My Blog List

Wednesday, September 23, 2009

ಇಂದಿನ ಇತಿಹಾಸ History Today ಸೆಪ್ಟೆಂಬರ್ 21

ಇಂದಿನ ಇತಿಹಾಸ

ಸೆಪ್ಟೆಂಬರ್ 21
ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟ ಖ್ಯಾತರಾದ ಬೆಳ್ಳಾವೆ ನರಹರಿ ಶಾಸ್ತ್ರಿ (21-9-1882ರಿಂದ 21-6-1961) ಅವರು ನರಸಾವಧಾನಿಗಳು- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು.

2014: ಮುಂಬೈ: ಚಿತ್ರ ನಟಿ ಪ್ರಿಯಾಂಕಾ ಛೋಪ್ರಾ ಅವರ ಅಭಿಮಾನಿಗಳ ಸಂಖ್ಯೆ ಮೈಕ್ರೋ ಬ್ಲಾಗಿಂಗ್ 'ಟ್ವಿಟ್ಟರ್'ನಲ್ಲಿ 70 ಲಕ್ಷದ ಗಡಿ ದಾಟಿತು. 2009ರಲ್ಲಿ ಟ್ವಿಟ್ಟರ್ ಬಳಗ ಸೇರಿದ್ದ 32ರ ಹರೆಯದ 'ಮೇರಿ ಕೊಮ್ ನಟಿ ಸಾಮಾಜಿಕ ಮಾಧ್ಯಮದಲ್ಲಿ ತಮಗೆ ಅಪೂರ್ವ ಬೆಂಬಲ ನೀಡಿದ್ದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು. '70 ಲಕ್ಷ ಸಂಖ್ಯೆಯಲ್ಲಿ ಅಭಿಮಾನಿಗಳಾಗಿರುವ ನಿಮಗೆಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಕುಟುಂಬ ದೊಡ್ಡದಾಗುತ್ತಿದೆ. ನಿಮ್ಮ ಪ್ರೀತಿ ನನ್ನನ್ನು ಸದಾ ಹುರಿದುಂಬಿಸುತ್ತದೆ.' ಎಂದು ಪ್ರಿಯಾಂಕಾ ಟ್ವೀಟ್ ಮಾಡಿದರು. ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವ ಪ್ರಿಯಾಂಕಾ ಟ್ವಿಟ್ಟರ್​ನಲ್ಲಿ ಅತ್ಯಂತ ಜನಪ್ರಿಯರಾಗಿರುವ ಭಾರತದ ನಾಲ್ಕನೇ ಪ್ರಖ್ಯಾತ ವ್ಯಕ್ತಿ.

2014:  ಮುಂಬೈ: ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಶಿವಸೇನೆ ನಡುವನ ಬಿಕ್ಕಟ್ಟು ಇನ್ನೂ ಮುಂದುವರಿಯಿತು. ಈ ಮಧ್ಯೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮೈತ್ರಿಕೂಟ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೊನೆಗಳಿಗೆಯ ಯತ್ನವಾಗಿ 'ಅಂತಿಮ ಸೂತ್ರ'ವೊಂದನ್ನು ಮುಂದಿಟ್ಟರು. ಮುಂಬೈಯಲ್ಲಿ ಶಿವಸೇನೆಯ ಕಾರ್ಯಕಾರಿ ಸಮಿತಿ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಉದ್ಧವ್ ಠಾಕ್ರೆ 'ನಾವು ಸೇನಾ ಸ್ಥಾನಗಳನ್ನು ಬಲಿಗೊಡುವ ಮೂಲಕ ಮೈತ್ರಿಕೂಟ ಉಳಿಸಿಕೊಳ್ಳುವ ಕೊನೆಯ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಶಿವಸೇನೆಗೆ 151 ಸ್ಥಾನ ಮತ್ತು ಬಿಜೆಪಿಗೆ 119 ಸ್ಥಾನಗಳ ಹೊಸ ಸೂತ್ರವನ್ನು ನಾವು ಮುಂದಿಡುತ್ತಿದ್ದೇವೆ' ಎಂದು ಹೇಳಿದರು. ಶಿವಸೇನೆಯು 18 ಸ್ಥಾನಗಳನ್ನು ತನ್ನ ಕೋಟಾದಿಂದಲೇ ಮೈತ್ರಿಕೂಟದ ನಾಲ್ಕು ಅಂಗಪಕ್ಷಗಳಾದ ಆರ್​ಪಿಐ, ಸ್ವಾಭಿಮಾನಿ ಶೇತ್ಕರಿ ಸಂಘಟನೆ, ರಾಷ್ಟ್ರೀಯ ಸಮಾಜ ಪಾರ್ಟಿ ಮತ್ತಿ ಶಿವ ಸಂಗ್ರಾಮ ಸಂಘಟನೆಗಳಿಗೆ ಹಂಚುವುದು ಮತ್ತು ಬಿಜೆಪಿಯ ಕೋಟಾ ಅಲುಗಾಡದಂತೆ ನೋಡಿಕೊಳ್ಳುವುದು ಎಂದು ಠಾಕ್ರೆ ಹೇಳಿದರು. 'ಸ್ಥಾನ ಹೊಂದಾಣಿಕೆ ಅತ್ಯಂತ ಕ್ಲಿಷ್ಟ ವ್ಯವಹಾರ. ಮಹಾರಾಷ್ಟ್ರದ ಸಲುವಾಗಿ ನಾನು 2-3 ಸ್ಥಾನ ತ್ಯಾಗಕ್ಕೆ ಸಿದ್ಧನಾಗಿದ್ದೇನೆ. ನಾವು ಕೆಲವು ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟರೆ ಒಬ್ಬ ವ್ಯಕ್ತಿಗೆ ಮಾತ್ರ ನ್ಯಾಯ ಲಭಿಸುತ್ತದೆ. ಆದರೆ ನಾವು ಅಧಿಕಾರಕ್ಕೆ ಬಂದರೆ ಬಂದರೆ ಪ್ರತಿಯೊಬ್ಬರಿಗೂ ನ್ಯಾಯ ಲಭಿಸುತ್ತದೆ' ಎಂದು ಠಾಕ್ರೆ ನುಡಿದರು. 'ಪಕ್ಷದ ಕಾರ್ಯಕರ್ತರು ನನಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ವಹಿಸಿದ್ದಾರೆ. ನಾನು ಅದನ್ನು ಜವಾಬ್ದಾರಿಯಿಂದ ನಿರ್ವಹಿಸುವೆ. ಏನಾದರೂ ಲಾಭಗಳಿಕೆಗಾಗಿ ನಾನು ಅಧಿಕಾರ ಬಯಸುವುದಿಲ್ಲ, ಆದರೆ ಮಹಾರಾಷ್ಟ್ರದ ಜನತೆಗೆ ಸ್ವಲ್ಪವಾದರೂ ಹಿಂದಿರುಗಿಸಬಯಸುತ್ತೇನೆ. ಅವರು ಏನು ಬಯಸುತ್ತಿದ್ದಾರೆ ಎಂಬುದನ್ನು ನಾನು ತಿಳಿದುಕೊಳ್ಳ ಬಯಸುತ್ತೇನೆ' ಎಂದು ಅವರು ಹೇಳಿದರು. ಬಿಜೆಪಿಯನ್ನು ಟೀಕೆ ಮಾಡಬೇಡಿ ಎಂದು ಸೇನಾ ನಾಯಕರಿಗೆ ಸಲಹೆ ಮಾಡಿದ ಉದ್ಧವ್, 'ಅದು ನಮ್ಮ ಸಂಸ್ಕೃತಿ ಅಲ್ಲ. ಪ್ರಮೋದ್ ಮಹಾಜನ್ ಮತ್ತು ಗೋಪಿನಾಥ ಮುಂಡೆ ಅವರ ಮಧ್ಯೆಯೂ ಭಿನ್ನಾಭಿಪ್ರಾಯಗಳಿದ್ದವು. ಆದರೆ ಆ ಸಮಯದಲ್ಲಿ ಯಾರೂ ವಿಷಯದ ಮೇಲೆ ಜಗ್ಗಾಡಲಿಲ್ಲ. ಮೈತ್ರಿಕೂಟ ಮುಂದುವರಿಯುತ್ತದೆಯೋ ಇಲ್ಲವೋ ನಾನಂತೂ ಸಮರಕ್ಕೆ ಸಿದ್ಧನಾಗಿದ್ದೇನೆ' ಎಂದು ಠಾಕ್ರೆ ನುಡಿದರು. ಈ ಮಧ್ಯೆ ಬಿಜೆಪಿ ತಾನು ಮೈತ್ರಿ ಮುಂದುವರಿಸಬಯಸುವುದಾಗಿ ಹೇಳಿದೆ. 'ನಾವು ಮೈತ್ರಿಕೂಟ ಉಳಿಸಿಕೊಳ್ಳಲು ಬಯಸುತ್ತೇವೆ. ಬಿಜೆಪಿ ತನ್ನ ಹಿತವನ್ನು ಬಲಿಗೊಟ್ಟಿದೆ. ಆದರೆ ಅವರು (ಶಿವಸೇನೆ) ತಮ್ಮದನ್ನು ಬಿಟ್ಟುಕೊಡಲು ಸಿದ್ಧರಾಗಿಲ್ಲ' ಎಂದು ಬಿಜೆಪಿ ಧುರೀಣ ಎಂದು ಏಕನಾಥ ಖಡ್ಸೆ ಹೇಳಿದರು. ಸ್ಥಾನ ಹೊಂದಾಣಿಕೆ ಕಾಂಗ್ರೆಸ್ಸನ್ನು ಸೋಲಿಸುವಂತಿರಬೇಕು ಎಂದು ಇನ್ನೊಬ್ಬ ಬಿಜೆಪಿ ಧುರೀಣ ತಾವಡೆ ಹೇಳಿದರು.

2014: ನವದೆಹಲಿ: ಮುಂಜಾಗರೂಕತಾ ಬಂಧನದಲ್ಲಿ ಇರುವ ವ್ಯಕ್ತಿಗಳಿಗೆ ಮತದಾನದ ಹಕ್ಕು ಇದೆ ಎಂದು ಸ್ಪಷ್ಟ ಪಡಿಸಿ ಚುನಾವಣಾ ಆಯೋಗ ನಿರ್ದೇಶನ ನೀಡಿತು. ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿಯೇ ಈ ನಿರ್ದೇಶನ ನೀಡಿದ ಆಯೋಗ ಈ ನಿರ್ದೇಶನದ ಉಲ್ಲಂಘನೆಗೆ ಯಾವುದೇ ಅವಕಾಶವೂ ಇರಕೂಡದು ಎಂದು ಎಚ್ಚರಿಕೆ ನೀಡಿತು. ಚುನಾವಣೆಗೆ ಮುಂಚಿತವಾಗಿ ಪೊಲೀಸರು ರಾಜಕೀಯ ಕಾರ್ಯಕರ್ತರು ಮತ್ತು ನಾಯಕರನ್ನು ಬಂಧಿಸುತ್ತಿದ್ದಾರೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮಹಾರಾಷ್ಟ್ರ ಮತ್ತು ಹರ್ಯಾಣ ಮುಖ್ಯಕಾರ್ಯದರ್ಶಿಗಳಿಗೆ ಈ ನಿಟ್ಟಿನಲ್ಲಿ ಪತ್ರ ಬರೆಯಿತು. ಜನತಾ ಪ್ರಾತಿನಿಧ್ಯ ಕಾಯ್ದೆಯ 62(5) ನೇ ವಿಧಿ ಮತ್ತು ಜೊತೆಗೆ ಚುನಾವಣೆ ನಿರ್ವಹಣಾ ನಿಯಮಗಳು ಮುಂಜಾಗರೂಕತಾ ಬಂಧನಕ್ಕೆ ಒಳಪಟ್ಟಿರುವವರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಿವೆ ಎಂದು ಅದು ಪತ್ರದಲ್ಲಿ ನೆನಪಿಸಿತು. ಪ್ರತಿಯೊಂದು ಕ್ಷೇತ್ರದ ಚುನಾವಣಾ ಅಧಿಕಾರಿಗೆ ಜಿಲ್ಲಾ ಆಡಳಿತವು ತಮ್ಮ ಕ್ಷೇತ್ರದಲ್ಲಿ ಮುಂಜಾಗರೂಕತಾ ಬಂಧನದಲ್ಲಿ ಇರುವ ವ್ಯಕ್ತಿಗಳ ಹೆಸರು, ವಿಳಾಸ ಮತ್ತು ಮತದಾರರ ಪಟ್ಟಿಯಲ್ಲಿನ ಅವರ ಕ್ರಮಸಂಖ್ಯೆ ವಿವರಗಳನ್ನು ಮುಂಚಿತವಾಗಿಯೇ ಲಿಖಿತವಾಗಿ ತಿಳಿಸಿ, ಅವರಿಗೆ ಅಂಚೆ ಮತಪತ್ರಗಳನ್ನು ಕಳುಹಿಸಲು ಅನುಕೂಲ ಮಾಡಿಕೊಡಬೇಕು ಎಂಬುದಾಗಿ ನಿರ್ದಿಷ್ಟ ಪಡಿಸಿದ ಚುನಾವಣೆ ನಿರ್ವಹಣಾ ನಿಯಮಗಳನ್ನು ಆಯೋಗವು ತನ್ನ ಪತ್ರದಲ್ಲಿ ಉಲ್ಲೇಖಿಸಿತು.. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟವರಿಗೆ ಸ್ಪಷ್ಟ ಸೂಚನೆಗಳನ್ನು ನೀಡಬೇಕು ಎಂದೂ ಆಯೋಗ ಸೂಚಿಸಿತು.

