My Blog List

Friday, January 15, 2010

ಇಂದಿನ ಇತಿಹಾಸ History Today ಡಿಸೆಂಬರ್ 14

ಇಂದಿನ ಇತಿಹಾಸ

ಡಿಸೆಂಬರ್ 14


ಮಹಾತ್ಮ ಗಾಂಧಿ ಅವರ ಕುಟುಂಬದ ಸೊಸೆ ಸರಸ್ವತಿ ಗಾಂಧಿ ಅವರು (85) ಈದಿನ ಮಧ್ಯಾಹ್ನ ಕೇರಳದ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸರಸ್ವತಿ ಗಾಂಧಿ ಅವರು ಎಂ.ಕೆ. ಗಾಂಧಿಯವರ ಮೊಮ್ಮಗ ಕಾಂತಿಲಾಲ್ ಗಾಂಧಿ ಅವರ ಪತ್ನಿ. ಇವರ ಮದುವೆಯನ್ನೂ ಮಹಾತ್ಮ ಗಾಂಧಿಯವರೆ ಮಾಡಿಸಿದ್ದರು.

2014: ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಗಂಗಾ ಶುದ್ಧೀಕರಣದ ಯೋಜನೆಯ ನಿರ್ವಹಣೆಗಾಗಿ ಪ್ರತೇಕ ಸಂಸ್ಥೆ ರಚಿಸಲು ಕೇಂದ್ರ ಸರ್ಕಾರ ಚಿಂತಿಸಿದ್ದು, ಗಂಗೆ ಹರಿಯುವ ಪ್ರದೇಶದಲ್ಲಿ 'ಗಂಗಾ ಇನ್ಸ್ಟಿಟ್ಯೂಟ್ ಆಫ್ ರಿವರ್ ಸೈನ್ಸ್ಸ್' ಸ್ಥಾಪಿಸಲು ನೀರಾವರಿ ಮತ್ತು ಗಂಗಾ ಶುದ್ಧೀಕರಣ ಸಚಿವಾಲಯ ನಿರ್ಧರಿಸಿತು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಗಂಗಾ ಮತ್ತಷ್ಟು ಮಲಿನಗೊಳ್ಳುತ್ತಿರುವುದರಿಂದ ಗಂಗೆ ಹರಿಯುವ ಆಸುಪಾಸಿನ ಗ್ರಾಮಗಳಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡಲು ಸಚಿವಾಲಯ ಯೋಚಿಸಿತು. ಪ್ರತಿದಿನ ಸುಮಾರು 12 ಸಾವಿರ ಮಿಲಿಯನ್ ಲೀಟರ್ ನಷ್ಟು ಕೊಳಚೆ ಗಂಗೆಯಿಂದ ಶೇಖರಿಸಲಾಗುತ್ತಿದೆ ಎನ್ನಲಾಯಿತು.

2014: ಶ್ರೀನಗರ: ಪ್ರತ್ಯೇಕತಾವಾದಿಗಳ ಚುನಾವಣಾ ಬಹಿಷ್ಕಾರ ಕರೆ ಮತ್ತು ಕೊರೆಯುವ ಚಳಿಯ ನಡುವೆಯೂ ಜಮ್ಮು ಮತ್ತು ಕಾಶ್ಮೀರದಲ್ಲಿ 18 ವಿಧಾನಸಭಾ ಕ್ಷೇತ್ರಗಳಿಗೆ ನಡೆದ 4ನೇ ಸುತ್ತಿನ
ಚುನಾವಣೆಯಲ್ಲಿ ಶೇಕಡಾ 49 ಮತದಾನವಾಯಿತು. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಶ್ರೀನಗರ, ಅನಂತ್ನಾಗ್, ಶೋಪಿಯಾನ್ ಮತ್ತು ಸಾಂಬ ಜಿಲ್ಲೆಗಳಲ್ಲಿ ಚುನಾವಣೆ ನಡೆದಿತ್ತು. ಕಣಿವೆ ರಾಜ್ಯದಲ್ಲಿ ಮೊದಲ 2ಹಂತದ ಮತದಾನದಲ್ಲಿ ತಲಾ 71% ಮತ್ತು 3ನೇ ಹಂತದ ಮತದಾನದಲ್ಲಿ 59% ಮತದಾನವಾಗಿತ್ತು. 4ನೇ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ಪೂರ್ಣಗೊಂಡಿತು. ಕೆಲವು ಕಡೆ ರಾಜಕೀಯ ಪಕ್ಷಗಳ ಬೆಂಬಲಿಗರು ಸಣ್ಣ ಪುಟ್ಟ ಗಲಭೆ ಮಾಡಿದ್ದು ಹೊರತು ಪಡಿಸಿದರೆ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ ಎಂದು ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿ ಉಮಂಗ್ ನರೂಲ ತಿಳಿಸಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರದೇಶದಲ್ಲಿ ಶೇಕಡಾ 45ರಷ್ಟು ಮಾತ್ರ ಮತದಾನವಾಗಿತ್ತು ಮತ್ತು ವರ್ಷದ ಪ್ರಾರಂಭದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 29% ಮತದಾನವಾಗಿತ್ತು.

2014: ನವದೆಹಲಿ: ಮಾದಕ ದ್ರವ್ಯ ಹಾವಳಿ ವಿರುದ್ಧ ತಮ್ಮ ಮಾಸಿಕ 'ಮನ್ ಕೀ ಬಾತ್' (ಮನದಾಳದ ಮಾತು) ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಮಾದಕ ದ್ರವ್ಯಗಳನ್ನು ಖರೀದಿಸಲು ನೀವು ಕೊಡುವ ಹಣ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆಯಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿದರು. 'ಮಾದಕ ದ್ರವ್ಯ ಸೇವಿಸುತ್ತಿರುವ ಯುವಕರಲ್ಲಿ ನಾನೊಂದು ಪ್ರಶ್ನೆ ಕೇಳಬಯಸುತ್ತೇನೆ. ಮಾದಕ ದ್ರವ ತೆಗೆದುಕೊಂಡಾಗ ನೀವು ಬೇರೆಯೇ ಲೋಕಕ್ಕೆ ಹೋದ ಅನುಭವ ನಿಮಗಾಗಿ ಮುದಗೊಂಡಿರಬಹುದು. ಆದರೆ ನೀವು ಮಾದಕ ದ್ರವ್ಯಕ್ಕಾಗಿ ನೀಡುವ ಹಣ ಎಲ್ಲಿಗೆ ಹೋಗುತ್ತದೆ ಎಂದು ಎಂದಾದರೂ ನಿಮ್ಮನ್ನು ನೀವು ಕೇಳಿಕೊಂಡಿದ್ದೀರಾ?' ಎಂದು ಪ್ರಧಾನಿ ಪ್ರಶ್ನಿಸಿದರು. 'ಈ ಹಣ ಭಯೋತ್ಪಾದಕರಿಗೆ ತಲುಪಿ ಅದನ್ನು ಅವರು ಶಸ್ತ್ರಾಸ್ತ್ರ ಖರೀದಿಗೆ ಬಳಸುವ ಸಾಧ್ಯತೆ ಇದೆ ಎಂದು ಎಂದಾದರೂ ಒಮ್ಮೆ ಯೋಚಿಸಿದ್ದೀರಾ ಮತ್ತು ಅದೇ ಶಸ್ತ್ರಾಸ್ತ್ರಗಳನ್ನು ಅವರು ನಮ್ಮ ಸೈನಿಕರನ್ನು ಕೊಲ್ಲಲು ಬಳಸುತ್ತಿರಬಹುದು ಎಂದು ಚಿಂತಿಸಿದ್ದೀರಾ?' ಎಂದು ಮೋದಿ ಕೇಳಿದರು. 'ಸೈನಿಕನೊಬ್ಬನಿಗೆ ತಾಗಿದ ಗುಂಡು ನೀವು ಮಾದಕ ದ್ರವ್ಯಕ್ಕಾಗಿ ಕೊಟ್ಟ ಹಣದ ಒಂದು ಭಾಗವಾಗಲೂ ಬಹುದು ಎಂದು ಒಮ್ಮೆಯಾದರೂ ಚಿಂತಿಸಿದ್ದೀರಾ?' ಎಂದು ಪ್ರಶ್ನಿಸಿದ ಪ್ರಧಾನಿ ಮಾದಕ ದ್ರವ್ಯ ಸೇವನೆಯನ್ನು ಬಿಟ್ಟು ಬಿಡಿ ಎಂದು ಯುವಕರನ್ನು ಒತ್ತಾಯಿಸಿದರು. 'ಮಾದಕ ದ್ರವ್ಯವನ್ನು ತಿರಸ್ಕರಿಸಿ, ಮಾದಕ ದ್ರವ್ಯ ಸೇವನೆಗೆ 'ಇಲ್ಲ' ಎಂದು ಹೇಳುವ ಧೈರ್ಯ ಪ್ರದರ್ಶಿಸಿ. ನಿಮ್ಮ ಮಿತ್ರರಿಗೂ ಇದನ್ನೇ ಹೇಳಿ' ಎಂದು ಮೋದಿ ನುಡಿದರು. 'ಮಾದಕ ದ್ರವ್ಯ ಸೇವನೆಯು ಕತ್ತಲೆ, ಹಾನಿ ಮತ್ತು ಸರ್ವನಾಶವನ್ನು ತರುತ್ತದೆ' ಎಂದು ಹೇಳಿದ ಪ್ರಧಾನಿ, ಇದರ ವಿರುದ್ಧ ವಿಶೇಷ ಸಹಾಯವಾಣಿ ಮತ್ತು ಸಾಮಾಜಿಕ ಮಾಧ್ಯಮ ಮೂಲಕ ಚಳವಳಿ ನಡೆಸುವಂತೆ ಕರೆ ನೀಡಿದರು. 'ಈ ದೇಶದ ಯುವಜನತೆಯ ಬಗ್ಗೆ ನಾನು ಚಿಂತಿತನಾಗಿದ್ದೇನೆ ಎಂದು ಕಳೆದ ಬಾರಿಯೇ ನಾನು ಹೇಳಿದ್ದೇನೆ. ಕೆಲವು ಪುತ್ರರು ಮತ್ತು ಪುತ್ರಿಯರು ಮಾದಕ ದ್ರವ್ಯ ಸೇವನೆಯ ಚಟಕ್ಕೆ ಬಿದ್ದು ಇಡೀ ಕುಟುಂಬವೇ ಚೂರು ಚೂರಾಗುವುದರ ಬಗ್ಗೆ ನನಗೆ ಚಿಂತೆಯಿದೆ' ಎಂದು ಅವರು ನುಡಿದರು. 'ಅದು ಅತ್ಯಂತ ಒಳ್ಳೆಯ ಕುಟುಂಬಗಳನ್ನು ನಾಶಗೊಳಿಸಬಲ್ಲುದು. ಅದಕ್ಕೆ ಯಾರನ್ನಾದರೂ ಸರ್ವ ನಾಶ ಮಾಡುವ ಶಕ್ತಿ ಇದೆ. ಇದು ಮಾನಸಿಕ- ಸಾಮಾಜಿಕ ಮತ್ತು ವೈದ್ಯಕೀಯ ಸಮಸ್ಯೆ. ಕೇವಲ ಔಷಧದಿಂದ ಅದನ್ನು ನಿವಾರಿಸಲಾಗದು' ಎಂದು ಮೋದಿ ಹೇಳಿದರು. ಬಹಳಷ್ಟು ಮಂದಿ ಈ ಚಟದಿಂದ ಹೊರಬಂದ ಉದಾಹರಣೆಗಳಿವೆ ಎಂದು ಹೇಳಿದ ಮೋದಿ ಈ ವಿಷಯಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸಲು ಮುಂದೆ ಬರುವಂತೆ ಸಾರ್ವಜನಿಕ ಜೀವನದ ಗಣ್ಯರಿಗೆ ಮನವಿ ಮಾಡಿದರು. 'ಮಾದಕ ದ್ರವ್ಯ ಮುಕ್ತ ಭಾರತ' (ಡ್ರಗ್ ಫ್ರೀ ಇಂಡಿಯಾ) ಚಳವಳಿಯನ್ನು ಹೂಡಲು ನಾವು ಪ್ರಯತ್ನಿಸಬಹುದು ಎಂದು ಹೇಳಿದ ಪ್ರಧಾನಿ 'ಮಕ್ಕಳಲ್ಲಿ ಆಗುವ ಬದಲಾವಣೆಗಳ ಮೇಲೆ ಕಣ್ಣಿಟ್ಟುಕೊಂಡು ಅವರನ್ನು ಈ ಚಟಕ್ಕೆ ಬೀಳದಂತೆ ರಕ್ಷಿಸಿ' ಎಂದು ಪಾಲಕರಿಗೂ ಸಲಹೆ ಮಾಡಿದರು.

