ಇಂದಿನ ಇತಿಹಾಸ
ಮಾರ್ಚ್ 16
![](https://blogger.googleusercontent.com/img/b/R29vZ2xl/AVvXsEhkCF-X5ezBIANMz-U1V23WHQDhmK5kVI5iJkuCoYslwBaOvrCss6BeNdXYEsyK9eKgE6FEhjSOwWkImHf3PGYUbtPl-ipbXK7_kt4nalputVvXYD_Jmm42fnRtv9yDDsAdHCv7iBMPf-_E/s320/kunjurani-devi-weight-lifte.jpg)
ಮೆಲ್ಬೋರ್ನಿನಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಿರಿಯ ವೇಟ್ ಲಿಫ್ಟಿಂಗ್ ಪಟು ಕುಂಜುರಾಣಿ ದೇವಿ ಭಾರತಕ್ಕೆ ಮೊದಲ ಸ್ವರ್ಣಪದಕ ತಂದುಕೊಟ್ಟರು. ಮಹಿಳೆಯರ 48 ಕಿಲೋ ವಿಭಾಗದಲ್ಲಿ 166 ಕಿಲೋ ತೂಕ ಎತ್ತುವ ಮೂಲಕ ಕುಂಜುರಾಣಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದರು.
2008: ಚೀನಾದ ಪ್ರಧಾನಿಯಾಗಿ ವೆನ್ ಜಿಯಾಬೊ (65) ಎರಡನೇ ಬಾರಿಗೆ ಪುನರಾಯ್ಕೆಯಾದರು. ಚೀನಾ ಕಮ್ಯುನಿಸ್ಟ್ ಪಾರ್ಟಿಯ (ಸಿಪಿಸಿ) ಮೂರನೇ ಶ್ರೇಯಾಂಕದ ನಾಯಕರಾದ ವೆನ್ ಅವರು ಪ್ರಧಾನಿ ಸ್ಥಾನದ ಏಕೈಕ ಅಭ್ಯರ್ಥಿಯಾಗಿದ್ದರು.
2008: ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ನೂತನ `ಷರಿಯತ್ ನಿಕಾಹನಾಮಾ' (ವಿವಾಹ ಷರತ್ತುಗಳು) ಪ್ರಕಟಿಸಿತು. ಈ ನೂತನ ನಿಕಾಹನಾಮಾದಿಂದ ಮಹಿಳೆಯರಿಗೆ ಸಮಾನತೆಯ ಅವಕಾಶಗಳು ಹೆಚ್ಚುತ್ತವೆ. ಇದು ಮೂರು ಸಾರಿ ತಲಾಖ್ (ವಿಚ್ಛೇದನಕ್ಕೆ ಬಳಸುವ ಪದ) ಎಂದು ಹೇಳುವ ತಲಾಖ್ ನಾಮಾಗಿಂತ ತುಂಬ ಭಿನ್ನವಾಗಿದೆ. ಹಳೆಯ ಪದ್ಧತಿಯಿಂದ ಕುರಾನಿನ ಸಮಾನತೆ ಪ್ರತಿಪಾದನೆಗೆ ಸೂಕ್ತ ನ್ಯಾಯ ದಕ್ಕುವುದಿಲ್ಲ ಎಂದು ಅಖಿಲ ಭಾರತ ಮುಸ್ಲಿಂ ಮಹಿಳಾ ವೈಯಕ್ತಿಕ ಕಾನೂನು ಮಂಡಳಿ ವಾದಿಸಿತು. ವಿಚ್ಛೇದನಕ್ಕೆ ಕನಿಷ್ಠ ಮೂರು ತಿಂಗಳ ಅವಧಿಯನ್ನು ಗಂಡು ಮತ್ತು ಹೆಣ್ಣಿಗೆ ನೀಡುವುದು ಹೊಸ ನಿಕಾಹನಾಮಾದ ಸುಧಾರಣಾ ಕ್ರಮಗಳಲ್ಲಿ ಒಂದು. ಎಸ್ ಎಂ ಎಸ್, ಇ-ಮೇಲ್, ದೂರವಾಣಿ ಅಥವಾ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ತಲಾಖ್ ನೀಡುವುದನ್ನು ಮಂಡಳಿಯ ಹೊಸ ನಿಕಾಹನಾಮಾ ತಿರಸ್ಕರಿಸಿತು. ತಲಾಖ್ಗೆ ಪ್ರಚೋದನೆಯನ್ನೂ ಅದು ವಿರೋಧಿಸಿತು. ಇದೇ ಮೊದಲ ಬಾರಿಗೆ ವಿವಾಹ ಸಂದರ್ಭದಲ್ಲಿ ಮೂರು ಫಾರಂಗಳನ್ನು ಭರ್ತಿ ಮಾಡಿಸಿಕೊಳ್ಳುವ ವಿಧಾನವನ್ನು ನಿಕಾಹನಾಮಾ ಅನುಸರಿಸುವುದು.
2008: ಟಿಬೆಟಿನಲ್ಲಿ ತನ್ನ ಆಡಳಿತ ವಿರುದ್ಧ ಬೌದ್ಧ ಬಿಕ್ಕುಗಳ ನೇತೃತ್ವದಲ್ಲಿ ಆರಂಭವಾದ ಹಿಂಸಾತ್ಮಕ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದ ಚೀನಾವು ದಲೈಲಾಮ ಬೆಂಬಲಿಗರ ಮೇಲೆ `ಪ್ರಜಾ ಸಮರ' ಘೋಷಿಸಿತು.
2008: ಪಾಕಿಸ್ಥಾನದಲ್ಲಿ 1990ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾದ ಭಾರತೀಯ ಪ್ರಜೆ ಸರಬ್ಜಿತ್ ಸಿಂಗ್ ಅವರನ್ನು ಏಪ್ರಿಲ್ 1 ರಂದು ಲಾಹೋರಿನ ಕಾರಾಗೃಹದಲ್ಲಿ ನೇಣುಗಂಬಕ್ಕೆ ಏರಿಸಲಾಗುವುದು, 17 ವರ್ಷಗಳಿಂದ ಲಾಹೋರಿನ ಕೊಟ್ಲಖ್ ಪತ್ ಜೈಲುವಾಸಿಯಾದ ಸರಬ್ಜಿತ್ ಸಿಂಗ್ ಅವರನ್ನು ಗಲ್ಲಿಗೇರಿಸುವ ಸಂಬಂಧ ಕಾರಾಗೃಹ ಅಧಿಕಾರಿಗಳಿಗೆ ಸೂಚನೆ ಬಂದಿದೆ ಎಂದು ಪತ್ರಿಕೆಯೊಂದು ವರದಿ ಮಾಡಿತು.
2007: ಒರಿಸ್ಸಾದ ದಕ್ಷಿಣ ಗಂಜಾಮ್ ಜ್ಲಿಲೆಯ ಬೆರ್ಹಾಮ್ ಪುರದ ಫಾರ್ಮೆಸಿ ವಿದ್ಯಾರ್ಥಿ ಪಿಂಟು ಮಹಾಕುಲ್ ಅವರು ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ 141 ಮೀಟರ್ ಉದ್ದ, 24 ಕಿಲೋ ಗ್ರಾಂ ತೂಕದ ಪತ್ರವೊಂದನ್ನು ಕಳುಹಿಸಿದರು. `ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಇನ್ನೊಂದು ಅವಧಿಗೆ ರಾಷ್ಟ್ರಪತಿಯಾಗಿ ಮುಂದುವರೆಯಬೇಕು ಎಂಬುದು ನಮ್ಮ ಆಗ್ರಹ' ಎಂಬುದು ಈ ಪತ್ರದ ಸಾರಾಂಶವಾಗಿತ್ತು.
2007: ಐಸಿಸಿ ವಿಶ್ವಕಪ್ನ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರು ಎಸೆತಗಳಲ್ಲಿ ಆರು ಸಿಕ್ಸರ್, ಒಂದೇ ಓವರಿನಲ್ಲಿ 36 ರನ್ ಗಳಿಸುವ ಮೂಲಕ ಸೇಂಟ್ ಕಿಟ್ಸ್ ನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾದ ಹರ್ಷೆಲ್ ಗಿಬ್ಸ್ ವಿಶ್ವದಾಖಲೆ ಸ್ಥಾಪಿಸಿದರು. ಹಾಲೆಂಡ್ ಮತ್ತು ದಕ್ಷಿಣ ಆಫ್ರಿಕದ ಮಧ್ಯೆ ನಡೆದ ವಿಶ್ವ ಕಪ್ ಎ ಬಣದ ಪಂದ್ಯದಲ್ಲಿ ಗಿಬ್ಸ್ ಈ ದಾಖಲೆ ಮಾಡಿದರು.
