My Blog List

Monday, March 29, 2010

ಇಂದಿನ ಇತಿಹಾಸ History Today ಮಾರ್ಚ್ 29


ಇಂದಿನ ಇತಿಹಾಸ

ಮಾರ್ಚ್ 29

ಇಪ್ಪತ್ತೆಂಟು ವರ್ಷಗಳ ಕಾಲ ಜಿಂಬಾಬ್ವೆಯನ್ನು ಮುನ್ನಡೆಸಿದ ಅಧ್ಯಕ್ಷ ರಾಬರ್ಟ್ ಮುಗಾಬೆ (84) ಅವರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಚುನಾವಣೆ ದೇಶದಲ್ಲಿ ನಡೆಯಿತು.

2009: ಆಸ್ಟ್ರೇಲಿಯಾದ ಕೈರ್ನ್ಸ್‌ನಲ್ಲಿ ಸಾವಿರಾರು ವಿಷಪೂರಿತ ನೆಲಗಪ್ಪೆಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಇವುಗಳ ಕಳೇಬರಗಳ ಗೊಬ್ಬರವನ್ನು ಕೃಷಿಗೆ ಬಳಸುವ ಪದ್ಧತಿ ಇಲ್ಲಿ ಪ್ರತಿ ವರ್ಷ ಬಳಕೆಯಲ್ಲಿ ಇದೆ.
2009: ಕೋಮು ಪ್ರಚೋದನೆ ಆರೋಪದ ಮೇಲೆ ಬಂಧಿತರಾದ ಬಿಜೆಪಿ ಯುವ ನಾಯಕ ವರುಣ್ ಗಾಂಧಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎನ್‌ಎಸ್‌ಎ) ಮೊಕದ್ದಮೆ ಹೂಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿತು. 1980ರ ರಾಷ್ಟ್ರೀಯ ಭದ್ರತಾ ಕಾಯ್ದೆಯ 3(2)ನೇ ಪರಿಚ್ಛೇದದಡಿ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು, ಕಾಯ್ದೆ ಪ್ರಕಾರ ಆರೋಪಿಗೆ ಕನಿಷ್ಟ ಒಂದು ವರ್ಷ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಬಹುದು.

2009: ವರುಣ್ ಗಾಂಧಿ ಅವರ ಮುಸ್ಲಿಮ್ ವಿರೋಧಿ ಭಾಷಣದ ಬಗ್ಗೆ ಇದುವರೆಗೂ ಮೌನದಿಂದಲೇ ಇದ್ದ ಹಿರಿಯ ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ತಮ್ಮ ಮೌನ ಮುರಿದು, ವರುಣ್‌ಗೆ ಟಿಕೆಟ್ ನೀಡಬೇಡಿ ಎಂದು ಹೇಳಿರುವ ಚುನಾವಣಾ ಆಯೋಗವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

2009: ಬ್ಯಾಂಕ್ ಗ್ರಾಹಕರಿಗೆ ವಿಶೇಷ ಸಿಹಿ ಸುದ್ದಿ. ಖಾತೆ ತೆರೆದಿರುವ ಬ್ಯಾಂಕಿನ ಎಟಿಎಂ ಕೇಂದ್ರಕ್ಕಾಗಿಯೇ ಅಲೆದಾಡುವ ಕಷ್ಟ ಏಪ್ರಿಲ್ 1ರಿಂದ ಪರಿಹಾರವಾಗುವುದು. ಏಕೆಂದರೆ, ಯಾವುದೇ ಎಟಿಎಂ ಕೇಂದ್ರದಲ್ಲಿ ಹಣ ಪಡೆದುಕೊಂಡರೂ ಇನ್ನುಮುಂದೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ! ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ನಿರ್ದೇಶನವೊಂದರಿಂದ ಇದು ಸಾಧ್ಯವಾಗುವುದು. ಸಾಮಾನ್ಯ ಜನರಿಗೆ ಅನುಕೂಲವಾಗುವಂತಹ ಈ ನಿರ್ದೇಶನದ ಪ್ರಕಾರ, ಡೆಬಿಟ್ ಕಾರ್ಡ್ ಹೊಂದಿರುವ ಯಾವುದೇ ಬ್ಯಾಂಕ್ ಗ್ರಾಹಕರು ಯಾವುದೇ ಬ್ಯಾಂಕಿನ ಎಟಿಎಂ ಮೂಲಕ ಹಣ ಪಡೆದುಕೊಳ್ಳಬಹುದು. ಇದಕ್ಕಾಗಿ ಶುಲ್ಕ ವಿಧಿಸುವುದನ್ನು ಇದೇ ಏಪ್ರಿಲ್ 1ರಿಂದ ಹಿಂದಕ್ಕೆ ಪಡೆಯಲಾಗುವುದು.

2009: ತನ್ನ ವಶದಲ್ಲಿ ಇಟ್ಟುಕೊಂಡ ತಮಿಳರನ್ನು ಸರ್ಕಾರಿ ನಿಯಂತ್ರಿತ ಪ್ರದೇಶಕ್ಕೆ ತೆರಳಲು ಅವಕಾಶ ಮಾಡಿಕೊಟ್ಟರೆ ಮಾತ್ರ ಎಲ್‌ಟಿಟಿಇಯೊಂದಿಗೆ ತಾತ್ಕಾಲಿಕ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಬಹುದು ಎಂದು ಶ್ರೀಲಂಕಾ ಸ್ಪಷ್ಟಪಡಿಸಿತು. ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆ ಕೇಂದ್ರ ಕಾರ್ಯಾಲಯದಲ್ಲಿ ಸುದ್ದಿಗಾರರಿಗೆ ಈ ವಿಷಯ ಸ್ಪಷ್ಪಪಡಿಸಿದ ವಿಶ್ವಸಂಸ್ಥೆಗೆ ಶ್ರೀಲಂಕಾದ ಶಾಶ್ವತ ಪ್ರತಿನಿಧಿಯಾದ ಎಚ್.ಎಂ.ಜಿ.ಸಿ ಪಲಿಹಕ್ಕರ, ಜನವರಿ 30 ರಂದು ಅಧ್ಯಕ್ಷ ಮಹಿಂದ ರಾಜಪಕ್ಸ ಅವರು ವನ್ನಿಯಲ್ಲಿ ಎಲ್‌ಟಿಟಿಇಯೊಂದಿಗಿನ ಕಾರ್ಯಾಚರಣೆಗೆ ಎರಡು ದಿನಗಳ ವಿರಾಮ ಘೋಷಿಸಿದ್ದನ್ನು ಉದಾಹರಿಸಿದರು.

2009: ಇಂಡೋನೇಷ್ಯಾದ ತಂಗೆರಂಗನ್ ಜಿಲ್ಲೆಯಲ್ಲಿ ಸಂಭವಿಸಿದ್ದ ಗಿಂಟಂಗ್ ಅಣೆಕಟ್ಟು ಕುಸಿತ ದುರಂತದ ಸಾವಿನ ಸಂಖ್ಯೆ 93ಕ್ಕೆ ಏರಿತು. ಕಾಣೆಯಾದ ನೂರಾರು ಮಂದಿ ಇನ್ನೂ ಪತ್ತೆಯಾಗಿಲ್ಲ. ಶೋಧನಾ ಕಾರ್ಯ ಮುಂದುವರಿದಿದೆ ಎಂದು ಸರ್ಕಾರಿ ಮೂಲಗಳು ಹೇಳಿದವು.

2009: ದುಬೈ ಕೋರ್ಟ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ ಕಂಡುಬಂದಿತು. ಮೊದಲ ಮಹಿಳಾ ನ್ಯಾಯಾಧೀಶರಾಗಿ ದಿನದ ಹಿಂದೆ ಪ್ರಮಾಣ ವಚನ ಸ್ವೀಕರಿಸಿದ ಎಬ್ಟಿಸಂ ಅಲಿ ರಷೀದ್ ಬಿದ್ವಾಯಿ (27) ಅವರು, ಯುಎಇ ( ಸಂಯುಕ್ತ ಅರಬ್ ರಾಷ್ಟ್ರಗಳ ಒಕ್ಕೂಟ) ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ.

