My Blog List

Tuesday, September 22, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 20

ಇಂದಿನ ಇತಿಹಾಸ 

ಸೆಪ್ಟೆಂಬರ್ 20
 ನೆವಾಡಾ ರಾಜ್ಯದ ರಿನೊ ಚರ್ಚಿನ ಆರ್ಚ್ ಬಿಷಪ್ ಡಗ್ಲಾಸ್ ಇಗೋ ನೆ ಸೊವೈ  ಅಂತ್ಯ ಸಂಸ್ಕಾರದ ವೇಳೆ ಋಗ್ವೇದ, ಉಪನಿಷತ್ ಹಾಗೂ ಕುರಾನಿನಲ್ಲಿನ ಕೆಲವು ಸಾಲುಗಳನ್ನು ಪಠಿಸಿ ಧಾರ್ಮಿಕ ಸೌಹಾರ್ದ ಮೆರೆದ ಘಟನೆ ಅಮೆರಿಕದಲ್ಲಿ ನಡೆಯಿತು.. ಅವರ ಅಂತ್ಯಕ್ರಿಯೆ ವೇಳೆ ರಾಜನ್ ಜೇಡ್ ಅವರು ಗಾಯಿತ್ರಿ ಮಂತ್ರ, ಋಗ್ವೇದ, ಉಪನಿಷತ್ ಪಠಿಸಿದರು

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್ ನಗರದಲ್ಲಿ ಆರಂಭವಾದ 17ನೇ ಆವೃತ್ತಿಯ ಏಷಿಯನ್ ಗೇಮ್್ಸ ನಲ್ಲಿ ಜಿತು ರೈ ಅವರು ಭಾರತಕ್ಕೆ ಮೊತ್ತ ಮೊದಲ ಸ್ವರ್ಣ ಪದಕವನ್ನು ತಂದು ಕೊಟ್ಟರು. ಪುರುಷರ 50 ಮೀ. ಪಿಸ್ತೂಲ್ ಶೂಟ್ ಸ್ಪರ್ಧೆಯಲ್ಲಿ ಜಿತು ರೈ ಅವರು ಸ್ವರ್ಣ ಪದಕ ಗೆದ್ದರು. ಮಹಿಳೆಯರ ವಿಭಾಗದ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಶ್ವೇತಾ ಚೌಧುರಿ ಅವರು ಕಂಚಿನ ಪದಕ ಗೆದ್ದು ಮೊದಲ ಕಂಚಿನ ಪದಕವನ್ನು ತಂದುಕೊಟ್ಟರು.

