My Blog List

Sunday, May 30, 2010

ಇಂದಿನ ಇತಿಹಾಸ History Today ಮೇ 30

ಇಂದಿನ ಇತಿಹಾಸ

ಮೇ 30

ಬಡವರಿಗೆ ರಿಯಾಯಿತಿ ದರದಲ್ಲಿ ನಗರ ಸಾರಿಗೆ ಸೇವೆ ಒದಗಿಸುವ 'ಅಟಲ್ ಸಾರಿಗೆ' ಬಸ್ಸುಗಳ ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಆರ್ಥಿಕವಾಗಿ ಹಿಂದುಳಿದವರು ಹೆಚ್ಚಾಗಿ ವಾಸಿಸುವ ಆಯ್ದ ಸ್ಥಳಗಳಿಂದ ಈ ಬಸ್ಸುಗಳು ಹತ್ತಿರದ ಬಸ್ ನಿಲ್ದಾಣಗಳವರೆಗೆ ಸಂಚರಿಸುತ್ತವೆ.

2009: ಆಸ್ಟ್ರೇಲಿಯಾ ವಿಶ್ವವಿದ್ಯಾನಿಲಯವೊಂದು ತಮಗೆ ನೀಡ ಬಯಸಿರುವ ಗೌರವ ಡಾಕ್ಟರೇಟ್ ಪದವಿಯನ್ನು ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಿರಾಕರಿಸಿದರು. ಆ ದೇಶದಲ್ಲಿ ಭಾರತೀಯರ ಮೇಲೆ ನಡೆಯುತ್ತಿರುವ ಜನಾಂಗೀಯ ದಾಳಿಯನ್ನು ಪ್ರತಿಭಟಿಸಿ ಅವರು ಈ ನಿರ್ಧಾರಕ್ಕೆ ಬಂದರು. ಬ್ರಿಸ್ಬೇನ್‌ನ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾನಿಲಯ 66 ವರ್ಷದ ಅಮಿತಾಭ್ ಅವರು ಮನರಂಜನಾ ಪ್ರಪಂಚಕ್ಕೆ ನೀಡಿರುವ ಕೊಡುಗೆಯನ್ನು ಆಧರಿಸಿ ಈ ಪದವಿಯನ್ನು ನೀಡಲು ಮುಂದೆ ಬಂದಿತ್ತು. ಇದನ್ನು ಈ ಮುನ್ನ ಬಚ್ಚನ್ ಒಪ್ಪಿಕೊಂಡಿದ್ದರು. 'ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ಇತ್ತೀಚೆಗೆ ನಡೆದಿರುವ ದಾಳಿಯನ್ನು ಮಾಧ್ಯಮಗಳಲ್ಲಿ ಕಂಡು ನನಗೆ ಹತಾಶೆ ಮತ್ತು ದಿಗ್ಭ್ರಮೆಯಾಗಿದೆ. ಪದವಿ ನಿರಾಕರಿಸುವ ಮೂಲಕ ನನಗೆ ಗೌರವ ನೀಡುತ್ತಿರುವ ಸಂಸ್ಥೆಗೆ ನಾನು ಅಗೌರವ ತೋರುತ್ತಿಲ್ಲ' ಎಂದೂ ಅವರು ಸ್ಪಷ್ಟ ಪಡಿಸಿದರು.

2009: ಬಡವರಿಗೆ ರಿಯಾಯಿತಿ ದರದಲ್ಲಿ ನಗರ ಸಾರಿಗೆ ಸೇವೆ ಒದಗಿಸುವ 'ಅಟಲ್ ಸಾರಿಗೆ' ಬಸ್ಸುಗಳ ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬೆಂಗಳೂರು ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಆರ್ಥಿಕವಾಗಿ ಹಿಂದುಳಿದವರು ಹೆಚ್ಚಾಗಿ ವಾಸಿಸುವ ಆಯ್ದ ಸ್ಥಳಗಳಿಂದ ಈ ಬಸ್ಸುಗಳು ಹತ್ತಿರದ ಬಸ್ ನಿಲ್ದಾಣಗಳವರೆಗೆ ಸಂಚರಿಸುತ್ತವೆ. ಕೊಳೆಗೇರಿ ನಿವಾಸಿಗಳು, ಗಾರ್ಮೆಂಟ್ ಕಾರ್ಮಿಕರು ಮೊದಲಾದ ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದ ಸಾರಿಗೆ ಸೇವೆ ಸಿಗುವುದು. ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭವನ್ನು ನೆನಪಿನಲ್ಲಿಡಲು ನಗರದಲ್ಲಿ 'ಅಟಲ್ ಸಾರಿಗೆ' ಹೆಸರಿನಲ್ಲಿ ಶೇಕಡಾ 50ರಷ್ಟು ಕಡಿಮೆ ಪ್ರಯಾಣದ ದರ ಸೌಲಭ್ಯವನ್ನು ಸರ್ಕಾರ ಕಲ್ಪಿಸಿತು. ವಿಕಾಸ ಸಂಕಲ್ಪ ಉತ್ಸವಕ್ಕೆ ಸಜ್ಜಾದ ನಗರದ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ಕೇಸರಿ ಮತ್ತು ಹಸಿರು ಬಣ್ಣದ ಪಟ್ಟಿ ಹೊಂದಿರುವ 'ಅಟಲ್ ಸಾರಿಗೆ' ಬಸ್‌ಗಳಿಗೆ ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದರು.

