My Blog List

Wednesday, April 15, 2020

ಕಾರಿನಲ್ಲಿ ಒಬ್ಬನೇ ಪಯಣಿಗ, ಬೈಕ್ ಹಿಂಬದಿ ಸವಾರನಿಗೆ ಅವಕಾಶವಿಲ್ಲ

ಕಾರಿನಲ್ಲಿ ಒಬ್ಬನೇ ಪಯಣಿಗ, ಬೈಕ್ ಹಿಂಬದಿ ಸವಾರನಿಗೆ ಅವಕಾಶವಿಲ್ಲ: ಲಾಕ್‌ಡೌನ್ ಪರಿಷ್ಕೃತ ನಿಯಮ 
ನವದೆಹಲಿ: ಕೊರೋನಾವೈರಸ್ ಹಿನ್ನೆಲೆಯಲ್ಲಿ ಮೇ ೩ರ ವರೆಗೆ ವಿಸ್ತರಣೆಗೊಂಡ ರಾಷ್ಟ್ರವ್ಯಾಪಿ ದಿಗ್ಬಂಧನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 2020 ಏಪ್ರಿಲ್ 15ರ ಬುಧವಾರ ಪ್ರಕಟಿಸಿರುವ ಪರಿಷ್ಕೃತ ಮಾರ್ಗದರ್ಶಿ ಸೂತ್ರದಲ್ಲಿ ವಾಹನ ಸಂಚಾರದ ವಿಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಯಿತು.

ಗೃಹ ವ್ಯವಹಾರಗಳ ಸಚಿವಾಲಯವು ಬಿಡುಗಡೆ ಮಾಡಿರುವ ನಿರ್ದೇಶನಗಳ ಪ್ರಕಾರ ದಿಗ್ಬಂಧನ ಕಾಲದಲ್ಲಿ ಅಗತ್ಯ ಸೇವೆಗಾಗಿ ಸಂಚರಿಸಲು ಅನುಮತಿ ಪಡೆದ ಖಾಸಗಿ ಚತುಷ್ಚಕ್ರ ವಾಹನದಲ್ಲಿ (ಕಾರು, ಜೀಪು) ಚಾಲಕನನ್ನು ಹೊರತು ಪಡಿಸಿ ಹಿಂಬದಿಯ ಸೀಟಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಕುಳಿತು ಪ್ರಯಾಣ ಮಾಡಬಹುದು.

ದ್ವಿಚಕ್ರವಾಹನವಾಗಿದ್ದರೆ ವಾಹನ ಸವಾರ ತನ್ನ ಜೊತೆಗೆ ಹಿಂಬದಿ ಸವಾರನನ್ನು ಒಯ್ಯುವಂತಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಹೇಳಿಕೆ ತಿಳಿಸಿತು.

‘ದಿಗ್ಬಂಧನ ವೇಳೆಯಲ್ಲಿ ತುರ್ತು ಸೇವೆಗಳಿಗಾಗಿ ವೈದ್ಯಕೀಯ ಮತ್ತು ಪಶುವೈದ್ಯ ಸೇವೆಗೆ ಮತ್ತು ಅಗತ್ಯ ವಸ್ತುಗಳನ್ನು ಪಡೆಯಲು ಖಾಸಗಿ ವಾಹನಗಳಿಗೆ ಅವಕಾಶ ನೀಡಲಾಗುವುದು. ಇಂತಹ ಸಂದರ್ಭಗಳಲ್ಲಿ, ನಾಲ್ಕು ಚಕ್ರದ ವಾಹನವಾಗಿದ್ದರೆ ಅಂತಹ ಖಾಸಗಿ ವಾಹನದ ಚಾಲಕನನ್ನು ಹೊರತು ಪಡಿಸಿ ಒಬ್ಬ ಪ್ರಯಾಣಿಕನಿಗೆ ಮಾತ್ರ ಹಿಂಬದಿಯ ಆಸನದಲ್ಲಿ ಕುಳಿತು ಪಯಣಿಸಲು ಅವಕಾಶ ಇದೆ, ಏನಿದ್ದರೂ ದ್ವಿಚಕ್ರ ವಾಹನವಾಗಿದ್ದರೆ ವಾಹನದ ಚಾಲಕನಿಗೆ ಮಾತ್ರವೇ ಅನುಮತಿ ನೀಡಲಾಗುವುದು ಎಂದು ಸಚಿವಾಲಯದ ಪ್ರಕಟಣೆ ಹೇಳಿದೆ.

ಮಾರ್ಗದರ್ಶಿ ಸೂತ್ರದ ಪ್ರಕಾರ ಅನುಮತಿ ಇರುವ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಮುಖಗವಸು, ಕೈಗವಸು, ಸ್ಯಾನಿಟೈಸರ್‌ಗಳನ್ನು ಒದಗಿಸಬೇಕು. ಕೊಠಡಿಯನ್ನು ನಿಯಮಿತವಾಗಿ ಶುಚಿಗೊಳಿಸಬೇಕು. ಕೆಲಸಕ್ಕೆ ಬರುವವರು ಬೇರೆ ಬೇರೆ ಅವಧಿಯಲ್ಲಿ ಪಾಳಿಗಳಲ್ಲಿ ಕೆಲಸ ಮಾಡಬೇಕು. ಊಟದ ವೇಳೆಯಲ್ಲೂ ಸಾಮಾಜಿಕ ಅಂತರ ಪಾಲನೆಯಾಗಬೇಕು ಎಂದು ಸಚಿವಾಲಯ ತಿಳಿಸಿದೆ.

೧೦ ಜನರಿಗಿಂತ ಹೆಚ್ಚು ಮಂದಿಯ ಸಭೆಗೆ ಅವಕಾಶವಿಲ್ಲ. ಜನರು ಒಬ್ಬರಿಂದ ಒಬ್ಬರು ಕನಿಷ್ಠ ೬ ಅಡಿ ದೂರದಲ್ಲಿ ಕುಳಿತಿರಬೇಕು. ಲಿಫ್ಟಿನಲ್ಲಿ ೨-೪ಕ್ಕಿಂತ ಹೆಚ್ಚು ಮಂದಿಗೆ ಅವಕಾಶವಿಲ್ಲ. ಇವು ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಕಾರ್‍ಯ ನಿರ್ವಹಿಸುವ ಸ್ಥಳಳಿಗೆ ಮಾತ್ರ ಅನ್ವಯ ಎಂದೂ ಪ್ರಕಟಣೆ ಹೇಳಿದೆ.

No comments:

Advertisement