My Blog List

Tuesday, May 12, 2020

ದೇಶೀ ವಿಮಾನ ಹಾರಾಟ: ಸರ್ಕಾರದ ಹೊಸ ಕರಡು ಮಾರ್ಗಸೂಚಿ

ದೇಶೀ ವಿಮಾನ ಹಾರಾಟ:  ಸರ್ಕಾರದ ಹೊಸ ಕರಡು ಮಾರ್ಗಸೂಚಿ
ನವದೆಹಲಿ: ಕೋವಿಡ್ -೧೯ ಹರಡುವಿಕೆಯನ್ನು ತಡೆಯುವ ಸಲುವಾಗಿ ಮಾರ್ಚ್ ೨೫ರಂದು ಸ್ಥಗಿತಗೊಳಿಸಲಾಗಿರು ದೇಶೀಯ ವಿಮಾನ ಸೇವೆ ಪುನಾರಂಭವಾದ ಬಳಿಕ ಕ್ಯಾಬಿನ್ ಲಗ್ಗೇಜುಗಳಿಗೆ ಅವಕಾಶ ಇರುವುದಿಲ್ಲ ಮತ್ತು ೮೦ ವರ್ಷ ಮೇಲ್ಪಟ್ಟವರಿಗೆ ವಿಮಾನಯಾನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ವಾಣಿಜ್ಯ ವಿಮಾನಯಾನ ಪುನಾರಂಭದ ಮೊದಲ ಹಂತಕ್ಕಾಗಿ ಸರ್ಕಾರವು ಸಿದ್ಧಪಡಿಸಿರುವ ಕರಡು ಮಾರ್ಗಸೂಚಿ ಹೇಳಿದೆ.

ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣಿಕರು, ಏರ್ ಲೈನ್ಸ್  ಮತ್ತು ವಿಮಾನ ನಿಲ್ದಾಣ ಆಪರೇಟರುಗಳಿಗಾಗಿ 2020 ಮೇ 11ರ ಸೋಮವಾರ ಸಭೆಯೊಂದರಲ್ಲಿ ಸಿದ್ಧ ಪಡಿಸಿರುವ ಕಾರ್ಯಾಚರಣಾ ವಿಧಾನಗಳ ಕರಡಿನಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ. ಸಾಮಾಜಿಕ ಅಂತರ ನಿಯಮ ಪಾಲನೆ ಸಲುವಾಗಿ ಮಧ್ಯದ ಆಸನಗಳನ್ನು ಖಾಲಿ ಬಿqಲು ನಿಯಮಾವಳಿ ಸೂಚಿಸಿದೆ.

ಟರ್ಮಿನಲ್ ಗೇಟುಗಳಲ್ಲಿ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಪ್ರಯಾಣಿಕರ ಗುರುತು ತಪಾಸಣೆಯ ಅಗತ್ಯವನ್ನು ಕೈಬಿಡಲಾಗಿದೆ.

ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ಆಪರೇಟರುಗಳು ಸೇರಿದಂತೆ ವಿಮಾನಯಾನ ವ್ಯವಹಾರದ ಪಾಲುದಾರರಿಗೆ ಕರಡನ್ನು ಪರಿಶೀಲಿಸಲು ಸೂಚಿಸಲಾಗಿದ್ದು, ವಾರಾಂತ್ಯದ ಒಳಗಾಗಿ ಹಿಮ್ಮಾಹಿತಿ ನೀಡಲು  2020 ಮೇ 12ರ ಮಂಗಳವಾರ ತಿಳಿಸಲಾಗಿದೆ.

ಎಲ್ಲ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಮನೆಯಲ್ಲೇ ವೆಬ್ ಚೆಕ್-ಇನ್ ಪೂರ್ಣಗೊಳಿಸಿದ ಬಳಿಕವೇ ಬರುವುದನ್ನು ನಿಯಮಾವಳಿ ಕಡ್ಡಾಯಗೊಳಿಸಿದೆ. ವಿಮಾನ ನಿಲ್ದಾಣದಲ್ಲಿ ಹಾಜರಾತಿ ಅವಧಿಯನ್ನು ಎರಡು ಗಂಟೆಗಳಷ್ಟು ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ. ಮುಂದಿನ ಆರು ಗಂಟೆಯಲ್ಲಿ ಪ್ರಯಾಣ ಮಾಡಲಿರುವ ವಿಮಾನದ ಪ್ರಯಾಣಿಕರಿಗೆ ಮಾತ್ರವೇ ವಿಮಾನ ನಿಲ್ದಾಣದ ಒಳಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು ಎಂದು ನಿಯಮಾವಳಿ ಹೇಳಿದೆ.

ವಿಮಾನಯಾನ ಪುನಾರಂಭದ ಮೊದಲ ಹಂತದಲ್ಲಿ ಕ್ಯಾಬಿನ್ ಲಗ್ಗೇಜ್‌ಗೆ ಅನುಮತಿ ಇಲ್ಲ, ಪ್ರಯಾಣಿಕರಿಗೆ ತಮ್ಮ ಜೊತೆಗೆ ೨೦ ಕಿ.ಗ್ರಾಂ ತೂಕಕ್ಕಿಂತ ಕಡಿಮೆ ತೂಕದ ಚೆಕ್-ಇನ್-ಬ್ಯಾಗ್ಗೇಜಿಗೆ ಮಾತ್ರ ಅವಕಾಶ ಇರುತ್ತದೆ. ೮೦ ವರ್ಷ ಮೀರಿದವರಿಗೆ ವಿಮಾನಯಾನದ ಅವಕಾಶ ಇರುವುದಿಲ್ಲ.
ವಯಸ್ಸಿನ ಕಾರಣದಿಂದ ವಿಮಾನ ಏರಲಾಗದವರು ಅಥವಾ ಅತಿಯಾಗಿ ಮೈ ಬಿಸಿ ಇದ್ದ ಕಾರಣಕ್ಕಾಗಿ ವಿಮಾನವೇರಲು ಅನುಮತಿ ಸಿಗದವರು ಯಾವುದೇ ದಂಡ ರಹಿತವಾಗಿ ಬೇರೆ ದಿನಾಂಕಕ್ಕೆ ಪ್ರಯಾಣ ಬದಲಿಸಲು ಅನುಮತಿ ನೀಡಲಾಗುವುದು.

ಎಲ್ಲ ಪ್ರಯಾಣಿಕರಿಗೂ ಆರೋಗ್ಯ ಸೇತು ಆಪ್ ಅಳವಡಿಸಿಕೊಳ್ಳುವುದು ಕಡ್ಡಾಯ. ’ಹಸಿರು ಸ್ಥಾನಮಾನ ಉಳ್ಳವರಿಗೆ ಮಾತ್ರ ವಿಮಾನ ನಿಲ್ದಾಣ ಪ್ರವೇಶಕ್ಕೆ ಅವಕಾಶ ನೀಡಲಾಗುವುದು.
ವಿಮಾನ ಹೊರಡುವುದಕ್ಕೆ ಮೂರು ಗಂಟೆ ಮುಂಚಿತವಾಗಿಯೇ ಚೆಕ್ -ಇನ್ ಕೌಂಟರುಗಳನ್ನು ತೆರೆಯುವಂತೆ ಮತ್ತು ವಿಮಾನ ಹೊರಡುವುದಕ್ಕೆ ೬೦-೭೫ ನಿಮಿಷ ಮುಂಚಿತವಾಗಿಯೇ ಅವುಗಳನ್ನು ಮುಚ್ಚುವಂತೆ ಏರ್ ಲೈನ್ಸ್ ಗಳಿಗೆ ಸೂಚಿಸಲಾಗಿದೆ. ವಿಮಾನ ಹೊರಡುವ ಸಮಯಕಿಂತ ಒಂದು ಗಂಟೆ ಮುಂಚಿತವಾಗಿ ವಿಮಾನಕ್ಕೆ ಏರಲು ಅವಕಾಶ ನೀಡಲಾಗುವುದು ಮತ್ತು ವಿಮಾನ ಹೊರಡುವುದಕ್ಕೆ ೨೦ ನಿಮಿಷ ಮುಂಚಿತವಾಗಿ ವಿಮಾನದ ದ್ವಾರಗಳನ್ನು ಮುಚ್ಚಲಾಗುವುದು.

ಪ್ರಯಾಣಿಕರನ್ನು ಶೋಧಿಸುವ ಪ್ರಸಂಗಗಳನ್ನು ಕನಿಷ್ಠಗೊಳಿಸಬೇಕು ಮತ್ತು ದ್ವಾರದಲ್ಲಿ ಅಳವಡಿಸಲಾದ ಲೋಹಶೋಧಕವು ಸ್ವರ ಹೊರಡಿಸಿದರೆ ಮಾತ್ರವೇ ಶೋಧ ಕಾರ್‍ಯಾಚರಣೆ ನಡೆಸಬೇಕು ಎಂದು ಕರಡು ನಿಯಮಾವಳಿ ಹೇಳಿದೆ. ಈ ಹಂತದಲ್ಲಿ ಪ್ರಯಾಣಿಕರ ಬೋರ್ಡಿಂಗ್ ಪಾಸಿಗೆ ಮೊಹರು ಹಾಕದಂತ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ (ಸಿಐಎಸ್ ಎಫ್) ಕರಡು ನಿಯಮಾವಳಿ ಸೂಚಿಸಿದೆ.

ವಿಮಾನಯಾನ ಸಂಸ್ಥೆಗೆ ದೇಹದ ಎರಡನೇ ತಾಪಮಾನ ಪರೀಕ್ಷೆಯನ್ನು ಪ್ರಯಾಣಿಕರು ವಿಮಾನ ಏರಲು ದ್ವಾರದ ಬಳಿಗೆ ಬರುವ ಹಂತದಲ್ಲೇ ನಡೆಸಲು ಸೂಚಿಸಲಾಗಿದೆ.

ಸೋಂಕು ಹರಡುವಿಕೆಯ ಅಪಾಯವನ್ನು ಕನಿಷ್ಠಗೊಳಿಸುವ ಸಲುವಾಗಿ ವಿಮಾನದಲ್ಲಿ ಇರುವ ಸಿಬ್ಬಂದಿಯನ್ನು ಪಾಳಿಗೆ ಹಚ್ಚಬೇಕು ಎಂದೂ ಕರಡು ನಿಯಮಾವಳಿ ಹೇಳಿದೆ.

ವಿಮಾನದಲ್ಲಿ ಪ್ರಯಾಣಿಕರಿಗೆ ಊಟ ನೀಡಲಾಗುವುದಿಲ್ಲ. ಕಪ್ ಮತ್ತು ಬಾಟಲಿಗಳಲ್ಲಿ ನೀರು ಮಾತ್ರ ಲಭ್ಯವಿರುತ್ತದೆ.

ವಿಮಾನದ ಕೊನೆಯ ಮೂರು ಸಾಲುಗಳನ್ನು  ಯಾರಾದರೂ ಪ್ರಯಾಣಿಕರಲ್ಲಿ ಅಸ್ವಸ್ಥತೆ ಕಾಡಿದರೆ ಪ್ರತ್ಯೇಕವಾಗಿ ಇರಿಸುವ ಸಲುವಾಗಿ ಖಾಲಿ ಇರಿಸಲಾಗುವುದು. ಇಂತಹ ಪ್ರಕರಣಗಳನ್ನು ನಿಭಾಯಿಸುವ ಸಿಬ್ಬಂದಿ ವೈಯಕ್ತಿ ರಕ್ಷಣಾ ಸಲಕರಣೆಯನ್ನು (ಪಿಪಿಇ) ಧರಿಸಿರಬೇಕು. ಹಚ್ಚು ಪ್ರಕರಣಗಳನ್ನು ನಿಭಾಯಿಸಲೂ ಸಾಧ್ಯವಾಗುವಂತೆ ಸಾಕಷ್ಟು ಪ್ರಮಾಣದಲ್ಲಿ ಪಿಪಿಇಗಳನ್ನು ವಿಮಾನದಲ್ಲಿ ಇರಿಸಿರಬೇಕು ಎಂದು ಕರಡು ನಿಯಮಾವಳಿ ಹೇಳಿದೆ.

No comments:

Advertisement