2014: ಕೋಲ್ಕತ: ಆಹಾರ ವ್ಯರ್ಥವಾಗುವುದನ್ನು ತಪ್ಪಿಸುವ ಸಲುವಾಗಿ ಭಾರತೀಯ ವಿಜ್ಞಾನಿಗಳ ತಂಡವೊಂದು ಸೌರಶಕ್ತಿ ಚಾಲಿತ ಸಂಚಾರಿ ಕಿರು ಶೈತ್ಯಾಗಾರ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸಿದೆ. ರೈತರಿಗೆ ವರದಾನವಾಗಬಲ್ಲ ಈ 'ಕಿರು ಶೈತ್ಯಾಗಾರ' ಸಣ್ಣ ರೈತರಿಗೆ ಕಡಿಮೆ ವಿದ್ಯುತ್ ಇರುವ ಅಥವಾ ವಿದ್ಯುತ್ತೇ ಇಲ್ಲದ ಪ್ರದೇಶಗಳಲಿ ತಮ್ಮ ಕೃಷಿ ಉತ್ಪನ್ನಗಳನ್ನು ತಂಪಾಗಿ ಶೇಖರಿಸಿ ಇಡಲು ಅನುವು ಮಾಡಿಕೊಡಲಿದೆ. ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯು (ಐಐಟಿ) ತನ್ನ ತಂತ್ರಜ್ಞಾನ ಉದ್ಯಮಶೀಕತಾ ಪಾರ್ಕ್​ನಲ್ಲಿ (ಎಸ್​ಟಿಇಪಿ- ಸ್ಟೆಪ್) ಪ್ರದರ್ಶಿಸಿರುವ ಈ ಇಂಧನ ದಕ್ಷ ಶೈತ್ಯಾಗಾರ ಘಟಕಗಳು 2.5 ಕಿ.ವಾ ದಿಂದ 3.5 ಕಿ.ವಾ. ಸಾಮರ್ಥ್ಯ ಸೌರ ಫಲಕ ಮೂಲಕ ಪಡೆಯುವ ಸೌರ ವಿದ್ಯುತ್​ನಿಂದ ಕಾರ್ಯ ನಿರ್ವಹಿಸುತ್ತವೆ. ಇವುಗಳನ್ನು ಬೆಳೆಗಳಿಗೆ ತಕ್ಕಂತೆ ವಿನ್ಯಾಸ ಮಾಡಲೂಬಹುದು. 'ಉಷ್ಣವಿದ್ಯುತ್ ಆಧಾರಿತ ಶೈತ್ಯಾಗಾರಗಳು ಜಾಲ ವಿದ್ಯುತ್ತನ್ನು (ಗ್ರಿಡ್ ಎಲೆಕ್ಟ್ರಿಸಿಟಿ) ಆಧರಿಸಿರುವುದಿಲ್ಲ. ಅಲ್ಲದೆ ಎರಡು ವರ್ಷಗಳ ಬಳಿಕವೂ ಶೇಕಡಾ 40ರಷ್ಟು ವಿದ್ಯುತ್ ಉತ್ಪಾದನೆ ಮಾಡಬಲ್ಲವು. ಸಾಮಾನ್ಯವಾಗಿ ಶೈತ್ಯಾಗಾರಗಳು ವಿದ್ಯುತ್ತನ್ನು ಆಧರಿಸಿಯೇ ಕೆಲಸ ಮಾಡುತ್ತವೆ. ಅವುಗಳಿಗೆ ಬ್ಯಾಟರಿ ಬ್ಯಾಕ್​ಅಪ್ ಕೂಡಾ ಬೇಕು. ಆದರೆ ನಾವು ಸಂಶೋಧಿಸಿರುವ ಸೌರ ಶಕ್ತಿ ಆಧಾರಿತ ಶೈತ್ಯಾಗಾರಗಳಿಗೆ ವಿದ್ಯುತ್ ಬ್ಯಾಕ್ ಅಪ್ ಬೇಕಾಗಿಲ್ಲ. ಹೀಗಾಗಿ ನಿರ್ವಹಣಾ ವೆಚ್ಚ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ' ಎಂದು ಐಐಟಿ ಖರಗಪುರದ ಎಂಜಿನಿಯರ್ ಗಳಲ್ಲಿ ಒಬ್ಬರಾದ ವಿವೇಕ ಪಾಂಡೆ ಹೇಳಿದರು. ವ್ಯರ್ಥವಾಗುವ ಶೇಕಡಾ 30ರಷ್ಟು ಆಹಾರ ವಸ್ತುಗಳನ್ನು ಕೆಡದಂತೆ ರಕ್ಷಿಸಿ ಇಡಲು ಭಾರತವೊಂದರಲ್ಲೇ ಒಂದು ಕೋಟಿ ಟನ್ ಸಾಮರ್ಥ್ಯ ಶೈತ್ಯಾಗಾರಗಳು ಬೇಕು. ಭಾರತದ ಆಹಾರ ವಸ್ತು ಸರಬರಾಜು ವ್ಯವಸ್ಥೆಯಲ್ಲಿ ಶೇಕಡಾ 60ರಷ್ಟು ಶೈತ್ಯಾಗಾರ ಕೊರತೆ ಇದೆ ಎಂದು ಅವರು ವಿವರಿಸಿದರು. ನಮ್ಮ ತಂತ್ರಜ್ಞಾನದ ಬಳಕೆ ಮೂಲಕ ಭಾರತೀಯ ರೈತರು ತಮ್ಮ ಉತ್ಪನ್ನಗಳನ್ನು ಶೈತ್ಯಾಗಾರದಲ್ಲಿ ಕೆಡದಂತೆ ರಕ್ಷಿಸಿ ಇಟ್ಟುಕೊಂಡು ಬೆಲೆ ಏರಿದಾಗ ಮಾರಾಟ ಮಾಡಬಹುದು ಎಂದು ಪಾಂಡೆ ನುಡಿದರು. ಇದರಿಂದ ರೈತರ ಉತ್ಪನ್ನ ನಷ್ಟವಾಗುವುದು ಗಮನಾರ್ಹವಾಗಿ ತಗ್ಗುತ್ತದೆ. ತನ್ಮೂಲಕ ರೈತರ ಲಾಭವನ್ನು ಹೆಚ್ಚಿಸುತ್ತದೆ. ಸರಬರಾಜು ವ್ಯವಸ್ಥೆಯನ್ನು ಸ್ಥಿರಗೊಳಿಸುತ್ತದೆ. ನಾವು ವಿನ್ಯಾಸಗೊಳಿಸಿದ ಸೌರಶಕ್ತಿ ಚಾಲಿತ ಶೈತ್ಯಾಗಾರಗಳು ಸಾಮಾನ್ಯ ಘಟಕದ ವೆಚ್ಚವನ್ನು ನಾಲ್ಕು ಪಟ್ಟಿನಷ್ಟು ತಗ್ಗಿಸುತ್ತವೆ. ನಾವು ತಂತ್ರಜ್ಞಾನಕ್ಕಾಗಿ ನಾಲ್ಕು ವಿವಿಧ ಪೇಟೆಂಟ್ ಅರ್ಜಿ ಸಲ್ಲಿಸಿದ್ದೇವೆ' ಎಂದೂ ಅವರು ನುಡಿದರು.

2014: ರಾಯಪುರ: ಛತ್ತೀಸ್​ಗಢದ ಬಸ್ತಾರದ ಅಂತಾಗಢ (ಪರಿಶಿಷ್ಟ) ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ಸಿನ ಯಾವ ವಿರೋಧವೂ ಇಲ್ಲದೆಯೇ ಜಯಗಳಿಸಿತು. 'ಮೇಲಿನ ಯಾರಿಗೂ ಮತ ಇಲ್ಲ' (ನೋಟಾ) ಅವಕಾಶವನ್ನು ಇಲ್ಲಿನ ಮತದಾರರು ಬಹುದೊಡ್ಡ ಪ್ರಮಾಣದಲ್ಲಿ ಬಳಸಿಕೊಂಡಿದ್ದು ಕಣದಲ್ಲಿದ್ದ ಏಕೈಕ ಪ್ರತಿಸ್ಪರ್ಧಿಗಿಂತಲೂ ಹೆಚ್ಚು ಮತಗಳು ನೋಟಾಕ್ಕೆ ಬಿದ್ದವು. ಕಣದಲ್ಲಿದ್ದ ಏಕೈಕ ಪ್ರತಿಸ್ಪರ್ಧಿ ಅಂಬೇಡ್ಕರ್ ಪಾರ್ಟಿ ಆಫ್ ಇಂಡಿಯಾದ (ಎಪಿಐ) ರೂಪಧರ್ ಪಾಂಡೊ ಅವರಿಗೆ ಕೇವಲ 12,285 ಮತಗಳು ಬಂದರೆ, 13556 ಮಂದಿ ನೋಟಾಕ್ಕೆ ತಮ್ಮ ಮುದ್ರೆ ಒತ್ತಿದರು. ಬಿಜೆಪಿಯ ಭೋಜರಾಜ್ ನಾಗ್ ಅವರು ಉಪಚುನಾವಣೆಯಲ್ಲಿ 53,275 ಮತಗಳ ಅಂತರದಿಂದ ಜಯಗಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಸತತ ಮೂರನೇ ಬಾರಿ ಅಧಿಕಾರ ಉಳಿಸಿಕೊಂಡಿದ್ದ ಬಿಜೆಪಿಗೆ ರಾಜ್ಯದಲ್ಲಿ ನಡೆದ ಮೊದಲ ಉಪಚುನಾವಣೆಯ ವಿಜಯ ದಕ್ಕಿತು. ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿ ಮಂಥುರಾಮ್​ಪವಾರ್ ಅವರು ಕೊನೆಗಳಿಗೆಯಲ್ಲಿ ತಮ್ಮ ನಾಮಪತ್ರ ಹಿಂತೆಗೆದುಕೊಂಡದ್ದರಿಂದ ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿತ್ತು. ತಮ್ಮ ಅಚ್ಚರಿಯ ಕ್ರಮದ ಮೂಲಕ ಬಿಜೆಪಿಗೆ ನೇರ ಅನುಕೂಲ ಮಾಡಿಕೊಟ್ಟ ಪವಾರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟಿಸಿತ್ತು.

2014: ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಖ್ಯಾತ ವಕೀಲ ಪ್ರಶಾಂತ ಭೂಷಣ್ ಮತ್ತು ಇತರ ಇಬ್ಬರ ವಿರುದ್ಧ ಇಲ್ಲಿನ ವಿಚಾರಣಾ ನ್ಯಾಯಾಲಯವೊಂದು ಮಾನನಷ್ಟ ಖಟ್ಲೆಯೊಂದರಲ್ಲಿ ವಿಚಾರಣೆಗೆ ಗುರಿ ಪಡಿಸಿತು. ಮಾಜಿ ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರ ಪುತ್ರ ಅಮಿತ್ ಸಿಬಲ್ ಅವರು ಆಮ್​ಆದ್ಮಿ ಪಕ್ಷದ ಧುರೀಣರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸುನಿಲ್ ಕುಮಾರ್ ಅವರು ಕೇಜ್ರಿವಾಲ್, ಭೂಷಣ್, ಮನಿಷ್ ಸಿಸೋಡಿಯಾ ಮತ್ತು ಶಾಝಿಯಾ ಇಲ್ಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ 500 ನೇ ವಿಧಿ (ಮಾನನಷ್ಟ) ಅಡಿಯಲ್ಲಿ ದೋಷಾರೋಪ ಹೊರಿಸಿದರು. ಇವರ ಪೈಕಿ ಇಲ್ಮಿ ಇತ್ತೀಚೆಗೆ ಪಕ್ಷ ತ್ಯಜಿಸಿದ್ದರು. ನಾಲ್ಕೂ ಮಂದಿ ಆರೋಪಿಗಳು ತಪ್ಪು ಒಪ್ಪಿಕೊಳ್ಳದೆ ವಿಚಾರಣೆ ಎದುರಿಸುವುದಾಗಿ ಹೇಳಿದ್ದನ್ನು ಅನುಸರಿಸಿ ನ್ಯಾಯಾಲಯವು ಅವರನ್ನು ವಿಚಾರಣೆಗೆ ಗುರಿ ಪಡಿಸಿತು. ಸಾಕ್ಷ್ಯಾಧಾರ ದಾಖಲಿಸಿಕೊಳ್ಳುವ ಸಲುವಾಗಿ ನ್ಯಾಯಾಲಯವು 2015ರ ಜನವರಿ 17ನೇ ದಿನಾಂಕವನ್ನು ನಿಗದಿ ಪಡಿಸಿತು. ಅಮಿತ್ ಸಿಬಲ್ ಅವರು ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಕಳೆದ ಜುಲೈ 24ರಂದು ಕೇಜ್ರಿವಾಲ್, ಸಿಸೋಡಿಯಾ, ಭೂಷಣ್ ಮತ್ತು ಇಲ್ಮಿ ಅವರಿಗೆ ಸಮನ್ಸ್ ಕಳುಹಿಸಿತ್ತು. ಟೆಲಿಕಾಂ ಕಂಪೆನಿ ಪ್ರಕರಣಗಳಲ್ಲಿ ಪ್ರತಿನಿಧಿಸಲು ತಾನು ತಂದೆಯ ಹುದ್ದೆಯ ಲಾಭ ಪಡೆದಿರುವುದಾಗಿ ಎಎಪಿ ನಾಯಕರು ಹೇಳಿದ್ದಾರೆ ಎಂದು ಹಿರಿಯ ವಕೀಲರೂ ಆಗಿರುವ ಅಮಿತ್ ಆಪಾದಿಸಿದ್ದರು.

2008: ಇಸ್ಲಾಮಾಬಾದ್ ನಗರದ ಹೃದಯ ಭಾಗದಲ್ಲಿನ ಮರಿಯಟ್ ಪಂಚತಾರಾ ಹೊಟೇಲ್ ಮೇಲೆ ಆತ್ಮಹತ್ಯಾ ಬಾಂಬರುಗಳು ನಡೆಸಿದ ಭೀಕರ ದಾಳಿಯಲ್ಲಿ ಕನಿಷ್ಠ 62 ಮಂದಿ ಸತ್ತು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2008: ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಒರಿಸ್ಸಾ ಸಹಿತ ದೇಶದ ವಿವಿಧ ಭಾಗಗಳಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಸಂಭವಿಸಿದ ಭೂಕುಸಿತ, ಪ್ರವಾಹ, ಕಟ್ಟಡ ಕುಸಿತದಂತಹ ಹಲವು ದುರಂತಗಳಲ್ಲಿ 100ಕ್ಕೂ ಅಧಿಕ ಮಂದಿ ಮೃತರಾದರು.

2007: ಹನಿ ನೀರಾವರಿ ಮತ್ತು ಜಲ ಸಂರಕ್ಷಣೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮಂಡ್ಯದ ಚೈತ್ರ ಇರಿಗೇಷನ್ ಸಿಸ್ಟಮಿನ ವ್ಯವಸ್ಥಾಪಕ ನಿರ್ದೇಶಕ ಟಿ.ಎನ್. ಪರಮೇಶ್ ಅವರಿಗೆ ರಾಷ್ಟ್ರೀಯ ಶ್ರೇಷ್ಠ ಸಣ್ಣ ಕೈಗಾರಿಕೋದ್ಯಮಿ ಪ್ರಶಸ್ತಿ ಲಭಿಸಿತು. ನೀರಾವರಿ ಕ್ಷೇತ್ರದಲ್ಲಿ ಈ ಪುರಸ್ಕಾರ ಪಡೆದ ಕರ್ನಾಟಕದ ಮೊದಲ ಉದ್ಯಮಿ ಎಂಬ ಹೆಗ್ಗಳಿಕೆ ಅವರದಾಯಿತು. ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಈ ಪ್ರಶಸ್ತಿ ನೀಡಿದರು.
ಚೈತ್ರ ಇರಿಗೇಷನ್ ಸಿಸ್ಟಂ ಕಂಪೆನಿ ಅಭಿವೃದ್ಧಿಪಡಿಸಿದ ಉತ್ತಮ ದರ್ಜೆಯ ತುಂತುರು ನೀರಾವರಿ, ಹನಿ ನೀರಾವರಿ ಪೈಪ್, ವಾಲ್ವ್ ಮತ್ತಿತರ ಸಲಕರಣೆಗಳು ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯ ಪ್ರಶಂಸೆಗೆ ಪಾತ್ರವಾದವು.

2007: ರಾಮ ಸೇತು ನಾಶಪಡಿಸಬೇಕೆಂಬುದು ತಮ್ಮ ಅಭಿಪ್ರಾಯವಲ್ಲ. ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆ ಅನುಷ್ಠಾನವಾಗಬೇಕೆಂಬುದಷ್ಟೇ ನಮಗೆ ಮುಖ್ಯ. ರಾಮ ಸೇತು ನಾಶಪಡಿಸಿಯಾದರೂ ಸರಿ ಅಥವಾ ನಾಶಪಡಿಸದೆ ಇದ್ದರೂ ಸರಿ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ. ಕರುಣಾನಿಧಿ ಸ್ಪಷ್ಟನೆ ನೀಡಿದರು. ರಾಮ ಸೇತು ನಾಶಪಡಿಸದೇ ಸೇತು ಸಮುದ್ರಂ ಕಡಲ್ಗಾಲುವೆ ಯೋಜನೆ ಜಾರಿಗೊಳಿಸುವುದಾದರೆ ತಮಗೆ ಅಭ್ಯಂತರವಿಲ್ಲ. ತಮಿಳರ ನೂರು ವರ್ಷಗಳಷ್ಟು ಹಳೆಯ ಕನಸಾದ ಸೇತು ಸಮುದ್ರಂ ಯೋಜನೆ ಅನುಷ್ಠಾನಗೊಳ್ಳುವುದು ತಮಗೆ ಮುಖ್ಯ ಎಂದು ಅವರು ಹೇಳಿದರು. ವೈಯಕ್ತಿಕ ಆಚರಣೆ ಹಾಗೂ ನಂಬಿಕೆಗೆ ಸಂಬಂಧಿಸಿದ ಸೂಕ್ಷ್ಮ ವಿಷಯಗಳ ಕುರಿತು ಅನಗತ್ಯ ಹೇಳಿಕೆ ನೀಡದಂತೆ ಕಾಂಗ್ರೆಸ್ ತನ್ನ ಸದಸ್ಯರಿಗೆ ಹಾಗೂ ಸಚಿವರಿಗೆ ನಿರ್ದೇಶನ ನೀಡಿತು. ರಾಮನ ಅಸ್ತಿತ್ವವನ್ನು ಪ್ರಶ್ನಿಸುವ ಮೂಲಕ ಡಿಎಂಕೆ ನಾಯಕ ಕರುಣಾನಿಧಿ ತಮ್ಮ ಧಾರ್ಮಿಕ ನಂಬಿಕೆಗೆ `ಧಕ್ಕೆ' ಉಂಟು ಮಾಡಿದ್ದಾರೆ ಎಂದು ಆಪಾದಿಸಿ ಚೆನ್ನೈಯ ಮದ್ರಾಸ್ ಹೈಕೋರ್ಟ್ ವಕೀಲ ಆರ್.ಕೆ. ವೆಂಕಟೇಶ್ ಚೆನ್ನೈ ನಗರ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದರು.

2007: ಹದಿನೆಂಟು ವರ್ಷಗಳ ಹಿಂದೆ ಗುಲ್ಬರ್ಗ ನ್ಯಾಯಾಲಯದ ಆವರಣದಲ್ಲಿ ನಡೆದ ಕೊಲೆಯ ಪ್ರಮುಖ ಆರೋಪಿಗಳ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್ `ಸಂಬಂಧಿಗಳೆಂಬ ಕಾರಣಕ್ಕೆ ಸಾಕ್ಷಿಗಳನ್ನು ತಿರಸ್ಕರಿಸಲಾಗದು' ಎಂದು ಹೇಳಿತು. `ಸಾಕ್ಷಿಗಳು ವಿಶ್ವಾಸಾರ್ಹರಾಗಿದ್ದು ಆರೋಪಿಗಳನ್ನು ಗುರುತು ಹಚ್ಚಲು ನೆರವಾಗುವುದಿದ್ದರೆ, ಸಂಬಂಧಿಗಳು, ಪ್ರಕರಣದಲ್ಲಿ ಆಸಕ್ತರು. ಅವರಿಗೆ ಗಾಯಗಳಾಗಿಲ್ಲ ಇತ್ಯಾದಿ ಕಾರಣಗಳನ್ನು ಮುಂದೊಡ್ಡಿ ಸಾಕ್ಷ್ಯ ವಿಶ್ವಾಸಾರ್ಹ ಅಲ್ಲ ಎಂದು ತಿರಸ್ಕರಿಸಲಾಗದು' ಎಂದು ನ್ಯಾಯಮೂರ್ತಿಗಳಾದ ಬಿ.ಎನ್.ಅಗರ್ ವಾಲ್ ಮತ್ತು ಪಿ.ಪಿ.ನಾವ್ಲೇಕರ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು. ಕೊಲೆಯ ಪ್ರಮುಖ ಆರೋಪಿಗಳಾದ ಮಲ್ಲಣ್ಣ, ಲಲಸೆ ಮತ್ತು ಭೀಮನಗೌಡರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸಮರ್ಥಿಸಿದ ಸುಪ್ರೀಂಕೋರ್ಟ್, ಉಳಿದ ಆರೋಪಿಗಳಾದ ಮೆಹಬಾಬ್ ಸಾಬ್, ಬುದ್ದೇಸಾಬ್,ಖಾಸಿಮಸಾ, ಅಪ್ಪಾಸಾಹೇಬ್, ಶರಣಪ್ಪ, ಬಾಪುಗೌಡ, ಚಂದಪ್ಪ ಮತ್ತು ರಾಜಶೇಖರ್ ಅವರನ್ನು ಖುಲಾಸೆ ಮಾಡಿತು. 1989ರ ಏಪ್ರಿಲ್ 22ರ ಬೆಳಿಗ್ಗೆ ಗುಲ್ಬರ್ಗ ನ್ಯಾಯಾಲಯದ ಮುಂದಿನ ಕಟ್ಟೆ ಬಳಿ ಸ್ನೆಹಿತರ ಜೊತೆ ಮಾತನಾಡುತ್ತಾ ನಿಂತಿದ್ದ ಭೀಮನಗೌಡ ದೇಸಾಯಿ ಅವರ ಮೇಲೆ ಆಯುಧಧಾರಿ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿ ಹತ್ಯೆಗೈದಿತ್ತು. ತೀವ್ರವಾಗಿ ಗಾಯಗೊಂಡ ದೇಸಾಯಿ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

2007: ಗಣೇಶ ಪ್ರತಿಮೆಯನ್ನು ಪೂಜಿಸಿದ `ತಪ್ಪಿಗಾಗಿ' ನಟ ಸಲ್ಮಾನ್ ಖಾನ್ ಮತ್ತು ಕುಟುಂಬದ ಸದಸ್ಯರ ಮೇಲೆ ಬರೇಲಿಯ ಇಸ್ಲಾಂ ಧಾರ್ಮಿಕ ಮುಖಂಡರೊಬ್ಬರು `ಫತ್ವಾ' ಹೊರಡಿಸಿದರು. ಇದರೊಂದಿಗೆ ಸಲ್ಮಾನ್  ಖಾನ್ ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡರು. `ವಿಗ್ರಹ ಪೂಜೆಗೆ ಇಸ್ಲಾಂ ಧರ್ಮದಲ್ಲಿ ಅವಕಾಶ ಇಲ್ಲ. ಈ ಫತ್ವಾ ಕೇವಲ ಸಲ್ಮಾನ್ ಖಾನ್ ವಿರುದ್ಧ ಮಾತ್ರ ಅಲ್ಲ,  ವಿಗ್ರಹ ಪೂಜೆ ಸಲ್ಲಿಸಿದವರು ಯಾರೇ ಆಗಲಿ `ಕಲ್ಮಾ' ಪಠಿಸಿ ಇಸ್ಲಾಂಗೆ ಮರುಪ್ರವೇಶ ಪಡೆಯಬೇಕು' ಎಂದು ಬರೇಲಿಯ ಇಫ್ತಾ ಮಂಜರ್ ಇ ಇಸ್ಲಾಮ್ ಪರವಾಗಿ ಮುಫ್ತಿ ಫಕೀರ್ ಖಾದ್ರಿ ಹೇಳಿದರು. ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ಸದಸ್ಯರು ಗಣೇಶ ಪ್ರತಿಮೆಗೆ ನಮಿಸಿದ್ದಲ್ಲದೇ ಗಣಪತಿ ವಿಸರ್ಜನೆಯ ಸಂದರ್ಭದಲ್ಲಿ ನರ್ತಿಸಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು.

2007: ಬಾಹ್ಯಾಕಾಶದಲ್ಲಿ 195 ದಿನಗಳಷ್ಟು ಸುದೀರ್ಘ ಅವಧಿವರೆಗೆ ಇದ್ದ ವಿಶ್ವದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಭಾರತೀಯ ಮೂಲದ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ಒಂದು ವಾರದ ಭಾರತ ಭೇಟಿ ಸಲುವಾಗಿ ಅಹಮದಾಬಾದಿಗೆ ಬಂದಿಳಿದರು.  `ಇಲ್ಲಿಗೆ ಬಂದಿಳಿಯಲು ನನಗೆ ಅತೀವ ಸಂತೋಷವೆನಿಸಿದೆ. ಭಾರತದ ಭೇಟಿ ಬಹಳ ಕಾಲದವರೆಗೂ ನನಗೆ ನೆನಪಿನಲ್ಲಿ ಉಳಿಯಲಿದೆ' ಎಂದು `ಸುನೀತಾ ವಿಲಿಯಮ್ಸ್ ಅಹಮದಾಬಾದ್ ನೆಲ ಸ್ಪರ್ಶಿಸುತ್ತಿದ್ದಂತೆಯೇ ಆನಂದ ತುಂದಿಲರಾಗಿ ಉದ್ಘರಿಸಿದರು. ಕಪ್ಪು ವರ್ಣದ ಟಿ-ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಧರಿಸಿದ್ದ ಸುನೀತಾ ಬೆಳಿಗ್ಗೆ 10.55ಕ್ಕೆ ಏರ್ ಇಂಡಿಯಾ ವಿಮಾನದಲ್ಲಿ ಸ್ಥಳೀಯ ಸರ್ದಾರ್ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಮುಖ್ಯಮಂತ್ರಿ ನರೇಂದ್ರ ಮೋದಿ ಪರವಾಗಿ ರಾಜ್ಯ ಸರ್ಕಾರದ ಶಿಷ್ಟಾಚಾರ ಅಧಿಕಾರಿ ಪುಷ್ಪಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.