2009: ಮುಂಬೈ ಮೇಲಿನ ದಾಳಿಗೆ ಕಾರಣ ಎನ್ನಲಾದ ಜಮಾತ್-ಉದ್ ದವಾ (ಜೆಯುಡಿ) ಸಂಘಟನೆ ಅಲ್ ಖೈದಾ ಜತೆ ಸಂಪರ್ಕ ಹೊಂದಿದೆ ಎಂದು ಇದೇ ಮೊದಲ ಬಾರಿ ಪಾಕಿಸ್ಥಾನ ಒಪ್ಪಿಕೊಂಡಿತು. ಜೆಯುಡಿ ಅಲ್ ಖೈದಾ ಜತೆ ಸಂಪರ್ಕ ಹೊಂದಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಪಾಕ್ ಸರ್ಕಾರ ಹೇಳಿತು. ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಪಾಕಿಸ್ಥಾನದ ಅಟಾರ್ನಿ ಜನರಲ್ ಲತೀಫ್ ಖೋಸಾ ಲಾಹೋರ್ ಹೈಕೋರ್ಟ್ ಮುಂದೆ ಈ ವಿಚಾರ ಮಂಡಿಸಿದರು.

2009: ಬೆಂಗಳೂರು ವಿಶ್ವವಿದ್ಯಾಲಯವು ಬೆಂಗಳೂರು ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

2008: ಜನ ಸಾಗರದ ಹರ್ಷೋದ್ಘಾರ, ಕಿವಿಗಡಚಿಕ್ಕುವ ಪಟಾಕಿಗಳ ಸದ್ದು, ಮುಗಿಲು ಮುಟ್ಟುವ ಜಯ ಘೋಷಗಳ ನಡುವೆ ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ನಾಡಿನ 19ನೇ ಮುಖ್ಯಮಂತ್ರಿಯಾಗಿ ರೈತ ಮತ್ತು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಅವರೊಂದಿಗೆ ಐವರು ಪಕ್ಷೇತರರು, ಪಕ್ಷದ ಮೂವರು ವಿಧಾನ ಪರಿಷತ್ ಸದಸ್ಯರು ಮತ್ತು ಇಪ್ಪತ್ತು ಮಂದಿ ವಿಧಾನಸಭಾ ಸದಸ್ಯರು ಹಾಗೂ ಎರಡೂ ಸದನದ ಸದಸ್ಯರಲ್ಲದ ಡಾ.ಮುಮ್ತಾಜ್ ಅಲಿ ಖಾನ್ ಸೇರಿ ಇತರ 29 ಮಂದಿ ಸಂಪುಟ ದರ್ಜೆ ಸಚಿವರಾಗಿ ವಿಧಾನಸೌಧದ ಮುಂಭಾಗದಲ್ಲಿ ನಿರ್ಮಿಸಲಾಗಿದ್ದ ವಿಶೇಷ ವೇದಿಕೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ನೂತನ ಸಚಿವರು: ಕೆ.ಎಸ್.ಈಶ್ವರಪ್ಪ, ಡಾ.ವಿ.ಎಸ್. ಆಚಾರ್ಯ, ಗೋವಿಂದ ಕಾರಜೋಳ, ರಾಮಚಂದ್ರಗೌಡ, ಸಿ.ಎಂ.ಉದಾಸಿ, ಆರ್. ಅಶೋಕ್, ಮುಮ್ತಾಜ್ ಅಲಿಖಾನ್, ಶೋಭಾ ಕರಂದ್ಲಾಜೆ, ಬಿ.ಎನ್.ಬಚ್ಚೇಗೌಡ, ವಿಶ್ವೇಶ್ವರ ಹೆಗಡೆ ಕಾಗೇರಿ, ಬಿ.ಶ್ರೀರಾಮುಲು, ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ, ಎಸ್.ಎ. ರವೀಂದ್ರ ನಾಥ್, ಬಸವರಾಜ ಬೊಮ್ಮಾಯಿ, ಎಸ್. ಸುರೇಶ ಕುಮಾರ್, ರೇವುನಾಯ್ಕ್ ಬೆಳಮಗಿ, ಕೃಷ್ಣ ಪಾಲೆಮಾರ್, ಅರವಿಂದ ಲಿಂಬಾವಳಿ, ಎಸ್.ಕೆ.ಬೆಳ್ಳುಬ್ಬಿ, ಶಿವರಾಜ್ ತಂಗಡಗಿ, ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಲಕ್ಷ್ಮಣ ಸವದಿ, ಮುರುಗೇಶ್ ನಿರಾಣಿ, ನರೇಂದ್ರಸ್ವಾಮಿ, ಹಾಲಪ್ಪ
ವೆಂಕಟರಮಣಪ್ಪ, ಡಿ. ಸುಧಾಕರ್ ಮತ್ತು ಗೂಳಿಹಟ್ಟಿ ಶೇಖರ್.

