My Blog List

Wednesday, November 21, 2012

Vittla Temple Rathayathra started... ಹೊರಟಿತಿದೋ ವಿಟ್ಲ ದೇಗುಲದ ರಥಯಾತ್ರೆ...


Vittla Temple Rathayathra started...
ಹೊರಟಿತಿದೋ ವಿಟ್ಲ ದೇಗುಲದ ರಥಯಾತ್ರೆ
...


ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮಕ್ಕೆ ನಾಂದಿ.

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ 'ರಥಯಾತ್ರೆ'ಗೆ 2012 ನವೆಂಬರ್ 19ರ ಸೋಮವಾರ ಚಾಲನೆ ನೀಡಲಾಯಿತು. ನವೀಕರಣಗೊಂಡಿರುವ ದೇವಸ್ಥಾನದ ಬ್ರಹ್ಮಕಲಶೋತ್ಸವವು 2013ರ ಜನವರಿ 9ರಿಂದ 24ರವರೆಗೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ರಥಯಾತ್ರೆಯು ವಿಟ್ಲ ಸೀಮೆಯ ಎಲ್ಲ 16 ಗ್ರಾಮಗಳಲ್ಲಿ ಸಂಚರಿಸಲಿದೆ.
ವಿಟ್ಲದ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾದರಿಯುಳ್ಳ ಈ 'ರಥ'ವು ನವೆಂಬರ್ 29ರವರೆಗೆ ಸೀಮೆಯ ಹದಿನಾರೂ ಗ್ರಾಮಗಳಲ್ಲಿ ಸಂಚರಿಸಿ ನವೆಂಬರ್ 30ರಂದು ಪುರ ಪ್ರವೇಶ ಮಾಡುವುದು.
ನವೆಂಬರ್ 30ರಂದು ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ ಕಾರ್ಯಕ್ರಮ ನಡೆಯುವುದು.
ರಥಯಾತ್ರೆಗೆ ಚಾಲನೆ ನೀಡಿದ ಬಳಿಕ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು 'ಸಹಸ್ರಾರು ವರ್ಷಗಳಿಗೆ ಶಾಶ್ವತ ಎಂಬಂತೆ ಅಧ್ಭುತವಾಗಿ ನಿರ್ಮಾಣಗೊಂಡಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ಭಾಗಿಗಳಾಗುವ ಸದವಕಾಶ ಒದಗಿ ಬಂದಿರುವುದು ಭಕ್ತರ ಪಾಲಿಗೆ ಪುಣ್ಯದ ವಿಷಯ' ಎಂದು ಹೇಳಿದರು.
'ದೇವರ ಎದುರು ಎಲ್ಲ ಸ್ತರದವರೂ ಒಂದೇ. ರಥದ ಮೂಲಕ ಶ್ರೀಪಂಚಲಿಂಗೇಶ್ವರ ದೇಗುಲವೇ ಸೀಮೆಯ ಎಲ್ಲ ಹದಿನಾರೂ ಗ್ರಾಮಗಳಲ್ಲಿ ಸಂಚರಿತ್ತಿರುವುದು ಒಂದು ಚಾರಿತ್ರಿಕ ಘಟನೆಗೆ ಸಾಕ್ಷಿಯಾಗಲಿದೆ ಎಂದು ಅವರು ನುಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ 'ಭಾವನಾತ್ಮಕ ಸಂಬಂಧ ಬೆಸೆಯಲು ರಥಯಾತ್ರೆ ಪೂರಕವಾಗಿದೆ. ಧರ್ಮದ ಮೂಲಕ ಗಳಿಸಿದುದನ್ನು ಧರ್ಮಯುತ ಕಾರ್ಯಕ್ಕಾಗಿ ಸಧ್ವಿನಿಯೋಗ ಮಾಡಿ' ಎಂದು ಕರೆ ನೀಡಿದರು.
ಬ್ರಹ್ಮಕಲಶೋತ್ಸವ ಅಧ್ಯಕ್ಷ ಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್.ಎನ್. ಕೂಡೂರು ಪ್ರಾಸ್ತಾವಿಕ ಭಾಷಣ ಮಾಡಿ ರಥಯಾತ್ರೆ ಕಾರ್ಯಕ್ರಮದ ವಿವರ ನೀಡಿದರು.
ವಿಟ್ಲ ಅರಮನೆಯ ವಿ. ಜನಾರ್ದನ ವರ್ಮ ಅರಸರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎಚ್. ಜಗನ್ನಾಥ ಸಾಲಿಯಾನ್ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

ಚಿತ್ರ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಹೊಸನಗರದ ಶ್ರೀ ರಾಮಚಂದ್ರಾಪುರಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ನವೆಂಬರ್ 19ರ ಸೋಮವಾರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ವೀಕ್ಷಿಸಿದರು. ಅದ್ಭುತವಾಗಿ ಮತ್ತೆ ತಲೆ ಎತ್ತಿ ನಿಂತಿರುವ ದೇವಸ್ಥಾನದ ವಿಹಂಗಮ ನೋಟವನ್ನು ಮೇಲಿನ ಚಿತ್ರದಲ್ಲಿ ನೋಡಬಹುದು.
(ಚಿತ್ರ ಮಾಹಿತಿ ಕೃಪೆ: ಪ್ರಜಾವಾಣಿ ಮಂಗಳೂರು ಆವೃತ್ತಿ ದಿನಾಂಕ 20 ನವೆಂಬರ್ 2012).


No comments:

Advertisement