2007: ಹಿಂಸಾತ್ಮಕ ಪ್ರತಿಭಟನೆಗೆ ಬೆಚ್ಚಿ ಬಿದ್ದ ಪಶ್ಚಿಮ ಬಂಗಾಳ ಸರ್ಕಾರವು ರಾಷ್ಟ್ರಮಟ್ಟದಲ್ಲಿ `ಸಾಮಾಜಿಕ ಸಮನ್ವಯ ನೀತಿ' ರೂಪುಗೊಳ್ಳುವವರೆಗೆ ರಾಜ್ಯದಲ್ಲಿ ಎಲ್ಲ ವಿಶೇಷ ವಿತ್ತ ವಲಯಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿತು.
2007: ತಮಿಳು ಚಿತ್ರರಂಗದ ಮುಂಚೂಣಿ ನಟಿಯರಲ್ಲಿ ಒಬ್ಬರಾಗಿದ್ದ ಸರಿತಾ ಅವರು ತಮ್ಮ ಪತಿ ಮಲಯಾಳಿ ಚಿತ್ರನಟ ಮುಖೇಶ ಅವರ ವಿರುದ್ಧ ಕ್ರೂರ ನಡವಳಿಕೆಯ ಆರೋಪ ಮಾಡಿ ತಮಗೆ ವಿಚ್ಛೇದನ ಕೊಡಿಸುವಂತೆ ಚೆನ್ನೈಯ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು.
2006: ಅಲ್ ಖೈದಾ ಉಗ್ರಗಾಮಿಗಳ ಹಿಡಿತದ ಉತ್ತರ ಇರಾಕಿನ ಸಮರ್ರಾ ಪ್ರದೇಶದ ಮೇಲೆ ಅಮೆರಿಕ ಮತ್ತು ಇರಾಕಿ ಸಂಯುಕ್ತ ಪಡೆ ಭಾರಿ ಪ್ರಮಾಣದ ವಾಯುದಾಳಿ ಆರಂಭಿಸಿತು.
2006: ಮೆಲ್ಬೋರ್ನಿನಲ್ಲಿ ನಡೆದ 18ನೇ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಿರಿಯ ವೇಟ್ ಲಿಫ್ಟಿಂಗ್ ಪಟು ಕುಂಜುರಾಣಿ ದೇವಿ ಭಾರತಕ್ಕೆ ಮೊದಲ ಸ್ವರ್ಣಪದಕ ತಂದುಕೊಟ್ಟರು. ಮಹಿಳೆಯರ 48 ಕಿಲೋ ವಿಭಾಗದಲ್ಲಿ 166 ಕಿಲೋ ತೂಕ ಎತ್ತುವ ಮೂಲಕ ಕುಂಜುರಾಣಿ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜ ಹಾರಿಸಿದರು.
2006: ಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ ಕನ್ನಡದಿಂದ ಹಿಂದಿಗೆ ಅನುವಾದಿಸಿದ ಕುವೆಂಪು ರಾಮಾಯಣ ಕೃತಿಯು 2006ನೇ ಸಾಲಿನ ಪಿತಾಶ್ರೀ ಗೋಪಿರಾಂ ಗೋಯೆಂಕಾ ಕನ್ನಡ- ಹಿಂದಿ ಅನುವಾದ ಪುರಸ್ಕಾರಕ್ಕೆ ಆಯ್ಕೆಯಾಯಿತು. ಬೆಂಗಳೂರು ಯಲಹಂಕ ಉಪನಗರದ ಕಮಲ ಗೋಯೆಂಕಾ ಪ್ರತಿಷ್ಠಾನವು ಪ್ರತಿವರ್ಷ ಉತ್ತಮ ಅನುವಾದಿತ ಕೃತಿಗೆ ಈ ಪ್ರಶಸ್ತಿ ನೀಡುತ್ತದೆ.
2002: ನ್ಯೂಜಿಲ್ಯಾಂಡಿನ ನೇಥನ್ ಅಸ್ಟ್ಲೆ ಅವರು 218 ನಿಮಿಷಗಳಲ್ಲಿ 153 ಚೆಂಡುಗಳಿಗೆ (ಬಾಲ್ಗಳಿಗೆ) 200 ರನ್ ಗಳಿಸಿ ಅತಿ ಕಡಿಮೆ ಅವಧಿಯಲ್ಲಿ ದ್ವಿಶತಕ ಬಾರಿಸಿದ ಆಟಗಾರನೆನಿಸಿದರು. ಇಂಗ್ಲೆಂಡಿನ ಕ್ರೈಸ್ಟ್ ಚರ್ಚಿನಲ್ಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಅಸ್ಟ್ಲೆ ಅವರು ಈ ಸಾಧನೆ ಮಾಡಿದರು.
1960: ಕಲಾವಿದ ಬಿ. ರಘುರಾಮ್ ಜನನ.
1952: ಕಲಾವಿದೆ ಎಂ.ಎಸ್. ಶೀಲಾ ಜನನ.
1935: ಖ್ಯಾತ ರಂಗಕರ್ಮಿ ಜಿ.ವಿ. ಶಿವಾನಂದ (16-3-1935ರಿಂದ 25-3-2002) ಅವರು ವೃತ್ತಿ ರಂಗಭೂಮಿಯ ನಾಟಕ ರತ್ನ ಡಾ. ಗುಬ್ಬಿ ವೀರಣ್ಣ- ಜಿ. ಸುಂದರಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.
1927: ಬಾಹ್ಯಾಕಾಶ ಯಾನದಲ್ಲಿದ್ದಾಗ ಮೃತನಾದ ಪ್ರಪ್ರಥಮ ಸೋವಿಯತ್ ಗಗನಯಾನಿ ವ್ಲಾದಿಮೀರ್ ಕೊಮಾರೋವ್ ಹುಟ್ಟಿದ್ದು ಇದೇ ದಿನ.
1926: ದ್ರವ ಇಂಧನ ಶಕ್ತಿಯ ಜಗತ್ತಿನ ಪ್ರಪ್ರಥಮ ರಾಕೆಟನ್ನು ರಾಬರ್ಟ್ ಎಚ್ ಗೊಡ್ಡಾರ್ಡ್ ಅಮೆರಿಕದ ಮೆಸಾಚ್ಯುಸೆಟ್ಸಿನಲ್ಲಿ ಹಾರಿಸಿದ. ರಾಕೆಟಿಗೆ ಪೆಟ್ರೋಲ್ ಹಾಗೂ ದ್ರವ ಆಮ್ಲಜನಕ ಬಳಸಲಾಯಿತು.
1918: ಕಲಾವಿದ ವಿ. ನಾರಾಯಣಸ್ವಾಮಿ ಜನನ.
1910: ಇಫ್ತಿಕರ್ ಅಲಿ ಖಾನ್ (1910-1952) ಹುಟ್ಟಿದ ದಿನ. ಪಟೌಡಿಯ ನವಾಬರಾದ ಇವರು ಭಾರತದ ಟೆಸ್ಟ್ ಕ್ಯಾಪ್ಟನ್ ಆಗಿದ್ದರು. ಮನ್ಸೂರ್ ಅಲಿಖಾನ್ ಪಟೌಡಿ ಇವರ ಪುತ್ರ.
1836: ಬ್ರಿಟಿಷ್ - ಅಮೆರಿಕನ್ ಸಂಶೋಧಕ ಆ್ಯಂಡ್ರ್ಯೂ ಸ್ಮಿತ್ ಹಲ್ಲಿಡೀ (1836-1900) ಜನ್ಮದಿನ. ಕೇಬಲ್ ರೈಲ್ವೆ ಸಂಶೋಧಕ ಈತ.
1527: ಮೊಘಲ್ ಚಕ್ರವರ್ತಿ ಬಾಬರ್ ಆಗ್ರಾ ಸಮೀಪದ ಖಾನ್ವಾದಲ್ಲಿ ಮೇವಾಡದ ರಾಣಾ ಸಂಘ ನೇತೃತ್ವದ ರಜಪೂತ ಪಡೆಗಳನ್ನು ಸೋಲಿಸಿದನು. ಪಾಣಿಪತ್ ಯುದ್ಧಕ್ಕಿಂತಲೂ ಭೀಕರವಾಗಿ ನಡೆದ ಈ ಕದನದಲ್ಲಿ ಉಭಯ ಕಡೆಗಳಲ್ಲೂ ಸಾಕಷ್ಟು ಸಾವು ನೋವು ಸಂಭವಿಸಿತು. ಈ ಸಮರವು ಬಾಬರನನ್ನು ಹಿಂದುಸ್ಥಾನದ ಚಕ್ರವರ್ತಿಯನ್ನಾಗಿ ಮಾಡಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment