ಗ್ರಾಹಕರ ಸುಖ-ದುಃಖ

My Blog List

Saturday, January 16, 2010

ಇಂದಿನ ಇತಿಹಾಸ History Today ಡಿಸೆಂಬರ್ 15

ಇಂದಿನ ಇತಿಹಾಸ

ಡಿಸೆಂಬರ್ 15


ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿ ಪ್ರತಿ ದಿನ 46 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು. ರೈತರ ಆತ್ಮಹತ್ಯೆ ಪ್ರಮಾಣ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅಧಿಕ!. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗವು (ಎನ್‌ಸಿಆರ್‌ಬಿ) ಹೊರತಂದಿರುವ ಅಪಘಾತ ಮತ್ತು ಆತ್ಮಹತ್ಯೆ ಮೇಲಿನ ವರದಿಯಲ್ಲಿ ಇದನ್ನು ತಿಳಿಸಲಾಯಿತು. ಕಳೆದ ವರ್ಷ ದೇಶದ ಎಲ್ಲೆಡೆ 2,369 ಮಹಿಳೆಯರ ಸಹಿತ ಒಟ್ಟು 16,632 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.

2008: ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿ ಪ್ರತಿ ದಿನ 46 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು. ರೈತರ ಆತ್ಮಹತ್ಯೆ ಪ್ರಮಾಣ ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅಧಿಕ!. ರಾಷ್ಟ್ರೀಯ ಅಪರಾಧ ದಾಖಲೆ ವಿಭಾಗವು (ಎನ್‌ಸಿಆರ್‌ಬಿ) ಹೊರತಂದಿರುವ ಅಪಘಾತ ಮತ್ತು ಆತ್ಮಹತ್ಯೆ ಮೇಲಿನ ವರದಿಯಲ್ಲಿ ಇದನ್ನು ತಿಳಿಸಲಾಯಿತು. ಕಳೆದ ವರ್ಷ ದೇಶದ ಎಲ್ಲೆಡೆ 2,369 ಮಹಿಳೆಯರ ಸಹಿತ ಒಟ್ಟು 16,632 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2007ರಲ್ಲಿ ದೇಶದಲ್ಲಿ ಒಟ್ಟು 1,22,637 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪೈಕಿ ರೈತರ ಪ್ರಮಾಣ ಶೇ 14.4ರಷ್ಟಿದೆ. 2006ರಲ್ಲಿ 17,060 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 1997ರಿಂದೀಚೆಗೆ ದೇಶದಲ್ಲಿ ಒಟ್ಟು 1,82,936 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ 2007ರಲ್ಲಿ 4,238 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. 2006ಕ್ಕೆ ಹೋಲಿಸಿದರೆ ಇದು 215ರಷ್ಟು ಕಡಿಮೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ (2,135), ಆಂಧ್ರಪ್ರದೇಶ (1,797), ಛತ್ತೀಸ್‌ಗಡ (1,593), ಮಧ್ಯಪ್ರದೇಶ (1,263), ಕೇರಳ (1,263), ಪಶ್ಚಿಮ ಬಂಗಾಳ (1,102) ನಂತರದ ಸ್ಥಾನಗಳಲ್ಲಿದ್ದವು. 2006ರಲ್ಲೂ ಇದೇ ಏಳು ರಾಜ್ಯಗಳೇ ರೈತರ ಆತ್ಮಹತ್ಯೆಯಲ್ಲಿ ಮುಂಚೂಣಿಯಲ್ಲಿದ್ದವು. 2006ಕ್ಕೆ ಹೋಲಿಸಿದರೆ 2007ರಲ್ಲಿ ಮಹಾರಾಷ್ಟ್ರ, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಸ್ವಲ್ಪ ಇಳಿದ್ದಿದರೆ, ಕರ್ನಾಟಕ, ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಹೆಚ್ಚಳವಾಗಿದ್ದುದು ಬೆಳಕಿಗೆ ಬಂತು.

2008: ಇರಾಕಿಗೆ ಭೇಟಿ ನೀಡಿದ್ದ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮೇಲೆ ಇರಾಕಿ ಪತ್ರಕರ್ತನೊಬ್ಬ ಬೂಟು ಎಸೆದ ಘಟನೆ ಬಾಗ್ದಾದಿನಲ್ಲಿ ನಡೆಯಿತು. ಇರಾಕ್ ಪ್ರಧಾನಿ ನೂರಿ-ಅಲ್-ಮಲಿಕಿ ಜೊತೆ ಬುಷ್ ಜಂಟಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದಾಗ ಈ ಘಟನೆ ನಡೆಯಿತು. ಬುಷ್ ಹಾಗೂ ಮಲಿಕಿ ಪರಸ್ಪರ ಕೈಕುಲುಕಲು ಅಣಿಯಾಗುತ್ತಿದ್ದಾಗ 20 ಅಡಿ ದೂರದಲ್ಲಿ ಕುಳಿತಿದ್ದ ಕೈರೋದಿಂದ ಪ್ರಸಾರ ಮಾಡುವ ಅಲ್-ಬಾಗ್ದಾದಿಯಾ ಟಿವಿ ಚಾನೆಲ್‌ನ ವರದಿಗಾರ ಮುಂತಾಜೀರ್ ಅಲ್-ಜೈದಿ ಕುರ್ಚಿಯಿಂದ ಎದ್ದು 'ಏ ನಾಯಿ, ಇದು ನಿನಗೆ ಬೀಳ್ಕೊಡುಗೆಯ ಮುತ್ತು. ಇದು ವಿಧವೆಯರು, ಅನಾಥರು ಹಾಗೂ ಸತ್ತವರ ಕೊಡುಗೆ' ಎಂದು ಅರೆಬಿಕ್‌ನಲ್ಲಿ ಅರಚುತ್ತ ಬುಷ್‌ಅವರತ್ತ ಒಂದಾದ ಮೇಲೆ ಒಂದು ಬೂಟುಗಳನ್ನು ಎಸೆದ. ಬೂಟುಗಳು ಗುರಿತಪ್ಪಿ ಹಿಂದಿನ ಗೋಡೆಗೆ ತಾಗಿದವು. ಕೂಡಲೇ ಸಭಾಂಗಣದಲ್ಲಿ ಗೊಂದಲ, ಗೌಜು ಆರಂಭವಾಯಿತು. ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಬುಷ್ ಹೇಳಿದರು. ಇರಾಕ್ ಪತ್ರಕರ್ತರು ಒಮ್ಮಿಂದೊಮ್ಮೆಲೆ ಕಿರುಚತೊಡಗಿದರು. ಆ ಪತ್ರಕರ್ತರೆಲ್ಲ ಘಟನೆಗಾಗಿ ಕ್ಷಮೆ ಯಾಚಿಸುತ್ತಿದ್ದರು ಎಂದು ಬುಷ್ ಆನಂತರ ಹೇಳಿದರು. ಆ ವ್ಯಕ್ತಿ ನನ್ನೆಡೆಗೆ ಬೂಟು ಎಸೆದರೆ ಏನಾಯಿತು. ಅಮೆರಿಕದ ರಾಜಕೀಯ ಪ್ರತಿಭಟನೆಗೆ ಇದು ಸಮನಾಗಿದೆ ಎಂದು ಬುಷ್ ಪತ್ರಕರ್ತರಿಗೆ ಹೇಳಿದರು. ನಿಮಗೆ ವಿವರ ಬೇಕಿದ್ದಲ್ಲಿ ಹೇಳುತ್ತೇನೆ. ಇದು 10ನೇ ನಂಬರ್ ಬೂಟು ಎಂದು ಬುಷ್ ತಮಾಷೆ ಮಾಡಿದರು. ಕೂಡಲೇ ಭದ್ರತಾ ಸಿಬ್ಬಂದಿ ಜೈದಿಯನ್ನು ನೆಲದ ಮೇಲೆ ಕೆಡವಿ ಥಳಿಸಿದರಲ್ಲದೇ ಎಳೆದುಕೊಂಡು ಹೋದರು. ಭದ್ರತಾ ಸಿಬ್ಬಂದಿ ಎಳೆದೊಯ್ಯುವಾಗ ಆತ ನೋವಿನಿಂದ ಅರಚುತ್ತಿದ್ದ. ಕಾರ್ಪೆಟ್ ಮೇಲೆ ರಕ್ತದ ಕಲೆಯೂ ಆಗಿತ್ತು. ಇರಾಕ್ ಸಂಸ್ಕೃತಿಯಲ್ಲಿ ಬೂಟು ಎಸೆಯುವುದು ವ್ಯಕ್ತಿಯೊಬ್ಬನಿಗೆ ಘೋರ ಅವಮಾನ ಮಾಡಿದಂತೆ. 2003ರಲ್ಲಿ ಅಮೆರಿಕದ ಸೈನಿಕರು ಸದ್ದಾಂ ಹುಸೇನ್ ಪ್ರತಿಮೆ ಹೊಡೆದು ಉರುಳಿಸಿದಾಗ ನೆರೆದಿದ್ದ ಜನ ಪ್ರತಿಮೆಗೆ ಬೂಟು ಎಸೆದಿದ್ದರು.

2008: ಜುಲೈ 22ರಂದು ನಡೆದ ಯುಪಿಎ ಸರ್ಕಾರದ ವಿಶ್ವಾಸಮತ ಗೊತ್ತುವಳಿ ಮೇಲಿನ ಮತದಾನದ ಸಂದರ್ಭದಲ್ಲಿ ಸಂಸದರಿಗೆ ಹಣದ ಆಮಿಷ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಸಂಸದೀಯ ಸಮಿತಿಯು ಸಮಾಜವಾದಿ ಪಕ್ಷದ ಅಮರ್ ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ಅಹ್ಮದ್ ಪಟೇಲ್ ಅವರನ್ನು ನಿರ್ದೋಷಿಗಳೆಂದು ಘೋಷಿಸಿತು. ಈ ಇಬ್ಬರೂ ರಾಜ್ಯಸಭಾ ಸದಸ್ಯರ ವಿರುದ್ಧ ಮಾಡಿದ ಆರೋಪಗಳಿಗೆ ಸೂಕ್ತ ಪುರಾವೆಗಳಿಲ್ಲ. ಹೀಗಾಗಿ ಇವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗದು ಎಂದು ಸಮಿತಿಯು ತನ್ನ 466 ಪುಟಗಳ ವರದಿಯಲ್ಲಿ ತಿಳಿಸಿತು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದೀಯ ಸಮಿತಿ ಅಮರ್ ಸಿಂಗ್ ಮತ್ತು ಅಹ್ಮದ್ ಪಟೇಲ್ ಅವರು ದೋಷಮುಕ್ತರು ಎಂದು ಹೇಳಿದ್ದರಿಂದ ಸತ್ಯ ಹೊರಬರದಂತೆ ಆಗಿದೆ ಎಂದು ಬಿಜೆಪಿ ಸಂಸದ ಹಾಗೂ ಈ ಎಲ್ಲ ಪ್ರಕರಣಗಳ ರೂವಾರಿ ಅಶೋಕ್ ಅರ್ಗಾಲ್ ಹೇಳಿದರು. 'ಸಂಸದೀಯ ಸಮಿತಿಯ ತನಿಖೆಯಿಂದ ನನಗೆ ನ್ಯಾಯ ಸಿಕ್ಕಿಲ್ಲ. ಸಮಿತಿಯು ಮುಖ್ಯ ಆರೋಪಿ ಅಮರ್ ಸಿಂಗ್ ಅವರನ್ನು ಪ್ರಶ್ನಿಸಿಯೇ ಇಲ್ಲ. ಅವರ ವಿರುದ್ಧವೇ ಕ್ರಮ ಕೈಗೊಳ್ಳಬೇಕಾಗಿತ್ತು, ಆದರೆ ಅದು ನಡೆದೇ ಇಲ್ಲ' ಎಂದು ಅವರು ತಿಳಿಸಿದರು. ಯುಪಿಎ ನಾಯಕರು ಬಿಜೆಪಿ ಸಂಸದರ ಮಂಪರು ಪರೀಕ್ಷೆಗೆ ಒತ್ತಾಯಿಸಿದ್ದರು. ಅದಕ್ಕೆ ನಾನು ತಯಾರಾಗಿದ್ದೆ. ಸಂಜೀವ್ ಸಕ್ಸೇನಾಗೇ ಮಂಪರು ಪರೀಕ್ಷೆ ನಡೆಸಬೇಕಿತ್ತು. ಆಗ ಆತ ಹಣ ಎಲ್ಲಿಂದ ಬಂತು ಎಂಬುದನ್ನು ತಿಳಿಸುತ್ತಿದ್ದ ಎಂದು ಅವರು ಹೇಳಿದರು.

2008: ಮಕ್ಕಳ ಆಪ್ತಮಿತ್ರನಂತಿರುವ ಪೊಗೊ ಚಾನೆಲ್ ಮುಂಬೈಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬೆಂಗಳೂರಿನ ಹನ್ನೊಂದು ವರ್ಷದ ಬಾಲಕ ಆಕಾಶ್ ಪ್ರತಿಷ್ಠಿತ 'ಪೊಗೊ ಅಮೇಜಿಂಗ್ ಕಿಡ್ಸ್ ಅವಾರ್ಡ್ 2008' ಪ್ರಶಸ್ತಿಯನ್ನು ಗೆದ್ದುಕೊಂಡರು. ಐದು ವರ್ಷಗಳಿಂದ ಪೊಗೊ ಆಯೋಜಿಸುತ್ತಾ ಬಂದ 'ಅಮೇಜಿಂಗ್ ಕಿಡ್ಸ್ ಅವಾರ್ಡ್'ನಲ್ಲಿ ಇದೇ ಮೊದಲ ಬಾರಿಗೆ ಕರ್ನಾಟಕದ ಆಕಾಶ್ ತನ್ನ ಮಾಂತ್ರಿಕ ಕೊಳಲು ವಾದನದಿಂದ ಈ ಪ್ರತಿಷ್ಠಿತ ಪ್ರಶಸ್ತಿಯನ್ನು (ಸಂಗೀತಗಾರ ವಿಭಾಗದಲ್ಲಿ) ಗೆದ್ದು ಅತ್ಯುತ್ತಮ ಸಾಧನೆ ಮಾಡಿದರು.

2008: ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ರಾಜ್ಯಪಾಲರ ತಿಂಗಳ ಸಂಬಳವನ್ನು ಮೂರು ಪಟ್ಟು ಹೆಚ್ಚಿಸುವ ಪ್ರಸ್ತಾವಕ್ಕೆ ಸಂಸತ್ ತನ್ನ ಅನುಮತಿ ನೀಡಿತು. ಲೋಕಸಭೆಯಲ್ಲಿ ಈ ಮೊದಲೇ ಅಂಗೀಕಾರಗೊಂಡಿದ್ದ ಈ ಪ್ರಸ್ತಾವಕ್ಕೆ ಈದಿನ ರಾಜ್ಯಸಭೆಯೂ ಸಮ್ಮತಿ ಸೂಚಿಸಿತು. ರಾಷ್ಟ್ರಪತಿ ಸಂಬಳ ಈಗಿನ 50 ಸಾವಿರದಿಂದ ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳಿಗೆ ಹೆಚ್ಚಿದರೆ, ಉಪರಾಷ್ಟ್ರಪತಿ ಸಂಬಳ 40 ಸಾವಿರದಿಂದ 1.25 ಲಕ್ಷಕ್ಕೆ ಹಾಗೂ ರಾಜ್ಯಪಾಲರ ಸಂಬಳ 36 ಸಾವಿರದಿಂದ ರೂ 1.10 ಲಕ್ಷಕ್ಕೆ ಹೆಚ್ಚುವುದು. ಜೊತೆಗೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅವರ ಪಿಂಚಣೆ ಪ್ರಮಾಣವು ವೇತನದ ಶೇ 50ರಷ್ಟಾಗುವುದು.. ಈ ಎಲ್ಲ ಹೆಚ್ಚಳ 2006ರ ಜನವರಿಯಿಂದಲೇ ಪೂರ್ವಾನ್ವಯವಾಗುವುದು.

2008: ಇತರೆ ಹಿಂದುಳಿದ ವರ್ಗದ (ಒಬಿಸಿ) ಜನರ ಪೈಕಿ ವರ್ಷಕ್ಕೆ 4.5 ಲಕ್ಷ ರೂಪಾಯಿ ಆದಾಯ ಗಳಿಸುವವರನ್ನು ಮಾತ್ರ ಕೆನೆಪದರ ವಿಭಾಗದಲ್ಲಿ ಸೇರಿಸಬಹುದು ಎಂದು ಕಳೆದ ಅಕ್ಟೋಬರಿನಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿತು. ಹಿರಿಯ ಶಿಕ್ಷಣ ತಜ್ಞ ಪಿ. ವಿ. ಇಂದಿರೇಶನ್ ಮತ್ತು ಇತರರು ಸಲ್ಲಿಸಿದ ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಮತ್ತು ಪಿ. ಸದಾಶಿವಂ ಅವರ ಪೀಠ ಸರ್ಕಾರದ ನಿರ್ಧಾರಕ್ಕೆ ಏನು ಕಾರಣ ಎಂದು ನಾಲ್ಕು ವಾರಗಳ ಒಳಗೆ ಉತ್ತರ ನೀಡುವಂತೆ ತಿಳಿಸಿ ನೋಟಿಸ್ ಜಾರಿಗೊಳಿಸಿತು. ಸರ್ಕಾರವು ಕಳೆದ ಅಕ್ಟೋಬರ್ 13ರಂದು ಹೊರಡಿಸಿದ ತನ್ನ ಆದೇಶದಲ್ಲಿ ಒಬಿಸಿ ಕೆನೆಪದರದ ಆದಾಯ ಮಿತಿಯನ್ನು ವಾರ್ಷಿಕ 2.5 ಲಕ್ಷ ರೂಪಾಯಿಯಿಂದ 4.5 ಲಕ್ಷಕ್ಕೆ ಹೆಚ್ಚಿಸಿತ್ತು. ಸುಪ್ರೀಂ ಕೋರ್ಟ್‌ ಸಂವಿಧಾನ ಪೀಠವೊಂದು ಕಳೆದ ಏಪ್ರಿಲ್ 10ರಂದು ತೀರ್ಪು ನೀಡಿ ಸರ್ಕಾರಿ ಅನುದಾನದಿಂದ ನಡೆಯುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಬಿಸಿಯವರಿಗೆ ಶೇ 27ರಷ್ಟು ಮೀಸಲಾತಿ ನೀಡುವುದನ್ನು ಎತ್ತಿ ಹಿಡಿದಿತ್ತು ಮತ್ತು 'ಕೆನೆಪದರ'ಕ್ಕೆ ಒಳಪಟ್ಟ ವಿದ್ಯಾರ್ಥಿಗಳನ್ನು ಈ ಮೀಸಲಾತಿಯಿಂದ ಹೊರಗೆ ಇಡಬೇಕು ಎಂದೂ ಹೇಳಿತ್ತು.

2008: ಡಾ. ಪು.ತಿ.ನ. ಟ್ರಸ್ಟ್ ವತಿಯಿಂದ ನೀಡಲಾಗುವ 2007ನೇ ಸಾಲಿನ ಪು.ತಿ.ನ. ಕಾವ್ಯ ಪುರಸ್ಕಾರಕ್ಕೆ ಜಿ.ಎನ್. ಮೋಹನ್ ಅವರ 'ಪ್ರಶ್ನೆಗಳಿ ರುವುದು ಷೇಕ್ಸ್‌ಪಿಯರನಿಗೆ' ಮತ್ತು ಅವರ 'ಒಡೆಯಲಾರದ ಪ್ರತಿಮೆ' ಕೃತಿಗಳನ್ನು ಆಯ್ಕೆ ಮಾಡಲಾಯಿತು.

2008: ದೇಶದ ಪ್ರಥಮ ಹವಾನಿಯಂತ್ರಿತ ಬಸ್ ತಂಗುದಾಣವನ್ನು (ಬಸ್ ಶೆಲ್ಟರ್) ಬಿಬಿಎಂಪಿ ಜಂಟಿ ಆಯುಕ್ತ (ಜಾಹೀರಾತು) ಗೋವಿಂದರಾಜು ಬೆಂಗಳೂರಿನಲ್ಲಿ ಉದ್ಘಾಟಿಸಿದರು. ರಿಲಯನ್ಸ್ ಸಮೂಹದ ಬಿಗ್‌ ಸ್ಟ್ರೀಟ್, ಟೆಲಿಕಾಂ ರಂಗದ ಪ್ರಮುಖ ಕಂಪೆನಿ ಭಾರತಿ ಏರ್‌ಟೆಲ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಕಸ್ತೂರಬಾ ರಸ್ತೆಯಲ್ಲಿ (ಕಬ್ಬನ್ ಉದ್ಯಾನ ಪ್ರವೇಶ ದ್ವಾರದ ಬಳಿ) ಮೊದಲ ಹವಾನಿಯಂತ್ರಿತ ಬಸ್ ಶೆಲ್ಟರ್ ನಿರ್ಮಾಣವಾಗಿದೆ. ಒಮ್ಮೆಗೆ 20 ಜನರು ಕುಳಿತುಕೊಳ್ಳಬಹುದಾದ ಈ ತಂಗುದಾಣಕ್ಕೆ ಸಮವಸ್ತ್ರಧಾರಿ ಭದ್ರತಾ ಸಿಬ್ಬಂದಿಯಿಬ್ಬರು ನಿರಂತರ ರಕ್ಷಣೆ ಒದಗಿಸುವರು. ಈ ಶೆಲ್ಟರ್ ನಿರ್ಮಾಣಕ್ಕೆ ಎಂಟು ಲಕ್ಷ ರೂಪಾಯಿ ವೆಚ್ಚವಾಗಿದೆ. ಬಿಗ್ ಸ್ಟ್ರೀಟ್ ಕಂಪೆನಿ ನಗರದಲ್ಲಿ 172 ಸಾಮಾನ್ಯ ಬಸ್ ಶೆಲ್ಟರುಗಳ ನಿರ್ಮಾಣದ ಗುತ್ತಿಗೆಯನ್ನೂ ಪಡೆದಿದೆ.

2008: ದೂರ ಸಂಪರ್ಕ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಎಂದು ಹೇಳಲಾಗುವ ತ್ರೀಜಿ ತಂತ್ರಜ್ಞಾನ ಸೇವೆಯನ್ನು ದೆಹಲಿ ವ್ಯಾಪ್ತಿಯಲ್ಲಿ ಸರ್ಕಾರಿ ಸ್ವಾಮ್ಯದ ಮಹಾನಗರ ದೂರ ಸಂಪರ್ಕ ನಿಗಮ (ಎಂಟಿಎಂಎಲ್)ವು ಆರಂಭಿಸುತ್ತಿದ್ದು , ಪ್ರಧಾನಿ ಮನಮೋಹನ್ ಸಿಂಗ್ ಅವರು ನವದೆಹಲಿಯಲ್ಲಿ ಇದಕ್ಕೆ ವಿಧ್ಯುಕ್ತ ಚಾಲನೆ ನೀಡಿದರು. ಹೊಸ ತ್ರೀಜಿ ತಂತ್ರಜ್ಞಾನವನ್ನು 'ಜಾದೂ' ಹೆಸರಿನಿಂದ ಕರೆಯಲಾಗುತ್ತಿದ್ದು, ಕಾರ್ಯಕ್ರಮದಲ್ಲಿ ಹಾಜರಿದ್ದ ಕೇಂದ್ರ ದೂರ ಸಂಪರ್ಕ ಸಚಿವ ಎ.ರಾಜಾ ಅವರು ವೀಡಿಯೋ ಕರೆ ಮಾಡುವ ಮೂಲಕ ತ್ರೀಜಿ ತಂತ್ರಜ್ಞಾನ ಸಾಮರ್ಥ್ಯವನ್ನು ಪ್ರದರ್ಶಿಸಿದರು.

2008: ಚೆನ್ನೈ ನಗರದ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟಿನ ಅಂತಿಮ ದಿನದ ಪಂದ್ಯದಲ್ಲಿ ಹರ್ಷೋದ್ಘಾರಗಳ ಮಧ್ಯೆ ಭಾರತವು ಇಂಗ್ಲೆಂಡ್ ವಿರುದ್ಧ ಆರು ವಿಕೆಟುಗಳ ವಿಜಯ ಸಾಧಿಸಿತು. ಅನುಭವಿ ಆಟಗಾರ ಸಚಿನ್ ತೆಂಡೂಲ್ಕರ್ ಅವರು ತಮ್ಮ 41ನೇ ಶತಕ ಬಾರಿಸುವುದರೊಂದಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುನ್ನತ ಶತಕ ಸಿಡಿಸಿದವರ ಸಾಲಿಗೆ ನಾಲ್ಕನೆಯವರಾಗಿ ಸೇರಿದ ದಾಖಲೆಯೂ ಕ್ರೀಡಾ ಇತಿಹಾಸದ ಪುಟಕ್ಕೆ ಸೇರ್ಪಡೆಯಾಯಿತು.

2007: ತಮಗೆ ಅನುಕೂಲವಾಗುವಂತೆ ಸಂವಿಧಾನ ತಿದ್ದುಪಡಿ ಮಾಡಿದ ನಂತರ ಪಾಕಿಸ್ಥಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಆರು ವಾರಗಳ ತುರ್ತುಪರಿಸ್ಥಿತಿಯನ್ನು ತೆಗೆದುಹಾಕಿದರು. ತುರ್ತುಪರಿಸ್ಥಿತಿ, ತಾತ್ಕಾಲಿಕ ಸಾಂವಿಧಾನಿಕ ವ್ಯವಸ್ಥೆ ಹಾಗೂ ಮೂಲಭೂತ ಹಕ್ಕುಗಳ ಮೇಲಿನ ನಿರ್ಬಂಧ ತೆಗೆದು ಹಾಕುವ ಮೂರಂಶಗಳ ರಾಷ್ಟ್ರಪತಿ ಆದೇಶಗಳಿಗೆ ಅವರು ಸಹಿ ಹಾಕಿದರು. ತನ್ಮೂಲಕ 1973ರ ಸಂವಿಧಾನ ವ್ಯವಸ್ಥೆ ಮತ್ತೆ ಜಾರಿಗೆ ಬಂತು. ಆದರೆ, ನವೆಂಬರ್ 29ರಂದು ಸೇನಾ ಮುಖ್ಯಸ್ಥನ ಪದವಿ ತ್ಯಜಿಸಿದರೂ, ಆರು ವಾರಗಳ ತುರ್ತುಪರಿಸ್ಥಿತಿ ಅವಧಿಯಲ್ಲಿ ಕೈಗೊಂಡ ಸಂವಿಧಾನ ತಿದ್ದುಪಡಿಗಳು ಹಾಗೂ ಈ ಕ್ರಮಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸದಂತೆ ಮಾಡಿದ್ದು ಪ್ರತಿಪಕ್ಷಗಳಲ್ಲಿ ಅಸಮಾಧಾನ ಮೂಡಿಸಿತು.

2007: ಇಂಟರ್ನೆಟ್ ಮೂಲಕ ಅಕ್ರಮವಾಗಿ ಔಷಧ ವ್ಯಾಪಾರ ಮಾಡುತ್ತಿದ್ದ ಭಾರತೀಯ ವೈದ್ಯನೊಬ್ಬನಿಗೆ ಫಿಲಡಲ್ಫಿಯಾ ನ್ಯಾಯಾಲಯ 30 ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಫಿಲಡೆಲ್ಫಿಯಾದ ಟೆಂಪಲ್ ವಿಶ್ವವಿದ್ಯಾಲಯದಲ್ಲಿ ಬಿಸಿನೆಸ್ ಪದವಿ ವ್ಯಾಸಂಗ ಮಾಡುತ್ತಿದ್ದ ವೈದ್ಯ ಅಖಿಲ್ ಬನ್ಸಾಲ್ (29) ತಮ್ಮ ಕುಟುಂಬದೊಂದಿಗೆ ಇಂಟರ್ನೆಟ್ ಮೂಲಕ ಅಕ್ರಮವಾಗಿ ಔಷಧ ವ್ಯಾಪಾರ ಮಾಡುತ್ತಿದ್ದು, ಭಾರತದಿಂದ ಅಕ್ರಮವಾಗಿ ತರಿಸಿಕೊಂಡ 11 ದಶಲಕ್ಷ ಔಷಧ ಮಾತ್ರೆಗಳನ್ನು ಅಮೆರಿಕದಲ್ಲಿರುವ 60,000 ಮಂದಿಗೆ ವಿತರಿಸಿದ್ದಾರೆ ಎಂಬುದು ಸರ್ಕಾರಿ ವಕೀಲರ ಆರೋಪ. `ನೀವು ಇಡೀ ದೇಶದ ತುಂಬ ವಿಷ ಹಂಚಿದ್ದೀರಿ' ಎಂದು ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಪೌಲ್ ಡೈಮಂಡ್ ಅವರು ಆರೋಪಿ ಅಖಿಲ್ ಬನ್ಸಾಲ್ ಗೆ ಛೀಮಾರಿ ಹಾಕಿದರು.

2007: ಮಾಹಿತಿ ತಂತ್ರಜ್ಞಾನ ಸಂಸ್ಥೆ `ಇನ್ಫೋಸಿಸ್' ಅಧ್ಯಕ್ಷ ಎನ್. ಆರ್. ನಾರಾಯಣ ಮೂರ್ತಿ ಅವರು ಸಾಫ್ಟವೇರ್ ಉದ್ದಿಮೆ, ವ್ಯಾಪಾರ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಬ್ರಿಟನ್ನಿನ ಲ್ಯಾನ್ಸೆಸ್ಟರ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಲ್ಯಾನ್ಸೆಸ್ಟರ್ ವಿಶ್ವವಿದ್ಯಾಲಯದಲ್ಲಿ ನಡೆದ ವಿಶೇಷ ಪದವಿ ಪ್ರದಾನ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಸರ್ ಕ್ರಿಸ್ ಬೊನಿಂಗ್ಟನ್ ಅವರು ನಾರಾಯಣ ಮೂರ್ತಿ ಅವರಿಗೆ `ಗೌರವ ಡಾಕ್ಟರೇಟ್' ಪದವಿ ಪ್ರದಾನ ಮಾಡಿದರು. ನಾರಾಯಣ ಮೂರ್ತಿ ಅವರು 1981 ರಲ್ಲಿ ಆರು ಜನ ಸಾಫ್ಟವೇರ್ ತಂತ್ರಜ್ಞರೊಂದಿಗೆ ಸೇರಿಕೊಂಡು ಇನ್ಫೋಸಿಸ್ ಸಂಸ್ಥೆ ಸ್ಥಾಪಿಸಿ, 21 ವರ್ಷಗಳ ಕಾಲ ಅದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

2007: ಪೂರ್ವ ಇಂಡೋನೇಷ್ಯಾದ ಮಲುಕಾ ದ್ವೀಪದಲ್ಲಿ ಭಾರಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 7.1 ರಷ್ಟು ಇತ್ತು. ಸೌಮ್ ಲಕಿ ಪಟ್ಟಣದ ವಾಯವ್ಯ ಭಾಗದಿಂದ 128 ಕಿ.ಮೀ ದೂರದಲ್ಲಿ ಕಂಪನವು ಕೇಂದ್ರೀಕೃತವಾಗಿತ್ತು.

2007: ಕುದುರೆಗಳ ಹೆಜ್ಜೆಗಳ ಸದ್ದು ಮತ್ತು ಹೃದಯಕ್ಕೆ ತಂಪು ನೀಡುವ ಇಂಪಾದ ಮೆಲು ಸಂಗೀತದ ಮಧ್ಯೆ ಸಮವಸ್ತ್ರ ಧರಿಸಿದ ಮರದಗಲ ಎದೆಯ ರಾಷ್ಟ್ರಪತಿಗಳ ಅಂಗರಕ್ಷಕರು ಪ್ರತಿ ಶನಿವಾರ ಭಾರತದ ರಾಷ್ಟ್ರಪತಿ ಭವನದಲ್ಲಿ ನಡೆಸುವ ಕರ್ತವ್ಯದ ಹಸ್ತಾಂತರ (ಚೇಂಜ್ ಆಫ್ ಗಾರ್ಡ್) ಈ ಬಾರಿ ಐತಿಹಾಸಿಕ ದಿನವಾಗಿ ಮಾರ್ಪಟ್ಟಿತು. ಭಾರತದ ರಾಷ್ಟ್ರಪತಿ ಭವನದ ಇತಿಹಾಸದಲ್ಲಿ 2007ರ ಡಿಸೆಂಬರ್ 15 ಸ್ಮರಣೀಯ ದಿನವಾಯಿತು. ಇದೇ ಮೊದಲ ಬಾರಿಗೆ ಈ ಸಾಂಪ್ರದಾಯಿಕ ವಿಧಿಯನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಯಿತು. ರಾಷ್ಟ್ರಪತಿ ಭವನವನ್ನು ಜನರಿಗೆ ಹತ್ತಿರವಾಗಿಸುವ ಪ್ರಯತ್ನವಾಗಿ ಈಗ ಈ `ಚೇಂಜ್ ಆಫ್ ಗಾರ್ಡ್' ನ್ನು ಸಾರ್ವಜನಿಕರಿಗೆ ಮುಕ್ತವಾಗಿಸಿ, ಅದರಲ್ಲಿ ಹಲವು ಮಾರ್ಪಾಟು ಸಹ ಮಾಡಲಾಯಿತು.

2007: ಖ್ಯಾತ ಬ್ಯಾಟ್ಸ್ ಮನ್ನರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ನೀಡುವ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದರು.