2008: ಆಂಧ್ರಪ್ರದೇಶದ ವಿಶಾಖಪಟ್ಟಣಂನ ನೈಋತ್ಯ ಭಾಗದ ಹಲವು ಹಳ್ಳಿಗಳಲ್ಲಿ ಸಂಜೆ 4.50ರ ವೇಳೆಗೆ ಭೂಕಂಪ ಸಂಭವಿಸಿತು. ಈ ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.7ರಷ್ಟಿತ್ತು ಎಂದು ಚಂಡಮಾರುತ ಮುನ್ಸೂಚನಾ ಕೇಂದ್ರ ತಿಳಿಸಿತು. ನರ್ಸಿಪಟ್ನಂ ಗ್ರಾಮದಲ್ಲಿ ಮೂರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿ, ಪಾತ್ರೆಗಳು ಉರುಳಿ ಬಿದ್ದವು. ಗಾಬರಿಯಾದ ಜನ ತಮ್ಮ ಮನೆಗಳಿಂದ ಹೊರಗೆ ಓಡಿ ಬಂದರು. ಮಕಾವರಿಪಲೇಂ, ಕೊಟೌರತ್ಲಾ, ನಟವರಂ, ಅನಕಪಲ್ಲಿ, ಪದೇರು, ಚೊಡಾವರಂ, ಕೊಥಾಕೊಟಾ, ಕಸ್ಮಿಕೊಟಾ, ಎಲೆಮಂಚಿಲಿ, ಬುಚ್ಚಿಯಪೇಟ ಮುಂತಾದೆಡೆ ಭೂಕಂಪದ ಅನುಭವವಾಯಿತು.

2008: ಆರು ವರ್ಷಗಳ ಹಿಂದೆ ದೇಶಾದ್ಯಂತ ಸಂಚಲನ ಮೂಡಿಸಿದ್ದ ನಿತೀಶ್ ಕಟಾರಾ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ರಾಜಕಾರಣಿ ಡಿ.ಪಿ. ಯಾದವ್ ಅವರ ಪುತ್ರ ವಿಕಾಸ್ ಯಾದವ್ ಹಾಗೂ ಆತನ ಸಹೋದರ ಸಂಬಂಧಿ ವಿಶಾಲ್ ಯಾದವ್ ಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿತು. ಈ ಪ್ರಕರಣದಲ್ಲಿ ತೀರ್ಪು ನೀಡಿದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶೆ ರವೀಂದರ್ ಕೌರ್ 'ಇಬ್ಬರು ತಪ್ಪಿತಸ್ಥರಿಗೂ ನಾನು ಜೀವಾವಧಿ ಶಿಕ್ಷೆ ನೀಡಿದ್ದೇನೆ. ಮರಣ ದಂಡನೆಗೆ ಅರ್ಹವಾದ ಪ್ರಕರಣ ಇದಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವಿಕಾಸ್ ಹಾಗೂ ವಿಶಾಲ್ ಯಾದವ್ 2002ರ ಫೆಬ್ರುವರಿ 16ರಂದು ಘಜಿಯಾಬಾದಿನ ಮದುವೆ ಸಮಾರಂಭವೊಂದರಿಂದ ನಿತೀಶ್ ಕಟಾರಾನನ್ನು ಅಪಹರಿಸಿ ಕೊಂದು ಹಾಕಿದ್ದರು. ತನ್ನ ಸಹೋದರಿ ಭಾರತಿ ಯಾದವ್ ಜೊತೆ ಕಟಾರಾ ಆತ್ಮೀಯವಾಗಿದ್ದುದನ್ನು ವಿಕಾಸ್ ವಿರೋಧಿಸುತ್ತಿದ್ದ. ನಿತೀಶ್ ತಾಯಿ ನೀಲಂ ಕಟಾರಾ, ಮಗನ ಕೊಲೆಗಾರರಿಗೆ ಶಿಕ್ಷೆಯಾಗುವತನಕ ಹೋರಾಡುವುದಾಗಿ ಪಣ ತೊಟ್ಟಿದ್ದರು.

2008: ಮಾಟ ಮಂತ್ರ ಮಾಡುತ್ತಿದ್ದ ಆರೋಪದ ಮೇರೆಗೆ 31 ವರ್ಷದ ಬುಡಕಟ್ಟು ಮಹಿಳೆಯೊಬ್ಬರನ್ನು ಸಜೀವ ದಹನ ಮಾಡಿದ ದಾರುಣ ಘಟನೆ ದಕ್ಷಿಣ ಒರಿಸ್ಸಾದ ಕೋರಾಪಟ್ ಜಿಲ್ಲೆಯ ಬಾಡಮಾಥೂರ್ ಗ್ರಾಮದಲ್ಲಿ ನಡೆಯಿತು. ಮಾರಮಣಿ ಜುಗೂರ್ ಎಂಬಾಕೆ ಸಜೀವ ದಹನಗೊಂಡ ನತದೃಷ್ಟೆ. ಈ ಕೃತ್ಯ ಎಸಗಿದ ಮೂವರ ಪೈಕಿ ಒಬ್ಬನ ಪತ್ನಿ ಮಹಿಳೆಯ ಮಾಟ ಮಂತ್ರದಿಂದಲೇ ಮೃತಪಟ್ಟಿದ್ದಾಳೆ ಎಂದು ನಂಬಿ ಈ ಹೇಯ ಕೃತ್ಯ ಎಸಗಲಾಯಿತು.

2008: ಕೊಲೆ ಪ್ರಕರಣವೊಂದರಲ್ಲಿ ಬಿಹಾರದ ಮಾಜಿ ಪಶು ಸಂಗೋಪನಾ ಸಚಿವ ಆದಿತ್ಯ ಸಿಂಗ್ ಮತ್ತು ಅವರ ಪುತ್ರ ಸುಮನ್ ಸಿಂಗ್ ತಪ್ಪಿತಸ್ಥರು ಎಂದು ಬಿಹಾರದ ನವಾಡಾ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತು.

2008: ರಾಜಸ್ಥಾನದ ಸವಾಯ್ ಮಾಧೋಪುರ ಜಿಲ್ಲೆಯಲ್ಲಿ ಗುಜ್ಜರ್ ಪ್ರತಿಭಟನೆಯ ವೇಳೆ ಹಿಂಸಾಚಾರಕ್ಕೆ ಇಳಿದ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ್ದರಿಂದ ಇಬ್ಬರು ಮೃತರಾಗಿ ಇತರ ಇಬ್ಬರು ಗಂಭೀರವಾಗಿ ಗಾಯಗೊಂಡರು.

2008: ಗ್ರಾಮೀಣ ಪ್ರವಾಸೋದ್ಯಮವನ್ನು ಬೆಳೆಸಲು ರೂಪಿಸಲಾಗಿರುವ `ವಿಸ್ಮಯ ಭಾರತ' ಆಂದೋಲನ ಯೋಜನೆಯ ಪಟ್ಟಿಗೆ ಹಂಪಿ ಸಮೀಪದ ಆನೆಗೊಂದಿಯನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾದ ಆನೆಗೊಂದಿಗೆ ದೇಶೀಯ ಹಾಗೂ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಈ ನಿರ್ಧಾರಕ್ಕೆ ಬಂದಿತು. ಪ್ರವಾಸೋದ್ಯಮ ಕಾರ್ಯದರ್ಶಿ ಎಸ್.ಬ್ಯಾನರ್ಜಿ ಅವರು, `ಈ ಯೋಜನೆಯಡಿ ದೇಶದಲ್ಲಿ ಆಯ್ಕೆ ಮಾಡಲಾದ 36 ಸ್ಥಳಗಳಲ್ಲಿ ಆನೆಗೊಂದಿ ಕೂಡ ಒಂದು' ಎಂದು ತಿಳಿಸಿದರು.

2008: ನಾಸಾದ ಮೂರು ಮಹಾನ್ ವೀಕ್ಷಣಾ ಪರಿಕರಗಳು ಸಂಗ್ರಹಿಸಿದ `ಕ್ಯಾಸಿಯೊಪಿಯಾ ಎ' ಹೆಸರಿನ ಬೃಹತ್ ನಕ್ಷತ್ರದ ಅವಶೇಷದ ಕಣ್ಮನ ಸೆಳೆಯುವ `ತಾತ್ಕಾಲಿಕ' ಬಣ್ಣದ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಈ ಚಿತ್ರವು ನಕ್ಷತ್ರಗಳ ಆಯುಷ್ಯ ಸಹಿತ ಖಗೋಳದ ಹಲವು ವಿಸ್ಮಯಗಳನ್ನೂ ಬಿಚ್ಚಿಟ್ಟಿತು. ಸ್ಪಿಟ್ಜರ್ ಸ್ಪೇಸ್ ಟೆಲಿಸ್ಕೋಪಿನಿಂದ ತೆಗೆದ ಚಿತ್ರ ಕೆಂಪು ಬಣ್ಣವನ್ನು, ಹಬ್ಬಲ್ ಸ್ಪೇಸ್ ಟೆಲಿಸ್ಕೋಪ್ ಹಳದಿ ಬಣ್ಣವನ್ನು ಮತ್ತು ಚಂದ್ರ ಎಕ್ಸರೇ ಅಬ್ಸರ್ವೇಟರಿ ಹಸಿರು ಮತ್ತು ನೀಲಿ ಬಣ್ಣವನ್ನು ದಾಖಲಿಸಿವೆ. ಹಲವು ವರ್ಷಗಳ ಹಿಂದೆ ನಕ್ಷತ್ರಗಳು ಸ್ಫೋಟಗೊಂಡು ನಾಶಗೊಂಡದ್ದರ ನಿಗೂಢ ಅಂಶಗಳನ್ನು ಪತ್ತೆಹಚ್ಚುವುದಕ್ಕೆ ಖಗೋಳ ತಜ್ಞರಿಗೆ ಇಂತಹ ಚಿತ್ರಗಳು ನೆರವಿಗೆ ಬರುತ್ತವೆ. ನಮ್ಮ ಕ್ಷೀರಪಥದಲ್ಲಿನ ಬೃಹತ್ ನಕ್ಷತ್ರಗಳ ಆಯಸ್ಸು ಅಳೆಯುವ ಕಾರ್ಯಕ್ಕೆ ಇದರಿಂದ ಹೊಸ ಆಯಾಮ ದೊರಕಿತು. ಈ ನಕ್ಷತ್ರ ಭೂಮಿಯಿಂದ 11,000 ಜ್ಯೋತಿರ್ ವರ್ಷ ದೂರದಲ್ಲಿ ಇರುವುದರಿಂದ ಈ ಚಿತ್ರದಲ್ಲಿನ ನಕ್ಷತ್ರ 11,300 ಜ್ಯೋತಿರ್ ವರ್ಷಗಳ ಹಿಂದೆ ನಾಶವಾದುದು ಸ್ಪಷ್ಟವಾಯಿತು. ನಕ್ಷತ್ರದಲ್ಲಿ ಸ್ಫೋಟ ಸಂಭವಿಸಿ ಉಂಟಾದ ಈ ಅದ್ಭುತ ಬಣ್ಣದ ಬೆಳಕು ಭೂಮಿಗೆ ತಲುಪಲು 300 ವರ್ಷ ಹಿಡಿದಿತ್ತು.

2008: ನೇಪಾಳವನ್ನು ಗಣರಾಜ್ಯ ಎಂದು ಘೋಷಿಸಿದ ಬೆನ್ನಲ್ಲಿಯೇ ಪದಚ್ಯುತ ದೊರೆ ಜ್ಞಾನೇಂದ್ರ ಅವರು ತಮಗೆ ನೀಡಿದ ಗಡುವಿಗೆ ಮುನ್ನವೇ ಈದಿನ ಮಧ್ಯರಾತ್ರಿ ನಾರಾಯಣಹಿತಿ ಅರಮನೆಯನ್ನು ತೊರೆದರು. ಮಧ್ಯರಾತ್ರಿ ಅರಮನೆ ತೊರೆದ ದೊರೆ ತಮ್ಮ ಕುಟುಂಬ ವರ್ಗದೊಂದಿಗೆ ಖಾಸಗಿ ನಿವಾಸವಾದ ಮಹಾರಾಜಾಗಂಜ್ನ ನಿರ್ಮಲ್ ನಿವಾಸಕ್ಕೆ ತೆರಳಿದರು ಎಂದು ಟಿವಿ ಚಾನೆಲ್ ಒಂದು ಪ್ರಸಾರ ಮಾಡಿತು. ನಿರ್ಮಲ್ ನಿವಾಸ್ ನಾರಾಯಣಹಿತಿ ಅರಮನೆಯಿಂದ ಮೂರು ಮೈಲಿ ದೂರದಲ್ಲಿದೆ. ಆದರೆ ದೊರೆಯ ಆಪ್ತ ಕಾರ್ಯದರ್ಶಿ ಪಶುಪತಿ ಭಕ್ತಾ ಮಹಾರಾಜನ್ ಇದನ್ನು ಅಲ್ಲಗಳೆದು, ಅರಮನೆ ತೊರೆಯಲು 15 ದಿನಗಳು ಕಾಲಾವಕಾಶ ಪಡೆದಿರುವ ಜ್ಞಾನೇಂದ್ರ ಇನ್ನೂ ಅಲ್ಲಿಯೇ ವಾಸವಾಗಿದ್ದಾರೆ ಎಂದು ಸ್ಪಷ್ಟ ಪಡಿಸಿದರು.

2008: ಭಾರತೀಯ ಮೂಲದ ಬಿಬಿಸಿ ವರದಿಗಾರ್ತಿ ಆಂಜೆಲ್ ಸೈನಿ (27) ಅವರಿಗೆ ಯೂರೋಪಿನ ಪ್ರತಿಷ್ಠಿತ `ಪ್ರಿಕ್ಸ್ ಸಿರ್ಕೊಮ್' ಪತ್ರಿಕೋದ್ಯಮ ಪ್ರಶಸ್ತಿ ಲಭಿಸಿತು. ಬ್ರಿಟನ್ನಿನಲ್ಲಿನ ನಕಲಿ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಬಯಲುಗೊಳಿಸುವ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ಅವರಿಗೆ ಈ ಪ್ರಶಸ್ತಿ ಲಭಿಸಿತು. ಭಾರತೀಯರ ಸಹಿತ ಸಾವಿರಾರು ವಿದೇಶಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ `ಐರಿಷ್ ಇಂಟರ್ ನ್ಯಾಷನಲ್ ಯೂನಿವರ್ಸಿಟಿ' ಬಗ್ಗೆ ಅವರು ಈ ತನಿಖಾ ವರದಿ ಸಿದ್ಧಪಡಿಸಿದ್ದರು.

2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡ 2215 ಖಾಸಗಿ ಶಾಲೆಗಳು ಇನ್ನು ಮುಂದೆ ತಾವು ಅನುಮತಿ ಪಡೆದಿರುವ ಮಾಧ್ಯಮದಲ್ಲಿಯೇ ಬೋಧಿಸುವಂತೆ ವಾರದ ಹಿಂದೆ ನೀಡಿದ ಆದೇಶದಲ್ಲಿ ಮಾರ್ಪಾಡು ಮಾಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿತು.

2007: ಅಡುಗೆ ಅರಿಶಿಣದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂಬುದನ್ನು ತಾನು ಪತ್ತೆ ಹಚ್ಚಿರುವುದಾಗಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಕ್ಯಾನ್ಸರ್ ಸಂಶೋಧನಾ ಸಂಸ್ಥೆ ಪ್ರಕಟಿಸಿತು. ಕ್ಯಾನ್ಸ ರಿಗಷ್ಟೇ ಅಲ್ಲ ಹಾವು ಕಡಿತಕ್ಕೂ ಅಡುಗೆ ಅರಿಶಿಣ ಮದ್ದು ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ ಎಂದು ಸಂಶೋಧಕಿ ಡಾ. ಲೀಲಾ ಶ್ರೀನಿವಾಸನ್ ಅವರು ಬೆಂಗಳೂರಿನಲ್ಲಿ ಆದಿ ಚುಂಚನಗಿರಿ ಮಠದಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಸಮ್ಮುಖದಲ್ಲಿ ಪ್ರಕಟಿಸಿದರು.

2007: ಮಹಿಳೆಯರು ಹಾನಿಕಾರಕ ಪ್ಲಾಸ್ಟಿಕ್ ಸ್ಟಿಕರ್ಸ್ ಗಳಿಗೆ (ಟಿಕಲಿ) ಬದಲಾಗಿ ಬಳಸಹುದಾದ ನಂಜುಮುಕ್ತ, ಪರಿಸರ ಸ್ನೇಹಿ ನೈಸರ್ಗಿಕ ಸಿಂಧೂರವನ್ನು ಅವಿಷ್ಕರಿಸಿರುವುದಾಗಿ ಲಖನೌ ಮೂಲದ ರಾಷ್ಟ್ರೀಯ ಸಸ್ಯ ಸಂಶೋಧನಾ ಸಂಸ್ಥೆ (ಎನ್ಬಿಆರ್ಐ) ಪ್ರಕಟಿಸಿತು.

2007: ಗುರ್ಜರ ಜನಾಂಗವನ್ನು ಪರಿಶಿಷ್ಟರ ಪಟ್ಟಿಗೆ ಸೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ಮಾಡಿದವರ ಮೇಲೆ ಪೊಲೀಸರು ಗೋಲಿಬಾರ್ ಮಾಡ್ದಿದನ್ನು ಖಂಡಿಸಿ ಗುರ್ಜರ ಮೀಸಲಾತಿ ಕ್ರಿಯಾ ಸಮಿತಿ ಕರೆಯ ಮೇರೆಗೆ ರಾಜಸ್ಥಾನದ ವಿವಿಧ ಪ್ರದೇಶಗಳಲ್ಲಿ ಸಂಪೂರ್ಣ ಬಂದ್ ಆಚರಿಸಲಾಯಿತು. ದೌಸಾ ಜಿಲ್ಲೆಯ ದುಬಿ ಮತ್ತು ಸಿಕಂದ್ರಾದಲ್ಲಿ ಎರಡು ಪೊಲೀಸ್ ಠಾಣೆಗಳಿಗೆ ಉದ್ರಿಕ್ತರು ಕಿಚ್ಚಿಟ್ಟರು.

2007: ಚಲನಚಿತ್ರೋದ್ಯಮ ರಂಗದಲ್ಲಿ `ಸ್ನೇಹಲ್ ಭಾಟ್ಕರ್' ಎಂದೇ ಖ್ಯಾತರಾಗಿದ್ದ ಗಾಯಕ ವಾಸುದೇವ ಗೋವಿಂದ ಭಾಟ್ಕರ್ (88) ಹೃದಯಾಘಾತದಿಂದ ನಿಧನರಾದರು. ಭಾಟ್ಕರ್ ಅವರು ಹಿಂದಿ ಮತ್ತು ಮರಾಠಿ ಚಿತ್ರಗಳಿಗೆ ಹಲವಾರು ಜನಪ್ರಿಯ ಹಾಡುಗಳನ್ನು ರಚಿಸಿದ್ದರು.

2006: ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷ ಹುದ್ದೆ ಸೇರಿದಂತೆ 56 ಹುದ್ದೆಗಳನ್ನು `ಲಾಭದಾಯಕ' ವ್ಯಾಪ್ತಿಯಿಂದ ಹೊರಗಿಡುವ ಮಸೂದೆಯನ್ನು ರಾಷ್ಟ್ರಪತಿ ಅಬ್ದುಲ್ ಕಲಾಂ ವಾಪಸ್ ಕಳುಹಿಸಿದರು. ಸಂಸದರು ಮತ್ತು ಶಾಸಕರನ್ನು `ಲಾಭದ ಹುದ್ದೆ' ವಿವಾದದಿಂದ ಪಾರುಮಾಡಲು ಯತ್ನಿಸಿದ್ದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರಪತಿ ಕ್ರಮದಿಂದ ಹಿನ್ನಡೆಯಾಯಿತು.

2006: ಭಾರತದ ಗೌರಿ ಶಂಕರ್ ಅವರು ಚಿಕಾಗೊ ಅಂತಾರಾಷ್ಟ್ರೀಯ ಓಪನ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡರು.

2006: ಕ್ಯಾನ್ನೆಸ್ಸಿನಲ್ಲಿ ಎರಡು ಬಾರಿ ಪ್ರತಿಷ್ಠಿತ ಪಾಲ್ಮೆ ಡಿ'ಓರ್ ಪ್ರಶಸ್ತಿಯನ್ನು ಗೆದ್ದ ಜಪಾನಿನ ಪ್ರಥಮ ಚಿತ್ರ ನಿರ್ದೇಶಕ ಶೋಹೆಲ್ ಇಮಾಮುರಾ ಈ ದಿನ 79ನೇ ವಯಸ್ಸಿನಲ್ಲಿ ನಿಧನರಾದರು. 1983ರಲ್ಲಿ ಪಾಲ್ಮೆ ಡಿ'ಓರ್ ಪ್ರಶಸ್ತಿಯನ್ನು `ದಿ ಬ್ಯಾಲ್ಲಡ್ ಆಫ್ ನರಯಾಮ'ಕ್ಕೆ ಪಡೆದಿದ್ದ ಇಮಾಮುರಾ, 1997ರಲ್ಲಿ `ದಿ ಎಲ್' ಗೆ ಈ ಪ್ರಶಸ್ತಿಯನ್ನು ಎರಡನೇ ಬಾರಿಗೆ ಪಡೆದರು.

1991: ಉಮಾಶಂಕರ ದೀಕ್ಷಿತ್ ನಿಧನರಾದರು.

1987: ಗೋವಾ ಭಾರತದ 25ನೇ ರಾಜ್ಯವಾಯಿತು. ಇಲ್ಲಿಯವರೆಗೆ ಅದು ಕೇಂದ್ರಾಡಳಿತ ಪ್ರದೇಶವಾಗಿತ್ತು.

1959: ಸರ್ ಕ್ರಿಸ್ಟೋಫರ್ ಕೋಕರೆಲ್ ಅವರು ವಿನ್ಯಾಸಗೊಳಿಸಿದ ಮೊತ್ತ ಮೊದಲ ಪ್ರಾಯೋಗಿಕ ಹೋವರ್ ಕ್ರಾಫ್ಟಿಗೆ ಐಲ್ ಆಫ್ ವೈಟ್ ನಲ್ಲಿ ಚಾಲನೆ ಸಿಕ್ಕಿತು. ಪ್ರಾರಂಭದಲ್ಲಿ ಇದನ್ನು ಸೇನಾ ಸೇವೆಗಾಗಿ ಮಾತ್ರ ಎಂಬುದಾಗಿ ರೂಪಿಸಲಾಗಿತ್ತಾದರೂ ನಂತರ ನಾಗರಿಕ ಬಳಕೆಗೆ ಇದನ್ನು ಬಿಡುಗಡೆ ಮಾಡಲಾಯಿತು.

1950: ಕಲಾವಿದೆ ಶೋಭಾ ಹುಣಸಗಿ ಜನನ.

1948: ಸುಗಮ ಸಂಗೀತರ ಗಾನ ಕೋಗಿಲೆ ಎಂದೇ ಖ್ಯಾತರಾಗಿದ್ದ ಪಂಕಜ ಸಿಂಹ (30-5-1948ರಿಂದ 20-12-2000) ಅವರು ಅಡ್ವೋಕೇಟ್ ಗೋವಿಂದರಾವ್- ಖ್ಯಾತ ಪಿಟೀಲು ವಾದಕಿ ಶಾರದಮ್ಮ ದಂಪತಿಯ ಮಗಳಾಗಿ ಹಾಸನದಲ್ಲಿ ಜನಿಸಿದರು.

1919: ಅಮೃತಸರದಲ್ಲಿ ನಡೆದ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿ ರಬೀಂದ್ರನಾಥ ಟ್ಯಾಗೋರ್ ಅವರು ತಮಗೆ ನೀಡಲಾಗಿದ್ದ `ನೈಟ್ ಹುಡ್' ಪದವಿಯನ್ನು ನಿರಾಕರಿಸಿ ಲಾರ್ಡ್ ಚೆಮ್ಸ್ ಫೋರ್ಡ್ ಅವರಿಗೆ ಪತ್ರ ಬರೆದರು.

1907: ನರೇಗಲ್ಲ ಮಾಸ್ತರ ಎಂದೇ ಖ್ಯಾತರಾಗಿದ್ದ ನರೇಗಲ್ಲ ಪ್ರಹ್ಲಾದರಾಯರು (30-5-1907ರಿಂದ 1977) ನವಲಗುಂದ ತಾಲ್ಲೂಕಿನ ಜಾವೂರಿನಲ್ಲಿ ಅನಂತರಾವ್ ನರೇಗಲ್ಲ- ಅಂಬಾಬಾಯಿ ಪುತ್ರನಾಗಿ ಜನಿಸಿದರು.

1895: ಖ್ಯಾತ ಇತಿಹಾಸಕಾರ ಪಾಂಡುರಂಗ ಶಂಕರಂ ಜನನ.

1606: ಸಿಖ್ ಧರ್ಮದ ಐದನೆಯ ಗುರುಗಳಾಗಿದ್ದ ಗುರು ಅರ್ಜುನ್ ದೇವ್ ಅವರನ್ನು ಬಂಡುಕೋರ ರಾಜಕುಮಾರ ಖುಸ್ರು ಬಗ್ಗೆ ಅನುಕಂಪ ವ್ಯಕ್ತಪಡಿಸಿದ ಕಾರಣಕ್ಕಾಗಿ ಮೊಘಲ್ ದೊರೆ ಜಹಾಂಗೀರ್ ಚಿತ್ರಹಿಂಸೆಗೆ ಗುರಿಪಡಿಸಿ ಕೊಲ್ಲಿಸಿದ. ಸಿಖ್ ಧರ್ಮದ ಮೊದಲನೆಯ ಹುತಾತ್ಮರಾದ ಅರ್ಜುನ್ ದೇವ್ `ಗುರು ಗ್ರಂಥ ಸಾಹಿಬ್'ನ್ನು ಸಂಕಲನಗೊಳಿಸಿದವರು.

No comments:

Advertisement