2014:ನವದೆಹಲಿ: ಗೃಹ ಸಚಿವಾಲಯದ ಶಿಫಾರಸು ಅಂಗೀಕಾರಗೊಂಡದ್ದೇ ಆದರೆ, ಸಿಡಿಲಿನ ಹೊಡೆತಕ್ಕೆ ಸಿಲುಕಿ ಅಸು ನೀಗುವ ವ್ಯಕ್ತಿಗಳ ವಾರಸುದಾರರಿಗೆ ಇನ್ನು ಮುಂದೆ ಸರ್ಕಾರದಿಂದ ಪರಿಹಾರ ಲಭಿಸಲಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 400 ಸಾವುಗಳು ಸಿಡಿಲ ಬಡಿತದಿಂದ ಸಂಭವಿಸುತ್ತವೆ. ಈ ಹಿನ್ನೆಲೆಯಲ್ಲಿ ಸಿಡಿಲು ಬಡಿತವನ್ನು ರಾಷ್ಟ್ರೀಯ ಹಾಗೂ ರಾಜ್ಯ ಸರ್ಕಾರಗಳ ಪರಿಹಾರ ನಿಧಿ ನೀಡುವ ಸಲುವಾಗಿ ಘೋಷಿತವಾಗಿರುವ ನೈಸರ್ಗಿಕ ಪ್ರಕೋಪಗಳ ಪಟ್ಟಿಗೆ ಸೇರಿಸುವಂತೆ ಗೃಹ ಸಚಿವಾಲಯವು 14ನೇ ಹಣಕಾಸು ಆಯೋಗಕ್ಕೆ ಶಿಫಾರಸು ಮಾಡಿತು. ಪ್ರಸ್ತುತ ಸಿಡಿಲ ಬಡಿತವು ಪರಿಹಾರಕ್ಕೆ ನಿಗದಿಯಾಗಿರುವ ನೈಸರ್ಗಿಕ ದುರಂತಗಳ ಪಟ್ಟಿಯಲ್ಲಿ ಇಲ್ಲ. 14ನೇ ಹಣಕಾಸು ಆಯೋಗವು ಡಿಸೆಂಬರ್ 31ರಂದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಕಾಲ ಕಾಲಕ್ಕೆ ರಚನೆಯಾಗುವ ಹಣಕಾಸು ಆಯೋಗಗಳು ಘೋಷಿತ ನೈಸರ್ಗಿಕ ಪ್ರಕೋಪಗಳ ಪಟ್ಟಿಗೆ ಯಾವುದೇ ವಿಷಯವನ್ನು ಸೇರಿಸುವ ಪ್ರಸ್ತಾಪವನ್ನು ಪರಿಶೀಲಿಸುತ್ತವೆ.

2014: ಜೈಪುರ: ಜೈಪುರದಿಂದ 35 ಕಿ.ಮೀ. ದೂರದ ಬೀಲ್​ಪುರ ಗ್ರಾಮದ ಬಳಿ ದೆಹಲಿ-ಜೈಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನಿಲದ ಟ್ಯಾಂಕರ್ ಒಂದು ಸ್ಪೋಟಗೊಂಡ ಪರಿಣಾಮವಾಗಿ 10 ಜನ ಸಜೀವವಾಗಿ ದಹನಗೊಂಡು, ಇತರ 12 ಹನ್ನೆರಡು ಮಂದಿ ಸುಟ್ಟ ಗಾಯಗಳಿಗೆ ಒಳಗಾದ ದಾರುಣ ಘಟನೆ ಹಿಂದಿನ ದಿನ ರಾತ್ರಿ ಘಟಿಸಿತು. ಹೆದ್ದಾರಿ ಮೂಲಕ ಸಾಗುತ್ತಿದ್ದ ಇತರ ಏಳು ವಾಹನಗಳಿಗೂ ಈ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿತು. ದುರಂತದ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು. ಬೆಳಗಿನ ವೇಳೆಗೆ ದುರಂತಕ್ಕೆ ಈಡಾದ ವಾಹನಗಳನ್ನು ತೆರವುಗೊಳಿಸಿ ಸಂಚಾರ ಸುಗಮಗೊಳಿಸಲಾಯಿತು. ದುರಂತದಲ್ಲಿ ಮೃತರಾದವರ ಪೈಕಿ ದಕ್ಷುಲ್ (6), ರಾಧಾಮೋಹನ್ (40), ವಿನೋದ್ (37) ಅವರನ್ನು ಗುರುತಿಸಲಾಗಿದೆ ಎಂದು ಜೈಪುರ (ಗ್ರಾಮೀಣ) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ದೀಪ್ ಹೇಳಿದರು.

