My Blog List

Saturday, June 13, 2020

ವಿವಾದಿತ ನಕ್ಷೆಗೆ ನೇಪಾಳ ಸಂಸತ್ ಅಸ್ತು: ಮಾತುಕತೆಯ ಬಾಗಿಲು ಬಂದ್

ವಿವಾದಿತ ನಕ್ಷೆಗೆ ನೇಪಾಳ ಸಂಸತ್ ಅಸ್ತು: ಮಾತುಕತೆಯ ಬಾಗಿಲು ಬಂದ್

ಕಠ್ಮಂಡು: ತನ್ನ ರಾಷ್ಟ್ರೀಯ ಲಾಂಛನದಲ್ಲಿ ಹೊಸ ನಕ್ಷೆಯನ್ನು ಪ್ರತಿಬಿಂಬಿಸುವ ಸಂವಿಧಾನ ತಿದ್ದುಪಡಿ ಮಸೂದೆಗೆ ನೇಪಾಳದ ಕೆಳಮನೆಯು 2020 ಜೂನ್ 13ರ ಶನಿವಾರ ತನ್ನ ಸರ್ವಾನುಮತದ ಅಂಗೀಕಾರ ಮುದ್ರೆಯನ್ನು ಒತ್ತಿತು. ತನ್ಮೂಲಕ ಭಾರತದೊಂದಿಗೆ ಮಾತುಕತೆಯ ಬಾಗಿಲನ್ನು ಮುಚ್ಚಿದ ನೇಪಾಳವು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಗಡಿರೇಖೆ ಕಿರಿಕಿರಿಯನ್ನು  ಶಾಶ್ವತವಾಗಿ ಕೆರಳುವಂತೆ ಮಾಡಿತು.

ಸದನದಲ್ಲಿ ಹಾಜರಿದ್ದ ಎಲ್ಲ ೨೫೮ ಸದಸ್ಯರೂ ಸಂವಿಧಾನ ತಿದ್ದುಪಡಿ ಮಸೂದೆಯ ಪರವಾಗಿ ಮತದಾನ ಮಾಡಿದರು.

ಕೋವಿಡ್ -೧೯ ಸಾಂಕ್ರಾಮಿಕವನ್ನು ನಿಭಾಯಿಸುತ್ತಿರುವ ಸರ್ಕಾರದ ಕಳಪೆ ಕ್ರಮವನ್ನು ಪ್ರತಿಭಟಿಸಿ ರಾಜಧಾನಿ ಕಠ್ಮಂಡುವಿನ ಬೀದಿ ಬೀದಿಗಳಲ್ಲಿ ಸಹಸ್ರಾರು ಪ್ರತಿಭಟನಕಾರರು ಪ್ರದರ್ಶನಗಳನ್ನು ನಡೆಸುತ್ತಿದ್ದ ವೇಳೆಯಲ್ಲಿಯೇ, ಮಸೂದೆಗೆ ಸದನವು ಒಪ್ಪಿಗೆ ನೀಡುವುದರೊಂದಿಗೆ ಪ್ರಧಾನಿ ಕೆಪಿ ಶರ್ಮ ಒಲಿ ಅವರ ನಿಲುವಿಗೆ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಒಳಗೆ ಮತ್ತು ಹೊರಗೆ ಬಲ ಬಂದಂತಾಯಿತು.

ನೇಪಾಳದ ಸಂಸತ್ತು ವಿಶೇಷ ಸಮಾವೇಶದಲ್ಲಿ ಭಾರತದ ಭಾಗಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿರುವ ಪರಿಷ್ಕೃತ ಭೂಪಟಕ್ಕೆ ಒಪ್ಪಿಗೆ ನೀಡಿದ್ದಕ್ಕೆ ಭಾರತ ಈವರೆಗೂ ಯಾವುದೇ ಔಪಚಾರಿಕ ಪ್ರತಿಕ್ರಿಯೆ ನೀಡಿಲ್ಲ. ಆದರೆ ನವದೆಹಲಿಯಲ್ಲಿ ಭಾರತೀಯ ಅಧಿಕಾರಿಯೊಬ್ಬರು ನೇಪಾಳವು ಗಡಿ ವಿವಾದ ಹುಟ್ಟುಹಾಕುತ್ತಿರುವುದನ್ನು ನವದೆಹಲಿಯು ಗಮನಕ್ಕೆ ತೆಗೆದುಕೊಂಡಿದೆ ಮತ್ತು ಭಾರತದ ವಿರುದ್ಧ ಭಾವನೆಗಳನ್ನು ಬಡಿದೆಬ್ಬಿಸುವ ಪ್ರಯತ್ನಗಳ ಬಗ್ಗೆ ಭ್ರಮ ನಿರಸನಗೊಂಡಿದೆ ಎಂಬ ಸುಳಿವು ನೀಡಿದರು.

ಮತದಾನಕ್ಕೆ ಮುನ್ನ ಪ್ರತಿನಿಧಿಗಳ ಸದನದಲ್ಲಿ ನಡೆದ ನಾಲ್ಕು ಗಂಟೆಗಳ ಚರ್ಚೆಯಲ್ಲಿ ಹಲವಾರು ಶಾಸನಕರ್ತರು ಪ್ರಧಾನಿ ಒಲಿ ಅವರ ಬಳಿ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಾಧುರ ಮೇಲಿನ ಭಾರತದ ನಿಯಂತ್ರಣಯನ್ನು ಮರುಪಡೆಯಲು ಕೈಗೊಳ್ಳಲಾಗುವ ಮುಂದಿನ ಕ್ರಮಗಳನ್ನು ತಿಳಿಸುವಂತೆ ಕೇಳಿದರು.

ಕಮೂನಿಸ್ಟ್ ಪಾರ್ಟಿ ಆಫ್ ನೇಪಾಳದ (ಮಾವೋವಾದಿ) ಇತರ ಕೆಲವರು ಕೋವಿಡ್-೧೯ರ ಹಿನ್ನೆಲೆಯಲ್ಲಿ ಜನರ ಚಲನವಲನಗಳ ಮೇಲೆ ವಿಧಿಸಲಾಗಿರುವ ಗಡಿ ನಿರ್ಬಂಧಗಳನ್ನು ಮುಂದುವರೆಸಲು ಒಲವು ತೋರಿದರು ಎಂದು ಸ್ಥಳೀಯ ಇಕಾಂತಿಪುರ ಮಾಧ್ಯಮ ವೆಬ್ ಸೈಟ್ ವರದಿ ಮಾಡಿದೆ.

ಕಳೆದ ತಿಂಗಳು ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ್ದ ಒಲಿ ಸರ್ಕಾರವು ಭಾರv ಜೊತೆಗೆ ಮಾತುಕತೆಯ ಮೂಲಕ ಭೂಮಿಯನ್ನು ಮರಳಿ ಪಡೆಯಲಾಗುವುದು ಎಂದು ಪದೇ ಪದೇ ಪ್ರತಿಪಾದಿಸಿತ್ತು. ನೇಪಾಳವು ಈಗಾಗಲೇ ಗಡಿ ವಿವಾದದ ಬಗ್ಗೆ ಚರ್ಚಿಸಲು ವಿದೇಶಾಂಗ ಕಾರ್ಯದರ್ಶಿ ಮಟ್ಟದ ಸಭೆ ಕರೆಯುವಂತೆ ಭಾರತವನ್ನು ಆಗ್ರಹಿಸಿದೆ.

ವಿವಾದಿತ ಭೂಪಟವನ್ನು ಅಧಿಕೃತಗೊಳಿಸಲು ಮುಂದಾಗುವ ಮೂಲಕ ನೇಪಾಳವು ಲಿಪುಲೇಖ ಕುರಿತ ಭಿನ್ನಮತಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದ್ದ ಮಾತುಕತೆಗಳ ಆಯ್ಕೆಯನ್ನು ಮುಚ್ಚಿದಂತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದಾಗ್ಯೂ, ಭಾರತವು ಉಭಯ ದೇಶಗಳ ಜನರ ನಡುವಣ ಬಾಂಧವ್ಯವನ್ನು ಬಲಪಡಿಸುವತ್ತ ಗಮನ ಹರಿಸುವುದನ್ನು ಮುಂದುವರೆಸಲಿದೆ.

ಭಾರತದ ಸೇನಾ ದಂಡನಾಯಕ ಜನರಲ್ ಎಂಎಂ ನರವಾಣೆ ಅವರು ನೀತಿಯ ಬಗ್ಗೆ ಶನಿವಾರ ಬೆಳಗ್ಗೆಯೇ ಸುಳಿವು ನೀಡಿದ್ದರು. ಭೂಪಟಕ್ಕೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಮೂಲೆಗೊತ್ತಿ ಭಾರತವು ಉಭಯ ದೇಶಗಳ ಜನರ ಬಾಂಧವ್ಯಗಳತ್ತ ಗಮನ ಹರಿಸುವುದು ಎಂಬುದಾಗಿ ಅವರು ಹೇಳಿದ್ದರು.

ನೇಪಾಳದ ಜೊತೆಗೆ ಪ್ರಬಲ ಬಾಂಧವ್ಯ ಹೊಂದಿದ್ದೇವೆ. ನಾವು ಭೌಗೋಳಿಕ, ಸಾಂಸ್ಕೃತಿಕ, ಚಾರಿತ್ರಿಕ, ಧಾರ್ಮಿಕ ಕೊಂಡಿಗಳನ್ನು ಹೊಂದಿದ್ದೇವೆ. ಉಭಯ ದೇಶಗಳ ಜನರ ಮಧ್ಯೆ ಬಲಾಢ್ಯವಾದ ಸಂರ್ಪರ್ಕ ಇದೆ. ನಮ್ಮ ಬಾಂಧವ್ಯವು ಯಾವಾಗಲೂ ಪ್ರಬಲವಾಗಿತ್ತು, ಭವಿಷ್ಯದಲ್ಲೂ ಪ್ರಬಲವಾಗಿರುತ್ತದೆಎಂದು ಜನರಲ್ ನರವಾಣೆ ಹೇಳಿದ್ದರು.

ಲಿಪುಲೇಖ ಕಣಿವೆವರೆಗೆ ಕೈಲಾಸ್ ಮಾನಸ ಸರೋವರ ಯಾತ್ರಾರ್ಥಿಗಳ ಸಲುವಾಗಿ ಭಾರತ ನಿರ್ಮಿಸಿದ ೮೦ ಕಿಮೀ ಉದ್ದದ ರಸ್ತೆಗೆ ನೇಪಾಳ ವ್ಯಕ್ತ ಪಡಿಸಿದ ಪ್ರಬಲ ಪ್ರತಿಭಟನೆಯ ಹಿಂದೆ ಬೇರೊಬ್ಬರ ಕೈವಾಡ ಇರುವ ಸಾಧ್ಯತೆ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದ ಭಾರತದ ಮೊತ್ತ ಮೊದಲ ಉನ್ನತ ಅಧಿಕಾರಿ ಜನರಲ್ ನರವಾಣೆ ಅವರಾಗಿದ್ದರು.

ತಾನು ಪ್ರಬಲ ಪ್ರಧಾನಿ ಎಂಬುದಾಗಿ ತೋರಿಸಿಕೊಳ್ಳಲು ಯತ್ನಿಸುತ್ತಿರುವ ನೇಪಾಳದ ಪ್ರಧಾನಿ ಒಲಿ ಅವರ ಮೇಲೆ ಚೀನಾ ಪ್ರಭಾವ ಬೀರಿರುವ ಸಾಧ್ಯತೆ ಬಗ್ಗೆ ನರವಾಣೆ ಅವರು ಉಲ್ಲೇಖಿಸಿದ್ದರು.

ನೇಪಾಳದ ವಾಯವ್ಯ ಭಾಗದಲ್ಲಿರುವ ಭಾರತ ಮತ್ತು ಚೀನಾದ ಜೊತೆಗಿನ ಮೂರು ಮಾರ್ಗ ಕೂಡುವ ಸ್ಥಳದಲ್ಲಿ ಕಠ್ಮಂಡು ನಡೆಸಿದ ಪ್ರತಿಭಟನೆಗಳ ಸಮಯವು ಸೇನಾ ಕಮಾಂಡರ್ ಅವರ ಅಂದಾಜಿನಲ್ಲಿ ಪ್ರತಿಧ್ವನಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ

ಸೇನಾ ದಂಡನಾಯಕ ಜನರಲ್ ನರವಾಣೆ ಅವರು ಹೇಳಿಕೆ ನೀಡಿದ್ದ ವೇಳೆಯಲ್ಲೇ ಚೀನಾವು ಪೂರ್ವ ಲಡಾಖ್ ನಾಲ್ಕು ಸ್ಥಳಗಳಲ್ಲಿ ಸೇನಾ ಜಮಾವಣೆ ಮಾಡುವ ಮೂಲಕ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೈನಿಕರ ಜೊತೆಗೆ ಘರ್ಷಿಸಿ ಬಿಕ್ಕಟ್ಟನ್ನು ಹುಟ್ಟು ಹಾಕಿತ್ತು

No comments:

Advertisement