My Blog List

Saturday, July 4, 2009

ಇಂದಿನ ಇತಿಹಾಸ History Today ಜುಲೈ 02

ಇಂದಿನ ಇತಿಹಾಸ ಜುಲೈ 02


ರಾಜಕೀಯ ಪಕ್ಷಗಳು ಹಾಗೂ ಪರಿಸರವಾದಿಗಳ ವಿರೋಧ ನಡುವೆಯೇ ಈದಿನ ಬೆಳಿಗ್ಗೆ 6 ಗಂಟೆಗೆ ವಿಶ್ವದ ಅತಿದೊಡ್ಡ ಪರಮಾಣು ಇಂಧನ ಚಾಲಿತ ಅಮೆರಿಕ ಯುದ್ಧನೌಕೆ `ನಿಮಿಜ್' ಚೆನ್ನೈ ಬಂದರಿನಿಂದ 2-3 ನಾಟಿಕಲ್ ಮೈಲಿ ದೂರದಲ್ಲಿ ಲಂಗರು ಹಾಕಿತು. ಎರಡು ಪರಮಾಣು ವಿದ್ಯುತ್ ಘಟಕಗಳ ಸಹಾಯದಿಂದ ಚಲಿಸುವ ಈ ಹಡಗು ಅಣು ವಿಕಿರಣಗಳನ್ನು ಹೊರ ಸೂಸುತ್ತದೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ ಎಂದು ಆರೋಪಿಸಿ ಎಡಪಕ್ಷಗಳು, ಎಐಎಡಿಎಂಕೆ ಮತ್ತು ಹಲವು ಪರಿಸರವಾದಿಗಳು `ನಿಮಿಜ್' ಭಾರತ ಪ್ರವೇಶವನ್ನು ವಿರೋಧಿಸಿದ್ದರು.

2008: ಅನುದಾನರಹಿತ ಖಾಸಗಿ ಶಾಲೆಗಳಲ್ಲಿ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವಂತೆ ಒತ್ತಾಯ ಹೇರುವುದು ಸಂವಿಧಾನಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳ ಮಾತೃಭಾಷೆ ಕನ್ನಡ ಆಗಿದ್ದರೆ, ಅಂಥ ವಿದ್ಯಾರ್ಥಿಗಳು ಪ್ರಥಮ ಭಾಷೆಯಾಗಿ ಕನ್ನಡವನ್ನು ಅಧ್ಯಯನ ಮಾಡಬೇಕು. ಒಂದು ವೇಳೆ ವಿದ್ಯಾರ್ಥಿಗಳ ಮಾತೃಭಾಷೆ ಕನ್ನಡೇತರ ಆಗಿದ್ದು, ಅಲ್ಲಿಯ ಪ್ರಾದೇಶಿಕ ಭಾಷೆ ಕನ್ನಡ ಆಗಿದ್ದರೆ, ಅಂತಹ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಯಲೇಬೇಕು. ಆದರೆ ಭಾಷಾ ಮಾಧ್ಯಮದ ಆಯ್ಕೆ ಸೇರಿದಂತೆ ತಮ್ಮ ಇಚ್ಛೆಯಂತೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿ ಅದರ ಆಡಳಿತ ನಡೆಸುವ ಅಧಿಕಾರವನ್ನು ಧಾರ್ಮಿಕ ಮತ್ತು ಭಾಷಾ ಅಲ್ಪಸಂಖ್ಯಾತ ಶಾಲೆಗಳಿಗೆ ಸಂವಿಧಾನ ನೀಡಿದೆ. ಭಾಷಾ ನೀತಿಯನ್ನು ರೂಪಿಸುವ ಅಧಿಕಾರ ಸರ್ಕಾರಕ್ಕೆ ಇದ್ದ ಮಾತ್ರಕ್ಕೆ, ಈ ಶಾಲೆಗಳ ಹಕ್ಕನ್ನು ಕಸಿದುಕೊಳ್ಳುವುದು ಉಚಿತವಲ್ಲ. ಇದು ಸಂವಿಧಾನದ 19(1)(ಜಿ), 26 ಮತ್ತು 30(1)ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತು.

2007: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿ 1997ರಲ್ಲಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತು. ಸಾರಿಗೆ ನಿಗಮವನ್ನು ಕರ್ನಾಟಕ ಈಶಾನ್ಯ ರಸ್ತೆ ಸಾರಿಗೆ ನಿಗಮ, ಕರ್ನಾಟಕ ವಾಯವ್ಯ ರಸ್ತೆ ಸಾರಿಗೆ ನಿಗಮ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ವನ್ನಾಗಿ ವಿಭಾಗ ಮಾಡಿ ಸರ್ಕಾರ 1997ರಲ್ಲಿ ಆದೇಶ ಹೊರಡಿಸಿತ್ತು. ಆದೇಶವನ್ನು ರದ್ದು ಮಾಡಿದ ನ್ಯಾಯಮೂರ್ತಿ ವಿ.ಗೋಪಾಲಗೌಡ ಅವರು ಸಾರಿಗೆ ನಿಗಮದ ವಕೀಲರ ಕೋರಿಕೆ ಮೇರೆಗೆ ರದ್ದತಿ ಆದೇಶ ಜಾರಿಗೆ ಆರು ವಾರಗಳ ತಡೆ ನೀಡಿದರು. ನಾಲ್ಕು ವಿಭಾಗಗಳನ್ನಾಗಿ ಮಾಡಿದ ಆದೇಶವನ್ನು ಪ್ರಶ್ನಿಸಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಮತ್ತು ಕೆಲಸಗಾರರ ಒಕ್ಕೂಟ ಅರ್ಜಿ ಸಲ್ಲಿಸಿತ್ತು.

2007: ರಾಜಕೀಯ ಪಕ್ಷಗಳು ಹಾಗೂ ಪರಿಸರವಾದಿಗಳ ವಿರೋಧ ನಡುವೆಯೇ ಈದಿನ ಬೆಳಿಗ್ಗೆ 6 ಗಂಟೆಗೆ ವಿಶ್ವದ ಅತಿದೊಡ್ಡ ಪರಮಾಣು ಇಂಧನ ಚಾಲಿತ ಅಮೆರಿಕ ಯುದ್ಧನೌಕೆ `ನಿಮಿಜ್' ಚೆನ್ನೈ ಬಂದರಿನಿಂದ 2-3 ನಾಟಿಕಲ್ ಮೈಲಿ ದೂರದಲ್ಲಿ ಲಂಗರು ಹಾಕಿತು. ಎರಡು ಪರಮಾಣು ವಿದ್ಯುತ್ ಘಟಕಗಳ ಸಹಾಯದಿಂದ ಚಲಿಸುವ ಈ ಹಡಗು ಅಣು ವಿಕಿರಣಗಳನ್ನು ಹೊರ ಸೂಸುತ್ತದೆ. ಇದರಿಂದ ಪರಿಸರಕ್ಕೆ ಹಾನಿಯುಂಟಾಗುತ್ತದೆ ಎಂದು ಆರೋಪಿಸಿ ಎಡಪಕ್ಷಗಳು, ಎಐಎಡಿಎಂಕೆ ಮತ್ತು ಹಲವು ಪರಿಸರವಾದಿಗಳು `ನಿಮಿಜ್' ಭಾರತ ಪ್ರವೇಶವನ್ನು ವಿರೋಧಿಸಿದ್ದರು.

2007: ಅನಾರೋಗ್ಯಕ್ಕೆ ಒಳಗಾಗಿದ್ದ ಮಾಜಿ ಕ್ರಿಕೆಟ್ ಆಟಗಾರ ದಿಲೀಪ್ ಸರ್ದೇಸಾಯಿ (67) ಮುಂಬೈಯಲ್ಲಿ ನಿಧನರಾದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದ ದಿಲೀಪ್, 1961ರಿಂದ 1973ರ ಅವಧಿಯಲ್ಲಿ ದಿಲೀಪ್ 30 ಟೆಸ್ಟ್ ಪಂದ್ಯಗಳನ್ನು ಆಡಿ, ಐದು ಶತಕಗಳು ಸೇರಿದಂತೆ ಎರಡು ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದರು. ಇನಿಂಗ್ಸ್ ಒಂದರಲ್ಲಿ ಅವರು 212 ರನ್ ಸೇರಿಸಿ ಗಮನ ಸೆಳೆದಿದ್ದರು. ಸ್ಪಿನ್ ಬೌಲಿಂಗ್ ನಿಭಾಯಿಸುವುದರಲ್ಲಿ ಎತ್ತಿದ ಕೈ ಎಂಬ ಖ್ಯಾತಿ ಅವರಿಗಿತ್ತು.

2007: ರಾಷ್ಟ್ರಪಿತ ಗಾಂಧೀಜಿ ಅವರು ತಮ್ಮ ಹತ್ಯೆ ನಡೆಯುವ 19 ದಿನಗಳ ಮುಂಚೆ ತಮ್ಮ `ಹರಿಜನ' ಪತ್ರಿಕೆಗೆ ಬರೆದ ಲೇಖನದ ಹಸ್ತಪ್ರತಿಯನ್ನು ಹರಾಜು ಹಾಕುವುದಾಗಿ ಘೋಷಿಸಿದ್ದ ಲಂಡನ್ನಿನ ಕ್ರಿಸ್ಟೀ ಹರಾಜು ಸಂಸ್ಥೆಯು ತನ್ನ ನಿರ್ಧಾರದಿಂದ ಹಿಂದೆ ಸರಿಯಿತು. ಈ ಹಸ್ತಪ್ರತಿಯನ್ನು ಭಾರಿ ಮೊತ್ತಕ್ಕೆ ಹರಾಜು ಹಾಕಲಾಗುವುದು ಎಂದು ಸಂಸ್ಥೆ ಈ ಮೊದಲು ಹೇಳಿತ್ತು. ಇದನ್ನು ಹರಾಜು ಹಾಕಬಾರದು ಎಂಬ ಭಾರತದ ಮನವಿಗೆ ಓಗೊಟ್ಟು ಹರಾಜು ಹಾಕುವ ನಿರ್ಧಾರದಿಂದ ಅದು ಹಿಂದೆ ಸರಿಯಿತು. ಭಾರತವು ಈ ಐತಿಹಾಸಿಕ ಮಹತ್ವವುಳ್ಳ ಪತ್ರವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಅಂತಾರಾಷ್ಟ್ರೀಯ ನಿರ್ದೇಶಕ ಡಾ. ಅಮಿನ್ ಜಾಫರ್ ಹೇಳಿದರು.

2007: ಬಿಸಿನೆಸ್ ವೀಕ್ ನಿಯತಕಾಲಿಕೆಯು ಭಾರತದ ಐಟಿ ದೊರೆ, ವಿಪ್ರೋ ಕಂಪೆನಿಯ ಅಜೀಂ ಪ್ರೇಮ್ ಜಿ ಹಾಗೂ ಬಾಂಗ್ಲಾದೇಶದ ಮೈಕ್ರೊ ಕ್ರೆಡಿಟ್ ಮುಖಂಡ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತ ಮೊಹಮ್ಮದ್ ಯೂಸುಫ್ ಅವರನ್ನು ವಿಶ್ವದ 30 ಮಂದಿ ವಾಣಿಜ್ಯೋದ್ಯಮಿಗಳ ಪಟ್ಟಿಯಲ್ಲಿ ಸೇರಿಸಿತು. ಅದು ಪ್ರಕಟಿಸಿದ ವಿಶ್ವದ ಪ್ರಸಿದ್ಧ ವಾಣಿಜ್ಯೋದ್ಯಮಿಗಳ ಪಟ್ಟಿಯಲ್ಲಿ ಬಿಲ್ ಗೇಟ್ಸ್, ಸ್ಟೆವ್ ಜಾಬ್ಸ್, ಹೆನ್ರಿ ಫೋರ್ಡ್, ಬೆಂಜಮಿನ್ ಫ್ರಾಂಕ್ಲಿನ್, ಜಾನ್ ಡಿ ರಾಕ್ ಫೆಲ್ಲರ್, ಥಾಮಸ್ ಎಡಿಸನ್ ಹಾಗೂ ಮಿಚೆಯಲ್ ಡೆಲ್ ಸೇರಿದ್ದಾರೆ. ಪ್ರೇಮ್ ಜಿ ಅವರು 21ನೇ ವಯಸ್ಸಿನಲ್ಲಿ ತಮ್ಮ ತಂದೆಯಿಂದ ವಿಪ್ರೊ ಕಂಪೆನಿಯ ಜವಾಬ್ದಾರಿಯನ್ನು ವಹಿಸಿಕೊಂಡು ವಿಶ್ವ ಮಟ್ಟದಲ್ಲಿ ಬೆಳೆಸಿದ್ದು, ಗುಣಮಟ್ಟದ ಸೇವೆಯೆ ಅದಕ್ಕೆ ಮೂಲ ಕಾರಣ. ಅಗ್ರಗಣ್ಯ ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಇದು ಒಂದು ಎಂದು ನಿಯತಕಾಲಿಕ ತಿಳಿಸಿತು.

2007: ಅನಿವಾಸಿ ಭಾರತೀಯ ಉದ್ಯಮಿ ಲಾರ್ಡ್ ಸ್ವರಾಜ್ ಪಾಲ್ ಅವರು ಸ್ಥಾಪಿಸಿದ ಅಂಬಿಕಾ ಪಾಲ್ ಪ್ರತಿಷ್ಠಾನವು ಲಂಡನ್ ಪ್ರಾಣಿ ಸಂಗ್ರಹಾಲಯದ ಒಂದು ಭಾಗವಾಗಿರುವ ಆಫ್ರಿಕಾ ಪಕ್ಷಿಧಾಮದ ಪುನಶ್ಚೇತನಕ್ಕಾಗಿ ಹತ್ತು ಲಕ್ಷ ಪೌಂಡುಗಳ ಕೊಡುಗೆ ಪ್ರಕಟಿಸಿತು. ಪ್ರತಿಷ್ಠಾನವು ಅಂಬಿಕಾ ಪಾಲ್ ಸ್ಮರಣಾರ್ಥ ಲಂಡನ್ ಪ್ರಾಣಿ ಸಂಗ್ರಹಾಲಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬ್ರಿಟನ್ನಿನ ನೂತನ ಪ್ರಧಾನಿ ಗೋರ್ಡಾನ್ ಬ್ರೌನ್ ಮತ್ತು ಪತ್ನಿ ಸಾರಾಹ್ ಬ್ರೌನ್ ಹಾಗೂ ಅವರ ಸಚಿವ ಸಂಪುಟದ ಡಜನ್ನಿಗೂ ಅಧಿಕ ಸದಸ್ಯರ ಸಮ್ಮುಖದಲ್ಲಿ ಸ್ವರಾಜ್ ಅವರು ಇದನ್ನು ಘೋಷಿಸಿದರು.

2007: ಭಾರತೀಯ ಮೂಲದ ಎಂಜಿನಿಯರ್ ಹರವಿಂದರ್ ಎಸ್. ಆನಂದ್ (46) ಅವರು ನ್ಯೂಯಾರ್ಕ್ ಪ್ರಾಂತ್ಯದ ಹಳ್ಳಿಯೊಂದರ ಮೇಯರ್ ಆಗಿ ಆಯ್ಕೆ ಆದರು. ಇದರೊಂದಿಗೆ ನ್ಯೂಯಾರ್ಕ್ ಪ್ರಾಂತ್ಯದಲ್ಲಿ ಮೇಯರ್ ಹುದ್ದೆಗೇರಿದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. 25 ವರ್ಷಗಳ ಹಿಂದೆ ವರ್ಷಗಳ ಹಿಂದೆ ಅಮೆರಿಕಕ್ಕೆ ಬಂದ ಆನಂದ್ ಅವರು ಕಳೆದ 10 ವರ್ಷಗಳಿಂದ ಲ್ಯುರೆಲ್ ಹೊಲೊವ್ ಗ್ರಾಮದ ನಿವಾಸಿ. ಪಂಜಾಬ್ ವಿಶ್ವವಿದ್ಯಾಲಯದಿಂದ ಕೆಮಿಕಲ್ ಎಂಜಿನಿಯರಿಂಗ್ ಪದವಿ ಪಡೆದ ಆನಂದ್ ಅವರು ಕೈಗಾರಿಕಾ ರಾಸಾಯನಿಕಗಳನ್ನು ತಯಾರಿಸುವ ಅಮೆರಿಕದ `ರಾಯ್ಸ್ ಇಂಟರ್ ನ್ಯಾಶನಲ್' ಎಂಬ ಕಂಪೆನಿಯಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ. ಲ್ಯೂರೆಲ್ ಹೊಲೊವ್ನ ಜನಸಂಖ್ಯೆ 1,930. ಇದರಲ್ಲಿ ಶೇ.3 ರಷ್ಟು ಜನ ಮಾತ್ರ ಭಾರತೀಯ ಮೂಲದವರು. ಆನಂದ್ ಅವರ ವೃತ್ತಿಪರತೆಯನ್ನು ಮತ್ತು ಸಮಸ್ಯೆಗಳನ್ನು ಪರಿಹರಿಸುವ ರೀತಿಯನ್ನು ಲ್ಯೂರೆಲ್ ಜನರು ಮೆಚ್ಚಿಕೊಂಡರು.

2007: ಗಾಜಿನಲ್ಲಿ ಪರಮಾಣುಗಳ ಚಲನೆಯನ್ನು ನೀರಿನಲ್ಲಿ ಜೆಲ್ಲಿಮೀನುಗಳ ಚಲನೆಗೆ ಹೋಲಿಸಿದ ಭಾರತೀಯ ಮೂಲದ ವಿಜ್ಞಾನಿ, ಪೆನ್ಸಿಲ್ವೇನಿಯಾದ ಬೆಥ್ಲೆಹೆಮ್ ವಿಶ್ವ ವಿದ್ಯಾಲಯದ ಅಂತಾರಾಷ್ಟ್ರೀಯ ಭೌತವಸ್ತು ಸಂಸ್ಥೆಯ ನಿರ್ದೇಶಕ ಹಿಮಾಂಶು ಜೈನ್ ಅವರಿಗೆ ಪ್ರತಿಷ್ಠಿತ 'ಒಟ್ಟೊ ಸ್ಕಾಟ್ ಸಂಶೋಧನಾ ಪ್ರಶಸ್ತಿ' ಲಭಿಸಿತು. ಫ್ರಾನ್ಸಿನಲ್ಲಿ ಗಾಜು ಸಮ್ಮೇಳನದಲ್ಲಿ ಈದಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜೈನ್ ಅವರೊಂದಿಗೆ ಫ್ರಾನ್ಸಿನ ವಾಲ್ಟರ್ ಕೊಬ್ ಪ್ರಶಸ್ತಿ ಹಂಚಿಕೊಂಡರು. ಈ ದ್ವೈವಾರ್ಷಿಕ ಪ್ರಶಸ್ತಿ 34,055 ಡಾಲರ್ ನಗದು ಮೊತ್ತ ಒಳಗೊಂಡಿದ್ದು ಗಾಜು ಸಂಶೋಧನೆಯಲ್ಲಿ ವಿಶ್ವದಲ್ಲೇ ಅತ್ಯಂತ ಪ್ರತಿಷ್ಠಿತ ಎಂದು ಪರಿಗಣಿಸಲಾಗಿದೆ.

2006: ಕನ್ನಡ ಚಲನಚಿತ್ರ ನಿರ್ಮಾಪಕ ಹಾಗೂ ಪತ್ರಿಕಾ ಸಂಪರ್ಕಾಧಿಕಾರಿ ಡಿ.ವಿ. ಸುಧೀಂದ್ರ ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. 1977ರಲ್ಲಿ ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ `ಸೊಸೆ ತಂದ ಸೌಭಾಗ್ಯ' ಚಿತ್ರಕ್ಕೆ ಪತ್ರಿಕಾ ಸಂಪರ್ಕಾಧಿಕಾರಿಯಾಗುವ ಮೂಲಕ ತಮ್ಮ ವೃತ್ತಿ ಜೀವನ ಆರಂಭಿಸಿದ್ದ ಸುಧೀಂದ್ರ `ನಗು ನಗುತಾ ನಲಿ', `ಗಣೇಶನ ಮದುವೆ', `ಗುಂಡನ ಮದುವೆ' ಚಿತ್ರಗಳನ್ನೂ ನಿರ್ಮಿಸಿದ್ದರು.

1958: ಡಾ. ವಸಂತ ಕುಮಾರ ಪೆರ್ಲ ಜನನ.

1957: ಎನ್.ಆರ್. ಗೀತಾ ಜನನ.

1950: ಈರಣ್ಣ ಇಟಗಿ ಜನನ.

1944: ಸಾಹಿತ್ಯ ಪ್ರಚಾರ, ಪತ್ರಿಕಾ ಸಂಪಾದಕ ಫ.ಗು. ಹಳಕಟ್ಟಿ ಅವರು ಗುರುಬಸಪ್ಪ -ದಾನಮ್ಮ ದಂಪತಿಯ ಮಗನಾಗಿ ಧಾರವಾಡದಲ್ಲಿ ಹುಟ್ಟಿದರು. 1964 ಜೂನ್ 29ರಂದು ಅವರು ನಿಧನರಾದರು.

1923: ಶಾರದಾ ಜಡೆ ಜನನ.

1921: ಭಾರತಿ ರಮಣಾಚಾರ್ಯ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement