Saturday, May 16, 2020

ಭಾರತೀಯ ರೈಲ್ವೇ ಸೇವೆ: ೧೪ ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ಹುಟ್ಟೂರಿಗೆ

ಭಾರತೀಯ ರೈಲ್ವೇ ಸೇವೆ: ೧೪ ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರು ಹುಟ್ಟೂರಿಗೆ
ನವದೆಹಲಿ: ಒಂದು ಸಾವಿರಕ್ಕೂ ಹೆಚ್ಚು ಶ್ರಮಿಕ ವಿಶೇಷ ರೈಲುಗಳನ್ನು ಮೇ ೧೫ರ ನಡುರಾತ್ರಿಯವರೆಗೆ ಓಡಿಸುವ ಮೂಲಕ ಭಾರತೀಯ ರೈಲ್ವೇ ಸಚಿವಾಲಯವು ದೇಶದ ವಿವಿಧ ಕಡೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು ೧೪ ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಮುಟ್ಟಿಸಿದೆ ಎಂದು ಸಚಿವಾಲಯದ ಹೇಳಿಕೆ ಅವರು  2020 ಮೇ 16ರ ಶನಿವಾರ ತಿಳಿಸಿತು.
ಮೇ ೧೫ರ ಮಧ್ಯರಾತ್ರಿಯವರೆಗೆ ೧೦೭೪ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಲಾಗಿದೆ ಎಂದು ಸಚಿವಾಲಯ ಹೇಳಿತು.
ಕಳೆದ ಮೂರು ದಿನಗಳ ಅವಧಿಯಲ್ಲಿ ಪ್ರತಿದಿನ ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳನ್ನು ಒಯ್ಯಲಾಗಿದೆ ಎಂದು ಹೇಳಿಕೆ ತಿಳಿಸಿತು..

ಕೊರೋನಾವೈರಸ್ ದಿಗ್ಬಂಧನ (ಲಾಕ್ ಡೌನ್) ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಒಯ್ಯುವ ಸಲುವಾಗಿ ಸರ್ಕಾರವು ಶ್ರಮಿಕ ರೈಲುಗಳನ್ನು ಓಡಿಸುವ ಕಾರ್ಯವನ್ನು ತಿಂಗಳ ಆರಂಭದಲ್ಲಿ ಶುರು ಮಾಡಿತ್ತು.

ಮೇ ೧೨ರಿಂದ ೧೫ ಅಂತರರಾಜ್ಯ ಪ್ಯಾಸೆಂಜರ್ ರೈಲು ಸೇವೆಯನ್ನೂ ಸಚಿವಾಲಯ ಆರಂಭಿಸಿತ್ತು. ರಾಷ್ಟ್ರದ ರಾಜಧಾನಿಯಿಂದ ಹೊರಡುವ ರೈಲುಗಳು ದೇಶಾದ್ಯಂತ ವಿವಿಧ ನಗರಗಳನ್ನು ಸಂಪರ್ಕಿಸಿದ್ದವು.

ಸಚಿವಾಲಯವು ವಾರದ ಆದಿಯಲ್ಲಿ, ಕೋವಿಡ್ -೧೯ ದಿಗ್ಬಂಧನಕ್ಕೆ ಮುಂಚಿತವಾಗಿ ೨೦೨೦ರ ಜೂನ್ ೩೦ರವರೆಗಿನ ಅವಧಿಯಲ್ಲಿ ಪಯಣಿಸುವ ಸಲುವಾಗಿ ಬುಕ್ ಮಾಡಲಾಗಿದ್ದ ಎಲ್ಲ ರೈಲು ಟಿಕೆಟ್ಗಳ ರದ್ದು ಸೇರಿದಂತೆ ಹಲವು ಪ್ರಕಟಣೆಗಳನ್ನು ಮಾಡಿತ್ತು. ರದ್ದು ಪಡಿಸಿದ ಟಿಕೆಟ್ಗಳ ಪೂರ್ಣ ಹಣವನ್ನು ಗ್ರಾಹಕರಿಗೆ ಮರುಪಾವತಿ ಮಾಡಲಾಗುವುದು ಎಂದೂ ರೈಲ್ವೇ ಸಚಿವಾಲಯ ತಿಳಿಸಿತ್ತು. ಆದಾಗ್ಯೂ, ವಿಶೇಷ ರೈಲುಗಳಿಗೆ ಟಿಕೆಟ್ ರದ್ಧತಿ ಅನ್ವಯಿಸುವುದಿಲ್ಲ ಎಂದು ಸಚಿವಾಲಯ ಹೇಳಿತ್ತು.

ಮೇ ೧೩ರಿಂದ ಐಆರ್ಸಿಟಿಸಿಯು ಟಿಕೆಟ್ ಬುಕಿಂಗ್ ಮಾಡುವ ಪ್ರಯಾಣಿಕರಿಂದ ಅವರು ತೆರಳುವ ಸ್ಥಳಗಳ (ಗಮ್ಯ ಸ್ಥಳ) ವಿಳಾಸಗಳನ್ನೂ ಪಡೆದುಕೊಳ್ಳಲು ಆರಂಭಿಸಿತ್ತು.  ಕೋವಿಡ್-೧೯ ಹಿನ್ನೆಲೆಯಲ್ಲಿ ಸಂಪರ್ಕ ಪತ್ತೆಗೆ ಇದು ಅನುಕೂಲವಾಗುತ್ತದೆ ಎಂದು ರೈಲ್ವೇ ಹೇಳಿತು.

ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾವೈರಸ್ ಪ್ರಸರಣ ಸರಪಳಿ ತುಂಡರಿಸುವ ಸಲುವಾಗಿ ರಾಷ್ಟ್ರವ್ಯಾಪಿ ಕೊರೋನಾವೈರಸ್ ದಿಗ್ಬಂಧನ ಘೋಷಿಸಿದ ಬಳಿಕ ಎಲ್ಲ ರೈಲುಗಳ ಓಡಾಟವನ್ನು ಅಮಾನತುಗೊಳಿಸಲಾಗಿತ್ತು. ಗೂಡ್ಸ್ ರೈಲು ಮತ್ತು ಅಗತ್ಯ ವಸ್ತುಗಳಿಗಾಗಿ ಮಾತ್ರ ರೈಲುಗಳ ಓಡಾಟವನ್ನು ರೈಲ್ವೇಯು ಮುಂದುವರೆಸಿತ್ತು.

No comments:

Advertisement