2007: ಎಲ್ಲೇ ಇದ್ದರೂ ಮಾಹಿತಿಗಳನ್ನು ತತ್ ಕ್ಷಣ ರವಾನೆ ಮಾಡುವ ತಂತ್ರಜ್ಞಾನವೊಂದನ್ನು ಅಭಿವೃದ್ಧಿ ಪಡಿಸಿರುವುದಾಗಿ ಇಂಟೆಲ್ ಕಾರ್ಪೊರೇಷನ್ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಪ್ರಕಟಿಸಿತು. ಮುಂದಿನ ವರ್ಷ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಕಂಪೆನಿ ಹೇಳಿತು. ವೈಫೈ ಮತ್ತು ವೈಮ್ಯಾಕ್ಸ್ ತಂತ್ರಜ್ಞಾನ ಎರಡನ್ನೂ ಬಳಸಿಕೊಂಡು ಸಂಯುಕ್ತ ಮಾಡ್ಯೂಲ್ ಒಂದನ್ನು ಕಂಪೆನಿ ಸಿದ್ಧಪಡಿಸಿದೆ. ಲ್ಯಾಪ್ ಟಾಪ್ ಮತ್ತು ಅಲ್ಟ್ರಾಮೊಬೈಲುಗಳಿಗೆ ಇದನ್ನು ಅಳವಡಿಸಬಹುದು ಎಂದು ಕಂಪೆನಿಯ ಅಧ್ಯಕ್ಷ ಪಾಲ್ ಒಟೆಲಿನಿ ತಿಳಿಸಿದರು.

2007: ಕ್ರೈಸ್ತ ಧರ್ಮದ ಬಿಷಪ್ ಅಂತ್ಯಸಂಸ್ಕಾರದ ವೇಳೆ ಋಗ್ವೇದ, ಉಪನಿಷತ್ ಹಾಗೂ ಕುರಾನಿನಲ್ಲಿನ ಕೆಲವು ಸಾಲುಗಳನ್ನು ಪಠಿಸಿ ಧಾರ್ಮಿಕ ಸೌಹಾರ್ದ ಮೆರೆದ ಘಟನೆ ಅಮೆರಿಕದಲ್ಲಿ ನಡೆಯಿತು. ನೆವಾಡಾ ರಾಜ್ಯದ ರಿನೊ ಚರ್ಚಿನ ಆರ್ಚ್ ಬಿಷಪ್ ಡಗ್ಲಾಸ್ ಇಗೋ ನೆ ಸೊವೈ ಅವರು ನಿಧನರಾಗಿದ್ದರು. ಅವರ ಅಂತ್ಯಕ್ರಿಯೆ ವೇಳೆ ರಾಜನ್ ಜೇಡ್ ಅವರು ಗಾಯಿತ್ರಿ ಮಂತ್ರ, ಋಗ್ವೇದ, ಉಪನಿಷತ್ ಪಠಿಸಿದರು. ಸಿಯೆರಾ ಪ್ರತಿಷ್ಠಾನದ ತುನೆ ದರ್ಮಾಜ್ ಕುರಾನಿನ ಕೆಲವು ಸಾಲುಗಳನ್ನು ಹೇಳಿದರು. ನಂತರ ಬೌದ್ಧ ಧರ್ಮದ ವಿಲಿಯಂ ಬಾರ್ಲೆಟ್ಟೆ ಸಹ ಮಂತ್ರ ಓದಿದರು.

2007: ಬೆಂಗಳೂರಿನ ಇಂದಿರಾನಗರದ ಸಿಎಂಎಚ್ ರಸ್ತೆಯಲ್ಲಿರುವ (ನಂ.67) 218.76 ಚದರ ಮೀಟರ್ ಜಮೀನನ್ನು ಮೆಟ್ರೋ ರೈಲು ಯೋಜನೆಗೆ ಸ್ವಾಧೀನ ಪಡಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೊರಡಿಸಿರುವ ಅಧಿಸೂಚನೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿತು.

2007: ರಾಷ್ಟ್ರೀಕೃತ ಕೆನರಾ ಬ್ಯಾಂಕ್ ದೇಶದಲ್ಲಿಯೇ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗಾಗಿ ಬಹು ಉದ್ದೇಶದ ಜೈವಿಕ ತಂತ್ರಜ್ಞಾನದ `ಕೆನರಾ ವಿಕಾಸ ಸ್ಮಾರ್ಟ್ ಕಾರ್ಡ್' ಬಳಕೆಗೆ  ಬೆಂಗಳೂರಿನ ದೇವನಹಳ್ಳಿಯಲ್ಲಿ ಚಾಲನೆ ನೀಡಿತು. ಅನಕ್ಷರಸ್ಥರ ಹೆಬ್ಬೆಟ್ಟಿನ ಗುರುತೇ ಎಟಿಎಂ ಕಾರ್ಡ್,  ಕೆನರಾ ವಿಕಾಸ ಸ್ಮಾರ್ಟ್ ಕಾರ್ಡುಗಳ ಬಳಕೆಯ ದೃಢೀಕರಣಕ್ಕೆ ನೆರವಾಗುವ ತಂತ್ರಜ್ಞಾನ ಬಳಸಿರುವುದು ದೇಶದಲ್ಲೇ ಪ್ರಥಮ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಎಂ. ಬಿ. ಎನ್. ರಾವ್ ನುಡಿದರು.