2009: ಉದ್ಯೋಗಿ ಸಹ ಒಬ್ಬ ಗ್ರಾಹಕ; ತನಗಿರುವ ಸೌಲಭ್ಯ ಪಡೆಯುವ ಎಲ್ಲಾ ಹಕ್ಕೂ ಆತನಿಗೂ ಇದೆ ಎಂದು ದಕ್ಷಿಣ ಮುಂಬೈನ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ ತೀರ್ಪು ನೀಡಿತು. ನಿವೃತ್ತ ಉದ್ಯೋಗಿಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಆದೇಶ ನೀಡಿದ ವೇದಿಕೆ, ತಮ್ಮ ಸಂಘಟನೆಯಿಂದ ಎಲ್ಲಾ ಸೌಲಭ್ಯಗಳನ್ನೂ ಪಡೆಯುವ ಹಕ್ಕು ಗ್ರಾಹಕರಾದ ಉದ್ಯೋಗಿಗಳಿಗೆ ಇದೆ. ಈ ವಿಷಯದಲ್ಲಿ ಅಸಂತುಷ್ಟರಾದಾಗ ಅವರು ನ್ಯಾಯಕ್ಕಾಗಿ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿತು. ಭವಿಷ್ಯ ನಿಧಿ ಇಲಾಖೆಯ ಉದ್ಯೋಗಿ ಹಸ್‌ಮುಖ್ ಪಾರೇಖ್ ಎಂಬವರು, ನಿವೃತ್ತರಾದ ಬಳಿಕ ಭವಿಷ್ಯ ನಿಧಿಗೆ ಸಂಬಂಧಿಸಿದ ಹಣ ಸಕಾಲದಲ್ಲಿ ತಮಗೆ ಬಾರದ ಬಗ್ಗೆ ವೇದಿಕೆಗೆ ದೂರು ನೀಡಿದ್ದರು. 20 ದಿನ ತಡವಾಗಿ ಬಂದದ್ದಕ್ಕೆ ಪ್ರತಿಯಾಗಿ ಪರಿಹಾರವನ್ನೂ ಕೋರಿದ್ದರು. ಪ್ರತಿವಾದಿಯಾಗಿದ್ದ ಭವಿಷ್ಯ ನಿಧಿ ಇಲಾಖೆ, ಒಬ್ಬ ಉದ್ಯೋಗಿ ಗ್ರಾಹಕರ ವೇದಿಕೆಗೆ ಹೋಗುವಂತಿಲ್ಲ ಎಂದು ವಾದಿಸಿತ್ತು. ಉದ್ಯೋಗಿಗಳ ಭವಿಷ್ಯನಿಧಿ ವಿಚಾರದಲ್ಲಿ ಯಾವುದೇ ತಕರಾರು ಇದ್ದರೆ ಅಂತಹವರು ಭವಿಷ್ಯ ನಿಧಿ ಆಯುಕ್ತರನ್ನು ಸಂಪರ್ಕಿಸಬೇಕೇ ಹೊರತು ಗ್ರಾಹಕರ ವೇದಿಕೆಯನ್ನಲ್ಲ ಎಂದು ಪ್ರತಿಪಾದಿಸಿತ್ತು.

2008: ಕನ್ನಡ ಚಲನಚಿತ್ರ ನಿರ್ಮಾಪಕ ಎ.ಜೆ.ನಾಯ್ಡು (38) ನಿಧನರಾದರು. `ಸೈಲೆನ್ಸ್' ಸಿನೆಮಾದ ರಿರೆಕಾರ್ಡಿಂಗಿಗಾಗಿ ಚೆನ್ನೈಗೆ ಹೊರಟಿದ್ದ ಅವರು ನಗರದ ಬಸ್ ನಿಲ್ದಾಣದಲ್ಲೇ ಹೃದಯಾಘಾತದಿಂದ ಅಸುನೀಗಿದರು. ಕೆಲಸಮಯದ ಹಿಂದೆ ತೆರೆಕಂಡಿದ್ದ ಚಲನಚಿತ್ರ `ವಿದ್ಯಾರ್ಥಿ' ಸಹ ನಾಯ್ಡು ಅವರ ನಿರ್ಮಾಣವೇ ಆಗಿತ್ತು. ಅಂತ್ಯಕ್ರಿಯೆ ಮರುದಿನ ನಡೆಯಿತು.

2008: ಹಸಿರು ಅನಿಲದ ಪರಿಣಾಮ ತಗ್ಗಿಸಲು ವಿಶ್ವದ ದೊಡ್ಡ ದೇಶಗಳ ರಾಜಧಾನಿಗಳಲ್ಲಿ ಈದಿನ (ಮಾರ್ಚ್ 29) ರಾತ್ರಿ `ಅರ್ಥ್ ಅವರ್' ಆಚರಿಸಲಾಗುವುದು. ಈದಿನ ರಾತ್ರಿ ಒಂದು ಗಂಟೆ ಕಾಲ ವಿಶ್ವದ ದೊಡ್ಡ ನಗರಗಳಲ್ಲಿ ಎಲ್ಲಾ ದೀಪಗಳನ್ನೂ ದೀಪಗಳನ್ನು ಆರಿಸಲಾಗುವುದು. ತನ್ಮೂಲಕ ವಿದ್ಯುಚ್ಛಕ್ತಿ ಉಳಿಸುವುದು ಈ ಆಂದೋಲನದ ಉದ್ದೇಶ.

2008: ಚಿಪಾಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಕ್ರಿಕೆಟಿನ ನಾಲ್ಕನೇ ದಿನ ರಾಹುಲ್ ದ್ರಾವಿಡ್ ಅವರು ಹತ್ತು ಸಾವಿರ ರನ್ ಪೂರೈಸಿ, 25ನೇ ಶತಕ ದಾಖಲಿಸಿದರು. ಭಾರತ ತಂಡ ತನ್ನ ಮೊದಲ ಇನ್ನಿಂಗ್ಸಿನಲ್ಲಿ 627 ರನ್ ಗಳಿಸಿ ಆಲೌಟಾಯಿತು.

2008: ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆಯು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಪಟ್ಟ ಹಳ್ಳಿಯಲ್ಲಿ ನಡೆಸಿದ ಉತ್ಖನನದಲ್ಲಿ 20 ಸಾವಿರ ವರ್ಷಗಳ ಹಿಂದಿನ ಪ್ರಾಚೀನ ನಾಗರಿಕತೆಯ ಪಳೆಯುಳಿಕೆಗಳನ್ನು ಪತ್ತೆ ಮಾಡಿತು.
ಉತ್ಖನನದ ವೇಳೆ ಕಲ್ಲಿನಿಂದ ತಯಾರಿಸಿದ 200 ಸಣ್ಣಪುಟ್ಟ ಆಯುಧಗಳು ದೊರಕಿದವು. ಇದರಿಂದಾಗಿ ಅತಿ ಪ್ರಾಚೀನ ನಾಗರಿಕತೆಯ ಅಸ್ತಿತ್ವದ ಬಗ್ಗೆ ಮಹತ್ವದ ಸುಳಿವು ದೊರಕಿತು ಎಂದು ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಅಧೀಕ್ಷಕ ಅಮಲ್ ರಾಯ್ ತಿಳಿಸಿದರು. ಸಂತಲಪಾರಾ ಹಳ್ಳಿಯಲ್ಲಿ ಒಂದು ಸಾವಿರ ಮೀಟರ್ ಕೃಷಿ ಭೂಮಿಯಲ್ಲಿ ಕಳೆದ ಒಂದೂವರೆ ವರ್ಷದಿಂದ ಉತ್ಖನನ ನಡೆಯುತ್ತಿದ್ದು, 2-3 ಮೀಟರ್ ಆಳದವರೆಗೆ ಅಗೆದಾಗ ಕಲ್ಲಿನ ಆಯುಧಗಳು ಹಾಗೂ ಇತರ ಬಳಕೆಯ ವಸ್ತುಗಳ ಪಳೆಯುಳಿಕೆಗಳು ಪತ್ತೆಯಾದವು. ಪುಣೆಯ ಡೆಕ್ಕನ್ ಕಾಲೇಜಿನ ಭೂಗರ್ಭ -ಪ್ರಾಚ್ಯವಸ್ತು ತಜ್ಞರಾದ ಎಸ್. ಎನ್. ರಾಜಗುರು ಮತ್ತು ಬಿ. ಸಿ. ದೇವಧರ್ ಅವರ ಮಾರ್ಗದರ್ಶನದಲ್ಲಿ ಉತ್ಖನನ ನಡೆಯಿತು.

2008: ಬೆಂಗಳೂರು, ಪುಣೆ ಹಾಗೂ ಮುಂಬೈ ಸೇರಿದಂತೆ ಮೂರು ಆಯ್ದ ನಗರಗಳಲ್ಲಿ ಜೂನ್ ಅಂತ್ಯದಿಂದ ಆಕರ್ಷಕ ಫೈಬರ್ ಗ್ಲಾಸ್ ಗ್ಯಾಸ್ ಸಿಲಿಂಡರ್ ಒದಗಿಸುವ ಮುಂಚೂಣಿ ಯೋಜನೆಗೆ ಪೆಟ್ರೋಲಿಯಂ ಸಚಿವಾಲಯ ಅನುಮತಿ ನೀಡಿತು. ಫೈಬರ್ ಸಿಲಿಂಡರ್ ಪರಿಚಯಿಸುವ ಮೂಲಕ ರಾಜ್ಯ ಒಡೆತನದ ತೈಲ ಮಾರಾಟ ಕಂಪೆನಿಗಳಿಗೆ (ಒಎಂಸಿ) ತಮ್ಮ ಉದ್ಯಮ ವಿಸ್ತರಿಸಲು ಪೆಟ್ರೋಲಿಯಂ ಸಚಿವಾಲಯ ತಾತ್ವಿಕ ಅನುಮತಿ ನೀಡಿದೆ ಎಂದು ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ದಿನ್ಸಾ ಪಟೇಲ್ ಹೇಳಿದರು.

2008: ಲಿಂಗ ಸಂವೇದನಾಶೀಲ ವಿಷಯಕ್ಕೆ ಸಂಬಂಧಿಸಿದ ಬರಹಗಳನ್ನು ಆಧರಿಸಿ ಸುಧಾ ವಾರಪತ್ರಿಕೆಯ ಸಹಾಯಕ ಸಂಪಾದಕಿ ಸಿ.ಜಿ.ಮಂಜುಳಾ ಅವರಿಗೆ ಪಾಪುಲೇಷನ್ ಫಸ್ಟ್ ಸಂಸ್ಥೆಯು `ಯು ಎನ್ ಎಫ್ ಪಿ ಎ-ಲಾಡ್ಲಿ ಮಾಧ್ಯಮ ಪ್ರಶಸ್ತಿ'ಯನ್ನು ನೀಡಿ ಗೌರವಿಸಿತು. ಚೆನ್ನೈಯ ಮ್ಯೂಸಿಕ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ತಮಿಳುನಾಡಿನ ಸಮಾಜ ಕಲ್ಯಾಣ ಸಚಿವೆ ಡಾ.ಪೂಂಗೊದಾಲ್ ಅವರು ಮಂಜುಳಾ ಅವರಿಗೆ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು. ಲಿಂಗ ಸಂವೇದನಾಶೀಲ ಲೇಖನಗಳ ಮೂಲಕ ಹೆಣ್ಣು ಮಕ್ಕಳಲ್ಲಿ ಅರಿವು ಮೂಡಿಸಿದ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಒಟ್ಟು 18 ಮಂದಿ ಮಾಧ್ಯಮ ವ್ಯಕ್ತಿಗಳನ್ನು ಪಾಪುಲೇಷನ್ ಸಂಸ್ಥೆಯು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಇದರಲ್ಲಿ ಕರ್ನಾಟಕದಿಂದ ಮಂಜುಳಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದರು.. ಸಮಾರಂಭದಲ್ಲಿ ಲೇಖಕಿ ಅಮ್ಮು ಜೋಸೆಫ್ ಅವರಿಗೆ `ವಿಶೇಷ ಮಾಧ್ಯಮ ಪ್ರಶಸ್ತಿ' ನೀಡಲಾಯಿತು.

2008: ರೂಪದರ್ಶಿ ಜೆಸ್ಸಿಕಾಲಾಲ್ ಅವರ ಅತ್ತಿಗೆ ಮೌಸಮಿ (ಸಹೋದರ ರಣಜಿತ್ ಲಾಲ್ ಅವರ ಪತ್ನಿ) ಅವರು ಪತಿಯಿಂದ ಜೀವನಾಂಶ ಕೋರಿ ಹೈಕೋರ್ಟ್ ಮೊರೆ ಹೋದರು. ಪತಿಯಿಂದ ವಂಚನೆಗೆ ಒಳಗಾಗಿ ಪ್ರತ್ಯೇಕವಾದ ತಮಗೆ ನ್ಯಾಯ ದೊರಕಿಸುವಂತೆ ಅವರು ನ್ಯಾಯಾಲಯವನ್ನು ಕೋರಿದರು. ತಮ್ಮ ಕೋರಿಕೆಯನ್ನು ಅನೂರ್ಜಿತಗೊಳಿಸಿದ್ದ ಸೆಷನ್ಸ್ ಕೋರ್ಟ್ ಆದೇಶವನ್ನು ರದ್ದುಪಡಿಸುವಂತೆ ಅವರು ಮನವಿ ಮಾಡಿದರು.

2008: ಇಪ್ಪತ್ತೆಂಟು ವರ್ಷಗಳ ಕಾಲ ಜಿಂಬಾಬ್ವೆಯನ್ನು ಮುನ್ನಡೆಸಿದ ಅಧ್ಯಕ್ಷ ರಾಬರ್ಟ್ ಮುಗಾಬೆ (84) ಅವರ ಭವಿಷ್ಯವನ್ನು ನಿರ್ಧರಿಸುವ ಅತ್ಯಂತ ಮಹತ್ವದ ಚುನಾವಣೆ ದೇಶದಲ್ಲಿ ನಡೆಯಿತು.

2008: ಪಾಕಿಸ್ಥಾನದ ಪ್ರಧಾನಿ ಯೂಸುಫ್ ರಝಾ ಜಿಲಾನಿ ಅವರಿಗೆ ಸಂಸತ್ತಿನಲ್ಲಿ ನಿರೀಕ್ಷೆಗೂ ಮೀರಿ `ಸರ್ವಾನುಮತದಿಂದ ವಿಶ್ವಾಸ ಮತ' ದೊರೆಯಿತು.

2007: ಕಡಲ ತಡಿಯಲ್ಲಿರುವ ಬಾಲಸೋರ್ ಜಿಲ್ಲೆಯ ಚಂಡಿಪುರ ಬಳಿ ಅತ್ಯಾಧುನಿಕ `ಅಸ್ತ್ರ' ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗಿಸಲಾಯಿತು. ಈ ಕ್ಷಿಪಣಿಯನ್ನು ಸಂಪೂರ್ಣವಾಗಿ ದೇಶಿ ತಂತ್ರಜ್ಞಾನ ಬಳಸಿಕೊಂಡು ರಕ್ಷಣಾಪಡೆಯ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯವು (ಡಿ ಆರ್ ಡಿ ಎಲ್) ನಿರ್ಮಿಸಿದ್ದು, 80.ಕಿಮಿ ದೂರದವರೆಗಿನ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

