My Blog List

Wednesday, December 4, 2019

ಅನುಮತಿ ಇಲ್ಲದೆ ಭಾರತದ ಜಲ ಪ್ರದೇಶಕ್ಕೆ ಚೀನೀ ನೌಕೆ

ಅನುಮತಿ ಇಲ್ಲದೆ ಭಾರತದ ಜಲ ಪ್ರದೇಶಕ್ಕೆ ಚೀನೀ ನೌಕೆ
ಭಾರತೀಯ ಪಡೆಯಿಂದ ಅರ್ಧಚಂದ್ರ
ನವದೆಹಲಿ: ಅಂಡಮಾನ್ ನಿಕೋಬಾರ್ ದ್ವೀಪಸಮೂಹದ ಬಳಿಗೆ ಅನುಮತಿ ಇಲ್ಲದೆ ಪ್ರವೇಶಿಸಿದ್ದ ಚೀನೀ ಸಂಶೋಧನಾ ನೌಕೆಯೊಂದನ್ನು ಇತ್ತೀಚೆಗೆ ಭಾರತೀಯ ಜಲ ಪ್ರದೇಶದಿಂದ ದೂರಕ್ಕೆ ದಬ್ಬಲಾಗಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ ಬೀರ್ ಸಿಂಗ್ ಅವರು 2019 ಡಿಸೆಂಬರ್ 04ರ ಮಂಗಳವಾರ ಇಲ್ಲಿ ಹೇಳಿದರು.

ಚೀನೀ ಸಂಶೋಧನಾ ನೌಕೆಯು ಯಾವುದೇ ಕಾರ್ಯಾಚರಣೆ ನಡೆಸಲು ಅನುಪತಿ ಪಡೆದಿರಲಿಲ್ಲ ಎಂದು ನುಡಿದ ಅವರು ಅನುಮತಿ ಇಲ್ಲದೆ ಭಾರತೀಯ ಜಲ ಪ್ರದೇಶ ಪ್ರವೇಶಿಸುವುದರ ವಿರುದ್ಧ ಎಚ್ಚರಿಕೆ ನೀಡಿದರು.

ನಮ್ಮ ವಿಶೇಷ ಆರ್ಥಿಕ ವಲಯದಲ್ಲಿ (ಇಇಝಡ್) ನೀವು ಏನಾದರೂ ಮಾಡುವುದಿದ್ದರೆ ನೀವು ನಮಗೆ ತಿಳಿಸಬೇಕು ಮತ್ತು ಅನುಮತಿ ಪಡೆಯಬೇಕು ಎಂಬುದು ನಮ್ಮ ನಿಲುವುಎಂದು ಡಿಸೆಂಬರ್ ೪ರಂದು ನಡೆಯುವ ನೌಕಾ ದಿನಕ್ಕೆ ಮುಂಚಿತವಾಗಿ ಮಂಗಳವಾರ ನಡೆಸಿದ ತಮ್ಮ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಸಿಂಗ್ ನುಡಿದರು.

ಸಮುದ್ರ ಕಾನೂನಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಸಮಾವೇಶದ ಪ್ರಕಾರ, ಯಾವುದೇ ರಾಷ್ಟ್ರವೊಂದರ ವಿಶೇಷ ಆರ್ಥಿಕ ವಲಯವು ಅದರ ಕರಾವಳಿಯಿಂದ ೨೦೦ ನಾಟಿಕಲ್ ಮೈಲುಗಳಷ್ಟು ದೂರಕ್ಕೆ ವ್ಯಾಪಿಸಿದೆ ಮತ್ತು ಸಮುದ್ರ ವಲಯದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಅನ್ವೇಷಣೆ, ಬಳಕೆ, ಸಂರಕ್ಷಣೆ ಮತ್ತು ನಿರ್ವಹಣೆಯನ್ನು ಮಾಡುವ ಸಾರ್ವಭೌಮ ಹಕ್ಕುಗಳನ್ನು ರಾಷ್ಟ್ರವು ಹೊಂದಿರುತ್ತದೆ.

ಚೀನೀ ನೌಕೆ ಶಿ ಯಾನ್ , ಸೆಪ್ಟೆಂಬರ್ ತಿಂಗಳಲ್ಲಿ ಪೋರ್ಟ್ ಬ್ಲೇರ್ ಸಮೀಪ ಕೆಲವು ಚಟುವಟಿಕೆಗಳನ್ನು ನಡೆಸುತ್ತಿರುವುದು ಕಂಡು ಬಂದಿತ್ತು  ಮತ್ತು ತತ್ ಕ್ಷಣವೇ ಅಲ್ಲಿಂದ ದೂರಕ್ಕೆ ತೆರಳುವಂತೆ ಅದಕ್ಕೆ ಸೂಚನೆ ನೀಡಲಾಯಿತು ಎಂದು ಸಿಂಗ್ ವಿವರಿಸಿದರು.

ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನೀ ಹಾಜರಿಯ ಮೇಲೆ ಕಣ್ಣಿಟ್ಟಿದೆ. ಅವರಿಗೆ ಆಳ ಸಮುದ್ರ ಗಣಿಗಾರಿಕೆಗೆ ಪ್ರದೇಶಗಳನ್ನು ನೀಡಲಾಗಿದೆ. ಚೀನಾದ ಸಾಗರ ಸಂಶೋಧನಾ ನೌಕೆಗಳು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಇವೆ. ಯಾವುದೇ ಸಮಯದಲ್ಲಿ ಏಳರಿಂದ ಎಂಟು ಚೀನೀ ನೌಕೆಗಳು ಪ್ರದೇಶದಲ್ಲಿ ಇರುತ್ತವೆ. ಅವುಗಳಲ್ಲಿ ಒಂದು ನೌಕೆಯು ಕಡಲ್ಗಳ್ಳತನ ನಿಗ್ರಹ ಪಾತ್ರವನ್ನೂ ವಹಿಸುತ್ತಿದೆಎಂದು ಸಿಂಗ್ ನುಡಿದರು.

ಭಾರತವು ಬಹುರಾಷ್ಟ್ರೀಯ ಮಿಲನ್ ಕವಾಯತನ್ನು ಪೂರ್ವ ಕರಾವಳಿಯಾಚೆ ದೂರ ಸಮುದ್ರದಲ್ಲಿ ಮುಂದಿನ ವರ್ಷ ನಡೆಸಲಿದ್ದು, ಅದಕ್ಕೆ ೪೧ ರಾಷ್ಟ್ರಗಳಿಗೆ ಆಹ್ವಾನ ನೀಡಿದೆ. ಏನಿದ್ದರೂ ಚೀನಾಕ್ಕೆ ಆಹ್ವಾನ ನೀಡಲಾಗಿಲ್ಲ.

ಭಾರತವು ಸಮಾನ ಮನಸ್ಕ ರಾಷ್ಟ್ರಗಳಿಗೆ ಮಾತ್ರ ಆಹ್ವಾನ ನೀಡಿದೆ. ನಾವು ಚೀನಾದ ಜೊತೆಗೆ ಸಮುದ್ರಯಾನ ಕವಾಯತನ್ನು ಕೂಡಾ ನಡೆಸಿಲ್ಲ. ಇತರ ರಾಷ್ಟ್ರಗಳ ಜೊತೆಗೆ ನಮಗೆ ಉತ್ತಮ ಒಡನಾಟ ಇದೆಎಂದು ನೌಕಾಪಡೆ ಮುಖ್ಯಸ್ಥ ವಿವರಿಸಿದರು.

ಕವಾಯತನ್ನು ಹಿಂದೆ ಪೋರ್ಟ್ ಬ್ಲೇರ್ ಆಚೆ ದೂರ ಸಮುದ್ರದಲ್ಲಿ ನಡೆಸಲಾಗಿತ್ತು. ಆದರೆ ಅದನ್ನು ಪೂರ್ವ ಕರಾವಳಿಯಲ್ಲಿ ಉತ್ತಮ ರೇಡಿಯೋ ಪ್ರಸಾರ ವ್ಯವಸ್ಥೆ ಇರುವುದರಿಂದ ವಿಶಾಖಪಟ್ಟಣಕ್ಕೆ ವರ್ಗಾಯಿಸಲಾಯಿತುಎಂದು ಅವರು ನುಡಿದರು.

ಕಳೆದ ಐದು ವರ್ಷಗಳಲ್ಲಿ ರಕ್ಷಣಾ ಮುಂಗಡಪತ್ರದಲ್ಲಿ ನೌಕಾಪಡೆಯ ಪಾಲು ಶೇಕಡಾ ೧೮ರಿಂದ ೧೩ಕ್ಕೆ ಇಳಿದಿದೆ. ಆದ್ದರಿಂದ ತನ್ನ ಆಧುನೀಕರಣ ಕಾರ್ಯಕ್ರಮಕ್ಕೆ ನೌಕಾಪಡೆಗೆ ಹೆಚ್ಚಿನ ಹಣದ ಆವಶ್ಯಕತೆ ಇದೆ ಎಂದೂ ಸಿಂಗ್ ಒತ್ತಿ ಹೇಳಿದರು. ಹೆಚ್ಚುವರಿ ಹಣದ ಅಗತ್ಯವನ್ನು ನೌಕಾಪಡೆಯು ಸರ್ಕಾರದ ಗಮನಕ್ಕೆ ತಂದಿದೆ ಎಂದು ಅವರು ನುಡಿದರು.

ಚೀನೀ ನೌಕಾಪಡೆಯು ಕ್ಷಿಪ್ರ ಆಧುನೀಕರಣಕ್ಕೆ  ಪ್ರತಿಕ್ರಿಯೆ ಕೇಳಿದಾಗ, ’ಚೀನಾವು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದುವರೆಯುತ್ತಿದೆ. ಮತ್ತು ಭಾರತೀಯ ನೌಕಾಪಡೆಯು ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆಎಂದು ಅವರು ಹೇಳಿದರು.

ಹಿಂದೂ ಮಹಾಸಾಗರದಲ್ಲಿ ಚೀನಾದ ಉಪಸ್ಥಿತಿ ಹೆಚ್ಚುತ್ತಿರುವ ಬಗ್ಗೆ ಭಾರತ ನಿಕಟವಾಗಿ ಗಮನಿಸುತ್ತಿದೆ ಎಂದು ನುಡಿದ ಸಿಂಗ್ಯಾವುದೇ ಬೆದರಿಕೆಯನ್ನು ನಿವಾರಿಸಬಲ್ಲ ಸಾಮರ್ಥ್ಯ ಭಾರತಕ್ಕೆ ಇದೆ. ಯಾವುದೇ ಕ್ರಮವನ್ನೂ ಅಗತ್ಯಕ್ಕೆ ತಕ್ಕಂತೆ ಅದು ಕೈಗೊಳ್ಳುತ್ತದೆಎಂದು ನುಡಿದರು.

ಹಿಂದೂ ಮಹಾಸಾಗರ ಪ್ರದೇಶಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಉದ್ದೇಶಗಳ ಬಗ್ಗೆ ನಮಗೆ ಸಂಪೂರ್ಣ ಅರಿವು ಇದೆ ಎಂದು ಅಡ್ಮಿರಲ್ ಕರಮ್ ಬೀರ್ ಸಿಂಗ್ ಹೇಳಿದರು.

ಭಯೋತ್ಪಾದಕ ಗುಂಪುಗಳು ಸಮುದ್ರ ಮಾರ್ಗಗಳ ಮೂಲಕ ಭಾರತವನ್ನು ಪ್ರವೇಶಿಸಲು ಹೊಂಚು ಹಾಕುತ್ತಿವೆ ಎಂಬ ಬಗ್ಗೆ ಗುಪ್ತಚರ ಮಾಹಿತಿಗಳು ಇವೆ.  ಯಾವುದೇ ಬೆದರಿಕೆಯನ್ನು ಮಟ್ಟ ಹಾಕಬಲ್ಲ ರಕ್ಷಣಾ ಸಾಮರ್ಥ್ಯ ನಮಗೆ ಇದೆ ಎಂದು ಅವರು ನುಡಿದರು.

ಮೂರು ವಿಮಾನ ವಾಹಕಗಳನ್ನು ಹೊಂದುವ ದೀರ್ಘಗಾಮೀ ಯೋಜನೆ ನೌಕಾಪಡೆಯ ಮುಂದಿದೆ. ಭಾರತದ ಮೊತ್ತ ಮೊದಲ ದೇಶೀ ವಿಮಾನ ವಾಹಕವು ೨೦೨೨ರ ವೇಳೆಗೆ ಪೂರ್ಣವಾಗಿ ಕಾರ್ಯಾಚರಣೆಗೆ ಇಳಿಯಲಿದೆ ಮತ್ತು ಅದು ಮಿಗ್ -೨೯ ಕೆ ವಿಮಾನವನ್ನು ಹೊಂದಿರುತ್ತದೆ ಎಂದು ಸಿಂಗ್ ಹೇಳಿದರು.

No comments:

Advertisement