Tuesday, March 10, 2020

ಕಾಂಗ್ರೆಸ್ಸಿಗೆ ಜ್ಯೋತಿರಾದಿತ್ಯ ಸಿಂಧಿಯಾ ವಿದಾಯ

ಕಾಂಗ್ರೆಸ್ಸಿಗೆ  ಜ್ಯೋತಿರಾದಿತ್ಯ ಸಿಂಧಿಯಾ ವಿದಾಯ
೨೨ ಶಾಸಕರ ರಾಜೀನಾಮೆ, ಪತನದ ಅಂಚಿನಲ್ಲಿ .ಪ್ರ. ಸರ್ಕಾರ
ನವದೆಹಲಿ: ದೀರ್ಘ ಕಾಲದಿಂದ ಅಸಮಾಧಾನದಿಂದ ಕುದಿಯುತ್ತಿದ್ದ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಟ್ಟ ಕಡೆಗೂ ಕಾಂಗ್ರೆಸ್ ಪಕ್ಷಕ್ಕೆಕೈಕೊಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ 2020 ಮಾರ್ಚ್ 10ರ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷದ ಜೊತೆಗಿನ ೧೮ ವರ್ಷಗಳ ನಂಟನ್ನು ಕಡಿದುಕೊಂಡರು. 

ಬೆನ್ನಲ್ಲೇ ಸಿಂಧಿಯಾ ಅವರಿಗೆ ನಿಷ್ಠಾವಂತರಾದ ೨೨ ಮಂದಿ ಶಾಸಕರೂ ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿದ್ದು, ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಇಳಿದು ಪತನದ ಅಂಚು ತಲುಪಿತು.

ಸಿಂಧಿಯಾ ಅವರು ಈದಿನ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಕಳುಹಿಸಿ ಹಳೆಯ ಮಹಾನ್ ಪಕ್ಷದ ನಾಯಕನಾಗಿ ದೇಶ ಮತ್ತು ರಾಜ್ಯದ ಸೇವೆ ಸಲ್ಲಿಸಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ತಮ್ಮ ರಾಜೀನಾಮೆ ಪತ್ರವನ್ನು ಸಿಂಧಿಯಾ ಅವರು ಟ್ವಟ್ಟರಿನಲ್ಲೂ ಪ್ರಕಟಿಸಿದರು. ಸಿಂಧಿಯಾ ಅವರು ಮಾರ್ಚ್ ೧೨ರ ಗುರುವಾರ ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿದವು.

ಸಿಂಧಿಯಾ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಂತೆಯೇ ಅವರಿಗೆ ನಿಷ್ಠಾವಂತರಾದ ೨೦ ಮಂದಿ ಬಂಡಾಯ ಶಾಸಕರು ಗುನಾ ರಾಜವಂಶಸ್ಥರನ್ನು ಅನುಸರಿಸುವ ಮೂಲಕ ಕಮಲನಾಥ್ ಸರ್ಕಾರವನ್ನು ಬಿಕ್ಕಟ್ಟಿನತ್ತ ನೂಕಿದರು. ಬಳಿಕ ಶಾಸಕರಾದ ಎಂಡಾಲ್ ಸಿಂಗ್, ಕಂಸಾನ, ಮನೋಜ್ ಚೌಧರಿ ಮತ್ತು ಮನೋಜ್ ಚೌಧರಿ ಸೇರಿದಂತೆ ಇನ್ನೂ ನಾಲ್ವರು ಶಾಸಕರು ರಾಜ್ಯಪಾಲ ಲಾಲ್ ಜಿ ಟಂಡನ್ ಅವರಿಗೆ ತಮ್ಮ ರಾಜೀನಾಮೆಗಳನ್ನು ಸಲ್ಲಿಸಿದರು.

ಸಿಂಧಿಯಾ ಅವರು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿದ ಬಳಿಕ ಅತ್ಯಂತ ಕ್ಷಿಪ್ರವಾಗಿ ಮಧ್ಯಪ್ರದೇಶದ ನಾಟಕೀಯ ಬೆಳವಣಿಗೆಗಳು ಸಂಭವಿಸಿ, ಸಿಂಧಿಯಾ ಅವರ ಬಿಜೆಪಿ ಪ್ರವೇಶಕ್ಕೆ ದಾರಿಯನ್ನು ಸುಗಮಗೊಳಿಸಿದವು.

ಮಧ್ಯೆ, ಸಿಂಧಿಯಾ ಮತ್ತು ಅವರ ಬೆಂಬಲಿಗರನ್ನು ಸಮಾಧಾನ ಪಡಿಸಲು ತಾವು ಪ್ರಯತ್ನಿಸುತ್ತಿರುವುದಾಗಿ ಮುಖ್ಯಮಂತ್ರಿ ಕಮಲನಾಥ್ ಕೆಲವು ಮಾಧ್ಯಮಗಳಿಗೆ ತಿಳಿಸಿದರು. ’ಸಿಂಧಿಯಾ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಮುಖ್ಯಸ್ಥರಾಗಿ  ನೇಮಿಸಿದರೂ ಸಮಸ್ಯೆಯೇನೂ ಇಲ್ಲ ಅಥವಾ ರಾಜ್ಯಸಭೆಗೆ ಕಳುಹಿಸರೂ ಆಕ್ಷೇಪವಿಲ್ಲಎಂದು ಕಮಲನಾಥ್ ಹೇಳಿದರು.

ಸಿಂಧಿಯಾ ಅವರಿಗೆ ಯಾವುದಾದರೂ ಹೊಣೆ ನೀಡಲು ಹಿಂದೆಯೂ ಸಮಸ್ಯೆಯೇನೂ ಇರಲಿಲ್ಲ ಎಂದು ನುಡಿದ ಮುಖ್ಯಮಂತ್ರಿ ಸಿಂಧಿಯಾ ಬೆಂಬಲಿಗರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲೂ ತಾವು ಸಿದ್ಧ ಎಂದು ಹೇಳುವ ಮೂಲಕ ಶಾಸಕರ ಕಡೆಗೂ ಸ್ನೇಹಹಸ್ತ ಚಾಚಿದರು.

ಸೋಮವಾರ ಕಮಲನಾಥ್ ಅವರು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ರಾಜ್ಯದ ರಾಜಕೀಯ ಸ್ಥಿತಿ ಬಗ್ಗೆ ಚರ್ಚಿಸಲು ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಸಿಂಧಿಯಾ ಅವರ ನಿಷ್ಠಾವಂತರಾದ ಸಚಿವರೂ ಸೇರಿದಂತೆ ೧೮ ಶಾಸಕರು ವಿಮಾನವೊಂದರಲ್ಲಿ ಬೆಂಗಳೂರಿನತ್ತ ತೆರಳಿ ತಮ್ಮ ಫೋನ್ಗಳನ್ನು ಸ್ವಿಚ್ಚ ಆಫ್ ಮಾಡುವ ಮೂಲಕ ಯಾರ ಸಂಪರ್ಕಕ್ಕೂ ಸಿಗದೆ ಕಮಲನಾಥ್ ಅವರನ್ನು ಸಂಕಟಕ್ಕೆ ಸಿಲುಕಿಸಿದ್ದರು.

ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆಯೇ ಕಮಲನಾಥ್ ಅವರು ಸೋಮವಾರ ರಾತ್ರಿ ಸಚಿವ ಸಂಪುಟದ ಸಭೆ ಕರೆದಿದ್ದರು.  ಸಭೆಯಲ್ಲಿ ಪಾಲ್ಗೊಂಡಿದ್ದ ೨೨ ಮಂದಿ ಸಚಿವರು ಮುಖ್ಯಮಂತ್ರಿಗೆ ತಮ್ಮ ರಾಜೀನಾಮೆ ನೀಡುವ ಮೂಲಕ ಬಂಡಾಯ ಶಾಸಕರಿಗೆ ಸ್ಥಾನನೀಡಲು ಅನುವು ಕಲ್ಪಿಸಿದ್ದರು. ’ನಾವು ಮುಖ್ಯಮಂತ್ರಿಯ ಜೊತೆಗೆ ಏಕತೆ ವ್ಯಕ್ತ ಪಡಿಸಿದ್ದೇವೆ. ಮತ್ತು ಸಂಪುಟ ಸಭೆಯಲ್ಲಿ ರಾಜೀನಾಮೆಗಳನ್ನು ಸಲ್ಲಿಸಿದ್ದೇವೆಎಂದು ಹಿರಿಯ ಸಚಿವರು ಹೇಳಿದ್ದರು.

ಮಾಫಿಯಾ ಜೊತೆ ಸೇರಿ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಸಭೆಯಲ್ಲಿ ಮುಖ್ಯಮಂತ್ರಿ ಹೇಳಿದ್ದರು. ’ನಾನು ನನ್ನ ಜೀವನವನ್ನು ಜನರ ಸೇವೆಗಾಗಿ ಅರ್ಪಿಸಿದ್ದೇನೆ, ಆದರೆ ಬಿಜೆಪಿಯ ನನ್ನ ಸರ್ಕಾರವನ್ನು ಅಸ್ಥಿರಗೊಳಿಸಲು ಅನೈತಿಕ ಹಾದಿ ಹಿಡಿದೆಎಂದು ಅವರು ಆಪಾದಿಸಿದ್ದರು.

ಆದರೆ  ಯಾವುದೇ ಕಾಂಗ್ರೆಸ್ ನಾಯಕರ ಜೊತೆ ಮಾತುಕತೆ ನಡೆಸಲು ನಿರಾಕರಿಸಿದ ಸಿಂಧಿಯಾ, ಪಕ್ಷವು ತಮ್ಮನ್ನು ಸಂತೃಪ್ತಿ ಪಡಿಸಲು ಅತ್ಯಂತ ತಡವಾಗಿ ಯತ್ನಗಳನ್ನು ಅರಂಭಿಸಿದೆ ಎಂದು ಹೇಳಿದ್ದರು.

ಮಂಗಳವಾರ ಏನೇನು ಆಯಿತು?
.        ಜ್ಯೋತಿರಾದಿತ್ಯ ಸಿಂಧಿಯಾ ಅವರಿಂದ ಮಂಗಳವಾರ ಬೆಳಗ್ಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ.
.        ಬೆಳಗ್ಗೆ ೧೧.೪೦ಕ್ಕೆ ಪ್ರಧಾನಿ ನಿವಾಸದಿಂದ ಸಿಂಧಿಯಾ ನಿರ್ಗಮನ.
.        ಸಿಂಧಿಯಾ ಅವರಿಂದ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆನನಗೆ ಈಗ  ಮುಂದುವರಿಯಲು ಸಕಾಲವಾಗಿದೆಎಂಬ ಒಕ್ಕಣೆಯಿದ್ದ ರಾಜೀನಾಮೆ ಪತ್ರ ರವಾನೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ರಾಷ್ಟ್ರ ಮತ್ತು ರಾಜ್ಯದ ಸೇವೆ ಸಲ್ಲಿಸಲು ನಾನು ಅಸಮರ್ಥನಾಗಿದ್ದೇನೆ ಎಂದೂ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದರು.
.        ಬೆನ್ನಲ್ಲೇ ಪಕ್ಷ ವಿರೋಧೀ ಚಟುವಟಿಕೆಗಳಿಗಾಗಿ ಕಾಂಗ್ರೆಸ್ ಪಕ್ಷದಿಂದ ಸಿಂಧಿಯಾ ಉಚ್ಚಾಟನೆ.
.        ಬಿಜೆಪಿ ಸೇರಲು ಸಿಂಧಿಯಾ ಸಿದ್ಧತೆ, ಗುರುವಾರ ಸೇರ್ಪಡೆ ಸಂಭವ.
.        ಸಿಂಧಿಯಾ ಅವರಿಗೆ ಬಿಜೆಪಿ ಮೂಲಕ ರಾಜ್ಯಸಭಾ ಸ್ಥಾನ ಸಿಗುವ ಸಾಧ್ಯತೆ.
.        ತಂದೆ ಮಾಧವರಾವ್ ಸಿಂಧಿಯಾ ಅವರ ೭೫ನೇ ಜನ್ಮದಿನದ ದಿನವೇ ಸಿಂಧಿಯಾ ಅವರಿಂದ ಪಕ್ಷಕ್ಕೆ ವಿದಾಯ.
.        ಸಿಂಧಿಯಾ ಸಂಪರ್ಕಿಸಲು ಕಾಂಗ್ರೆಸ್ ನಡೆಸಿದ ಹರಸಾಹಸ ವಿಫಲ. ಸಿಂಧಿಯಾ ನಿಷ್ಠಾವಂತ ಶಾಸಕರು ಬೆಂಗಳೂರಿನಲ್ಲಿ ವಾಸ್ತವ್ಯ.
.        ಸಿಂಧಿಯಾ ರಾಜೀನಾಮೆಯಿಂದ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ಇನ್ನಷ್ಟು ತೀವ್ರ. ೨೨ ಶಾಸಕರಿಂದಲೂ ರಾಜೀನಾಮೆ.
೧೦.     ೧೫ ವರ್ಷಗಳ ವನವಾಸದ ಬಳಿಕ ೨೦೧೮ರಲ್ಲಿ ಪಕ್ಷವು ಸರ್ಕಾರ ರಚಿಸಿದ ಬಳಿಕ, ಮಧ್ಯಪ್ರದೇಶದ ಕೆಲವು ಹಿರಿಯ ನಾಯಕರಿಂದ ಸಿಂಧಿಯಾ ಅವರನ್ನು ಬದಿಗೊತ್ತಲು ನಿರಂತರ ಯತ್ನ ನಡೆದಿತ್ತು ಎಂದು ಸಿಂಧಿಯಾ ಅವರಿಗೆ ನಿಕಟರಾದ ಕಾಂಗ್ರೆಸ್ ನಾಯಕರ ಹೇಳಿಕೆ.

ರಾಜೀನಾಮೆ ನೀಡಿದ ಮಧ್ಯಪ್ರದೇಶದ ೨೧ ಶಾಸಕರು
ಸಚಿವರು:
. ತುಳಸಿ ಸಿಲಾವತ್
. ಗೋವಿಂದ್ ಸಿಂಗ್ ರಜಪೂತ್
. ಡಾ. ಪ್ರಭುರಾಮ್ ಚೌಧರಿ
. ಇಮಾರ್ತಿ ದೇವಿ
. ಪ್ರದ್ಯುಮ್ನಾ ಸಿಂಗ್ ತೋಮರ್
. ಮಹೇಂದ್ರ ಸಿಂಗ್ ಸಿಸೋಡಿಯಾ.
ಇತರ ಶಾಸಕರು:
. ಹರ್ದೀಪ್ ಸಿಂಗ್ ಡಾಂಗ್
. ರಾಜ್ಯವರ್ಧನ್ ಸಿಂಗ್
. ಬ್ರಜೇಂದ್ರ ಸಿಂಗ್ ಯಾದವ್
೧೦. ಜಸ್ಪಾಲ್ ಜಜ್ಜಿ, ಸುರೇಶ್ ಧಕಾಡ್
೧೧. ಜಸ್ವಂತ್ ಜಾಟವ್
೧೨. ಸಂತ್ರಾಮ್ ಸಿರೋನಿಯಾ
೧೩. ಮುನ್ನಾಲಾಲ್ ಗೋಯಲ್,
೧೪. ರಣವೀರ್ ಸಿಂಗ್ ಜಾಟವ್
೧೫. ಒಪಿಎಸ್ ಭಡೋರಿಯಾ
೧೬. ಕಮಲೇಶ್ ಜಾಟವ್
೧೭. ಗಿರಿರಾಜ್ ದಂಡೋತಿಯ
೧೮. ರಘುರಾಜ್ ಕನ್ಸಾನ
೧೯. ಐಡಾಲ್ಸಿಂಗ್ ಕನ್ಸಾನ
೨೦. ಬಿಯಾಸಾಹುಲಾಲ್ ಸಿಂಗ್.
೨೧. ಪಂಕಜ್ ಚತುರ್ವೇದಿ (ರಾಜ್ಯ ಕಾಂಗ್ರೆಸ್ ವಕ್ತಾರ)
೨೨. ಸುಮಾವಾಲಿ.

No comments:

Advertisement