Thursday, May 7, 2020

೧೯೮೪ರ ಭೋಪಾಲ ಅನಿಲ ದುರಂತದ ನೆನಪು

೧೯೮೪ರ ಭೋಪಾಲ ಅನಿಲ ದುರಂತದ ನೆನಪು
ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ 2020 ಮೇ 07ರ ಗುರುವಾರ ಬೆಳ್ಳಂಬೆಳಗ್ಗೆ ಸಂಭವಿಸಿದ ವಿಷಾನಿಲ ದುರಂತವು ೧೯೮೪ರ ಭೋಪಾಲ್ ವಿಷಾನಿಲ ದುರಂತದ ನೆನಪುಗಳು ಮರುಕಳಿಸುವಂತೆ ಮಾಡಿತು.

ಮಧ್ಯಪ್ರದೇಶದ ಭೋಪಾಲದಲ್ಲಿ ೨೦ನೇ ಶತಮಾನದ ಅತಿ ದೊಡ್ಡ ಕೈಗಾರಿಕಾ ದುರಂತ ೧೯೮೪ನೇ ಇಸವಿಯ ಡಿಸೆಂಬರ್ ೨ರಂದು ಸಂಭವಿಸಿತ್ತು. ಮಧ್ಯಪ್ರದೇಶ ರಾಜಧಾನಿಯ ಯೂನಿಯನ್ ಕಾರ್ಬೈಡನ್ ಪೆಸ್ಟಿಸೈಡ್ ಘಟಕದಲ್ಲಿ ಡಿಸೆಂಬರ್ ಮಧ್ಯರಾತ್ರಿ ಮಿಥೈಲ್ ಐಸೋಸೈನೇಟ್ ಅನಿಲ ಸೋರಿಕೆಯಾಗಿತ್ತು.
ಕೀಟನಾಶಕ
ಕಾರ್ಖಾನೆಯಿಂದ ಹೊರಹೊಮ್ಮಿದ ವಿಷಾನಿಲ ೧೫ ಸಾವಿರಕ್ಕೂ ಹೆಚ್ಚು ಮಂದಿಯ ಜೀವವನ್ನು ಬಲಿ ಪಡೆದಿತ್ತು. ದುರಂತ ಘಟನೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಮಂದಿ ವಿಷಾನಿಲ ಸೇವಿಸಿ ಅನಾರೋಗ್ಯಕ್ಕೆ ಈಡಾದರು. ಬದುಕುಳಿದ ಅನೇಕ ಮಂದಿ ಈಗಲೂ ಉಸಿರಾಟದ ತೊಂದರೆ ಹಾಗೂ ವಿವಿಧ ಅಂಗಾಂಗ ಹಾನಿಯ ತೊಂದರೆಯಿಂದ ಬಳಲುತ್ತಿದ್ದಾರೆ.

ಇದೀಗ ಕೊರೊನಾ ವೈರಸ್ ವಿರುದ್ಧ ಇಡೀ ದೇಶ ಒಗ್ಗಟ್ಟಿನಿಂದ ಹೋರಾಡುತ್ತಿರುವ ಸಂದರ್ಭದಲ್ಲಿ ಮತ್ತೊಂದು ದುರಂತ ದುರಂತ ಸಂಭವಿಸಿತು. ಮೇ ಗುರುವಾರ ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಸಂಭವಿಸಿದ ಅನಿಲ ದುರಂತವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತು. ಕೈಗಾರಿಕಾ ಕ್ಷೇತ್ರದಲ್ಲಿ ಎಷ್ಟೇ ಮುನ್ನಚ್ಚೆರಿಕಾ ಕ್ರಮಗಳನ್ನು ಕೈಗೊಂಡರೂ ಕೇವಲ ಒಂದೇ ಒಂದು ತಪ್ಪಿನಿಂದಾಗಿ ಹತ್ತಿರದ ಪರಿಸರ ನಿವಾಸಿಗಳ ಪ್ರಾಣಕ್ಕೆ ಕುತ್ತು ಸಂಭವಿಸುತ್ತದೆ ಎಂಬುದಕ್ಕೆ ವಿಶಾಖಪಟ್ಟಣ ದುರಂತ ಇನ್ನೊಮ್ಮೆ ಸಾಕ್ಷ್ಯ ಒದಗಿಸಿತು.

ಆಂಧ್ರಪ್ರದೇಶದ ವಿಶಾಖಪಟ್ಟಣದ ವೆಂಕಟಪುರಂನ ಎಲ್ಜಿ  ಪಾಲಿಮರ್ಸ್ ರಾಸಾಯನಿಕ ಕಾರ್ಖಾನೆಯಿಂದ ಸೋರಿಕೆಯಾದ ವಿಷಾನಿಲ ಗಾಳಿಯ ಮೂಲಕ ಸಮೀಪದ ಪ್ರದೇಶಗಳಿಗೆ ಹರಡಿ, ಹಲವರು ಜೀವ ಕಳೆದುಕೊಂಡರೆ, ಸಾವಿರಾರು ಅಸ್ವಸ್ಥರಾಗಿದ್ದಾರೆ.

ಮುಂಜಾನೆ ೩ರ ಹೊತ್ತಿಗೆ ಸೋರಿಕೆಯಾದಾಗ ಆಸುಪಾಸಿನ ಮಂದಿ ಸವಿ ನಿದ್ದೆಯಲ್ಲಿದ್ದರು. ಸೋರಿಕೆಯಾದ ಸ್ವಲ್ಪ ಹೊತ್ತಿನಲ್ಲೇ ಸಮೀಪದ ನಿವಾಸಿಗಳಲ್ಲಿ ಕೆಲವರಿಗೆ ಉಸಿರಾಟದ ತೊಂದರೆ, ಇನ್ನು ಕೆಲವರಿಗೆ ಕಣ್ಣಿನಲ್ಲಿ ಉರಿ ಕಾಣಿಸಿಕೊಂಡಿತ್ತು. ಅನೇಕರು ಪ್ರಜ್ಞೆಯನ್ನು ಕಳೆದುಕೊಂಡು ಬೀದಿಗಳಲ್ಲೇ ಬಿದ್ದರು.

ಪ್ರಜ್ಞಾಹೀನರಾದ ಜನರು ರಸ್ತೆಯಲ್ಲಿ ಬಿದ್ದಿರುವುದು, ಮಕ್ಕಳನ್ನು ಎತ್ತಿಕೊಂಡು ಹೋಗುತ್ತಿರುವ ಹೆತ್ತವರು, ಜನರನ್ನು ರಕ್ಷಿಸಲು ಬರುತ್ತಿರುವ ಸಾರ್ವಜನಿಕರು ಹೀಗೆ ದುರಂತದ ದೃಶ್ಯಗಳು ಭೀಕರ ಎನಿಸಿದವು. ಸ್ಟೈರೀನ್ ರಾಸಾಯನಿಕ ಸೋರಿಕೆಯಾದ ಪರಿಣಾಮ ದುರಂತ ಘಟಿಸಿದೆ ಎಂಬುದು ಪ್ರಾಥಮಿಕ ವರದಿಗಳಲ್ಲಿ ಸ್ಪಷ್ಟವಾಯಿತು.

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಿಯಾ ಕೆಮಿಕಲ್ ಪ್ಲ್ಯಾಂಟ್ ದಕ್ಷಿಣ ಕೊರಿಯಾದ ಎಲ್ಜಿ ಗ್ರೂಪ್ ಕಂಪನಿಯಾಗಿದ್ದು, ಇದರ ಕೇಂದ್ರ ಕಚೇರಿ ಮುಂಬೈನಲ್ಲಿ ಇದೆ ಎಂದು ವರದಿ ತಿಳಿಸಿದೆ.

೧೯೬೧ರಲ್ಲಿ ಹಿಂದೂಸ್ತಾನ್ ಪಾಲಿಮರ್ಸ್ ಕಂಪನಿ ಪಾಲಿಸ್ಟ್ರಿಯೆನ್ ತಯಾರಿಸುತ್ತಿತ್ತು. ಕಂಪನಿ ೧೯೭೮ರಲ್ಲಿ ಮೆಕ್ ಡೊವೆಲ್ ಮತ್ತು ಯುಬಿ ಗ್ರೂಪ್ ಜತೆ ವಿಲೀನವಾಗಿತ್ತು. ನಂತರ ದಕ್ಷಿಣ ಕೊರಿಯಾದ ಎಲ್ಜಿ ಕೆಮಿಕಲ್ ಭಾರತದಲ್ಲಿ ಮಾರುಕಟ್ಟೆಗಾಗಿ ಹುಡುಕಾಟ ನಡೆಸುತ್ತಿದ್ದಾಗ, ಯುಬಿ ಗ್ರೂಪ್ ಒಡೆತನದಲ್ಲಿದ್ದ ಹಿಂದೂಸ್ತಾನ್ ಪಾಲಿಮರ್ಸ್ ಘಟಕವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.
೧೯೯೭ರಲ್ಲಿ
ಎಲ್ಜಿ ಪಾಲಿಮರ್ಸ್ ಇಂಡಿಯಾ ಎಂಬುದಾಗಿ ಹೆಸರು ಬದಲಾಯಿಸಲಾಗಿತ್ತು.
ಎಲ್ಜಿ ಪಾಲಿಮರ್ಸ್ ಪಾಲಿಸ್ಟ್ರೀಯನ್ ಉತ್ಪಾದಿಸುವ ಪ್ರಮುಖ ಕಂಪನಿಯಾಗಿದೆ.

ಅನಿಲ ಸೋರಿಕೆಯಿಂದಾಗಿ ಆಸುಪಾಸಿನ ನಿವಾಸಿಗಳ ಸಾವು-ನೋವಿನ ಜೊತೆಗೆ ಘಟಕದಿಂದ ಸುಮಾರು ಮೂರು ಕಿಲೋ ಮೀಟರ್ ದೂರದವರೆಗೆ ಅನಿಲ ಹರಡಿ, ಅಲ್ಲಿನ ಹಲವು ಪ್ರಾಣಿ ಪಕ್ಷಿಗಳೂ ಸಾವನ್ನಪ್ಪಿವೆ ಎಂದು ವರದಿಗಳು ಹೇಳಿವೆ.

ಏನಿದು ಸ್ಟೈರಿನ್ ವಿಷಾನಿಲ?ಆಂಧ್ರಪ್ರದೇಶದ ವಿಶಾಖಪಟ್ಟಣದ ಎಲ್ಜಿ ಪಾಲಿಮರ್ಸ್ ಘಟಕದಲ್ಲಿ ಸೋರಿಕೆಯಾದ ಸ್ಟೈರಿನ್ ವಿಷಾನಿಲ ವಾಸ್ತವಾಗಿ ಏನು ಮತ್ತು ಇದನ್ನು ಯಾವುದಕ್ಕೆ ಬಳಸುತ್ತಾರೆ ಎಂಬುದು ಕುತೂಹಲಕಾರಿ ವಿಷಯ.
ಎಲ್ಜಿ ಪಾಲಿಮರ್ಸ್ ಕಾರ್ಖಾನೆಯಲ್ಲಿ ವಿದ್ಯುತ್ ಫ್ಯಾನ್ ಬ್ಲೇಡ್ಸ್, ಕಪ್ಸ್ ಹಾಗೂ ಮೇಕಪ್ ಗೆ ಬೇಕಾಗುವ ಉತ್ಪನ್ನಗಳನ್ನು ತಯಾರಿಸುತ್ತಾರೆ. ಉತ್ಪನ್ನ ತಯಾರಿಸಲು ಕಾರ್ಖಾನೆಯಲಿ ಸ್ಟೈರಿನ್ ಬಳಸುತ್ತಾರೆ. ಸ್ಟೈರಿನ್ ಸುಲಭವಾಗಿ ಹೊತ್ತಿ ಉರಿಯಬಲ್ಲ ರಾಸಾಯನಿಕವಾಗಿದ್ದು, ಬೆಂಕಿ ಹಿಡಿದ ನಂತರ ಅನಿಲ ಅಪಾಯಕಾರಿ ವಿಷಾನಿಲವಾಗುತ್ತದೆ ಎಂದು ವರದಿಯೊಂದು ವಿವರಿಸಿದೆ.

ಎಲ್ಜಿ ಪಾಲಿಮರ್ಸ್ ಘಟಕದಲ್ಲಿ ಪ್ಲಾಸ್ಟಿಕ್ ಮತ್ತು ರಬ್ಬರ್ ತಯಾರಿಸಲು ಸ್ಟೈರಿನ್ ಅನಿಲ ಬಳಸುತ್ತಾರೆ. ಫೈಬರ್ ಗ್ಲಾಸ್, ಪ್ಲಾಸ್ಟಿಕ್ ಕೊಳವೆ, ವಾಹನ ಭಾಗಗಳು, ಪ್ಲಾಸ್ಟಿಕ್ ಕುಡಿಯುವ ನೀರಿನ ಕಪ್ ಉತ್ಪಾದಿಸಲು ಸ್ಟೈರಿನ್ ಬಕೆಯಾಗುತ್ತದೆ. ಸ್ಟೈರಿನ್ ಬಣ್ಣರಹಿತವಾದ ದ್ರವ. ಇದು ಶೀಘ್ರವಾಗಿ ಆವಿಯಾಗುವ ಗುಣಹೊಂದಿದ್ದು, ಎಣ್ಣೆಯುಕ್ತ ದ್ರವರೂಪದಲ್ಲಿರುತ್ತದೆ.

ಸ್ಟೈರಿನ್ ಅನಿಲ ಎಷ್ಟು ಅಪಾಯಕಾರಿ?
ಸ್ಟೈರಿನ್ ಅನಿಲ ಮನುಷ್ಯ ಹಾಗೂ ಪ್ರಾಣಿಗಳ ಮೇಲೆ ತೀವ್ರ ತರದ ಪರಿಣಾಮ ಬೀರುತ್ತದೆ ಎಂದು ವರದಿ ಹೇಳುತ್ತದೆ. ಸ್ಟೈರಿನ್ ಅನಿಲದಿಂದ ಮನುಷ್ಯನ ಮೂತ್ರಪಿಂಡ, ಉಸಿರಾಟದ ಮೇಲೆ ಕೂಡಲೇ ದುಷ್ಪರಿಣಾಮಗಳಾಗುತ್ತವೆ. ತಲೆನೋವು, ನಿಶ್ಯಕ್ತಿ, ವಾಂತಿ ಆರಂಭಗೊಳ್ಳುತ್ತದೆ. ಅನಿಲದ ಸಂಪರ್ಕಕ್ಕೆ ಬಂದ ಕೂಡಲೇ ಮನುಷ್ಯ, ಪ್ರಾಣಿ, ಪಕ್ಷಿ, ಹಾವುಗಳು ಸಾಯುತ್ತದೆ. ಮನುಷ್ಯನ ಜಠರ, ಶ್ವಾಸಕೋಶದ, ತಲೆಕೂದಲು ಉದುರುವುದು, ಮಾನಸಿಕ ಒತ್ತಡ, ನರಮಂಡಲದ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ ಎಂದೂ ವರದಿ ವಿವರಿಸಿದೆ.

ಹಾಲು ಮತ್ತು ಬಾಳೆಹಣ್ಣು ಸೂತ್ರ
ಆಂಧ್ರಪ್ರದೇಶದ ವಿಶಾಖ ಪಟ್ಟಣದ ಎಲ್ಜಿ ಪಾಲಿಮರ್ಸ್ ರಾಸಾಯನಿಕ ಕಾರ್ಖಾನೆಯಲಿ ಸಂಭವಿಸಿದ ಸ್ಟೈರೀನ್ ವಿಷಾನಿಲದ ದುಷ್ಪರಿಣಾಮಗಳನ್ನು ತಡೆಯಲು ಅನುಸರಿಸಬೇಕಾದ ಮುಂಜಾಗರೂಕತಾ ಕ್ರಮಗಳನ್ನು ಆಂಧ್ರ ಪ್ರದೇಶ ಪೊಲೀಸರು ಪಟ್ಟಿ ಮಾಡಿದರು.
ಕಾರ್ಖಾನೆ ಇರುವ ವಿಶಾಖಪಟ್ಟಣದ ಆರ್ ಆರ್ ವೆಂಕಟಾಪುರಂ ಗ್ರಾಮದ ಅಸುಪಾಸಿನಲ್ಲಿ ಚರ್ಮದಲ್ಲಿ ತುರಿಕೆ ಕಂಡು ಬಂದರೆ ತತ್ ಕ್ಷಣ ಸಾಬೂನು ನೀರಿನಲ್ಲಿ ನಿಮ್ಮ ಚರ್ಮವನ್ನು ತೊಳೆರಿ, ಅನಿಲದ ದುಷ್ಪರಿಣಾಮಗಳನ್ನು ತಡೆಯಲು ಹಾಲು, ಬಾಳೆಹಣ್ಣು ಬೆಲ್ಲ ಸೇವಿಸಿ ಎಂದು ಆಂಧ್ರಪ್ರದೇಶದ ಪೊಲೀಸರು ಟ್ವೀಟ್ ಮಾಡಿದರು..

ಇದಕ್ಕೂ ಮುನ್ನ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕ ದಾಮೋದರ ಗೌತಮ್ ಸಾವಂಗ್ ಅವರು ಅನಿಲ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ತಡೆಗೆ ಇರುವ ಪ್ರತಿವಿಷ ಎಂದರೆ ಚೆನ್ನಾಗಿ ನೀರು ಕುಡಿಯುವುದು ಎಂದು ಹೇಳಿದ್ದರು.

ರಕ್ಷಣೆಯ ಸಲುವಾಗಿ ಮನೆಯೊಳಗಿದ್ದರು ಕೂಡಾ ಮುಖಗವಸುಗಳನ್ನು ಧರಿಸುವಂತೆಯೂ ಪೊಲೀಸರು ಆಸುಪಾಸಿನ ನಿವಾಸಿಗಳನ್ನು  ಒತ್ತಾಯಿಸಿದ್ದಾರೆ.

ಅಸ್ವಸ್ಥತೆ ಕಂಡು ಬಂದರೆ ತತ್ ಕ್ಷಣದ ನೆರವಿಗಾಗಿ ೧೦೮ ನಂಬರಿಗೆ ಕರೆ ಮಾಡುವಂತೆಯೂ ಅವರು ಸೂಚಿಸಿದ್ದಾರೆ.

No comments:

Advertisement