My Blog List

Monday, May 11, 2020

ಇಂದಿನಿಂದ ಹಲವಡೆಗಳಿಗೆ ರೈಲು ಸಂಚಾರ ಪುನಾರಂಭ

ಇಂದಿನಿಂದ ಹಲವಡೆಗಳಿಗೆ ರೈಲು ಸಂಚಾರ ಪುನಾರಂಭ
ನವದೆಹಲಿ: ಕೊರೋನಾವೈರಸ್ ಪ್ರಸರಣ ತಡೆಯುವ ಸಲುವಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸಂಚಾರವನ್ನು   ಭಾರತೀಯ ರೈಲ್ವೆಯು ಒಂದೂವರೆ ತಿಂಗಳ ಬಳಿಕ  2020 ಮೇ ೧೨ರ ಮಂಗಳವಾರ ಪುನಾರಂಭ ಮಾಡಲಿದೆ. ಮೇ ೧೭ರಂದು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಅಂತ್ಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ರೈಲು ಸೇವೆ ಪುನಾರಂಭಕ್ಕೆ ರೈಲ್ವೇ ಇಲಾಖೆ ನಿರ್ಧರಿಸಿತು.
ಕೊರೋನಾವೈರಸ್ ಸೋಂಕು ಪ್ರಸರಣ ತಡೆಯುವ ಸಲುವಾಗಿ ಮಾರ್ಚ್ ಮಾಸಾಂತ್ಯದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನ ಘೋಷಿಸಲಾಗಿತ್ತು. ಮಾರ್ಚ್ ೨೨ರಿಂದ ಎಲ್ಲಾ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ಮಂಗಳವಾರದಿಂದ ಪ್ರತಿದಿನ ೧೫ ರೈಲುಗಳು ಸಂಚಾರ ನಡೆಸಲಿವೆ. ವಿಶೇಷ ರೈಲುಗಳು ನವದೆಹಲಿಯಿಂದ ದಿಬ್ರುಗಢ, ಅಗರ್ತಲ, ಹೌರಾ, ಪಾಟ್ನಾ, ಬಿಲಾಸಪುರ, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು-ತಾವಿಗೆ  ಸಂಚರಿಸಲಿದೆ. ರೈಲುಗಳು ಕೆಲವು ಕಡೆ ಮಾತ್ರ ನಿಲುಗಡೆಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.

ವಾರದಲ್ಲಿ ಹವಾನಿಯಂತ್ರಿತ ರೈಲು ಸೇವೆ ಆರಂಭವಾಗಲಿದೆ. ಟಿಕೆಟ್ ದರ ರಾಜಧಾನಿ ಎಕ್ಸ್ ಪ್ರೆಸ್ ದರಕ್ಕೆ ಸಮಾನಾಂತರವಾಗಿರಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. ಸೋಮವಾರ ಸಂಜೆ ೪ಗಂಟೆಯಿಂದ ರೈಲ್ವೆ ಟಿಕೆಟ್ ಬುಕ್ಕಿಂಗ್ ಆರಂಭ ಎಂದು ವರದಿ ಹೇಳಿತು.

ಪ್ರಯಾಣಿಕರು ಐಆರ್ಸಿಟಿಸಿ ವೆಬ್ ಸೈಟ್ ಅಥವಾ ಐಆರ್ಸಿಟಿಸಿ ಮೊಬೈಲ್ ಆಪ್ ಮೂಲಕ ಮಾತ್ರ ಟಿಕೆಟ್ ಖರೀದಿಸಬೇಕು. ರೈಲ್ವೆ ನಿಲ್ದಾಣಗಳಲ್ಲಿನ ಟಿಕೆಟ್ ಬುಕ್ಕಿಂಗ್ ಕೌಂಟರ್ ಬಂದ್ ಮುಂದುವರೆದಿದೆ. ಅಲ್ಲದೇ ತತ್ಕಾಲ್ ಮತ್ತು ಪ್ರೀಮಿಯಂ ತತ್ಕಾಲ್ ಟಿಕೆಟ್ ಬುಕ್ ಮಾಡುವ ಅವಕಾಶ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಟಿಕೆಟ್ ಕನ್ ಫರ್ಮ್ ಆದ ಪ್ರಯಾಣಿಕರನ್ನು ಮಾತ್ರ ರೈಲ್ವೆ ನಿಲ್ದಾಣದೊಳಕ್ಕೆ ಬಿಡಲಾಗುವುದು. ಫ್ಲ್ಯಾಟ್ ಫಾರಂ ಟಿಕೆಟ್ ಕೊಡುವುದಿಲ್ಲ. ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಮುಖಗವಸು (ಮಾಸ್ಕ್) ಧರಿಸಬೇಕು, ನಿಲ್ದಾಣದಲ್ಲಿ ಟೆಂಪರೇಚರ್ ಸ್ಕ್ರೀನಿಂಗ್ ಕಡ್ಡಾಯ. ರೈಲ್ವೆ ನಿಲ್ದಾಣಕ್ಕೆ ಒಂದು ಗಂಟೆ ಮುನ್ನ ಆಗಮಿಸಬೇಕು ಎಂದು ಅಧಿಕಾರಿಗಳು ವಿವರಿಸಿದರು.

ಇತರ ಹೊಸ ಮಾರ್ಗಗಳಲ್ಲಿಯೂ ವಿಶೇಷ ರೈಲು ಸಂಚಾರ ಕೂಡಲೇ ಆರಂಭಿಸಲಾಗುವುದು. ಕೋವಿಡ್ ೧೯ ಕೇರ್ ಸೆಂಟರಿಗಾಗಿ ೨೦ ಸಾವಿರ ಬೋಗಿಗಳನ್ನು ಬಳಸಿಕೊಳ್ಳಲಾಗಿದೆ. ಹಿನ್ನೆಲೆಯಲ್ಲಿ ಪ್ರತಿದಿನ ೩೦೦ ರೈಲುಗಳು ಮಾತ್ರ ಕಾರ್ಯಾಚರಿಸಲು ಸಾಧ್ಯತೆ ಇದೆ ಎಂದು ವರದಿ ತಿಳಿಸಿತು.

No comments:

Advertisement