2007: ಐಐಟಿ ಮತ್ತು ಐಐಎಂ ಸೇರಿದಂತೆ ಕೇಂದ್ರಾಡಳಿತದ ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ (ಪ್ರವೇಶದಲ್ಲಿ ಮೀಸಲಾತಿ) ಕಾಯಿದೆ 2006'ರ ಅನುಷ್ಠಾನವನ್ನು ಮುಂದಿನ ಆದೇಶದ ವರೆಗೆ ಸುಪ್ರೀಂಕೋರ್ಟ್ ತಡೆಹಿಡಿಯಿತು. ಮೀಸಲಾತಿಯ ಫಲಾನುಭವಿಗಳಾದ ಹಿಂದುಳಿದ ಜಾತಿಗಳನ್ನು ಗುರುತಿಸಿದ ವಿಧಾನದ ಬಗ್ಗೆ ಪ್ರಮುಖವಾಗಿ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಅರಿಜಿತ್ ಪಸಾಯತ್ ಮತ್ತು ಎಲ್. ಎಸ್. ಪಂಟಾ, `ಮೀಸಲಾತಿ ನಿರ್ಧರಿಸಲು 1931ರ ಜಾತಿ ಆಧಾರಿತ ಜನಗಣತಿಯೊಂದೇ ಸೂಕ್ತ ಆಧಾರವಾಗಲಾರದು. ಆದ್ದರಿಂದ ಮುಂದಿನ ಆದೇಶದವರೆಗೆ ಈ ಕಾನೂನನ್ನು ಅನುಷ್ಠಾನಗೊಳಿಸಬಾರದು ಎಂದು 36 ಪುಟಗಳ ತೀರ್ಪಿನಲ್ಲಿ ಹೇಳಿದರು.

2007: 1984ರ ಸಿಖ್ ವಿರೋಧಿ ಗಲಭೆಗಳ ಕಾಲದಲ್ಲಿ ಹೆಡ್ ಕಾನ್ಸ್ಟೇಬಲ್ ನಿರಂಜನ ಸಿಂಗ್ ಮತ್ತು ಅವರ ಕುಟುಂಬದ ಇಬ್ಬರು ಸದಸ್ಯರನ್ನು ಹಲ್ಲೆ ನಡೆಸಿ ಕೊಂದು ನಂತರ ಅವರ ಶವಗಳಿಗೆ ಕಿಚ್ಚಿಟ್ಟು ನಾಶಪಡಿಸಿದ ಅಪರಾಧಕ್ಕಾಗಿ ದೆಹಲಿಯ ನ್ಯಾಯಾಲಯವೊಂದು ಮೂವರು ಅಪರಾಧಿಗಳಾದ ಹರಪ್ರಸಾದ ಭಾರಧ್ವಾಜ್, ಆರ್.ಪಿ. ತಿವಾರಿ, ಮತ್ತು ಜಗದೀಶ ಗಿರಿ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 5000 ರೂಪಾಯಿಗಳ ದಂಡ ವಿಧಿಸಿತು.

2006: ಕರ್ನಾಟಕ ಮಾಧ್ಯಮ ಅಕಾಡೆುಯು ವೀಕ್ ಪತ್ರಿಕೆಯ ಸಚ್ಚಿದಾನಂದ ಮೂರ್ತಿ ಅವರಿಗೆ 2005-06ನೇ ಸಾಲಿನ ವಿಶೇಷ ಪ್ರಶಸ್ತಿಯನ್ನೂ ಇತರ 18 ಮಂದಿ ಪತ್ರಕರ್ತರಿಗೆ ವಾರ್ಷಿಕ ಅಕಾಡೆಮಿ ಪ್ರಶಸ್ತಿಯನ್ನೂ ಪ್ರಕಟಿಸಿತು.

2006: ಇಂಟೆಲ್ ಟೆಕ್ನಾಲಜಿ ಲಿಮಿಟೆಡ್ ಸಂಸ್ಥೆಯು ಗ್ರಾಮೀಣ ಪ್ರದೇಶಗಳಿಗೆ ಹೊಂದಿಕೊಳ್ಳುವ ನೂತನ ಮಾದರಿಯ ಕಂಪ್ಯೂಟರುಗಳನ್ನು ಬಿಡುಗಡೆ ಮಾಡಿತು. ಗ್ರಾಮೀಣ ಪ್ರದೇಶದ ಮುಖ್ಯ ಸಮಸ್ಯೆಗಳಾದ ಧೂಳು, ವಿದ್ಯುತ್ ವ್ಯತ್ಯಯ ಮತ್ತಿತರ ತೊಂದರೆಗಳಿಗೆ ಈ ಕಂಪ್ಯೂಟರ್ ಪರಿಹಾರವಾಗಬಲ್ಲುದು. ವಿದ್ಯುತ್ ವ್ಯತ್ಯಯವಾದರೂ ಕನಿಷ್ಠ 8ರಿಂದ 10 ಗಂಟೆ ಬಳಸಬಹುದಾದ ಸಾಮರ್ಥ್ಯದ ಬ್ಯಾಟರಿ ಅಳವಡಿಸಲಾಗಿದ್ದು, ಧೂಳು ಕಂಪ್ಯೂಟರ್ ಒಳ ಸೇರದಂತೆ ಫಿಲ್ಟರ್ ಅಳವಡಿಸಲಾಗಿದೆ. ದರವೂ ಆಕರ್ಷಕವಾಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಬಿಲ್ ಸ್ಯೂ ದೆಹಲಿಯಲ್ಲಿ ಪ್ರಕಟಿಸಿದರು.