2014: ಕೋಲ್ಕತ: ದೆಹಲಿಗೆ ಹೊರಟಿದ್ದ ಪೂರ್ವಾ ಎಕ್ಸ್​ಪ್ರೆಸ್ ರೈಲುಗಾಡಿಯ ಒಂಬತ್ತು ಬೋಗಿಗಳು ಬೆಳಗ್ಗೆ ಹೌರಾ ನಿಲ್ದಾಣದಿಂದ ಹೊರಟ ಸ್ವಲ್ಪ ಹೊತ್ತಿನ ಬಳಿಕ ಲಿಲಿವಾದಲ್ಲಿ ಹಳಿ ತಪ್ಪಿದವು. ದುರಂತದಲ್ಲಿ ಯಾವುದೇ ಸಾವು-ನೋವು ಸಂಭವಿಸಿರುವ ಬಗ್ಗೆ ತತ್​ಕ್ಷಣಕ್ಕೆ ಯಾವುದೇ ವರದಿ ಬಂದಿಲ್ಲ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದರು. 12381 ಯುಪಿ ಹೌರಾ - ನವದೆಹಲಿ ಪೂರ್ವಾ ಎಕ್ಸ್​ಪ್ರೆಸ್ ಬೆಳಗ್ಗೆ 8.25ಕ್ಕೆ ಹಳಿ ತಪ್ಪಿದೆ. ಹೌರಾದಿಂದ ಅದು ಬೆಳಗ್ಗೆ 8.15ಕ್ಕೆ ಹೊರಟಿತ್ತು. ಹಳಿ ತಪ್ಪುವ ವೇಳೆಯಲ್ಲಿ ರೈಲು ನಿಧಾನವಾಗಿ ಚಲಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವಾದ್ಯಂತ ಖ್ಯಾತರಾದ ಕರ್ನಾಟಕ ಮೂಲದ ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಅವರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. 'ಜನ್ಮ ದಿನದ ಸಂದರ್ಭದಲ್ಲಿ ಬಿ.ಕೆ.ಎಸ್. ಅಯ್ಯಂಗಾರ್ ಅವರಿಗೆ ನನ್ನ ಶ್ರದ್ಧಾಂಜಲಿಗಳು. ಯೋಗವನ್ನು ವಿಶ್ವವ್ಯಾಪಿಗೊಳಿಸುವಲ್ಲಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯವಾದುದು' ಎಂದು ಪ್ರಧಾನಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದರು. ಭಾರತದ ಯೋಗದ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಪ್ರಧಾನಿ ಜೂನ್ 21ನೇ ದಿನಾಂಕವನ್ನು 'ವಿಶ್ವ ಯೋಗ ದಿನ'ವಾಗಿ ಘೋಷಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ವಿಶ್ವಸಂಸ್ಥೆ ಎರಡು ದಿನಗಳ ಹಿಂದಷ್ಟೇ ಜೂನ್ 21ನೇ ದಿನಾಂಕವನ್ನು 'ವಿಶ್ವ ಯೋಗ ದಿನ'ವಾಗಿ ಘೋಷಿಸಿತ್ತು. ವಿಶ್ವಸಂಸ್ಥೆಯ 175ಕ್ಕೂ ಹೆಚ್ಚು ದೇಶಗಳು ಮೋದಿ ಪ್ರಸ್ತಾವವನ್ನು ಅನುಮೋದಿಸಿದ್ದವು. ವಿಶ್ವಾದ್ಯಂತ ಯೋಗವನ್ನು ಜನಪ್ರಿಯಗೊಳಿಸಿದ ಯೋಗ ಗುರು ಬಿ.ಕೆ.ಎಸ್. ಅಯ್ಯಂಗಾರ್ ಅವರು 'ಅಯ್ಯಂಗಾರ್ ಯೋಗ' ಸಂಸ್ಥೆಯನ್ನೂ ಇದಕ್ಕಾಗಿ ಸ್ಥಾಪಿಸಿದ್ದರು. ಕರ್ನಾಟಕದ ಬೆಳ್ಳೂರಿನಲ್ಲಿ 1918ರ ಡಿಸೆಂಬರ್ 14ರಂದು ಜನಿಸಿದ್ದ ಅಯ್ಯಂಗಾರ್ 2014ರ ಆಗಸ್ಟ್ 20ರಂದು ಪುಣೆಯಲ್ಲಿ ನಿಧನರಾಗಿದ್ದರು.


2014: ಶಿಮ್ಲಾ: ಭಾರಿ ಹಿಮಪಾತದ ಪರಿಣಾಮವಾಗಿ ಹಿಮಾಚಲ ಪ್ರದೇಶದ ಮನಾಲಿ ಪ್ರವಾಸೀ ಧಾಮದ ಆಸುಪಾಸಿನಲ್ಲಿ ಸಿಕ್ಕಿಹಾಕಿಕೊಂಡಿದ್ದ 600ಕ್ಕೂ ಹೆಚ್ಚು ಮಂದಿ ಪ್ರವಾಸಿಗಳನ್ನು ಸುರಕ್ಷಿತವಾಗಿ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಇನ್ನೂ ಸಿಕ್ಕಿಹಾಕಿಕೊಂಡದ್ದ 18 ಜನರಿಗೆ ಮನಾಲಿಯಿಂದ 35 ಕಿ.ಮೀ. ದೂರದಲ್ಲಿರುವ ಮರ್ಹಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಯಿತು ಎಂದು ಉಪ ಜಿಲ್ಲಾಧಿಕಾರಿ ವಿನಯ್ ಧಿಮಾನ್ ದೂರವಾಣಿ ಮೂಲಕ ಸುದ್ದಿ ಸಂಸ್ಥೆಗೆ ತಿಳಿಸಿದರು. ರೊಹ್ತಂಗ್ ಕಣಿವೆಯತ್ತ ಹೊರಟಿದ್ದಾಗ ಗುಲಾಬಾ ಮತ್ತು ಮರ್ಹಿಯಲ್ಲಿ ಸಿಕ್ಕಿಹಾಕಿಕೊಂಡ ಬಹುತೇಕ ಪ್ರವಾಸಿಗಳನ್ನು ರಕ್ಷಿಸಿ ಶನಿವಾರ ರಾತ್ರಿ 10 ಗಂಟೆ ಮನಾಲಿಗೆ ಕರೆತರಲಾಯಿತು ಎಂದು ಅವರು ನುಡಿದರು. ಹಿಮಪಾತದ ಮಧ್ಯೆ ಸಿಕ್ಕಿಹಾಕಿಕೊಂಡವರ ರಕ್ಷಣೆಗಾಗಿ ಸ್ನೋ ಸ್ಕೂಟರ್​ಗಳನ್ನು ನಿಯೋಜಿಸಲಾಯಿತು. ಮನಾಲಿ ಆಸುಪಾಸಿನ ಗುಡ್ಡಗಳು ಹಿಂದಿನ ದಿನದಿಂದ ಭಾರಿ ಹಿಮಪಾತಕ್ಕೆ ಒಳಗಾಗಿ ತತ್ತರಿಸಿದವು. ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಮನಾಲಿಯಿಂದ 20 ಕಿಮೀ ದೂರದಲ್ಲಿ ಇರುವ ಪಾಟ್ಲಿಕುಲ್ ಸಮೀಪ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಹವಾಮಾನ ವರದಿಗಳ ಪ್ರಕಾರ ಮನಾಲಿಯಲ್ಲಿ ಒಂದಡಿಗೂ ಹೆಚ್ಚು ಪ್ರಮಾಣದಲ್ಲಿ ಹಿಮ ಸುರಿದಿತ್ತು.

