My Blog List

Monday, March 29, 2010

ಇಂದಿನ ಇತಿಹಾಸ History Today ಫೆಬ್ರುವರಿ 23

ಇಂದಿನ ಇತಿಹಾಸ

ಫೆಬ್ರುವರಿ 23

ಜಗತ್ತಿನ ಚಲನಚಿತ್ರರಂಗದ ಚರಿತ್ರೆಯಲ್ಲಿ ಭಾರತದ ಚಿನ್ನದ ಅಧ್ಯಾಯವೊಂದು ತೆರೆದುಕೊಂಡಿತು. ಭಾರತದ ಪಾಲಿಗೆ ದಶಕಗಳ ಕಾಲ ಕಂಡೂ ಕಾಣದೆ ಮರೀಚಿಕೆಯಂತಿದ್ದ ಆಸ್ಕರ್ ಕಿರೀಟವು 'ಸ್ಲಂಡಾಗ್ ಮಿಲಿಯನೇರ್' ಮೂಲಕ ಈ ನಾಡಿಗೆ ಲಭಿಸಿತು. ಮುಂಬೈ ಕೊಳೆಗೇರಿಯ ಬದುಕಿನ ಕಥಾನಕವೊಂದರ ಸುತ್ತ ಹೆಣೆದುಕೊಂಡ 'ಸ್ಲಂಡಾಗ್ ಮಿಲಿಯನೇರ್'ಗೆ ಸಂಗೀತ ನೀಡಿದ ಎ ಆರ್ ರೆಹಮಾನ್ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇರಳದ ಕೊಲ್ಲಮ್ ಜಿಲ್ಲೆಯ ರಸೂಲ್ ಪೂಕುಟ್ಟಿ ಇದೇ ಚಿತ್ರಕ್ಕಾಗಿ ಅತ್ಯುತ್ತಮ ಧ್ವನಿಸಂಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡರು

2009: ಜಗತ್ತಿನ ಚಲನಚಿತ್ರರಂಗದ ಚರಿತ್ರೆಯಲ್ಲಿ ಭಾರತದ ಚಿನ್ನದ ಅಧ್ಯಾಯವೊಂದು ತೆರೆದುಕೊಂಡಿತು. ಭಾರತದ ಪಾಲಿಗೆ ದಶಕಗಳ ಕಾಲ ಕಂಡೂ ಕಾಣದೆ ಮರೀಚಿಕೆಯಂತಿದ್ದ ಆಸ್ಕರ್ ಕಿರೀಟವು 'ಸ್ಲಂಡಾಗ್ ಮಿಲಿಯನೇರ್' ಮೂಲಕ ಈ ನಾಡಿಗೆ ಲಭಿಸಿತು. ಮುಂಬೈ ಕೊಳೆಗೇರಿಯ ಬದುಕಿನ ಕಥಾನಕವೊಂದರ ಸುತ್ತ ಹೆಣೆದುಕೊಂಡ 'ಸ್ಲಂಡಾಗ್ ಮಿಲಿಯನೇರ್'ಗೆ ಸಂಗೀತ ನೀಡಿದ ಎ ಆರ್ ರೆಹಮಾನ್ ಎರಡು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೇರಳದ ಕೊಲ್ಲಮ್ ಜಿಲ್ಲೆಯ ರಸೂಲ್ ಪೂಕುಟ್ಟಿ ಇದೇ ಚಿತ್ರಕ್ಕಾಗಿ ಅತ್ಯುತ್ತಮ ಧ್ವನಿಸಂಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡರು. ಭಾರತೀಯ ಕಾಲಮಾನದ ಅನ್ವಯ ಲಾಸ್ ಏಂಜಲೀಸಿನಲ್ಲಿ ನಡೆದ ಕಾರ್ಯಕ್ರಮವನ್ನು ಈದಿನ ಬೆಳಗ್ಗೆ ಆರೂವರೆಯಿಂದ ಭಾರತದ ಕೋಟ್ಯಂತರ ಮಂದಿ ವೀಕ್ಷಿಸಿದರು. ರೆಹಮಾನ್ ಮತ್ತು ಪೂಕುಟ್ಟಿ ವೇದಿಕೆ ಏರಿ 'ಪ್ರಶಸ್ತಿ' ಸ್ವೀಕರಿಸುತ್ತ್ದಿದುದನ್ನು ಭಾರತದಾದ್ಯಂತ ಅಸಂಖ್ಯಾತ ಮಂದಿ ಟೀವಿಯ ಮೇಲೆ ವೀಕ್ಷಿಸುತ್ತಾ ರೋಮಾಂಚನಗೊಂಡರು. ಭಾರತೀಯ ಚಿತ್ರರಂಗದ 'ದಂತಕಥೆ' ಸತ್ಯಜಿತ್ ರಾಯ್ ಅವರು ಜೀವನಶ್ರೇಷ್ಠ ಸಾಧನೆಗಾಗಿ 1992ರಲ್ಲಿ ಆಸ್ಕರ್ ಕಿರೀಟ ಧರಿಸಿದ್ದರೆ, ಅದಕ್ಕೂ ಮೊದಲು 1983ರಲ್ಲಿ ರಿಚರ್ಡ್ ಅಟೆನ್ ಬರೋ ಅವರ 'ಗಾಂಧಿ' ಚಿತ್ರದಲ್ಲಿ ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ಭಾನು ಅಥೇಯಾ ಈ ಪ್ರಶಸ್ತಿ ಪಡೆದಿದ್ದರು. ಈ ಎರಡು ಆಸ್ಕರ್ 'ಮಿಂಚು'ಗಳನ್ನು ಹೊರತು ಪಡಿಸಿದರೆ ಭಾರತೀಯರ ಪಾಲಿಗೆ ಮರೀಚಿಕೆಯಂತಿದ್ದ ಆಸ್ಕರ್ ಇದೀಗ ಏಕಾಏಕಿ ಹೊಳೆಯಾಗಿ ಹರಿದು ಬಂದಿತು. ಭಾರತೀಯ ರಾಜತಾಂತ್ರಿಕ ವಿಕಾಸ್ ಸ್ವರೂಪ್ ಅವರ 'ಕ್ಯೂ ಅಂಡ್ ಎ' ಕಾದಂಬರಿ ಆಧಾರಿತ 'ಸ್ಲಂಡಾಗ್ ಮಿಲಿಯನೇರ್' 81ನೇ ಅಕಾಡೆಮಿ ಪ್ರಶಸ್ತಿಗಳ ಹತ್ತು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿತ್ತು. ಸ್ಲಂಡಾಗ್ ಮಿಲಿಯನೇರ್ ನಿರ್ದೇಶಕ ಇಂಗ್ಲೆಂಡಿನ ಡ್ಯಾನಿ ಬೊಯ್ಲಾ ಅವರಿಗಂತೂ ಹೇಳಿತೀರದ ಸಂತಸ. ಅವರ ಈ 'ಸಾಧನೆ'ಗೆ ಅತ್ಯುತ್ತಮ ಚಿತ್ರ ಮತ್ತು ಅತ್ಯುತ್ತಮ ನಿರ್ದೆಶಕ ಪ್ರಶಸ್ತಿಗಳು ಲಭ್ಯವಾದವು. ಇದಲ್ಲದೆ ಇತರ 6 ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿತು.


2009: ಕಾನ್ಪುರದ ಭಾರತೀಯ ತಾಂತ್ರಿಕ ಸಂಸ್ಥೆ (ಐಐಟಿ) ವೈ-ಫೈ ಜಾಲ ಭೇದಿಸುವುದನ್ನು ತಡೆಯುವ ನೂತನ ತಂತ್ರಜ್ಞಾನವನ್ನು ಕಂಡು ಹಿಡಿಯಿತು. ಇದರ ಮೂಲಕ ಭಯೋತ್ಪಾದಕರು ರಹಸ್ಯ ತಾಣದಲ್ಲಿ ಕುಳಿತು ಮಾಹಿತಿಗಳನ್ನು ಕಲೆ ಹಾಕಿ ದಾಳಿಯ ಸಂಚು ರೂಪಿಸುವುದನ್ನು ತಡೆಯಬಹುದು. ಅಹಮದಾಬಾದಿನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ನಂತರ ಇಂಟರ್‌ನೆಟ್ ಪ್ರೊಟೊಕಾಲ್ (ಐಫೈ) ಮೂಲಕ ಭಯೋತ್ಪಾದಕರು ವಿವರ ಸಂಗ್ರಹಿಸಿ ದಾಳಿಯ ಸಂಚು ರೂಪಿಸಿರುವುದು ಬೆಳಕಿಗೆ ಬಂದಿತ್ತು. ವೈರ್‌ಲೆಸ್ ಇಂಟ್ರೂಶನ್ ಫ್ರೈವೆನ್ಸ್‌ನ್ ಸಿಸ್ಟಂ (ವಿಪ್ಸ್) ಎಂದು ಕರೆಯಲಾಗುವ ಈ ಹೊಸ ತಂತ್ರಜ್ಞಾನದಲ್ಲಿ ಯಾರೇ ಮಾಹಿತಿ ಕದಿಯಲು ಯತ್ನಿಸಿದರೆ ವೈ-ಫೈ ಪದ್ಧತಿಯಲ್ಲಿ ಅಳವಡಿಸಲಾದ ಸೆನ್ಸಾರ್ ಕೂಗಿಕೊಳ್ಳುತ್ತದೆ ಮತ್ತು ಮಾಹಿತಿ ದೊರೆಯದಂತೆ ಲಾಕ್ ಆಗುತ್ತದೆ ಎಂದು ಐಐಟಿ ಕಾನ್ಪುರದ ನಿರ್ದೇಶಕ ಸಂಜಯ್ ಗೋವಿಂದ ಧಾಂಡೆ ಹೇಳಿದರು. ಪ್ರವೀಣ್ ಭಾಗವತ್ ಅವರ ತಂಡ ಈ ಹೊಸ ತಂತ್ರಜ್ಞಾನವನ್ನು ಆವಿಷ್ಕಾರ ಮಾಡಿದೆ. ಅಹಮದಾಬಾದ್ ಬಾಂಬ್ ಸ್ಫೋಟದಲ್ಲಿ ಸರ್ಕಾರಿ ಮತ್ತು ವ್ಯವಹಾರ ಕೇಂದ್ರಗಳಲ್ಲಿ ಅಳವಡಿರುವ ವೈ-ಫೈ ಸಿಸ್ಟಂ ಮೂಲಕ ಭಯೋತ್ಪಾದಕರು ಮಾಹಿತಿ ಕಲೆಹಾಕಲು ಮುಂದಾಗಿದ್ದರು. ಭದ್ರತಾ ಏಜೆನ್ಸಿಗಳಿಗೆ ಈ ರಹಸ್ಯ ತಿಳಿದಿರಲಿಲ್ಲ. ಆದರೆ ಈಗ ಕಂಡುಹಿಡಿಯಲಾಗಿರುವ ಹೊಸ ತಂತ್ರಜ್ಞಾನದಿಂದ ಉಗ್ರರಿಗೆ ಯಾವುದೇ ಕೃತ್ಯಕ್ಕೂ ಮಾಹಿತಿ ದೊರೆಯಲಾರದು. ಅಹಮದಾಬಾದ್‌ನ ಸರಣಿ ಸ್ಫೋಟದ ಹೊಣೆ ಹೊತ್ತು ಅಮೆರಿಕದ ಹೇವುಡ್ ಕಂಪ್ಯೂಟರ್ ಕೇಂದ್ರದಿಂದ ಕಳೆದ ವರ್ಷದ ಜುಲೈ 27 ರಂದು ಒಂದು ಈ ಮೇಲ್ ಬಂದಿತ್ತು. ಆದರೆ ಈ ಕೇಂದ್ರದ ಮುಖ್ಯಸ್ಥರು ತಮಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದರು. ಇಂಟರ್‌ನೆಟ್ ಪ್ರೊಟೊಕಾಲ್ (ವೈ-ಫೈ) ವಿಳಾಸವನ್ನು ಬಳಸಿಕೊಂಡು ಈ ಕೆಲಸ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದರು.

2009: ಆಸ್ಕರ್ ಚಿತ್ರದ ಬೆಡಗಿ... ಫ್ರೀದಾ: ಮಂಗಳೂರು ಹುಡುಗಿ. ಸದಾ ಸ್ದುದಿಯಲ್ಲಿರುವ ಊರು ಮಂಗಳೂರು. ಅದು ದೇಶಕ್ಕೆ ಪ್ರತಿಷ್ಠಿತ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಾಗಲೂ ನಂಟು ಹಾಕಿಕೊಳ್ಳುತ್ತದೆ. ವಿಶ್ವಸುಂದರಿ ಪಟ್ಟ ಅಲಂಕರಿಸಿದ ಐಶ್ವರ್ಯ ರೈ, ಬೂಕರ್ ಪಡೆದ ಅರವಿಂದ ಅಡಿಗ, ಈಗ ಆಸ್ಕರ್ ವಿಜೇತ ಚಿತ್ರದ ಫ್ರೀದಾ... ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯಲ್ಲಿ 'ಸ್ಲಮ್ ಡಾಗ್ ಮಿಲಿಯನೇರ್' ಸಿಂಹಪಾಲು ಪಡೆಯುವುದರೊಂದಿಗೆ ಚಿತ್ರದ ನಟಿ ಫ್ರೀದಾ ಪಿಂಟೋ ಅವರ ಮಂಗಳೂರು ಮೂಲವೂ ಪ್ರಸಿದ್ಧಿಗೆ ಬಂತು. ಫ್ರೀದಾ ಪಿಂಟೋ ಸಂದರ್ಶನವೊಂದರಲ್ಲಿ ತಮ್ಮ ಮೂಲ ಮಂಗಳೂರು ಎಂದು ಹೇಳಿದರು. ಆದರೆ ಆಕೆಯ ತಂದೆ ತಾಯಿ ಬಹಳ ವರ್ಷಗಳ ಹಿಂದೆಯೇ ಮುಂಬೈಗೆ ತೆರಳಿದ್ದರು. ಸದ್ಯ ಮುಂಬೈ ವಾಸಿಗಳು. ಫ್ರೀದಾಳ ತಂದೆ ಕಾರ್ಕಳ ತಾಲ್ಲೂಕಿನ ನೀರುಡೆಯ ಫ್ರೆಡ್ರಿಕ್ ಪಿಂಟೋ. ಪ್ರಸ್ತುತ ಬ್ಯಾಂಕ್ ಆಫ್ ಬರೋಡಾದ ಮುಂಬೈ ಶಾಖೆಯಲ್ಲಿ ಹಿರಿಯ ಪ್ರಬಂಧಕ. ತಾಯಿ ಮಂಗಳೂರು ದೇರೆಬೈಲಿನ ಸಿಲ್ವಿಯಾ ಪಿಂಟೋ. ಮುಂಬೈಯ ಸಂತ ಜೋನ್ಸ್ ಪ್ರೌಢಶಾಲೆಯ ಪ್ರಾಂಶುಪಾಲೆ. ಈ ದಂಪತಿಯ ಎರಡನೇ ಮಗಳು ಫ್ರೀದಾ. ಪಿಂಟೋ ಎಂಬುದು ಗೋವಾ ಮೂಲದಿಂದ ಮಂಗಳೂರಿಗೆ ಬಂದ ಒಂದು ಪಂಥಾನುಯಾಯಿ ಕೊಂಕಣಿ ಕ್ರೈಸ್ತರ ಸರ್‌ನೇಮ್. ಪಿಂಟೋ ಹೆಸರಿನ ಮಂದಿ ಹೆಚ್ಚಾಗಿರುವುದು ಮಂಗಳೂರು, ಗೋವಾ, ಮುಂಬೈ ಕರಾವಳಿಯಲ್ಲಿ.
ಫ್ರೀದಾಗೆ ತಮ್ಮ ಮಂಗಳೂರು ಮೂಲದ ಬಗ್ಗೆ ಹೆಮ್ಮೆಯಿದೆ. ಇಲ್ಲಿನ ದೈಜಿ ವರ್ಲ್ಡ್ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ, 'ನಾನು ಮೊದಲು ಭಾರತೀಯಳು ಹಾಗೂ ಮಂಗಳೂರಿನವಳು. ಯಾಕೆಂದರೆ ನನ್ನ ತಂದೆ- ತಾಯಿ ಮಂಗಳೂರಿನವರು. ಬಾಲ್ಯದ ಕೆಲ ಸಮಯವನ್ನು ಮಂಗಳೂರಿನಲ್ಲಿ ಕಳೆದ್ದಿದೇನೆ' ಎಂದು ಹೇಳಿದರು.

2009: ಕನ್ನಡ ಚಲನಚಿತ್ರ ಕಲಾವಿದರು, ಕಾರ್ಮಿಕರು ಮತ್ತು ತಂತ್ರಜ್ಞರ ಒಕ್ಕೂಟವು ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ.ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಆಯೋಜಿಸಿದ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್ ಚಾಲನೆ ನೀಡಿದರು. ಅಮೃತ ಮಹೋತ್ಸವ ಕುರಿತು ಪ್ರಚಾರ ನೀಡುವ ಉದ್ದೇಶಕ್ಕಾಗಿ ರೂಪಿಸಿದ ಬೇಲೂರು ಶಿಲಾಬಾಲಿಕೆ ಮಾದರಿಯ ಸ್ತಬ್ಧಚಿತ್ರವನ್ನು ಅನಾವರಣ ಮಾಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಲಾಯಿತು. ಬಳಿಕ ಪಾರ್ವತಮ್ಮ ಅವರು, ಕನ್ನಡ ಚಿತ್ರರಂಗದ ಹಲವು ಗಣ್ಯರನ್ನು ಗೌರವಿಸಿದರು.

2008: ಕನ್ನಡದ ಖ್ಯಾತ ಸಾಹಿತಿ ಯಶವಂತ ಚಿತ್ತಾಲ ಅವರಿಗೆ ಅವರ ಕರ್ಮಭೂಮಿಯಾದ ಮಹಾನಗರ ಮುಂಬೈಯಲ್ಲಿ ಅಪಾರ ಸಂಖ್ಯೆಯ ಕನ್ನಡಿಗರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮುಂಬೈಯ ಕನ್ನಡ ಸಂಘಗಳ ಸಹಕಾರದಿಂದ ಏರ್ಪಡಿಸಿದ ಸುವರ್ಣ ಕರ್ನಾಟಕ ಮುಂಬಯಿ ಉತ್ಸವದ ಸಂದರ್ಭದಲ್ಲಿ ನಾಡೋಜ ಪ್ರೊ. ದೇ.ಜವರೇಗೌಡ ಅವರು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಪತ್ರವನ್ನು ಒಳಗೊಂಡ ಪ್ರಶಸ್ತಿಯನ್ನು ಯಶವಂತ ಚಿತ್ತಾಲ ಅವರಿಗೆ ನೀಡಿದರು.

2008: ಬೀದರಿನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಬ್ರಿಟನ್ ನಿರ್ಮಿತ ಅತ್ಯಾಧುನಿಕ `ಹಾಕ್ ಎಂ.ಕೆ. 132' (ಅಡ್ವಾನ್ಸ್ಡ್ ಜೆಟ್ ಟ್ರೇನರ್) ಯುದ್ಧವಿಮಾನಗಳನ್ನು ದೇಶಕ್ಕೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ವಾಯುಪಡೆಯ ಅಂಚೆ ವಿಭಾಗವು ಸಿದ್ಧಪಡಿಸಿದ ವಿಶೇಷ ಲಕೋಟೆಯನ್ನು ರಕ್ಷಣಾ ಸಚಿವರು ಬಿಡುಗಡೆಗೊಳಿಸಿದರು.

2008: ವಾಣಿಜ್ಯ ಉದ್ದೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಕಡ್ಡಾಯ ಆದೇಶ ವಿರೋಧಿಸಿ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳು ಕರೆ ಮೇರೆಗೆ ನಡೆದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ದಕ್ಷಿಣ ಭಾಗದಲ್ಲಿ ಮುಷ್ಕರ ಬಹುತೇಕ ಯಶಸ್ವಿಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಲಿಲ್ಲ.

2008: ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಮಾಜಿ ನಿರ್ದೇಶಕ ಮತ್ತು ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಖ್ಯಾತ ಉದ್ಯಮಿ ವಿ.ಟಿ.ವೇಲು (88) ಬೆಂಗಳೂರಿನಲ್ಲಿ ನಿಧನರಾದರು. ಉದ್ಯಮಿ ವಿ.ಎಸ್. ತಿರುವೆಂಗಡಸ್ವಾಮಿ ಮುದಲಿಯಾರ್ ಅವರ ಪುತ್ರ ವಿ.ಟಿ.ವೇಲು ಅವರು ಬೆಂಗಳೂರಿನ ಆರ್ ಬಿ ಎ ಎನ್ ಎಂ ಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಮದ್ರಾಸಿನಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೊಳಿಸಿ ಉದ್ಯಮಕ್ಷೇತ್ರದತ್ತ ಆಸಕ್ತಿ ತಳೆದರು. ಇಂಡಿಯಾ ಗ್ಯಾರೇಜ್ ಮತ್ತು ಸದರ್ನ್ ಮೋಟಾರ್ಸ್ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ವಿ ಎಸ್ ಟಿ ಮೋಟಾರ್ಸ್ ಲಿಮಿಟೆಡ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಜೂನ್ 1967ರಲ್ಲಿ ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಕೆಲ ವರ್ಷಗಳ ಕಾಲ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮಿಟ್ಸುಬಿಷಿ ಪವರ್ ಟಿಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮೂವತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಮೈಸೂರು ಪೇಪರ್ ಮಿಲ್ಸ್, ಚೋಳಮಂಡಲಂ ಇನ್ವೆಸ್ಟ್ ಮೆಂಟ್ ಅಂಡ್ ಫೈನಾನ್ಸ್ ಲಿಮಿಟೆಡ್, ಹಟ್ಟಿ ಗೋಲ್ಡ್ ಮೈನ್ಸ್ ಮತ್ತು ಲಕ್ಷ್ಮಿ ಮಿಲ್ಸ್ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಥಾಪನೆಗೊಳ್ಳುವ ಮುನ್ನ ನಗರಾಭಿವೃದ್ಧಿಗಾಗಿ ರೂಪಿಸಲಾಗಿದ್ದ ಮಂಡಳಿಗೆ ಸದಸ್ಯರಾಗಿ ವೇಲು ಅವರನ್ನು ಸರ್ಕಾರ ನಾಮಕರಣ ಮಾಡಿತ್ತು. ಟೆನ್ನಿಸ್ ಪಟು ಕೂಡ ಆಗಿದ್ದ ಅವರು ಮೈಸೂರು ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್, ಬೆಂಗಳೂರು ಟರ್ಫ್ ಕ್ಲಬ್ ಮತ್ತು ಬೆಂಗಳೂರು ಕ್ಲಬ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಮಲಾಬಾಯಿ ಬಾಲಕಿಯರ ಶೈಕ್ಷಣಿಕ ಟ್ರಸ್ಟಿನ ಗೌರವ ಕಾರ್ಯದರ್ಶಿ ಮತ್ತು ರೋಟರಿ ಕ್ಲಬ್ ಸದಸ್ಯರಾಗಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು.

