My Blog List

Friday, June 11, 2010

ಇಂದಿನ ಇತಿಹಾಸ History Today ಜೂನ್ 05

ಇಂದಿನ ಇತಿಹಾಸ

ಜೂನ್ 05

ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಪ್ರಸ್ತಾಪ ಮಾಡಿ ಕಾಂಗ್ರೆಸ್ಸಿನಿಂದ ಹೊರ ಬಂದ 10 ವರ್ಷಗಳ ಬಳಿಕ ಎನ್‌ಸಿಪಿ ನಾಯಕ ಪಿ.ಎ.ಸಂಗ್ಮಾ ತಮ್ಮ ಅಂದಿನ ಹೇಳಿಕೆಗಾಗಿ ಕ್ಷಮೆ ಕೋರಿದರು. '10 ವರ್ಷಗಳ ಹಿಂದೆ ಮಾಡಿದ ಹೇಳಿಕೆಗೆ ಈಗ ನಾನು ಅವರ ಕ್ಷಮೆ ಕೋರಿದ್ದೇನೆ' ಎಂದು  ಕೆಲವು ದಿನಗಳ ಹಿಂದೆ ಸೋನಿಯಾ ಅವರನ್ನು ಖುದ್ದು ಭೇಟಿಯಾಗಿದ್ದ ಸಂಗ್ಮಾ ನವದೆಹಲಿಯಲ್ಲಿ ಬಹಿರಂಗ ಪಡಿಸಿದರು.

ಇಂದು ವಿಶ್ವ ಪರಿಸರ ದಿನ.

2009: ರಾಜ್ಯಕ್ಕೆ ಮುಂಗಾರು ಕಾಲಿಟ್ಟಿತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಹಾಸನ, ಶಿವಮೊಗ್ಗ ಮೈಸೂರು, ಕೊಡಗು, ಚಾಮರಾಜನಗರ, ಬಾಗಲಕೋಟೆ, ಹಾವೇರಿ ಹಾಗೂ ಬೀದರ ಜಿಲ್ಲೆಗಳ ವಿವಿಧೆಡೆ ಮಧ್ಯರಾತ್ರಿಯಿಂದೀಚೆಗೆ ಮಳೆಯಾಯಿತು. ಉಡುಪಿ ಜಿಲ್ಲೆಯಲ್ಲಿ  ಮಳೆ ಆರ್ಭಟಕ್ಕೆ  ಮೂವರು ಬಲಿಯಾದರು. ಬೀದರ ಜಿಲ್ಲೆಯ ಹುಮನಾಬಾದ್ ಪಟ್ಟಣದಲ್ಲಿ ಬಿರುಗಾಳಿ ಮಳೆಗೆ ನೂರಾರು ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕೊರಗಿದವು.

2009: ಜಾಗತಿಕ ಟಿವಿ ವಾಹಿನಿಗಳು ಪ್ರದರ್ಶಿಸಿದ ಎಲ್‌ಟಿಟಿಇ ನಾಯಕ ವೇಲುಪಿಳ್ಳೈ ಪ್ರಭಾಕರನ್ನನ ಮೃತದೇಹ ಶ್ರೀಲಂಕಾ ಸೇನೆ ಪ್ರತಿಪಾದಿಸಿದಂತೆ ಕಾರ್ಯಾಚರಣೆಯ ವೇಳೆ ದೊರಕಿದ್ದೇ ಅಥವಾ ಇದೊಂದು ಸೇನೆಯ ವ್ಯವಸ್ಥಿತ 'ನಕಲಿ ಕಾರ್ಯಾಚರಣೆ'ಯ ಭಾಗವೇ ಎಂಬುದಾಗಿ ಕಾಡಿದ್ದ ಶಂಕೆ ನಿಜ ಎಂಬುದಾಗಿ ಸೇನೆಯ ಬೇಹುಗಾರಿಕೆಗೆ ನಿಕಟವಾದ ಮೂಲಗಳು ಪತ್ರಿಕೆಗಳಿಗೆ ತಿಳಿಸಿದವು. 'ಬಂಡುಕೋರ ನಾಯಕನನ್ನು ಮೊದಲು ಜೀವಂತವಾಗಿ ಸೆರೆಹಿಡಿದು ನಂತರ ಅತಿ ಹತ್ತಿರದಿಂದ ಆತನ ತಲೆಗೆ ಗುಂಡಿಟ್ಟು ಕೊಲ್ಲಲಾಯಿತು' ಎಂದು ಈ ಮೂಲಗಳು ಹೇಳಿದವು. ಗುಂಡಿನ ಗಾಯ ಆತನ ಹಣೆಯ ಬಲಬದಿಯಲ್ಲಿ ಇದ್ದುದು ಮತ್ತು ದೇಹದ ಇತರ ಭಾಗದಲ್ಲಿ ಯಾವುದೇ ಗಾಯ ಆಗಿರದಿದ್ದುದು ಈ ಹೇಳಿಕೆಗೆ ಪುಷ್ಟಿ ನೀಡಿತು. ಮೂಲಗಳ ಪ್ರಕಾರ, ಅಂತಿಮ ಹಣಾಹಣಿಯಲ್ಲಿ ವಿಶೇಷ ಪಡೆ ತಮ್ಮನ್ನು ಸುತ್ತುವರಿಯುತ್ತ್ದಿದಂತೆಯೇ ಪ್ರಭಾಕರನ್ನನ ಅಂಗರಕ್ಷಕರು ಮತ್ತು ಕೆಲ ಬಂಡುಕೋರರು ಬೃಹತ್ ಗುಂಡಿನ ಕಾಳಗ ನಡೆಸಿದರು. ಆದರೆ ವೆಲ್ಲಮುಲ್ಲೈವೈಕ್ಕಲ್ ಮತ್ತು ಪುದುಕುದಿರಿಪ್ಪು ಪ್ರದೇಶದಲ್ಲಿ ನಡೆದ ಅವರ ಈ ಹೋರಾಟ ಹೆಚ್ಚು ಕಾಲ ಮುಂದುವರೆಯಲಿಲ್ಲ. ಏಕೆಂದರೆ ಆ ವೇಳೆಗೆ ಸುಮಾರು 300 ಬಂಡುಕೋರರು ಶಸ್ತ್ರಾಸ್ತ್ರಗಳೊಂದಿಗೆ ಪರಾರಿಯಾಗಿದ್ದರಲ್ಲದೆ, 30ರಷ್ಟಿದ್ದ ಅಂಗರಕ್ಷಕರ ಶಸ್ತ್ರಾಸ್ತ್ರವೂ ಬರಿದಾಗಲಾರಂಭಿಸಿತ್ತು. ಆಗ ಎಲ್‌ಟಿಟಿಇ ಮುಖ್ಯಸ್ಥನಿಗೆ ಶರಣಾಗದೆ ಅನ್ಯ ಗತಿ ಇರಲಿಲ್ಲ. ನಂತರ ಯಾವುದೇ ವಿಶೇಷ ಆದ್ಯತೆ ನೀಡದೆ ಇತರ ಸಾಮಾನ್ಯರಂತೆಯೇ ಆತನನ್ನು ಗುಂಡಿಟ್ಟು ಕೊಲ್ಲಲಾಯಿತು ಎಂದು ಮೂಲಗಳು ಹೇಳಿದವು. ವೆಲ್ಲಮುಲ್ಲೈ ವೈಕ್ಕಲ್‌ನಲ್ಲಿದ್ದ ಪ್ರಭಾಕರನ್ ಅಡಗು ತಾಣವನ್ನು ಕಾರ್ಯಾಚರಣೆ ಅಂತಿಮಗೊಂಡ ಕನಿಷ್ಠ ಎರಡು ದಿನಗಳ ಮೊದಲೇ ಪಡೆಗಳು ಸುತ್ತುವರಿದ್ದಿದವು. ಎಲ್‌ಟಿಟಿಇ ಬೇಹುಗಾರಿಕಾ ವಿಭಾಗದ ಮುಖ್ಯಸ್ಥ ಷಣ್ಮುಗಲಿಂಗಂ ಶಿವಶಂಕರ್ ಅಲಿಯಾಸ್ ಪೊಟ್ಟು ಅಮ್ಮಾನ್, ಪ್ರಭಾಕರನ್ ಕುಟುಂಬ ಮತ್ತು ಆತನ ಅಂಗರಕ್ಷಕರನ್ನು ಬಿಟ್ಟರೆ ಈ ಅಡಗುತಾಣದ ಬಗ್ಗೆ ಅರಿತಿದ್ದ ಏಕೈಕ ವ್ಯಕ್ತಿಯೆಂದರೆ ವೈದ್ಯಕೀಯ ವಿಭಾಗದ ಮುಖ್ಯಸ್ಥ ರೀಗನ್. ಆದರೆ ಮೇ ಮೊದಲ ವಾರ ಪಡೆಗಳು ಈತನನ್ನು ಸೆರೆಹಿಡಿದು ವಿಚಾರಣೆಗೆ ಒಳಪಡಿಸಿದಾಗ ಪ್ರಭಾಕರನ್ ಅಡಗುತಾಣದ ಮಾಹಿತಿ ಬಹಿರಂಗವಾಯಿತು. ಇಡೀ ಸಂಘಟನೆಯೇ ನಾಶವಾಗುವ ಹಂತ ತಲುಪಿರುವುದನ್ನು ಮನಗಂಡಿದ್ದ ಎಲ್‌ಟಿಟಿಇ ನಾಯಕತ್ವ, ಪಲಾಯನಕ್ಕೆ ವಿಸ್ತೃತ ಯೋಜನೆಯೊಂದನ್ನು ಸಿದ್ಧಪಡಿಸಿತ್ತು. ಅದರ ಪ್ರಕಾರ ತಂಡ ಮುಲ್ಲೈತೀವು- ವೇಲಿ ಒಯಾ ಅರಣ್ಯದಲ್ಲಿನ ಯುದ್ಧರಹಿತ ವಲಯವನ್ನು ದಾಟಿ, ಪೂರ್ವ ಪ್ರಾಂತ್ಯದ ಬಟ್ಟಿಕಲೋವ ಪ್ರದೇಶವನ್ನು ತಲುಪಬೇಕು. ಅಲ್ಲಿ 'ಕರ್ನಲ್' ರಾಮ್ ಎಂಬಾತ ತಂಡಕ್ಕೆ ದ್ವೀಪ ರಾಷ್ಟ್ರದಿಂದಲೇ ಪರಾರಿಯಾಗುವ ಮಾರ್ಗ ತೋರಲಿದ್ದ' ಈ ಎಲ್ಲ ವಿಷಯವನ್ನೂ ರೀಗನ್ ಅಧಿಕಾರಿಗಳ ಎದುರು ಬಾಯಿಬಿಟ್ಟಿದ್ದ. ಈ ಯೋಜನೆಯಂತೆ ಮೇ 17ರ ಸಂಜೆ ಬಂಡುಕೋರರು ಸಮುದ್ರ ಕಾರ್ಯಾಚರಣೆಗೆ ಮುಂದಾಗಿ ಸೇನೆಯ ಹಿಡಿತದಲ್ಲಿದ್ದ ಪ್ರದೇಶದಿಂದ ಪಾರಾಗಿ ಬಂದಿದ್ದರು. ಬಂಕರ್ ಮೇಲೆ ದಾಳಿ ನಡೆಸಿ ಕನಿಷ್ಠ 15 ಸೈನಿಕರನ್ನು ಕೊಂದು ಹಾಕಿದ್ದರಲ್ಲದೆ, ಅಂಬುಲೆನ್ಸನ್ನು ವಶಪಡಿಸಿಕೊಂಡಿದ್ದರು. ಆದರೆ ಮುಂದೆ ವಿಶೇಷ ಪಡೆಗಳ ಕಬಂಧಬಾಹುವಿನಿಂದ ತಪ್ಪಿಸಿಕೊಳ್ಳಲು ಮಾತ್ರ ಅವರಿಗೆ ಸಾಧ್ಯವಾಗಲಿಲ್ಲ ಎಂದು ಮೂಲಗಳು ವಿವರಿಸಿದವು.

2009: ಆಸ್ಟ್ರೇಲಿಯಾದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ ನಡೆಯಿತು. ಹರಿಯಾಣ ಮೂಲದ ಅಮೃತ್‌ಪಾಲ್ ಸಿಂಗ್ (20) ತಾನು ಕೆಲಸ ಮಾಡುವ ಸ್ಥಳಕ್ಕೆ ನಡೆದುಕೊಂಡು ಹೋಗುವಾಗ ಯುವಕರ ಗುಂಪೊಂದು ಹಲ್ಲೆ ನಡೆಸಿ ಪರಾರಿಯಾಯಿತು. ಇದು ಕಳೆದ ಒಂದು ತಿಂಗಳಲ್ಲಿ ಭಾರತೀಯರ ಮೇಲೆ ನಡೆದ 10ನೇ ಹಲ್ಲೆ ಪ್ರಕರಣ.

2009: ಪಾಕಿಸ್ಥಾನದ ವಾಯವ್ಯ ಭಾಗದಲ್ಲಿರುವ ಹಿಂಸಾ ಪೀಡಿತ ದಿರ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಸಂಭವಿಸಿದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 40 ಮಂದಿ ಮೃತರಾಗಿ 50 ಮಂದಿ ಗಾಯಗೊಂಡರೆ, ಮರ್ದಾನ್ ಜಿಲ್ಲೆಯ ನತ್ಯಾನ್ ಎಂಬಲ್ಲಿ ಉಗ್ರರು ಸೇನಾ ವಾಹನದ ಮೇಲೆ ನಡೆಸಿದ ದಾಳಿಯಲ್ಲಿ ಏಳು ಭದ್ರತಾ ಸಿಬ್ಬಂದಿ ಮೃತರಾದರು. ಪಾಕಿಸ್ಥಾನದ ವಾಯವ್ಯ ಗಡಿರೇಖೆ ಬಳಿಯ ದಿರ್‌ನಲ್ಲಿರುವ ಹಯಾಗಾಯಿ ಶೆರ್ಕಿ ಮಸಿದಿಯಲ್ಲಿ ಸುಮಾರು 200 ಜನರು ಶುಕ್ರವಾರದ ಪ್ರಾರ್ಥನೆಯಲ್ಲಿ ತೊಡಗಿದ್ದಾಗ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡಿತು.

2009: ಸೋನಿಯಾ ಗಾಂಧಿ ಅವರ ವಿದೇಶಿ ಮೂಲದ ಪ್ರಸ್ತಾಪ ಮಾಡಿ ಕಾಂಗ್ರೆಸ್ಸಿನಿಂದ ಹೊರ ಬಂದ 10 ವರ್ಷಗಳ ಬಳಿಕ ಎನ್‌ಸಿಪಿ ನಾಯಕ ಪಿ.ಎ.ಸಂಗ್ಮಾ ತಮ್ಮ ಅಂದಿನ ಹೇಳಿಕೆಗಾಗಿ ಕ್ಷಮೆ ಕೋರಿದರು. '10 ವರ್ಷಗಳ ಹಿಂದೆ ಮಾಡಿದ ಹೇಳಿಕೆಗೆ ಈಗ ನಾನು ಅವರ ಕ್ಷಮೆ ಕೋರಿದ್ದೇನೆ' ಎಂದು  ಕೆಲವು ದಿನಗಳ ಹಿಂದೆ ಸೋನಿಯಾ ಅವರನ್ನು ಖುದ್ದು ಭೇಟಿಯಾಗಿದ್ದ ಸಂಗ್ಮಾ ನವದೆಹಲಿಯಲ್ಲಿ ಬಹಿರಂಗ ಪಡಿಸಿದರು. 'ಆಗಿದ್ದು ಆಗಿಹೋಯಿತು. ಅದನ್ನು ಮರೆತು ಬಿಡುವುದು ಒಳ್ಳೆಯದು. ಸೋನಿಯಾ ಬಲು ಘನತೆಯ ವ್ಯಕ್ತಿ' ಎಂದು ಲೋಕಸಭೆಯ ಮಾಜಿ ಸ್ಪೀಕರ್ ಸಂಗ್ಮಾ ಹೇಳಿದರು.

2009: ಹಿರಿಯ ಸಾಹಿತಿ ಪ್ರೊ. ಅ.ರಾ.ಮಿತ್ರ ಸೇರಿದಂತೆ ಐವರು ಸಾಹಿತಿಗಳು ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ನೇ ಸಾಲಿನ ಗೌರವ ಪ್ರಶಸ್ತಿಗೆ ಆಯ್ಕೆಯಾದರು. ಹಸನಬಿ ಬೀಳಗಿ, ವಿಷ್ಣು ನಾಯ್ಕ, ಪ್ರೊ. ಮಲ್ಲಿಕಾರ್ಜುನ ಹಿರೇಮಠ ಮತ್ತು ಲಕ್ಷ್ಮಣ್ ಅವರಿಗೆ ಗೌರವ ಪ್ರಶಸ್ತಿ ಲಭಿಸಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ. ಎಂ.ಎಚ್.ಕೃಷ್ಣಯ್ಯ ಬೆಂಗಳೂರಿನಲ್ಲಿ ಪ್ರಕಟಿಸಿದರು.

2009: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಉಪ ನಾಯಕರಾಗಿ ಮತ್ತೊಬ್ಬ ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ ಅವರು ಬೆಂಗಳೂರಿನಲ್ಲಿ ಅವಿರೋಧವಾಗಿ ಆಯ್ಕೆಯಾದರು. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಸಮ್ಮುಖದಲ್ಲಿ ನಡೆದ ಶಾಸ ಕಾಂಗ ಪಕ್ಷದ ಸಭೆಯಲ್ಲಿ ಇವರಿಬ್ಬರ ಆಯ್ಕೆಯನ್ನು ಪ್ರಕಟಿಸಲಾಯಿತು.

2009: ಕೇಂದ್ರ ಕಾನೂನು ಹಾಗೂ ನ್ಯಾಯಾಂಗ ಸಚಿವ ವೀರಪ್ಪ ಮೊಯಿಲಿ ಅವರ 'ಅನ್‌ಲೀಸಿಂಗ್ ಇಂಡಿಯಾ- ಎ ರೋಡ್ ಮ್ಯಾಪ್ ಫಾರ್ ಅಗ್ರೇರಿಯನ್ ವೆಲ್ತ್ ಕ್ರಿಯೇಷನ್' ಕೃತಿಯನ್ನು ನವದೆಹಲಿಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್‌ಸಿಂಗ್ ಆಹ್ಲುವಾಲಿಯಾ ಬಿಡುಗಡೆ ಮಾಡಿದರು.

2009: ಸಕಲೇಶಪುರ ತಾಲ್ಲೂಕಿನ  ತಾಲ್ಲೂಕಿನ ಯಡೇಹಳ್ಳಿ ಗ್ರಾಮದಲ್ಲಿ ದೇಶದ ಪ್ರಥಮ ದೇಸಿ 'ಭತ್ತ ಸಮುದಾಯ ಬೀಜ ಬ್ಯಾಂಕ್'ನ್ನು ಶಾಸಕ ಎಚ್.ಕೆ. ಕುಮಾರ ಸ್ವಾಮಿ ಉದ್ಘಾಟಿಸಿದರು. ದೇಶದ ಪ್ರಥಮ ದೇಸಿ 'ಭತ್ತ ಸಮುದಾಯ ಬೀಜ ಬ್ಯಾಂಕ್' ಭತ್ತದ ದೇಶಿ ತಳಿ ಸಂರಕ್ಷಿಸಲು  ಯತ್ನಿಸುವುದು. ಭೂಮಿ ಸಂಸ್ಥೆಯ ಗಾಣದಾಳು ಶ್ರೀಕಂಠ ಹಾಗೂ ಜಯಪ್ರಸಾದ್ ಅವರ 'ನೆಲ ಮೂಲ-ಕೃಷಿ ಜ್ಞಾನ' ಪುಸ್ತಕವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

2008: ಬಿಜೆಪಿಯ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರು ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಸದನದ ನಾಯಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಜಗದೀಶ್ ಶೆಟ್ಟರ ಅವರ ಹೆಸರನ್ನು ಸೂಚಿಸಿದರು. ಸಚಿವ ರೇವುನಾಯಕ ಬೆಳಮಗಿ ಅನುಮೋದಿಸಿದರು. ಹಂಗಾಮಿ ಸಭಾಧ್ಯಕ್ಷ ಕೆ.ಜಿ. ಭೋಪಯ್ಯ ಅವರು ಜಗದೀಶ್ ಶೆಟ್ಟರ್ ನೂತನ ಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.

2007: ಗೋವಾ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಒಟ್ಟು 40 ಸ್ಥಾನಗಳಲ್ಲಿ ಯಾವುದೇ ಪಕ್ಷ ಇಲ್ಲವೇ ಬಣಕ್ಕೆ ಸ್ಪಷ್ಟ ಬಹುಮತ ದೊರೆಯಲಿಲ್ಲ. ಆಡಳಿತಾರೂಢ ಕಾಂಗ್ರೆಸ್ - ಎನ್ಸಿಪಿ ಒಕ್ಕೂಟ ಒಟ್ಟು 19 ಸ್ಥಾನ (ಕಾಂಗ್ರೆಸ್ 16, ಎನ್ಸಿಪಿ 3) ಹೆಚ್ಚಿನ ಸ್ಥಾನಗಳನ್ನು ಗಳಿಸಿ ಮರಳಿತು. ಬಿಜೆಪಿ 14 ಸ್ಥಾನ ಪಡೆಯಿತು. ಕರ್ನಾಟಕದ ಉಳ್ಳಾಲ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಯು.ಟಿ. ಖಾದರ್ ಅವರು ಬಿಜೆಪಿಯ ಚಂದ್ರಶೇಖರ ಉಚ್ಚಿಲ ಅವರನ್ನು ಪರಾಭವಗೊಳಿಸಿದರು. ಜೆ.ಡಿ.(ಎಸ್) ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

2007: ಓಮನ್ ಗೆ ಭಾರಿ ಚಂಡಮಾರುತ ಅಪ್ಪಳಿಸಿದ ಪರಿಣಾಮವಾಗಿ ಮಸಿರಾಹ್ ದ್ವೀಪದ ಸಹಸ್ರಾರು ಮಂದಿ  ಮನೆ ಮಠ ಬಿಟ್ಟು ಓಡಿದರು.

2007: ಜಗ ತಾಪ ಏರಿಕೆಯ ಪರಿಣಾಮವಾಗಿ ವಿಶ್ವದ ಕೋಟ್ಯಂತರ ಜನ ಕುಡಿಯಲು ಹಾಗೂ ಕೃಷಿಗೆ ಯೋಗ್ಯ ನೀರು ಲಭಿಸದೆ ಒದ್ದಾಡಬೇಕಾಗುತ್ತದೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ಎಚ್ಚರಿಸಿತು. ಜಗತಾಪ ಏರಿಕೆಯ ಪರಿಣಾಮವಾಗಿ ಮಂಜುಗಡ್ಡೆ ಮತ್ತು ನೀರ್ಗಲ್ಲುಗಳು ಕರಗುವ ಪರಿಣಾಮವಾಗಿ ಜಗತ್ತಿನಾದ್ಯಂತ ಪ್ರವಾಹಗಳು ಉಂಟಾಗಿ ಜನ ಜೀವನ ಅಸ್ತವ್ಯಸ್ತವಾಗುವುದು. ಕ್ರಮೇಣ ಹಿಮಾಲಯದ ನದಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವುದು ಎಂದು ಅಧ್ಯಯನ ಎಚ್ಚರಿಕೆ ನೀಡಿತು. ಹಿಮಾಲಯದ ನೀರ್ಗಲ್ಲುಗಳಲ್ಲಿ ಈಗಾಗಲೇ ಬಿರುಕು ಕಾಣಿಸಿಕೊಂಡಿದೆ ಎಂದು ಭಾರತೀಯ ಭೂ ಸರ್ವೇಕ್ಷಣಾಲಯ ಇಲಾಖೆ ವರದಿ ಹೇಳಿತು.

2007: ಭಾರತದ ಅತ್ಯಂತ ಪ್ರಾಚೀನ ವಿದ್ಯೆಗಳಲ್ಲಿ ಒಂದಾಗಿರುವ ಯೋಗದ ಆಸನಗಳಿಗೆ ತಾನು ಪೇಟೆಂಟ್ ನೀಡಿಲ್ಲ ಎಂದು ಅಮೆರಿಕ ಸರ್ಕಾರ ಸ್ಪಷ್ಟ ಪಡಿಸಿತು. ಯೋಗದಲ್ಲಿ ಬಳಸುವ ಅನೇಕ ಸಾಧನ, ಸಲಕರಣೆಗಳಿಗೆ ಅಮೆರಿಕದ ಪೇಟೆಂಟ್ ಇಲಾಖೆ ಪೇಟೆಂಟ್ ನೀಡಿದೆ. ಆದರೆ ಇದರಲ್ಲಿ ಯೋಗದ ಆಸನಗಳು ಸೇರಿಲ್ಲ ಎಂದು ನವದೆಹಲಿಯ ಅಮೆರಿಕ ರಾಯಭಾರ ಕಚೇರಿ ಸ್ಪಷ್ಟ ಪಡಿಸಿತು.

2007: ಲಖನೌನ ದಿನಗೂಲಿ ನೌಕರನೊಬ್ಬನ ಪುತ್ರಿ ಏಳೂವರೆ ವರ್ಷದ (ಜನನ: 2000) ಸುಷ್ಮಾ ವರ್ಮ ಉತ್ತರ ಪ್ರದೇಶ ಹೈಸ್ಕೂಲ್ ಪರೀಕ್ಷಾ ಮಂಡಳಿಯಿಂದ ಹತ್ತನೇ ತರಗತಿ ಪರೀಕ್ಷೆ ಉತ್ತೀರ್ಣಳಾದುದಕ್ಕೆ ಸರ್ಟಿಫಿಕೇಟ್ ಪಡೆಯುವ ಮೂಲಕ ಭಾರತದ ಅತ್ಯಂತ ಕಿರಿಯ `ಮೆಟ್ರಿಕ್ಯುಲೇಟ್' ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ಅಕೆ 600ರಲ್ಲಿ 354 ಅಂಕಗಳನ್ನು ಪಡೆದಳು.

2006: ಭಾರತದ ಶ್ವೇತ ಕ್ರಾಂತಿಯ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರು ಆನಂದ್ ನ ಗ್ರಾಮೀಣ ನಿರ್ವಹಣಾ ಸಂಸ್ಥೆ (ಐಆರ್ಎಂಎ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಪ್ರಕಟಿಸಿದರು. ಸತತ 30 ವರ್ಷಗಳಿಂದ ಈ ಹುದ್ದೆ ನಿಭಾಯಿಸಿದ ಅವರು ತಮ್ಮ ವಿರುದ್ಧ ಹೆಚ್ಚುತ್ತಿರುವ ಅತೃಪ್ತಿಯನ್ನು ಅನುಸರಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ಹೇಳಿದರು.

2006: ಹಿರಿಯ ಪತ್ರಕರ್ತ ಹುಬ್ಬಳ್ಳಿಯ ಸುರೇಂದ್ರ ದಾನಿ ಅವರು 2005ರ ಸಾಲಿನ ಪ್ರತಿಷ್ಠಿತ ಟಿಯೆಸ್ಸಾರ್ ಪ್ರಶಸ್ತಿಗೆ ಆಯ್ಕೆಯಾದರು.

2006: ಮಾದಕ ದ್ರವ್ಯ ಸೇವನೆ ಮತ್ತು ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ದಿವಂಗತ ಪ್ರಮೋದ ಮಹಾಜನ್ ಪುತ್ರ ರಾಹುಲ್ ಮಹಾಜನ್ ಅವರನ್ನು ಪೊಲೀಸರು ಬಂಧಿಸಿದರು.

2006: ಅಮೀರ್ ಖಾನ್ ನಟಿಸಿದ `ಫನಾ' ಚಿತ್ರವನ್ನು ಗುಜರಾತಿನ ಚಿತ್ರಮಂದಿರಗಳಲ್ಲಿ ಶಾಂತಿಯುತವಾಗಿ ಪ್ರದರ್ಶಿಸುವಂತೆ ಗುಜರಾತ್ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಚಿತ್ರ ನಿರ್ಮಾಪಕ ಮಹೇಶ ಭಟ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್  ವಜಾ ಮಾಡಿತು. ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ನ್ಯಾಯಮೂರ್ತಿ ಸಿ.ಕೆ. ಥಕ್ಕರ್ ಅವರನ್ನು ಒಳಗೊಂಡ ರಜಾಕಾಲೀನ ಪೀಠವು ಅರ್ಜಿಯನ್ನು ತಿರಸ್ಕರಿಸಿ `ಚಿತ್ರ ಮಂದಿರಗಳ ಮಾಲೀಕರು ಚಿತ್ರ ಪ್ರದರ್ಶಿಸಲು ಬಯಸುವುದಾದರೆ ಪೊಲೀಸ್ ರಕ್ಷಣೆ ಕೇಳಬಹುದು' ಎಂದು ಹೇಳಿತು.

1995: ಅಸ್ಸಾಂನಿಂದ ಮನಮೋಹನ್ ಸಿಂಗ್ ಅವರು ರಾಜ್ಯಸಭೆಗೆ ಆಯ್ಕೆಯಾದರು.

1989: ತ್ರಿಶೂಲ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ.

1984: ಪಂಜಾಬಿನ ಅಮೃತಸರ ಸ್ವರ್ಣಮಂದಿರದಲ್ಲಿ ಸೇರಿಕೊಂಡಿದ್ದ ಉಗ್ರಗಾಮಿಗಳ ವಿರುದ್ಧ `ಆಪರೇಷನ್ ಬ್ಲೂಸ್ಟಾರ್' ಕಾರ್ಯಾಚರಣೆ ನಡೆಸಲಾಯಿತು.

1968: ಲಾಸ್ ಏಂಜೆಲಿಸ್ ಅಂಬಾಸಿಡರ್ ಹೊಟೇಲಿನಿಂದ ಹೊರ ಹೊರಟಿದ್ದ ಅಮೆರಿಕದ ಸೆನೆಟರ್ ರಾಬರ್ಟ್ ಕೆನಡಿ ಅವರಿಗೆ ಪ್ಯಾಲೆಸ್ತೀನಿ ವಲಸೆಗಾರ ಸಿರ್ ಹಾನ್ ಬಿಶಾರ ಸಿರ್ ಹಾನ್ ಎಂಬಾತ ಗುಂಡು ಹಾರಿಸಿದ. ಕೆನಡಿ ಮರುದಿನ ಅಸುನೀಗಿದರು.

1952: ಸಾಹಿತಿ ಮಲ್ಲೇಪುರಂ ವೆಂಕಟೇಶ್ ಜನನ.

1947: ಜಾನಪದ ಗಾರುಡಿಗ ಎಸ್. ಕೆ. ಕರೀಂಖಾನ್ ಅವರ ಪ್ರಭಾವದಿಂದ ಜಾನಪದ ಗೀತೆಗಳ ಗಾಯನ ಮೈಗೂಡಿಸಿಕೊಂಡ ಗಾಯಕ ವೈ.ಕೆ. ಮುದ್ದುಕೃಷ್ಣ ಅವರು ತಂದೆ ಕೃಷ್ಣೇಗೌಡ- ತಾಯಿ ಕೆಂಚಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಯಡಕೆರೆಯಲ್ಲಿ ಜನಿಸಿದರು.

1939: ಚಾರ್ಲ್ಸ್ ಜೋಸೆಫ್ ಕ್ಲಾರ್ಕ್ ಜನ್ಮದಿನ. ಇವರು 1979ರಲ್ಲಿ ಬ್ರಿಟನ್ನಿನ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾದರು.

1935: ಸಾಹಿತಿ ಸೂ. ಸುಬ್ರಹ್ಮಣ್ಯಂ ಜನನ.

1932: ಸಾಹಿತಿ ನೀಳಾದೇವಿ ಜನನ.

1916: ಬ್ರಿಟಿಷ್ ಫೀಲ್ಡ್ ಮಾರ್ಷಲ್ ಹಾಗೂ ಸಮರ ಸಂಬಂಧಿ ವಿದೇಶಾಂಗ ಕಾರ್ಯದರ್ಶಿ ವಿಸ್ಕೌಂಟ್ ಕಿಚ್ನರ್ ಸಮುದ್ರದಲ್ಲಿ ಮುಳುಗಿ ಅಸುನೀಗಿದರು. ಅವರು ಕುಳಿತಿದ್ದ ಎಚ್ಎಂಎಸ್ ಹ್ಯಾಂಪ್ ಶೈರ್ ನೌಕೆಯು ರಷ್ಯದತ್ತ ಹೊರಟಿದ್ದಾಗ ಜರ್ಮನಿಯ ಸ್ಫೋಟಕವೊಂದಕ್ಕೆ ಡಿಕ್ಕಿ ಹೊಡೆದು ಸ್ಕಾಟ್ ಲ್ಯಾಂಡ್ಗೆ ಸೇರಿದ ಆರ್ಕ್ನೀ ದ್ವೀಪದ ಬಳಿ ಸಮುದದಲ್ಲಿ ಮುಳುಗಿದ್ದರಿಂದ ಈ ದುರ್ಘಟನೆ ಸಂಭವಿಸಿತು.

1903: ಸಾಹಿತಿ ಸೀತಾದೇವಿ ಪಡುಕೋಣೆ ಜನನ.

1894: ರಾಯ್ ಹರ್ಬರ್ಟ್ ಥಾಮ್ಸನ್ (1894-1976) ಜನ್ಮದಿನ. ಕೆನಡಾ ಸಂಜಾತ ಬ್ರಿಟಿಷ್ ಮುದ್ರಕನಾದ ಈತ `ದಿ ಟೈಮ್ಸ್ ಆಫ್ ಲಂಡನ್' ಮತ್ತು ಇತರ ವೃತ್ತ ಪತ್ರಿಕೆಗಳು ಮತ್ತು ಸಂಪರ್ಕ ಮಾಧ್ಯಮಗಳ ಸಂಸ್ಥೆಯ ಮಾಲೀಕ.

1891: ಆಯುರ್ವೇದ, ಯೋಗಶಾಸ್ತ್ರ, ಸಂಗೀತ, ತತ್ವಜ್ಞಾನ, ಶಿಕ್ಷಣ, ಸಾಹಿತ್ಯ, ರಾಜಕಾರಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದುಡಿದ ಪಂಡಿತ ತಾರಾನಾಥ (5-6-1891ರಿಂದ 30-10-1942) ಅವರು ರಂಗರಾಯರು-ರಾಜೀವಮ್ಮ ದಂಪತಿಯ ಪುತ್ರನಾಗಿ ಮಂಗಳೂರಿನಲ್ಲಿ ಈದಿನ ಜನಿಸಿದರು.

1879: ನಾರಾಯಣ ಮಲ್ಹಾರ್ ಜೋಷಿ (1879-1955) ಜನ್ಮದಿನ. ಇವರು ಭಾರತೀಯ ಟ್ರೇಡ್ ಯೂನಿಯನ್ ಚಳವಳಿಯ ಪಿತಾಮಹ.

1819: ಬ್ರಿಟಿಷ್ ಗಣಿತಜ್ಞ ಹಾಗೂ ಖಗೋಳ ವಿಜ್ಞಾನಿ ಜಾನ್ ಕೌಚ್ ಆಡಮ್ಸ್ (1819-1992) ಜನ್ಮದಿನ. ನೆಪ್ಚೂನ್ ಗ್ರಹವನ್ನು ಕಂಡು ಹಿಡಿದ ಇಬ್ಬರು ವಿಜ್ಞಾನಿಗಳಲ್ಲಿ ಒಬ್ಬ ಈ ವ್ಯಕ್ತಿ.

(
ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Advertisement