2008: ಮಹಾತ್ಮ ಗಾಂಧಿ ಅವರ ಕುಟುಂಬದ ಸೊಸೆ ಸರಸ್ವತಿ ಗಾಂಧಿ ಅವರು (85) ಈದಿನ ಮಧ್ಯಾಹ್ನ ಕೇರಳದ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸರಸ್ವತಿ ಗಾಂಧಿ ಅವರು ಎಂ.ಕೆ. ಗಾಂಧಿಯವರ ಮೊಮ್ಮಗ ಕಾಂತಿಲಾಲ್ ಗಾಂಧಿ ಅವರ ಪತ್ನಿ. ಇವರ ಮದುವೆಯನ್ನೂ ಮಹಾತ್ಮ ಗಾಂಧಿಯವರೆ ಮಾಡಿಸಿದ್ದರು. ಕಾಂತಿಲಾಲ್ 1983ರಲ್ಲಿ ವಿಧಿವಶರಾಗಿದ್ದರು. ಆ ನಂತರ ಸರಸ್ವತಿ ಅಮೆರಿಕದಲ್ಲಿ ನೆಲೆಸಿದ ತಮ್ಮ ಮಕ್ಕಳಿಬ್ಬರ ಜೊತೆ ಕೆಲ ಕಾಲ ಇದ್ದರು. ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲಾಗದೆ ಭಾರತಕ್ಕೆ ಮರಳಿದ್ದ ಅವರು ತಿರುವನಂತಪುರದಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು.

2008: ಸಂಯುಕ್ತ ಜನತಾದಳ (ಜೆಡಿಯು) ಅಧ್ಯಕ್ಷ ಶರದ್ ಯಾದವ್ ಅವರನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಹಂಗಾಮಿ ಸಂಚಾಲಕರಾಗಿ ನೇಮಕ ಮಾಡಲಾಯಿತು. ಸದ್ಯಕ್ಕೆ ಜೆಡಿಯು ಸಂಚಾಲಕರಾಗಿರುವ ಜಾರ್ಜ್ ಫರ್ನಾಂಡಿಸ್ ಅವರ ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ಬಿಜೆಪಿ ಹಿರಿಯ ಮುಖಂಡರಾದ ಎಲ್.ಕೆ. ಆಡ್ವಾಣಿ ಈ ನಿರ್ಧಾರ ಕೈಗೊಂಡರು. ಈ ನಿರ್ಧಾರವನ್ನು ಎನ್‌ಡಿಎ ಎಲ್ಲಾ ಘಟಕಗಳೊಂದಿಗೆ ಚರ್ಚೆ ನಡೆಸಿದ ನಂತರ ಕೈಗೊಳ್ಳಲಾಗಿದೆ ಎಂದು ಬಿಜೆಪಿ ಮುಖಂಡ ಮುಖ್ತರ್ ಅಬ್ಬಾಸ್ ನಕ್ವಿ ಹೇಳಿದರು.

2008: ಶ್ರೀರಂಗಪಟ್ಟಣ: ಮಾಜಿ ಶಾಸಕ ಎಂ.ಶ್ರೀನಿವಾಸ್ (66) ಹೃದಯಾಘಾತದಿಂದ ನಿಧನರಾದರು. ದಿಢೀರ್ ಅಸ್ವಸ್ಥಗೊಂಡ ಅವರನ್ನು ಮೈಸೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಕುಟುಂಬ ಮೂಲಗಳು ತಿಳಿಸಿದವು. ಧರ್ಮರತ್ನಾಕರ ಬಿ.ಮರೀಗೌಡ ಹಾಗೂ ಜಾನಕಮ್ಮ ಅವರ ತೃತೀಯ ಪುತ್ರನಾಗಿ 1942ರಲ್ಲಿ ತಾಲ್ಲೂಕಿನ ಚಂದಗಾಲು ಗ್ರಾಮದಲ್ಲಿ ಜನಿಸಿದ, ಶ್ರೀನಿವಾಸ್ 1972ರಲ್ಲಿ ಸಂಸ್ಥಾ ಕಾಂಗ್ರೆಸ್ ಹಾಗೂ 1977ರಲ್ಲಿ ಜನತಾ ಪಕ್ಷದಿಂದ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದರು. 1978ರಲ್ಲಿ ಜನತಾ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿ ಒಂದು ಅವಧಿಗೆ ಶಾಸಕರಾಗಿ ಕೆಲಸ ನಿರ್ವಹಿಸಿದ್ದರು.

2008: ಹಿಂದೂಜಾ ಸಮೂಹದ ಅಂತರರಾಷ್ಟ್ರೀಯ ಬ್ಯಾಂಕಿಂಗ್ ಘಟಕವಾದ ಅಮಸ್ ಬ್ಯಾಂಕ್ (ಸ್ವಿಟ್ಸರ್‌ಲೆಂಡ್) ಲಿ, ಚೆನ್ನೈ ಮೂಲದ ಷೇರು ದಲ್ಲಾಳಿ ಸಂಸ್ಥೆ ಪ್ಯಾಟರ್‌ಸನ್‌ (ಪ್ಯಾಟ್‌ಕೊ ಇನ್ವೆಸ್ಟ್‌ಮೆಂಟ್ಸ್ ಅಂಡ್ ಕನ್ಸಲ್ಟೆನ್ಸಿ ಸರ್ವಿಸ್ ಪ್ರೈ.ಲಿ) ಶೇ 40ರಷ್ಟನ್ನು ಸ್ವಾಧೀನಪಡಿಸಿಕೊಂಡಿರುವುದಾಗಿ ಘೋಷಿಸಿತು.