2014: ಇಂಚೋನ್ (ದಕ್ಷಿಣ ಕೊರಿಯಾ): 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ 10 ಮೀಟರ್ ಏರ್ ಪಿಸ್ತೂಲ್ ತಂಡವನ್ನು ಜಿತು ರೈ ಕಂಚಿನ ಪದಕ ಗೆಲ್ಲುವತ್ತ ಮುನ್ನಡೆಸಿದರು. ಆದರೆ ಒಂಗ್ನಿಯೋನ್ ಅಂತಾರಾಷ್ಟ್ರೀಯ ಶೂಟಿಂಗ್ ವಲಯದಲ್ಲಿ ಸ್ವಲ್ಪದರಲ್ಲೇ ಅವರು ಕಂಚಿನ ಪದಕ ತಪ್ಪಿಸಿಕೊಂಡರು. ಈ ಸ್ಪರ್ಧೆಯಲ್ಲಿ ಅವರು ಐದನೇ ಸ್ಥಾನ ಗಳಿಸಿದರು. 50 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡ ಭಾರತದ ಸೇನಾ ಶೂಟರ್ ಜಿತು, ಪುರುಷರ ತಂಡವನ್ನು ಅತ್ಯುತ್ಸಾಹದೊಂದಿಗೆ ಮುನ್ನಡೆಸುವ ಮೂಲಕ ಭಾರತಕ್ಕೆ ಎರಡನೇ ಕಂಚಿನ ಪದಕ ತಂದುಕೊಡುವಲ್ಲಿ ಸಫಲರಾದರು. ತಂಡದಲ್ಲಿ ಜಿತು ಜೊತೆ ಸಮರೇಶ್ ಜಂಗ್ ಮತ್ತು ಪ್ರಕಾಶ ನಂಜಪ್ಪ ಇದ್ದರು. ಭಾರತ ಮತ್ತು ಚೀನಾ 1743 ಪಾಯಿಂಟ್​ಗಳಲ್ಲಿ ಹಣಾಹಣಿ ನಡೆಸಿದವು. ಕೊನೆಗೆ ಚೀನಾ ಹೆಚ್ಚುವರಿ ಒಂದು ಪಾಯಿಂಟ್ ಮೂಲಕ ಬೆಳ್ಳಿ ಪದಕವನ್ನು ತನ್ನ ಬಗಲಿಗೆ ಹಾಕಿಕೊಂಡಿತು.

2014: ನವದೆಹಲಿ: ಪ್ರಾದೇಶಿಕ ಮತ್ತು ದೂರದ ಪ್ರದೇಶಗಳಿಗೆ ವೈಮಾನಿಕ ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಕರಡು ನೀತಿಯನ್ನು ವಿಮಾನಯಾನ ಸಂಸ್ಥೆಗಳು ಮತ್ತು ಖಾಸಗಿ ವಿಮಾನ ಆಪರೇಟರ್​ಗಳು ವಿರೋಧಿಸಿದರು.. 'ಸರ್ಕಾರದ ಈ ನೀತಿಯಿಂದ ತಮ್ಮ ಹಣಕಾಸು ಸಾಮರ್ಥ್ಯ ಮೇಲೆ ತೀವ್ರ ದುಷ್ಪರಿಣಾಮವಾಗುವುದು ಎಂದು ಏರ್ ಲೈನ್ಸ್ ಮತ್ತು ಖಾಸಗಿ ವಿಮಾನ ಆಪರೇಟರ್​ಗಳು ಪ್ರತಿಪಾದಿಸಿದರು. ಪ್ರಸ್ತಾವಿತ ಟಾಟಾ-ಸಿಯಾ ವಾಹಕ ವಿಸ್ತಾರ ಸೇರಿದಂತೆ ಬಹುತೇಕ ಎಲ್ಲಾ ವಿಮಾನಯಾನ ಸಂಸ್ಥೆಗಳು, ವ್ಯಾಪಾರೀ ಜೆಟ್ ಆಪರೇಟರ್​ಗಳು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕರಡು ಮಸೂದೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಕರಡು ನೀತಿಯ ವಿವಿಧ ವಿಧಿಗಳನ್ನು ಅವರು ವಿರೋಧಿಸಿದರು ಮತ್ತು ಈ ಬಗ್ಗೆ ಇನ್ನಷ್ಟು ರ್ಚಚಿಸುವ ಅಗತ್ಯವಿದೆ ಎಂದು ಹೇಳಿದರು..

2014: ಇಂಚೋನ್: ಭಾರತ ಪುರುಷರ ಹಾಕಿ ತಂಡ ಏಷ್ಯಾಡ್​ನಲ್ಲಿ ಭಾನುವಾರ ಭರ್ಜರಿ ಶುಭಾರಂಭ ಮಾಡಿತು. ಇಲ್ಲಿ ನಡೆದ ಕೂಟದ 'ಬಿ' ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ರೂಪಿಂದರ್ ಸಿಂಗ್ (12, 45, 46ನೇ ನಿಮಿಷ) ಸಿಡಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಭಾರತ ತಂಡ ದುರ್ಬಲ ಶ್ರೀಲಂಕಾ ವಿರುದ್ಧ 8-0 ಗೋಲುಗಳಿಂದ ಜಯ ಸಾಧಿಸಿತು. ರಮಣದೀಪ್ ಸಿಂಗ್ (28, 59ನೇ ನಿಮಿಷ), ಕನ್ನಡಿಗ ವಿಆರ್ ರಘುನಾಥ್, ಡ್ಯಾನೀಶ್ ಮುಜ್​ತುಬಾ, ಕಂಗುಜಾಮ್​ಚಿನ್​ಗ್ಲೇನ್​ಸನಾ ತಲಾ ಒಂದು ಗೋಲು ಗಳಿಸಿದರು. ಪಂದ್ಯದ 6ನೇ ನಿಮಿಷದಲ್ಲೇ ಮುಜ್​ತುಬಾ ಗೋಲು ಗಳಿಸುವ ಮೂಲಕ ಭಾರತ ತಂಡಕ್ಕೆ ಮೊದಲ ಗೋಲು ತಂದರು.

2014: ನವದೆಹಲಿ: 2010ರ ಧೌಲಾ ಕುವಾನ್ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಅಡಿಷನಲ್ ಸೆಷನ್ಸ್ ನ್ಯಾಯಾಲಯವು ಸೆಪ್ಟೆಂಬರ್ 22 ರಂದು ತನ್ನ ತೀರ್ಪ ಪ್ರಕಟಿಸಲಿದೆ. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ವೀರೇಂದರ್ ಭಟ್ ಅವರು ಸೆಪ್ಟೆಂಬರ್ 8ರಂದು ಪ್ರಕರಣದ ಅಂತಿಮ ವಾದ ಮಂಡನೆ ಬಳಿಕ ಸೆಪ್ಟೆಂಬರ್ 22ಕ್ಕೆ ತೀರ್ಪ ಕಾಯ್ದಿರಿಸಿದ್ದರು. ಆರೋಪಿಗಳಾದ ಶಂಶದ್ ಯಾನೆ ಖುಟ್ಕನ್, ಉಸ್ಮಾನ್ ಯಾನೆ ಕಾಲೆ, ಶಹೀದ್ ಯಾನೆ ಛೋಟಾ ಬಿಲ್ಲಿ, ಇಕ್ಬಾಲ್ ಯಾನೆ ಬಡಾ ಬಿಲ್ಲಿ ಮತ್ತು ಕಮರುದ್ದೀನ್ ಅವರನ್ನು ದಕ್ಷಿಣ ದೆಹಲಿಯ ಧೌಲಾ ಕುವಾನ್ ಪ್ರದೇಶದ ಕಾಲ್ ಸೆಂಟರ್ ಒಂದರ ಎಕ್ಸಿಕ್ಯೂಟಿವ್ 30ರ ಹರೆಯದ ಮಹಿಳೆಯನ್ನು ಅಪಹರಿಸಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ವಿಚಾರಣೆಗೆ ಗುರಿ ಪಡಿಸಲಾಗಿತ್ತು. ಪೊಲೀಸರ ಪ್ರಕಾರ ಐವರು ಪುರುಷರು ಈಶಾನ್ಯ ಪ್ರದೇಶದಿಂದ ಬಂದಿದ್ದ ಮಹಿಳೆಯನ್ನು 2010ರ ನವೆಂಬರ್ 24ರಂದು ಪಾಳಿ ಕೆಲಸ ಮುಗಿಸಿ ಗೆಳತಿ ಜೊತೆಗೆ ಮನೆಗೆ ನಡೆಯುತ್ತಾ ಹೊರಟಿದ್ದಾಗ ಅಪಹರಿಸಿ, ಮಂಗಲಪುರಿಗೆ ಒಯ್ದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ನಿರ್ಜನ ರಸ್ತೆಯಲ್ಲಿ ಬಿಟ್ಟು ಹೋಗಿದ್ದರು. ಐದೂ ಮಂದಿ ಆರೋಪಿಗಳನ್ನು ಬಳಿಕ ಹರ್ಯಾಣದ ಮೇವತ್​ನಲ್ಲಿ ಬಂಧಿಸಲಾಗಿತ್ತು. ವಿಚಾರಣೆ ಕಾಲದಲ್ಲಿ ಅವರು ತಾವು ನಿರಪರಾಧಿಗಳೆಂದೂ, ತಮ್ಮನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದೂ ವಾದಿಸಿದ್ದರು. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ, ಕ್ರಿಮಿನಲ್ ಬೆದರಿಕೆ ಹಾಗೂ ಅಪಹರಣ ಆರೋಪಗಳಿಗಾಗಿ ಆರೋಪಿಗಳನ್ನು ವಿಚಾರಣೆಗೆ ಗುರಿಪಡಿಸಲಾಗಿತ್ತು. ಈ ಘಟನೆಯ ಬಳಿಕ ಪೊಲೀಸರು ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಮಹಿಳಾ ಉದ್ಯೋಗಿಗಳಿಗೆ ರಕ್ಷಣೆ ಒದಗಿಸಿ ಸುರಕ್ಷಿತವಾಗಿ ಮನೆಗಳಿಗೆ ತಲುಪಿಸಬೇಕು ಎಂದು ದೆಹಲಿಯ ಎಲ್ಲ ಬಿಪಿಒಗಳಿಗೂ ಆದೇಶ ನೀಡಿದ್ದರು.

2008: ಭ್ರಷ್ಟಾಚಾರದ ಕಳಂಕ ಹೊತ್ತ ಇಸ್ರೇಲಿನ ಪ್ರಧಾನಿ ಯೆಹುದ್ ಓಲ್ಮರ್ಟ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೆರುಸಲೇಮಿನಲ್ಲಿ ಪ್ರಕಟಿಸಿದರು. ಆಡಳಿತಾರೂಢ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾದ ತಮ್ಮ ಉತ್ತರಾಧಿಕಾರಿ ಟ್ಜಿಪಿ ಲಿವ್ನಿ ಅವರಿಗೆ ಸಮ್ಮಿಶ್ರ ಸರ್ಕಾರ ರಚನೆಗೆ ಎಲ್ಲಾ ಸಹಕಾರ ನೀಡುವುದಾಗಿ ತಿಳಿಸಿದರು. ಓಲ್ಮರ್ಟ್ (63) ಅವರ 33 ತಿಂಗಳ ಪ್ರಧಾನಿ ಅಧಿಕಾರ ಅವಧಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ಅವರ ವರ್ಚಸ್ಸನ್ನು ಸಂಪೂರ್ಣವಾಗಿ ನುಂಗಿ ಹಾಕಿದ್ದು, ಸಮ್ಮಿಶ್ರ ಸರ್ಕಾರದ ಇತರ ಪಕ್ಷಗಳು ಬೆಂಬಲ ವಾಪಸ್ ಪಡೆಯುವ ಬೆದರಿಕೆ ಒಡ್ಡಿದ್ದವು.

2008: ರಾಷ್ಟ್ರದ ಮೊತ್ತ ಮೊದಲ ಇ- ಗ್ರಂಥಾಲಯವನ್ನು ಪಣಜಿಯ ಹೈಕೋರ್ಟ್ ಆವರಣದಲ್ಲಿ ಗೋವಾ ಮುಖ್ಯಮಂತ್ರಿ ದಿಗಂಬರ ಕಾಮತ್ ಉದ್ಘಾಟಿಸಿದರು. ನ್ಯಾಯ ಸುಲಭವಾಗಿ ಜನಸಾಮಾನ್ಯನಿಗೆ ಸಿಗುವಂತಾಗಲಿ ಎಂಬ ಕಾರಣದಿಂದ ಮೊದಲ `ಇ-ಗ್ರಂಥಾಲಯ'ವನ್ನು ವಕೀಲರ ಅನುಕೂಲಕ್ಕಾಗಿ ರೂಪಿಸಲಾಗಿದೆ ಎಂದು ಕಾಮತ್ ಹೇಳಿದರು. ಮಹಾರಾಷ್ಟ್ರ ಹಾಗೂ ಗೋವಾ ವಕೀಲರ ಸಂಘಗಳು ಭಾರತದ ವಕೀಲರ ಸಂಘಗಳಲ್ಲಿ ಬಹುದೊಡ್ಡವು. ಕಾನೂನು ವಿಷಯಗಳನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳಲು ಈ ಅಂತರ್ಜಾಲ (ಆನ್ ಲೈನ್) ವ್ಯವಸ್ಥೆಯಿಂದ  ಅನುಕೂಲವಾಗುವುದು. ಇದರಲ್ಲಿ ಕೋರ್ಟ್ ತೀರ್ಪುಗಳೂ ದೊರೆಯುವುವು.

2007: ನ್ಯಾಯಾಂಗ ನಿಂದನೆ ಆರೋಪದ ಮೇಲೆ `ಮಿಡ್ ಡೇ' ಪತ್ರಿಕೆಯ ನಾಲ್ವರು ಪತ್ರಕರ್ತರಿಗೆ ನಾಲ್ಕು ತಿಂಗಳ ಶಿಕ್ಷೆ ವಿಧಿಸಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತು. ನ್ಯಾಯಮೂರ್ತಿಗಳಾದ ಆರ್.ಎಸ್.ಸೋಧಿ ಮತ್ತು  ಬಿ.ಎನ್.ಚತುರ್ವೇದಿ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ತೀರ್ಪು ನೀಡಿ, `ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ವರದಿ  ಪ್ರಕಟಿಸುವ ಮೂಲಕ ಆರೋಪಿಗಳು, ಉನ್ನತ ನ್ಯಾಯಾಲಯದ ಘನತೆಗೆ ಕುಂದು ತಂದಿದ್ದಾರೆ' ಎಂದು ತಿಳಿಸಿತು. 2007ರ ಮೇ 19 ರಂದು `ಮಿಡ್ ಡೇ' ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿತ್ತು. ನಿವೃತ್ತ ಮುಖ್ಯ ನ್ಯಾಯಮೂರ್ತಿ ವೈ.ಕೆ.ಸಬರ್ ವಾಲ್ ಅವರ ನೇತೃತ್ವದ ಪೀಠವು ದೆಹಲಿಯಲ್ಲಿ ವಸತಿ ಪ್ರದೇಶಗಳಲ್ಲಿನ ಅನಧಿಕೃತ ಅಂಗಡಿಗಳಿಗೆ `ಬೀಗಮುದ್ರೆ' ಹಾಕುವ ಪ್ರಕರಣ ಕುರಿತು ನೀಡಿದ ತೀರ್ಪು ತಮ್ಮ ಮಕ್ಕಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಹೊಂದಿತ್ತು. ಸಬರ್ವಾಲ್  ಅವರ ಮಕ್ಕಳು ದೆಹಲಿಯ ಕೆಲ ಮಾಲ್ ಗಳ ಡೆವಲಪರ್ಸ್ ಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ಲೇಖನದ ಸಾರವಾಗಿತ್ತು. ಈ ಬಗ್ಗೆ  ವಿಚಾರಣೆ  ನಡೆದು ನಂತರ ಸೆಪ್ಟೆಂಬರ್ 11ರ ತೀರ್ಪಿನಲ್ಲಿ ಪತ್ರಿಕೆಯ ಸ್ಥಾನಿಕ ಸಂಪಾದಕಿ ವಿತುಷಾ ಒಬೇರಾಯ್, ನಗರ ಸಂಪಾದಕ ಎಂ.ಕೆ.ತಯಾಲ್, ವ್ಯಂಗ್ಯಚಿತ್ರಕಾರ ಇರ್ಫಾನ್ ಖಾನ್ ಮತ್ತು ಎಸ್.ಕೆ.ಅಖ್ತರ್ ಅವರನ್ನು ದೋಷಿಗಳೆಂದು ಹೇಳಲಾಗಿತ್ತು. ಈದಿನ ಇವರಿಗೆ ಶಿಕ್ಷೆಯನ್ನು ಪ್ರಕಟಿಸಲಾಯಿತು.

2007: ಭಾರತ -ಅಮೆರಿಕ ನಾಗರಿಕ ಪರಮಾಣು ಒಪ್ಪಂದವು ಪರಮಾಣು ಇಂಧನದ ಕೊರತೆ ನೀಗಿಸಬಲ್ಲುದು ಎಂದು ಹೇಳುವ ಮೂಲಕ ಸಿಪಿಎಂ ಹಿರಿಯ ಧುರೀಣ ಜ್ಯೋತಿ ಬಸು ಅವರೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ  ಬುದ್ಧದೇವ್ ಭಟ್ಟಾಚಾರ್ಯ ಅವರ ಹಾದಿ  ತುಳಿದರು. ಪರಮಾಣು ಒಪ್ಪಂದ ಕುರಿತು ಯುಪಿಎ ಮತ್ತು  ಎಡಪಕ್ಷಗಳ ನಡುವೆ ಭಾರೀ ಭಿನ್ನಾಭಿಪ್ರಾಯ ತಲೆದೋರಿದ್ದಾಗಲೇ ಕೆಲ ದಿನಗಳ ಹಿಂದೆ ಬುದ್ಧದೇವ್ ಭಟ್ಟಾಚಾರ್ಯ ಅವರು, ಪರಮಾಣು ಶಕ್ತಿಯ ಅಗತ್ಯತೆಯನ್ನು ಪ್ರತಿಪಾದಿಸಿ ಎಲ್ಲರ ಹುಬ್ಬೇರಿಸಿದ್ದರು. ಜ್ಯೋತಿ  ಬಸು ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದರು.

2007: ರಾಮ ಸೇತು ವಿವಾದದಲ್ಲಿ ತನ್ನ ದನಿಯನ್ನು ಮತ್ತಷ್ಟು ಎತ್ತರಿಸಿದ ಬಿಜೆಪಿ, ಶ್ರೀರಾಮನ ಕುರಿತು ಮಾಡಿದ ಅವಹೇಳನಕಾರಿ ಹೇಳಿಕೆಗಳನ್ನು ವಾಪಸು ಪಡೆಯುವಂತೆ ಕರುಣಾನಿಧಿ ಅವರ ಮನವೊಲಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾದಲ್ಲಿ ಡಿಎಂಕೆಯ ಎಲ್ಲ ಸಚಿವರನ್ನೂ ವಜಾ ಮಾಡಬೇಕು ಎಂದು ಆಗ್ರಹಿಸಿತು. ಇಲ್ಲಿ ಆರಂಭವಾದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದಲ್ಲಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಈ ಆಗ್ರಹ ಮಾಡಿದರು.

2007: ನಕಲಿ ಛಾಪಾ ಕಾಗದ ಪ್ರಕರಣದ ಆರೋಪಿ ಬೆಂಗಳೂರು ಕೇಂದ್ರ ಕಾರಾಗೃಹದ ಮಾಜಿ ಹಿರಿಯ ಅಧೀಕ್ಷಕ ಜಯಸಿಂಹ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿತು.
ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಹಾಗೂ ಆರ್.ವಿ.ರವೀಂದ್ರನ್ ಅವರನ್ನೊಳಗೊಂಡ ನ್ಯಾಯಪೀಠವು, ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದೆ. ಜಯಸಿಂಹ ಅವರ ಮೇಲಿರುವ ಆರೋಪದ ಸ್ವರೂಪ ಮತ್ತು ಈಗಾಗಲೇ ಅವರು ಕಾರಾಗೃಹದಲ್ಲಿ ಕಳೆದ ಅವಧಿಯನ್ನು ಪರಿಗಣಿಸಿ ಅವರಿಗೆ ಜಾಮೀನು ಮಂಜೂರು ಮಾಡುವುದು ಸೂಕ್ತ ಎಂದು ಭಾವಿಸಲಾಯಿತು ಎಂದು ಹೇಳಿತು. ಜಯಸಿಂಹ ಮತ್ತು ಉಪ ಅಧೀಕ್ಷಕ ನಂಜಪ್ಪ ಅವರು ಕಾರಾಗೃಹದಲ್ಲಿ ಮೊಬೈಲ್ ಬಳಸಲು ಅಬ್ದುಲ್ ಕರೀಂ ತೆಲಗಿಗೆ ನೆರವಾಗಿದ್ದರು ಎಂಬ ಆರೋಪದ ಮೇಲೆ 2003ರ ಡಿಸೆಂಬರ್ 9 ರಂದು ಸಿಬಿಐ ಅವರನ್ನು ಬಂಧಿಸಿತ್ತು. ಕಳೆದ ಏಪ್ರಿಲ್ 17ರಂದೇ ನಂಜಪ್ಪ ಅವರನ್ನು ಜಾಮೀನು ಮೇಲೆ ಬಿಡುಗಡೆ ಮಾಡಲಾಗಿತ್ತು.

2007: ನೇಮಕಾತಿಯ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ ಅಂಕಗಳನ್ನು ನಿಗದಿಪಡಿಸುವ ಅಧಿಕಾರ ಉದ್ಯೋಗ ನೀಡುವವರಿಗೆ ಇರುತ್ತದೆ. ಆದರೆ ನಿಯಮಗಳಲ್ಲಿ ಅವಕಾಶ ಇಲ್ಲದಿದ್ದರೆ ಈ ಅಂಕಗಳನ್ನು ನಂತರ ಕಡಿಮೆ ಮಾಡುವ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ಮೀಸಲು ಗ್ಯಾಂಗ್ ಮನ್ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ದೊರೆಯದಿರುವುದರಿಂದ ಸಾಮಾನ್ಯ ವರ್ಗದ ಅಭ್ಯರ್ಥಿಗಳ ನೇಮಕಕ್ಕೆ ಅನುಕೂಲವಾಗುವಂತೆ ಪೂರ್ವ ಕರಾವಳಿ ರೈಲ್ವೆ (ಇಸಿಆರ್) ಕನಿಷ್ಠ ಅಂಕಗಳನ್ನು ಕಡಿಮೆ ಮಾಡಿದ್ದನ್ನು ಪೀಠ ಅನೂರ್ಜಿತಗೊಳಿಸಿತು.

2007: ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ಎರಡು ತಿಂಗಳಿಂದ ಮಳೆಯ ಪ್ರಕೋಪ ಹೆಚ್ಚಿದ ಹಿನ್ನೆಲೆಯಲ್ಲಿ ಅನೇಕ ಗ್ರಾಮಗಳು ಜಲಾವೃತಗೊಂಡಿವು. ಸುರಕ್ಷತಾ ಕ್ರಮವಾಗಿ ಒಂದು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲಾಯಿತು.

2007: ಒರಿಸ್ಸಾದ ಬಾಲ ಮ್ಯಾರಥಾನ್ ಓಟಗಾರ ಬುಧಿಯಾ ಸಿಂಗ್ ನನ್ನು ಒರಿಸ್ಸಾ ಸರ್ಕಾರ ದತ್ತು ತೆಗೆದುಕೊಂಡಿತು. ಅವನ ತಾಯಿ ಈ ಕುರಿತ ಅಧಿಕೃತ ಪತ್ರಗಳಿಗೆ ಈದಿನ ಇಲ್ಲಿ ಸಹಿ ಹಾಕಿದರು.
ಸೆ. 4 ರಂದು ಈಕೆ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ದೇಬಸಿಸ್ ನಾಯಕ್ ಅವರನ್ನು ಭೇಟಿ ಮಾಡಿ, ತನಗಿರುವ 2 ಸಾವಿರ ರೂ ಆದಾಯದಲ್ಲಿ ತನ್ನ ನಾಲ್ಕೂ ಮಕ್ಕಳನ್ನು ಸಾಕಲು ಕಷ್ಟವಾಗುತ್ತಿದ್ದು ಬುಧಿಯಾನಿಗೆ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಕೇಳಿಕೊಂಡಿದ್ದರು.
ಹೊಸ ಮನೆ ಮತ್ತು ಹೊಸ ಸ್ನೇಹಿತರೊಂದಿಗೆ ನಾನು ಈಗ ಸಂತೋಷವಾಗಿದ್ದೇನೆ ಎಂದು ಬುಧಿಯಾ ಹರ್ಷ ವ್ಯಕ್ತಪಡಿಸಿದ.

