My Blog List

Tuesday, March 31, 2020

ವಲಸೆ ಕಾರ್ಮಿಕರಿಗೆ ಸಲಹೆ, ಆಹಾರ, ನೀರು; ಸುಳ್ಳು ಸುದ್ದಿ ವಿರುದ್ಧ ಕ್ರಿಮಿನಲ್ ಖಟ್ಲೆ: ಸುಪ್ರೀಂ ಆದೇಶ

ವಲಸೆ ಕಾರ್ಮಿಕರಿಗೆ ಸಲಹೆ, ಆಹಾರ, ನೀರು ವ್ಯವಸ್ಥೆ;   ಸುಳ್ಳು ಸುದ್ದಿ ಹರಡುವವರ ವಿರುದ್ಧ  ಕ್ರಿಮಿನಲ್ ಖಟ್ಲೆ: ಸುಪ್ರೀಂ ಆದೇಶ
ನವದೆಹಲಿ: ಕೊರೋನಾವೈರಸ್ಸಿಗಿಂತಲೂ ಭೀತಿಯು ಹೆಚ್ಚು ಜೀವಹಾನಿ ಮಾಡುತ್ತದೆ ಎಂದು 2020 ಮಾರ್ಚ್ 31ರ ಮಂಗಳವಾರ ಇಲ್ಲಿ ಹೇಳಿದ ಸುಪ್ರೀಂಕೋರ್ಟ್ ವಲಸೆ ಕಾರ್ಮಿಕರಿಗೆ ಸಲಹೆ, ಆಶ್ರಯ, ಆಹಾರ ಮತ್ತು ನೀರು ಒದಗಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿತು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆಯೂ ಆದೇಶ ನೀಡಿದ ಪೀಠ, ಪಿಡುಗಿನ ಬಗ್ಗೆ ಜನರ ಪ್ರಶ್ನೆಗಳಿಗೆ ಉತ್ತರ ನೀಡುವ ಸಲುವಾಗಿ ಪೋರ್ಟಲ್ ಒಂದರನ್ನು ಸ್ಥಾಪಿಸಲು ೨೪ ಗಂಟೆಗಳ ಗಡುವು ನೀಡಿತು.

ಕೊರೊನಾವೈರಸ್ಸಿಗಿಂತ ಭೀತಿಯು ಹೆಚ್ಚು ಜೀವಹಾನಿ ಉಂಟು ಮಾಡುತ್ತದೆ ಎಂದು ಹೇಳಿದ ಸುಪ್ರೀಂಕೋರ್ಟ್ ಪೀಠವು,  ಸಾಂಕ್ರಾಮಿಕ ರೋಗದ ಬಗ್ಗೆ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವ ಬಗ್ಗೆ ಒಲವು ವ್ಯಕ್ತ ಪಡಿಸಿತು.

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆ ವೇಳೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಮತ್ತು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರ ನ್ಯಾಯಪೀಠವು ನಕಲಿ ಸುದ್ದಿ ಜನರಲ್ಲಿ ಭೀತಿಯನ್ನು ಉಂಟುಮಾಡುತ್ತದೆ. ಹೀಗಾಗಿ ಕೇಂದ್ರವು ಜನರೊಂದಿಗೆ ನೇರವಾಗಿ ಸಂವಹನ ನಡೆಸುವ ಮತ್ತು ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳುವ ಅಧಿಕೃತ ಚಾನೆಲ್ ಅನ್ನು ಹೊಂದಿರಬೇಕು ಎಂದು ಒತ್ತಿ ಹೇಳಿತು.

ವೈರಸ್ಸಿಗಿಂತ ಭೀತಿಯು ಹೆಚ್ಚು ಅಪಾಯಕಾರಿ. ನಿಮಗೆ ಸಲಹೆಗಾರರು ಬೇಕು. ನೀವು ಭಜನೆ, ಕೀರ್ತನೆ, ನಮಾಜ್ ಅಥವಾ ಯಾವುದನ್ನಾದರೂ ಬಳಸಿಕೊಳ್ಳಬಹುದು. ಮುಖ್ಯವಾಗಿ ನೀವು ಜನರಿಗೆ ಮನೋಬಲ ತುಂಬಬೇಕು. ಎಲ್ಲ ಧರ್ಮಗಳಿಗೆ ಸೇರಿದ ಸಮುದಾಯಗಳ ಮುಖಂಡರನ್ನು ಸೇರಿಸಿಕೊಳ್ಳಿ ಎಂದು ಸಿಜೆಐ ಬೋಬ್ಡೆ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ್ತ ಅವರಿಗೆ ಹೇಳಿದರು.

ಪರಿಸ್ಥಿತಿಯನ್ನು ಸುಧಾರಿಸಲು  ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಸರ್ಕಾg ಸಲ್ಲಿಸಿರುವ ಪ್ರಮಾಣಪತ್ರದಲ್ಲಿ  ಆಶ್ರಯ ಮನೆಗಳಲ್ಲಿ ಮತ್ತು ಇತರ ತಾತ್ಕಾಲಿಕ ವಸತಿಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ಸೇರಿದಂತೆ ಜನರಿಗೆ ಸಮಾಲೋಚನಾ ಸಲಹೆಗಾರರಿಂದ ಸಲಹಾರೂಪದ ನೆರವು ಒದಗಿಸುವ ಅಂಶದ ಬಗ್ಗೆ ಪ್ರಸ್ತಾಪ ಇಲ್ಲ ಎಂದು ನ್ಯಾಯಾಲಯವು ಗಮನ ಸೆಳೆಯಿತು.

ಆಶ್ರಯದಲ್ಲಿರುವ ವಲಸಿಗರಿಗೆ ಸಲಹೆ ನೀಡಲು ಮತ್ತು ಅವರನ್ನು ಶಾಂತಗೊಳಿಸಲು ಸರ್ಕಾರವು ಸಲಹೆಗಾರರನ್ನು ತೊಡಗಿಸಲಿದೆ ಮತ್ತು ಧಾರ್ಮಿಕ ಮುಖಂಡರು, ಮೌಲ್ವಿಗಳು, ಸಾಧುಗಳನ್ನು ಸಹಾಯ ಪಡೆಯುವ ಬಗ್ಗೆ ಹೇಳಿಕೆ ನೀಡಲು ಸಿದ್ಧರಿದ್ದೇನೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ಉತ್ತರಿಸಿದರು.

"೨೪ ಗಂಟೆಗಳ ಒಳಗೆ ನಾವು ತರಬೇತಿ ಪಡೆದ ಸಲಹೆಗಾರರನ್ನು ಮತ್ತು ಧಾರ್ಮಿಕ ಮುಖಂಡರನ್ನು ಸಜ್ಜುಗೊಳಿಸುತ್ತೇವೆ ಎಂಬುದಾಗಿ ನಾನು ಇಲ್ಲಿ ಹೇಳಿಕೆ ನೀಡುತ್ತಿದ್ದೇನೆ" ಎಂದು ಮೆಹ್ತ  ಹೇಳಿದರು.
ಜನರಿಗೆ ವಿಶ್ವಾಸಾರ್ಹ ಮಾಹಿತಿಯನ್ನು ಪ್ರಸಾರ ಮಾಡುವ ಜವಾಬ್ದಾರಿಯನ್ನು ಸರ್ಕಾರವು ನಿರ್ವಹಿಸುತ್ತದೆ ಎಂದು ಅವರು ನುಡಿದರು.

ವಲಸಿಗರಿಗಾಗಿ ಆಶ್ರಯ ಮನೆಗಳನ್ನು ಒದಗಿಸಲು ಸ್ವಯಂಸೇವಕರನ್ನು ನಿಯೋಜಿಸುವಂತೆ ನ್ಯಾಯಾಲಯವು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತು. ಈಗಾಗಲೇ ಭಯ ಮತ್ತು ಅನಿಶ್ಚಿತತೆಯ ಸ್ಥಿತಿಯಲ್ಲಿ ವಾಸಿಸುತ್ತಿರುವ ಜನರ ವಿರುದ್ಧ ಬಲ ಮತ್ತು ಬೆದರಿಕೆಗಳನ್ನು ಬಳಸಬಾರದು ಎಂದೂ ನ್ಯಾಯಾಲಯ ನಿರ್ದೇಶಿಸಿತು.

ಸಾಂಕ್ರಾಮಿಕ ರೋಗದ ಬಗ್ಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸಿದ ಎಲ್ಲ ನಿರ್ದೇಶನಗಳನ್ನು ಎಲ್ಲ್ಲ ರಾಜ್ಯಗಳು ಪಾಲಿಸಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿತು.
ಇದಕ್ಕೆ ಮುನ್ನ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ವಿವರವಾದ ಪ್ರಮಾಣಪತ್ರವನ್ನು ಸಲ್ಲಿಸಿದ ಸರ್ಕಾರ ತಮ್ಮ ಗ್ರಾಮಗಳಿಗೆ ವಾಪಸಾಗಲು ಯತ್ನಿಸುತ್ತಿರುವ ವಲಸೆ ಕಾರ್ಮಿಕರ ಸ್ಥಿತಿಗತಿ ಮತ್ತು ಅವರಿಗಾಗಿ ಆಶ್ರಯ ಮನೆಗಳನ್ನು ನಿರ್ಮಿಸಲಾಗುತ್ತಿರುವ ಬಗ್ಗೆ ವಿವರಗಳನು ನೀಡಿತು.

ಯಾರೇ ವಲಸೆ ಕಾರ್ಮಿಕರು ರಸ್ತೆಯಲ್ಲಿ ಸಿಲುಕಿಕೊಂಡಿಲ್ಲ ಮತ್ತು .೬೮ ಲಕ್ಷ ಜನರಿಗೆ ತಾತ್ಕಾಲಿಕ ವಸತಿ ಒದಗಿಸಲಾಗಿದೆ ಮತ್ತು ದೇಶಾದ್ಯಂತ ೨೨.೮೮ ಲಕ್ಷ ಜನರಿಗೆ ಆಹಾರವನ್ನು ಒದಗಿಸಲಾಗಿದೆ ಎಂದು ಕೇಂದ್ರವು ಹೇಳಿಕೆಯಲ್ಲಿ ವಿವರಿಸಿತು.

ಗ್ರಾಮೀಣ ಜನರ ಮೇಲೆ ಇಲ್ಲಿಯವರೆಗೆ ಕೊರೋನಾವೈರಸ್ ಯಾವುದೇ ಪರಿಣಾಮ ಬೀರಿಲ್ಲ. ಆದರೆ ನಗರಗಳಿಂದ ಹಳ್ಳಿಗಳಿಗೆ ಹಿಂದಿರುಗುವ ಪ್ರತಿ ೧೦ ಜನರಲ್ಲಿ ಮೂವರು ವೈರಸ್ ಅನ್ನು ಹೊತ್ತೊಯ್ಯಬಹುದು ಎಂಬ ಆತಂಕವಿದೆ ಎಂದು ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿತು.
ಸಂದರ್ಭದಲ್ಲಿ, ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯವನ್ನು ಖಚಿತಪಡಿಸಿಕೊಳ್ಳುವಂತೆ ಪೀಠವು ಸಾಲಿಸಿಟರ್ ಜನರಲ್ ಅವರಿಗೆ ಸೂಚಿಸಿತು.

ಪೂರ್ವಭಾವಿ ಪ್ರತಿಕ್ರಿಯೆ ಮತ್ತು ಸಮಗ್ರ ರೋಗ ಕಣ್ಗಾವಲು ವ್ಯವಸ್ಥೆಯಿಂದಾಗಿ ನಮ್ಮ ದೇಶದಲ್ಲಿ ಸೋಂಕಿನ ಹರಡುವಿಕೆ ಕಡಿಮೆ ಇದೆ. ಇದರಿಂದಾಗಿ ರೋಗಲಕ್ಷಣಗಳನ್ನು ಹೊಂದಿರುವ ಜನರನ್ನು ತ್ವರಿತವಾಗಿ ಪ್ರತ್ಯೇಕಿಸುವ ಪ್ರಕ್ರಿಯೆಗೆ ಒಳಪಡಿಸಲು ಸಾಧ್ಯವಾಗುತ್ತಿದೆ. ಇಲ್ಲಿಯವರೆಗೆ ವಿಮಾನ ನಿಲ್ದಾಣಗಳಲ್ಲಿ .೪೮ ಲಕ್ಷ ಜನರನ್ನು ಪ್ರತ್ಯೇಕಿಸಲಾಗಿದ್ದು ೧೫. ಲಕ್ಷ ಜನರನ್ನು ಪರೀಕ್ಷಿಸಲಾಗಿದೆ. ಸಮುದ್ರ ತಡಿಯ ಬಂದರುಗಳಲ್ಲಿ ೧೨ ಲಕ್ಷ ಜನರನ್ನು ನಿಗಾಕ್ಕೆ ಒಳಪಡಿಸಲಾಗಿದೆ ಎಂದು ಮೆಹ್ತಾ ಹೇಳಿದರು.

೨೦೨೦ ಜನವರಿಯಲ್ಲಿ ಏಕೈಕ ಪ್ರಯೋಗಾಲಯ ಇತ್ತು. ಈಗ ೧೮ ಪ್ರಯೋಗಾಲಯಗಳಿದ್ದು ಪ್ರಯೋಗಾಲಯ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ದಿನಕ್ಕೆ  ೧೫,೦೦೦ ಪರೀಕ್ಷೆಗನ್ನು ನಡೆಸುವ ಸಾಮರ್ಥ್ಯವಿದೆ ಎಂದು ಕೇಂದ್ರವು ನ್ಯಾಯಾಲಯಕ್ಕೆ ವಿವರಿಸಿತು.

ಪ್ರಸ್ತುತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟು ೨೧,೦೬೪ ಪರಿಹಾರ ಶಿಬಿರಗಳನ್ನು ಸ್ಥಾಪಿಸಿವೆ ಎಂದು ತುಷಾರ ಮೆಹ್ತ ನುಡಿದರು.

ನಕಲಿ ಸುದ್ದಿಗಳೇ ನಾವು ಎದುರಿಸುತ್ತಿರುವ ಏಕೈಕ ಅತಿದೊಡ್ಡ ಸಮಸ್ಯೆ ಎಂದು ಸಾಲಿಸಿಟರ್ ಜನರಲ್ ಹೇಳಿದರು.  ಆಗ, ಅಧಿಕೃತ ಮಾಹಿತಿಯನ್ನು ನೀಡಲು ತಜ್ಞರ ಸಮಿತಿಯನ್ನು ರಚಿಸುವಂತೆ ನಿರ್ದೇಶನ ನೀಡಿದ ನ್ಯಾಯಪೀಠ,  ಸಾಮಾಜಿಕ ಮಾಧ್ಯಮಗಳ ಮೂಲಕ ತಪ್ಪು ಮಾಹಿತಿ ನೀಡಿ ಭೀತಿ ಉಂಟುಮಾಡುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಆಜ್ಞಾಪಿಸಿತು.

ಸಮಾಲೋಚನೆಯ ಜೊತೆಗೆ ವಲಸಿಗರಿಗೆ ಆಹಾರ, ನೀರು, ಹಾಸಿಗೆಗಳು ಮತ್ತು ಔಷಧಿಗಳ ಪೂರೈಕೆಯನ್ನು ಖಾತರಿಪಡಿಸುವ ಬಗ್ಗೆ ವಿವರವಾದ ನಿರ್ದೇಶನಗಳನ್ನು ಕೂಡಾ ನ್ಯಾಯಾಲಯ ನೀಡಿತು.

ಸಾಂಕ್ರಾಮಿಕ ರೋಗದ ಜನರ ಪ್ರಶ್ನೆಗಳಿಗೆ ಉತ್ತರಿಸಲು ಪೋರ್ಟಲ್ ಸ್ಥಾಪಿಸಲು  ಸರ್ಕಾರಕ್ಕೆ ೨೪ ಗಂಟೆಗಳ ಕಾಲಾವಕಾಶವನ್ನು ನೀಡಿದ ಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು  ಏಪ್ರಿಲ್ ಕ್ಕೆ ಮುಂದೂಡಿತು.

No comments:

Advertisement