My Blog List

Tuesday, December 31, 2019

೩೭೦ನೇ ವಿಧಿ ರದ್ದು: ೧೪೮ ದಿನಗಳ ಬಳಿಕ ೫ ಕಾಶ್ಮೀರಿ ರಾಜಕೀಯ ಧುರೀಣರ ಬಿಡುಗಡೆ

೩೭೦ನೇ ವಿಧಿ ರದ್ದು: ೧೪೮ ದಿನಗಳ ಬಳಿಕ ೫ ಕಾಶ್ಮೀರಿ ರಾಜಕೀಯ ಧುರೀಣರ ಬಿಡುಗಡೆ
ಶ್ರೀನಗರ: ಸಂವಿಧಾನದ ೩೭೦ನೇ ವಿಧಿರದ್ದು ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಕೇಂದ್ರ ಸರ್ಕಾರದ ಆಗಸ್ಟ್ ೫ರ ನಿರ್ಧಾರದ ಬಳಿಕ ಬಂಧಿಸಲಾಗಿದ್ದ ಐವರು ರಾಜಕೀಯ ನಾಯಕರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ೧೪೮ ದಿನಗಳ ಬಳಿಕ 2019 ಡಿಸೆಂಬರ್ 20ರ ಸೋಮವಾರ ಬಿಡುಗಡೆ ಮಾಡಿತು.

ನ್ಯಾಷನಲ್
ಕಾನ್ಫರೆನ್ ಮತ್ತು ಪಿಡಿಪಿಗೆ ಸೇರಿದ ಐವರು ನಾಯಕರು ಕಳೆದ ನಾಲ್ಕು ತಿಂಗಳುಗಳಿಂದ ಮುಂಜಾಗರೂಕತಾ ಬಂಧನದ ಅಡಿಯಲ್ಲಿ ಇದ್ದರು.

ಬಂಧಿತ ನಾಯಕರಲ್ಲಿ ಇಶ್ಫಾಖ್ ಜಬ್ಬಾರ್ ಮತ್ತು ಗುಲಾಂ ನಬಿ ಭಟ್ (ಎನ್ಸಿ) ಹಾಗೂ ಬಶೀರ್ ಮೀರ್ ಝಹೂರ್ ಮೀರ್ ಮತ್ತು ಯಾಸಿರ್ ರೇಶಿ (ಪಿಡಿಪಿ) ಅವರು ಸೇರಿದ್ದಾರೆ. ರೇಶಿ ಅವರು ಆಗಿನ ಮುಖ್ಯಮಂತ್ರಿ ಪಿಡಿಪಿ ನಾಯಕಿ ಮಹಬೂಬಾ ಮುಫ್ತಿ ಅವರ ವಿರುದ್ಧ ಬಹಿರಂಗ ಬಂಡಾಯ ಎದ್ದಿದ್ದ ಬಂಡುಕೋರ ನಾಯಕ ಎಂದೇ ಪರಿಗಣಿಸಲ್ಪಟ್ಟಿದ್ದರು.

ನವೆಂಬರ್ ೨೫ರಂದು ಪಿಡಿಪಿಯ ದಿಲಾವರ್ ಮೀರ್ ಮತ್ತು ಡೆಮಾಕ್ರಟಿಕ್ ಪಾರ್ಟಿ ನ್ಯಾಷನಲಿಸ್ಟ್ ನಾಯಕ ಗುಲಾಂ ಹಸನ್ ಮೀರ್ ಅವರನ್ನು ೧೧೦ ದಿನಗಳ ಬಂಧನದ ಬಳಿಕ ಕೇಂದ್ರಾಡಳಿತ ಪ್ರದೇಶ ಆಡಳಿತವು ಬಿಡುಗಡೆ ಮಾಡಿತ್ತು. ಅವರು ಮಾಜಿ ಶಾಸಕರಾಗಿದ್ದು ಬಾರಾಮುಲ್ಲಾ ಜಿಲ್ಲೆಯ ನಿವಾಸಿಗಳಾಗಿದ್ದರು.

ಅದೇ ದಿನ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯ ವಿಧಾನಸಭೆಯ ಸದಸ್ಯರಾಗಿದ್ದ ಆಶ್ರಫ್ ಮೀರ್ ಮತ್ತು ಹಕೀನ್ ಯಾಸೀನ್ ಅವರನ್ನು ಅವರ ನಿವಾಸಗಳಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಬಂಧನ ಮುಂದುವರೆದಿತ್ತು.

ಮೀರ್ ಮತ್ತು ಯಾಸೀನ್ ಇಬ್ಬರೂ ಶಾಸಕರು ವಸತಿ ಗೃಹದಲ್ಲಿ ಇರಿಸಲ್ಪಟ್ಟಿದ್ದ ೩೪ ಮಂದಿ ರಾಜಕೀಯ ನಾಯಕರಲ್ಲಿ ಸೇರಿದ್ದರು. ಶ್ರೀನಗರದ ಸೆಂಟೌರ್ ಹೋಟೆಲಿನಿಂದ ಅವರನ್ನು ನವೆಂಬರ್ ೧೮ರಂದು ಶಾಸಕರ ವಸತಿ ಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಇದಕ್ಕೂ ಮುನ್ನ ನೂತನ ಕೇಂದ್ರಾಡಳಿತಪ್ರದೇಶ ಆಡಳಿತವು ಕೆಲವು ಬಂಧಿತ ರಾಜಕೀಯ ನಾಯಕರಿಗೆ ತಮ್ಮ ಮನೆಗಳಿಗೆ ಕೆಲವು ತಾಸುಗಳ ಕಾಲ ಭೇಟಿಗೆ ಅವಕಾಶ ನೀಡಿತ್ತು.

ಮೂವರು
ಮಾಜಿ ಮುಖ್ಯಮಂತ್ರಿಗಳಾದ ಫರೂಕ್ ಅಬ್ದುಲ್ಲ, ಓಮರ್ ಅಬ್ದುಲ್ಲ ಮತ್ತು ಮೆಹಬೂಬಾ ಮುಫ್ತಿ ಅವರು ಇನ್ನೂ ಬಂಧನದಲ್ಲೇ ಇದ್ದಾರೆ. ಫರೂಕ್ ಅಬ್ದುಲ್ಲ ಅವರನ್ನು ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆಯ ಅಡಿಯಲ್ಲಿ ಸೆಪ್ಟೆಂಬರ್ ೧೭ರಂದು ಬಂಧಿಸಿ ಅವರ ನಿವಾಸದಲ್ಲೇ ಗೃಹ ಬಂಧನದಲ್ಲಿ ಇರಿಸಲಾಗಿದೆ. ಒಮರ್ ಅಬ್ದುಲ್ಲ ಮತ್ತು ಮೆಹಬೂಬಾ ಮುಫ್ತಿ ಅವರನ್ನು ನಗರದ ಬೇರೆ ಬೇರೆ ಕಡೆಗಳಲ್ಲಿ ಬಂಧನದಲ್ಲಿ ಇರಿಸಲಾಗಿದೆ.

ಮೆಹಬೂಬಾ ಮುಫ್ತಿ ಅವರನ್ನು ಇತ್ತೀಚೆಗೆ ಝಬೇರ್ವಾನ್ ವಲಯದ ಬೆಟ್ಟದಲ್ಲಿನ ಪ್ರವಾಸೀ ಗೃಹದಿಂದ ನಗರದ ಸರ್ಕಾರಿ ವಸತಿಗೆ ಸ್ಥಳಾಂತರಿಸಲಾಗಿತ್ತು.

No comments:

Advertisement