Tuesday, February 14, 2012

ಆಚಾರ್ಯರು ನನ್ನ ಅಂಗೈ ನೋಡಿ ಭವಿಷ್ಯ ಹೇಳಿದ್ದರು...!

ಆಚಾರ್ಯರು ನನ್ನ ಅಂಗೈ ನೋಡಿ ಭವಿಷ್ಯ ಹೇಳಿದ್ದರು...!

ಬೆಂಗಳೂರು: ಬಹುಶಃ, ಒಂದು- ಒಂದೂವರೆ ವರ್ಷದ ಹಿಂದೆ. ಬೆಂಗಳೂರಿನಲ್ಲಿ ಬಾಣಸವಾಡಿ, ನಾಗವಾರ, ಹೆಗಡೆ ನಗರ ಆಸುಪಾಸಿನ ನಿವಾಸಿಗಳ ಒಂದು ತಂಡ ಡಾ. ವಿ.ಎಸ್. ಆಚಾರ್ಯ ಅವರನ್ನು ಭೇಟಿ ಮಾಡಿತ್ತು. ಗೋವುಗಳ ಹತ್ಯೆಯನ್ನು ನಿಷೇಧಿಸಬೇಕು, ಗೋವುಗಳಿಂದ ಆಗುವ ಆರ್ಥಿಕ ಲಾಭಗಳ ಬಗ್ಗೆ ಹೆಚ್ಚು ಜನರಲ್ಲಿ ಅರಿವು ಮೂಡಿಸಬೇಕು ಎಂಬುದಾಗಿ ಕಳ ಕಳಿಯ ಮನವಿ ಮಾಡುವುದು ಈ ತಂಡದ ಉದ್ದೇಶವಾಗಿತ್ತು. ಡಾ. ರಾಜಾರಾಮ ಪ್ರಸಾದ್, ಡಾ. ಶ್ಯಾಮ ಪ್ರಸಾದ್ ಮತ್ತಿತರ ಹಲವರು ಇದ್ದ ಈ ತಂಡದಲ್ಲಿ  ನಾನೂ ಇದ್ದೆ. ವಾಸ್ತವವಾಗಿ  ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಬಯಸಿದ್ದರೂ ಅದು ಸಾಧ್ಯವಾಗದೇ ಇದ್ದುದರಿಂದ ಆಗ ಗೃಹ ಸಚಿವರಾಗಿದ್ದ ಆಚಾರ್ಯ ಅವರನ್ನು  ಈ ನಿಯೋಗ ಭೇಟಿ ಮಾಡಿತ್ತು.

ಮನವಿ ಸ್ವೀಕರಿಸಿದ ಆಚಾರ್ಯರು ಗೋಹತ್ಯೆ ನಿಷೇಧದ ಮಸೂದೆ ಸಿದ್ಧ ಪಡಿಸಲಾಗುತ್ತಿದೆ, ಶೀಘ್ರದಲ್ಲೇ ಅದನ್ನು ವಿಧಾನಮಂಡಲದಲ್ಲಿ  ಮಂಡಿಸಲಾಗುತ್ತದೆ ಎಂದು ಭರವಸೆ ಕೊಟ್ಟರು.

ಬಳಿಕ ಮಾತನಾಡುತ್ತಿದ್ದಾಗ ಜೊತೆಗಿದ್ದವರು ನನ್ನನ್ನು ತೋರಿಸಿ ಆಚಾರ್ಯರಿಗೆ ಪರಿಚಯ  ಹೇಳಲು ಹೊರಟರು. ತತ್ ಕ್ಷಣವೇ ಆಚಾರ್ಯ ಅವರು 'ಗೊತ್ತು ಬಿಡಿ, ನನ್ನ ಜೈಲುಮೇಟ್' ಎಂದು  ಹೇಳಿ ಅಲ್ಲಿದ್ದವರನ್ನೆಲ್ಲ ಅಚ್ಚರಿಯಲ್ಲಿ ಕೆಡವಿ ಬಿಟ್ಟರು.

ಹೌದು. ಆಚಾರ್ಯರ ನೆನಪಿನ ಶಕ್ತಿ ಅದ್ಭುತ. ನಾನು ಮತ್ತು ವಿ.ಎಸ್. ಆಚಾರ್ಯ ಅವರು  ಜೈಲುಮೇಟ್ ಗಳಾಗಿ ಇದ್ದದ್ದು 1975ರಲ್ಲಿ. ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದ ಸಮಯದಲ್ಲಿ. ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟ ಕಾಲದಲ್ಲಿ ಹಲವಾರು ಮಂದಿ ಸೆರೆಮನೆ ಸೇರಿದರೆ, ನಾನು ಗೆಳೆಯ  ರವಿ ಜೊತೆಗೆ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರದೊಂದಿಗೆ 'ಅಸತ್ಯ , ಅನ್ಯಾಯ, ದಬ್ಬಾಳಿಕೆಗಳ  ಮುಂದೆ ತಲೆ ಬಾಗುವುದು ಹೇಡಿತನ' ಎಂಬ ಬರಹ ಇದ್ದ ಪೋಸ್ಟರ್ ಹಚ್ಚಲು ಮಂಗಳೂರು ನಗರದ ಬೀದಿಗಳಲ್ಲಿ ಸುತ್ತಾಡುತ್ತಿದ್ದೆ. ಒಂದು ರಾತ್ರಿ ಇಡೀ ಆ ಕೆಲಸ ಮಾಡಿ, ಮರುದಿನ ಬೆಳಗ್ಗೆ ಮತ್ತೆ ಆ ಕೆಲಸ ಮುಂದುವರೆಸಿದಾಗ ಪೊಲೀಸರ ಕಣ್ಣಿಗೆ ಬಿದ್ದು  ಬಂಧಿತನಾಗಿದ್ದೆ. ಅದೇ ವೇಳೆಯಲ್ಲಿ ಬಂಧಿತರಾದ ಇತರ ಮೂವರು ನಂತರ ನನಗೆ ಸೆರೆಮನೆಯೊಳಗೆ ಪರಿಚಿತರಾದರು.

ಮೂರು ದಿನ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಸಕಲ 'ಪೊಲೀಸ್ ಆತಿಥ್ಯ' ಬಳಿಕ ಮಂಗಳೂರಿನ ಸಬ್ ಜೈಲಿಗೆ ರವಾನೆಯಾಗಿದ್ದೆ. ನವೆಂಬರ್ 14ರ ಮಕ್ಕಳದಿನ ದೇಶದಾದ್ಯಂತ ತುರ್ತು ಪರಿಸ್ಥಿತಿ ವಿರುದ್ಧ ವ್ಯಾಪಕ ಸತ್ಯಾಗ್ರಹ ಆರಂಭವಾಗಿ, ಲಕ್ಷಾಂತರ ಜನ ಬಂಧಿತರಾಗಿ ಸೆರೆಮನೆ ಸೇರಿದರು. ಅದಕ್ಕೂ ಎರಡು  ದಿನ ಮುಂಚಿತವಾಗಿ ಸೆರೆಮನೆ ಸೇರಿದ್ದ ನಾನು ಹಾಗೂ ಇತರ ಮೂವರು ಅದಕ್ಕೂ ಮೊದಲು ಬಂಧಿತರಾಗಿದ್ದ ಕೊಡಗಿನ ಇಬ್ಬರು  ಇದ್ದ ಸೆರೆಮನೆಗೆ ನೂರಾರು ಮಂದಿ ಬಂದು  ಸೇರಿದರು. ಹಾಗೆ ಒಳಗೆ ಬಂದಿದ್ದವರಲ್ಲಿ ಒಬ್ಬರು ಡಾ.  ವಿ.ಎಸ್. ಆಚಾರ್ಯರಾಗಿದ್ದರೆ ಇನ್ನೊಬ್ಬರು  ಡಾ.  ಮಾಧವ ಭಂಡಾರಿ.

ಡಾ. ಆಚಾರ್ಯ ಎಲ್ಲರ ಜೊತೆಗೆ ಮಾತನಾಡುತ್ತಾ ಆತ್ಮೀಯರಾಗಿದ್ದರು. ನಾನಿನ್ನೂ ಆಗ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ. ಪೊಲೀಸ್ ಠಾಣೆಯಲ್ಲಿ ನನಗೆ ಪೊಲೀಸ್ ಆತಿಥ್ಯವಾಗಿದ್ದ ಹಿನ್ನೆಲೆಯಲ್ಲಿ ಸ್ವತಃ ವೈದ್ಯರಾಗಿದ್ದ ಅವರು ವಿಶೇಷ ಮುತುವರ್ಜಿ ವಹಿಸಿ ತಪಾಸಣೆ ಮಾಡಿದ್ದರು. ಜೈಲು ಅಧಿಕಾರಿಗಳಿಗೆ ಶಿಫಾರಸು  ಮಾಡಿ ವೆನ್ ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೂ ಕಳುಹಿಸಿದ್ದರು.

ಹಾಗೆ ಸೆರೆಮನೆಯಲ್ಲಿ ಮೂರು ತಿಂಗಳು ಇದ್ದ ಸಮಯದಲ್ಲಿ ನನಗೆ ಆಚಾರ್ಯ ಸೇರಿದಂತೆ ಹಲವರನ್ನು ಹತ್ತಿರದಿಂದ ಕಾಣುವ ಅವಕಾಶ ಸಿಕ್ಕಿತ್ತು. ಆಚಾರ್ಯ ಅವರು ಕೇವಲ ವೈದ್ಯರಷ್ಟೇ ಅಲ್ಲ, ಹಸ್ತ ಸಾಮುದ್ರಿಕರೂ ಆಗಿದ್ದರು ಎಂಬುದು ನನಗೆ ಗೊತ್ತಾದದ್ದು ಆಗಲೇ. ಜೈಲಿನ ಒಳಗಿದ್ದ ಹಲವರ ಅಂಗೈ ನೋಡುತ್ತಾ ಅವರ ಭವಿಷ್ಯ ಹೇಳುವ ಕೆಲಸವನ್ನು ಆಚಾರ್ಯ ಮಾಡಿದ್ದರು.

ಅವರು ನನ್ನ ಅಂಗೈಯನ್ನು ಕೂಡಾ ನೋಡಿ  ಭವಿಷ್ಯ ಹೇಳಿದ್ದರು. ಅಂಗೈಯಲ್ಲಿ ಇದ್ದ ರೇಖೆಯೊಂದನ್ನು ತೋರಿಸಿ 'ನಿನ್ನ ಜೈಲುವಾಸವನ್ನು ಸೂಚಿಸುವ ರೇಖೆ ಇಲ್ಲಿದೆ ನೋಡು' ಎಂದಿದ್ದರು. ಜೀವನದ ಉದ್ದಕ್ಕೂ ಸಮಸ್ಯೆಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಆದರೆ ಹೆದರ ಬೇಕಾಗಿಲ್ಲ. ನಿನಗೆ ನಿರಂತರ ಬಲ ಕೊಡುವ ಒಂದು ರೇಖೆಯೂ ನಿನ್ನ ಕೈಯೊಳಗೆ ಇದೆ. ಈ ರೇಖೆಯ ಬಲದಿಂದಾಗಿ ನೀನು ಯಾವುದೇ ಸಮಯದಲ್ಲಿ ಕಷ್ಟದಲ್ಲಿ ಇದ್ದರೂ ಯಾವುದೋ ಒಂದು ಕಡೆಯಿಂದ ನೆರವು ಬಂದು ಆ ಕಷ್ಟದಿಂದ ಪಾರಾಗುವೆ ಎಂದು ಭವಿಷ್ಯ  ಹೇಳಿದ್ದರು.

ಆಚಾರ್ಯರು  ಹೇಳಿದ್ದು ಸುಳ್ಳಾಗಿರಲಿಲ್ಲ. ಆ ಬಳಿಕದ ಕಳೆದ 36 ವರ್ಷಗಳಲ್ಲಿ ನಾನು ಅದೆಷ್ಟೋ ಸಂದರ್ಭಗಳಲ್ಲಿ ಆಚಾರ್ಯ ಭವಿಷ್ಯ ನಿಜವಾದುದನ್ನು ಕಂಡಿದ್ದೇನೆ. ಹಾಗೆ ನಿಜವಾದಾಗಲೆಲ್ಲ, ನನ್ನ ಕೈಯಲ್ಲಿದ್ದ ರೇಖೆಯನ್ನು ನೋಡುತ್ತಾ ಆಚಾರ್ಯರ ನೆನಪು ಮಾಡಿಕೊಳ್ಳುತ್ತಿರುತ್ತೇನೆ.

ಜೈಲಿನಲ್ಲಿ ಆಚಾರ್ಯರು ನಮ್ಮ ಜೊತೆಗೆ ಇದ್ದದ್ದು ಸ್ವಲ್ಪ ಸಮಯ ಮಾತ್ರ. ನಂತರ ಅವರನ್ನು ಮತ್ತು ಡಾ. ಮಾಧವ ಭಂಡಾರಿ ಅವರನ್ನು 'ಮೀಸಾ' ಪ್ರಯೋಗಿಸಿ ಬಳ್ಳಾರಿ ಜೈಲಿಗೆ ಸಾಗಹಾಕಿದ್ದರು. ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ಸೆರೆವಾಸಿಗಳೆಲ್ಲರು ಅವರನ್ನು ಬೀಳ್ಕೊಟ್ಟಿದ್ದರು.

ಪತ್ರಕರ್ತ ಮಿತ್ರ ಜಯರಾಮ ಅಡಿಗ ಅವರು  ಈದಿನ (14 ಫೆಬ್ರವರು 2012 ಮಂಗಳವಾರ) ಬೆಳಗ್ಗೆ ಎಫ್ ಎಂ ರೈನ್ ಬೋ ದಲ್ಲಿ ಪ್ರಸಾರವಾದ ನನ್ನ 'ಕರ್ತ ಪತ್ರಕರ್ತ' ಕಾರ್ಯಕ್ರಮ ಆಲಿಸಿ ಫೋನ್ ಮಾಡಿದ್ದರು. ಮಾತುಕತೆ ಮುಗಿಸಿ ಫೋನ್ ಕೆಳಗಿಟ್ಟವರೇ ಮರುಕ್ಷಣದಲ್ಲೇ ಪುನಃ ಫೋನ್ ಮಾಡಿ ಆಚಾರ್ಯರ ಹಠಾತ್ ನಿಧನದ ಆಘಾತಕರ ಸುದ್ದಿ ಹೇಳಿದರು.

ಟಿವಿ ಹಾಕಿದರೆ ಟಿವಿಯಲ್ಲಿ ಆಚಾರ್ಯ  ನಿಧನದ ಸುದ್ದಿ ಬಿತ್ತರವಾಗುತ್ತಿತ್ತು..

ಆಚಾರ್ಯರಂತಹ  ಸಜ್ಜನ ವ್ಯಕ್ತಿ  ರಾಜಕಾರಣದಲ್ಲಿ ಇರುವುದು ಬಲು ಅಪರೂಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಬಂಧು ಬಳಗ, ಮಿತ್ರರಿಗೆ ನೋವು  ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಈ ಕ್ಷಣದಲ್ಲಿ ಬೇಡುವೆ.

ವಿ.ಎಸ್.ಆಚಾರ್ಯರ ಬಗ್ಗೆ ಹೆಚ್ಚಿನ ಮಾಹಿತಿಗೆ ಮೇಲಿನ ಆಚಾರ್ಯರ  ಚಿತ್ರವನ್ನು ಕ್ಲಿಕ್ಕಿಸಿ. Click the image above for more details about Dr. V.S. Acharya.

ನೆತ್ರಕೆರೆ ಉದಯಶಂಕರ  


3 comments:

Anonymous said...

'ಕಾಲ'ದ ಹಕ್ಕಿಗೆ ಸಿಲುಕಿ ಅಗಲಿದ ಬಹುಮುಖ ವ್ಯಕ್ತಿತ್ವದ ಆಚಾರ್ಯರ ಮತ್ತೊಂದು ಮುಖವನ್ನಿಲ್ಲಿ ತೆರೆದಿಟ್ಟ ನೆತ್ರಕೆರೆ ಉದಯಶಂಕರ ನಾರಾಯಣ ಭಟ್ಟರಿಗೆ ಕೃತಜ್ಞತೆಗಳು

ಗಿರೀಶ ಕೆ.ಎಸ್.

Anonymous said...

Nagesha Hegade
ಪ್ರಿಯ ನೆತ್ತರಕೆರೆ,
ನೀವು ಜೈಲುಹಕ್ಕಿಯಾಗಿದ್ದರ ಬಗ್ಗೆ ಇವೊತ್ತಿನ ಆಕಾಶವಾಣಿಯಲ್ಲಿ ಬಂತಲ್ಲ!
ನಿಮ್ಮ ಸಂದರ್ಶನದ ಕೊನೆಯಲ್ಲಿ ನಿಮ್ಮ ಫೋನ್ ನಂಬರು ಬರುತ್ತದೆಂದು ಕಾದು ಕೂತಿದ್ದೆ. ಇಂದು ಯಾರೊ ಹೊಸಬರೊಬ್ಬರು ನಿಮ್ಮೊಂದಿಗೆ ಮಾತಿಗೆ ಕೂತಿದ್ದರು. ಚೆನ್ನಾಗಿತ್ತು ಸಂದರ್ಶನ. ಪರ್ಯಾಯ ಬ್ಲಾಗ್ ಜೀವಂತ ಇದೆಯೆಂಬುದು ಗೊತ್ತಾಯಿತು. ನೋಡುತ್ತೇನೆ.
ನಾ.

Anonymous said...

Dr. Seetharam Prasad

May his soul rest in peace!
-Dr. Seetharam Prasad

Advertisement