My Blog List

Thursday, February 6, 2020

ನಿರ್ಭಯಾ ಪ್ರಕರಣ: ಹಂತಕರಿಗೆ ಒಟ್ಟಿಗೇ ಗಲ್ಲು, ದೆಹಲಿ ಹೈಕೋರ್ಟ್ ಆದೇಶ

ನಿರ್ಭಯಾ ಪ್ರಕರಣ: ಹಂತಕರಿಗೆ ಒಟ್ಟಿಗೇ ಗಲ್ಲು, ದೆಹಲಿ ಹೈಕೋರ್ಟ್ ಆದೇಶ
ಕಾನೂನು ಬದ್ಧ ಪರಿಹಾರ ಬಳಸಲು ಶಿಕ್ಷಿತರಿಗೆ ವಾರದ ಗಡುವು
ನವದೆಹಲಿ: ೨೦೧೨ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಎಲ್ಲ ಶಿಕ್ಷಿತ ಅಪರಾಧಿಗಳನ್ನೂ ಒಟ್ಟಿಗೇ ಗಲ್ಲಿಗೆ ಏರಿಸಬೇಕು, ಪ್ರತ್ಯೇಕವಾಗಿ ಅಲ್ಲ ಎಂಬುದಾಗಿ 2020 ಫೆಬ್ರುವರಿ 05ರ ಬುಧವಾರ ತೀರ್ಪು ನೀಡಿದ ದೆಹಲಿ ಹೈಕೋರ್ಟ್ ಎಲ್ಲ ಕಾನೂನು ಬದ್ಧ ಪರಿಹಾರದ ಅವಕಾಶಗಳನ್ನು ಬಳಸಿಕೊಳ್ಳಲು ಶಿಕ್ಷಿತರಗೆ ಒಂದು ವಾರದ ಗಡುವು ನೀಡಿತು.

ವಿಚಾರಣಾ ನ್ಯಾಯಾಲಯವು ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಗೆ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರವು ಸಲ್ಲಿಸಿದ್ದ ಅರ್ಜಿಯ ಮೇಲೆ ಕಾಯ್ದಿರಿಸಿದ್ದ ತನ್ನ ಆದೇಶವನ್ನು ನೀಡಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ತಾವು ಬಳಸಿಕೊಳ್ಳಲು ಬಯಸಿರುವ ಯಾವುದೇ ಕಾನೂನುಬದ್ಧ ಪರಿಹಾರಕ್ಕಾಗಿ ಒಂದು ವಾರದ ಒಳಗಾಗಿ ಅರ್ಜಿ ಸಲ್ಲಿಸಿ ಎಂಬುದಾಗಿ ಎಲ್ಲ ಶಿಕ್ಷಿತ ಅಪರಾಧಿಗಳಿಗೆ ನಿರ್ದೇಶಿಸಿದರು. ವಾರದ ಬಳಿಕ ಅಧಿಕಾರಿಗಳು ಕಾರ್‍ಯೋನ್ಮುಖರಾಗಬೇಕು ಎಂದು ನ್ಯಾಯಮೂರ್ತಿ ಆಜ್ಞಾಪಿಸಿದರು.

ಏನಿದ್ದರೂ, ಶಿಕ್ಷಿತ ಅಪರಾಧಿಗಳ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತು.

ತಿಹಾರ್ ಸೆರೆಮನೆಯಲ್ಲಿ ಇರಿಸಲಾಗಿರುವ ಪ್ರಕರಣದ ಶಿಕ್ಷಿತ ಅಪರಾಧಿಗಳಾದ ಮುಕೇಶ್ ಕುಮಾರ್ ಸಿಂಗ್ (೩೨), ಪವನ್ ಗುಪ್ತ (೨೫), ವಿನಯ್ ಕುಮಾರ್ ಶರ್ಮ (೨೬) ಮತ್ತು ಅಕ್ಷಯ್ ಕುಮಾರ್ (೩೧) ಅವರ ಗಲ್ಲು ಶಿಕ್ಷೆಯ ಜಾರಿಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯುವಂತೆ ಸೂಚಿಸಿ ವಿಚಾರಣಾ ನ್ಯಾಯಾಲಯವು ಜನವರಿ ೩೧ರಂದು ನೀಡಿದ ಆದೇಶವನ್ನು ಕೇಂದ್ರ ಮತ್ತು ದೆಹಲಿ ಸರ್ಕಾರ ಪ್ರಶ್ನಿಸಿದ್ದವು.

ಫೆಬ್ರುವರಿ ೧ನೇ ದಿನಾಂಕಕ್ಕೆ ನಿಗದಿಯಾಗಿದ್ದ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿದ್ದನ್ನು ಪ್ರಶ್ನಿಸುವುದರ ಜೊತೆಗೆ ತಮ್ಮ ಕಾನೂನುಬದ್ಧ ಪರಿಹಾರದ ಅವಕಾಶಗಳನ್ನು ಈಗಾಗಲೇ ಬಳಸಿಕೊಂಡಿರುವ ಮುಕೇಶ್ ಸಿಂಗ್ ಮತ್ತು ವಿನಯ್ ಶರ್ಮ ಅವರನ್ನು ಗಲ್ಲಿಗೇ ಏರಿಸಬೇಕು ಎಂಬುದಾಗಿ ಕೇಂದ್ರ ಸರ್ಕಾರ  ಮನವಿ ಮಾಡಿತ್ತು.

ಕೇಂದ್ರದ ಪರವಾಗಿ ಹಾಜರಾಗಿದ್ದ ಅತ್ಯಂತ ಹಿರಿಯ ಕಾನೂನು ಅಧಿಕಾರಿ, ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ಯಾರಾದರೂ ಒಬ್ಬ ಶಿಕ್ಷಿತ ಅಪರಾಧಿಯ ಪರವಾಗಿ ಮೇಲ್ಮನವಿ ಅಥವಾ ಅರ್ಜಿ ಸಲ್ಲಿಸಿದ್ದರೆ ಎಲ್ಲ ಶಿಕ್ಷಿತ ಅಪರಾಧಿಗಳ ಗಲ್ಲು ಜಾರಿಯನ್ನು ಮುಂದೂಡಬೇಕು ಎಂಬುದಾಗಿ ಹೇಳುವ ತಿಹಾರ್ ಸೆರೆಮನೆ ನಿಯಮಾವಳಿಗಳನ್ನು ನ್ಯಾಯಾಲಯವು ತಪ್ಪಾಗಿ ಅರ್ಥೈಸಿದೆ ಎಂದು ತುಷಾರ ಮೆಹ್ತ ವಾದಿಸಿದರು.

ತಮ್ಮ ಗಲ್ಲು ಶಿಕ್ಷೆ ಜಾರಿಯನ್ನು ವಿಳಂಬಗೊಳಿಸಲು ಶಿಕ್ಷಿತ ಅಪರಾಧಿಗಳು ನಡೆಸುತ್ತಿರುವ ಯತ್ನಗಳನ್ನು ಟೀಕಿಸಿದ್ದ ಮೆಹ್ತ, ಕ್ಷಮಾದಾನ ಕೋರಿಕೆ ಅರ್ಜಿಯನ್ನು ಮೇಲ್ಮನವಿ ಅಥವಾ ಅರ್ಜಿ ಎಂಬುದಾಗಿ ಲೆಕ್ಕಹಾಕಲು ಬರುವುದಿಲ್ಲ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

ಆದರೆ ನ್ಯಾಯಮೂರ್ತಿ ಕೈಟ್ ಅವರಿಗೆ ಸಮಾಧಾನವಾಗಲಿಲ್ಲ. ’ಅವರ ಎಲ್ಲ ಡೆತ್ ವಾರಂಟ್‌ಗಳನ್ನು ಒಟ್ಟಿಗೇ ಜಾರಿಗೊಳಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದು ನ್ಯಾಯಮೂರ್ತಿ ಆದೇಶದಲ್ಲಿ ತಿಳಿಸಿದರು.

ಕೇಂದ್ರದ ಮನವಿ ಮೇರೆಗೆ ಭಾನುವಾರ ವಿಶೇಷ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೈಟ್, ’ಶಿಕ್ಷಿತರು ೨೧ನೇ ಪರಿಚ್ಛೇದದ ಅಡಿಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಪರಿಚ್ಛೇದವು ಅವರಿಗೆ ಕೊನೆಯ ಉಸಿರಿನವರೆಗೂ ರಕ್ಷಣೆ ಒದಗಿಸುತ್ತದೆ ಎಂದೂ ತಮ್ಮ ತೀರ್ಪಿನಲ್ಲಿ ಹೇಳಿದರು.   
ಆದರೆ ’ತಡವಾಗಿ ಎಚ್ಚರಗೊಂಡ ಅಧಿಕಾರಿಗಳನ್ನು ನ್ಯಾಯಮೂರ್ತಿ ತರಾಟೆಗೆ ತೆಗೆದುಕೊಂಡರು.

‘೧೮೬ ದಿನಗಳ ಬಳಿಕ ಮುಕೇಶ್ ತನ್ನ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವವರೆಗೂ ಡೆತ್ ವಾರಂಟ್ ಜಾರಿಗೊಳಿಸುವ ಬಗ್ಗೆ ಯಾರೂ ಚಿಂತಿಸಲಿಲ್ಲ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದು ನ್ಯಾಯಮೂರ್ತಿ ನುಡಿದರು. 
ಹಿರಿಯ ವಕೀಲರಾದ ರೆಬೆಕ್ಕಾ ಜಾನ್ ಮತ್ತು ವಕೀಲರಾದ ವೃಂದಾ ಗ್ರೋವರ್ ಅವರು ನಾಲ್ವರು ಶಿಕ್ಷಿತ ಅಪರಾಧಿಗಳು ತಮ್ಮ ಗಲ್ಲು ಜಾರಿಯನ್ನು ವಿಳಂಬಗೊಳಿಸಲು ಯತ್ನಿಸುತ್ತಿದ್ದಾರೆ ಎಂಬ ಆರೋಪವನ್ನು ವಿರೋಧಿಸಿದರು. ಶಿಕ್ಷಿತ ಅಪರಾಧಿಗಳು ಸಂವಿಧಾನವು ಒದಗಿಸಿರುವ ಪರಿಹಾರಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಷ್ಟೆ ಎಂದು ವಕೀಲರಿಬ್ಬರೂ ವಾದಿಸಿದರು.

ಅತ್ಯಂತ ಹೀನಾಯ ಅಪರಾಧಗಳಲ್ಲಿ ಶಾಮೀಲಾಗಿ ಮರಣದಂಡನೆಗೆ ಗುರಿಯಾದ ಅಪರಾಧಿಗಳಿಗೂ ಹಕ್ಕುಗಳಿವೆ ಎಂದು ವಕೀಲರು ಪ್ರತಿಪಾದಿಸಿದರು.

ದೆಹಲಿ ಸರ್ಕಾರವು ಹಲವಾರು ವರ್ಷಗಳ ಕಾಲ ಡೆತ್ ವಾರಂಟ್ ಕೋರಲಿಲ್ಲ ಮತ್ತು  ಕೇಂದ್ರವು ನಿನ್ನೆಯಷ್ಟೇ ಎಚ್ಚರಗೊಂಡಿದೆ ಮತ್ತು ಅವರು ವಿಳಂಬಕ್ಕಾಗಿ ನನ್ನನ್ನು ಪ್ರಶ್ನಿಸುತ್ತಿದ್ದಾರೆ ಎಂದು ಗ್ರೋವರ್ ಹೇಳಿದರು.

ಇದಕ್ಕೆ ಮುನ್ನ ನತದೃಷ್ಟ ಸಂತ್ರಸ್ತೆಯ ಹೆತ್ತವರು ಕೇಂದ್ರದ ಅರ್ಜಿ ಬಗ್ಗೆ ತ್ವರಿತವಾಗಿ ನಿರ್ಧರಿಸುವಂತೆ ನ್ಯಾಯಾಲಯವನ್ನು ಮಂಗಳವಾರ ಆಗ್ರಹಿಸಿದ್ದರು. ಆದಷ್ಟೂ ಬೇಗ ಆದೇಶ ನೀಡುವುದಾಗಿ ನ್ಯಾಯಮೂರ್ತಿ ತಿಳಿಸಿದ್ದರು.

ವಿಚಾರಣಾ ನ್ಯಾಯಾಲಯವ ಜನವರಿ ೭ರಂದು ’ಡೆತ್ ವಾರಂಟ್ ಎಂಬುದಾಗಿಯೇ ಪರಿಗಣಿಸಲಾಗುವ ’ಬ್ಲ್ಯಾಕ್ ವಾರಂಟ್ನ್ನು ಜಾರಿಗೊಳಿಸಿ ಜನವರಿ ೨೨ರಂದು ಬೆಳಗ್ಗೆ ೭ ಗಂಟೆಗೆ ಎಲ್ಲ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಬೇಕು ಎಂದು ಆಜ್ಞಾಪಿಸಿತ್ತು. ಆದರೆ ಶಿಕ್ಷಿತ ಅಪರಾಧಿಗಳಲ್ಲಿ ಒಬ್ಬನ ಕ್ಷಮಾದಾನ ಕೋರಿಕೆ ಅರ್ಜಿ ಬಾಕಿ ಇದ್ದುದರಿಂದ ಜನವರಿ ೨೨ರಂದು ಅಪರಾಧಿಗಳನ್ನು ಗಲ್ಲಿಗೇರಿಸಲು ಸಾಧ್ಯವಾಗಿರಲಿಲ್ಲ.
ಬಳಿಕ ವಿಚಾರಣಾ ನ್ಯಾಯಾಲಯವು ಫೆಬ್ರುವರಿ ೧ರಂದು ಬೆಳಗ್ಗೆ ೬ ಗಂಟೆಗೆ ನಾಲ್ಕೂ ಮಂದಿ ಶಿಕ್ಷಿತ ಅಪರಾಧಿಗಳನ್ನು ಗಲ್ಲಿಗೇರಿಸಲು ದಿನಾಂಕ ಹಾಗೂ ಸಮಯ ನಿಗದಿ ಪಡಿಸಿ ಜನವರಿ ೧೭ರಂದು ಎರಡನೇ ಬಾರಿಗೆ ’ಡೆತ್ ವಾರಂಟ್ ಜಾರಿಗೊಳಿಸಿತ್ತು.

ಆದರೆ ಪ್ರಕರಣದ ನಾಲ್ವರು ಅಪರಾಧಿಗಳ ಪೈಕಿ ಪವನ್, ವಿನಯ್ ಮತ್ತು ಅಕ್ಷಯ್ ಈ ಮೂವರು ತಮ್ಮ ಕಾನೂನುಬದ್ಧ ಪರಿಹಾರಗಳನ್ನು ಚಲಾಯಿಸಿಲ್ಲವಾದ ಕಾರಣ ವಿಷಯವನ್ನು ಅನಿರ್ದಿಷ್ಟ ಕಾಲ ಮುಂದೂಡಬೇಕು ಎಂದು ಆಗ್ರಹಿಸಿದ್ದನ್ನು ಅನುಸರಿಸಿ ವಿಚಾರಣಾ ನ್ಯಾಯಾಲಯವು ಜನವರಿ ೩೧ರಂದು ಸಂಜೆ ಫೆಬ್ರುವರಿ ೧ಕ್ಕೆ ನಿಗದಿಯಾಗಿದ್ದ ಗಲ್ಲು ಶಿಕ್ಷೆ ಜಾರಿಗೆ ಪುನಃ ತಡೆಯಾಜ್ಞೆ ನೀಡಿತು.
ಮುಕೇಶ್ ಮತ್ತು ವಿನಯ್ ಕ್ಷಮಾದಾನ ಕೋರಿಕೆ ಅರ್ಜಿಗಳನ್ನು ರಾಷ್ಟ್ರಪತಿಯವರು ತಿರಸ್ಕರಿಸಿದರೆ, ಪವನ್ ಇನ್ನೂ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಸಲ್ಲಿಸಿಯೇ ಇಲ್ಲ. ಅಕ್ಷಯ್ ಫೆಬ್ರುವರಿ ೧ರಂದು ಸಲ್ಲಿಸಿದ ಕ್ಷಮಾದಾನ ಕೋರಿಕೆ ಅರ್ಜಿ ಇನ್ನೂ ಬಾಕಿ ಇದೆ.

ಈ ಮಧ್ಯೆ, ಫೆಬ್ರುವರಿ ೧ರಂದು ದೆಹಲಿ ಹೈಕೋರ್ಟ್ ಕದ ತಟ್ಟಿದ ಕೇಂದ್ರ ಮತ್ತು ದೆಹಲಿ ಸರ್ಕಾರ ಮರಣದಂಡನೆ ಜಾರಿಗೆ ತಡೆಯಾಜ್ಞೆ ನೀಡಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದವು.

ಕೇಂದ್ರ ಮತ್ತು ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ’ಕಾನೂನಿನ ಆದೇಶವನ್ನು ವಿಫಲಗೊಳಿಸಲು ಶಿಕ್ಷಿತ ಅಪರಾಧಿಗಳು ಗಲ್ಲು ಜಾರಿಯನ್ನು ವಿಳಂಬಗೊಳಿಸುವ ಉದ್ದೇಶಪೂರ್ವಕ ಸಂಚು ಹೆಣೆದಿದ್ದಾರೆ. ಇನ್ನಷ್ಟು ಸಮಯ ವಿಸ್ತರಣೆಗೆ ಅವರು ಅರ್ಹರಲ್ಲ ಎಂದು ಪ್ರತಿಪಾದಿಸಿದ್ದರು.

ಶಿಕ್ಷಿತ ಅಪರಾಧಿಗಳ ಪರ ಹಾಜರಾಗಿದ್ದ ವಕೀಲರು ’ಕೇಂದ್ರವು ಎಂದೂ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣದ  ಕಲಾಪಗಳಲ್ಲಿ ಕಕ್ಷಿದಾರನಾಗಿ ಇರಲೇ ಇಲ್ಲ. ಮತ್ತು ವಿಳಂಬಕ್ಕೆ ಕಕ್ಷಿದಾರರನ್ನು ಆಪಾದಿಸುತ್ತಿರುವ ಸರ್ಕಾರ ಈಗಷ್ಟೇ ಎಚ್ಚೆತ್ತುಕೊಂಡಿದೆ. ಆದ್ದರಿಂದ ಈ ಅರ್ಜಿ ವಿಚಾರಣಾರ್ಹವೇ ಅಲ್ಲ ಎಂದು ವಾದಿಸಿದ್ದರು.

೨೩ರ ಹರೆಯದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ೨೦೧೨ರ ಡಿಸೆಂಬರ್ ೧೬-೧೭ರ ರಾತ್ರಿ ದಕ್ಷಿಣ ದೆಹಲಿಯ ಚಲಿಸುವ ಬಸ್ಸೊಂದರಲ್ಲಿ ೬ ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಲ್ಲದೆ ಕ್ರೂರವಾಗಿ ಚಿತ್ರಹಿಂಸೆ ನೀಡಿ ರಸ್ತೆಗೆ ಎಸೆದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಜೀವನ್ಮರಣ ಹೋರಾಟದ ಬಳಿಕ ೨೦೧೨ರ ಡಿಸೆಂಬರ್ ೨೯ರಂದು ಸಿಂಗಾಪುರ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು.

೬ ಮಂದಿ ಆರೋಪಿಗಳಲ್ಲಿ ಒಬ್ಬನಾದ ರಾಮ್ ಸಿಂಗ್ ವಿಚಾರಣಾ ಕಾಲದಲ್ಲೇ ತಿಹಾರ್ ಸೆರೆಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಆಪಾದಿಸಲಾಗಿದ್ದು, ೬ನೇ ಆರೋಪಿಯನ್ನು ಅಪ್ರಾಪ್ತ ಬಾಲಕ ಎಂಬ ನೆಲೆಯಲ್ಲಿ ಮೂರುವರ್ಷಗಳ ಸುಧಾರಣಾ ಕಸ್ಟಡಿಗೆ ಗುರಿಪಡಿಸಿ ಬಳಿಕ ಅಜ್ಞಾತ ಸ್ಥಳದಲ್ಲಿ ಬಿಡುಗಡೆ ಮಾಡಲಾಗಿತ್ತು.

ದೆಹಲಿ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯ ನಾಲ್ವರು ಅಪರಾಧಿಗಳಿಗೆ ನೀಡಿದ್ದ ಮರಣದಂಡನೆಯನ್ನು ಸುಪ್ರೀಂಕೋರ್ಟ್ ೨೦೧೭ರಲ್ಲಿ ಎತ್ತಿ ಹಿಡಿದಿತ್ತು.

ದೇಶಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿದ್ದ ಈ ಪ್ರಕರಣ ಅತ್ಯಾಚಾರ ಸಂಬಂಧಿತ ಕಾನೂನು ಪರಿಷ್ಕರಣೆಗೂ ದಾರಿ ಮಾಡಿತ್ತು.

ಸಂತ್ರಸ್ಥೆಯ ತಾಯಿ ಆಶಾದೇವಿ ಸ್ವಾಗತ: ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಸಂತ್ರಸ್ಥೆಯ ತಾಯಿ ಆಶಾದೇವಿ ಸ್ವಾಗತಿಸಿದರು.

ನ್ಯಾಯಾಲಯದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆಶಾದೇವಿ, ’ದೆಹಲಿ ನ್ಯಾಯಾಲಯದ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಕಾನೂನಿನಲ್ಲಿ ಇರುವ ಎಲ್ಲ ಅವಕಾಶಗಳನ್ನು ಒಂದು ವಾರದೊಳಗೆ ಬಳಸಿಕೊಳ್ಳಬೇಕು ಎಂದು ನ್ಯಾಯಾಲಯ ಅಪರಾಧಿಗಳಿಗೆ ತಿಳಿಸಿದೆ.  ಕಾನೂನಿನ ದಾರಿಗಳೆಲ್ಲವೂ ಪೂರ್ಣಗೊಂಡ ನಂತರ ಅಪರಾಧಿಗಳಿಗೆ ಶೀಘ್ರವೇ ಶಿಕ್ಷೆ ಜಾರಿಯಾಗಲಿದೆ ಎಂದು ನಿರ್ಭಯಾ ತಾಯಿ ವಿಶ್ವಾಸ ವ್ಯಕ್ತಪಡಿಸಿದರು.

No comments:

Advertisement