Sunday, April 19, 2020

ದಾಳಿಗೆ ಮುನ್ನ ಕೊರೋನಾ ಜನಾಂಗ, ಧರ್ಮ, ಗಡಿಗಳನ್ನು ನೋಡುವುದಿಲ್ಲ: ಪ್ರಧಾನಿ ಮೋದಿ

ದಾಳಿಗೆ ಮುನ್ನ ಕೊರೋನಾ ಜನಾಂಗ, ಧರ್ಮ, ಗಡಿಗಳನ್ನು ನೋಡುವುದಿಲ್ಲ: ಪ್ರಧಾನಿ ಮೋದಿ
ನವದೆಹಲಿ: ಕೋವಿಡ್-೧೯ ಸೋಂಕನ್ನು ಎದುರಿಸುವಲ್ಲಿ ಏಕತೆ ಮತ್ತು ಸಹೋದರತ್ವ ಬೆಳೆಸಿಕೊಳ್ಳುವಂತೆ  2020 ಏಪ್ರಿಲ್ 19ರ ಭಾನುವಾರ ಜನತೆಯನ್ನು ಒತ್ತಾಯಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದಾಳಿಗೆ ಮುನ್ನ ಜನಾಂಗ, ಧರ್ಮ ಅಥವಾ ಗಡಿಗಳನ್ನು ವೈರಸ್ ನೋಡುವುದಿಲ್ಲ ಎಂದು ಕಿವಿಮಾತು ಹೇಳಿದರು.

ಜನಾಂಗ, ಧರ್ಮ, ವರ್ಣ, ಜಾತಿ, ಪಂಥ, ಭಾಷೆ ಅಥವಾ ಗಡಿಗಳನ್ನು ನೋಡಿಕೊಂಡು ಕೋವಿಡ್-೧೯ ದಾಳಿ ಮಾಡುವುದಿಲ್ಲ. ಕೋವಿಡ್ ವಿರುದ್ಧದ ಹೋರಾಟದಲ್ಲಿ ನಮ್ಮಲ್ಲಿ ಏಕತೆ ಮತ್ತು ಸಹೋದರತ್ವ ಅತಿಮುಖ್ಯ. ವಿಚಾರದಲ್ಲಿ ನಾವು ಒಟ್ಟಾಗಿದ್ದೇವೆ ಎಂದು ಪ್ರದಾನಿ ಮೋದಿ ಟ್ವೀಟ್ ಮಾಡಿದರು.

ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಮುಸ್ಲಿಮ್ ಸಮಾವೇಶದ ಬಳಿಕ ಭಾರತದಲ್ಲಿ ಕೋವಿಡ್-೧೯ ಪ್ರಕರಣಗಳ ಅಲೆ ಹೆಚ್ಚಿದ್ದು, ಅದರಿಂದ ಉಂಟಾದ ಸಿಟ್ಟು ಇಸ್ಲಾಂವಿರೋಧಿ ಹುಚ್ಚು ಎಬ್ಬಿಸಿದ ಹಿನ್ನೆಲೆಯಲ್ಲಿ ಪ್ರಧಾನಿಯವರಿಂದ ಹೇಳಿಕೆ ಬಂದಿದೆ.

ಇತಿಹಾಸದ ಪುಟಗಳಲ್ಲಿ ರಾಷ್ಟ್ರಗಳು ಮತ್ತು ಸಮಾಜಗಳು ಪರಸ್ಪರ ವಿರುದ್ದವಾಗಿದ್ದವು. ಆದರೆ ಇಂದು ನಾವೆಲ್ಲರೂ ಒಟ್ಟಾಗಿ ಸಾಮಾನ್ಯ ಸವಾಲನ್ನು ಎದುರಿಸುತ್ತಿದ್ದೇವೆ ಎಂದೂ ಪ್ರಧಾನಿ ಹೇಳಿದರು.

ಒಗ್ಗಟ್ಟಾಗಿರುವುದು ಮತು ಹೊಂದಿಕೊಂಡಿರುವುದರಲ್ಲಿ ಭವಿಷ್ಯ ಇದೆ ಎಂದೂ ಪ್ರಧಾನಿ ನುಡಿದರು.

ಕೋವಿಡ್-೧೯ ಒದಗಿಸಿರುವ ಅವಕಾಶಗಳನ್ನು ಬಳಸಿಕೊಳ್ಳಲು ಭಾರತವು ಎದ್ದು ನಿಲ್ಲಬೇಕು ಎಂಬುದಾಗಿ ಹೇಳುವ ಮೂಲಕ ಪ್ರಧಾನಿಯವರು  ದೇಶದ ಶಕ್ತಿಯನ್ನು ಹೆಚ್ಚು ಉತ್ಪಾದಕ ಕಾರ್‍ಯಗಳತ್ತ ತಿರುಗಿಸಲು ಯತ್ನಿಸಿದರು.

ಕೋವಿಡ್-೧೯ ನಂತದ ಜಗತ್ತಿನಲ್ಲಿ ಭಾರತವು ತನ್ನ ಭೌತಿಕ ಮತ್ತು ವಾಸ್ತವಿಕ ಶಕ್ತಿಯನ್ನು ಸಮರ್ಪಕವಾಗಿ ಒಗ್ಗೂಡಿಸಿಕೊಂಡು, ಆಧುನಿಕ ಬಹುರಾಷ್ಟ್ರೀಯ ಸರಬರಾಜು ಸರಪಳಿಯ ಕೇಂದ್ರವಾಗಿ ಕಾರ್‍ಯ ನಿರ್ವಹಿಸಲು ಸಾಧ್ಯ ಎಂದು ಪ್ರಧಾನಿ ನುಡಿದರು.

ಕಳೆದ ಒಂದು ವಾರದ ಅವಧಿಯಲ್ಲಿ ಹೊಸ ಸೋಂಕಿನ ಪ್ರಕರಣಗಳ ಪ್ರಮಾಣವು ಕಡಿಮೆಯಾಗಿದ್ದರೂ, ೫೦೦ಕ್ಕೂ ಹೆಚ್ಚು ಸಾವಿನೊಂದಿಗೆ ಸೋಂಕಿನ ಪ್ರಕರಣಗಳು ೧೫,೦೦೦ವನ್ನು ದಾಟಿದ ಹಿನ್ನೆಲೆಯಲ್ಲಿ ಪ್ರಧಾನಿಯವರು ಒಗ್ಗಟ್ಟಿ ಸಂದೇಶವನ್ನು ನೀಡಿದ್ದಾರೆ.

ದೆಹಲಿಯ ತಬ್ಲಿಘಿ ಜಮಾತ್ ಸಮಾವೇಶವು ಬೆಳಕಿಗೆ ಬಂದ ಬಳಿಕ, ಮುಸ್ಲಿಮರನ್ನು ವೈರಸ್ ವಾಹಕರು ಎಂಬುದಾಗಿ ಬಿಂಬಿಸುವ ಯತ್ನಗಳು ನಡೆದಿದ್ದು ಅವರು ನಿಂದನೆ ಹಾಗೂ ದೈಹಿಕ ದೋಷಣೆ ಎದುರಿಸಬೇಕಾದ ಪ್ರಸಂಗಗಳೂ ಎದುರಾಗಿದ್ದವು.

ವಿವಿಧ ಸಾಮಾಜಿಕ ಮಾದ್ಯಮ ವೇದಿಕೆಗಳಲ್ಲಿ ಮುಸ್ಲಿಮರು ಉದ್ದೇಶಪೂರ್ವಕವಾಗಿ ವೈರಸ್ ಹರಡುತ್ತಿದ್ದಾರೆ ಎಂಬುದಾಗಿ ಪೋಸ್ಟ್‌ಗಳು ಪ್ರಕಟವಾಗಿದ್ದವು. ಸಂಚನ್ನು ವಿವರಿಸಲು ಕೊರೋನಾಜಿಹಾದ್ ಎಂಬ ಪದವನ್ನೂ ಸೃಷ್ಟಿಸಲಾಗಿತ್ತು.

ವೈರಸ್ಸಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಮುದಾಯವನ್ನು ಗುರಿಮಾಡಿ ಟೀಕಿಸುವುದರಿಮದ ಭಾರತದ ಕೊರೋನಾವಿರೋಧಿ ಹೋರಾಟ ದುರ್ಬಲಗೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದರು.

No comments:

Advertisement