My Blog List

Tuesday, May 12, 2020

ವಿಶೇಷ ರೈಲುಗಳಿಗೆ ೪೫,೦೦೦ ಬುಕ್ಕಿಂಗ್

ವಿಶೇಷ ರೈಲುಗಳಿಗೆ ೪೫,೦೦೦ ಬುಕ್ಕಿಂಗ್
ನವದೆಹಲಿ: ಕೊರೋನಾ ವೈರಸ್ ತಡೆಯುವ ಸಲುವಾಗಿ ವಿಧಿಸಲಾಗಿದ್ದ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ವೇಳೆಯಲಿ ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡವರಿಗೆ ತಮ್ಮ ಹುಟ್ಟೂರುಗಳನ್ನು ತಲುಪಲು ಭಾರತೀಯ ರೈಲ್ವೇಯು ವಿಶೇಷ ರೈಲುಗಳ ಸಂಚಾರ ನಡೆಸುತ್ತಿದ್ದು, ಸುಮಾರು ೮೦,೦೦೦ ಪ್ರಯಾಣಿಕರು ಒಟ್ಟು ೧೬ ಕೋಟಿ ರೂಪಾಯಿ ಮೌಲ್ಯದ ಟಿಕೆಟುಗಳನ್ನು  ಬುಕ್ ಮಾಡಿದ್ದಾರೆ.

ಮೇ ೧೧ರ ಸೋಮವಾರ ಸಂಜೆ ೬ ಗಂಟೆಯಿಂದ ವಿಶೇಷ ರೈಲುಗಳ ಚಿಕೆಟ್ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿತ್ತು.

ನವದೆಹಲಿ ರೈಲ್ವೆ ನಿಲ್ದಾಣದಿಂದ ಮಂಗಳವಾರ ಮೊದಲ ವಿಶೇಷ ರೈಲು ಮಧ್ಯ ಪ್ರದೇಶದ ಬಿಲಾಸ್ಪುರದತ್ತ ಚಲಿಸುವುದು ಎಂದು ರೈಲ್ವೇ ಮೂಲಗಳು ಹೇಳಿದವು.

ಮುಂದಿನ ಏಳು ದಿನಗವರೆಗಿನ ವಿಶೇಷ ರೈಲುಗಳಿಗೆ ೧೬.೧೫ ಕೋಟಿ ರೂಪಾಯಿ ಮೌಲ್ಯದ ೪೫,೫೩೩ ಬುಕ್ಕಿಂಗ್ ಗಳು (ಪಿಎನ್‌ಆರ್) ದಾಖಲಾಗಿವೆ. ಈ ಬುಕ್ಕಿಂಗ್‌ಗಳ ಮೂಲಕ ೮೨,೩೧೭ ಪ್ರಯಾಣಿಕರು ಪ್ರಯಾಣ ಬೆಳೆಸಲಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿತು.

ಭಾರತೀಯ ರೈಲ್ವೇಯು ಸೋಮವಾರ ೧೫ ವಿಶೇಷ ರೈಲುಗಳ ಸಂಚಾರಕ್ಕೆ ಮಾರ್ಗಸೂಚಿ ಹೊರಡಿಸಿತ್ತು.  ವಿಶೇಷ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ  ಸ್ವತಃ ಊಟ, ತಿಂಡಿ ಹಾಗೂ ಹೊದಿಕೆ ತೆಗೆದುಕೊಂಡು ಬರುವಂತೆ ಸೂಚಿಸಲಾಗಿದೆ.

ರೈಲು ಹೊರಡುವ ಸಮಯಕ್ಕಿಂತ ಕನಿಷ್ಠ ೯೦ ನಿಮಿಷ ಮುಂಚಿತವಾಗಿ ರೈಲ್ವೆ ನಿಲ್ದಾಣ ತಲುಪುವಂತೆ ತಿಳಿಸಲಾಗಿದೆ.

ಪ್ರಯಾಣಿಕರು ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಷನ್ ಅಳವಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಮಂಗಳವಾರ ಭಾರತೀಯ ರೈಲ್ವೆಯ ೮ ರೈಲುಗಳು ಸಂಚರಿಸುತ್ತಿವೆ. ನವದೆಹಲಿಯಿಂದ ಮೂರು ರೈಲುಗಳು ಬೆಂಗಳೂರು, ಬಿಲಾಸ್ಪುರ್ ಹಾಗೂ ಡಿಬ್ರುಗಢ ತಲುಪಲಿವೆ. ಬೆಂಗಳೂರು, ಹೌರಾ, ರಾಜೇಂದ್ರ ನಗರ್ (ಪಟ್ನಾ), ಮುಂಬೈ ಸೆಂಟ್ರಲ್ ಹಾಗೂ ಅಹಮದಾಬಾದಿನಿಂದ ತಲಾ ಒಂದು ರೈಲು ದೆಹಲಿ ತಲುಪಲಿದೆ. ಈ ಎಲ್ಲ ವಿಶೇಷ ರೈಲುಗಳು ಹವಾನಿಯಂತ್ರಿತ ಬೋಗಿಗಳನ್ನು ಮಾತ್ರ ಹೊಂದಿವೆ.

ದಿಗ್ಬಂಧನ ಅವಧಿಯಲ್ಲಿ ರೈಲುಗಳು ಸಂಚರಿಸುತ್ತಿರುವುದರಿಂದ ಇ-ಟಿಕೆಟ್ ಖಚಿತಗೊಂಡಿರುವವರಿಗೆ ಮಾತ್ರ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪ್ರಯಾಣಿಕರು ಮುಂದಿನ ಏಳು ದಿನಗಳ ವರೆಗಿನ ರೈಲುಗಳಲ್ಲಿ ಸಂಚರಿಸಲು ಬುಕ್ಕಿಂಗ್ ಮಾಡಬಹುದು ಹಾಗೂ ವಿಶೇಷ ರೈಲ್ವೆ ಟಿಕೆಟ್ ದರ ರಾಜಧಾನಿ ರೈಲುಗಳ ದರಕ್ಕೆ ಸಮವಾಗಿರುತ್ತದೆ. ಆರ್‌ಎಸಿ, ವೇಯ್ಟ್ ಲಿಸ್ಟ್ ಟಿಕೆಟ್ ಹೊಂದಿದ್ದರೆ ಪ್ರಯಾಣಿಸಲು ಅವಕಾಶವಿಲ್ಲ ಹಾಗೂ ಟಿಸಿ ಸಿಬ್ಬಂದಿ ಟಿಕೆಟ್ ನೀಡಲು ಅನುಮತಿ ಇರುವುದಿಲ್ಲ ಎಂದು ರೈಲ್ವೆ ಇಲಾಖೆ ಹೇಳಿದೆ.

ದೇಶದಾದ್ಯಂತ ದಿಗ್ಬಂಧನ ಹೇರಿದಂದಿನಿಂದ ಪ್ರಯಾಣಿಕ ರೈಲು ಸೇವೆ ನಿಲ್ಲಿಸಲಾಗಿತ್ತು.

No comments:

Advertisement