಪಿಕೊಂಡಿತು. ಆದರೆ ಗ್ರಹಗಳು ವರ್ತುಲಾಕಾರದ ಕಕ್ಷೆಯಲ್ಲಿ ಸುತ್ತುತ್ತಿವೆ ಎಂಬುದಾಗಿ ಈತ ತಪ್ಪು ಲೆಕ್ಕ ಹಾಕಿದ್ದ. (ಗ್ರಹಗಳು ಸುತ್ತುವುದು ಅಂಡಾಕಾರದ ವೃತ್ತದಲ್ಲಿ ಎಂಬುದು ಮುಂದೆ ಖಚಿತಗೊಂಡಿತು.)

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement