My Blog List

Sunday, December 22, 2019

ಪಶುವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ: ಆರೋಪಿಗಳ ಶವ ಮರುಪರೀಕ್ಷೆಗೆ 'ಹೈ' ಆದೇಶ

 ಪಶುವೈದ್ಯೆ ಮೇಲಿನ ಅತ್ಯಾಚಾರ, ಹತ್ಯೆ: ಆರೋಪಿಗಳ  ಶವ ಮರುಪರೀಕ್ಷೆಗೆ  'ಹೈ'  ಆದೇಶ
ಹೈದರಾಬಾದ್:  ಹೈದರಾಬಾದ್ ಪಶುವೈದ್ಯೆ ಮೇಲಿನ ಅತ್ಯಾಚಾರ-ಹತ್ಯೆ ಆರೋಪಿಗಳ ಶವಗಳ ಮರು ಪರೀಕ್ಷೆಯನ್ನು ೪೮ ಗಂಟೆಗಳ ಒಳಗಾಗಿ ನಡೆಸುವಂತೆ ತೆಲಂಗಾಣ ಹೈಕೋರ್ಟ್ 2019 ಡಿಸೆಂಬರ್ 21ರ ಶನಿವಾರ ಆದೇಶ ನೀಡಿತು. ನಾಲ್ಕು ಮಂದಿ ಅತ್ಯಾಚಾರ- ಹತ್ಯೆ ಆರೋಪಿಗಳನ್ನು ಡಿಸೆಂಬರ್ ೬ರಂದು ಪೊಲೀಸರು ಎನ್ ಕೌಂಟರಿನಲ್ಲಿ ಕೊಂದು ಹಾಕಿದ್ದರು.

ಮುಖ್ಯ ನ್ಯಾಯಮೂರ್ತಿ ರಾಘವೇಂದ್ರ ಸಿಂಗ್ ಚೌಹಾಣ್ ಮತ್ತು ನ್ಯಾಯಮೂರ್ತಿ .ಅಭಿಷೇಕ್ ರೆಡ್ಡಿ ಅವರನ್ನು ಒಳಗೊಂಡ ವಿಭಾಗೀಯ ಪೀಠವು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಏಮ್ಸ್) ವಿಧಿ ವಿಜ್ಞಾನ ತಜ್ಞರ ತಂಡವು ಸಾವನ್ನಪ್ಪಿರುವ ಆರೋಪಿಗಳ ಮರು ಶವ ಪರೀಕ್ಷೆಯನ್ನು ಡಿಸೆಂಬರ್ ೨೩ರ ಸಂಜೆ ಗಂಟೆಗೆ ಮುನ್ನ ನಡೆಸಬೇಕು ಎಂದು ನಿರ್ದೇಶನ ನೀಡಿತು.

ಶವಪರೀಕ್ಷೆಯ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಮತ್ತು ಸಾವನ್ನಪ್ಪಿರುವ ಆರೋಪಿಗಳ ಶವಗಳನ್ನು ಅವರ ಕುಟುಂಬ ಸದಸ್ಯರಿಗೆ ಒಪ್ಪಿಸಬೇಕು ಎಂದು ಪೀಠವು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ ಮುಖ್ಯ ಕಾರ್ಯದರ್ಶಿ, ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಗೆ ಆಜ್ಞಾಪಿಸಿತು.

ಮೊಹಮ್ಮದ್ ಆರಿಫ್, ಜೊಲ್ಲು ನವೀನ್, ಜೊಲ್ಲು ಶಿವ ಮತ್ತು ಚಿಂತಕುಂಟ ಚೆನ್ನಕೇಶವುಲು - ನಾಲ್ಕು ಆರೋಪಿಗಳು ನವೆಂಬರ್ ೨೭ರಂದು ಹೈದರಾಬಾದಿನ ಹೊರವಲಯದಲ್ಲಿ ೨೬ರ ಹರೆಯದ ಪಶುವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಕೊಂದು ಹಾಕಿದ್ದರು ಎಂದು ಆಪಾದಿಸಲಾಗಿತ್ತು. ಪೊಲೀಸರು ಅವರನ್ನು ಬಂಧಿಸಿ ನವೆಂಬರ್ ೨೭ರಂದು ಸ್ಥಳೀಯ ಮ್ಯಾಜಿಸ್ಟ್ರೇಟರ ಮುಂದೆ ಹಾಜರು ಪಡಿಸಿದ್ದರು.

ಹೆಚ್ಚಿನ ತನಿಖೆಗಾಗಿ ಪೊಲೀಸರು ಆರೋಪಿಗಳನ್ನು ಡಿಸೆಂಬರ್ ೪ರವರೆಗೆ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಅವರನ್ನು ಶಾದ್ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಚಟನಪಳ್ಳಿಗೆ ಡಿಸೆಂಬರ್ ೬ರಂದು ಅವರ ಅಪರಾಧದ ದೃಶ್ಯಾವಳಿಯ ಮರುಸೃಷ್ಟಿ ಸಲುವಾಗಿ ಕರೆದೊಯ್ಯಲಾಗಿತ್ತು.

ಘಟನಾಸ್ಥಳದಲ್ಲಿ ಆರೋಪಿಗಳು ಪೊಲೀಸ್ ಸಿಬ್ಬಂದಿಯ ಶಸ್ತ್ರಾಸ್ತ್ರ ಕಿತ್ತುಕೊಂಡು ಅವರತ್ತ ಗುಂಡು ಹಾರಿಸಿದಾಗ, ಅದಕ್ಕೆ  ಪ್ರತಿಯಾಗಿ ಪೊಲೀಸರು ಗುಂಡಿಟ್ಟು ಅವರನ್ನು ಕೊಂದು ಹಾಕಿದ್ದರು.

ಆರೋಪಿಗಳ
ಶವಗಳನ್ನು ಮೂರು ದಿನಗಳ ಬಳಿಕ ಡಿಸೆಂಬರ್ ೯ರಂದು ಹೈದರಾಬಾದಿನ ಗಾಂಧಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು ಮತ್ತು ಮಹಬೂಬ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲ ಶವಪರೀಕ್ಷೆ ನಡೆಸಿ ಬಳಿಕ ಶವಗಳನ್ನು ಅಲ್ಲಿನ ಶವಾಗಾರದಲ್ಲಿ ಇರಿಸಲಾಗಿತ್ತು.

ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡು ಸಮಗ್ರ ತನಿಖೆಗಾಗಿ ತ್ರಿಸದಸ್ಯ ಸಮಿತಿ ರಚಿಸಿದ ಹಿನ್ನೆಲೆಯಲ್ಲಿ ಎನ್ ಕೌಂಟರಿಗೆ ಸಂಬಂಧಿಸಿದ ಯಾವುದೇ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಳ್ಳಲು ಹೈಕೋರ್ಟ್ ಮೊದಲಿಗೆ ನಿರಾಕರಿಸಿತ್ತು.

ಆದಾಗ್ಯೂ, ಸುಪ್ರೀಂಕೋರ್ಟ್ ಬಳಿಕ ಎಲ್ಲ ಸಾಕ್ಷ್ಯಾಧಾರಗಳ ಸಂಗ್ರಹ ಬಳಿಕ ನಾಲ್ಕು ಮಂದಿಯ ಶವಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟಿಗೆ ಸೂಚಿಸಿತ್ತು.

ನಾಲ್ಕು ಮಂದಿಯ ಶವಗಳು ೨ರಿಂದ ಡಿಗ್ರಿ ತಾಪಮಾನದಲ್ಲಿ ಇರಿಸಲಾಗಿದ್ದರೂ ಈಗಾಗಲೇ ಶೇಕಡಾ ೫೦ರಷ್ಟು ಕೊಳೆತಿವೆ ಎಂದು ಗಾಂಧಿ ಆಸ್ಪತ್ರೆಯ ಸೂಪರಿಂಟೆಂಡೆಂಟ್ ಡಾ. ಪಿ. ಶರವಣ್ ಕುಮಾರ್ ಅವರು ಶನಿವಾರ ಬೆಳಗ್ಗೆ ಹೈಕೋರ್ಟಿಗೆ ತಿಳಿಸಿದ್ದರು.

ಇನ್ನೊಂದು ವಾರದಲ್ಲಿ ಶವಗಳು ಕೊಳೆತು ಸಂಪೂರ್ಣ ವಿಭಜನಗೊಳ್ಳುತ್ತವೆ. ಆದ್ದರಿಂದ ಆದಷ್ಟೂ ಶೀಘ್ರ ಅವುಗಳನ್ನು ಅವರ ಬಂಧುಗಳಿಗೆ ಹಸ್ತಾಂತರಿಸಬೇಕು ಎಂದು ಡಾ. ಕುಮಾರ್ ಹೇಳಿದ್ದರು.

ಎರಡನೇ ಶವಪರೀಕ್ಷೆಯ ಅಗತ್ಯವಿಲ್ಲ ಎಂಬುದಾಗಿ ಅವರು ತಿಳಿಸಿದ್ದರೂ, ಹೈಕೋರ್ಟ್ ಯಾವುದೇ ಸಂಶಯದ ನಿವಾರಣೆ ಸಲುವಾಗಿ ದೆಹಲಿ ವೈದ್ಯರ ಮೂಲಕ ಮೂರನೇ ವ್ಯಕ್ತಿಗಳ ಅಧ್ಯಯನ ನಡೆಯಬೇಕು ಎಂದು ಹೇಳಿತು.

ಎನ್
ಕೌಂಟರಿನಲ್ಲಿ ಬಳಸಲಾದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಒಪ್ಪಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅವುಗಳನ್ನು ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಬೇಕು ಎಂದೂ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತು.

No comments:

Advertisement