My Blog List

Friday, February 7, 2020

ಬೋಡೋ ಒಪ್ಪಂದಕ್ಕೆ ಪ್ರಧಾನಿ ಮೋದಿ ಶ್ಲಾಘನೆ, ಸಿಎಎ ಬಗ್ಗೆ ಭರವಸೆ

ಬೋಡೋ ಒಪ್ಪಂದಕ್ಕೆ ಪ್ರಧಾನಿ ಮೋದಿ ಶ್ಲಾಘನೆ,
  ಸಿಎಎ ಬಗ್ಗೆ ಭರವಸೆ
ಈಶಾನ್ಯದಲ್ಲಿ ಶಾಂತಿಯ ನವ ಯುಗಾರಂಭ, ಇನ್ನೆಂದೂ ಹಿಂಸೆ, ಅಶಾಂತಿ ಇಲ್ಲ
ಕೋಕ್ರಜ್ಹಾರ್ (ಅಸ್ಸಾಂ): ಕೇಂದ್ರದಲ್ಲಿ ಎರಡನೇ ಅವಧಿಗೆ ಪುನರಾಯ್ಕೆಗೊಂಡ ಬಳಿಕ ಇದೇ ಮೊದಲ ಬಾರಿಗೆ 2020 ಶುಕ್ರವಾರ ಅಸ್ಸಾಮಿಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ಬೋಡೋ ಒಪ್ಪಂದವನ್ನು ಈಶಾನ್ಯದಲ್ಲಿನ ಶಾಂತಿಯ ನವ ಯುಗದ ಆರಂಭ ಎಂಬುದಾಗಿ ಬಣ್ಣಿಸಿ ಶ್ಲಾಘಿಸಿದರು. ಮತ್ತು ರಾಜ್ಯದಲ್ಲಿ ಆಶಾಂತಿ ಸೃಷ್ಟಿಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದರು.

ಸ್ವಾತಂತ್ರ್ಯಾನಂತರ ಭಾರತದಲ್ಲೇ ಅತ್ಯಂತ ಬೃಹತ್ ರಾಜಕೀಯ ಸಮಾವೇಶ ಎಂಬುದಾಗಿ ಸ್ವತಃ ಬಣ್ಣಿಸಿದ ಸಭೆಯನ್ನು  ಉದ್ದೇಶಿಸಿ ಮಾತನಾಡಿದ ಪ್ರಧಾನಿ, ತಮ್ಮ ಭಾಷಣದಲ್ಲಿ ಈಶಾನ್ಯ ಭಾರತದ ಅಭಿವೃದ್ಧಿ ನಿಟ್ಟಿನ ತಮ್ಮ ಸರ್ಕಾರದ ದೃಷ್ಟಿಯನ್ನು ವಿವರಿಸಿದರು. ಪ್ರದೇಶದಲ್ಲಿ ಕಳೆದ ಎರಡು ತಿಂಗಳಲ್ಲಿ ಭುಗಿಲೆದ್ದ ಭಾರೀ ಪ್ರತಿಭಟನೆಗಳ ಪರಿಣಾಮವಾಗಿ ಹಿನ್ನಡೆ ಕಂಡಿದ್ದಆಕ್ಟ್ ಈಸ್ಟ್ ಪಾಲಿಸಿಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿರ್ಧಾರವನ್ನು ಪ್ರಧಾನಿ ಪ್ರಕಟಿಸಿದರು.

ಬೊಡೋಗಳ ಜೊತೆಗೆ ಸಹಿ ಮಾಡಲಾಗಿರುವ ಶಾಂತಿ ಒಪ್ಪಂದವನ್ನುರಾಜ್ಯಕ್ಕೆ ಹೊಸ ಬೆಳಕುಎಂಬುದಾಗಿ ಬಣ್ಣಿಸಿದ ಪ್ರಧಾನಿ ಇದು ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು  ಸ್ಥಾಪಿಸಲಿದೆ ಎಂದು ಹೇಳಿದರು. ’ಬೋಡೋಲ್ಯಾಂಡ್ ಚಳವಳಿಯ ಭಾಗವಾಗಿದ್ದ ಜನರನ್ನು ನಾನು ಭಾರತದ ಮುಖ್ಯ ಪ್ರವಾಹಕ್ಕೆ ಸ್ವಾಗತಿಸುತ್ತೇನೆಎಂದು ಪ್ರಧಾನಿ ನುಡಿದರು.

ಅಸ್ಸಾಮಿಗೆ ಭಯೋತ್ಪಾದನೆಯ ಕತ್ತಲು ಮತ್ತೆ ಬರಲು ತಮ್ಮ ಸರ್ಕಾರ ಅವಕಾಶ ನೀಡುವುದಿಲ್ಲಎಂಬುದಾಗಿ ಪ್ರತಿಜ್ಞೆ ಮಾಡಿದ ಮೋದಿ, ’ ಪ್ರದೇಶದಲ್ಲಿ ಇನ್ನೆಂದೂ ಯಾರೇ ಒಬ್ಬ ನಾಗರಿಕ ಹಿಂಸಾಚಾರದ ಕಾರಣಕ್ಕಾಗಿ ಸಾವನ್ನಪ್ಪುವುದಿಲ್ಲಎಂದು ಹೇಳಿದರು.

ಕುಟುಂಬವು ಇನ್ನೆಂದೂ ತನ್ನ ಸಹೋದರ, ಸಹೋದರಿ, ತಾಯಿ ಅಥವಾ ತಂದೆ ಸೇರಿದಂತೆ ಯಾವ ಸದಸ್ಯನನ್ನೂ ಕಳೆದುಕೊಳ್ಳುವುದಿಲ್ಲ. ದಟ್ಟಾರಣ್ಯದಿಂದ ಮರಳಿದ ಮಕ್ಕಳ ತಾಯಂದಿರು ಈದಿನ ಇಲ್ಲಿ ನನ್ನನ್ನು ಹರಸುತ್ತಿದ್ದಾರೆ.  ಎಷ್ಟೋ  ಕುಟುಂಬಗಳು ಸಮಾಧಾನದ ನಿಟ್ಟುಸಿರು ಎಳೆದಿವೆಎಂದು ಮೋದಿ ನುಡಿದರು.
೨೦೨೦ರ ಜನವರಿ ೨೭ರಂದು ಬೋಡೋ ಒಪ್ಪಂದಕ್ಕೆ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ಡಿಎಫ್ಬಿ), ಆಲ್ ಬೊಡೋ ಸ್ಟೂಡೆಂಟ್ಸ್ ಯೂನಿಯನ್ (ಎಬಿಎಸ್ಯು) ಮತ್ತು ಸಿವಿಲ್ ಸೊಸೈಟಿ ಗ್ರೂಪ್ ಸಂಘಟನೆಗಳ ಜೊತೆಗೆ ಸರ್ಕಾರವು ಒಪ್ಪಂದಕ್ಕೆ ಸಹಿ ಹಾಕಿತ್ತು. ಒಪ್ಪಂದವು ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ ಜಿಲ್ಲೆಗಳಲ್ಲಿನ (ಬೋಡೋಲ್ಯಾಂಡ್ ಟೆರಿಟೋರಿಯಲ್ ಏರಿಯಾ ಡಿಸ್ಟ್ರಿಕ್ಟ್ -ಬಿಟಿಎಡಿ) ಮೂರು ದಶಕಗಳ ಬಂಡಾಯಕ್ಕೆ ತೆರೆ ಎಳೆದಿದೆ.

ಒಪ್ಪಂದದ
ಪ್ರಕಾರ ಪ್ರದೇಶ ಇದೀಗ ಬೊಡೋಲ್ಯಾಂಡ್ ಪ್ರಾದೇಶಿಕ ಪ್ರದೇಶ (ಬೋಡೋಲ್ಯಾಂಡ್ ಟೆರಿಟೋರಿಯಲ್ ರೀಜನ್- ಬಿಟಿಆರ್) ಎಂಬುದಾಗಿ ಮರುನಾಮಕರಣಗೊಂಡಿದೆ.

ನೂತನ ಒಪ್ಪಂದವು ೧೯೯೩ ಮತ್ತು ೨೦೦೩ರಲ್ಲಿ ಬೋಡೋ ಗುಂಪುಗಳ ಜೊತೆಗೆ ಸಹಿ ಮಾಡಲಾಗಿದ್ದ ಹಿಂದಿನ ಒಪ್ಪಂದಗಳಿಗೆ ಹೋಲಿಸಿದರೆ ಹೆಚ್ಚು ವಿಸ್ತೃತವಾಗಿದೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ವ್ಯಾಪ್ತಿಯಿಂದ ವಿನಾಯ್ತಿ ಪಡೆದಿರುವ ಬೋಡೋಲಾಂಡ್ ಪಾದೇಶಿಕ ಮಂಡಳಿಯ (ಬಿಟಿಸಿ) ಅಡಿಯಲ್ಲಿ ಬರುವ ಕೋಕ್ರಜ್ಹಾರ್ನಲ್ಲಿ ಶುಕ್ರವಾರ ಪ್ರಧಾನಿ ಮೋದಿ ಅವರ  ಸಭೆ  ನಡೆಯಿತು.

ಪ್ರಧಾನಿಯವರು ತಮ್ಮ ಭಾಷಣದಲ್ಲಿ ಮುಖ್ಯವಾಗಿ ಶಾಂತಿ ಒಪ್ಪಂದ ಮತ್ತು ತಮ್ಮ ಸರ್ಕಾರವು ಈಶಾನ್ಯ ಪ್ರದೇಶದಲ್ಲಿ ಜನರನ್ನು ತಲುಪಲು ಕೈಗೊಂಡಿರುವ ಕ್ರಮಗಳಿಗೆ ಒತ್ತು ನೀಡಿದರು. ಜೊತೆಗೇ ನೂತನ ಪೌರತ್ವ ಕಾಯ್ದೆಯು ರಾಜ್ಯದಲ್ಲಿಹೊರಗಿನವರಿಗೆನೆಲೆಸಲು ಅವಕಾಶ ಮಾಡುತ್ತದೆ ಎಂಬುದು ಸುಳ್ಳು ಎಂದು ಆಶ್ವಾಸನೆ ನೀಡಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಆಫ್ಘಾನಿಸ್ಥಾನದಿಂದ ೨೦೧೫ಕ್ಕೆ ಮುಂಚೆ ಭಾರತಕ್ಕೆ ಬಂದಿರುವ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಕೊಡಬಯಸಿದೆ. ಆದರೆ ಅಸ್ಸಾಮ್ ಒಪ್ಪಂದವು ರಾಜ್ಯದಲ್ಲಿನ ವಿದೇಶೀಯರನ್ನು ಗಡೀಪಾರು ಮಾಡಲು ೧೯೭೧ರ ಮಾರ್ಚ್ ೨೪ ದಿನಾಂಕವನ್ನು  ಕಡೆಯ ದಿನವನ್ನಾಗಿ ಮಾಡಿದೆ.
ಆದಾಗ್ಯೂ, ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ. ಇದಕ್ಕೆ ಪ್ರತಿಭಟನೆಗಳನ್ನೇ ದೂಷಿಸಬೇಕಾಗಿದೆಎಂದು ಪ್ರಧಾನಿ ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯು (ಸಿಎಎ) ಹೊರಗಿನಿಂದ ಜನರಿಗೆ ಇಲ್ಲಿಗೆ ಬಂದು ನೆಲೆಯೂರಲು ದಾರಿ ಮಾಡಿದೆ ಎಂದು ಗುಂಪುಗಳು ಅಪಪ್ರಚಾರ ಮಾಡುತ್ತಿವೆ. .. ಅಂತಹದ್ದೇನೂ ಆಗುವುದಿಲ್ಲ ಎಂಬುದಾಗಿ ನಿಮಗೆ ಹೇಳಲು ನಾನಿಲ್ಲಿಗೆ ಬಂದಿದ್ದೇನೆಎಂದು ಮೋದಿ ನುಡಿದರು.

ಬೊಡೊ ಒಪ್ಪಂದವು ಶಾಂತಿಯ ವಿಜಯ ಎಂಬುದಾಗಿ ಬಣ್ಣಿಸಿದ ಮೋದಿ, ತಮ್ಮ ಸರ್ಕಾರವು ಒಪ್ಪಂದದ ಪ್ರತಿಯೊಂದು ಬೇಡಿಕೆಯನ್ನೂ ಒಪ್ಪಿದೆ ಮತ್ತು ಈಗ ಪ್ರದೇಶದ ಅಭಿವೃದ್ಧಿಯತ್ತ ಸಂಪೂರ್ಣ ಗಮನ ಹರಿಯಲಿದೆ ಎಂದು ಹೇಳಿದರು.

ಒಪ್ಪಂದದ ಪ್ರಕಾರ ಬೊಡೋಗಳ ನೆರವಿಗೆ ೧೫೦೦ ಕೋಟಿ ರೂಪಾಯಿಗಳನ್ನು ವಿಶೇಷ ಅಭಿವೃದ್ಧಿ ಕೊಡುಗೆ (ಪ್ಯಾಕೇಜ್) ರೂಪದಲ್ಲಿ ಕೊಡಲಾಗುವುದು. ಬೋಡೋಗಳ ಪ್ರತಿಯೊಂದು ಹಕ್ಕು, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸಲಾಗುವುದು ಎಂದು ಪ್ರಧಾನಿ ಹೇಳಿದರು.

ಭಾರತದ ಎಲ್ಲರೂ ನಿಮಗೆ (ಬೋಡೋ ಬುಡಕಟ್ಟು) ಧನ್ಯವಾದ ಹೇಳುತ್ತಿದ್ದಾರೆ ಮತ್ತು ನಿಮ್ಮೊಂದಿಗೆ ಸಂಭ್ರಮಿಸುತ್ತಿದ್ದಾರೆ. ನಿಮ್ಮಿಂದಾಗಿ ಎಲ್ಲರೂ ಶಾಂತಿಯಿಂದ ಬಾಳಲು ಮತ್ತು ಬಲಾಢ್ಯ ಭಾರತಕ್ಕೆ ಕೊಡುಗೆ ನೀಡಲು ಒಪ್ಪಿದ್ದಾರೆ. ನೀವೆಲ್ಲರೂ ಶಾಂತಿ ಮತ್ತು ಬೆಳಕನ್ನು ಆಯ್ಕೆ ಮಾಡಿದ್ದೀರಿಎಂದು ಜನರ ಹರ್ಷೋದ್ಘಾರಗಳ ನಡುವೆ ಪ್ರಧಾನಿ ನುಡಿದರು.

ರಾಜಕೀಯ ಬಿರುಗಾಳಿ ಎಬ್ಬಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಬಡಿಗೆ ಏಟು (ದಂಡದ ಪೆಟ್ಟು)’ ಟೀಕೆಯನ್ನೂ  ಮೋದಿ ಪ್ರಸ್ತಾಪಿಸಿದರು. ’ಕೆಲವರು ನನಗೆ ಬಡಿಗೆಗಳಿಂದ (ದಂಡ) ಹೊಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಿಮ್ಮಿಂದ ಇಷ್ಟೊಂದು ದೊಡ್ಡ ಪ್ರಮಾಣದ ಬೆಂಬಲ ಇರುವಾಗ ನಾನು ಯಾಕೆ ಹೆದರಬೇಕು?’ ಎಂದೂ ಅವರು ನುಡಿದರು. 

No comments:

Advertisement