2007: ಬೆಂಗಳೂರು ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಿಹಾರ ಗಡಿ ಭಾಗದ ರಾಂಪುರ್ ಗ್ರಾಮದ ಶಂಭು- ಪೂನಮ್ ದಂಪತಿಯ ಎರಡು ವರ್ಷದ ಬಾಲಕಿ ಲಕ್ಷ್ಮಿ ಈದಿನ ಸ್ಪರ್ಶ ಆಸ್ಪತ್ರೆಯಿಂದ ಮನೆಗೆ ಮರಳಿದಳು. ಈ ಬಾಲಕಿ ನಾಲ್ಕು ಹೆಚ್ಚುವರಿ ಕೈಕಾಲುಗಳನ್ನು ಹೊಂದಿದ್ದ ಪರಿಣಾಮ ಹುಟ್ಟಿನಿಂದಲೂ ತೊಂದರೆ ಅನುಭವಿಸುತ್ತಿದ್ದಳು. ಸ್ಪರ್ಶ ಆಸ್ಪತ್ರೆ ಮುಖ್ಯಸ್ಥ ಡಾ. ಶರಣ ಪಾಟೀಲ್ ನೇತೃತ್ವದ 30 ತಜ್ಞ ವೈದ್ಯರ ತಂಡ 2007ರ ನವಂಬರ್ 6 ಹಾಗೂ 7ರಂದು ಸತತ 27 ಗಂಟೆಗಳ ಕಾಲ ಲಕ್ಷ್ಮಿಗೆ ಶಸ್ತ್ರಚಿಕಿತ್ಸೆ ನಡೆಸಿತ್ತು. ಶಸ್ತ್ರಚಿಕಿತ್ಸೆ ವೇಳೆ ವೈದ್ಯರ ತಂಡ ರುಂಡವಿಲ್ಲದ ಲಕ್ಷ್ಮಿಯ ಅವಳಿ ದೇಹದ ಭಾಗವನ್ನು (2ಕೈ, 2ಕಾಲು) ಕತ್ತರಿಸಿ ತೆಗೆದಿತ್ತು. ನಂತರ ಅತ್ಯಂತ ಸೂಕ್ಷ್ಮವಾದ ಬೆನ್ನುಹುರಿ ಬೇರ್ಪಡಿಸುವ ಕಾರ್ಯ, ಸೊಂಟದ ಭಾಗವನ್ನು ಸಮರ್ಪಕಗೊಳಿಸುವ ಕಾರ್ಯ, ಮೂತ್ರಪಿಂಡ ಮರುಜೋಡಣೆ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗಳನ್ನು ಲಕ್ಷ್ಮಿಗೆ ಯಶಸ್ವಿಯಾಗಿ ಮಾಡಲಾಗಿತ್ತು.

2007: ಏಷ್ಯಾದಲ್ಲಿಯೇ ಅತಿ ಎತ್ತರದ ಆನೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ `ಶಿವಶಂಕರನ್' ಉತ್ತರ ಕೇರಳದ ಒಟ್ಟಪಾಲಮ್ಮಿನಲ್ಲಿ ಸಾವನ್ನಪ್ಪಿತು. ನೂರಾರು ದೇಗುಲಗಳ ಉತ್ಸವಗಳಲ್ಲಿ ಪಾಲ್ಗೊಂಡಿದ್ದ 56 ವರ್ಷ ವಯಸ್ಸಿನ `ಶಿವಶಂಕರನ್' 10 ಅಡಿ 9 ಅಂಗುಲ ಎತ್ತರವಿತ್ತು. ಈ ಎತ್ತರದಿಂದಲೇ ಜನರ ಗಮನ ಸೆಳೆದಿತ್ತು. ಒಟ್ಟಪಾಲಮ್ಮಿನ ದೇಗುಲ ಒಂದರ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಈ ಆನೆ ಟ್ರಕ್ಕಿನಿಂದ ಕೆಳಗಿಳಿಸುವಾಗ ಆಯತಪ್ಪಿ ಕೆಳಗೆ ಬಿದ್ದಿತು. ಪಶುವೈದ್ಯರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆಯಿತು.

2007: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರನ್ನು ತತ್ ಕ್ಷಣ ಹುದ್ದೆಯಿಂದ ವಜಾಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ರೆಡ್ಡಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ನೇಮಕಾತಿಯ ಗುತ್ತಿಗೆ ರದ್ದು ಮಾಡುವಂತೆ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

2007: ಎಚ್ ಎಂ ಟಿ ಕಂಪೆನಿಯಿಂದ ಎರಡು ಲಕ್ಷ ರೂಪಾಯಿ ಪಡೆದು ನಕಲಿ ಛಾಪಾ ಕಾಗದ ನೀಡಿ (ಎಂಬೋಸ್ ಮೆಂಟ್) ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಛಾಪಾ ಕಾಗದ ಹಗರಣದ ಪ್ರಮುಖ ಆರೋಪಿ ಅಬ್ದುಲ್ ಕರೀಂಲಾಲಾ ತೆಲಗಿ, ವಜೀರ್ ಅಹ್ಮದ್ ಸಾಲಿಕ್, ಬದ್ರುದಿನ್ ಜಮಾದಾರ್ ಅವರಿಗೆ ಐದು ವರ್ಷ ಶಿಕ್ಷೆ ವಿಧಿಸಿ ಪರಪ್ಪನ ಅಗ್ರಹಾರ ವಿಶೇಷ ನ್ಯಾಯಾಲಯ ತೀರ್ಪು ನೀಡಿತು. ಮೂವರಿಗೂ ತಲಾ 4.50 ಲಕ್ಷ ರೂ ದಂಡ ಮತ್ತು ಇದೇ ಪ್ರಕರಣದ ಇನ್ನೊಬ್ಬ ಆರೋಪಿ ಪ್ರದೀಪ್ ಕುಮಾರ್ ಗೆ ಒಂದು ವರ್ಷ ಕಠಿಣ ಸಜೆ ವಿಧಿಸಿ ವಿಶೇಷ ನ್ಯಾಯಾಧೀಶರಾದ ಸಿ.ಜಿ. ಹುನಗುಂದ್ ಅವರು ತೀರ್ಪು ನೀಡಿದರು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರು ಆರೋಪಿಗಳಾದ ಅನೀಸ್ ಖಾನ್, ಇರ್ಫಾನ್ ಅಹಮ್ಮದ್ ಮತ್ತು ಸಮೀವುಲ್ಲಾ ಅವರನ್ನು ಖುಲಾಸೆಗೊಳಿಸಿದರು.

2007: ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಕಾರ್ಯಕ್ರಮ ಚಂದ್ರಯಾನ -1ಕ್ಕೆ ದ್ವಿಮುಖ ಸಂಪರ್ಕ ಸಾಧಿಸುವ ಆಂಟೆನಾವನ್ನು ಬೆಂಗಳೂರಿನ ಹೊರವಲಯದಲ್ಲಿ ಇಸ್ರೋ ಸ್ಥಾಪಿಸಿದ್ದು, ಅದನ್ನು ಈದಿನ ಪತ್ರಕರ್ತರಿಗೆ ತೋರಿಸಲಾಯಿತು. ದೊಡ್ಡ ಆಲದಮರದ ಬಳಿಯ ಬ್ಯಾಲಾಳುವಿನಲ್ಲಿ ಸ್ಥಾಪಿಸಿರುವ 32 ಮೀಟರ್ ವ್ಯಾಸದ ಆಂಟೆನಾ ಮತ್ತು ಇದಕ್ಕೆ ಪೂರಕ ಸಂಪರ್ಕ ಸಾಧನಗಳಿಂದ ಚಂದ್ರಯಾನ-1 ಉಪಗ್ರಹ ಹಾಗೂ ಭೂಮಿಯ ನಡುವೆ ದ್ವಿಮುಖ ಸಂಪರ್ಕ ಸಾಧ್ಯವಾಗುತ್ತದೆ.

2006: ಹತ್ತೊಂಬತ್ತು ವರ್ಷಗಳ ಹಿಂದೆ ನ್ಯಾಯಾಂಗ ಬಂಧನದಲ್ಲಿದ್ದ ಇಬ್ಬರನ್ನು ಹಿಂಸೆ ನೀಡಿ ಕೊಂದ ಪ್ರಕರಣದಲ್ಲಿ ದೆಹಲಿಯ ಮಾಜಿ ಎಸಿಪಿ ಋಷಿಪ್ರಕಾಶ್ ತ್ಯಾಗಿ (65) ಅವರಿಗೆ ನವದೆಹಲಿಯ ತ್ವರಿತ ಗತಿ ನ್ಯಾಯಾಲಯವು ಮರಣದಂಡನೆ ವಿಧಿಸಿತು. ನ್ಯಾಯಾಂಗದ ಇತಿಹಾಸದಲ್ಲೇ ಅಪರೂಪದ ತೀರ್ಪು ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.

2006: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇರುವ ಗಗನಯಾತ್ರಿಗಳಾದ ಬಾಬ್ ಕರ್ಬಿಮ್ ಮತ್ತು ಕ್ರಿಸ್ಟರ್ ಫಗ್ ಸ್ಯಾಂಗ್ ಮತ್ತೊಮ್ಮೆ ಬಾಹ್ಯಾಕಾಶ ನಡಿಗೆ ನಡೆಸಿ ನಿಲ್ದಾಣದ ಅರ್ಧ ಭಾಗಕ್ಕೆ ವಿದ್ಯುತ್ ಪೂರೈಸುವ ತಂತಿಗಳ ಮರುಜೋಡಣೆ ಕಾರ್ಯ ಕೈಗೊಂಡರು.

2006: ದೋಹಾದಲ್ಲಿ ನಡೆಯುತ್ತಿದ್ದ ಏಷ್ಯನ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ.

2006: ಹಾಡುಹಗಲೇ ತರಗತಿಯಲ್ಲಿ ಮಕ್ಕಳೆದುರು ನಡೆದ ಶಿಕ್ಷಕನ ಘೋರ ಕಗ್ಗೊಲೆಯ ಮುಖ್ಯ ಆರೋಪಿ, ಕೇರಳದ ಸಿಪಿಎಂ ಕಾರ್ಯಕರ್ತ ಎ. ಪ್ರದೀಪನ್ ಗೆ ವಿಧಿಸಲಾಗಿದ್ದ ಮರಣದಂಡನೆಯನ್ನು ನ್ಯಾಯಮೂರ್ತಿ ಎಸ್. ಬಿ. ಸಿನ್ಹ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಜೀವಾವಧಿ ಸಜೆಗೆ ಇಳಿಸಿ ತೀರ್ಪು ನೀಡಿತು. ಭಾರತೀಯ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷರಾಗ್ದಿದ ಶಾಲಾ ಶಿಕ್ಷಕ ಕೆ.ಪಿ. ಜೈಕೃಷ್ಣನ್ ಅವರನ್ನು ತರಗತಿಯಲ್ಲೇ ಶಾಲಾ ಮಕ್ಕಳ ಎದುರು ಮಾರಕ ಅಸ್ತ್ರಗಳಿಂದ ಹಲ್ಲೆ ನಡೆಸಿ ಅಟ್ಟಿಸಿಕೊಂಡು ಹೋಗಿ ಕೊಲೆಗೈದುದಕ್ಕಾಗಿ ಆರೋಪಿ ಎ. ಪ್ರದೀಪನ್ ಮತ್ತು ಇತರ ಐವರು ಆಪಾದಿತರಿಗೆ ವಿಚಾರಣಾ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ನಂತರ ಹೈಕೋರ್ಟ್ ಅದನ್ನು ದೃಢಪಡಿಸಿತ್ತು. ಕೇರಳದ ಕಣ್ಣೂರು ಜಿಲ್ಲೆಯ ಪರಮೇಲ್ನ ಮೊಕೇರಿ ಈಸ್ಟ್ ಯು.ಪಿ. ಸ್ಕೂಲಿನಲ್ಲಿ 1999ರ ಡಿಸೆಂಬರ್ 1ರಂದು ಈ ಭೀಕರ ಘಟನೆ ನಡೆದಿತ್ತು. ಘಟನೆ ನಡೆದ 7 ದಿನಗಳ ಬಳಿಕ ಅಂದರೆ ಡಿಸೆಂಬರ್ 8ರಂದು ಪ್ರಕರಣದ ತನಿಖೆ ಆರಂಭವಾಗಿತ್ತು.

2005: ಸೂರ್ಯನನ್ನು ಹೋಲುವ ನಕ್ಷತ್ರವೊಂದನ್ನು ಪತ್ತೆ ಹಚ್ಚಿರುವುದಾಗಿ ಖಗೋಳ ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ಪ್ರಕಟಿಸಿದರು. ಈ ನಕ್ಷತ್ರದ ಸುತ್ತ ಚಲನಶೀಲ ಅವಶೇಷಗಳು ಕಾಣಿಸಿಕೊಂಡಿದ್ದು ಭೂಮಿಯನ್ನು ಹೋಲುವ ಗ್ರಹದ ರಚನೆ ನಡೆಯುತ್ತಿರಬಹುದು ಎನ್ನಲಾಗಿದೆ. 137 ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ನಕ್ಷತ್ರ ತನ್ನ ಸುತ್ತ ಗ್ರಹಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ. ನಕ್ಷತ್ರ ಸುಮಾರು 3ಕೋಟಿ ವರ್ಷಗಳಷ್ಟು ಹಳೆಯದು. ಅಲ್ಲಿನ ತಾಪಮಾನ ಮೈನಸ್ 262 ಡಿಗ್ರಿ ಫ್ಯಾರನ್ ಹೀಟ್ ಎಂಬುದು ವಿಜ್ಞಾನಿಗಳ ಅಭಿಮತ.

2005: ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ್ದ ಉತ್ತರ ಕರೋಲಿನಾದ ಅಥ್ಲೀಟ್ ಟಿಮ್ ಮಾಂಟ್ಗೊಮರಿ ಸಾಲ್ವೊ ಪಟ್ಟಣದಲ್ಲಿ ತಮ್ಮ ನಿವೃತ್ತಿ ಘೋಷಿಸಿದರು. ಉದ್ದೀಪನ ಮದ್ದು ಸೇವನೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕ್ರೀಡಾ ನ್ಯಾಯ ಪಂಚಾಯ್ತಿಯು ಇವರನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ ಎರಡು ವರ್ಷದ ಅವಧಿಗೆ ನಿಷೇಧ ಹೇರಿದ ಮರುದಿನವೇ ಮಾಂಟ್ಗೊಮರಿ ನಿವೃತ್ತಿ ಪ್ರಕಟಿಸಿದರು.

2005: ಯಹೂದ್ಯರ ನರಮೇಧದ ಅವಧಿಯ ಗ್ರಾಹಕರಿಗೆ ನಾಜಿಗಳ ಪರ ಸ್ವಿಸ್ ಬ್ಯಾಂಕ್ ನಡೆಸಿದ ವಂಚನೆ ಪ್ರಕರಣ ಸಂಬಂಧದಲ್ಲಿ ಖ್ಯಾತ ಮನಃಶಾಸ್ತ್ರಜ್ಞ ಸಿಗ್ಮಂಡ್ ಫ್ರಾಯ್ಡ್ ಮೊಮ್ಮಗ ಅನ್ಟೋನ್ ವಾಲ್ಟರ್ ಫ್ರಾಯ್ಡ್ ಅವರಿಗೆ 1,68,000 ಡಾಲರ್ ಪರಿಹಾರ ನೀಡುವಂತೆ ಕ್ಯಾಲಿಫೋರ್ನಿಯಾದ ಪ್ಯಾಸಡೇನಾದ ನ್ಯಾಯಾಲಯವೊಂದು ಆದೇಶ ನೀಡಿತು.

2005: ಜನಾಂಗೀಯ ಕಲಹ, ಹಿಂಸಾಚಾರ, ಯುದ್ಧ ಮತ್ತು ಸರ್ವಾಧಿಕಾರದ ಮುಷ್ಠಿಯಲ್ಲಿ ಬಸವಳಿದ ಇರಾಕಿನಲ್ಲಿ ಇದೇ ಮೊದಲ ಬಾರಿಗೆ ಸಾರ್ವತ್ರಿಕ ಚುನಾವಣೆ ಆರಂಭಗೊಂಡಿತು.

2005: ಹಂಪಿಯ ಕನ್ನಡ ವಿಶ್ವ ವಿದ್ಯಾಲಯವು ನೀಡುವ ನಾಡೋಜ ಪ್ರಶಸ್ತಿಯ ಗೌರವಕ್ಕೆ ಪ್ರಜಾವಾಣಿಯ ಇಗೋ ಕನ್ನಡ ಅಂಕಣದ ಖ್ಯಾತಿಯ ನಿಘಂಟು ತಜ್ಞ ಬೆಂಗಳೂರಿನ ಪ್ರೊ. ಜಿ. ವೆಂಕಟಸುಬ್ಬಯ್ಯ, ಮೈಸೂರು ವಿ.ವಿ. ಪ್ರಾಧ್ಯಾಪಕಿ ಪ್ರೊ.ಸಿ. ಪಾರ್ವತಮ್ಮ, ಬರಹಗಾರ್ತಿ ಮಂಗಳೂರಿನ ಸಾರಾ ಅಬೂಬಕ್ಕರ್, ರಂಗಭೂಮಿಯ ಹಿರಿಯ ಚೇತನ ಬೆಳಗಾವಿಯ ಏಣಗಿ ಬಾಳಪ್ಪ, ಕಾಷ್ಠ ಶಿಲ್ಪ ಕಲಾವಿದ ಗುಲ್ಬರ್ಗದ ನಾಗಣ್ಣ ಮೋನಪ್ಪ ಬಡಿಗೇರ, ಖ್ಯಾತ ಹರಿದಾಸ ಉಡುಪಿ ಭದ್ರಗಿರಿ ಅಚ್ಯುತದಾಸರು ಆಯ್ಕೆಯಾದರು.

2001: ಪೀಸಾ ವಾಲುಗೋಪುರವನ್ನು 12 ವರ್ಷಗಳ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಭೇಟಿಗಾಗಿ ತೆರೆದಿಡಲಾಯಿತು. 1990ರಲ್ಲಿ ತಜ್ಞರ ಸಲಹೆಯಂತೆ ಗೋಪುರವನ್ನು ಮುಚ್ಚಲಾಗಿತ್ತು.

1966: ಚಿತ್ರ ನಿರ್ಮಾಪಕ ಹಾಗೂ ಅನಿಮೇಟರ್ ವಾಲ್ಟ್ ಡಿಸ್ನಿ ಅವರು ಲಾಸ್ ಏಂಜೆಲಿಸಿನಲ್ಲಿ ತಮ್ಮ 65ನೇ ವಯಸ್ಸಿನ್ಲಲಿ ಮೃತರಾದರು.

1950: ಭಾರತದ `ಉಕ್ಕಿನ ಮನುಷ್ಯ' ಸರ್ದಾರ್ ವಲ್ಲಭ ಭಾಯಿ ಪಟೇಲ್ ಬಾಂಬೆಯಲ್ಲಿ (ಈಗಿನ ಮುಂಬೈ) ತಮ್ಮ 75ನೇ ವಯಸ್ಸಿನಲ್ಲಿ ನಿಧನರಾದರು.

1944: ಅಮೆರಿಕದ ಸೇನಾ ಮೇಜರ್ ಬ್ಯಾಂಡ್ ಲೀಡರ್ ಗ್ಲೆನ್ನ್ ಮಿಲ್ಲರ್ ಅವರನ್ನು ಪ್ಯಾರಿಸ್ಸಿನತ್ತ್ತ ಒಯ್ಯುತ್ತಿದ್ದ ಏಕ ಎಂಜಿನ್ ವಿಮಾನ ಬ್ರಿಟಿಷ್ ಕಡಲ್ಗಾಲುವೆಯ ಮೇಲೆ ನಾಪತ್ತೆಯಾಯಿತು.

1938: ಸಾಹಿತಿ ಕೆ.ಎಚ್. ಶ್ರೀನಿವಾಸ್ ಜನನ.

1935: ನಟ, ನಾಟಕಕಾರ, ತಾಂತ್ರಿಕ ಶಿಕ್ಷಣ ಇಲಾಖೆಯ ಪ್ರಾಧ್ಯಾಪಕ ಬಿ.ಎಸ್. ಕೇಶವರಾವ್ ಅವರು ಬಿ.ಕೆ. ಸುಬ್ಬರಾವ್- ನಾಗಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1911: ದೊರೆ ಐದನೇ ಜಾರ್ಜ್ ನವದೆಹಲಿ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ. ದಿಲ್ಲಿ ದರ್ಬಾರಿನಲ್ಲಿ ರಾಜಧಾನಿಯು ಕಲ್ಕತ್ತಾದಿಂದ (ಈಗಿನ ಕೋಲ್ಕತ್ತಾ) ದೆಹಲಿಗೆ ಸ್ಥಳಾಂತರಗೊಳ್ಳಲಿದೆ ಎಂದು ಪ್ರಕಟಿಸಲಾಯಿತು.

1902: ಸಾಹಿತಿ ಚಂಪಾಬಾಯಿ ದೇಶಪಾಂಡೆ ಜನನ.

1832: ಫ್ರೆಂಚ್ ಸಿವಿಲ್ ಎಂಜಿನಿಯರ್ ಅಲೆಗ್ಸಾಂಡರ್ ಗುಸ್ಟಾವ್ ಐಫೆಲ್ (1832-1923) ಜನ್ಮದಿನ. ನೈಸ್ನಲ್ಲಿ ಖಗೋಳ ವೀಕ್ಷಣಾಲಯಕ್ಕೆ ಚಲಿಸುವಂತಹ ಗುಮ್ಮಟ ಹಾಗೂ ನ್ಯೂಯಾರ್ಕಿನ ಸ್ಟ್ಯಾಚ್ಯು ಆಫ್ ಲಿಬರ್ಟಿಯ ಚೌಕಟ್ಟಿನ ವಿನ್ಯಾಸ ರೂಪಿಸಿದ ಐಫೆಲ್ ಅವರ ಹೆಸರನ್ನು ಫ್ರಾನ್ಸಿನಲ್ಲಿ ನಿರ್ಮಿಸಿದ ಗೋಪುರಕ್ಕೆ ಇರಿಸಲಾಗಿದೆ.

No comments:

Advertisement