2008: ಕೊಂಕಣಿಯ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರು ಸಾಧಕರಾದ ಸಾಹಿತ್ಯ ಕ್ಷೇತ್ರದ ಉಡುಪಿಯ ಡಾ. ಜೆರಾಲ್ಡ್ ಪಿಂಟೋ, ಜಾನಪದ ಕ್ಷೇತ್ರದ ಕುಂಬ್ರಿ ಹೊನ್ನಾವರದ ಮಂಜಯ್ಯ ಶಿವು ಹಾಗೂ ಕಲೆ (ನಾಟಕ) ಕ್ಷೇತ್ರದ ಮಂಗಳೂರಿನ ಫ್ರಾನ್ಸಿಸ್ ಫರ್ನಾಂಡಿಸ್ ಕಾಸ್ಸಿಯಾ ಅವರನ್ನು ಕೊಂಕಣಿ ಸಾಹಿತ್ಯ ಅಕಾಡೆಮಿಯ 2007ನೇ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು.

2008: `ಚೀನಿ ಕಮ್' ಚಿತ್ರದಲ್ಲಿ ಅಭಿನಯಕ್ಕಾಗಿ ನಟಿ ಟಬು ಫಿಲಂ ಫೇರ್ ಪ್ರಶಸ್ತಿಯ `ಉತ್ತಮ ನಟಿ' ಗೌರವವನ್ನು ತಮ್ಮದಾಗಿಸಿಕೊಂಡರು. `ತಾರೆ ಜಮೀನ್ ಪರ್' ಚಿತ್ರದ ದರ್ಶೀಲ್ ಉತ್ತಮ ನಟ ಪ್ರಶಸ್ತಿ ಗಳಿಸಿದರು. ಶಾರುಕ್ ಖಾನ್ ನಟಿಸಿದ `ಚಕ್ ದೇ ಇಂಡಿಯ'ವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, `ಗುರು' ಚಿತ್ರಕ್ಕಾಗಿ ಎ. ಆರ್. ರೆಹಮಾನ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.

2007: ನಿತಾರಿ ಮಕ್ಕಳ ಸರಣಿ ಹತ್ಯೆ ಹಿನ್ನೆಲಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಸ್ತಿತ್ವಕ್ಕೆ ಬಂತು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಶಾಂತಾ ಸಿನ್ಹಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಕ್ಕಳ ಹಕ್ಕುಗಳ ಸೂಕ್ತ ಜಾರಿ ಹಾಗೂ ಅವರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ಈ ಆಯೋಗದ್ದು.

2007: ಅಲ್ಕಟೆಲ್-ಲುಸೆಂಟ್ ಸಂಸ್ಥೆ ಹಕ್ಕುಸ್ವಾಮ್ಯ ಹೊಂದಿದ್ದ ಆಡಿಯೋ ತಂತ್ರಜ್ಞಾನವನ್ನು ಕೃತಿ ಚೌರ್ಯ ಮಾಡ್ದಿದಕ್ಕಾಗಿ 15.2 ಕೋಟಿ ಡಾಲರ್ (ಸುಮಾರು 6800 ಕೋಟಿ ರೂಪಾಯಿ) ನಷ್ಟ ತುಂಬಿಕೊಡಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟ್ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಗೆ ಆದೇಶ ನೀಡಿತು.

2007: ಪಾಕಿಸ್ಥಾನವು 2000 ಕಿ.ಮೀ. ವ್ಯಾಪ್ತಿಯ ದೂರಗಾಮೀ ಕ್ಷಿಪಣಿ `ಶಹೀನ್-2'ರ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ನಿರ್ದಿಷ್ಟ ಗುರಿಯ ಮೇಲೆ ಕರಾರುವಾಕ್ಕಾಗಿ ಸ್ಫೋಟಿಸುವ ಸಾಮರ್ಥ್ಯ ಹೊಂದಿದೆ.

2007: ರಂಗಭೂಮಿಯ ಕಲಾ ಕಣಜ ಎಂದೇ ಖ್ಯಾತರಾಗಿದ್ದ ರಂಗ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣ್ಣಿ ವೀರಭದ್ರಪ್ಪ (97) ಅವರು ಹೂವಿನ ಹಡಗಲಿ ಪಟ್ಟಣದಲ್ಲಿ ನಿಧನರಾದರು.

2007: ನೇಪಾಳದ ರಾಜಕುಟುಂಬದ ಹತ್ಯಾಕಾಂಡದ (2001) ಕಥಾ ನಾಯಕಿ ದೇವಯಾನಿ (34) ರಾಣಾ ಅವರ ಮದುವೆ ಭಾರತದ ಕೇಂದ್ರ ಸಚಿವ ಅರ್ಜುನ್ ಸಿಂಗ್ ಅವರ ಮೊಮ್ಮಗ 25ರ ಹರೆಯದ ಉದ್ಯಮಿ ಐಶ್ವರ್ಯಸಿಂಗ್ ಜೊತೆ ನವದೆಹಲಿಯಲ್ಲಿ ನಡೆಯಿತು.

2006: ರಷ್ಯಾ ರಾಜಧಾನಿ ಮಾಸ್ಕೋದಲ್ಲಿನ ಒಳಾಂಗಣ ವಾಣಿಜ್ಯ ಸಮುಚ್ಛಯ ಕುಸಿದು ಬಿದ್ದು 40 ಜನ ಮೃತರಾಗಿ 24ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಆಫ್ರಿಕಾ ಖಂಡದ ಮೊಜಾಂಬಿಕ್, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಫೆಬ್ರುವರಿ 22 ಮಧ್ಯರಾತ್ರಿ ಪ್ರಬಲ ಭೂಕಂಪ ಸಂಭವಿಸಿತು. 100 ವರ್ಷಗಳ ನಂತರ ಆಫ್ರಿಕಾದಲ್ಲಿ ಇಂತಹ ಪ್ರಬಲ ಭೂಕಂಪ ಸಂಭವಿಸಿತು.
2006: ಚಿತ್ರನಟಿ ಪ್ರೇಮಾ ಅವರ ನಿಶ್ಚಿತಾರ್ಥ ಸಾಫ್ಟ್ ವೇರ್ ಎಂಜಿನಿಯರ್ ಜೀವನ್ ಅಪ್ಪಚ್ಚು ಅವರ ಜೊತೆಗೆ ಬೆಂಗಳೂರಿನಲ್ಲಿ ನೆರವೇರಿತು.

2006: ಪ್ರೋತ್ಸಾಹದ ಮತ್ತು ಪ್ರಾಯೋಜಕರ ಕೊರತೆಯ ಕಾರಣ ಕರ್ನಾಟಕದ ಖ್ಯಾತ ಈಜುಗಾರ್ತಿ ನಿಶಾ ಮಿಲ್ಲೆಟ್ ನಿವೃತ್ತಿ ಘೋಷಿಸಿದರು.

2000: ವರ್ಷದ ಆಲ್ಬಮ್ ಸೇರಿದಂತೆ ಎಂಟು ಗ್ರಾಮ್ಮಿ ಪ್ರಶಸ್ತಿಗಳನ್ನು `ಸೂಪರ್ ನ್ಯಾಚುರಲ್' ಗಾಗಿ ಗೆದ್ದ ಕಾರ್ಲೋಸ್ ಸಂಟಾನಾ ಅವರು 1983ರಲ್ಲಿ ಒಂದೇ ರಾತ್ರಿಯಲ್ಲಿ ಮೈಕೆಲ್ ಜಾಕ್ಸನ್ ಮಾಡಿದ್ದ ದಾಖಲೆಗಳನ್ನು ಸರಿಗಟ್ಟಿದರು.
1997: ಸ್ಕಾಟ್ ಲ್ಯಾಂಡಿನಲ್ಲಿ ವಿಜ್ಞಾನಿಗಳು ವಯಸ್ಕ ಸ್ತನಿಯ ತದ್ರೂಪು ಸೃಷ್ಟಿಯಲ್ಲಿ (ಕ್ಲೋನಿಂಗ್) ತಾವು ಯಶಸ್ವಿಯಾಗಿದ್ದು ಈ ವಿಧಾನದಲ್ಲಿ `ಡಾಲಿ' ಹೆಸರಿನ ಕುರಿ ಮರಿಯನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿದರು.

1954: ಪಿಟ್ಸ್ ಬರ್ಗಿನಲ್ಲಿ ಮೊತ್ತ ಮೊದಲ ಬಾರಿಗೆ ಪೋಲಿಯೊ ವಿರುದ್ಧ ಮಕ್ಕಳಿಗೆ ಸಾಮೂಹಿಕ ಲಸಿಕೆ ಹಾಕಲಾಯಿತು.

1937: ರಾಜಲಕ್ಷ್ಮೀ ತಿರುನಾರಾಯಣ್ ಜನನ.

1935: ಕಲಾವಿದ ಎಚ್. ಎಂ. ಚೆನ್ನಯ್ಯ ಜನನ.

1930: ಖ್ಯಾತ ಸುಗಮ ಸಂಗೀತ ಗಾಯಕ ದೀನನಾಥ ಮಂಜೇಶ್ವರ ಅವರ ಶಿಷ್ಯ ಪರಂಪರೆಯ ಎಂ. ಎನ್. ಶೇಷಗಿರಿ (23-2-1930ರಿಂದ 15-2-2005) ಅವರು ನಿಂಗಪ್ಪ- ಗಂಗಮ್ಮ ದಂಪತಿಯ ಮಗನಾಗಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿದರು.

1905: ನಾಗರಿಕ ಸೇವಾ ಸಂಸ್ಥೆ ರೋಟರಿ ಕ್ಲಬ್ ಅಮೆರಿಕಾದಲ್ಲಿ ಸ್ಥಾಪನೆಗೊಂಡಿತು. ಷಿಕಾಗೊ ಅಟಾರ್ನಿ ಪಾವುಲ್ ಪಿ. ಹ್ಯಾರಿಸ್ ಇದರ ಸ್ಥಾಪಕರು. ಒಬ್ಬರ ಬಳಿಕ ಒಬ್ಬರಂತೆ ಸದಸ್ಯರ ಕಚೇರಿಗಳಲ್ಲಿ ಸಂಸ್ಥೆಯ ಸಭೆ ನಡೆಯಬೇಕಾಗಿದ್ದುದರಿಂದ ಇದಕ್ಕೆ `ರೋಟರಿ' ಹೆಸರನ್ನು ನೀಡಲಾಯಿತು. 1912ರಲ್ಲಿ ಇದರ ಹೆಸರು `ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ರೋಟರಿ ಕ್ಲಬ್ಸ್' ಎಂಬುದಾಗಿ ಬದಲಾಯಿತು. ಈಗಿನ `ರೋಟರಿ ಇಂಟರ್ ನ್ಯಾಷನಲ್' ಎಂಬ ಹೆಸರನ್ನು 1922ರಲ್ಲಿ ಅಂಗೀಕರಿಸಲಾಯಿತು.

1884: ಕಾಸಿಮೀರ್ ಫಂಕ್ (1884-1967) ಹುಟ್ಟಿದ ದಿನ. ಪೋಲಿಷ್ ಅಮೆರಿಕನ್ ಜೀವ ರಸಾಯನ ತಜ್ಞನಾದ ಈತ `ವಿಟಮಿನ್' ಶಬ್ಧವನ್ನು ಚಲಾವಣೆಗೆ ತಂದ.

1874: ಇಂಗ್ಲಿಷ್ ವ್ಯಕ್ತಿ ಮೇಜರ್ ವಾಲ್ಟೇರ್ ವಿಂಗ್ ಫೀಲ್ಡ್ `ಸ್ಪೆಯಿರಿಸ್ಟಿಕ್' (Sphairistike') ಹೆಸರಿನಲ್ಲಿ `ಲಾನ್ ಟೆನಿಸ್' ಆಟಕ್ಕೆ ಪೇಟೆಂಟ್ ಪಡೆದ.

1834: ಗುಸ್ತಾವ್ ನಾಚ್ಟಿಗಲ್ (1834-1885) ಹುಟ್ಟಿದ ದಿನ. ಜರ್ಮನ್ ಸಂಶೋಧಕನಾದ ಈತ ಸಹಾರಾ ಮರುಭೂಮಿಯನ್ನು ಕಂಡು ಹಿಡಿದ.

1821: ಕವಿ ಜಾನ್ ಕೀಟ್ಸ್ ರೋಮಿನಲ್ಲಿ ತನ್ನ 25ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಅಸುನೀಗಿದ.

No comments:

Advertisement