2007: ದಿವಂಗತ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನದ ಸಂದರ್ಭದಲ್ಲಿ ಈ ನಾಯಕನ ಕುರಿತಾಗಲಿ, ಅವರ ಜೈ ಜವಾನ್, ಜೈ ಕಿಸಾನ್ ಸಂದೇಶವನ್ನಾಗಲಿ ಪ್ರಚಾರ ಮಾಡಲು ಸರ್ಕಾರ ಕವಡೆ ಕಾಸನ್ನು ಖರ್ಚು ಮಾಡಿಲ್ಲ ಎಂಬ ಸತ್ಯ ಹೊರಬಿದ್ದಿತು. ಸಾಮಾಜಿಕ ಕಾರ್ಯಕರ್ತ ದೇವ್ ಆಶೀಶ್ ಭಟ್ಟಾಚಾರ್ಯ ಅವರು ಮಾಹಿತಿ ಹಕ್ಕು ಕಾಯ್ದೆಯನ್ವಯ ಸಲ್ಲಿಸಿರುವ ಅರ್ಜಿಗೆ ಉತ್ತರಿಸಿದ ಕೇಂದ್ರ ಸರ್ಕಾರದ ಜಾಹೀರಾತು ಹಾಗೂ ದೃಶ್ಯ ಪ್ರಸಾರ ನಿರ್ದೇಶನಾಲಯದ (ಡಿಎವಿಪಿ) ಅಧಿಕಾರಿಗಳು ಈ ಮಾಹಿತಿ ನೀಡಿದರು. ತಮ್ಮ ಜೀವನದುದ್ದಕ್ಕೂ ಎಲೆ ಮರೆಯ ಕಾಯಿಯಂತೆ ಕೆಲಸ ಮಾಡುತ್ತಿದ್ದ ಶಾಸ್ತ್ರೀಜಿ ಅವರ ಹುಟ್ಟುಹಬ್ಬ ಸರ್ಕಾರದಲ್ಲಿರುವ ಯಾರೊಬ್ಬರಲ್ಲೂ ಉತ್ಸಾಹ ಮೂಡಿಸಿಲ್ಲ ಎಂಬುದು ಈ ಉತ್ತರದಿಂದ ಬೆಳಕಿಗೆ ಬಂತು. ಸರ್ಕಾರದ ಪರವಾಗಿ ಅಧಿಕೃತ ಜಾಹೀರಾತು ನೀಡುವ `ಡಿಎವಿಪಿ' ಅಕ್ಟೋಬರ್ 2ರಂದು ಗಾಂಧಿ ಜಯಂತಿ ಅಂಗವಾಗಿ 2.95 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಆದರೆ, ಅದೇ ದಿನ ಹುಟ್ಟಿದ ಶಾಸ್ತ್ರಿ ಅವರನ್ನು ಸಂಪೂರ್ಣ ಮರೆತುಬಿಟ್ಟಿದೆ ಎಂದು ಭಟ್ಟಾಚಾರ್ಯ ಹೇಳಿದರು. ಶಾಸ್ತ್ರಿ ಹುಟ್ಟುಹಬ್ಬಕ್ಕೆ ಸಂಬಂಧಿಸಿದ ಮತ್ತೊಂದು ಅರ್ಜಿಗೆ, ಕೇಂದ್ರ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಉತ್ತರಿಸಿದ್ದು, ವಿಜಯ್ ಘಾಟ್ ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹಾಗೂ ಇತರ ಸಚಿವರು ಪಾಲ್ಗೊಂಡ್ದಿದರು ಎಂಬ ಮಾಹಿತಿ ನೀಡಲಾಗಿತ್ತು. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಸರ್ಕಾರದ ದಾಖಲೆಗಳ ಪ್ರಕಾರ ಶಾಸ್ತ್ರಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೇ ಎಂದು ಪ್ರಶ್ನಿಸಿದ್ದರು. ಈ ಅರ್ಜಿಗೆ ಗೃಹ ಸಚಿವಾಲಯದ ನಿರ್ದೇಶಕಿ ರೀತಾ ಆಚಾರ್ಯ ಉತ್ತರಿಸಿ, 'ನಮ್ಮ ದಾಖಲೆಗಳ ಪ್ರಕಾರ 1964ರ ಜೂನ್ 9ರಿಂದ 1966ರ ಜನವರಿ 11ರವರೆಗೆ ಶಾಸ್ತ್ರಿ ಭಾರತದ ಪ್ರಧಾನಿಯಾಗಿದ್ದರು' ಎಂದು ಹೇಳಿದ್ದಾರೆ. ಆದರೆ, ಸ್ವಾತಂತ್ರ್ಯ ಹೋರಾಟದ ವಿಚಾರದ ಕುರಿತು ಇಲಾಖೆ ಮೌನ ವಹಿಸಿದೆ ಎಂದು ಭಟ್ಟಾಚಾರ್ಯ ಹೇಳಿದರು.

2007: ಒರಿಸ್ಸಾದ ಬಾಲಸೋರ್ ಸಮೀಪದ ಚಂಡಿಪುರದ ಪರೀಕ್ಷಾ ಕೇಂದ್ರದಲ್ಲಿ ದೇಶೀಯವಾಗಿ ನಿರ್ಮಿಸಲಾದ ಅಣ್ವಸ್ತ್ರ ಹೊತ್ತೊಯ್ಯಬಲ್ಲ `ಆಕಾಶ್' ಕ್ಷಿಪಣಿಯನ್ನು ಈದಿನ ಪ್ರಾಯೋಗಿಕ ಪರೀಕ್ಷೆಗೆ ಒಡ್ಡಲಾಯಿತು. ವಾಯು ಸೇನೆಯ ರಕ್ಷಣಾ ತಂತ್ರಗಳ ತಾಲೀಮಿನ ಭಾಗವಾಗಿ 25 ಕಿ.ಮೀ. ದೂರದ ಗುರಿ ತಲುಪುವ, 50 ಕೆಜಿ ಸಿಡಿ ತಲೆ ಹೊತ್ತೊಯ್ಯಬಲ್ಲ, ಭೂಮಿಯಿಂದ ಆಗಸಕ್ಕೆ ನೆಗೆಯುವ ಈ ಕ್ಷಿಪಣಿಯನ್ನು ಉಡಾಯಿಸಲಾಯಿತು. ಯುದ್ಧ ವಿಮಾನವೊಂದರಿಂದ ಇಳಿಬಿಟ್ಟಿದ್ದ `ಬ್ಯಾರೆಲ್' ಗುರಿಯಾಗಿಸಿ `ಆಕಾಶ್' ಕ್ಷಿಪಣಿಯನ್ನು ಉಡಾಯಿಸಲಾಗಿತ್ತು. ಈ ಕ್ಷಿಪಣಿ 5.6 ಮೀ ಉದ್ದವಿದ್ದು 700 ಕೆ.ಜಿ. ತೂಗುತ್ತದೆ.

2007: ಪಂಜಾಬಿನ ನು ಚುರ್ ಚಕ್ ಗ್ರಾಮದ ಮಾನವ ಚಾಲಿತ ರೈಲ್ವೆ `ಕ್ರಾಸಿಂಗ್' ಬಳಿ ಫಿರೋಜ್ ಪುರ - ಲೂಧಿಯಾನ ಮಧ್ಯೆ ಚಲಿಸುತ್ತಿದ್ದ ಸಟ್ಲೇಜ್ ಎಕ್ಸ್ ಪ್ರೆಸ್ ರೈಲುಗಾಡಿಗೆ ಬಹುತೇಕ ಶಾಲಾ ಮಕ್ಕಳು ಮತ್ತು ಉಪಾಧ್ಯಾಯರಿದ್ದ ಖಾಸಗಿ ಮಿನಿ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ 17 ಮಂದಿ ಸತ್ತು 14 ಮಂದಿ ತೀವ್ರವಾಗಿ ಗಾಯಗೊಂಡರು. ಮೋಗಾ ಜಿಲ್ಲೆಯ ಜಗ್ರೌನಿಂದ ಬಸ್ಸು ಲೋಪೊ ಗ್ರಾಮದತ್ತ ಹೊರಟಿದ್ದಾಗ ಈ ದುರಂತ ಸಂಭವಿಸಿತು.

2007: ಬೆಂಗಳೂರಿನಲ್ಲಿ ಈದಿನ ಸಂಜೆ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರು ಭಾರತ ತಂಡದ ನಾಯಕ ಅನಿಲ್ ಕುಂಬ್ಳೆ ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಘಟಕ ಮತ್ತು ಅನಿಲ್ ಕುಂಬ್ಳೆ ಅಭಿಮಾನಿಗಳ ಬಳಗದ ಅಧ್ಯಕ್ಷ ಹೆಚ್. ರವೀಂದ್ರ ಅವರು ಕುಂಬ್ಳೆಗೆ `ಕರ್ನಾಟಕ ಕ್ರಿಕೆಟ್ ರತ್ನ' ಎಂಬ ಬಿರುದು ನೀಡಿ ಗೌರವಿಸಿದರು.

2006: ಬಾಲ್ಯ ವಿವಾಹ ಮಾಡುವವರಿಗೆ ಸೆರೆಮನೆವಾಸದ ಶಿಕ್ಷೆ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ಅವಕಾಶ ನೀಡುವ ಮಸೂದೆಯನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ರೇಣುಕಾ ಚೌಧರಿ ರಾಜ್ಯಸಭೆಯಲ್ಲಿ ಮಂಡಿಸಿದರು.

2006: ಕೇಂದ್ರ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27 ಮೀಸಲಾತಿ ಸೌಲಭ್ಯ ಕಲ್ಪಿಸುವ ಮಹತ್ವದ ಕೇಂದ್ರೀಯ ಶಿಕ್ಷಣಸಂಸ್ಥೆಗಳ ಮಸೂದೆ-2006ಕ್ಕೆ ಲೋಕಸಭೆ ಗುರುವಾರ ಅನುಮೋದನೆ ನೀಡಿತು.

2006: ಶ್ರೀಲಂಕಾ ತಮಿಳು ಉಗ್ರಗಾಮಿಗಳ (ಎಲ್ಟಿಟಿಇ) ಪರ ಮುಖ್ಯ ಸಂಧಾನಕಾರ ಅಂಟೋನ್ ಬಾಲಸಿಂಘಂ ಲಂಡನ್ನಿನಲ್ಲಿ ನಿಧನರಾದರು.

2005: ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಸಿರಿಯಾಕ್ ಜೋಸೆಫ್ ಅವರನ್ನು ನೇಮಿಸಿ ರಾಷ್ಟ್ರಪತಿಗಳು ಆದೇಶ ಹೊರಡಿಸಿದರು.

2005: ಐಟಿ ಮತ್ತು ಸಂಶೋಧನಾ ಕ್ಷೇತ್ರದ ಅಂತಾರಾಷ್ಟ್ರೀಯ ಮೈಂಡ್ ಟ್ರೀ ಕನ್ಸಲ್ಟಿಂಗ್ ಸೇವಾ ಸಂಸ್ಥೆಯು ಬೆಂಗಳೂರಿನಲ್ಲಿ ಅತ್ಯಂತ ಕಿರಿದಾದ ಅನಲಾಗ್ ಚಿಪ್ ಬಿಡುಗಡೆ ಮಾಡಿತು. ಲಿಥಿಯಮ್ ಅಯಾನ್ ಬ್ಯಾಟರಿ ತಂತ್ರಜ್ಞಾನದಲ್ಲಿ ತಯಾರಿಸಲಾದ ಈ ಇಂಟೆಗ್ರೇಟೆಡ್ ಸರ್ಕಿಟ್ (ಐಸಿ) ಗಾತ್ರ 1.5 ಮಿ.ಗ್ರಾಂ. ಭಾರತೀಯ ವಧುವಿನ ಪೋಷಾಕಿನಲ್ಲಿ ರೂಪದರ್ಶಿ ಅರ್ಚನಾ ತಿಲಕವನ್ನಾಗಿ ಧರಿಸಿ ಈ ಚಿಪ್ ಪ್ರದರ್ಶಿಸಿದರು.

2001: ಕ್ರಿಕೆಟಿನ ಖ್ಯಾತ ಅವಳಿ ಜವಳಿ ಆಟಗಾರರಾದ ಸ್ಟೀವನ್ ಮತ್ತು ಮಾರ್ಕ್ ವಾ ಅವರು ತಮ್ಮ 100ನೇ ಟೆಸ್ಟ್ ಕ್ರಿಕೆಟ್ ಪಂದ್ಯವನ್ನು ಒಟ್ಟಿಗೇ ಆಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಅಡಲೈಡಿನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವಿದು.

2000: ರಾಜಕೋಟ್ ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಐದನೆಯ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತದ ಅಜಿತ್ ಅಗರ್ ಕರ್ 50 ರನ್ನುಗಳನ್ನು ಅತಿವೇಗವಾಗಿ ದಾಖಲಿಸಿದರು. 21 ಬಾಲುಗಳಿಗೆ ಅವರು ಈ ಸಾಧನೆ ಮಾಡಿದರು. ಈ ಹಿಂದೆ ಕಪಿಲ್ ದೇವ್ ಅವರು 22 ಬಾಲುಗಳಿಗೆ ಈ ದಾಖಲೆ ನಿರ್ಮಿಸಿದ್ದರು.

1989: ಸೋವಿಯತ್ತಿನ ಪರಮಾಣು ಭೌತವಿಜ್ಞಾನಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಸಾಹಿತಿ ಅಂದ್ರೇಯಿ ಡಿ. ಸಖರೊವ್ ಅವರು ಮಾಸ್ಕೊದಲ್ಲಿ ತಮ್ಮ 68ನೇ ವಯಸ್ಸಿನಲ್ಲಿ ನಿಧನರಾದರು. ಮಾನವ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ಅವರನ್ನು ಗೊರ್ಬಚೆವ್ ಆಡಳಿತ ಕಾಲದಲ್ಲಿ ವಿದೇಶದಿಂದ ಕರೆಸಿಕೊಳ್ಳಲಾಗಿತ್ತು.

1983: ನವದೆಹಲಿಯ ಗುಡಗಾಂವಿನ ಫ್ಯಾಕ್ಟರಿಯಿಂದ ಮಾರುತಿ ಕಾರುಗಳ ಮೊದಲ ಕಂತು ಬಿಡುಗಡೆಗೊಂಡಿತು.

1955: ಸಾಹಿತಿ ಸುವರ್ಣಾ ಚಂದ್ರಶೇಖರ್ ಜನನ.

1946: ಕಾಂಗ್ರೆಸ್ಸಿನ ಹಿರಿಯ ನಾಯಕ ಸಂಜಯ ಗಾಂಧಿ ಈ ದಿನ ನವದೆಹಲಿಯಲ್ಲಿ ಹುಟ್ಟಿದರು. ಫಿರೋಜ್ ಗಾಂಧಿ ಹಾಗೂ ಇಂದಿರಾ ಗಾಂಧಿ ಅವರ ಕಿರಿಯ ಮಗನಾದ ಸಂಜಯ ಗಾಂಧಿ ರಾಜಕೀಯ ಜೀವನದಲ್ಲಿ ತಾಯಿಗೆ ಸಲಹೆಗಾರರಾಗಿ ಅನೇಕ ವಿವಾದಗಳನ್ನು ಸೃಷ್ಟಿಸಿದ್ದರು. ಇಂದಿರಾ ಪ್ರಧಾನಿಯಾದ ಕೆಲವೇ ಸಮಯದಲ್ಲಿ ಸಂಜಯಗಾಂಧಿ ವಿಮಾನ ಅಪಘಾತದಲ್ಲಿ ನಿಧನರಾದರು. ಇದಕ್ಕೆ ಸ್ವಲ್ಪ ಕಾಲ ಮೊದಲು ಅವರು ಸಂಸತ್ ಸದಸ್ಯರಾಗಿಯೂ ಆಯ್ಕೆಯಾಗಿದ್ದರು.

1934: ಚಿತ್ರ ನಟ ನಿರ್ದೇಶಕ ಶ್ಯಾಮ್ ಬೆನೆಗಲ್ ಜನ್ಮದಿನ.

1931: ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಕ, ಸಾಹಿತಿ ಡಾ. ಸಿ.ಎಂ. ಮುನಿರಾಮಪ್ಪ ಅವರು ಚಿಕ್ಕಮೈಲಪ್ಪ- ಪಾಪಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆಯ ಬೇತಮಂಗಲ ತಾಲ್ಲೂಕಿನ ಅಂಕತಟ್ಟಿ ಹಳ್ಳಿಯಲ್ಲಿ ಜನಿಸಿದರು.

1924: ಭಾರತದ ಖ್ಯಾತ ಚಿತ್ರನಟ ರಾಜ್ ಕಪೂರ್ (1924-1988) ಹುಟ್ಟಿದ ದಿನ.

1900: ಮ್ಯಾಕ್ಸ್ ಪ್ಲಾಂಕ್ ತನ್ನ `ಕ್ವಾಂಟಮ್ ಥಿಯರಿ'ಯನ್ನು ಜರ್ಮನ್ ಫಿಸಿಕ್ಸ್ ಸೊಸೈಟಿಯಲ್ಲಿ ಪ್ರಕಟಿಸಿದರು.

1503: ನಾಸ್ಟ್ರಡಾಮಸ್ ಎಂದೇ ಖ್ಯಾತಿ ಪಡೆದ ಫ್ರೆಂಚ್ ಕಾಲಜ್ಞಾನಿ ಮೈಕೆಲ್ ಡೆ ನಾಟ್ರೆಡೇಮ್ (1503-1566) ಜನಿಸಿದ.

No comments:

Advertisement