2006: ದೇಶದಲ್ಲಿ ಗೋಹತ್ಯೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಲು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ಮತ್ತು ತರುಣ್ ಚಟರ್ಜಿ ಅವರನ್ನು ಒಳಗೊಂಡ ಪೀಠವು ನಿರಾಕರಿಸಿತು.

2006: ಉತ್ತರ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ಅಮರಸಿಂಗ್ ಅವರ ರಾಜ್ಯಸಭಾ ಸದಸ್ಯತ್ವವನ್ನು ಉಳಿಸುವ ಸಲುವಾಗಿ ಮುಲಾಯಂ ಸಿಂಗ್ ಸರ್ಕಾರವು ಮಸೂದೆಯೊಂದನ್ನು ತರಾತುರಿಯಲ್ಲಿ ಅಂಗೀಕರಿಸಿ 2003ರ ಅಕ್ಟೋಬರ್ 15ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲು ನಿರ್ಧರಿಸಿತು. `ಉತ್ತರ ಪ್ರದೇಶ ಅಭಿವೃದ್ಧಿ ಮಂಡಲಿ ಕಾಯ್ದೆ -2006'ರಲ್ಲಿ ಇಡೀ ಮಂಡಳಿಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರೂಪಾಂತರಿಸಿ ಅದಕ್ಕೆ ಸ್ಥಳೀಯ ಸಂಸ್ಥೆಗಳ ಮಟ್ಟದ ಅಧಿಕಾರ ನೀಡಲಾಯಿತು.

2006: ಮನುಕುಲದ ಒಳಿತು, ಶಾಂತಿ, ಸಂತಸಕ್ಕಾಗಿ ನಡೆಸಲಾಗುವ ಶತಮಾನದ ಮೊದಲ `ಅಥೀರತ್ರಮ್' ಯಾಗವು ಕೇರಳದ ಪುಟ್ಟ ಗ್ರಾಮ ಮೂಲಂಕೋಡ್ನಲ್ಲಿ ಆರಂಭವಾಯಿತು. ಯಾಗದ ವಿಧಿಗಳನ್ನು ನಡೆಸುವ `ಯಜಮಾನನ್' ಕಾವೇರಪ್ರ ಮಾರತ್ ಶಂಕರನಾರಾಯಣನ್ ಸೋಮಯಾಜಿಪ್ಪಾಡ್ ಆಗಮನದೊಂದಿಗೆ ಶ್ರೀಕುರುಂಬ ಭಗವತಿ ದೇವಾಲಯದಲ್ಲಿ 12 ದಿನಗಳ ಯಾಗ ಚಾಲನೆಗೊಂಡಿತು. 72 ಮಂದಿ ವೈದಿಕ ತಜ್ಞರಿಂದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದಗಳ ಮಂತ್ರಪಠಣ ನಡೆಯಿತು. ಕೇರಳದಲ್ಲಿ `ಅಗ್ನೀದಾನಮ್', `ಸೋಮಯಾಗಮ್' ಮತ್ತು `ಅಥೀರತ್ರಮ್' ಎಂಬ ಮೂರು ವಿಧದ ಯಾಗಗಳನ್ನು ನಡೆಸಲಾಗುತ್ತದೆ. ಇಡೀ ಯಾಗಶಾಲೆಯನ್ನು ಅಗ್ನಿಗೆ ಆಹುತಿ ನೀಡುವುದರೊಂದಿಗೆ `ಅಥೀರತ್ರಮ್' ಯಾಗ ಕೊನೆಗೊಳ್ಳುತ್ತದೆ.

1982: ತೆಲುಗು ಚಲನಚಿತ್ರ ನಟ ಎನ್.ಟಿ. ರಾಮರಾವ್ ಅವರ ಪ್ರಾದೇಶಿಕ ಪಕ್ಷ `ತೆಲುಗುದೇಶಂ' ಹೈದರಾಬಾದಿನಲ್ಲಿ ಉದಯವಾಯಿತು.

1965: ಸಂಗೀತ ಹಾಗೂ ಮೃದಂಗದಲ್ಲಿ ಖ್ಯಾತರಾದ ಆನೂರು ಅನಂತಕೃಷ್ಣ ಶರ್ಮ ಅವರು ಖ್ಯಾತ ಸಂಗೀತ ಮನೆತನದ ಆನೂರು ರಾಮಕೃಷ್ಣ- ಶ್ರೀಲಕ್ಷ್ಮಿ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1957: ನೂತನ ಸಂಸತ್ತಿನ ಕಾಂಗ್ರೆಸ್ ಪಕ್ಷದ ನಾಯರಾಗಿ ಪ್ರಧಾನಿ ಜವಾಹರಲಾಲ್ ನೆಹರೂ ಸರ್ವಾನುಮತದಿಂದ ಆಯ್ಕೆಯಾದರು.

1953: ಕಲಾವಿದ ಉದಯಶಂಕರ ಜನನ.

1949: ಕಲಾವಿದ ಎಂ.ಎಸ್. ಗೋವಿಂದಸ್ವಾಮಿ ಜನನ.

1939: ಕಲಾವಿದ ನಾರಾಯಣ ಢಗೆ ಜನನ.

1929: ಭಾರತದ ಚಿತ್ರನಟ ಉತ್ಪಲ್ ದತ್ (1929-1993) ಹುಟ್ಟಿದ ದಿನ.

1914: ಮದರ್ ಆಫ್ ಅರೋವಿಲ್ ಎಂದೇ ಖ್ಯಾತಳಾಗಿರುವ ಮಿರ್ರಾ ಅಲ್ಫಾಸಾ ಅವರು ಪಾಂಡಿಚೆರಿಯಲ್ಲಿ (ಈಗಿನ ಪುದುಚೆರಿ) ಅರವಿಂದ ಘೋಷ್ ಅವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿ ಮಾಡಿದರು.

1912: ಜರ್ಮನಿಯ ಖ್ಯಾತ ವಿಮಾನ ಹಾರಾಟಗಾರ್ತಿ ಹನ್ನಾ ರೀಟ್ಸ್ಷ್ ಹುಟ್ಟಿದ ದಿನ. ಆಲ್ಫ್ ಪರ್ವತ ಶ್ರೇಣಿಯ ಮೇಲಿನಿಂದ ಗ್ಲೈಡರ್ ಹಾರಿಸಿದ ಪ್ರಥಮ ವ್ಯಕ್ತಿ ಈಕೆ. ಬರ್ಲಿನ್ನಿನ ಭೂಗತ ಬಂಕರಿನಲ್ಲಿ ಹಿಟ್ಲರನನ್ನು ಜೀವಂತವಾಗಿ ನೋಡಿದ ಕೊನೆಯ ವ್ಯಕ್ತಿಗಳ್ಲಲಿ ಈಕೆ ಕೂಡ ಒಬ್ಬಳು.

1869: ಇಂಗ್ಲಿಷ್ ಶಿಲ್ಪಿ ಎಡ್ವಿನ್ ಲ್ಯೂಟಿನ್ಸ್ (1869-1944) ಜನ್ಮದಿನ. ನವದೆಹಲಿಯ ಯೋಜನೆ ಹಾಗೂ `ವೈಸ್ರಾಯ್ಸ್ ಹೌಸ್'ನ ವಿನ್ಯಾಸ ರೂಪಿಸಿದ ವ್ಯಕ್ತಿ ಈತ. ಈತ ರೂಪಿಸಿದ `ವೈಸ್ರಾಯ್ಸ್ ಹೌಸ್' ಈಗ ರಾಷ್ಟ್ರಪತಿ ಭವನ.

1849: ಲಾರ್ಡ್ ಡಾಲ್ ಹೌಸಿಯು ಪಂಜಾಬ್ನ್ನು ವಶಪಡಿಸಿಕೊಂಡ.

1857: ಯುವ ಸೈನಿಕ ಮಂಗಲಪಾಂಡೆ ಬ್ಯಾರಕ್ ಪುರದಲ್ಲಿ ತನ್ನ ತುಕಡಿಯ ಸಾರ್ಜೆಂಟ್ ಮೇಜರನತ್ತ ಗುಂಡು ಹಾರಿಸಿದ. ಪಾಂಡೆಯನ್ನು ನಿರಾಯುಧನನ್ನಾಗಿ ಮಾಡಿ ನಂತರ ಗಲ್ಲಿಗೇರಿಸಲಾಯಿತು. ಈ ಘಟನೆ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮಕ್ಕೆ (ಸಿಪಾಯಿ ದಂಗ) ಮೂಲವಾಯಿತು.

1815: ಸರ್ ಹೆನ್ರಿ ಬಾರ್ಟಲ್ ಫ್ರೇರ್ (1815-1884) ಹುಟ್ಟಿದ ದಿನ. ಭಾರತದಲ್ಲಿ ಬ್ರಿಟಿಷ್ ವಸಾಹತಿನ ಆಡಳಿತಗಾರನಾಗಿದ್ದ ಈತ ಐದು ವರ್ಷಗಳ ಕಾಲ ಬಾಂಬೆಯ (ಈಗಿನ ಮುಂಬೈ) ಗವರ್ನರ್ ಆಗಿದ್ದ.

No comments:

Advertisement