2006: ರಕ್ತರಹಿತ ಕ್ಷಿಪ್ರಕ್ರಾಂತಿ ಮೂಲಕ ಥಾಯ್ಲೆಂಡ್ ಸರ್ಕಾರವನ್ನು ಉರುಳಿಸಿದ ಸೇನಾ ಮುಖ್ಯಸ್ಥ ಜನರಲ್ ಸೋಂಥಿ ಬೂನ್ಯಾ ರತ್ಕಾಲಿ ಅವರನ್ನು ಥಾಯ್ಲೆಂಡ್ ದೊರೆ ಭೂಮಿಬೊಲ್ ಅದುಲ್ಯತೇಜ್ ಅವರು ಥಾಯ್ಲೆಂಡಿನ ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಿದರು.

2006: ಹದಿನೆಂಟು ಲಕ್ಷ ಡಾಲರ್ ಬೆಲೆಯ ವಜ್ರಗಳನ್ನು ಒಳಗೊಂಡ ದುಬಾರಿ ಚಿನ್ನದ ಕಂಚುಕವನ್ನು ದಕ್ಷಿಣ ಕೊರಿಯಾದ ರೂಪದರ್ಶಿಯೊಬ್ಬಳು ಸೋಲ್ ನಲ್ಲಿ ಪ್ರದರ್ಶಿಸಿದಳು. ಗೋಲ್ಡನ್ ಝೋನ ಸಂಸ್ಥೆಯ ಹೊಸ ಉತ್ಪನ್ನ ಬಿಡುಗಡೆ ಸಮಾರಂಭದಲ್ಲಿ ಈ ದುಬಾರಿ ಬ್ರಾ ಪ್ರದರ್ಶಿಸಲಾಯಿತು.

2006: `ಕ್ರೊಕೊಡೈಲ್ ಹಂಟರ್' ಎಂದೇ ಖ್ಯಾತರಾದ ಸ್ಟೀವ್ ಇರ್ವಿನ್ ಗೆ ಜಗತ್ತು ಭಾವಪೂರ್ಣ ವಿದಾಯ ಹೇಳಿತು. ಸುಮಾರು ಹದಿನೈದು ದಿನಗಳ ಹಿಂದೆ ಸಮುದ್ರದ ಒಳಗೆ ಛಾಯಾಗ್ರಹಣ ಕಾಲದಲ್ಲೇ ವಿಷದ ಮೀನಿನ ಮುಳ್ಳಿನ ದಾಳಿಗೆ ತುತ್ತಾಗಿ ಅವರು ಅಸು ನೀಗಿದ್ದರು. 5000 ಮಂದಿ ನೇರವಾಗಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಜಗತ್ತಿನಾದ್ಯಂತ 300 ದಶಲಕ್ಷ ಮಂದಿ ಸ್ಟೀವ್ ಅವರ ಅಂತ್ಯಕ್ರಿಯೆ ವೀಕ್ಷಿಸಿ ಭಾಷ್ಪಾಂಜಲಿ ಸಲ್ಲಿಸಿದರು.

2006: ಶನಿಗ್ರಹದ ಸುತ್ತ ಈಗಾಗಲೇ ಇರುವ ದಟ್ಟ ಬಳೆಗಳ ನಡುವೆ ಕಣಗಳಿಂದ ಕೂಡಿದ ಕಂದಿದ ಬಳೆಯೊಂದು ಇರುವುದನ್ನು  ಪತ್ತೆ ಹಚ್ಚಲಾಯಿತು. ಶನಿಗ್ರಹದ ಕುರಿತು ಮಾಹಿತಿ ಸಂಗ್ರಹಿಸಲು ಕಳುಹಿಸಲಾದ `ಕ್ಯಾಸಿನಿ' ಅಂತರಿಕ್ಷ ನೌಕೆಯು ಈ ಬಳೆಯ ಚಿತ್ರವನ್ನು ಸೆರೆ ಹಿಡಿದು ಭೂಮಿಗೆ ರವಾನಿಸಿತು. ಶನಿಯ ಸುತ್ತ 7 ಸ್ಪಷ್ಟ ಬಳೆಗಳಿದ್ದು, 47 ಉಪಗ್ರಹಗಳು ಸುತ್ತುತ್ತಿವೆ. `ಕ್ಯಾಸಿನಿ' ನೌಕೆಯು ಶನಿಯಿಂದ 150 ಕೋಟಿ ಮೈಲಿ ದೂರದಲ್ಲಿರುವ ಭೂಮಿಯ ವರ್ಣಮಯ ಚಿತ್ರವನ್ನೂ ಸೆರೆ ಹಿಡಿದಿದೆ. (ಈ ಚಿತ್ರಗಳನ್ನು ಇಂಟರ್ನೆಟ್ಟಿನಲ್ಲಿ(ಣಣಠಿ://ತಿತಿತಿ.ಟಿಚಿಚಿ.ರಠತ/ಛಿಚಿಟಿ) ನೋಡಬಹುದು)
1999: ಮಿಖಾಯಿಲ್ ಗೊರ್ಬಚೆವ್ ಅವರ ಪತ್ನಿ ರಯೀಸಾ ಗೊರ್ಬಚೆವ್ ಅವರು ಜರ್ಮನಿಯಲ್ಲಿ ತಮ್ಮ 67ನೇ ವಯಸಿನಲ್ಲಿ ಮೃತರಾದರು.

1982: ಪಾಕಿಸ್ತಾನದ ಹೈದರಾಬಾದಿನಲ್ಲಿ ನಡೆದ ಮೂರು ಆಟಗಳ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ ರಾಡ್ ಮಾರ್ಶ್, ಬ್ರೂಸ್ ಯಾರ್ಡ್ಲಿ ಮತ್ತು ಜಿಯೊ ಲಾಸನ್ ಅವರನ್ನು ಒಂದರ ಹಿಂದೊಂದರಂತೆ ಬಾಲ್ ಬಾರಿಸಿ ಔಟ್ ಮಾಡುವ ಮೂಲಕ ಪಾಕಿಸ್ತಾನಿ ಬೌಲರ್ ಜಲಾಲುದ್ದೀನ್ ಅವರು ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮೊದಲ ಹ್ಯಾಟ್ರಿಕ್ ಸಾಧಿಸಿದರು.

1973: ಟೆಕ್ಸಾಸಿನ ಆಸ್ಟ್ರೋಡೋಮಿನಲ್ಲಿ ನಡೆದ ಟೆನಿಸ್ ನೇರ ಸ್ಪರ್ಧೆಯಲ್ಲಿ ಬಿಲಿ ಜೀನ್ ಕಿಂಗ್ ಅವರು 6-4, 6-3, 6-4 ಅಂತರದಲ್ಲಿ ಬಾಬಿ ಜೀನ್ಸ್ ಅವರನ್ನು ಪರಾಭವಗೊಳಿಸಿದರು. ಒಂದು ಲಕ್ಷ ಡಾಲರ್ ಮೊತ್ತದ ಬಹುಮಾನವಿದ್ದ ಈ ಪಂದ್ಯ `ಬ್ಯಾಟ್ಲ್ ಆಫ್ ಸೆಕ್ಸಸ್' ಎಂದೇ ಖ್ಯಾತವಾಗಿದೆ.

1933: ಸಮಾಜ ಸುಧಾರಕಿ ಹಾಗೂ ಭಾರತೀಯ ಸ್ವಾತಂತ್ರ್ಯ ಹೋರಾಟದ ಧುರೀಣರಲ್ಲಿಒಬ್ಬರಾಗಿದ್ದ ಅನಿಬೆಸೆಂಟ್ ಅವರು ಮದ್ರಾಸಿನಲ್ಲಿ (ಈಗಿನ ಚೆನ್ನೈ) ತಮ್ಮ 85ನೇ ವಯಸ್ಸಿನಲ್ಲಿ ಮೃತರಾದರು.

1881: ಚೆಸ್ಟರ್ ಎ. ಆರ್ಥರ್ ಅವರು ಅಮೆರಿಕದ 21ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಅಮೆರಿಕದ 20ನೇ ಅಧ್ಯಕ್ಷ ಜೇಮ್ಸ್ ಎ. ಗ್ಯಾರಿಫೀಲ್ಡ್ ಅವರನ್ನು ಕೊಲೆಗೈದ ಹಿನ್ನೆಲೆಯಲ್ಲಿ ಆರ್ಥರ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಯಿತು.

1878: `ದಿ ಹಿಂದು' ವೃತ್ತಪತ್ರಿಕೆಯು ವಾರಪತ್ರಿಕೆಯ ರೂಪದಲ್ಲಿ ಮದ್ರಾಸಿನಲ್ಲಿ ಆರಂಭವಾಯಿತು. 1889ರ ಏಪ್ರಿಲ್ 1ರಿಂದ ಅದು ದಿನಪತ್ರಿಕೆಯಾಯಿತು.

1857: ಮೊದಲ ಸ್ವಾತಂತ್ರ್ಯ ಸಂಗ್ರಾಮದ (ಸಿಪಾಯಿ ದಂಗೆ) ವೈಫಲ್ಯದ ಬಳಿಕ ಬ್ರಿಟಿಷರು ದೆಹಲಿಯನ್ನು ಮರುವಶ ಮಾಡಿಕೊಂಡರು. ದೊರೆ ಎಂಬುದಾಗಿ ಘೋಷಿಸಿಕೊಂಡಿದ್ದ ಕೊನೆಯ ಮೊಘಲ್ ದೊರೆ ಎರಡನೇ ಬಹಾದುರ್ ಶಹಾನನ್ನು  ಹುಮಾಯೂನ್ ಸಮಾಧಿ ಬಳಿ ಬಂಧಿಸಿ, ಬರ್ಮಾಕ್ಕೆ (ಈಗಿನ ಮ್ಯಾನ್ಮಾರ್) ಗಡೀಪಾರು ಮಾಡಲಾಯಿತು. ಅಲ್ಲೇ ಆತ ಮೃತನಾದ.

1856: ಭಾರತೀಯ ಸಮಾಜ ಸುಧಾರಕ ನಾರಾಯಣ ಗುರು ಜನ್ಮದಿನ.

1955: ಸಾಹಿತಿ ವಸಂತ ಬನ್ನಾಡಿ ಜನನ.

1933: ಯಕ್ಷಗಾನ ಕಲೆಗೆ ದೇಶೀ ನೆಲೆಯಲ್ಲಿ ಒಂದು ಸಮರ್ಥ ವೇದಿಕೆ ನಿರ್ಮಿಸಿ ಹೆಸರು ತಂದುಕೊಟ್ಟ ಎಚ್.ಬಿ.ಎಲ್. ರಾವ್ ಅವರು ಎಚ್.ಪಿ. ರಾವ್- ಸೀತಾ ರತ್ನ ದಂಪತಿಯ ಮಗನಾಗಿ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಈದಿನ ಜನಿಸಿದರು. ಯಕ್ಷಗಾನ ಕಲೆಗೆ ಆಧುನಿಕ ಸ್ಪರ್ಶ ನೀಡಿ, ದೇಶ ವಿದೇಶಗಳಿಗೆ ಅದನ್ನು ಒಯ್ದ ಕೀರ್ತಿ ಶಿವರಾಮ ಕಾರಂತರಿಗೆ ಸಲ್ಲುತ್ತದೆ.

1933: ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ವಿದೇಶೀ ಮೂಲದ ಅನಿಬೆಸೆಂಟ್ (86) ಅವರು ಈದಿನ ಭಾರತದಲ್ಲಿ ನಿಧನರಾದರು. ಅವರು ಹುಟ್ಟಿದ್ದು  1847ರಲ್ಲಿ ಇಂಗ್ಲೆಂಡಿನಲ್ಲಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement