Tuesday, April 14, 2020

ಮುಂಬೈ ಬಾಂದ್ರಾ ರೈಲು ನಿಲ್ದಾಣ: ಜಮಾಯಿಸಿದ ವಲಸೆ ಕಾರ್ಮಿಕರು, ಊರಿಗೆ ಹೋಗಲು ಧಾವಂತ

ಮುಂಬೈ ಬಾಂದ್ರಾ ರೈಲು ನಿಲ್ದಾಣ: ಜಮಾಯಿಸಿದ ವಲಸೆ ಕಾರ್ಮಿಕರು,  ಊರಿಗೆ ಹೋಗಲು ಧಾವಂತ
ಮುಂಬೈ: ದೆಹಲಿಯ ಉತ್ತರಪ್ರದೇಶ ಗಡಿಯಲ್ಲಿ ಕಳೆದ ತಿಂಗಳು ಉದ್ಭವಿಸಿದಂತಹುದೇ ಘಟನೆ 2020 ಏಪ್ರಿಲ್ 14ರ ಮಂಗಳವಾರ ಮುಂಬೈಯಲ್ಲಿ ಮರುಕಳಿಸಿದ್ದು, ಸಹಸ್ರಾರು ಮಂದಿ ವಲಸೆ ಕಾರ್ಮಿಕರು ಬಾಂದ್ರಾ ರೈಲ್ವೇ ನಿಲ್ದಾಣದ ಹೊರಗೆ ಜಮಾಯಿಸಿ ತಮ್ಮನ್ನು ಹುಟ್ಟೂರುಗಳಿಗೆ ಕಳುಹಿಸುವಂತೆ ಆಗ್ರಹಿಸಿದ ಘಟನೆ ಘಟಿಸಿತು.

ಪರಿಸ್ಥಿತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಚರ್ಚಿಸಿ, ಪರಿಸ್ಥಿತಿ ನಿಭಾಯಿಸಲು ಕೇಂದ್ರದ ಸಂಪೂರ್ಣ ಬೆಂಬಲವನ್ನು ತಿಳಿಸಿದರುದು ವರದಿಗಳು ಹೇಳಿದವು.

ತಮ್ಮನ್ನು ಊರಿಗೆ ಕಳುಹಿಸಲು ರೈಲುಗಳನ್ನು ಓಡಿಸುವಂತೆ ಆಗ್ರಹಿಸುತ್ತಿದ್ದ ವಲಸೆ ಕಾರ್ಮಿಕರು ಲಾಕ್ ಡೌನ್ ಉಲ್ಲಂಘಿಸಿ ರೈಲ್ವೇ ನಿಲ್ದಾಣದ ಒಳಕ್ಕೆ ನುಗ್ಗಲು ಯತ್ನಿಸಿದಾಗ ಅವರನ್ನು ಪೊಲೀಸರು ಲಾಠಿ ಪ್ರಹಾರ ಮಾಡಿ ಚದುರಿಸಿದರು ಎಂದು ವರದಿಗಳು ಹೇಳಿದವು.

ಕಾರ್ಮಿಕರು ಲಾಕ್ ಡೌನ್ ವಿಸ್ತರಣೆಯನ್ನು ಪ್ರತಿಭಟಿಸುತ್ತಿದ್ದರು. ತಮಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳು ಸಿಗುತ್ತಿಲ್ಲ ಎಂಬುದಾಗಿ ಹೇಳುತ್ತಿದ್ದರು ಎಂದು ಪಶ್ಚಿಮ ರೈಲ್ವೇ ಅಧಿಕಾರಿಯೊಬ್ಬರು ತಿಳಿಸಿದರು.

ಕೊರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ದಿಗ್ಬಂಧನವನ್ನು ಮೇ ರವರೆಗೆ ವಿಸ್ತರಿಸಿರುವ ನಿರ್ಧಾರದಿಂದ ಕೆರಳಿದ ವಲಸೆ ಕಾರ್ಮಿಕರು, ದಿನಗೂಲಿಗಳು ಮುಂಬೈಯ ಬಾಂದ್ರಾ ರೈಲ್ವೇ ನಿಲ್ದಾಣದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದರು ಎಂದು ವರದಿಗಳು ಹೇಳಿವೆ.

ಲಾಕ್ ಡೌನ್ ವಿಸ್ತರಿಸಿರುವುದು ಸರಿಯಲ್ಲ. ನಮ್ಮ ಬದುಕು ದುಸ್ತರವಾಗಿದೆ. ನಮ್ಮೂರಿಗೆ ನಮ್ಮನ್ನು ಕಳುಹಿಸಲು ವ್ಯವಸ್ಥೆ ಮಾಡಿ, ಎಂಬ ಆಗ್ರಹದೊಂದಿಗೆ ರಸ್ತೆಗಿಳಿದ ಸಾವಿರಾರು ಮಂದಿಯನ್ನು ಪೊಲೀಸರು ಲಾಠಿ ಪ್ರಯೋಗಿಸಿ ಚದುರಿಸಿದರು ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದವು.

ಮುಂಬೈಯ ಪಟೇಲ್ ನಗರಿ ಕೊಳಚೆಗೇರಿಯಲ್ಲಿ ವಾಸವಾಗಿರುವ ಸಾವಿರಕ್ಕೂ ಹೆಚ್ಚು ಮಂದಿ ವಲಸೆ ಕಾರ್ಮಿಕರು ಮಧ್ಯಾಹ್ನ ಬಾಂದ್ರಾದ ರೈಲ್ವೇ ನಿಲ್ದಾಣದ ಸಮೀಪದ ಪಶ್ಚಿಮ ಬಸ್ ಡಿಪೋ ಬಳಿ ಜಮಾಯಿಸಿದರು. ತಮ್ಮ ಊರುಗಳಿಗೆ ತೆರಳಲು ಸಾರಿಗೆ ವ್ಯವಸ್ಥೆ ಮಾಡಬೇಕು, ಎಂದು ಆಗ್ರಹಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. 
ಪ್ರತಿಭಟನೆಗೆ ಮುಂದಾಗಿದ್ದವರೆಲ್ಲರೂ ಉತ್ತರ ಪ್ರದೇಶ ಮತ್ತು ಪಶ್ಚಿಮಬಂಗಾಳ ಮೂಲದವರು ಎಂದು ಹೇಳಲಾಗಿದೆ.

ಎನ್‌ಜಿಒಗಳು ನಮಗೆ ಆಹಾರವನ್ನೇನೋ ನೀಡುತ್ತಿವೆ. ಆದರೆ, ಬಹುತೇಕರು ಸನ್ನಿವೇಶದಲ್ಲಿ ತಮ್ಮ ಊರು ಸೇರಿಕೊಳ್ಳಲು ಬಯಸುತ್ತಿದ್ದಾರೆ. ಕ್ ಡೌನ್ ನಮ್ಮ ಬದುಕನ್ನು ದುಸ್ತರಗೊಳಿಸಿದೆ, ಎಂದು ಕಾರ್ಮಿಕರೊಬ್ಬರು ಹೇಳಿದರು.

ನಮಗೆ ಈಗ ಬೇಕಿರುವುದು ಆಹಾರವಲ್ಲ. ನಾವು ನಮ್ಮ ಊರುಗಳಿಗೆ ಹೋದರೆ ಸಾಕು. ಲಾಕ್ ಡೌನ್ ವಿಸ್ತರಣೆಯ ನಿರ್ಧಾರ ನಮಗೆ ಸರಿಕಾಣಲಿಲ್ಲ ಎಂದು ಅವರು ಹೇಳಿದರು.

ನಮ್ಮ ಬಳಿ ಇದ್ದ ಉಳಿತಾಯದ ದುಡ್ಡನ್ನು ದಿಗ್ಬಂಧನದ ಮೊದಲ ಹಂತದಲ್ಲಿ ಖರ್ಚು ಮಾಡಿಕೊಂಡಿದ್ದೇವೆ. ನಮಗೆ ಈಗ ತಿನ್ನಲು ಏನೂ ಇಲ್ಲ. ನಾವು ನಮ್ಮ ಊರುಗಳಿಗೆ ಹೋಗಬೇಕೆಂದಿದ್ದೇವೆ. ಸರ್ಕಾರವು ನಮ್ಮ ಪ್ರಯಾಣಕ್ಕೆ ವ್ಯವಸ್ಥೆ ಮಾಡಬೇಕು ಎಂದು ಪಶ್ಚಿಮ ಬಂಗಾಳದ ಮಾಲ್ಡಾ ಮೂಲದ ಕೂಲಿಕಾರರೊಬ್ಬರು ಹೇಳಿದರು.

ದಿಗ್ಬಂಧನ ಘೋಷಣೆಯಾದಾಗಿನಿಂದ ದಿನಗೂಲಿ, ವಲಸೆ ಕಾರ್ಮಿಕರಿಗೆ ಆದಾಯ ಇಲ್ಲವಾಗಿದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ಉಂಟಾಗಿದೆ. ಜೀವನ ನಡೆಸಲು ಹೋರಾಟ ಮಾಡುವಂತಹ ಸ್ಥಿತಿ ಅವರದ್ದಾಗಿದೆ.

ಮುಂಬೈ ಇಡೀ ದೇಶದಲ್ಲೇ ಕೊರೊನಾ ವೈರಸ್ ಹಾಟ್ ಸ್ಪಾಟ್ ಎಂಬುದಾಗಿ ಗುರುತಿಸಿಕೊಂಡಿದೆ. ದೇಶದ ನಗರಗಳ ಪೈಕಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಮುಂಬೈಯಿಂದಲೇ ವರದಿಯಾಗಿವೆ. ಮುಂಬೈಯಲ್ಲಿ   ,೫೪೦ ಸೋಂಕು ಪ್ರಕರಣಗಳು ಖಚಿತಗೊಂಡಿವೆ.

ಮುಂಬೈಯ ಕೊಳಚೆಗೇರಿಗಳಿಗೂ ಸೋಂಕು ವ್ಯಾಪಿಸಿದ್ದು, ಇದೇ ವೇಳೆಯಲ್ಲಿ ದಿನಗೂಲಿ ವಲಸಿಗರು ಸಹಸ್ರಾರು  ಸಂಖ್ಯೆಯಲ್ಲಿ ಒಂದೆಡೆ ಜಮಾಯಿಸಿದ್ದು ಆತಂಕಕ್ಕೆ ಕಾರಣವಾಗಿದೆ.

No comments:

Advertisement