2007: ಈ- ಮೇಲ್ ನಲ್ಲಿ ಬಂದ ಕೋರಿಕೆಯನ್ನು ಗಣನೆಗೆ ತೆಗೆದುಕೊಂಡು ಚೆನ್ನೈಯ ಕೌಟುಂಬಿಕ ನ್ಯಾಯಾಲಯವೊಂದು ವಿದೇಶದಲ್ಲಿ ನೆಲೆಸಿದ ದಂಪತಿಗೆ ವಿಡಿಯೊ ಕಾನ್ಫರೆನ್ಸ್ ಸಹಾಯದಿಂದ ಕೇವಲ 15 ನಿಮಿಷದಲ್ಲಿ ವಿಚ್ಛೇದನ ನೀಡಿತು. ಗಂಡ- ಹೆಂಡತಿ ಇಬ್ಬರೂ ಸಾಫ್ಟ್ ವೇರ್ ಉದ್ಯೋಗದಲ್ಲಿದ್ದು, ಪರಸ್ಪರ ಭಿನ್ನಾಭಿಪ್ರಾಯದಿಂದ ಬೇರೆಯಾಗಲು ಬಯಸಿದ್ದರು. ಆದರೆ ಗಂಡ ಅಮೆರಿಕದಲ್ಲಿದ್ದರೆ, ಹೆಂಡತಿ ನೆಲೆಸಿರುವುದು ಆಸ್ಟ್ರೇಲಿಯಾದಲ್ಲಿ. ಹಾಗಾಗಿ  ಅರ್ಜಿ ವಿಚಾರಣೆಯಲ್ಲಿ ಇಬ್ಬರೂ ಗೈರುಹಾಜರಾಗಿದ್ದರು. ತಾವು ವಿಚಾರಣೆಯ ದಿನ ಹಾಜರಾಗದಿರಲು ಸಾಧ್ಯವಾಗದ ಬಗ್ಗೆ ಮೊದಲೇ ನ್ಯಾಯಾಲಯಕ್ಕೆ ತಿಳಿಸಿದ್ದರು. ವಿಚ್ಛೇದನ ಬಯಸಿ ಅರ್ಜಿ ಸಲಿಸಿದ ಈ ದಂಪತಿ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವುದರಿಂದ ಆಯಾ ದೇಶದಲ್ಲೇ ಕುಳಿತು ವಿಡಿಯೊ ಕಾನ್ಫರೆನ್ಸ್ ಮೂಲಕ ಇಬ್ಬರೂ ನೀಡಿದ ಹೇಳಿಕೆಯನ್ನು ನ್ಯಾಯಾಧೀಶ ಆರ್.ದೇವದಾಸ್ ದಾಖಲಿಸಿಕೊಂಡರು. ದಂಪತಿಯನ್ನು ವಿಡಿಯೊದಲ್ಲಿ ಗುರುತಿಸಲು ರಕ್ತ ಸಂಬಂಧಿಗಳನ್ನು ಕೋರ್ಟಿಗೆ  ಕರೆಸಲಾಗಿತ್ತು. ದಂಪತಿ ಪರ ವಕೀಲರು ಹಾಗೂ ಸಂಬಂಧಿಕರು ನಂತರ ಈ ವಿಚ್ಛೇದನಕ್ಕೆ ಒಪ್ಪಿ ಸಹಿ ಹಾಕಿದರು. ಕೇವಲ 15 ನಿಮಿಷಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಿತು. ಇದಕ್ಕೆ ತಗುಲಿದ್ದು ಕೇವಲ 300 ರೂಪಾಯಿ. ಸಾಮಾನ್ಯವಾಗಿ ಬೇರೆ ವಿಚ್ಛೇದನ ಪ್ರಕ್ರಿಯೆಗೆ 2 ಲಕ್ಷ ರೂ ಖರ್ಚಾಗುತ್ತಿತ್ತು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಪೈಕಿ ಖಾತಾ ಬಜಾರ್ ಮತ್ತು ಹೋಟೆಲ್ ಸೀರಾಕಿನಲ್ಲಿ ಸಂಭವಿಸಿದ ಸ್ಫೋಟಗಳ ಆರೋಪಿ ಪರ್ವೇಜ್ ನಾಸಿರ್ ಅಹಮದ್ ಶೇಖ್ ತಪ್ಪಿತಸ್ಥ ಎಂದು ವಿಶೇಷ ಟಾಡಾ ನ್ಯಾಯಾಲಯ ತೀರ್ಪು ನೀಡಿತು. ಟೈಗರ್ ಮೆಮೆನ್ ನ ಸಹಚರನಾಗಿದ್ದ ಶೇಖ್ 1993ರ ಮಾಚರ್್ 12ರಂದು ಸ್ಕೂಟರಿನಲ್ಲಿ ಆರ್ ಡಿಎಕ್ಸ್ ಸ್ಫೋಟಕಗಳನ್ನು ಇರಿಸಿ ಖಾತಾ ಬಜಾರಿನಲ್ಲಿ ಇಟ್ಟಿದ್ದ. ಈ ಸ್ಫೋಟದಲ್ಲಿ ನಾಲ್ವರು ಮೃತರಾಗಿದ್ದರು.

2006: ಬಂಗಾಳ ಕೊಲ್ಲಿಯಲ್ಲಿ ಎದ್ದ ಬಿರುಗಾಳಿಗೆ ಸಿಲುಕಿ 100ಕ್ಕೂ ಹೆಚ್ಚು ಮೀನುಗಾರಿಕಾ ದೋಣಿಗಳು ಮುಳುಗಿದ ಪರಿಣಾಮವಾಗಿ ಕನಿಷ್ಠ 73 ಜನ ಮೃತರಾಗಿ ಇತರ 100ಕ್ಕೂ ಹೆಚ್ಚು ಜನ ಕಣ್ಮರೆಯಾದರು.

2006: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ವೈಫಲ್ಯಗಳನ್ನು ದುರಸ್ತಿ ಮಾಡಲು ತೆರಳಿದ್ದ `ಅಟ್ಲಾಂಟಿಸ್' ಬಾಹ್ಯಾಕಾಶ ನೌಕೆಯು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಯಶಸ್ವಿಯಾಗಿ ಧರೆಗಿಳಿಯಿತು. ಆರು ಗಗನಯಾನಿಗಳು ಮತ್ತು 15,880 ಕೆ.ಜಿ. ತೂಕದ ಸಾಮಗ್ರಿಗಳನ್ನು ಈ ನೌಕೆಯು ತನ್ನೊಂದಿಗೆ ಬಾಹ್ಯಾಕಾಶಕ್ಕೆ ಒಯ್ದಿತ್ತು. ಈ ಗಗನ ಯಾನಿಗಳು 12 ದಿನಗಳ ಕಾಲ ಅಂತರಿಕ್ಷದಲ್ಲಿದ್ದು ನಿಲ್ದಾಣದ ದುರಸ್ತಿಕಾರ್ಯಗಳನ್ನು ಪೂರೈಸಿ ಈದಿನ ಯಶಸ್ವಿಯಾಗಿ ಧರೆಗೆ ವಾಪಸಾದರು.

2006: ಖಜಕಿಸ್ಥಾನ ಮತ್ತು ಉಕ್ರೇನಿನ ಕಲ್ಲಿದ್ದಲು ಗಣಿಗಳಲ್ಲಿ ಸಂಭವಿಸಿದ ಆಕಸ್ಮಿಕ ಸ್ಫೋಟ ಮತ್ತು ವಿಷಾನಿಲ ಸೋರಿಕೆಯಿಂದಾಗಿ ಕನಿಷ್ಠ 53 ಜನ ಮೃತರಾದರು. ಸೋವಿಯತ್ ಒಕ್ಕೂಟದ ಗಣಿ ಕ್ಷೇತ್ರದಲ್ಲಿ ಇತ್ತೀಚೆಗೆ ಸಂಭವಿಸಿದ ದುರಂತಗಳಲ್ಲಿ ಇದು ಅತ್ಯಂತ ದೊಡ್ಡ ದುರಂತ.

2006: ಮಾಜಿ ಅಥ್ಲೆಟ್ ಮತ್ತು ಖ್ಯಾತ ಕೋಚ್ ಆಗಿದ್ದ ಎ.ಜೆ. ಡಿ.ಸೋಜಾ (67) ಅವರು ಚೆನ್ನೈಯಲ್ಲಿ ನಿಧನರಾದರು. ತಮಿಳುನಾಡಿನ ಹಲವಾರು ಅಥ್ಲೆಟ್ ಗಳಿಗೆ ತರಬೇತಿ ನೀಡಿ, ಅವರನ್ನು ರಾಜ್ಯ- ರಾಷ್ಟ್ರಕ್ಕೆ ಹೆಸರು ತರುವಂತಹ ಉತ್ತಮ ಅಥ್ಲೆಟ್ ಗಳನ್ನಾಗಿ ಡಿಸೋಜಾ ಅವರು ರೂಪಿಸಿದ್ದರು.

1998: ಒಲಿಂಪಿಕ್ ಸ್ವರ್ಣ ಪದಕ ವಿಜೇತೆ ಓಟಗಾರ್ತಿ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ ಅವರು ಕ್ಯಾಲಿಫೋರ್ನಿಯಾದ ಮಿಷನ್ ವೀಜೋದಲ್ಲಿನ ತಮ್ಮ ಮನೆಯಲ್ಲಿ ಮೃತರಾಗಿದ್ದುದು ಪತ್ತೆಯಾಯಿತು. ಆಗ ಅವರ ವಯಸ್ಸು 38 ವರ್ಷ.

1995: ಗಣೇಶ ಹಾಲು ಕುಡಿಯುತ್ತಾನೆ ಎಂಬ ವದಂತಿ ರಾಷ್ಟ್ರದಾದ್ಯಂತ ಹರಡಿದ ದಿನವಿದು. ಮೊದಲಿಗೆ ನವದೆಹಲಿಯಲ್ಲಿ ಹರಡಿದ ಈ ವದಂತಿ ನಂತರ ದೇಶದಾದ್ಯಂತ ಹರಡಿ ಆಸ್ತಿಕರು ಮತ್ತು ನಾಸ್ತಿಕರು ಹುಬ್ಬೇರಿಸಿದರು. ಸೊಂಡಿಲ ಮೂಲಕ ಗಣೇಶ ಹಾಲು ಸ್ವೀಕರಿಸುತ್ತಾನೆ ಎಂದು ನಂಬಿದ ಭಕ್ತರು ಹಾಲಿನ ನೈವೇದ್ಯದ ಪ್ರಯೋಗ ಮಾಡಿದರೆ, ವಿಗ್ರಹದ ಒಳಗಿನ ನಿರ್ವಾತಪ್ರದೇಶದಿಂದಾಗಿ ಈ ರೀತಿ ಆಗುತ್ತದೆ ಎಂದು ಸಂಶೋಧಕರು ವಿವರಣೆ ನೀಡಿದರು.

1994: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಉದ್ಯಮಿ ರಾಮಕೃಷ್ಣ ಬಜಾಜ್ ನಿಧನ.

1981: ನಾಲ್ಕು ದಶಕಗಳ ಕಾಲ ತಮ್ಮ ಕಂಠ ಮಾಧುರ್ಯದಿಂದ ಜನಮನ ರಂಜಿಸಿದ ಪಾಂಡೇಶ್ವರ ಕಾಳಿಂಗರಾವ್ (67) ಅವರು ಈದಿನ ಬೆಳಗ್ಗೆ ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ತಮ್ಮ ಮನೆಯಲ್ಲಿ ನಿಧನರಾದರು.

1981: ಬ್ರಿಟಿಷ್ ಹೊಂಡುರಾಸ್ ಎಂದೇ ಖ್ಯಾತಿ ಪಡೆದಿದ್ದ ಬೆಲಿಝ್ ಸ್ವತಂತ್ರವಾಯಿತು.

1964: ಬ್ರಿಟಿಷರ 164 ವರ್ಷಗಳ ಆಳ್ವಿಕೆಯ ಬಳಿಕ ಮಾಲ್ಟಾ ಸ್ವತಂತ್ರ ರಾಷ್ಟ್ರವಾಯಿತು.

1947: ಅಮೆರಿಕದ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ ಸ್ಟೀಫನ್ (ಎಡ್ವಿನ್) ಕಿಂಗ್ ಜನ್ಮದಿನ. ಭಯಾನಕ ಕಾದಂಬರಿಗಳಿಗಾಗಿ ಟೀಕೆಯ ಜೊತೆಗೇ ಜನಪ್ರಿಯತೆಯನ್ನೂ ಅವರು ಗಳಿಸಿದ್ದರು.

1945: ಸಾಹಿತಿ ಸರೋಜಿನಿ ಚವಲಾರ ಜನನ.

1912: ರಾಜಕಾರಣಿ ಫಿರೋಜ್ ಗಾಂಧಿ ಜನನ.

1907: ಸ್ವಾತಂತ್ರ್ಯ ಹೋರಾಟಗಾರ ಯು.ಎನ್. ಧೇಬರ್ (1907-77) ಜನ್ಮದಿನ. 1955-59ರ ಅವದಿಯಲ್ಲಿ ಅವರು ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದರು.

1898: ಖ್ಯಾತ ಪತ್ರಕರ್ತ ತುಷಾರ ಕಾಂತಿ ಘೋಷ್ ಜನನ.

1882: ವೃತ್ತಿ ರಂಗಭೂಮಿಗೆ ನಾಟಕಗಳನ್ನು ಬರೆದುಕೊಟ್ಟ ಖ್ಯಾತರಾದ ಬೆಳ್ಳಾವೆ ನರಹರಿ ಶಾಸ್ತ್ರಿ (21-9-1882ರಿಂದ 21-6-1961) ಅವರು ನರಸಾವಧಾನಿಗಳು- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆಯ ಬೆಳ್ಳಾವೆಯಲ್ಲಿ ಜನಿಸಿದರು. ನಾಟಕಗಳು ಇಲ್ಲದೆ ರಂಗಭೂಮಿ ಸೊರಗಿದ್ದ ಕಾಲದಲ್ಲಿ ನಾಟಕಗಳನ್ನು ಬರೆದುಕೊಟ್ಟು ಕನ್ನಡಿಗರಲ್ಲಿ ಹಾಸ್ಯ ಪ್ರಜ್ಞೆಯನ್ನು ಮೂಡಿಸಿದವರು ಇವರು.

1452: ಇಟಲಿಯ ಕ್ರೈಸ್ತ ಪ್ರಚಾರಕ ಗಿರೊಲಾಮೊ ಸವೊನರೋಲಾ (1452-98) ಜನ್ಮದಿನ. ಭ್ರಷ್ಟ ಪಾದ್ರಿಗಳ ಜೊತೆಗೆ ಘರ್ಷಣೆಗೆ ಹೆಸರಾಗಿದ್ದ ಅವರು 1494ರಲ್ಲಿ ಫ್ಲಾರೆನ್ಸ್ ಪ್ರಜಾತಾಂತ್ರಿಕ ಗಣರಾಜ್ಯವನ್ನು ಸ್ಥಾಪಿಸಿ ಅದರ ಏಕಮೇವ ಧುರೀಣರಾಗಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement