Monday, June 22, 2009

ಇಂದಿನ ಇತಿಹಾಸ History Today ಜೂನ್ 19

ಇಂದಿನ ಇತಿಹಾಸ

ಜೂನ್ 19

ಯುದ್ಧಾ ನಂತರ ಇರಾಕಿನ `ಸುರಕ್ಷಿತ ವಲಯ'ದಲ್ಲಿ ಕಂಡು ಬರುತ್ತಿರುವ ದಿನ ನಿತ್ಯದ ಜನಜೀವನದ ಬಗ್ಗೆ ಅನಿವಾಸಿ ಭಾರತೀಯ ರಾಜೀವ್ ಚಂದ್ರಶೇಖರ್ ರಚಿಸಿರುವ `ಇಂಪೀರಿಯಲ್ ಲೈಫ್ ಇನ್ ದ ಎಮೆರಾಲ್ಡ್ ಸಿಟಿ' (ಹವಳದ ನಗರದಲ್ಲಿನ ಭವ್ಯ ಬದುಕು) ಕೃತಿ, ಕಥೆಯೇತರ ವಿಭಾಗದಲ್ಲಿ ಬ್ರಿಟನ್ನಿನ ಅತ್ಯುನ್ನತ ಪ್ರಶಸ್ತಿಯಾದ `ಬಿಬಿಸಿ ಫೋರ್ ಸ್ಯಾಮ್ಯುಯೆಲ್ ಜಾನ್ಸನ್ ಪ್ರಶಸ್ತಿಗೆ ಆಯ್ಕೆಯಾಯಿತು.

2008: ಕನ್ನಡದ ಹೆಸರಾಂತ ಹಿರಿಯ ನಟಿ ಬಿ.ಸರೋಜಾದೇವಿ, ಗಾನಕೋಗಿಲೆ ಲತಾ ಮಂಗೇಶ್ಕರ್, ನಟ ದಿಲೀಪ್ ಕುಮಾರ್ ಹಾಗೂ ನಿರ್ದೇಶಕ ತಪನ್ ಸಿನ್ಹಾ ಅವರನ್ನು ಕೇಂದ್ರ ಸರ್ಕಾರವು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿತು. 60ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ತನ್ನ ಅತ್ಯುನ್ನತ ಪ್ರಶಸ್ತಿ `ಆಫೀಸರ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಗೆ ಹಿಂದಿ ನಟ ಶಾರುಖ್ ಖಾನ್ ಅವರನ್ನು ಫ್ರಾನ್ಸ್ ಆಯ್ಕೆ ಮಾಡಿತು. ಹಿಂದಿ ಸಿನಿಮಾ ರಂಗಕ್ಕೆ ಮತ್ತು ಭಾರತ- ಫ್ರಾನ್ಸ್ ಸಹಕಾರ ವರ್ಧನೆಗೆ ಶಾರುಖ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಯಿತು.

2007: ಅಟ್ಲಾಂಟಿಸ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಧಕ್ಕೆಯಿಂದ ಕಳಚಿಕೊಂಡು ಭೂಮಿಯತ್ತ ಪ್ರಯಾಣ ಬೆಳೆಸಿತು. `ಐಎಸ್ಎಸ್' ನಲ್ಲಿ ಆರು ತಿಂಗಳು ತಂಗಿದ್ದ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಸೇರಿದಂತೆ 7 ಗಗನ ಯಾತ್ರಿಗಳು ಅಟ್ಲಾಂಟಿಸ್ ನೌಕೆಯಲ್ಲಿ ಭೂಮಿಯತ್ತ ಹೊರಟರು. ಏಳು ಗಗನಯಾತ್ರಿಗಳನ್ನು ಹೊತ್ತು ಜೂನ್ 8ರಂದು ಅಂತರಿಕ್ಷದತ್ತ ಪ್ರಯಾಣ ಬೆಳೆಸಿದ್ದ ಅಟ್ಲಾಂಟಿಸ್ ಜೂನ್ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. `ಐಎಸ್ಎಸ್' ನಲ್ಲಿ ಸುನೀತಾ ಬದಲಿಗೆ ಕಾರ್ಯನಿರ್ವಹಿಸಲು ನಿಯೋಜಿತರಾಗಿದ್ದ ಕ್ಲೆಟನ್ ಅಂಡರ್ ಸನ್ ಸಹ ಇದರಲ್ಲಿ ಪಯಣಿಸಿದ್ದರು.

2007: ಯುದ್ಧಾ ನಂತರ ಇರಾಕಿನ `ಸುರಕ್ಷಿತ ವಲಯ'ದಲ್ಲಿ ಕಂಡು ಬರುತ್ತಿರುವ ದಿನ ನಿತ್ಯದ ಜನಜೀವನದ ಬಗ್ಗೆ ಅನಿವಾಸಿ ಭಾರತೀಯ ರಾಜೀವ್ ಚಂದ್ರಶೇಖರ್ ರಚಿಸಿರುವ `ಇಂಪೀರಿಯಲ್ ಲೈಫ್ ಇನ್ ದ ಎಮೆರಾಲ್ಡ್ ಸಿಟಿ' (ಹವಳದ ನಗರದಲ್ಲಿನ ಭವ್ಯ ಬದುಕು) ಕೃತಿ, ಕಥೆಯೇತರ ವಿಭಾಗದಲ್ಲಿ ಬ್ರಿಟನ್ನಿನ ಅತ್ಯುನ್ನತ ಪ್ರಶಸ್ತಿಯಾದ `ಬಿಬಿಸಿ ಫೋರ್ ಸ್ಯಾಮ್ಯುಯೆಲ್ ಜಾನ್ಸನ್ ಪ್ರಶಸ್ತಿಗೆ ಆಯ್ಕೆಯಾಯಿತು. `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಬಾಗ್ದಾದ್ ಬ್ಯೂರೊದ ಮಾಜಿ ಮುಖ್ಯಸ್ಥ ಚಂದ್ರಶೇಖರ್, ರಕ್ಷಿತ ವಲಯದಲ್ಲಿ ಅಮೆರಿಕನ್ನರ ಗೂಡಿನೊಳಗಿನ ಬದುಕು ಮತ್ತು ರಕ್ಷಿತ ವಲಯದ ಆಚೆ ಇರಾಕ್ ಜನತೆಯ ಗೊಂದಲ, ಅರಾಜಕತೆಯ ಬದುಕನ್ನು ಇಲ್ಲಿ ಚಿತ್ರಿಸಿದ್ದಾರೆ. ಸದ್ದಾಂ ಹುಸೇನ್ ಅವರನ್ನು 2003ರಲ್ಲಿ ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಇರಾಕಿನಲ್ಲಿ ಆಡಳಿತ ನಡೆಸಿದ ಸರ್ಕಾರದ ವೈಫಲ್ಯಗಳನ್ನೂ ಈ ಕೃತಿಯಲ್ಲಿ ಪಟ್ಟಿ ಮಾಡಲಾಗಿದೆ. 18ನೇ ಶತಮಾನದ ನಿಘಂಟು ರಚನೆಕಾರ ಮತ್ತು ಪ್ರಬಂಧ ರಚನೆಕಾರ ಸ್ಯಾಮುಯೆಲ್ ಜಾನ್ಸನ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಪ್ರಚಲಿತ ವಿದ್ಯಮಾನ, ಇತಿಹಾಸ, ರಾಜಕೀಯ, ವಿಜ್ಞಾನ, ಕ್ರೀಡೆ, ಪ್ರವಾಸ, ಜೀವನಚರಿತ್ರೆ ವಿಭಾಗದಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ನೀಡಲಾಗುತ್ತಿದೆ. ಪ್ರಶಸ್ತಿ 30 ಸಾವಿರ ಪೌಂಡ್ ನಗದು ಹೊಂದಿದೆ.

2007: ಸಿಂಗೂರು ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಆರ್ಥಿಕ ಪುನರ್ ವಸತಿ ಕಲ್ಪಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿತು. ಇದೇ ವೇಳೆ, ಭೂಮಿ ನೀಡಲು ಇಚ್ಛಿಸದ ರೈತರ ಜಮೀನನ್ನು ಮರಳಿ ನೀಡಬೇಕೆನ್ನುವ ತೃಣಮೂಲ ಕಾಂಗ್ರೆಸ್ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತು. ಈಗ ನೀಡಲಾಗುವ ಆರ್ಥಿಕ ಪುನರ್ ವಸತಿ ಪ್ಯಾಕೇಜ್ನಡಿ ಯೋಜನೆಯ ನಿರಾಶ್ರಿತರಿಗೆ ಕೆಲವು ತರಬೇತಿಗಳನ್ನು ಆರಂಭಿಸಲಾಗುವುದು ಮತ್ತು ಟಾಟಾ ಮೋಟಾರ್ಸ್ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ರಾಜ್ಯದ ಕೈಗಾರಿಕಾ ಸಚಿವ ನಿರುಪಮ್ ಸೇನ್ ವಿವರಿಸಿದರು.

2007: ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ (66) ಈದಿನ ಬೆಳಿಗ್ಗೆ ಸುಮಾರು 5 ಗಂಟೆಗೆ ಮೈಸೂರಿನಲ್ಲಿ ನಿಧನರಾದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು 20 ದಿನಗಳ ಹಿಂದಷ್ಟೇ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಅವರು, ಈದಿನ ಬೆಳಗಿನ ಜಾವ ತೀವ್ರ ಸುಸ್ತಿನ ಬಳಿಕ ಕೊನೆಯುಸಿರೆಳೆದರು. ಲೇಖಕಿಯೂ ಆಗಿರುವ ಆರ್. ನಿರ್ಮಲಾ ಇವರು ಪ್ರೊ.ಕೆ. ರಾಮದಾಸ್ ಅವರ ಪತ್ನಿ. 1941ರ ಮಾರ್ಚ್ 26ರಂದು ಕಳಸದಲ್ಲಿ ಹುಟ್ಟಿದ್ದ ರಾಮದಾಸ್ ಬಾಲ್ಯದಲ್ಲೇ ತಂದೆ ಶಿವಯ್ಯ ಅವರನ್ನು ಕಳೆದುಕೊಂಡವರು. ತಾಯಿ ಮಂಜಮ್ಮ ದುಡಿದು ಅವರನ್ನು ಬೆಳೆಸಿ, ಓದಿಸಿದರು. ಹೊಸನಗರದಲ್ಲಿದ್ದ ರಾಮದಾಸ್ ಕಾಲೇಜು ಓದಲು ಮೈಸೂರಿಗೆ ಬಂದು ಮೈಸೂರಿನವರೇ ಆದರು. ಪ್ರೊ. ರಾಮದಾಸ್ ಅವರ ಅಂತ್ಯಸಂಸ್ಕಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅನಿಲ ಚಿತಾಗಾರದಲ್ಲಿ ಯಾವುದೇ ಧಾರ್ಮಿಕ ವಿಧಿ-ವಿಧಾನಗಳಿಲ್ಲದೆ ಸಂಜೆ 5.55ಕ್ಕೆ ನೆರವೇರಿತು. ಮೈಸೂರಿನಲ್ಲಿ ಯುವಜನ ಸಮಾಜವಾದಿ ಚಳವಳಿ, ಗೋಕಾಕ್ ಚಳವಳಿ, ಕನ್ನಡದ ಹೋರಾಟ, ದಲಿತ ಚಳವಳಿ ಮತ್ತು ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮದಾಸ್, ಲಂಕೇಶ್ ಅವರ ಸಾವಿನ ಬಳಿಕವೂ `ಕರ್ನಾಟಕ ಪ್ರಗತಿರಂಗದ ವಕ್ತಾರ'ರಾಗಿ ಉಳಿದವರು.

2007: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್ ರಾವ್ ಅವರಿಗೆ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈ ಗೌರವಕ್ಕೆ ಪಾತ್ರರಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ರಾವ್ ಅವರದಾಯಿತು.

2006: ಮುಖ್ಯಮಂತ್ರಿಯಾದ ನಾಲ್ಕು ತಿಂಗಳ ಬಳಿಕ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ರಾತ್ರಿ ತಮ್ಮ ಅಧಿಕೃತ ನಿವಾಸ `ಅನುಗ್ರಹ'ಕ್ಕೆ ಪ್ರವೇಶ ಮಾಡಿದರು. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ನೀಡಿರುವ ಅಪರೂಪದ ದೇಶೀಯ `ಘಿರ್' ತಳಿಗೆ ಸೇರಿದ ಗೋವು ನಂದಿನಿ ಮತ್ತು ಕರು ರಾಮನನ್ನು ಮನೆಯೊಳಗೆ ತುಂಬಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಔಪಚಾರಿಕವಾಗಿ ಹೊಸ ಮನೆಗೆ ಕಾಲಿಟ್ಟರು. ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

2006: ನಲ್ವತ್ತನಾಲ್ಕು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಆಯಕಟ್ಟಿನ ನಾಥು ಲಾ ಪಾಸ್ ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಬೀಜಿಂಗಿನಲ್ಲಿ ಸಮ್ಮತಿಸಿದವು.

1997: ಕಾರ್ಗೊ ಹಡಗು ಮುಂಬೈ ಬಳಿ ಸಮುದ್ರದಲ್ಲಿ ಮುಳುಗಿ ನಾಲ್ವರು ಮೃತರಾಗಿ 20 ಜನ ಕಣ್ಮರೆಯಾದರು.

1995: ಭಾರತ ಮತ್ತು ಅಮೆರಿಕ ವ್ಯಾಪಾರ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದವು.

1981: ಭಾರತದ ಸಂಪರ್ಕ ಉಪಗ್ರಹ `ಆ್ಯಪಲ್' ನ್ನು ಹೊತ್ತ ಯುರೋಪಿನ ಏರಿಯನ್ ರಾಕೆಟನ್ನು ಫ್ರೆಂಚ್ ಗಯಾನಾದ ಅಂತರಿಕ್ಷ ನೆಲೆ ಕೊವುರೋನಿಂದ ಯಶಸ್ವಿಯಾಗಿ ಹಾರಿಸಲಾಯಿತು.

1978: ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಟೆಸ್ಟಿನಲ್ಲಿ ಸೆಂಚುರಿ (108 ರನ್) ಬಾರಿಸುವುದರ ಜೊತೆಗೆ 8 ವಿಕೆಟ್ಗಳನ್ನು ಬೀಳಿಸಿದ (8-34) ಮೊತ್ತ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡಿನ ಇಯಾನ್ ಬಾಥಮ್ ಪಾತ್ರರಾದರು.

1974: ಕಲಾವಿದ ರೂಪ ಡಿ. ಬಿಜೂರ್ ಜನನ.

1966: ಶಿವಸೇನೆ ಸ್ಥಾಪನೆ.

1956: ಕಲಾವಿದ ಎಲ್. ಬಸವರಾಜ್ ಜಾನೆ ಜನನ.

1953: ಗೂಢಚರ್ಯೆಗಾಗಿ ಅಮೆರಿಕದ ಇಬ್ಬರು ನಾಗರಿಕರಾದ ಜ್ಯೂಲಿಯಸ್ ಮತ್ತು ಈಥೆಲ್ ರೋಸೆನ್ ಬರ್ಗ್ ಅವರನ್ನು ಸಿಂಗ್ ಸಿಂಗ್ ಸೆರೆಮನೆಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು. ಅಮೆರಿಕದಲ್ಲಿ ಗೂಢಚರ್ಯೆಗಾಗಿ ಮರಣದಂಡನೆಗೆ ಗುರಿಯಾದ ಮೊದಲ ಅಮೆರಿಕನ್ ಪ್ರಜೆಗಳು ಇವರು. ತಮ್ಮ ಕೈಗೆ ಬಂದಿದ್ದ ಸೋವಿಯತ್ ಸೇನಾ ರಹಸ್ಯಗಳನ್ನು ಸೋವಿಯತ್ ಒಕ್ಕೂಟಕ್ಕೆ ಹಿಂದಿರುಗಿಸಲು ಯತ್ನಿಸಿದರೆಂಬ ಆಪಾದನೆ ಅವರ ಮೇಲಿತ್ತು.

1953: ಕಲಾವಿದ ಅಶೋಕ ಅಕ್ಕಿ ಟಿ. ಜನನ.

1947: ಸಲ್ಮಾನ್ ರಷ್ದಿ ಜನ್ಮದಿನ. ಆಂಗ್ಲೋ ಇಂಡಿಯನ್ ಕಥೆಗಾರರಾದ ಇವರು ಇಸ್ಲಾಂಗೆ ಸಂಬಂಧಿಸಿದಂತೆ ಬರೆದ `ಸಟಾನಿಕ್ ವರ್ಸಸ್' ಕಥೆ 1989ರಲ್ಲಿ ಇರಾನಿನ ಮುಸ್ಲಿಮರ ಕೋಪಕ್ಕೆ ತುತ್ತಾಯಿತು. ಅವರು ರಷ್ದಿಗೆ `ಮರಣದಂಡನೆ' ವಿಧಿಸಿರುವುದಾಗಿ ಘೋಷಿಸಿದರು. ಇವರ `ಮಿಡ್ನೈಟ್ ಚಿಲ್ಡ್ರನ್ಸ್' ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ.

1940: ಸಂಗೀತಗಾರನ ಮನೆತನದಲ್ಲಿ ಬೆಳೆದ ಖ್ಯಾತ ಸಂಗೀತಗಾರ ಡಿ.ಎನ್. ಗುರುದತ್ ಅವರು ಡಿ.ಕೆ. ನಾಗಣ್ಣ- ಅಶ್ವತ್ಥ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ರಾಜಕಾರಣಿ ನಂದಿನಿ ಸತ್ಪತಿ ಜನನ.

1901: ಖ್ಯಾತ ಗಣಿತ ಶಾಸ್ತ್ರಜ್ಞ ರಾಜ್ ಚಂದ್ರ ಬೋಸ್ ಜನನ.

1867: ಮೆಕ್ಸಿಕೊದ ದೊರೆ ಮ್ಯಾಕ್ಸಿಮಿಲಿಯನ್ ನ್ನು ಬೆನಿಟೋ ಜುವಾರೆಜ್ ನ ಪಡೆಗಳು ಗುಂಡಿಟ್ಟು ಕೊಂದವು. ಆತನ ಪುಟ್ಟ ಸೇನೆ
1867ರ ಮೇ 15ರಂದು ಸೋತ ಬಳಿಕ ಈ ಘಟನೆ ನಡೆಯಿತು. ವಿಕ್ಟರ್ ಹ್ಯೂಗೊ, ಜಿಸೆಪ್ ಗ್ಯಾರಿಬಾಲ್ಡಿ ಮತ್ತು ಯುರೋಪಿನ ಹಲವಾರು ದೊರೆಗಳು ಮ್ಯಾಕ್ಸಿಮಿಲಿಯನ್ ನ್ನು ಕ್ಷಮಿಸುವಂತೆ ಮನವಿ ಮಾಡಿದರೂ ಆತನ ಮರಣದಂಡನೆಗೆ ಆದೇಶ ನೀಡಿದ ಜುವಾರೆಜ್ ಮೇಲೆ ಅವು ಯಾವ ಪರಿಣಾಮವನ್ನೂ ಬೀರಲಿಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement